ಗುರುವಾರ, ಏಪ್ರಿಲ್ 30, 2009

ರಾಜ್‌ಕುಮಾರ್ ಎಂಬ ಕವಿತೆ

ಅಣ್ಣಾ,
ನಿನ್ನ ’ಅಭಿಮಾನಿ ದೇವರು’ಗಳಲ್ಲಿ
ಒಬ್ಬನಾಗಿರುವ ಈ ಹುಲುಮಾನವ
ನ ಪಾಲಿಗೆ ನೀನು
ಕಲಾದೇವತೆ,
ಸತ್ತ್ವ ಮತ್ತು ಸೌಂದರ್ಯಭರಿತ
ಕವಿತೆ.

ಇದು ಸತ್ಯ.
ನೀನೆನ್ನ ಬಾಳಿನಲಿ
ನಾ ಕಂಡ ಒಂದು
ಸತ್ಯ.
ಬಾಳಿಗೊಂದರ್ಥ ಕೊಡಬಲ್ಲ,
ಬಾಳು ಸಾರ್ಥಕಗೊಳಿಸಬಲ್ಲ
ವಿಷಯ-ವಿಶೇಷಗಳಲ್ಲೊಂದಾಗಿ
ಬೆಳಗುತ್ತಿರುವೆ ನೀ
ನನ್ನ ಬಾಳಿನಲಿ
ನಿತ್ಯ.

ನಟನೆಯೆಂಬುದೆ ನಿಜ,
ನಿಜವೆಂಬುದೇ ನಟನೆ,
ದಿಟವೆಂಬುದದು ಭಾವ
ಮತ್ತು ಭಾವುಕತೆ.
ನಟಿಸುವುದು ದೈವಕೃಪೆ,
ಘಟಿಸುವುದು ದೈವೇಚ್ಛೆ
ಎಂಬ ಭಾವದ ನಿನ್ನ
ಬಾಳೊಂದು ಕವಿತೆ.

ಹಾಡಿದೆ ನೀನು,
ಹಾಡಾದೆ.
ಕುಣಿದೆ, ಮನಗಳ
ಕುಣಿಸಿದೆ.
ದಣಿದೆ, ಮನಗಳ
ತಣಿಸಿದೆ.
ಕಾಡಿನ ಪಾಲಾದೆ,
ನಾಡಿನ ಮುತ್ತಾದೆ,
ನನ್ನ ಮುತ್ತುರಾಜಾ,
ಅನ್ಯಾದೃಶ ಕಲೆಯಿಂದ,
ಅಧ್ಯಾತ್ಮದ ಹೊಳಪಿಂದ,
ಸಮರ್ಪಣಭಾವದಿಂದ
ನಮ್ಮ ಹೃದಯದೊಂದು
ಅಮೂಲ್ಯ ಸೊತ್ತಾದೆ.

ಅಣ್ಣಾ,
ನೀನು
ಅರ್ಥಗರ್ಭಿತ ಕವಿತೆ.
ನಿನ್ನಿಂದ
ನಾನು
ಬಾಳ ಕಾವ್ಯವ ಕಲಿತೆ.

1 ಕಾಮೆಂಟ್‌: