ಬುಧವಾರ, ಅಕ್ಟೋಬರ್ 21, 2009

ಪಾದದೆಚ್ಚರ - ಪದದೆಚ್ಚರ (ಲೇಖನ)

(ಈ ಬ್ಲಾಗ್‌ನ ಕೊನೆಯ ಕಾಣಿಕೆಯಾಗಿ ಈ ದಿನ ನಾಲ್ಕು ಬರಹಗಳನ್ನು ಪ್ರಕಟಿಸಿದ್ದೇನೆ. ಪುರಸತ್ತಿನಲ್ಲಿ ನಾಲ್ಕನ್ನೂ ಓದಿ. ನನಗೆ ಅಪ್ಪಣೆ ನೀಡಿ. ನಮಸ್ಕಾರ.)

ಹಿಂದೆ ರಾಜಮಹಾರಾಜರ ಕಾಲದಲ್ಲಿ, ಆಸ್ಥಾನಕ್ಕೆ ರಾಜರು ಬರುವಾಗ ಅವರ ಪಕ್ಕದಲ್ಲಿ ಒಬ್ಬ ಸೇವಕ ಇರುತ್ತಿದ್ದ. ಅವನನ್ನು ’ಪಾದದೆಚ್ಚರದವನು’ ಎಂದು ಕರೆಯಲಾಗುತ್ತಿತ್ತು. ನಡೆದು ಬರುವಾಗ ದೊರೆಯು ಯಾವ ಕಾರಣಕ್ಕೂ ಕೆಳಗೆ ದೃಷ್ಟಿ ಹಾಯಿಸದೆ ನೇರ ಎದುರುಗಡೆ ನೋಡುತ್ತಲೇ ನಡೆಯುವುದು ಪದ್ಧತಿಯಾಗಿತ್ತು. ಕೆಳಗೆ ನೋಡಲು ತಲೆತಗ್ಗಿಸುವುದು ರಾಜನ ಘನತೆಗೆ ಕುಂದೆಂದು ಭಾವಿಸಲಾಗುತ್ತಿತ್ತು. ಆಸ್ಥಾನದಲ್ಲಿ ನೆರೆದ ಪ್ರಜೆಗಳೆದುರು ರಾಜನೆಲ್ಲಾದರೂ ಅವನತಮುಖಿಯಾಗುವುದೇ?

ಹಾಗೆ ರಾಜನು ನೇರ ನೋಡುತ್ತ ನಡೆಯುತ್ತಿದ್ದಾಗ, ಅವನ ಕಾಲಿನ ಬುಡದಲ್ಲಿ ಮೆಟ್ಟಿಲು ಎದುರಾಯಿತೆಂದರೆ ಆಗ ಪಕ್ಕದ ಆ ಸೇವಕ, ’ಪಾದದೆಚ್ಚರ’, ಎಂದೊಮ್ಮೆ ಧ್ವನಿ ಹೊರಡಿಸಿ ದೊರೆಯನ್ನು ಎಚ್ಚರಿಸುತ್ತಿದ್ದ. ಆಗ ದೊರೆಯು ಕೆಳಗೆ ನೋಡದೆಯೇ ಕಾಲಿನಿಂದಲೇ ನೆಲ ಸವರುತ್ತ ಮೆಟ್ಟಿಲನ್ನು ಗುರುತಿಸಿ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡುತ್ತಿದ್ದ. ಇದು ಪಾದದೆಚ್ಚರ.

ಈಚೆಗೆ ಕವಿಗೋಷ್ಠಿಯೊಂದರಲ್ಲಿ ಉದ್ಘಾಟನಾ ಭಾಷಣ ಮಾಡುತ್ತ ಕವಿ ನಿಸಾರ್ ಅಹಮದ್ ಅವರು ಬಾಯಿತಪ್ಪಿ, ’ವೈವಿಧ್ಯತೆ’ ಎಂಬ ತಪ್ಪು ಪದಪ್ರಯೋಗ ಮಾಡಿದರು. ಆದರೆ, ತತ್‌ಕ್ಷಣವೇ, ’ವೈವಿಧ್ಯ’, ಎಂದು ತಾವೇ ಅದನ್ನು ತಿದ್ದುವ ಎಚ್ಚರ ಮೆರೆದರು. ಇದು ಪದದೆಚ್ಚರ. ನನ್ನ ಈ ಬರಹದ ವಸ್ತು.

’ವೈವಿಧ್ಯತೆ’ ಎಂಬ ತಪ್ಪು ಪದಪ್ರಯೋಗವನ್ನು ಬಹುತೇಕ ಎಲ್ಲರೂ ಮಾಡುತ್ತೇವೆ. ಸಾಹಿತಿಗಳೂ ಹೊರತಲ್ಲ. ’ವೈವಿಧ್ಯ, ಕಾಠಿಣ್ಯ, ಪಾವಿತ್ರ್ಯ, ಅನುಕೂಲ’ ಮುಂತಾದ ನಾಮಪದಗಳನ್ನು ವಿರೂಪಗೊಳಿಸಿ ’ವೈವಿಧ್ಯತೆ, ಕಠಿಣತೆ, ಪವಿತ್ರತೆ, ಅನುಕೂಲತೆ’ ಎಂಬ ತಪ್ಪು ಪದಗಳನ್ನು ಸೃಷ್ಟಿಸಿರುವ ನಾವು ’ಉಪಯುಕ್ತ, ಸಾಂದರ್ಭಿಕ, ಖಿನ್ನ’ ಮೊದಲಾದ ಗುಣವಾಚಕಗಳನ್ನು ’ಉಪಯುಕ್ತತೆ, ಸಾಂದರ್ಭಿಕತೆ, ಖಿನ್ನತೆ’ ಮೊದಲಾಗಿ ತಪ್ಪು ರೀತಿಯಲ್ಲಿ ನಾಮವಾಚಕ ಮಾಡಿ ಬಳಸುತ್ತೇವೆ. ಮೇಲೆ ಉಲ್ಲೇಖಿಸಿರುವ ಕವಿಗೋಷ್ಠಿಯಲ್ಲಿಯೇ, ಜನಪ್ರಿಯ ಕವಿಯೋರ್ವರು ತಮ್ಮ ಕವನದಲ್ಲಿ ’ತಲ್ಲೀನತೆ’ ತೋರಿದರೆ ಕವಯಿತ್ರಿಯೋರ್ವರು ’ಸಹೃದಯತೆ’ ಮೆರೆದರು!

ನಾಮವಾಚಕ ಮತ್ತು ಗುಣವಾಚಕಗಳಿಗೆ ’ತೆ’ ಅಕ್ಷರ ಬೆಸೆದು ನಾಮಪದ ಮಾಡಿಕೊಂಡು ಬಳಸುವ ಪರಿಪಾಠ ಕನ್ನಡದಲ್ಲಿ ಎಷ್ಟು ತೀವ್ರವಾಗಿ ಮತ್ತು ವ್ಯಾಪಕವಾಗಿ ಬೆಳೆದುಬಂದಿದೆಯೆಂದರೆ, ’ತೆ’(ಪೆ) ಹಚ್ಚಿದ ಇಂಥ ಶಬ್ದಗಳೆಲ್ಲವನ್ನೂ ನಿಘಂಟಿಗೆ ಸೇರಿಸಿಬಿಡುವುದೇ ಉತ್ತಮವೇನೋ ಅನ್ನಿಸುತ್ತಿದೆ!

ಏಕೀ 'ಕರಣ'?
--------------
’ಕರಣ’ ಎಂದರೆ ’ಕೆಲಸ’ ಎಂದರ್ಥವಷ್ಟೆ. ’ಮಾಡುವುದು’ ಎಂಬ ಅರ್ಥವನ್ನೂ ಆರೋಪಿಸೋಣ. ’ಏಕೀಕರಣ’ ಎಂಬ ಶಬ್ದವನ್ನು ಒಪ್ಪೋಣ. ಏಕೆಂದರೆ ಆ ಶಬ್ದವು ಕನ್ನಡ ನಿಘಂಟಿಗೆ ಪ್ರವೇಶ ಪಡೆದಿದೆ. ’ಸಮೀಕರಿಸು’ ಎಂಬ ಕ್ರಿಯಾಪದವನ್ನು ’ಸಮೀಕರಣ’ ಎಂದು ನಾಮವಾಚಕ ಮಾಡಿ ಬಳಸುವುದನ್ನೂ ಸಹಿಸಿಕೊಳ್ಳೋಣ. ಆದರೆ, ’ಸಮಾಜೀಕರಣ, ಉನ್ನತೀಕರಣ, ರಾಜಕೀಕರಣ(!), ವೈಭವೀಕರಣ, ಕನ್ನಡೀಕರಣ’ ಹೀಗೆ ಕಂಡಕಂಡ ಶಬ್ದಗಳಿಗೆಲ್ಲ ’ಕರಣ’ ಹಚ್ಚಿ ಕುಲಗೆಡಿಸುವುದನ್ನು ಸಹಿಸಿಕೊಳ್ಳಲು ಸಾಧ್ಯವೆ? ಜಿ.ವೆಂಕಟಸುಬ್ಬಯ್ಯ ಅವರು ಸಮಾರಂಭವೊಂದರಲ್ಲಿ ಈ ’ಕ-ರಣ’ವನ್ನು ಎತ್ತಿ ಆಡಿ ಬೇಸರಪಟ್ಟಿದ್ದನ್ನು ನಾನು ಕೇಳಿದ್ದೇನೆ.

’ರಾಧಳಿಗೆ, ಗಂಗಳಿಗೆ, ಶುಭಳಿಗೆ, ಶ್ವೇತಳಿಗೆ’ ಎಂಬ ಪದಪ್ರಯೋಗಗಳಿಂದು ಸಾಮಾನ್ಯವಾಗಿಬಿಟ್ಟಿವೆ. ಕಥೆ-ಕಾದಂಬರಿ ಬರೆಯುವವರೂ ಈ ತಪ್ಪು ಪ್ರಯೋಗವನ್ನು ಒಪ್ಪವಾಗಿ ಮಾಡುತ್ತಿದ್ದಾರೆ! ’ರಾಧಾ’ ಅಥವಾ ’ರಾಧೆ’ ಎಂಬುದು ಸರಿಯಾದ ರೂಪ ಎಂಬುದು ಎಷ್ಟೋ ಲೇಖಕರಿಗೇ ಗೊತ್ತಿಲ್ಲ. ಹೆಣ್ಣುಮಕ್ಕಳ ಹೆಸರುಗಳನ್ನು ಹೀಗೆ ವಿರೂಪಗೊಳಿಸುವವರಮೇಲೆ ಶಿವರಾಮ ಕಾರಂತರಿಗೆ ಅಗಾಧ ಸಿಟ್ಟಿತ್ತು.

ಪದಗಳನ್ನು ನಮಗೆ ಬೇಕಾದಂತೆ ಮಾರ್ಪಡಿಸಿಕೊಂಡು ಬಳಸುತ್ತಿರುವ ’ಅನುಕೂಲಸಿಂಧು’ವಿನ ಉದಾಹರಣೆಗಳು ಈ ಎಲ್ಲ ಅಪಶಬ್ದಗಳು. ಪದಶುದ್ಧಿಗೆ ಇಲ್ಲಿ ಬೆಲೆಯಿಲ್ಲದಿರುವುದೇ ಬೇಸರದ ಸಂಗತಿ. ಇಷ್ಟೇ ಬೇಸರದ ಇನ್ನೊಂದು ಸಂಗತಿಯೆಂದರೆ, ಇಂಗ್ಲಿಷ್ ನುಡಿಗಟ್ಟನ್ನು ಯಥಾಕ್ರಮದಲ್ಲಿ ಕನ್ನಡಕ್ಕೆ ಅನುವಾದಿಸಿ ನುಡಿಯುವ (ಅ)ಕ್ರಮ. ’ಗವರ್ನ್‌ಮೆಂಟ್ ಗರ್ಲ್ಸ್ ಹೈಸ್ಕೂಲ್’ಅನ್ನು ಅದೇ ಕ್ರಮದಲ್ಲಿ ನಾವು ’ಸರ್ಕಾರಿ ಬಾಲಕಿಯರ ಪ್ರೌಢಶಾಲೆ’ ಮಾಡುತ್ತೇವೆ! ಅದು ’ಬಾಲಕಿಯರ ಸರ್ಕಾರಿ ಪ್ರೌಢಶಾಲೆ’ ಆಗಬೇಕೆಂಬುದು ನಮ್ಮ ಅರಿವಿಗೇ ಬರುವುದಿಲ್ಲ. ’ಸರ್ಕಾರಿ ಬಾಲಕಿಯರು, ಖಾಸಗಿ ಬಾಲಕಿಯರು’ ಎಂದೇನಾದರೂ ಇದ್ದಾರೆಯೆ? ಪದಕ್ರಮದ ಎಚ್ಚರವಿಲ್ಲದಿರುವುದರಿಂದ ಇಂಥ ’ಚೋದ್ಯಸಂಭವ’ ಆಗುತ್ತದೆ. ಬೆಂಗಳೂರಿನಲ್ಲಿ ನಡೆದ (’ಮನೆಯಂಗಳದಲ್ಲಿ ಮಾತುಕತೆ’) ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಬಂದಿದ್ದ ’ಜಿ.ವೆಂ.’ ಅವರು ಈ ಬಗ್ಗೆ ಆಕ್ಷೇಪವೆತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಂಗ್ಲಿಷ್‌ನಿಂದ ಕನ್ನಡಕ್ಕೆ ಯಥಾಕ್ರಮದಲ್ಲಿ ಅನುವಾದಿಸಿದಾಗ ಉಂಟಾಗುವ ಇಂಥ ಚೋದ್ಯಕ್ಕೆ ನಮ್ಮ ಜಾಹಿರಾತುಗಳು (’ಜಾಹೀರಾತು’ ಅಲ್ಲ) ಉತ್ತಮ ಉದಾಹರಣೆಗಳು:

’ಬೇಕು ಒಂದು ಚೆಂಡು ಆಡಲು?’
(’ವಾಂಟ್ ಎ ಬಾಲ್ ಟು ಪ್ಲೇ?’)

’ಬೇಡಿ ಚಿಂತೆ ಹೇಗೆ ಹೊಂದುವುದು ಒಂದು ಮನೆ.’
(’ಡೋಂಟ್ ವರಿ ಹೌ ಟು ಓನ್ ಎ ಹೌಸ್.’)

’ಹೊಳಪಿಗಾಗಿ ನಿಮ್ಮ ಹಲ್ಲುಗಳ.’
(’ಫಾರ್ ದ ಷೈನ್ ಆಫ್ ಯುವರ್ ಟೀತ್.’)

’ಪದಕ್ರಮದೆಚ್ಚರ’ ಒತ್ತಟ್ಟಿಗಿರಲಿ, ಸರಿಯಾಗಿ ಕನ್ನಡ ಭಾಷಾಜ್ಞಾನವೂ ಇಲ್ಲದಿರುವವರು ನಿಘಂಟನ್ನು ಕೈಯಲ್ಲಿ ಹಿಡಿದು ಅನುವಾದಿಸಿದಾಗ ಆಗುವ ಅಪಲಾಪಗಳು ಇವು.

ಅಪಶಬ್ದ
--------
ಇನ್ನು ಅಪಶಬ್ದಗಳ ಅಟಾಟೋಪವೋ, ಕನ್ನಡದಲ್ಲಿ ಭರ್ಜರಿಯಾಗಿದೆ!

’ಆಮರಣಾಂತ, ಆಜೀವ ಸದಸ್ಯ, ಆಯೋಗ, ಅಭಿಧಾನ, ವಿಧ್ಯುಕ್ತ, ಕೋಟ್ಯಧೀಶ, ಜನಾರ್ದನ, ಪ್ರಶಸ್ತಿ ಪ್ರದಾನ, ಪ್ರಸಾಧನ, ಉಪಾಹಾರ, ಶ್ರುತಿ, ಚಿಹ್ನೆ,’ ಈ ಶಬ್ದಗಳನ್ನು ಕ್ರಮವಾಗಿ ’ಅಮರಣಾಂತ, ಅಜೀವ ಸದಸ್ಯ, ಅಯೋಗ, ಅಭಿದಾನ, ವಿದ್ಯುಕ್ತ, ಕೋಟ್ಯಾಧೀಶ, ಜನಾರ್ಧನ, ಪ್ರಶಸ್ತಿ ಪ್ರಧಾನ, ಪ್ರಸಾದನ, ಉಪಹಾರ, ಶೃತಿ, ಚಿನ್ಹೆ,’ ಎಂದು ಬರೆಯುವ ಕನ್ನಡ’ಬ್ರಮ್ಹ’ರನ್ನು ನಾವು ಎಲ್ಲೆಂದರಲ್ಲಿ ಕಾಣಬಲ್ಲೆವು! ’ಟೆಲಿವಿಷನ್ ವಾರ್ತೆ’ಯ ಕಚೇರಿಗಳಲ್ಲಂತೂ ಇಂಥ ಬ್ರಹ್ಮರೇ ತುಂಬಿಕೊಂಡಿದ್ದಾರೆ!

ಪದದೆಚ್ಚರ ಮಾಯವಾದ ಪರಿಣಾಮ ಈಚೆಗೆ ವಿಧಾನಸಭೆಯಲ್ಲಿ ಸಚಿವರೋರ್ವರು ’ಮಧುಮೇಹ’ ಎನ್ನುವ ಬದಲು ’ಮಧುಮೋಹ’ ಎಂದರು! ಇನ್ನೋರ್ವ ’ಮಂತ್ರಿಮುಖ್ಯ’ರು ’ಮಾನವಸಂಪನ್ಮೂಲ’ವನ್ನು ’ಮಾನವಜಲಸಂಪನ್ಮೂಲ’ ಮಾಡಿಬಿಟ್ಟಿದ್ದರು! ಪವಾಡಪುರುಷರು!

ಎಚ್ಚರ ತಪ್ಪುವುದು ತಪ್ಪಲ್ಲ. ಎಳ್ಚತ್ತು ತಿದ್ದಿಕೊಳ್ಳದಿದ್ದರೆ ಅದು ತಪ್ಪು. ತಿದ್ದಿಕೊಳ್ಳುವುದು ಸುಲಭದ ಮಾತಲ್ಲವೆಂಬುದನ್ನು ನಾನು ಒಪ್ಪುತ್ತೇನೆ. ಸಂಸ್ಕೃತದಿಂದ ಇಂಗ್ಲಿಷಿನವರೆಗೆ ಹಲವು ಭಾಷೆಗಳ ಸೇವನೆಯಿಂದಾಗಿ ಮತ್ತು ’ಬಳಕೆಗಾರ’ರ ಅನುಕೂಲಕ್ಕಾಗಿ ಕನ್ನಡದಲ್ಲಿ ಎಷ್ಟೋ ಅಶುದ್ಧ ಪದಗಳು ಬೇರು ಭದ್ರ ಮಾಡಿಕೊಂಡುಬಿಟ್ಟಿವೆ. ಇರಲಿ. ಆದರೆ, ತೀರಾ ಅಸಹ್ಯ ರೀತಿಯಲ್ಲಿ ನಾವು ಪದದೆಚ್ಚರ ತಪ್ಪಬಾರದಲ್ಲಾ! ಆಲಿಸುವವರಿಗೆ ನಮ್ಮ ಅಪಶಬ್ದಗಳು ಕರ್ಣಕಠೋರವೆನಿಸಬಾರದಲ್ಲಾ!

ಬಜೆ ಗೋವಿಂದ (ಲಘುಬರಹ)

ಗೋವಿಂದನ ಉಚ್ಚಾರ ಬಲು ಸ್ಪಷ್ಟ.

ನುಡಿದರೆ ಸ್ಫಟಿಕದ ಶಲಾಕೆ.

ಹುಟ್ಟಿದ ಮಗುವಿಗೆ ತಾಯಿಯು ಸತತ ಹತ್ತು ದಿನ ಬಜೆ-ಬೆಣ್ಣೆ ತಿನ್ನಿಸಿದ್ದಳು. ಬಜೆಯನ್ನು ಬೆಣ್ಣೆಯಲ್ಲಿ ಎರಡು ಸುತ್ತು ತೇಯ್ದು ಮಗುವಿನ ಬಾಯಿಗಿಟ್ಟಳೆಂದರೆ ಮಗು ಬಾಯಿಚಪ್ಪರಿಸಿ ಮೆಲ್ಲುತ್ತಿತ್ತು. ಆಗ ಆ ತಾಯಿಗೆ ಆ ಆನಂದತುಂದಿಲ ಮಗುವಿನ ಮೆಲ್ಲುಸಿರೇ ಸವಿಗಾನ. ಅಂದು ತಿಂದ ಬಜೆ-ಬೆಣ್ಣೆಯ ಫಲವೇ ಗೋವಿಂದನ ಇಂದಿನ ನಾಲಗೆಯ ನಯ.

ಮಗುವಿಗೆ ಬೆಣ್ಣೆಯ ಸಹವಾಸ ಹತ್ತೇ ದಿನಕ್ಕೇ ಮುಗಿದರೂ ಬಜೆಯ ಸಾಂಗತ್ಯ ಮಾತ್ರ ಮುಂದುವರಿದಿತ್ತು. ಅಮ್ಮನ ಎದೆಹಾಲಿನಲ್ಲಿ ತೇಯ್ದ ಬಜೆಯ ಸೇವನೆ ಆಗತೊಡಗಿತು. ಮುಂದಿನ ದಿನಗಳಲ್ಲಿ ಇದೇ ಬಜೆಯ ಹಿರಿತನದಲ್ಲಿ ಸುತ್ತುಖಾರದ ಸೇವೆ ನಡೆಯಿತು. ಎರಡು ಸುತ್ತು ತೇಯ್ದ ಬಜೆಯ ಜೊತೆಗೆ ನಂಜು ನಿವಾರಣೆಗಾಗಿ ಅರಿಶಿನ ಕೊಂಬು, ಶೀತ-ಗಂಟಲುಕೆರೆತ ನಿವಾರಣೆಗಾಗಿ ಕಾಳುಮೆಣಸು, ಇನ್ನೂ ಹೆಚ್ಚಿನ ಶೀತ ನಿವಾರಣೆಗಾಗಿ ಹಿಪ್ಪಲಿ ಬೇರು, ರಕ್ತವೃದ್ಧಿಗಾಗಿ ಸುಗಂಧಿ-ಅಶ್ವಗಂಧಿ, ವಾಯುನಿವಾರಕವಾಗಿ ಶುಂಠಿ, ಹೊಟ್ಟೆನೋವು-ಹೊಟ್ಟೆಹುಳು ನಿವಾರಣೆಗಾಗಿ ಕಟುಕ್ರಾಣಿ, ತಂಪು ನೀಡಲು ಹಾಗೂ ಕಫ ನೀರೊಡೆಯಲು ಜ್ಯೇಷ್ಠಮಧು ಮತ್ತು ತಂಪಾಗಿ ನಿದ್ದೆಹತ್ತಲು ಜಾಕಾಯಿ ಇವುಗಳನ್ನೂ ಎರಡೆರಡು ಸುತ್ತು ತೇಯ್ದು ಪ್ರತಿ ಗುರುವಾರ ಮತ್ತು ಸೋಮವಾರ ಮಗುವಿಗೆ ನೆಕ್ಕಿಸಲಾಗುತ್ತಿತ್ತು. ಮಗು ಕಂಪಾಗಿ ನೆಕ್ಕಿ, ಇಂಪಾಗಿ ಒಂದು ಅಳು ಅತ್ತು, ಸೊಂಪಾಗಿ ನಿದ್ದೆಮಾಡುತ್ತಿತ್ತು. ಹೀಗೆ ಅದಕ್ಕೆ ಸುತ್ತುಖಾರದ ಸೇವೆಯು, ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ಐದಲ್ಲ, ಆರಲ್ಲ, ಕ್ಷಮಿಸಿ, ಆರು ತಿಂಗಳು ನಡೆಯಿತು.

ಎಂದೇ ಈಗ ಎಮ್ಮ ಗೋವಿಂದಗೆ ಇಪ್ಪತ್ತಾರರ ಹರಯದಲ್ಲೂ ನಂಜಿಲ್ಲ, ಶೀತವಿಲ್ಲ, ವಾಯು ಉಪದ್ರವವಿಲ್ಲ, ಉಷ್ಣವಿಲ್ಲ, ಕಫವಿಲ್ಲ, ಹೊಟ್ಟೆಯಲ್ಲಿ ನೋವಿಲ್ಲ, ಹುಳುವಿಲ್ಲ, ಅಪ್ಪ ಕಟ್ಟಿಸಿರುವ ’ಸ್ಲೋಗನ್ ವಿಲ್ಲಾ’ ಹೆಸರಿನ ಬಂಗಲೆಯೊಳಗೆ ಬಂಬಾಟಾಗಿ ಜೀವಿಸಿಹನು. ಬಂಗಲೆಯ ಕಿಟಕಿಯಿಂದ ತೋಟದ ಬೋಗನ್‌ವಿಲ್ಲಾ ವೃಕ್ಷಗಳನ್ನು ಈಕ್ಷಿಸುತ್ತಾ ತಿಂದುಂಡು ತೂಕಡಿಸಿ ಹಾಗೇ ಸವಿನಿದ್ದೆಗೆ ಶರಣಾಗಿಬಿಡುವನು. ಡಿಗ್ರಿಯಿಲ್ಲಾ, ನೌಕ್ರಿಯಿಲ್ಲಾ, ಚಿಂತೆಯಿಲ್ಲಾ, ಬಜೆ-ಬೆಣ್ಣೆ-ಸುತ್ತುಖಾರಗಳ ದಯೆಯಿಂದ ಇಂದಿಗೂ ಸದಾಕಾಲ ಸೊಗಸಾದ ನಿದ್ದೆ!

ಒಂದೇ ಮಗುವಿಗೇ ಬಂದ್ ಮಾಡಿಸಿಕೊಂಡಿದ್ದ ’ಪಿತಾಶ್ರೀ ಆಫ್ ಗೋವಿಂದ’ ಅವರು ’ಒಂದು ಸಾಕು, ಒಂದೇಒಂದು ಸಾಕು’ ಎಂಬ ಸ್ಲೋಗನ್ ರಚಿಸಿ ಭಾರತ ಸರ್ಕಾರದ ಕುಟುಂಬಕಲ್ಯಾಣ ಇಲಾಖೆಯಿಂದ ಹದಿನೈದು ಲಕ್ಷ ರೂಪಾಯಿಗಳ(!) ರಾಷ್ಟ್ರೀಯ ಪುರಸ್ಕಾರ ಪಡೆದು ಆ ಹಣದಿಂದ (ಮೊದಲೇ ಇದ್ದ ಸೈಟಿನಲ್ಲಿ) ಬಂಗಲೆ ಕಟ್ಟಿಸಿ ಸದರಿ ಬಂಗಲೆಗೆ ’ಸ್ಲೋಗನ್ ವಿಲ್ಲಾ’ ಎಂಬ ಅನ್ವರ್ಥನಾಮವನ್ನಿಟ್ಟಿದ್ದರು. ಈ ಸ್ಲೋಗನ್ ವಿಲ್ಲಾದ ’ಸ್ಲೀಪಿಂಗ್ ಬ್ಯೂಟಿ’ಯಾಗಿ, ಊಹ್ಞೂ, ’ಹ್ಯಾಂಡ್‌ಸಮ್ ಚೂಟಿ’ ಆಗಿ ನಮ್ಮ್ ಗೋವಿಂದ ತನ್ನಪ್ಪನ ಆಸ್ತಿ ಕರಗಿಸುತ್ತಲಿದ್ದ ಸ್ಲೋ ಆಗಿ.

’ಮನೇಲಿ ಸುಮ್ನೆ ಕೂರಬೇಡ, ಅಲ್ಲಲ್ಲ, ಮಲಗಬೇಡ, ಏನಾದರೂ ಮಾಡು’, ಎಂದು ಅವನಪ್ಪ ನೂರಾಹನ್ನೊಂದನೇ ಸಲ ಹೇಳಿದಾಗ ಗೋವಿಂದ ಎಚ್ಚತ್ತ. ’ಶಬ್ದಸಂಶೋಧನೆ’ ಮಾಡಲು ಹೊರಟ!

ಶಬ್ದವೆಂದರೆ ಕೋಗಿಲೆ, ಕಾಗೆ, ಬಸ್ಸು, ಲಾರಿಗಳ ಶಬ್ದವಲ್ಲ, ಕನ್ನಡದ ಶಬ್ದ. ಪದ.

ಗೋವಿಂದ ಮಾಡಹೊರಟದ್ದು ಪದಜಿಜ್ಞಾಸೆ.

ಯಾವ ಪದ?

ಇನ್ಯಾವ ಪದ, ’ಬಜೆ’. ಬಾಲ್ಯಸಂಗಾತಿ ತಾನೆ ಎಷ್ಟೆಂದರೂ.

ಆರು ತಿಂಗಳ ಕಾಲ ನಾಲಗೆಯಮೇಲೆ ನಲಿದಾಡಿದ ವಸ್ತುವಲ್ಲವೆ!

ಮನೆಯಿಂದೆದ್ದು ಹೊರಟವನೇ ಗೋವಿಂದ ’ಬಜೆ’ ಶಬ್ದದ ಸಂಶೋಧನೆಯ ಮೊದಲ ಮೆಟ್ಟಿಲಾಗಿ ’ಮಿತ್ರಸಮಾಜ ಹೋಟೆಲ್’ನ ಮೆಟ್ಟಿಲೇರಿ ಒಳಹೊಕ್ಕು ಮೂರು ಪ್ಲೇಟ್ ಬಿಸಿಬಿಸಿ ಗೋಳಿಬಜೆ ಗೋವಿಂದಮಾಡಿ ಹೊರನಡೆದ.

ಹೊರನಡೆದವನ ಮಂಡೆಯಲ್ಲಿ ಸಂದೇಹವೊಂದು ಉದ್ಭವಿಸಿತು,
’ಈರುಳ್ಳಿ, ಹಸಿಮೆಣಸು ವಗೈರೆಗಳನ್ನು ಕಡಲೆಹಿಟ್ಟಿನಲ್ಲಿ ಕಲಸಿ ಕರಿದರೆ ಅದನ್ನು ’ಬಜ್ಜಿ’ ಎನ್ನುವರು. ಆದರೆ, ಮೈದಾಹಿಟ್ಟನ್ನು ಮೊಸರಿನಲ್ಲಿ ಕಲಸಿ ಕರಿದರೆ ಅದನ್ನು ’ಬಜೆ’ ಎಂದು ಕರೆಯುವರು. ಹೀಗೇಕೆ?’

ಈ ಸಂದೇಹ ಬಂದದ್ದೇ ತಡ, ತನ್ನ ’ಬಜೆ ಸಂಶೋಧನೆ’ಗೊಂದು ದಿಕ್ಕು ಸಿಕ್ಕಿತೆಂದು ಆನಂದತುಂದಿಲನಾದ ಗೋವಿಂದ ಪುನಃ ’ಮಿತ್ರಸಮಾಜ’ದೊಳಹೊಕ್ಕು ಕ್ಯಾಷಿಯರ್ ಬಳಿ ತನ್ನ ಸಂದೇಹ ಮಂಡಿಸಿದ.

’ರಷ್ ಉಂಡು. ಪೋಲೆ (ರಷ್ ಇದೆ. ಹೋಗಿ)’, ಅಂತ ತುಳುವಿನಲ್ಲಿ ಉತ್ತರ ಬಂತು. ಅಲ್ಲಿಂದ ಕಾಲ್ಕಿತ್ತ.

ಉಡುಪಿಯ ರಥಬೀದಿಯಲ್ಲೇ ಇದ್ದೂ ತಾನು ತನ್ನೀ ಸಂಶೋಧನೆಗೆ ಶ್ರೀಕೃಷ್ಣನ ಆಶೀರ್ವಾದ ಪಡೆಯದೇ ಮುಂದುವರಿಯುತ್ತಿದ್ದೆನಲ್ಲಾ, ತಾನೆಂಥ ಮೂರ್ಖ, ಎಂದುಕೊಳ್ಳುತ್ತ ಗೋವಿಂದ ಕೃಷ್ಣಮಠಕ್ಕೆ ಧಾವಿಸಿದ. ಅಷ್ಟರಲ್ಲಾಗಲೇ ಅವನ ತಲೆಯಲ್ಲಿ ಇನ್ನೊಂದು ಸಂದೇಹ ಭುಗಿಲೆದ್ದಿತ್ತು.

ಮಗುವಾಗಿದ್ದಾಗ ತನಗೆ ತನ್ನಮ್ಮ ತೇಯ್ದು ತಿನ್ನಿಸುತ್ತಿದ್ದ ಬೇರಿನ ಹೆಸರೂ ಬಜೆ, ಈಗ ತಾನು ತಿಂದ ಕರಿದ ತಿಂಡಿಯ ಹೆಸರೂ ಬಜೆ! ಇದು ಹೇಗೆ ಸಾಧ್ಯ?!

ಕೃಷ್ಣನಿಗೆ ನಮಸ್ಕರಿಸುತ್ತಿದ್ದಂತೆ ಗೋವಿಂದನ ತಲೆಯಲ್ಲಿ ಮೂರನೆಯ ಸಂದೇಹವೊಂದು ಹೆಡೆಯೆತ್ತಿತು. ಅದುವೇ ’ಕೃಷ್ಣ ಭಾಂಜಿ’!

ರಿಚರ್ಡ್ ಆಟಿನ್‌ಬರೋ ನಿರ್ದೇಶನದ ’ಗಾಂಧಿ’ ಚಲನಚಿತ್ರದಲ್ಲಿ ಗಾಂಧಿಯಾಗಿ ಅಭಿನಯಿಸಿದ ಬೆನ್ ಕಿಂಗ್‌ಸ್ಲೆಯ ಮೂಲ ಹೆಸರು ಕೃಷ್ಣ ಭಾಂಜಿ ಎಂದೂ ಮತ್ತು ಆತ ಮೂಲತಃ ಉತ್ತರಭಾರತದವನೆಂದೂ ಯಾವುದೋ ಸಿನಿಮಾಪತ್ರಿಕೆಯಲ್ಲಿ ಓದಿದ್ದು ಗೋವಿಂದನಿಗೆ ಫಕ್ಕನೆ ನೆನಪಿಗೆ ಬಂತು.

’ಬಜೆ, ಬಜ್ಜಿ, ಭಾಂಜಿ. ಪರಸ್ಪರ ಸಂಬಂಧವೇನಾದರೂ ಇದ್ದೀತೇ?’

ಹೀಗೊಂದು ಸಂದೇಹ ಬಂದದ್ದೇ ತಡ, ಭಾಂಜಿ ಶಬ್ದದ ಮೂಲ ಅರಿಯಲು ಗೋವಿಂದ ಉತ್ತರಭಾರತೀಯರೊಬ್ಬರ ಬಳಿ ಹೋಗಲು ನಿರ್ಧರಿಸಿದ.

ಉತ್ತರಭಾರತೀಯರು ಎಲ್ಲಿ ಸಿಗುತ್ತಾರೆ?

ಇನ್ನೆಲ್ಲಿ, ಮಣಿಪಾಲದಲ್ಲಿ.

’ಮಣ್ಪಾಲ್ ಮಣ್ಪಾಲ್, ಬಲ್ಲೆ ಬಲ್ಲೆ’ (ಮಣ್ಣುಪಾಲೂ ಅಲ್ಲ, ಪಂಜಾಬಿಯ ಬಲ್ಲೆಬಲ್ಲೆಯೂ ಅಲ್ಲ, ’ಮಣಿಪಾಲ ಮಣಿಪಾಲ, ಬನ್ನಿ ಬನ್ನಿ’ ಎಂದರ್ಥ) ಹೀಗೆ ಅರಚುತ್ತಿದ್ದ ಬಸ್ಸುಗಳಲ್ಲಿ ಒಂದನ್ನು ಏರಿ ಗೋವಿಂದ ಮಣಿಪಾಲದ ಏರಿ ಏರಿ ಮೆಡಿಕಲ್ ಕಾಲೇಜಿನ ಬಳಿ ಇಳಿದ. ಉತ್ತರಭಾರತದ ವಿದ್ಯಾರ್ಥಿಗಳು ಇಲ್ಲಿ ಲಭ್ಯ.

’ಮೂವೀ ಕಿತ್ನಾ ಬಜೇ ಯಾರ್?’ ಎಂಬ ಉದ್ಗಾರ ಕಿವಿಗೆ ಬಿದ್ದದ್ದೇ ಗೋವಿಂದ ರೋಮಾಂಚಿತನಾದ! ಇನ್ನೊಂದು ಬಜೆ!

ಆ ಉದ್ಗಾರ ಬಂದತ್ತ ಕಣ್ಣು ಹಾಯಿಸಿದ. ಮೆಡಿಕೋ ಓರ್ವನು ತನ್ನ ಸಹಪಾಠಿಗೆ ಕೇಳಿದ ಪ್ರಶ್ನೆ ಅದಾಗಿತ್ತು. ಆ ಮೆಡಿಕೋ ಬಳಿ ಹೋಗಿ ಗೋವಿಂದ ಪ್ರಶ್ನಿಸಿದ,
’ಕನ್ನಡದ ಬಜೆ ನಿಮಗೆ ಗೊತ್ತೆ?’

’ವಾಟ್?’ ಎಂದಿತು ಮೆಡಿಕೋ.

’ಕನಡಾ ಬಜೆ. ನೋಯಿಂಗ್?’

’ಕ್ಯಾ?’

’ಬಜೆ, ಬಜೆ.’

’ಬಜೇ? ಸಾಡೇ ಸಾತ್’, ವಾಚ್ ನೋಡಿಕೊಂಡು ಮೆಡಿಕೋ ಅರುಹಿತು.

’ನೈ. ಕನಡಾ ಬಜೆ ಹಿಂದಿ ಬಜೆ ಸಂಬಂದ್ ಹೈ?’ ಗೋವಿಂದ ಮತ್ತೆ ಪ್ರಶ್ನಿಸಿದ.

’ಕ್ಯಾ?’

’ಹೋಗ್ಲಿ, ಭಾಂಜಿ ಮಾಲುಂ?’

’ಹಾಂಜೀ. ವೋ ತೋ ಬಹೆನ್ ಕೀ ಬೇಟೀ ಹೋತೀ.’

’ಅದೂ ಬೇರೆ ಇದೆಯಾ? ಮತ್ತೆ ಕೃಷ್ಣ ಭಾಂಜಿ?’

’ಯೇ ಕ್ಯಾ ಬೋಲ್‌ರಹಾ ಹೈ ಯಾರ್?!’ ಎನ್ನುತ್ತ ಆ ಮೆಡಿಕೋ ತನ್ನ ಸಹಪಾಠಿಯ ಮುಖ ನೋಡಿದ.

ಆ ಸಹಪಾಠಿಯು ಗೋವಿಂದನಿಗೆ, ’ಚಲ್ ಚಲ್. ಆಗೇ ಚಲ್’, ಎಂದು ದಬಾಯಿಸಿಬಿಡೋದೇ?!

ಬೆಳಗ್ಗೆ ಏಳುತ್ತಲೇ ಅಪ್ಪನಿಂದ ಬೈಸಿಕೊಂಡು ಅದೇ ಅವಸ್ಥೆಯಲ್ಲೇ ಹೊರಗೆ ಬಂದಿದ್ದ ಗೋವಿಂದ ಆ ನಾರ್ತಿಯ ಕಣ್ಣಿಗೆ ಯಾರಂತೆ ಕಂಡನೋ!

ಗೋವಿಂದನೀಗ ಹತಾಶನಾದ. ಬಂದ ದಾರಿಗೆ ಸುಂಕವಿಲ್ಲದಿಲ್ಲ ಎಂದುಕೊಳ್ಳುತ್ತ ಬಸ್ಸನ್ನೇರಿ ಸುಂಕ ತೆತ್ತು ಮತ್ತೆ ಉಡುಪಿಗೆ ವಾಪಸಾದ.

ಮನೆಗೆ ಹೋಗಿ ತಿಂಡಿ ತಿಂದು ಹಲ್ಲುಜ್ಜಿ ಕಾಫಿ ಕುಡಿದು ಸ್ನಾನ ಮಾಡಿ ಜೊಂಪು ತೆಗೆದೆದ್ದು ಊಟ ಮಾಡಿ ಮಲಗಿ ಎದ್ದು ಸಂಜೆಗೆ ಸರಿಯಾಗಿ ಸ್ನೇಹಿತ ಪರಾಂಜಪೆಯ ಮನೆಗೆ ಬಿಜಯಂಗೈದ. ಪರಾಂಜಪೆ ಸಾಯಂಕಾಲದ ಜಪ ಮಾಡುತ್ತಿದ್ದ. ಅವನ ಜಪ ಮುಗಿಯುವವರೆಗೆ ಟೈಂಪಾಸ್ ಮಾಡಲೆಂದು ಗೋವಿಂದ ಅಲ್ಲಿ ಮೇಜಿನಮೇಲಿದ್ದ ಪುಸ್ತಕವೊಂದನ್ನು ಕೈಗೆತ್ತಿಕೊಂಡ. ಅದು ಕನ್ನಡ-ಕನ್ನಡ ನಿಘಂಟು!

ಗೋವಿಂದನ ಮಿದುಳು ಜಾಗೃತವಾಯಿತು. ಪುಟ ತಿರುವಿ ತಿರುವಿ, ಕಷ್ಟಪಟ್ಟು, ಕೊನೆಗೂ ’ಬಜೆ’ ಶಬ್ದವನ್ನು ಪತ್ತೆಹಚ್ಚಿದ. ಅರ್ಥದತ್ತ ಕಣ್ಣುಹಾಯಿಸಿದ.

’ಒಂದು ಜಾತಿಯ ಬೇರು; ಉಗ್ರ ಗಂಧ’ ಎಂಬ ಅರ್ಥವಿವರಣೆ ಅಲ್ಲಿತ್ತು.

ಗೋವಿಂದನ ಮಿದುಳಿನಲ್ಲಿ ಯೋಚನೆಗಳೀಗ ವಿದ್ಯುತ್‌ನಂತೆ ಪ್ರವಹಿಸತೊಡಗಿದವು.

’ಉಗ್ರ ಗಂಧ! ಇದೇನಿದು? ಬಜೆಯ ಬೇರು ಈ ಉಗ್ರ ಗಂಧದಲ್ಲಿರಬಹುದೇ? ಅಥವಾ ಉಗ್ರ ಗಂಧವೇ ಬಜೆಯ ಬೇರೇ? ಗಂಧ, ಸುಗಂಧ, ಉಡುಪಿ ಮಠದ ಗಂಧ, ಉಗ್ರ ಗಂಧ, ಬಜೆ, ಗೋಳಿ ಬಜೆ, ಗೋವಿಂದ, ಬಜೆ ಗೋವಿಂದ, ಭಜಗೋವಿಂದ....ಭಜನೆ....’

ಗೋವಿಂದ ಭಜನೆ ಮಾಡತೊಡಗಿದ.

***

ಗೋವಿಂದ ಭಜನೆ ಮಾಡುತ್ತಲೇ ಇದ್ದಾನೆ.

ಉಚ್ಚಾರ ಬಲು ಸ್ಪಷ್ಟ. ಸ್ಫಟಿಕದ ಶಲಾಕೆ.

ತಿಂದುಂಡು ತಿರುಗಾಡಿಕೊಂಡು ಬಜೆಯ ಭಜನೆ ಮಾಡುತ್ತ ಸಂಶೋಧನೆ ಮುಂದುವರಿಸಿದ್ದಾನೆ.

ಗೋವಿಂದನ ಪಿತಾಶ್ರೀಯವರು ಇನ್ನೊಂದು ಸ್ಲೋಗನ್ನನ್ನು ರೆಡಿಮಾಡಿಟ್ಟುಕೊಂಡು ಕುಟುಂಬಕಲ್ಯಾಣ ಇಲಾಖೆಯು ಇನ್ನೊಮ್ಮೆ ಸ್ಪರ್ಧೆ ಏರ್ಪಡಿಸುವುದನ್ನು ಎದುರುನೋಡುತ್ತಿದ್ದಾರೆ. ಅವರು ಈಗ ರೆಡಿಮಾಡಿಟ್ಟುಕೊಂಡಿರುವ ಸ್ಲೋಗನ್ನು:

’ಒಂದೂ ಬೇಡ, ಎಷ್ಟೂ ಬೇಡ, ಮಕ್ಕಳಿಲ್ಲದಿದ್ದರೇ ನೆಮ್ಮದಿ ನೋಡಾ.’

ಸರ್ವದೇವ ಪ್ರದಕ್ಷಿಣ ಯಾತ್ರೆಯ ಕಥೆ (ಹಾಸ್ಯ)

ಓಂ ಶ್ರೀ ಗಣೇಶಾಯ ನಮಃ.

ಗಣಪತಿಗೆ ವಂದಿಸಿಯೇ ಯಾವ ಕೆಲಸವನ್ನೇ ಆಗಲೀ ಪ್ರಾರಂಭ ಮಾಡಬೇಕು.

ವರ್ತುಲ ರಸ್ತೆ ಎಂದರೆ ರಿಂಗ್ ರೋಡ್. ’ವರ್ತುಲ’ ಸಂಸ್ಕೃತವಾದ್ದರಿಂದ ಅರ್ಥವಾಗುವುದು ಕಷ್ಟ. ’ದುಂಡನೆಯ’ ಅನ್ನಬಹುದು. ಆದರೆ ರಿಂಗೇ ಕಿವಿಯಲ್ಲಿ ಚೆನ್ನಾಗಿ ರಿಂಗಣಿಸುತ್ತದಾದ್ದರಿಂದ ರಿಂಗ್ ರೋಡೇ ಇರಲಿ.

ಹೊರ ವರ್ತುಲ ರಸ್ತೆ, ಕ್ಷಮಿಸಿ, ಔಟರ್ ರಿಂಗ್ ರೋಡು ಊರನ್ನು ಹೊರಗಿನಿಂದ ಒಂದು ಸುತ್ತು ಸುತ್ತುವರಿದಿರುತ್ತದೆ. ಊರೊಳಗಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಜಾಲಿ ರೈಡ್ ಸಾಹಸಿಗರಿಗೆ ಅನುಕೂಲವಾಗಲು ಈ ರೋಡನ್ನು ನಿರ್ಮಿಸಲಾಗಿರುತ್ತದೆ. ಬೆಂಗಳೂರಿನಲ್ಲಿ ಈ ರಸ್ತೆಯನ್ನು ನೋಡಿರುವವರಿಗೆ ನಾನು ಹೆಚ್ಚು ವಿವರಿಸುವ ಅಗತ್ಯವಿಲ್ಲ. ನೋಡಿರದವರಿಗೆ ಈಗ ನೀಡಿರುವ ವಿವರಣೆ ಸಾಕಾಗುತ್ತದೆ.

ಐಡಿಯಾ!
---------
ತಿಪ್ಪೇಶಿಗೆ ಒಂದು ಮುಂಜಾನೆ ಇದ್ದಕ್ಕಿದ್ದಂತೆ ಒಂದು ಅದ್ಭುತ ಐಡಿಯಾ ಹೊಳೆಯಿತು. ಹಿಂದಿನ ದಿನ ಅವನು ಪತ್ನೀಸಮೇತನಾಗಿ ಚಾಮರಾಜಪೇಟೆಗೆ ಹೋಗಿ, ’ಒಂದು ಕಣ್ಣು’ ಮಾತ್ರ ತೆರೆದ ಸಾಯಿಬಾಬಾನ ದರ್ಶನ ಮಾಡಿ ಬಂದದ್ದರ ಫಲವೇ ಆ ಐಡಿಯಾ. ಈ ಹಿಂದೆ ಹಾಲು ಕುಡಿದ ಗಣೇಶನ ದರ್ಶನ ಮಾಡಿದಾಗಲೂ ಮರು ಮುಂಜಾನೆ ಒಂದು ಅದ್ಭುತ ಐಡಿಯಾ ಹೊಳೆದು ಅದರನುಸಾರ ಒಂದು ಸೆಕೆಂಡ್ ಹ್ಯಾಂಡ್ ಬಸ್ ಗಾಡಿ ಆರಂಭಿಸಿ ಬೇಜಾನ್ ಕಾಸು ಮಾಡಿದ್ದ ಇದೇ ತಿಪ್ಪೇಶಿ. ಈಗ ಆ ಬಸ್ಸನ್ನು ಅವನು ಗುಜರಿಗೆ ಹಾಕಿ ಹೊಸ ಬಸ್ ಕೊಂಡು ರೂಟಿಗೆ ಬಿಟ್ಟು ಮೂರು ವರ್ಷವಾಯಿತು. ದುಡಿಮೆ ಪರವಾ ಇಲ್ಲ. ತಾನಿರುವ ಮಹಾನಗರದಿಂದ ಅಲ್ಲೇ ಸುತ್ತಮುತ್ತಲ ರಾಂಪುರ, ಸೋಂಪುರ, ಭೀಂಪುರ ಮೊದಲಾದ ಹತ್ತಿರದ ಸ್ಥಳಗಳಿಗಷ್ಟೇ ಅವನ ಬಸ್ ಸರ್ವಿಸ್. ನೆಮ್ಮದಿಯ ಜೀವನ ಅವನದು. ಆದರೆ ಇದೀಗ ಹೊಳೆದ ಅದ್ಭುತ ಐಡಿಯಾ ಅವನ ನೆಮ್ಮದಿ ಕೆಡಿಸಿಬಿಟ್ಟಿತು!

’ದೇವರಿಗೆ ಪ್ರದಕ್ಷಿಣೆ ಹಾಕಿದರೆ ಪುಣ್ಯ ತಾನೆ. ಈ ಮಹಾನಗರದ ರಿಂಗ್ ರೋಡಿನಲ್ಲಿ ತನ್ನ ಬಸ್ಸನ್ನು ’ಪ್ರದಕ್ಷಿಣೆ ಸರ್ವಿಸ್’ ಎಂಬ ಹೆಸರಿನೊಂದಿಗೆ (ಕ್ಲಾಕ್‌ವೈಸ್ ಆಗಿ) ಓಡಿಸಿದರೆ ಹೇಗೆ? ಒಂದು ಸುತ್ತು ಓಡಿಸಿದರೆ ಜನರನ್ನು ಮಹಾನಗರದ ಎಲ್ಲ ದೇವಾಲಯಗಳಿಗೂ ಒಂದು ಪ್ರದಕ್ಷಿಣೆ ಹಾಕಿಸಿದಂತಾಗುತ್ತದೆ. ಒಂದು ಸುತ್ತಿಗೆ ಇಷ್ಟು ಎಂದು ದರ ನಿಗದಿ ಮಾಡುವುದು. ಭಕ್ತಜನರು ಅದರನುಸಾರ ಎಷ್ಟು ಸುತ್ತು ಬೇಕಾದರೂ ಪ್ರದಕ್ಷಿಣೆ ಹಾಕಿ ಪುಣ್ಯ ಕಟ್ಟಿಕೊಳ್ಳಲಿ. ತನಗೆ ಸಖತ್ ಆದಾಯ!

ಈ ಐಡಿಯಾ ಹೊಳೆದದ್ದೇ ತಡ, ಐಡಿಯಾವನ್ನು ಅನುಷ್ಠಾನಕ್ಕೆ ತಂದೇಬಿಟ್ಟ ತಿಪ್ಪೇಶಿ. ’ಶ್ರೀ ತಿಪ್ಪೇಸ್ವಾಮಿ ಸರ್ವದೇವ ಪ್ರದಕ್ಷಿಣ ಯಾತ್ರೆ’ ಎಂದು ಆಕರ್ಷಕ ಹೆಸರಿಟ್ಟು ಅವನು ಪ್ರಾರಂಭಿಸಿದ ಈ ’ಯಾತ್ರಾ ಸ್ಪೆಷಲ್’ ಕೆಲವೇ ದಿನಗಳಲ್ಲಿ ನಗರಾದ್ಯಂತ ಮನೆಮಾತಾಯಿತು. ಅರವತ್ತು ರೂಪಾಯಿ ಕೊಟ್ಟು ಬಸ್ ಹತ್ತಿದರೆ ಸಾಕು, ಎರಡೇ ಗಂಟೆ ಅವಧಿಯಲ್ಲಿ ಅರವತ್ತೇಳು ಕಿಲೋಮೀಟರ್ ಸಂಚರಿಸಿ ಮಹಾನಗರದ ಎಲ್ಲ ದೇವಸ್ಥಾನಗಳಿಗೂ ಒಂದು ಪ್ರದಕ್ಷಿಣೆ ಹಾಕಬಹುದು! ಭರ್ಜರಿ ಪುಣ್ಯ ಸಂಪಾದನೆ! ಯಾರಿಗುಂಟು ಯಾರಿಗಿಲ್ಲ!

’ಮಹಾನಗರ ಸಾರಿಗೆ’ ಬಸ್ಸಿನಲ್ಲಿ ಮುವ್ವತ್ತೇ ರೂಪಾಯಿಗೆ ಇದೇ ರೀತಿ ಪ್ರದಕ್ಷಿಣೆ ಹಾಕಬಹುದಾದರೂ ನೂರಾಮುವ್ವತ್ಮೂರು ಸ್ಟಾಪ್‌ಗಳಲ್ಲಿ ನಿಂತು ಮುಂದುವರಿಯುವ ಆ ಬಸ್ಸಿನಲ್ಲಿ ನಾಲ್ಕೂವರೆ ಗಂಟೆ ಸಮಯವನ್ನು ಅದಾವ ದಡ್ಡ ವೇಸ್ಟ್ ಮಾಡಿಕೊಳ್ಳಲಿಚ್ಛಿಸುವನು? ತಿಪ್ಪೇಶಿಯದು ನಾನ್ ಸ್ಟಾಪ್ ಪ್ರದಕ್ಷಿಣ ಯಾತ್ರಾ ಸ್ಪೆಷಲ್. ಆಫೀಸಿಗೆ ಹೋಗುವವರು ಬೆಳಿಗ್ಗೆ ಎರಡು ಗಂಟೆ ಮುಂಚಿತವಾಗಿ ಮನೆ ಬಿಟ್ಟರೆ ಸಾಕು ತಿಪ್ಪೇಶಿಯ ಬಸ್ಸಿನಲ್ಲಿ ಸರ್ವದೇವ ಪ್ರದಕ್ಷಿಣೆ ಪೂರೈಸಿ ಆಫೀಸಿಗೆ ಹಾಜರಾಗಬಹುದು. ಆಫೀಸು ಮುಗಿಸಿಕೊಂಡು ಪ್ರದಕ್ಷಿಣೆ ಹಾಕುವವರು ಪ್ರದಕ್ಷಿಣೆ ಪೂರೈಸಿ ರಾತ್ರಿ ಊಟದ ವೇಳೆಗೆಲ್ಲಾ ಮನೆಯಲ್ಲಿರಬಹುದು.

’ಶ್ರೀ ತಿ.ಸ.ಪ್ರ. ಯಾತ್ರೆ’ಗೆ ನೂಕುನುಗ್ಗಲು ಶುರುವಾಯಿತು. ಅಡ್ವಾನ್ಸ್ ಬುಕಿಂಗ್, ಆನ್‌ಲೈನ್ ಬುಕಿಂಗ್ ಆರಂಭವಾದವು. ತಿಂಗಳೊಪ್ಪತ್ತಿನಲ್ಲೇ ತಿಪ್ಪೇಶಿಯು ಸ್ವಧನ, ಬ್ಯಾಂಕ್ ಋಣ ಸೇರಿಸಿ ಎರಡನೇ ಬಸ್ಸನ್ನು ರಿಂಗ್ ರೋಡಿಗಿಳಿಸಿದ. ತಿಪ್ಪೇಶಿಯ ಯಶಸ್ಸನ್ನು ಕಂಡು ನಿಧಾನವಾಗಿ ಬೇರೆ ವಾಹನ ಮಾಲೀಕರೂ ಇಂಥದೇ ಯಾತ್ರಾ ಸರ್ವಿಸ್ ಪ್ರಾರಂಭಿಸಿದರು. ಬಸ್ಸು, ಮಿನಿ ಬಸ್ಸು, ವ್ಯಾನು, ಟೆಂಪೋ, ಹೀಗೆ ಹತ್ತಾರು ವಾಹನಗಳು ಪ್ರದಕ್ಷಿಣ ಯಾತ್ರೆ ಆರಂಭಿಸಿ ಭಕ್ತಜನರಿಗೆ ಪುಣ್ಯ ನೀಡತೊಡಗಿದವು. ಬಾಷಾಮಿಯಾ ಕೂಡ ತನ್ನ ಹೇಸರಗುಟ್ಟ ಸರ್ವಿಸನ್ನು ನಿಲ್ಲಿಸಿ ’ರಾಗುವೀಂದ್ರ ಸಾಮಿ ಸರ್ವರ್ ದೇವರ್ ಪರ್ದಸ್ಕಿಣ ಪುಣ್ಣ ಯಾತ್ರಾ ಪೆಶಲ್’ ಟೂರ್ ಆರಂಭಿಸಿದನೆಂದಮೇಲೆ ಈ ಸರ್ವದೇವ ಪ್ರದಕ್ಷಿಣ ಯಾತ್ರೆಗಳಿಗೆ ಯಾಪಾಟಿ ಬಿಸಿನೆಸ್ಸು, ತಿಳೀರಿ!

ಹೊಸ ಹೊಸ ಯೋಜನೆ
------------------------
’ಪ್ರದಕ್ಷಿಣ ಸ್ಪೆಷಲ್’ ವಾಹನಗಳ ಸಂಖ್ಯೆ ಹಿಗ್ಗಾಮುಗ್ಗಿ ಏರತೊಡಗಿದಂತೆ ಕ್ರಮೇಣ ತಿಪ್ಪೇಶಿಯ ಬಿಸಿನೆಸ್ ಕೊಂಚ ಡಲ್ಲಾಗತೊಡಗಿತು. ಕೂಡಲೇ ತಿಪ್ಪೇಶಿ ಹುಷಾರಾದ. ಬಸ್ಸಿನಲ್ಲಿ ವಿವಿಧ ದೇವತೆಗಳ ಹಾಡು, ಭಜನೆ, ಸ್ತೋತ್ರ, ಮಂತ್ರಾದಿಗಳ ಕ್ಯಾಸೆಟ್ ಹಾಕತೊಡಗಿದ. ಬಸ್ಸು ಆಯಾ ದೇವಸ್ಥಾನದ ಸಮೀಪ ಅಥವಾ ದಿಕ್ಕಿಗೆ ಬಂದಾಗ ಆಯಾ ದೇವರ ಕ್ಯಾಸೆಟ್ ಹಾಕುತ್ತಿದ್ದ. ಉದಾಹರಣೆಗೆ ರಾಜರಾಜೇಶ್ವರಿ ದೇವಸ್ಥಾನದ ಕಮಾನಿನ ಬಳಿ ಬಂದಾಗ ರಾಜರಾಜೇಶ್ವರಿ ಸ್ತೋತ್ರ, ಬನಶಂಕರಿ ದೇವಸ್ಥಾನದ ಸಮೀಪ ಬಂದಾಗ ಅಮ್ಮನವರ ಹಾಡು, ’ದಾಳಿ ಆಂಜನೇಯ’ನ ಗುಡಿಯ ದಿಕ್ಕಿನತ್ತ ಬಸ್ಸು ಸಾಗಿದಾಗ ಮಾರುತಿರಾಯನ ಭಜನೆ ಕ್ಯಾಸೆಟ್ಟು, ಹೀಗೆ.

ಬೇರೆಯವರೂ ಇದನ್ನು ಅನುಕರಿಸತೊಡಗಿದಾಗ ತಿಪ್ಪೇಶಿ ತನ್ನ ಬಸ್ಸಿನಲ್ಲಿ ಕ್ಯಾಸೆಟ್ ಜೊತೆಗೆ ಪೂಜೆ, ಮಂಗಳಾರತಿ, ಪ್ರಸಾದ ಆರಂಭಿಸಿದ. ಇದೂ ಕಾಪಿಚಿಟ್ಟಿಗೀಡಾದಾಗ ಬಸ್ಸಿನೊಳಗೆ ಗೈಡನ್ನು ನೇಮಿಸಿದ. ಬಸ್ಸು ಚಲಿಸುತ್ತಿದ್ದಂತೆಯೇ ಸಮೀಪದ ದೇವಸ್ಥಾನಗಳ ಮಹಾತ್ಮೆಗಳನ್ನು ಆ ಗೈಡಮ್ಮ ಪ್ರಯಾಣಿಕರಿಗೆ, ಕ್ಷಮಿಸಿ, ಯಾತ್ರಾರ್ಥಿಗಳಿಗೆ ಬಸ್ಸಿನೊಳಗೇ ವಿವರಿಸುತ್ತಿದ್ದಳು. ಕೆಲವು ದೇವಸ್ಥಾನಗಳ ವಿಡಿಯೋಗಳನ್ನೂ ತಿಪ್ಪೇಶಿಯೇ ನಿರ್ಮಿಸಿ ಬಸ್ಸಿನಲ್ಲಿ ಯಾತ್ರಾರ್ಥಿಗಳಿಗೆ ಪ್ರದರ್ಶಿಸತೊಡಗಿದ. ವಿಡಿಯೋ, ಆಡಿಯೋ, ಪೂಜೆ, ಪ್ರಸಾದ, ಮಹಾತ್ಮೆ ವಿವರಣೆ, ಹೀಗೆ, ಎರಡು ಗಂಟೆ ಕಳೆದದ್ದೇ ಯಾತ್ರಾರ್ಥಿಗಳಿಗೆ ಗೊತ್ತಾಗುತ್ತಿರಲಿಲ್ಲ. ತನ್ನ ಪ್ರತಿಯೊಂದು ಯೋಜನೆಯೂ ಬೇರೆ ವಾಹನಗಳ ಮಾಲೀಕರಿಂದ ಕಾಪಿಚಿಟ್‌ಗೆ ಈಡಾಗುತ್ತಿದ್ದಂತೆ ತಿಪ್ಪೇಶಿಯ ಬಳಿ ಹೊಸದೊಂದು ಯೋಜನೆ ರೆಡಿಯಾಗಿರುತ್ತಿತ್ತು.

ಈ ಸರ್ವದೇವ ಪ್ರದಕ್ಷಿಣ ಯಾತ್ರಾ ಸರ್ವಿಸ್‌ಗಳು ಎಷ್ಟು ಜನಪ್ರಿಯವಾದುವೆಂದರೆ, ಸ್ವಂತ ವಾಹನ ಹೊಂದಿದ್ದವರೂ ಅದನ್ನು ಮನೆಯಲ್ಲಿ ಬಿಟ್ಟು ಈ ಸರ್ವಿಸ್‌ಗಳಲ್ಲಿ ಪ್ರದಕ್ಷಿಣೆ ಹಾಕತೊಡಗಿದರು. ಮಂತ್ರ-ಸ್ತೋತ್ರ ಶ್ರವಣ, ಮಹಾತ್ಮ್ಯಕಥಾಶ್ರವಣ, ವಿಡಿಯೋದೈವದರ್ಶನ, ಪೂಜೆ, ಪ್ರಸಾದ ಇತ್ಯಾದಿ ಪುಣ್ಯದಾಯಕ ಫೆಸಿಲಿಟಿಗಳು ಅವರ ಸ್ವಂತ ವಾಹನಗಳಲ್ಲೆಲ್ಲಿಂದ ಬರಬೇಕು?

ಪ್ರದಕ್ಷಿಣ ಯಾತ್ರಾ ಸರ್ವಿಸ್ ವಾಹನಗಳ ಸಂಖ್ಯೆ ಏರತೊಡಗಿತು. ಎಷ್ಟೇ ಏರಿದರೂ ತಿಪ್ಪೇಶಿಯೂ ಸೇರಿದಂತೆ ಎಲ್ಲ ಯಾತ್ರಾ ಸರ್ವಿಸ್ ಮಾಲೀಕರಿಗೂ ಹೌಸ್‌ಫುಲ್ ಆದಾಯಕ್ಕೇನೂ ಕೊರತೆಯಿಲ್ಲ. ದೇವರ ಮಹಿಮೆಯೇ ಅಂಥದು! ಈ ಮಾಲೀಕರೆಲ್ಲ ಸೇರಿ ಸಂಘ ಕಟ್ಟಿಕೊಂಡು, ಸಾರಿಗೆ ಅಧಿಕಾರಿಗಳನ್ನೂ, ಆರಕ್ಷಕರನ್ನೂ, ಮಹಾನಗರಪಾಲಿಕೆಯನ್ನೂ ಮತ್ತು ತೆರಿಗೆ ಅಧಿಕಾರಿಗಳನ್ನೂ ಚೆನ್ನಾಗಿ ನೋಡಿಕೊಳ್ಳತೊಡಗಿದರು. (ಅಷ್ಟಿಷ್ಟು ತೆರಿಗೆಯನ್ನೂ ಪಾವತಿಸುತ್ತಿದ್ದರೆನ್ನಿ.) ಕ್ರಮೇಣ ಯಾತ್ರೆಯ ದರವನ್ನು ಹೆಚ್ಚಿಸಲಾಯಿತು. ಜೊತೆಗೆ, ಭಾನುವಾರ ಮತ್ತು ಹಬ್ಬದ ದಿನಗಳಂದು ಡಬಲ್ ಚಾರ್ಜು. ಆದಾಗ್ಗ್ಯೂ ಯಾತ್ರಿಕರ ಸಂಖ್ಯೆ ಏರುತ್ತಲೇ ಹೋಯಿತು. ಪುಣ್ಯ ಯಾರಿಗೆ ಬೇಡ? ಆದರೆ, ಕ್ರಮೇಣ ರಿಂಗ್ ರೋಡಿನಲ್ಲಿ ಟ್ರಾಫಿಕ್ ಜಾಮುಗಳು ಹೆಚ್ಚತೊಡಗಿದವು. ಅದೂ ಏಕಮುಖ ಜಾಮ್. ಕ್ಲಾಕ್‌ವೈಸ್.

ಟ್ರಾಫಿಕ್ ಜಾಮ್ ಅತಿಯಾದಾಗ ನಗರಾಭಿವೃದ್ಧಿ ಮಂಡಳಿ ಎಚ್ಚತ್ತುಕೊಂಡಿತು. ವಿವಿಧ ಆಡಳಿತ ಇಲಾಖೆಗಳ ಮೀಟಿಂಗ್ ಕರೆಯಲಾಯಿತು. ಪ್ರದಕ್ಷಿಣ ಯಾತ್ರಾ ಸರ್ವಿಸ್ ಮಾಲೀಕರ ಸಂಘಕ್ಕೂ ಆಹ್ವಾನ ಇತ್ತೆಂದು ಬೇರೆ ಹೇಳಬೇಕಿಲ್ಲವಷ್ಟೆ.

ಹಲವು ಮೀಟಿಂಗ್‌ಗಳ ತರುವಾಯ ಟ್ರಾಫಿಕ್ ಸಮಸ್ಯೆಗೆ ಪರಿಹಾರೋಪಾಯವನ್ನು ಕಂಡುಹಿಡಿಯಲಾಯಿತು. ಅದೇನೆಂದರೆ, ಮಹಾನಗರದ ಇನ್ನಷ್ಟು ಹೊರಕ್ಕೆ ಇನ್ನೊಂದು ರಿಂಗ್ ರೋಡನ್ನು ನಿರ್ಮಿಸುವುದು. ಹೊರವಲಯ ವರ್ತುಲ ರಸ್ತೆ. ಪೆರಿಫೆರಲ್ ರಿಂಗ್ ರೋಡ್.

ಉಪಸಂಹಾರ
--------------
ಉದ್ದೇಶಿತ ’ಹೊರವಲಯ ವರ್ತುಲ ರಸ್ತೆ’ಯ ಒಳಸುತ್ತಿನಲ್ಲಿ ರಸ್ತೆಯ ಅಂಚಿಗೇ ವಿವಿಧ ದೇವಾಲಯಗಳನ್ನು ನಿರ್ಮಿಸಲು ಸರ್ವದೇವ ಪ್ರದಕ್ಷಿಣ ಯಾತ್ರಾ ಸರ್ವಿಸ್ ಮಾಲೀಕರ ಸಂಘವು ಈಗಾಗಲೇ ಭೂಮಿ ಖರೀದಿಯಲ್ಲಿ ತೊಡಗಿದೆ.

ಇದೇ ವೇಳೆ, ರಾಜ್ಯದ ಇತರ ಅನೇಕ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ದೃಷ್ಟಿಯಿಂದ ಊರ ಹೊರಗೆ ರಿಂಗ್ ರೋಡುಗಳನ್ನು ನಿರ್ಮಿಸುವ ಕಾರ್ಯ ಆರಂಭವಾಗಿದೆ. ದೇವರು ಕಣ್ಣು ತೆರೆದ ಬಿಡಿ.

ಸಾವಿನ ಮನೆಯ ಕದ ತಟ್ಟಿ ಬಂದೆ, ಏಳು ಸಲ! (ಸತ್ಯ ಘಟನೆ)

ವೈಕುಂಠಕ್ಕೆ ಏಳು ಬಾಗಿಲುಗಳಿವೆ ಎನ್ನುತ್ತಾರೆ. ಗೊತ್ತಿಲ್ಲ. ನಾನಿನ್ನೂ ಅಲ್ಲಿಗೆ ಹೋಗಿಲ್ಲ. ಅಜ್ಜಿಕಥೆಗಳಲ್ಲಿ ರಾಜ ಏಳು ಸುತ್ತಿನ ಕೋಟೆಯೊಳಗೆ ಇರುತ್ತಿದ್ದ. ರಾಜಕುಮಾರ ಏಳು ಸಮುದ್ರ ದಾಟಿ ಹೋಗಿ ತನ್ನ ಪ್ರಿಯತಮೆಯನ್ನು ರಾಕ್ಷಸನ ಕೈಯಿಂದ ಬಿಡಿಸಿಕೊಂಡು ಬರುತ್ತಿದ್ದ. ಅಜ್ಜಿ ಹೇಳಿದ್ದಾದ್ದರಿಂದ ನಂಬಬೇಕಷ್ಟೇ ಹೊರತು ಆ ಘಟನೆಯನ್ನು ಅಜ್ಜಿಯೂ ನೋಡಿಲ್ಲ, ನಾನೂ ನೋಡಿಲ್ಲ. ಆದರೆ ಏಳು ಸಲ ನಾನು ಸಾವಿನ ಮನೆ ಬಾಗಿಲನ್ನು ತಟ್ಟಿ ವಾಪಸ್ ಬಂದದ್ದಂತೂ ಸತ್ಯ. ನಾನು ಅನುಭವಿಸಿದ ಈ ಜೀವನದ ಪರಮ ಸತ್ಯ ಆ ಏಳು ಅನುಭವಗಳು. ನಾನು ತಟ್ಟಿದ ಅವು ಏಳೂ ಬೇರೆ ಬೇರೆ ಬಾಗಿಲುಗಳು. ಆ ಏಳು ಬಾಗಿಲುಗಳ ಸತ್ಯಕಥೆ ಇಲ್ಲಿದೆ.

ಬಾಗಿಲು-ಒಂದು
----------------
ಅರವತ್ತರ ದಶಕ. ನಾನಾಗ ಪ್ರೌಢಶಾಲಾ ವಿದ್ಯಾರ್ಥಿ. ಐದು ವರ್ಷ ವಯಸ್ಸಿನ ತಮ್ಮನನ್ನು ಸೈಕಲ್‌ಮೇಲೆ ಮುಂಭಾಗದಲ್ಲಿ ಕೂರಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದೆ. ನನ್ನ ತಂದೆಯವರು ಉಪಯೋಗಿಸುತ್ತಿದ್ದ ಬ್ರಿಟಿಷರ ಕಾಲದ ಎತ್ತರದ ಬೈಸಿಕಲ್ ಅದು. ಪೆಡಲ್‌ಗಳು ನನ್ನ ಕಾಲಿಗೆ ಎಟುಕುತ್ತಿರಲಿಲ್ಲ. ಪೆಡಲ್ ತುಳಿಯಲು ಸರ್ಕಸ್ ಮಾಡುತ್ತಿದ್ದೆ.

ನನ್ನೂರು ದಾವಣಗೆರೆಯ ಚೌಕಿಪೇಟೆಯ ನಮ್ಮ ಮನೆಯೆದುರಿನ ರಸ್ತೆಯಲ್ಲಿ ಹೀಗೆ ನಾನು ಡಬಲ್ ರೈಡಿಂಗ್ ಹೋಗುತ್ತಿದ್ದಾಗ ಎದುರಿನಿಂದ ಲಾರಿಯೊಂದು ವೇಗವಾಗಿ ಬಂತು. ನಾನೇನೋ ರಸ್ತೆಯ ಸಂಪೂರ್ಣ ಎಡಭಾಗದಲ್ಲೇ ಇದ್ದೆ. ಆದರೆ ನನ್ನೆದುರು ಬಲಭಾಗದಲ್ಲಿ ಬಕ್ಕೇಶ್ವರ ಸ್ವಾಮಿಯ ತೇರು ಅರ್ಧರಸ್ತೆಯನ್ನಾಕ್ರಮಿಸಿ ನಿಂತಿತ್ತಾದ್ದರಿಂದ ಆ ಲಾರಿಯು ತೀರಾ ಬಲಭಾಗಕ್ಕೆ ಬಂದು ನನ್ನೆದುರಿಗೇ ಧಾವಿಸತೊಡಗಿತು! ವೇಗವನ್ನು ಕಡಿಮೆ ಮಾಡದೆ ನನ್ನೆದುರು ಧಾವಿಸಿದ ಲಾರಿಯಿಂದ ಪಾರಾಗಲು ಸೈಕಲ್ಲನ್ನು ಇನ್ನಷ್ಟು ಎಡಬದಿಗೆ ಕೊಂಡೊಯ್ದೆ. ಹಾಗೆ ಕೊಂಡೊಯ್ಯುವಾಗ ರಸ್ತೆಗಿಂತ ತಗ್ಗಿನಲ್ಲಿದ್ದ ಕಚ್ಚಾ ಫುಟ್‌ಪಾತ್‌ಗೆ ಸೈಕಲ್ ಜಾರಿ ಧಡಕ್ಕನೆ ರಸ್ತೆಗೆ ಬಿದ್ದೆ! ನನ್ನೊಡನೆ ನನ್ನ ತಮ್ಮನೂ ಬಿದ್ದ. ನಮ್ಮ ಮೇಲೆ ಇನ್ನೇನು ಆ ಲಾರಿ ಹರಿಯಿತು ಎನ್ನುವಷ್ಟರಲ್ಲಿ ನಾನು ತಮ್ಮನನ್ನು ಉಳಿಸುವ ಯತ್ನದಲ್ಲಿ ಅವನನ್ನು ಎಡಬದಿಗೆ ತಳ್ಳಿದೆ. ಹಾಗೆ ತಳ್ಳುವಾಗ ನನ್ನ ಕಾಲು ಸೈಕಲ್‌ನ ಕಂಬಿಗಳ ಮಧ್ಯೆ ಸಿಕ್ಕಿಕೊಂಡು ತಿರುಚಿಕೊಂಡಿತು! ಆದರೆ, ಇಬ್ಬರೂ ಎಡಬದಿಗೆ ಚರಂಡಿಯ ಸಮೀಪ ಬಿದ್ದದ್ದರಿಂದಾಗಿ ಲಾರಿಯ ಚಕ್ರಗಳಿಂದ ಕೂದಲೆಳೆಯ ಅಂತರದಲ್ಲಿ ಪಾರಾದೆವು!

ಮೂಳೆ ಮುರಿದ ಎಡಗಾಲಿಡೀ ಬ್ಯಾಂಡೇಜ್ ಸುತ್ತಿಸಿಕೊಂಡು ನಾನು ಮೂರು ತಿಂಗಳು ಮಲಗಬೇಕಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿದ್ದಾಗ ಬ್ಯಾಂಡೇಜ್‌ನೊಳಗೆ ತಿಗಣೆಗಳು ಸೇರಿಕೊಂಡು ಮುಂದಿನ ಮೂರು ತಿಂಗಳೂ ನಾನು ಅನುಭವಿಸಿದ ತಿಗಣೆಕಾಟ ಬಲು ಘೋರ! ಅದೇ ವೇಳೆ ನಡೆದ ನನ್ನ ಅಕ್ಕನ ಮದುವೆಯಲ್ಲಿ ನಾನು ಟೆಂಪೊರರಿ ಅಂಗವಿಕಲನಾಗಿ ಭಾಗವಹಿಸಬೇಕಾಯಿತು! ಅಪಘಾತದಲ್ಲಿ ಅಂದು ಕೇವಲ ತರಚಿದ ಗಾಯಗಳನ್ನಷ್ಟೇ ಹೊಂದಿ ಪಾರಾದ ನನ್ನ ತಮ್ಮ ಇಂದು ಜಿಲ್ಲಾ ನ್ಯಾಯಾಧೀಶ.

ಬಾಗಿಲು-ಎರಡು
----------------
೧೯೭೧ನೆಯ ಇಸವಿ. ರಾಘವೇಂದ್ರ ಗುರುಗಳು ವೃಂದಾವನಸ್ಥರಾಗಿ ೩೦೦ ವರ್ಷಗಳು ಪೂರೈಸಿದ ಸಂದರ್ಭ. ಎಂದೇ ಆ ವರ್ಷದ ಆರಾಧನೆಗೆ ವಿಶೇಷ ಮಹತ್ತ್ವ. ಗುರುಗಳ ಆರಾಧನೆಗೆ ಮಂತ್ರಾಲಯದಲ್ಲಿ ಹಾಜರಿರಲು ನಾನು ದಾವಣಗೆರೆಯಿಂದ ಬಸ್ಸಿನಲ್ಲಿ ಹೊರಟೆ. ಬಳ್ಳಾರಿಯಲ್ಲಿ ಬಸ್ಸು ಬದಲಿಸಿದೆ. ಬಳ್ಳಾರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆ ಬೀಳುತ್ತಿತ್ತು. ಬಳ್ಳಾರಿಯಿಂದ ಕೆಲವು ಕಿಲೋಮೀಟರ್ ದೂರ ಹೋಗಿ ಒಂದು ಕಡೆ ಬಸ್ಸು ನಿಂತುಬಿಟ್ಟಿತು. ಏಕೆಂದು ನೋಡಿದರೆ, ಎದುರಿಗೆ ಒಡ್ಡಿನಮೇಲೆ ಉಕ್ಕಿ ಹರಿಯುತ್ತಿದ್ದ ಹಳ್ಳ! ನೀರಿನ ರಭಸ ಕಂಡರೆ ಭಯವಾಗುತ್ತಿತ್ತು! ಅಪಾಯವನ್ನು ಊಹಿಸಿಯೇ ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸಿದ್ದ. ಒಂದಷ್ಟು ಹೊತ್ತು ಕಾದೆವು. ಪ್ರವಾಹ ಇಳಿಯುವ ಲಕ್ಷಣ ಕಾಣಲಿಲ್ಲ. ಬಸ್ಸಿನಲ್ಲಿದ್ದ ಕೆಲವರು ಬಸ್ಸನ್ನು ಚಲಿಸಿಕೊಂಡು ಹೋಗುವಂತೆ ಚಾಲಕನನ್ನು ಹುರಿದುಂಬಿಸಿದರು. ಚಾಲಕನಿಗೂ ಅದೇ ಯೋಚನೆ ಬಂದಿತ್ತೇನೋ ಬಸ್ಸನ್ನು ನೀರಿಗಿಳಿಸಿದ. ನೀರಿನಲ್ಲಿ ಅರ್ಧ ದಾರಿ ಕ್ರಮಿಸಿದ ಬಸ್ಸು ಈಗ ಮುಂದಕ್ಕೆ ಹೋಗುವ ಬದಲು ನೀರಿನ ಪ್ರವಾಹದೊಡನೆ ಪಕ್ಕಕ್ಕೆ ಜಾರತೊಡಗಿತು! ನಿಧಾನವಾಗಿ ವಾಲತೊಡಗಿತು! ಬಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಚಾಲಕ ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಆತ ಕೈಚೆಲ್ಲಿ ಕುಳಿತ. ಇಂಚಿಂಚಾಗಿ ಬಸ್ಸು ನೀರಿನೊಳಗೆ ಮುಳುಗತೊಡಗಿತು! ಜೊತೆಗೆ ಪ್ರವಾಹದೊಡನೆ ಅಡ್ಡಡ್ಡ ಸಾಗತೊಡಗಿತು! ನಾವಿನ್ನು ನೀರಿನಲ್ಲಿ ಮುಳುಗಿಯೋ ಕೊಚ್ಚಿಕೊಂಡೋ ಹೋಗುವುದು ಗ್ಯಾರಂಟಿ ಅನ್ನಿಸಿತು ನಮಗೆಲ್ಲ!

ಮುಂದೇನು ಮಾಡುವುದೆಂದು ಎಲ್ಲರೂ ಯೋಚಿಸುತ್ತಿರುವಂತೆಯೇ, ನಾವು ಬಿಟ್ಟುಬಂದಿದ್ದ ದಡದಲ್ಲಿ ಒಂದು ಲಾರಿ ಬಂದು ನಿಂತಿತು. ನಮ್ಮ ಬಸ್ಸಿನ ಅವಸ್ಥೆಯನ್ನು ಕಂಡ ಆ ಲಾರಿಯ ಚಾಲಕ ಮತ್ತು ಕ್ಲೀನರ್ ಕೂಡಲೇ ಜಾಗೃತರಾದರು. ಲಾರಿಯ ಲೋಡಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದರು. ಹಗ್ಗದ ಒಂದು ತುದಿಯನ್ನು ಲಾರಿಯ ಮುಂಭಾಗಕ್ಕೆ ಕಟ್ಟಿ ಇನ್ನೊಂದು ತುದಿಯನ್ನು ನಮ್ಮ ಬಸ್ಸಿನತ್ತ ಎಸೆದರು. ಆ ತುದಿಯನ್ನು ನಾವು ನಮ್ಮ ಬಸ್ಸಿಗೆ ಕಟ್ಟಿದೆವು. ಒಬ್ಬೊಬ್ಬರಾಗಿ ಕೈಯಿಂದ ಆ ಹಗ್ಗಕ್ಕೆ ಜೋತುಬಿದ್ದು ಕೈಯಿಂದಲೇ ದೇಕಿಕೊಂಡು ದಡ ತಲುಪುವಲ್ಲಿ ಯಶಸ್ವಿಯಾದೆವು. ಎಲ್ಲರ ಜೀವವೂ ಉಳಿಯಿತು.

ಬಾಗಿಲು-ಮೂರು
----------------
೧೯೮೪ನೆಯ ಇಸವಿ. ತಮಿಳುನಾಡಿನ ನಾಗಪಟ್ಣಂ, ಕಡ್ಡಲೂರ್ ಪ್ರದೇಶದಲ್ಲಿ ಸಂಸಾರಸಮೇತ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಇದ್ದಕ್ಕಿದ್ದಂತೆ ಭಾರೀ ಗಾಳಿ. ಬಿರುಗಾಳಿ ಎನ್ನುವಂಥ ಗಾಳಿ. ಜೊತೆಗೆ ಮಳೆ. ಭಾರೀ ಮಳೆ. ಅನತಿ ದೂರದಲ್ಲಿ ಕಾಣುತ್ತಿದ್ದ ಸಮುದ್ರ ನಮ್ಮತ್ತಲೇ ನುಗ್ಗಿಬರುತ್ತಿದೆಯೇನೋ ಎಂಬಂಥ ಅನುಭವ! ಮಳೆ-ಗಾಳಿಗೆ ನಮ್ಮ ಕಾರು ಹೊಯ್ದಾಡತೊಡಗಿತು! ಹಗಲಾಗಿದ್ದಾಗ್ಗ್ಯೂ ಮುಂದಿನದೇನೂ ಕಾಣದಂತ ಜಡಿಮಳೆ. ಕಾರು ಚಾಲಕನಿಗೋ ಎಲ್ಲಿಲ್ಲದ ಧೈರ್ಯ, ಹುಮ್ಮಸ್ಸು! ಇಂಥ ಮಳೆ-ಬಿರುಗಾಳಿಯಲ್ಲೇ ಒಂದಿಡೀ ಒಪ್ಪೊತ್ತು ಕಾರನ್ನು ಹೊಯ್ದಾಡಿಸಿಕೊಂಡು ಸಾಗಿದ! ಕೊನೆಗೂ ಸುರಕ್ಷಿತ ತಾಣ ತಲುಪಿದೆವು.

ಮರುದಿನದ ಪತ್ರಿಕೆಗಳನ್ನು ನೋಡಿದಾಗ ನಮಗೆ ತಿಳಿದದ್ದು, ನಾವು ಹಿಂದಿನ ದಿನ ಚಂಡಮಾರುತದ ಮಧ್ಯೆ ಸಿಲುಕಿದ್ದೆವು! ನಮ್ಮ ಹಿಂದುಮುಂದಿನ ಎಷ್ಟೋ ವಾಹನಗಳು ಚಂಡಮಾರುತಕ್ಕೆ ಬಲಿಯಾಗಿದ್ದವೆಂಬುದು ನಮಗೆ ಪತ್ರಿಕೆಯಿಂದಲೇ ಗೊತ್ತಾದದ್ದು! ನಾವು ಮಾತ್ರ ಸುರಕ್ಷಿತವಾಗಿ ಪಾರಾಗಿದ್ದೆವು!

ಬಾಗಿಲು-ನಾಲ್ಕು
----------------
೧೯೮೯ನೆಯ ಇಸವಿ ಮೇ ತಿಂಗಳು. ಸಂಸಾರಸಮೇತನಾಗಿ ಬೆಂಗಳೂರಿನಿಂದ ಕಾರಿನಲ್ಲಿ ಯಾತ್ರೆ ಹೊರಟೆ. ಪಂಢರಪುರ ಪೂರೈಸಿಕೊಂಡು ಕೊಲ್ಲಾಪುರದ ಕಡೆಗೆ ಹೊರಟಿದ್ದೆವು. ಕಾರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಂಗೋಲಾ ಪಟ್ಟಣದ ಹೊರವಲಯದಲ್ಲಿ ಚಲಿಸುತ್ತಿತ್ತು. ಕಿರಿದಾದ ರಸ್ತೆ. ಅಲ್ಲಲ್ಲಿ ಮನೆಗಳು. ಕಾರಿನ ವೇಗ ೬೦ ಕಿಲೋಮೀಟರ್ ಇತ್ತು. ವೇಗವನ್ನು ತಗ್ಗಿಸುವಂತೆ ನಾನು ಚಾಲಕನಿಗೆ ಹೇಳುತ್ತಿರುವಾಗಲೇ ಎಡಪಕ್ಕದ ಗುಡಿಸಲೊಂದರಿಂದ ಇದ್ದಕ್ಕಿದ್ದಂತೆ ನಾಲ್ಕು ವರ್ಷದ ಮಗುವೊಂದು ರಸ್ತೆಗೆ ಓಡಿಬಂತು! ಮಗುವಿನ ಹಿಂದೆ ಅದನ್ನು ಹಿಡಿಯಲು ಅದರ ಅಮ್ಮ ಧಾವಿಸಿದಳು! ಅಚಾನಕ್ಕಾಗಿ ಕಾರಿಗೆ ಅಡ್ಡಬಂದು ಓಡುತ್ತಿದ್ದ ಅವರನ್ನು ಉಳಿಸಲು ನಮ್ಮ ಚಾಲಕನು ಕಾರಿಗೆ ಬ್ರೇಕ್ ಹಾಕುವುದರ ಜೊತೆಗೆ ಸರಕ್ಕನೆ ಕಾರನ್ನು ರಸ್ತೆಯ ಸಂಪೂರ್ಣ ಎಡಬದಿಗೆ ತಿರುಗಿಸಿದ. ’ಧಡ್’ ಎಂದು ಭಾರೀ ಶಬ್ದದೊಂದಿಗೆ ಕಾರು ರಸ್ತೆಬದಿಯ ಪೂಲ್ ಒಂದರ ಅಡ್ಡಗಟ್ಟೆಗೆ ಢಿಕ್ಕಿಹೊಡೆಯಿತು!

ಮುಂದಿನ ಅರ್ಧ ಗಂಟೆಯಲ್ಲಿ ಚಾಲಕ ಹೊರತಾಗಿ ನಾವೆಲ್ಲರೂ ಸಂಗೋಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಮಲಗಿದ್ದೆವು! ಒಬ್ಬರಿಗೆ ಕೈಮುರಿದಿತ್ತು, ಇನ್ನೊಬ್ಬರ ಕಾಲು ಮುರಿದಿತ್ತು, ಮತ್ತೊಬ್ಬರಿಗೆ ಸೊಂಟಕ್ಕೆ ಪೆಟ್ಟಾಗಿತ್ತು, ನನ್ನಾಕೆಯ ಮುಖ ಹರಿದಿತ್ತು! ಚಾಲಕನ ಪಕ್ಕದಲ್ಲಿ ಕುಳಿತಿದ್ದ ನನ್ನ ನೇರಕ್ಕೇ ಅಡ್ಡಗಟ್ಟೆಯು ಢಿಕ್ಕಿಹೊಡೆದದ್ದರಿಂದಾಗಿ ನನ್ನ ಒಂದು ಕಣ್ಣು ಅಪ್ಪಚ್ಚಿಯಾಗಿತ್ತಲ್ಲದೆ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು! ಕಾರಿನ ಚಾಲಕ ಮಾತ್ರ ಯಾವುದೇ ಪೆಟ್ಟಿಲ್ಲದೆ ಪಾರಾಗಿದ್ದ!

ಎಲ್ಲರಿಗೂ ಆದ ತೀವ್ರಸ್ವರೂಪದ ಪೆಟ್ಟನ್ನು, ಮುಖ್ಯವಾಗಿ ನನ್ನ ತಲೆ ಮತ್ತು ಕಣ್ಣಿಗೆ ಆದ ಗಂಭೀರ ಸ್ವರೂಪದ ಪೆಟ್ಟನ್ನು ಮತ್ತು ಅದರಿಂದಾಗಿ ಎದುರಾಗಿರುವ ಪ್ರಾಣಾಪಾಯವನ್ನು ಗಮನಿಸಿ ನಮ್ಮನ್ನು ಕೂಡಲೇ ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ನಮಗೆಲ್ಲರಿಗೂ ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯಿತು. ನನ್ನ ತಲೆ ಮತ್ತು ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಕೆಲದಿನಗಳಿದ್ದ ನಾವು ಅನಂತರ ನನ್ನೂರು ದಾವಣಗೆರೆಗೆ ಬಂದು ಬಾಪೂಜಿ ಆಸ್ಪತ್ರೆಗೆ ದಾಖಲಾದೆವು. ಎರಡು ಶಸ್ತ್ರಚಿಕಿತ್ಸೆ ಹಾಗೂ ಮೂರು ಆಸ್ಪತ್ರೆಗಳ ಬಳಿಕ ನಾನು ಸಜೀವವಾಗಿ ಸಂಸಾರಸಮೇತ ಬೆಂಗಳೂರಿಗೆ ಹಿಂತಿರುಗಿದೆ.

ಬಾಗಿಲು-ಐದು
--------------
೧೯೯೭ರ ಮಳೆಗಾಲ. ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ನನಗೆ ಬಡ್ತಿ ದೊರೆತು ಗುಜರಾತ್‌ನ ಗಾಂಧಿಧಾಮ್ ಎಂಬಲ್ಲಿಗೆ ವರ್ಗವಾಯಿತು. ಗಂಟುಮೂಟೆ ಕಟ್ಟಿಕೊಂಡು ಹೊರಟೆ. ಅಹಮದಾಬಾದ್ ರೈಲ್ವೆ ನಿಲ್ದಾಣಕ್ಕೆ ನಾನು ಬಂದಿಳಿದಾಗ ನಿಲ್ದಾಣವು ಜಲಾವೃತವಾಗಿತ್ತು! ಹೊರಗೆ ಹೋಗಿ ನೋಡಿದರೆ ರಸ್ತೆಗಳೂ ಜಲಾವೃತ! ಇಡೀ ಊರೇ ಜಲಾವೃತ! ಭಾರೀ ಮಳೆಯ ಪ್ರಭಾವ! ಅಹಮದಾಬಾದ್‌ನಿಂದ ಹೊರಡಬೇಕಾಗಿದ್ದ ಎಲ್ಲ ಟ್ರೈನ್ ಹಾಗೂ ಬಸ್‌ಗಳೂ ರದ್ದಾಗಿದ್ದವು. ಬೇರೆಡೆಯಿಂದ ಬಂದ ವಾಹನಗಳೂ ಎಲ್ಲೆಲ್ಲೋ ಸುರಕ್ಷಿತ ಸ್ಥಳಗಳಲ್ಲಿ ನಿಂತುಬಿಟ್ಟಿದ್ದವು. ರೈಲ್ವೆ ನಿಲ್ದಾಣದಿಂದ ಹೊರಗೆ ಹೋಗಲೂ ಸಾಧ್ಯವಾಗದಷ್ಟು ನೀರು! ಆ ದಿನವಿಡೀ ನಾನು ರೈಲ್ವೆ ನಿಲ್ದಾಣದಲ್ಲೇ ಕಳೆದೆ.

ಮರುದಿನ ಮಳೆ ಕೊಂಚ ಕಡಿಮೆಯಾಗಿ ಪ್ರವಾಹವು ಇಳಿಮುಖವಾದರೂ ಟ್ರೈನ್ ಸೇವೆ ಆರಂಭವಾಗಲಿಲ್ಲ. ಇನ್ನೂ ೬೮೦ ಕಿಲೋಮೀಟರ್ ಪ್ರಯಾಣಿಸಿ ನಾನು ಮರುದಿನ ಗಾಂಧಿಧಾಮ್‌ನಲ್ಲಿ ಡ್ಯೂಟಿಗೆ ಹಾಜರಾಗಬೇಕಿತ್ತು. ಬಸ್‌ನಲ್ಲಾದರೂ ಮುಂದುವರಿಯೋಣವೆಂದುಕೊಂಡು ನನ್ನ ಲಗೇಜ್‌ಗಳನ್ನು ತಲೆಯಮೇಲೆ ಹೊತ್ತುಕೊಂಡು ಸೊಂಟಮಟ್ಟದ ನೀರಿನೊಳಗಿಳಿದು ಬಸ್ ನಿಲ್ದಾಣದತ್ತ ಹೆಜ್ಜೆಹಾಕತೊಡಗಿದೆ. ನೂರು ಮೀಟರ್ ದೂರ ಹೋಗಿರಬೇಕು, ನೀರಿನಲ್ಲಿ ಅವಿತುಕೊಂಡಿದ್ದ ಆಳವಾದ ಮೋರಿಯೊಂದರೊಳಕ್ಕೆ ಬಿದ್ದುಬಿಟ್ಟೆ! ನನ್ನ ಮೇಲೆ ನನ್ನ ಲಗೇಜು! ನೀರಿನೊಳಗೆ ನನ್ನ ಉಸಿರು ಬಂದ್ ಆಗತೊಡಗಿತು! ನನಗೆ ಈಜು ಬಾರದು! ನನ್ನ ಕಥೆ ಇನ್ನು ಮುಗಿಯಿತು ಎಂದುಕೊಂಡೆ.

ಅಷ್ಟರಲ್ಲಿ ಒಂದೈದಾರು ಕೈಗಳು ಮೇಲಿನಿಂದ ನನ್ನನ್ನು ಜಗ್ಗಲಾರಂಭಿಸಿದವು! ಮುಂದಿನ ಅರ್ಧ ನಿಮಿಷದಲ್ಲಿ ನಾನು ಪುನಃ ರಸ್ತೆಯಮೇಲಿದ್ದೆ! ಯಾರೋ ಪುಣ್ಯಾತ್ಮರು ನನ್ನನ್ನು ಮೋರಿಯಿಂದ ಎತ್ತಿ ಕಾಪಾಡಿದ್ದರು! ನನ್ನ ಲಗೇಜನ್ನೂ ಮೋರಿಯಿಂದೆತ್ತಿ ನನಗೊಪ್ಪಿಸಿದರು.

ಛಲಬಿಡದ ತ್ರಿವಿಕ್ರಮನಂತೆ ನಾನು ಅದೇ ನೀರಿನಲ್ಲೇ ಮುಂದುವರಿದು ಬಸ್ ನಿಲ್ದಾಣ ತಲುಪಿದೆ! ಗಾಂಧಿಧಾಮ್ ಬಸ್‌ಗೆ ಮಾತ್ರ ನಿಲ್ದಾಣದಲ್ಲಿ ಮತ್ತೊಂದೊಪ್ಪೊತ್ತು ಕಾಯಬೇಕಾಯಿತು!

ಬಾಗಿಲು-ಆರು
--------------
೧೯೯೭ರ ಶ್ರಾವಣ ಮಾಸ. ಗುಜರಾತ್‌ನ ಗಾಂಧಿಧಾಮ್‌ಗೆ ಬಂದು ಹೆಚ್ಚು ದಿನಗಳಾಗಿರಲಿಲ್ಲ. ಅದೊಂದು ದಿನ ಬ್ಯಾಂಕ್‌ಗೆ ರಜೆ ಹಾಕಿ, ಜುನಾಗಢ್ ನಗರದಿಂದ ೬ ಕಿಲೋಮೀಟರ್ ದೂರದಲ್ಲಿರುವ ಪ್ರಸಿದ್ಧ ಗಿರ್‌ನಾರ್ ಪರ್ವತಕ್ಕೆ ಪ್ರವಾಸ ಹೊರಟೆ. ಜುನಾಗಢ್‌ನಲ್ಲಿರುವ ಅಶೋಕನ ಶಿಲಾಶಾಸನ ನೋಡಿಕೊಂಡು ಗಿರ್‌ನಾರ್ ಪರ್ವತಶ್ರೇಣಿಯತ್ತ ಹೆಜ್ಜೆಹಾಕಿದೆ.

ಪರ್ವತದಮೇಲಿರುವ ಅಂಬಾಜಿ ದೇವಾಲಯಕ್ಕೆ ಹೋಗಿಬರುವುದು ನನ್ನ ಗುರಿಯಾಗಿತ್ತು. ಮಂದಿರ ತಲುಪಲು ಹತ್ತು ಸಾವಿರ ಮೆಟ್ಟಿಲುಗಳನ್ನು ಹತ್ತಬೇಕಾಗಿತ್ತು. ಬೆಟ್ಟದ ಬುಡದ ದೂಕಾನೊಂದರಲ್ಲಿ ಚಾಯ್ ಕುಡಿದು ಬೆಟ್ಟ ಹತ್ತತೊಡಗಿದೆ.

ದಟ್ಟವಾದ ಕಾನನ, ಸುತ್ತಲೂ ಕಾಣುವ ಪರ್ವತಶ್ರೇಣಿ, ಬೆಟ್ಟಗಳೊಡನೆ ಚಕ್ಕಂದವಾಡುವ ಮೋಡಗಳು, ಇತಿಹಾಸ ಪ್ರಸಿದ್ಧ ನೇಮಿನಾಥ ಮಂದಿರದಿಂದ ಮೊದಲ್ಗೊಂಡು ದಾರಿಯುದ್ದಕ್ಕೂ ಅನೇಕ ಜೈನಮಂದಿರಗಳು, ಭೀಮಕುಂಡ, ಸತ್‌ಪುಡಾ, ಗೋಮುಖಿ ಗಂಗಾ, ಪಥರ್ ಚಾಟಿ, ಭೈರವ್ ಜಪ್, ಭರತ್‌ವನ್, ಶೇಷ್‌ವನ್, ಹನುಮಾನ್ ಧಾರಾ ಮುಂತಾದ ಹಿಂದು ಪವಿತ್ರ ಸನ್ನಿಧಾನಗಳು ಇವುಗಳನ್ನೆಲ್ಲ ನೋಡುತ್ತ ನಡೆದ ನನಗೆ ಆಯಾಸವಾಗಲೀ ಸಮಯ ಹೋದದ್ದಾಗಲೀ ಗೊತ್ತೇ ಆಗಲಿಲ್ಲ. ಬೆಳಗ್ಗೆ ಜುನಾಗಢ್ ಬಿಟ್ಟ ನಾನು ಪರ್ವತದ ತುದಿಯ ಅಂಬಾಜಿ ಮಂದಿರ ತಲುಪಿದಾಗ ಅಪರಾಹ್ನವಾಗಿತ್ತು. ಅಂಬಾಜಿ (ಅಂಬೆ ಮಾತೆ) ದರ್ಶನ ಮಾಡಿ ಪರ್ವತ ಇಳಿಯತೊಡಗಿದೆ.

ಕತ್ತಲಾಗುವುದರೊಳಗೆ ಪೂರ್ತಿ ಪರ್ವತ ಇಳಿಯಲು ಸಾಧ್ಯವೇ ಎಂದು ಯೋಚಿಸುತ್ತ ಸರಸರನೆ ಹೆಜ್ಜೆಹಾಕತೊಡಗಿದೆ. ಕರಿಮೋಡಗಳು ಬೇರೆ ಕವಿಯತೊಡಗಿದ್ದವು. ಸಾವಿರ ಮೆಟ್ಟಿಲು ಕೆಳಗಿಳಿದಿರಬಹುದು, ಮಳೆ ಶುರುವಾಯಿತು. ಭಾರೀ ಮಳೆ! ಜೊತೆಗೆ, ಜೋರಿನ ಗಾಳಿಯಿಂದಾಗಿ ಹೊಗೆಯಂತೆ ಹಾರಾಡುವ ತುಂತುರು ನೀರಿನ ದಟ್ಟಣೆ! ಎದುರಿನ ದೃಶ್ಯವೇನೂ ಕಾಣದಾಯಿತು! ಹಿಂದೆ-ಮುಂದೆ ಯಾರೊಬ್ಬರೂ ಇಲ್ಲ! ಇನ್ನೂ ೯೦೦೦ ಮೆಟ್ಟಿಲು ಇಳಿಯಬೇಕು! ಸುತ್ತಲೂ ಕಾಡು! ಕಣ್ಣೆದುರಿನ ಮಳೆಯ ತೆರೆಯಿಂದಾಗಿ ದಿಕ್ಕು ತಪ್ಪುವ ಸಾಧ್ಯತೆ! ಕತ್ತಲು ಕವಿಯುವ ಅಪಾಯ ಬೇರೆ!

ಹುಚ್ಚು ಧೈರ್ಯದಿಂದ ಮುಂದುವರಿದೆ. ಚಳಿಗೆ ಇಡೀ ದೇಹ ಕಂಪಿಸತೊಡಗಿತು. ಮಳೆಬಿದ್ದ ನೆಲದಲ್ಲಿ ಕಾಲುಗಳು ಜಾರತೊಡಗಿದವು. ಕೆಲವೆಡೆ ಜಾರಿಬಿದ್ದರೆ ಪ್ರಪಾತ! ಇಷ್ಟು ಸಾಲದೆಂಬಂತೆ, ಹೆಜ್ಜೆಹೆಜ್ಜೆಗೆ, ಮಳೆಯಿಂದಾಗಿ ಅದೇತಾನೆ ನಿರ್ಮಿತವಾಗಿ ತಲೆಮೇಲೆ ಬೀಳುತ್ತಿರುವ ಮಿನಿ ಜಲಪಾತದಂಥ ಜಲಧಾರೆಗಳು! ಆ ಜಲಪಾತಗಳಿಗೆ ತಲೆಯೊಡ್ಡಿಯೇ ಮುಂದೆ ಸಾಗಬೇಕು; ಪಕ್ಕಕ್ಕೆ ಸರಿಯಲು ಸ್ಥಳವಿಲ್ಲ. ಒಂದು ವೇಳೆ ಸ್ಥಳವಿದ್ದರೂ, ಆ ಕಡೆ ಹೋದರೆ ಬೆಟ್ಟದಿಂದ ಕೆಳಗೆ ಜಾರಿಬೀಳುವ ಅಪಾಯ!

ನಾನು ಮನೆ ತಲುಪುವುದಿಲ್ಲವೆಂಬುದು ಖಾತ್ರಿಯಾಯಿತು! ಹಣೆಯಲ್ಲಿ ಬರೆದಂತೆ ಆಗಲಿ; ಪ್ರಕೃತಿಯ ಈ ರುದ್ರರಮಣೀಯ ರೂಪದ ಆಸ್ವಾದನೆಯ ಅನುಭವ ಆಗುತ್ತಿದೆಯಲ್ಲಾ, ನನ್ನ ಜೀವನ ಸಾರ್ಥಕ ಅಂದುಕೊಳ್ಳುತ್ತ, ಪ್ರಕೃತಿರಸಾಸ್ವಾದ ಮಾಡುತ್ತ ಖುಷಿಯಿಂದಲೇ ಮುಂದುವರಿದೆ. ಗಾಳಿಯ ಆರ್ಭಟದ ಮಧ್ಯೆ ಮಳೆನೀರಿನ ಧೂಮಚಾಪೆ ಆಚೀಚೆ ಸರಿದಾಗಲೊಮ್ಮೊಮ್ಮೆ ಸುತ್ತಲಿನ ಕಾಡು ಮತ್ತು ದೂರದ ಪರ್ವತಶ್ರೇಣಿ ಗೋಚರಿಸಿ ಎದೆ ಝಲ್ಲೆನ್ನುತ್ತಿತ್ತು! ಅಂಥ ಘೋರ ವಾತಾವರಣದಲ್ಲಿ ನಾನೊಬ್ಬನೇ ಪಿಶಾಚಿಯಂತೆ ಹೆಜ್ಜೆಹಾಕುತ್ತಿದ್ದೆ!

ಚಳಿಯಿಂದ ನನ್ನ ಕೈಕಾಲುಗಳು ಮರಗಟ್ಟತೊಡಗಿದವು. ಕ್ರಮೇಣ ಅವು ಮರದ ಕೊರಡಿನಂತಾಗಿಬಿಟ್ಟವು! ಬಾಯಿಯೋ, ಮುಚ್ಚಲೂ ಸಾಧ್ಯವಾಗುತ್ತಿಲ್ಲ, ತೆರೆಯಲೂ ಸಾಧ್ಯವಾಗುತ್ತಿಲ್ಲ, ಇದ್ದ ಸ್ಥಿತಿಯಲ್ಲೇ ನಿಶ್ಚಲ! ಚಳಿಯಿಂದ ದೇಹ ನಡುಗಿ ಎತ್ತೆತ್ತಲೋ ಚಿಮ್ಮುತ್ತಿತ್ತು! ಇಂಥ ಸ್ಥಿತಿಯಲ್ಲೂ ನಾನು ಪ್ರಕೃತಿಯೊಡನೆ ಒಂದಾಗಿ ಸಾಗುವ ಆ ಅನುಭವವನ್ನು ಮನಸಾರೆ ಸವಿಯುತ್ತ ಮುಂದುವರಿದಿದ್ದಂದಾಗಿ ನನಗೆ ಯಾವ ಭಯವೂ ಆಗಲಿಲ್ಲ. ಮನೆ ತಲುಪುವ ವಿಶ್ವಾಸವನ್ನು ಮಾತ್ರ ನಾನು ಖಂಡಿತ ಹೊಂದಿರಲಿಲ್ಲ.

ಹೀಗೇ ಬಹಳ ಹೊತ್ತು ಪರ್ವತಾವರೋಹಣ ಮಾಡಿದಮೇಲೆ ದೂರದಲ್ಲೊಂದು ಚಾ ದುಕಾನು ಕಾಣಿಸಿತು. ಪರ್ವತದ ಬಹುತೇಕ ಕೆಳಭಾಗದಲ್ಲಿದ್ದ ದುಕಾನು ಅದು. ಅಲ್ಲಿಗೆ ಧಾವಿಸಿದೆ. ಪುಣ್ಯಾತ್ಮ ನನಗಾಗಿ ಸ್ಟವ್ ಹಚ್ಚಿ ಒಂದಷ್ಟು ಟೀ ಕುದಿಸಿ ಕೊಟ್ಟ. ಕುದಿಬಿಸಿ ಟೀಯನ್ನೇ ಗಟಗಟನೆ ಕುಡಿದೆ. ಕೈಕಾಲಿನ ಬೆರಳುಗಳು ಕೊಂಚ ಮಿಸುಕಾಡಿದವು. ಸಜೀವವಾಗಿ ಮನೆ ಸೇರುತ್ತೇನೆಂಬ ನಂಬಿಕೆ ಬಂತು. ಚಾ ಕುಡಿದು ಅಲ್ಲಿಂದ ಹೊರಹೊರಟಾಗ ಪೂರ್ಣ ಕತ್ತಲಾಗಿತ್ತು. ಉಳಿದ ಕೆಲವೇ ಮೆಟ್ಟಲುಗಳನ್ನಿಳಿದು ಪರ್ವತ ತಲಕ್ಕೆ ಬಂದು ತಲುಪಿದೆ.

ಈ ರೋಮಾಂಚಕಾರಿ ಅನುಭವದಿಂದ ನಿಜಕ್ಕೂ ಆ ದಿನ ನನಗೆ ಎಷ್ಟು ಖುಷಿಯಾಗಿತ್ತೆಂದರೆ, ಪರ್ವತ ಇಳಿದ ನಾನು, ನಿಲ್ಲಲೂ ಸಾಧ್ಯವಿಲ್ಲದಂಥ ನಿತ್ರಾಣಾವಸ್ಥೆಯಲ್ಲಿಯೇ ಆರು ಕಿಲೋಮೀಟರ್ ನಡೆದು ಜುನಾಗಢ್ ನಗರಕ್ಕೆ ಬಂದು, ಕೃಷ್ಣಜನ್ಮಾಷ್ಟಮಿ ನಿಮಿತ್ತ ರಸ್ತೆಯಲ್ಲಿ ಸಾಗಿದ್ದ ಬೃಹತ್ ಮೆರವಣಿಗೆಯನ್ನು ಎರಡು ಗಂಟೆ ಕಾಲ ನಿಂತು ನೋಡಿ, ಊಟಮಾಡಿ ಬಸ್ ನಿಲ್ದಾಣಕ್ಕೆ ವಾಪಸಾಗಿ, ಬೆಳಗಿನ ಜಾವದವರೆಗೆ ಕಾದು, ಬಸ್ ಹಿಡಿದು ಗಾಂಧಿಧಾಮ್ ತಲುಪಿ, ನೇರ ಬ್ಯಾಂಕಿಗೆ ಧಾವಿಸಿ ಡ್ಯೂಟಿಗೆ ಹಾಜರಾದೆ! ಗಿರ್‌ನಾರ್ ಪರ್ವತದಲ್ಲಿ ಪ್ರಾಣತ್ಯಾಗ ನಿಶ್ಚಿತ ಎಂದುಕೊಂಡಿದ್ದವನಿಗೆ ಪ್ರಾಣ ಉಳಿದ ಖುಷಿಯೂ ಕಸುವು ನೀಡಿರಬಹುದು.

ಬಾಗಿಲು-ಏಳು
--------------
೨೦೦೫ರ ಜನವರಿ. ೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿತನಾಗಿ ಬೀದರ ನಗರಕ್ಕೆ ಹೋಗಿದ್ದ ನಾನು ಸಮ್ಮೇಳನ ಮುಗಿಸಿಕೊಂಡು ವಾಪಸ್ ಬೆಂಗಳೂರಿನ ಟ್ರೈನ್ ಹತ್ತಿದೆ. ಮೂರು ದಿನ ಸಾಹಿತ್ಯರಸದೌತಣ ಸವಿದದ್ದರ ಜೊತೆಗೆ ಉದ್ಘಾಟನೆಯ ದಿನ ವೇದಿಕೆಯಲ್ಲಿ ಮಿಂಚಿದ ಖುಷಿ ನನಗೆ ಎಷ್ಟಿತ್ತೆಂದರೆ ಸಮ್ಮೇಳನದಲ್ಲಿ ನನ್ನ ನಾಲ್ಕೂವರೆ ಸಾವಿರ ರೂಪಾಯಿ ಹಣ ಕಳುವಾದ ಬೇಸರವೂ ಆ ಖುಷಿಯೆದುರು ನಗಣ್ಯವಾಗಿಬಿಟ್ಟಿತ್ತು! ಖುಷಿಯಾಗಿ ಟ್ರೈನ್ ಹತ್ತಿದವನಿಗೆ ಇದ್ದಕ್ಕಿದ್ದಂತೆ ಘೋರ ಹೊಟ್ಟೆನೋವು! ಜೀವಸಹಿತ ಬೆಂಗಳೂರು ತಲುಪುತ್ತೇನೋ ಇಲ್ಲವೋ ಎನ್ನುವಷ್ಟು ಹೊಟ್ಟೆನೋವು! ಹೇಗೋ ಸುಧಾರಿಸಿಕೊಂಡು ಬೆಂಗಳೂರು ತಲುಪಿದೆ.

ಮನೆ ತಲುಪಿದವನೇ ಸ್ನಾನ ಮಾಡಿ ನನ್ನ ಕೋಣೆಯೊಳಗೆ ಮಲಗಿಬಿಟ್ಟೆ. ನನ್ನ ಬಾಡಿದ ಮುಖ ಗಮನಿಸಿದ ನನ್ನ ೧೮ ವರ್ಷದ ಕಿರಿಮಗ ಆರೋಗ್ಯ ವಿಚಾರಿಸಿದ. ಹೊಟ್ಟೆನೋವೆಂದಾಕ್ಷಣ ಸನಿಹದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕೂಡಲೇ ದಾಖಲಾಗುವಂತೆ ಒತ್ತಾಯಿಸತೊಡಗಿದ. ನನ್ನ ಹಿರಿಮಗ ಮತ್ತು ನನ್ನಾಕೆಯೂ ದನಿಗೂಡಿಸಿದರು. ಆದರೆ ನಾನು ಸುತರಾಂ ಒಪ್ಪಲಿಲ್ಲ. ಬೀದರದಲ್ಲಿ ಆಹಾರದೋಷ ಉಂಟಾಗಿರಬಹುದು, ತಾನಾಗಿಯೇ ಗುಣವಾಗುತ್ತದೆ ಎಂದು ಹೇಳಿ ಅವರನ್ನು ಸುಮ್ಮನಾಗಿಸಲೆತ್ನಿಸಿದೆ. ಕಿರಿಮಗ ಮಾತ್ರ ಸುಮ್ಮನಾಗಲಿಲ್ಲ. ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ಒಂದೇಸವನೆ ಹೇಳತೊಡಗಿದ. ನಾನು ಒಪ್ಪದಿದ್ದಾಗ ಮನೆಯ ಉಪ್ಪರಿಗೆ ಮೆಟ್ಟಿಲಮೇಲೆ ಹೋಗಿ ಕುಳಿತು ಅಳತೊಡಗಿದ. ಆಹಾರ ನಿರಾಕರಿಸಿದ. ತತ್‌ಕ್ಷಣ ನಾನು ಆಸ್ಪತ್ರೆಗೆ ದಾಖಲಾದರೇನೇ ತಾನು ಆಹಾರ ಮುಟ್ಟುವುದಾಗಿ ಹಠಹಿಡಿದ.

ಅವನ ಹಠಕ್ಕೆ ಸೋತು ನಾನು ಆ ಕೂಡಲೇ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾದೆ. ಚಕಚಕನೆ ಪರೀಕ್ಷೆಗಳು ನಡೆದವು. ಪಿತ್ತಕೋಶದ ತುಂಬ ಕುಳಿಗಳಾಗಿದ್ದುದು ಪರೀಕ್ಷೆಯಿಂದ ಗೊತ್ತಾಯಿತು! ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಪಿತ್ತಕೋಶವನ್ನೇ ತೆಗೆದುಹಾಕಲಾಯಿತು! ವಿಳಂಬ ಮಾಡಿದ್ದರೆ ಜೀವಗಂಡಾಂತರವಿತ್ತೆಂದು ಸರ್ಜನ್ ಹೇಳಿದರು!

ಇಷ್ಟು ಕುಳಿಗಳಿಂದ ಕೂಡಿದ ಪಿತ್ತಕೋಶವನ್ನು ತನ್ನ ಸುದೀರ್ಘ ಸೇವಾವಧಿಯಲ್ಲಿ ತಾನು ನೋಡಿಯೇ ಇಲ್ಲವೆಂದೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠಮಾಡುವಾಗ ತೋರಿಸಲು ಆ ಪಿತ್ತಕೋಶವನ್ನು ತಾವೇ ಇಟ್ಟುಕೊಳ್ಳುವುದಾಗಿಯೂ ನಂತರ ಆ ಸರ್ಜನ್ ನನಗೆ ತಿಳಿಸಿದರು!

ಏಳು ಜನ್ಮ
-----------
ಹೀಗೆ, ಒಂದಲ್ಲ, ಎರಡಲ್ಲ, ಏಳು ಸಲ ನಾನು ಸಾವಿನ ಮನೆ ಬಾಗಿಲನ್ನು ತಟ್ಟಿ ವಾಪಸು ಬಂದಿದ್ದೇನೆ!

ನನ್ನ ಹಣೆಯಲ್ಲಿ ಬದುಕು ಬರೆದಿತ್ತು. ಹಾಗಾಗಿ ಏಳು ಸಲವೂ ಬದುಕಿ ಉಳಿದೆ. ಬರೆದ ಬರಹವನ್ನು ತಪ್ಪಿಸಲು ಹರಿ ಹರ ವಿರಿಂಚರಿಗೂ ಸಾಧ್ಯವಿಲ್ಲ.

ಈಚೆಗೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ ನೂರಾರು ಮಂದಿ ಜಲಸಮಾಧಿ ಹೊಂದಿದ್ದನ್ನು ಟಿವಿಯಲ್ಲಿ ನೋಡಿದಾಗ ನನಗೆ ಈ ’ಏಳು (ಪುನರ್)ಜನ್ಮ’ದ ಘಟನೆಗಳು ಕಣ್ಮುಂದೆ ಸುಳಿದವು. ಏಳರಲ್ಲಿ ನಾಲ್ಕು ಘಟನೆಗಳು ಜಲಸಮಾಧಿಯಾಗಹೊರಟಿದ್ದ ಘಟನೆಗಳೇ ತಾನೆ!

ಗುರುವಾರ, ಅಕ್ಟೋಬರ್ 15, 2009

ಹವಾ-ಮಾನ

ಕಳೆಯದಿರೋಣ ಹವಾಮಾನದ ಮಾನ
ಉಳಿಸಿಕೊಳ್ಳೋಣ ಸುರಕ್ಷಿತ ಈ ತಾಣ
ಏರದಿರಲಿ ಉಷ್ಣತೆಯ ಪ್ರಮಾಣ
ಆರದಿರಲಿ ಜೀವಜಂತು ಪ್ರಾಣ

ಹರಿಯದಿರಲಿ ನೀರ್ಗಲ್ಗಳು ಕರಗಿ
ಮೊರೆಯದಿರಲಿ ಹೊಳೆ ನದಿಗಳು ಉಕ್ಕಿ
ಸಾಯದಿರಲಿ ಬಡಜೀವವು ಕೊರಗಿ
ಹಾಯದಿರಲಿ ಅತಿವೃಷ್ಟಿಯು ಸೊಕ್ಕಿ

ರಸ್ತೆ ತುಂಬ ಕಾರುಗಳದೆ ಕಾರುಬಾರು
ಮಸ್ತು ಅದೋ, ಇಂಗಾಲದ ಉಗುಳುವಿಕೆ
ಪರಿಣಾಮ, ವಾಯುಗುಣವೆ ಏರುಪೇರು
ಹರಿಯೇ, ಈ ದುರವಸ್ಥೆಯು ನಮಗೆ ಬೇಕೆ?

ಕಲ್ಲಿದ್ದಲು ಸುಟ್ಟು ನಮಗೆ ವಿದ್ಯುಚ್ಛಕ್ತಿ
ಅಲ್ಲಿ ಪರಿಸರಕ್ಕೆ ಇಂಗಾಲಾಮ್ಲ ಭುಕ್ತಿ
ಒಳ್ಳೆಯ ಪರ್ಯಾಯವದುವೆ ಸೂರ್ಯಶಕ್ತಿ
ಎಲ್ಲ ಗೊತ್ತಿದ್ದರೂ ನಮಗೆ ಇಲ್ಲ ಆಸಕ್ತಿ

ಹವಾಮಾನ ಬದಲಾವಣೆ ಪರಿಣಾಮವು ಘೋರ
ಹೆಚ್ಚುತಿರುವ ತಾಪಮಾನ ಭೂಮಿಗೇ ಅಪಾಯ
ಮಾನ್ಸೂನ್‌ಗಳು ಅಸ್ತವ್ಯಸ್ತ, ಬರ, ಮಹಾಪೂರ
ಕಡಲಬ್ಬರ, ಸುನಾಮಿಗಳು, ಸಡಿಲ ಇಳೆಯ ಪಾಯ

ಪರಿಸ್ಥಿತಿಯು ಕೈಮೀರುವ ಮುನ್ನವೆ ನಾವೆಲ್ಲ
ಜಾಗೃತರಾಗೋಣ ನಮ್ಮ ಜಗವನುಳಿಸಲು
ಹವಾಮಾನ ವೈಪರೀತ್ಯದುಪಶಮನಕೆ ಎಲ್ಲ
ಯತ್ನಿಸೋಣ ಈಗಿಂದಲೆ ಮಹಾಸಮರದೋಲು

(ಇಂದು ’ಬ್ಲಾಗ್ ಕಾರ್ಯಾಚರಣೆ ದಿನ’. ಈ ಸಲದ ವಿಷಯ ’ಹವಾಮಾನ ಬದಲಾವಣೆ’. ತನ್ನಿಮಿತ್ತ ಈ ಕವನ.)

ಶುಕ್ರವಾರ, ಅಕ್ಟೋಬರ್ 9, 2009

ಎಲ್ಲ ಮೂರಾಬಟ್ಟೆ!

(’ಕರ್ನಾಟಕ ರಾಜ್ಯೋತ್ಸವ’ ಸಮೀಪಿಸುತ್ತಿದೆ. ಸರ್ಕಾರಿ ಪ್ರಶಸ್ತಿಗಾಗಿ ’ಕನ್ನಡದ ಕಲಿ’ಗಳನೇಕರು ’ಕಂಡಕಂಡವರ ಕೈಕಾಲ್ ಹಿಡಿಯುವಾಟ’ ನಡೆಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕೂ ಸಿಕ್ಕಿಲ್ಲದಂತಾಗಿದೆ. ಊಹ್ಞೂ. ಸಿಕ್ಕುಸಿಕ್ಕಾಗಿದೆ! ಶಿಕ್ಷಣದಲ್ಲಿ ಕನ್ನಡ-ಇಂಗ್ಲಿಷ್‌ಗಳ ಜಟಾಪಟಿ ಮುಂದುವರಿದಿದೆ. ಇಂಥ ’ಸನ್ನಿ’ವೇಶದಲ್ಲಿ, ಇದೋ, ಒಂದು ಹಾಸ್ಯವಿಡಂಬನೆ.)

ದಯೆಯಿಟ್ಟು ಕ್ಷಮಿಸಿ.

ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಮೂರು ಘಟನೆಗಳತ್ತ ನಿಮ್ಮ ಚಿತ್ತ ಸೆಳೆಯುತ್ತ, ಮೂರಕ್ಕೂ ಸಂಬಂಧ ಕಲ್ಪಿಸಲೆತ್ನಿಸುತ್ತ, ನಿಮ್ಮ ಪಿತ್ತ ನೆತ್ತಿಗೇರುವಂತೆ ಮಾಡುತ್ತ ಮುಂದುವರಿಯಲಿದ್ದೇನೆ, ದಯೆಯಿಟ್ಟು ಕ್ಷಮಿಸಿ.

ಘಟನೆ ಒಂದು
--------------
ಸಂಸ್ಕೃತ ಪದವಿ ಪಡೆದ ಶಾಸ್ತ್ರಿಯಾದ್ದರಿಂದ ಎಂದಿನಂತೆ ನನ್ನನ್ನು ಸಂಸ್ಕೃತಿ ಸಂಬಂಧಿ ಸಮಾರಂಭವೊಂದಕ್ಕೆ ಎಳೆದುಕೊಂಡುಹೋಗಿ ವೇದಿಕೆಯಮೇಲೆ ಕುಳ್ಳಿರಿಸಲಾಯಿತು. ಸಂಸ್ಕೃತ ಪದವಿ ಪಡೆದ ಶಾಸ್ತ್ರಿಯಾದ್ದರಿಂದಲೇ ಏನೋ, ನಾನು ಆ ಸಮಾರಂಭದಲ್ಲಿ ವಿವಿಧ ಶಾಸ್ತ್ರಾಚರಣೆಗಳ ಬಗ್ಗೆ ಸಂಸ್ಕೃತಭೂಯಿಷ್ಟ ಕನ್ನಡದಲ್ಲಿ ಕೊರೆಯತೊಡಗಿದೆ. ಒಡನೆಯೇ ಸಭಾಸದರ ಸಣ್ಣ ಗುಂಪೊಂದು ಎದ್ದು ನನ್ನತ್ತ ’ಸಂಸ್ಕೃತ’ ಶಬ್ದಗಳ ಬಾಣಗಳನ್ನು ಬಿಡತೊಡಗಿತು!

’ಮುಚ್ಚಲೋ, ಮುಂ...!’ ಮುಂತಾಗಿ ಆಣಿಮುತ್ತುಗಳು ಉದುರತೊಡಗಿದವು! ಜೊತೆಗೆ ಘೋಷಣೆಗಳು:

’ಶಾಸ್ತ್ರ-ಗೀಸ್ತ್ರ ಡೌನ್ ಡೌನ್.’
’ಶಾಸ್ತ್ರಿ ಬುಡ್ಡಾ ಡೌನ್ ಡೌನ್.’
’ಸಮಸ್ಕ್ರುತ ಡೌನ್ ಡೌನ್.’
’ಬೇಡಾ, ಬೇಡಾ.’ ’ಸಮಸ್ಕ್ರುತ ವಿವಿ ಬೇಡಾ.’
’ಖನ್ನಢಾಂಬೆಗೆ,’ ’ಝಯವಾಗಲಿ.’
’ಖನ್ನಡ ರಕ್ಷಣ್ವೇದ್ಕೆಗೆ,’ ’ಝಯವಾಗಲಿ.’

(ಅ)ಭದ್ರತಾ ಕಾ’ರಣ’ದಿಂದಾಗಿ ಸಭೆ ಬರಖಾಸ್ತಾಯಿತು.

ಘಟನೆ ಎರಡು
--------------
ನಾನು ಒಂಥರಾ ರಾಜಕಾರಣಿ ಇದ್ದಂಗೆ. ಯಾವ ವಿಷಯದ ಮೇಲೆ ಬೇಕಾದ್ರೂ ಮಾತಾಡ್ತೀನಿ. ವಿಷಯವೇ ಇಲ್ದೆ ಇದ್ರೂ ಕನಿಷ್ಠ ಪಕ್ಷ ಅರ್ಧ ಗಂಟೆಯಾದ್ರೂ ಕೊರೀತೀನಿ. ಮಾತಾಡೋ ವಿಷಯದ ಬಗ್ಗೆ ನನಗೆ ತಿಳಿವಳಿಕೆ ಇರಬೇಕು ಅಂತೇನೂ ಇಲ್ಲ. ಏನೂ ಗೊತ್ತಿಲ್ದೆ ಇದ್ರೂ ಬಂಬಾಟಾಗಿ ಭಾಷ್ಣ ಬಿಗೀತೀನಿ. ಭಾಷ್ಣಕ್ಕೆ ಬೇಕಾಗಿಲ್ಲ ತಲೆ. ತಲೆಯಿಲ್ಲದವರಿಗೇ ವಿಶೇಷವಾಗಿ ಸಿದ್ಧಿಸುತ್ತೆ ಈ ಕಲೆ. ಇದು ನನ್ನ (ತಲೆಬುಡವಿಲ್ಲದ) ಖಚಿತ ಅಭಿಪ್ರಾಯ. ಇಂಥಾ ಕಲೆ ನನಗೆ ಸಿದ್ಧಿಸಿದೆ.

ಈ ಕಾರಣದಿಂದ್ಲೇ ನನ್ನನ್ನು ಬಾಳಾ ಕಡೆ ಭಾಷ್ಣಕ್ಕೆ ಕರೀತಾರೆ. ಬಾಳಾ ಮಂದಿ ಸಂಘಟಕ್ರಿಗೆ ನಾನು ಅದೇನೋ ಲಾಸ್ಟ್ ರೆಸಾರ್ಟ್ ಅಂತೆ. ಹಂಗಂದ್ರೇನೋ ನಂಗೊತ್ತಿಲ್ಲ. ನಂಗೊತ್ತಿರೋದು ಒಂದೇ ರೆಸಾರ್ಟು. ಕುತಂತ್ರ ಮಾಡ್ಬೇಕಾದಾಗೆಲ್ಲ ನಮ್ಮ ಪುಢಾರಿಗಳು ಹೋಗಿ ಕೂತ್ಕತಾರಲ್ಲ, ಆ ರೆಸಾರ್ಟು. ಅದೇ ಫಸ್ಟು, ಅದೇ ಲಾಸ್ಟು ನಂಗೊತ್ತಿರೋ ರೆಸಾರ್ಟು.

ಕಳೆದ ವಾರ ಒಂದ್ಕಡೆ ಭಾಷ್ಣಕ್ಕೆ ಕರೆದಿದ್ರು. ಹೋಗಿದ್ದೆ. ಅಲ್ಲಿ ನನ್ನನ್ನು ಸಭೆಗೆ ಪರಿಚಯ ಮಾಡಿಕೊಡ್ತಾ ಸಂಘಟಕ್ರು ಏನಂದ್ರು ಅಂದ್ರೆ, ’ಶಾಸ್ತ್ರೀಯವರ ಭಾಷಣಕ್ಕೆ ಇಲ್ಲಿಯತನಕ ಯಾವುದೂ ಸ್ಥಾನ, ಮಾನ ಇರಲಿಲ್ಲ; ಈಗ ಸರ್ಕಾರದ ದಯದಿಂದ ಸ್ಥಾನ, ಮಾನ ದೊರಕಿದೆ; ಇದು ನಮಗೆಲ್ಲಾ ಸಂತೋಷದ ವಿಷಯ’, ಅಂದ್ರು!

ಅಷ್ಟರಲ್ಲಿ ಯಾರೋ ಬಂದು ಅವರ ಕಿವಿಯಲ್ಲಿ, ’ಭಾಷ್ಣ ಅಲ್ಲ, ಭಾಷೆ’, ಅಂತ ಒದರಿ ಹೋದ್ರು.

’ಹಂಗಾ?’ ಅಂತ ಉದ್ಗಾರ ತೆಗೆದು ಸಂಘಟಕ್ರು ತಮ್ಮ ಮಾತನ್ನು ತಿದ್ದಿಕೊಂಡು ಮತ್ತೆ ಹೇಳಿದರು,
’ಶಾಸ್ತ್ರೀಯವರ ಭಾಷಣಕ್ಕಲ್ಲ, ಅವರ ಭಾಷೆಗೇನೇ ಇಲ್ಲೀತನಕ ಸ್ಥಾನ, ಮಾನ, ಏನೂ ಇರ್‍ಲಿಲ್ಲ; ಈಗ ಸರ್ಕಾರ ಎಲ್ಲಾ ದಯಪಾಲಿಸಿದೆ; ಅದಕ್ಕೆ ಸರ್ಕಾರಕ್ಕೆ ಹ್ರುತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.’

ಸದರಿ ಸಂಘಟಕರ ’ಶಾಸ್ತ್ರೀಯ ಸ್ಥಾನಮಾನದ ಜ್ಞಾನ’ದ ಕೊರತೆಯು ಈ ಶಾಸ್ತ್ರಿಯ ಸ್ಥಾನದ ಮಾನದ ಜೊತೆಗೆ ಶಾಸ್ತ್ರಿಯ ಮಾನವನ್ನೂ ಕಳೆದುಬಿಟ್ಟಿತು!

ಇನ್ನೊಂದ್ಕಡೆ ಭಾಷ್ಣಕ್ಕೆ ಹೋಗಿದ್ದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡಲು ಹೋರಾಡಿದಂಥ ಬಿಟ್ಬಂದಳ್ಳಿ ಯುವಕರನ್ನು ಗ್ರಾಂಪಂಚಾಯ್ತಿ ವತಿಯಿಂದ ಸನ್ಮಾನಿಸೋ ಸಮಾರಂಭ ಅದು. ನಾನೇ ’ಮುಕ್ಯ ಹತಿತಿ’. ಗ್ರಾಂಪಂಚಾಯ್ತಿ ಅಧ್ಯಕ್ಷರೇ ಸಮಾರಂಭದ ಅಧ್ಯಕ್ಷರು. ಸಮಾರಂಭ ಚೆನ್ನಾಗಿ ನಡೀತು. ಕೊನೇಲಿ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಹೇಳಿದ್ದು:

’ಕನ್ನಡಕ್ಕೆ ಹದೆಂತದೋ ಸಾಸ್ತ್ರಿ ಸ್ನಾನ, ಅಲ್ಲ, ಸ್ತಾನ ಬಂದದಂತೆ. ಬೋ ಸಂತೋಸ. ಅಂದ್ರೆ ಇನ್ಮ್ಯಾಕೆ ಸಾಸ್ತ್ರ ಎಲ್ಲಾವ ಕನ್ನಡ್ದಾಗೇ ಯೋಳ್ಬವುದು ಅಂದಂಗಾತು. ಶಾನೇ ಕುಶಿ ವಿಷ್ಯ. ಇಲ್ಲೀಗಂಟ ನಮ್ ಐನೋರು ಮದ್ವಿ ಇರ್‍ಲಿ ಮುಂಜ್ವಿ ಇರ್‍ಲಿ ಯೆಂತದೇ ಇರ್‍ಲಿ, ಬರೀ ಸಮುಕ್ರುತದಾಗೇ ಮಂತ್ರ ಯೋಳಿ ಸಾಸ್ತ್ರ ಮಾಡಿಸ್ತಿದ್ರು. ಒಂದೂ ನಮಗರ್ತ ಆಗಾಕಿಲ್ಲ ಯೇನಿಲ್ಲ. ಇನ್ಮ್ಯಾಕೆ ಯೆಲ್ಲಾ ಕನ್ನಡ್ದಾಗೇ ಮಾಡಿಸ್ಬವುದು ಅಂತಂದ್ರೆ ಬಾಳ ಬೇಸಾತ್ ಬುಡಿ. ಅಂದಂಗೆ, ಕೈನೋಡಿ, ಜಾತ್ಕ ನೋಡಿ, ಕವ್ಡೆ ಹಾಕಿ, ಗಿಣಿ ಬಾಯಿಂದ ಎತ್ಸಿ, ಹಿಂತಾ ಸಾಸ್ತ್ರ ಯೋಳದೆಲ್ಲ ಯೆಂಗೂವೆ ಕನ್ನಡ್ದಾಗೇ ನಡೀತಾ ಐತೆ, ಈಗ ಮದ್ವಿ ಮುಂಜ್ವಿ ಸಾಸ್ತ್ರಗ್ಳೂ ಕನ್ನಡ್ದಾಗೇ ಅಂತಂದ್ರೆ ಬಾಳ ಬೇಸಾತು.’

ಅಧ್ಯಕ್ಷರ ಈ ಮಾತುಗಳಿಗೆ ಭರ್ಜರಿ ಚಪ್ಪಾಳೆ ಬಿದ್ವು!

ಮತ್ತೊಂದು ಸಮಾರಂಭ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಹೋರಾಡಿದವರನ್ನು ರಾಜ್ಯಮಟ್ಟದಲ್ಲಿ ಸನ್ಮಾನಿಸೋ ಸಮಾರಂಭ. ’ಕರ್ನಾಟಕ ರಕ್ಷಣಾ ರಣ ವೀರ ಪಡೆ’ ಏರ್ಪಡಿಸಿದ್ದು. ಎಂದಿನಂತೆ ನಾನು ಮುಖ್ಯ ಅತಿಥಿ. ಈ ಸಮಾರಂಭದ ಅಧ್ಯಕ್ಷತೆ ಆ ಊರಿನ ಜಗತ್ಪ್ರಸಿದ್ಧ ಉದಯೋನ್ಮುಖ ಹಿರಿ ಕವಿ ಮಹಾಂತೇಶಜ್ಜಾ ಅವರದು. ಸ್ಥಳೀಯ ’ದರ್ಶನ(ವಿಲ್ಲದ) ಚಿಟ್ ಫಂಡ್ಸ್’ ಸಂಸ್ಥೆಯಿಂದ ’ಕನ್ನಡ ಕಾವ್ಯ ಸಿಂಧು’ ಬಿರುದಾಂಕಿತರಿವರು. ಇವರ ಭಾಷಣ ವಿಚಾರಪ್ರಚೋದಕವಾಗಿತ್ತು.

ಕ.ಕಾ.ಸಿಂಧು ಮಹಂತೇಶಜ್ಜಾ ಅವರು ಏನು ಹೇಳಿದರು ಅಂದ್ರೆ,
’ಕನ್ನಡ ಇನ್ನು ಶಾಸ್ತ್ರೀಯ ಭಾಷೆ. ಆದ್ದರಿಂದ ನಾವು ಇನ್ನು ಅದನ್ನು ಅಶಾಸ್ತ್ರೀಯ ರೂಪದಲ್ಲಿ ಬಳಸುವಂತಿಲ್ಲ. ಅಂದರೆ, ಪದಗಳನ್ನು ತಿರುಚುವುದಾಗಲೀ ಅಪಭ್ರಂಶ ಮಾಡುವುದಾಗಲೀ ಇಂಗ್ಲಿಷ್ ಮುಂತಾದ ಅನ್ಯ ಭಾಷೆಗಳನ್ನು ಮಧ್ಯೆ ಮಧ್ಯೆ ಬೆರೆಸುವುದಾಗಲೀ ಮಾಡುವಂತಿಲ್ಲ. ಶಾಸ್ತ್ರೀಯವಾದ ಕನ್ನಡವನ್ನೇ ಮಾತಾಡಬೇಕಾಗುತ್ತದೆ ಮತ್ತು ಶಾಸ್ತ್ರೀಯವಾಗಿಯೇ ಮಾತಾಡಬೇಕಾಗುತ್ತದೆ. ಆದರೆ, ಮುಖ್ಯ ಅತಿಥಿಗಳಾದ ಶಾಸ್ತ್ರೀಯವರೂ ಸೇರಿದಂತೆ ಇದುವರೆಗೂ ಮಾತನಾಡಿದವರಲ್ಲಿ ಯಾರೊಬ್ಬರೂ ಶಾಸ್ತ್ರೀಯವಾಗಿ ಮತ್ತು ಶಾಸ್ತ್ರೀಯ ಕನ್ನಡ ಮಾತನಾಡದೇ ಇದ್ದದ್ದು ಕನ್ನಡದ ದುರ್ದೈವ’, ಅಂದುಬಿಟ್ಟರು!

ನಿಜ ಹೇಳ್ತೀನೀ, ನನ್ನ ಭಾಷಣ(ಪ್ರ)ವೃತ್ತಿಯ ಅರ್ಧ ಶತಮಾನದಲ್ಲಿ ಇದುವರೆಗೂ ನನಗೆ ಇಂಥ ಘೋರ ಅವಮಾನ ಎಂದೆಂದೂ ಆಗಿರಲಿಲ್ಲ! ಇದು ನನಗಾದ ಪಕ್ಕಾ (ಅ)ಶಾಸ್ತ್ರೀಯ ಅವಮಾನವೇ ಸರಿ!

ಶಾಸ್ತ್ರೀಯ ಭಾಷೆ ಅಂದ್ರೆ ಏನು ಮತ್ತು ಆ ಭಾಷೇಲಿ ಶಾಸ್ತ್ರೀಯವಾಗಿ ಮಾತಾಡೋದು ಹೇಗೆ ಅಂತ ಮಹಂತೇಶಜ್ಜಾ ಅವರನ್ನು ಕೇಳೋಣ ಅಂದ್ಕೊಂಡ್ರೆ ಅವ್ರು ಅನಾರೋಗ್ಯದ ನಿಮಿತ್ತ ವಂದನಾರ್ಪಣೆಗೆ ಮುನ್ನವೇ ಎದ್ದು ಹೊರಟುಹೋಗಿಬಿಟ್ರು!

ಘಟನೆ ಮೂರು
--------------
’ಜೈ ಭುವನೇಶ್ವರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ’ಯ ಒಂದನೇ ತರಗತಿಗೆ ಮೊಮ್ಮಗನನ್ನು ಸೇರಿಸಲು ಅವನನ್ನು ಕರೆದುಕೊಂಡು, ಕ್ಷಮಿಸಿ, ಎಳೆದುಕೊಂಡು ಹೋದೆ. ’ಪ್ರಿನ್ಸಿಪಾಲ್’ ಎಂಬ (ಆಂಗ್ಲ)ಫಲಕ ಎದುರಿಟ್ಟುಕೊಂಡಿದ್ದ ಎಳೇ ಮುಖ್ಯೋಪಾಧ್ಯಾಯಿನಿಯು ನನ್ನೊಡನೆ ನಡೆಸಿದ ಸಂಭಾಷಣೆಯ ಮುಖ್ಯ ಭಾಗ:

’ದಿಸ್ ಈಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್.’
’ಮತ್ತೇ...ಕನ್ನಡ ಮಾಧ್ಯಮ ಶಾಲೆ ಅಂತ ಹೊರಗಡೆ ನಾಮಫಲಕ....!’
’ಓಹ್! ದಟ್ಸ್ ಫಾರ್ ಗೌರ್‍ಮೆಂಟ್ಸ್ ಐವಾಷ್! ರೆಕಾರ್ಡ್ಸ್ ಸೇಕ್ ಅವರ್‍ಸ್ ಈಸ್ ಕನಡಾ ಮೀಡಿಯಂ. ಬಟ್ ಪ್ರಾಕ್ಟಿಕಲೀ ವಿ ಟೀಚ್ ಇಂಗ್ಲಿಷ್ ಮೀಡಿಯಂ. ಅದರ್‌ವೈಸ್ ಪೇರೆಂಟ್ಸ್ ವೋಂಟ್ ಅಡ್ಮಿಟ್ ದೆಯ್ರ್ ಚಿಲ್ಡ್ರನ್ ಹಿಯರ್, ಯು ಸೀ!’
’ಬರ್ತೀನಿ, ನಮಸ್ಕಾರ.’
’ಸಿಟ್ ಸಿಟ್. ವಿ ಟೀಚ್ ಕನಡಾ ಒನ್ ಸಬ್ಜಕ್ಟ್. ಡೋಂಟ್ ವರಿ.’
’ಸಿಟ್ ಗಿಟ್ ಏನಿಲ್ಲ, ಶಾಂತವಾಗೇ ಹೊರಕ್ಕ್ಹೋಗ್ತೀನಿ ಮೇಡಮ್, ಯೂ ಇಂಗ್ಲಿಷ್ ಮೀಡ್ಯಮ್, ಮುಂದುವರಿ.’

ತರುವಾಯ ಮೊಮ್ಮಗನನ್ನು ಬೇರೆ ಶಾಲೆಗೆ ಸೇರಿಸಿದೆ.

ಸಮ್-ಬಂಧ
-------------
ಮೇಲಿನ ಮೂರೂ ಘಟನೆಗಳಿಗೂ ನಾನು ಕಲ್ಪಿಸಲೆತ್ನಿಸುವ ಪರಸ್ಪರ ಸಂಬಂಧ ಇಂತಿದೆ:

ನಮಗೆ ಸಂಸ್ಕೃತ ಬೇಡ, ಕನ್ನಡ ಸಾಕು.
ಕನ್ನಡದಲ್ಲಿನ ಸಂಸ್ಕೃತ? ಅದನ್ನೂ ಎತ್ತಿ ಆಚೆಗೆ ಬಿಸಾಕು!
ಆಮೇಲೆ ಉಳಿಯೋದು? ’ಸುಲಿದ ಬಾಳೆಯಕಾಯಿಯಂದದ ಪಳೆಗನ್ನಡಂ ತಾಂ.’ ಥಕಧಿಮಿ ಥೋಂ!

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕು.
ಸ್ಥಾನ ಬಂತು, ಮಾನ ಬರಲಿಲ್ಲ.
ಪರವಾ ಇಲ್ಲ. ಶಾಸ್ತ್ರೀಯ ಸ್ಥಾನಮಾನ ಅಂದರೆ ಏನಂತಲೇ ನಮಗೆ ಗೊತ್ತಿಲ್ಲ. ಅಂತೂ ಬೇಕು, ಸಿಕ್ಕಿತು. ’ಖನ್ನಡಕ್ಕೆ ಜಯವಾಗಲಿ.’ ಅಷ್ಟೇಯ.

ಕನ್ನಡಕ್ಕೆ ಜಯವಾಗಲಿ, ಶಿಕ್ಷಣ ಇಂಗ್ಲಿಷ್‌ಮಯವಾಗಲಿ!
ಹೌದು. ಅದು ಹಂಗೇಯ.

ಉಪಸಂಹಾರ
---------------
’ಸಂಸ್ಕೃತ ಬೇಡ, ಕನ್ನಡ.’
’ಕನ್ನಡ ಬೇಡ, ಇಂಗ್ಲಿಷ್.’
’ಇಂಗ್ಲಿಷ್ ಬೇಡ, ಕನ್ನಡ.’
’ಇದು ಎನ್ನಡ?’

ಹೀಗಾದರೆ,
ಮೂರೂ ಬಿಟ್ಟೆ, ಮಗನೇ, ನೀನು ಭಂಗಿ ನೆಟ್ಟೆ!
ಅರ್ಥಾತ್,
ಎಲ್ಲ ಮೂರಾಬಟ್ಟೆ!

ಗುರುವಾರ, ಅಕ್ಟೋಬರ್ 8, 2009

ನಮ್ಮ ಸುತ್ತಲ ದುಷ್ಟರು

೫ ಸೆಪ್ಟೆಂಬರ್ ೨೦೦೯. ಮುಖ್ಯಮಂತ್ರಿ ಯಡಿಯೂರಪ್ಪನವರು ಚೀನಾದ ಶಾಂಘೈನಲ್ಲಿ ಅಡ್ಡಾಡುತ್ತ ಕರ್ನಾಟಕಕ್ಕೆ ಚೀನೀ ಬಂಡವಾಳ ಆಕರ್ಷಿಸುವ ಪ್ರಯತ್ನ ನಡೆಸಿದ್ದರು. ಅದೇ ವೇಳೆ ಚೀನಾ ದೇಶದ ಸೈನಿಕರು ಭಾರತದ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ರಿಮ್‌ಖಿಮ್ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಬಿಸ್ಕತ್ ಕವರ್ ಮತ್ತು ಸಿಗರೇಟ್‌ಗಳನ್ನು ಎಸೆದುಹೋಗಿದ್ದರು!

ಅದೇ ಸಮಯದಲ್ಲೇ ಲಡಾಕ್ ವಲಯದ ಮೌಂಟ್ ಗಯಾ ಸಮೀಪದಲ್ಲಿ ಒಂದೂವರೆ ಕಿಲೋಮೀಟರ್‌ನಷ್ಟು ಭಾರತದ ಗಡಿಯೊಳಗೆ ನುಸುಳಿ ಬಂದಿದ್ದ ಚೀನೀ ಸೈನಿಕರು ಅಲ್ಲಿನ ಕಲ್ಲುಬಂಡೆಗಳು ಮತ್ತು ಮರಗಳ ಮೇಲೆ ಕೆಂಪು ಪೇಂಟ್‌ನಿಂದ ’ಚೀನಾ’ ಎಂದು ಬರೆದುಹೋಗಿದ್ದರು!

ಭಾರತೀಯ ಸೇನಾಧಿಕಾರಿಗಳಿಗೆ ಚೀನಾದ ಈ ಅತಿಕ್ರಮಣದ ವಿಷಯ ತಿಳಿದೇ ಇರಲಿಲ್ಲ! ಸ್ಥಳೀಯರು ತಿಳಿಸಿದ ಬಳಿಕವಷ್ಟೇ ನಮ್ಮ ಸೇನಾಧಿಕಾರಿಗಳಿಗೆ ಈ ವಿಷಯ ಗೊತ್ತಾದದ್ದು!

ಇದಕ್ಕೆ ಒಂದು ವಾರ ಮೊದಲಷ್ಟೇ ಜಮ್ಮು ಮತ್ತು ಕಾಶ್ಮೀರದ ಚುಮರ್ ಪ್ರಾಂತ್ಯದಲ್ಲಿ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಚೀನಾದ ಹೆಲಿಕಾಪ್ಟರ್‌ಗಳು ಭಾರತದ ವಾಯುಪ್ರದೇಶದೊಳಕ್ಕೆ ಬಂದಿದ್ದವು!

ಇಷ್ಟೆಲ್ಲ ಆದಮೇಲೂ, ನಮ್ಮ ’ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್’ನ ಉನ್ನತಾಧಿಕಾರಿ ಸಂಜಯ್ ಸಿಂಘಾಲ್ ಅವರು ಸೆಪ್ಟೆಂಬರ್ ೧೩ರಂದು ಹೇಳಿಕೆಯೊಂದನ್ನು ನೀಡಿ, ಚೀನಾದಿಂದ ಅತಿಕ್ರಮಣ ಆಗಿಯೇ ಇಲ್ಲವೆಂದಿದ್ದಾರೆ! ಆದರೆ, ಅದೇ ದಿನ ನಮ್ಮ ಟಿವಿ ವಾರ್ತೆಗಳಲ್ಲಿ, ಚೀನೀ ಸೈನಿಕರು ಭಾರತದ ಪ್ರದೇಶದಲ್ಲಿ ಕಲ್ಲಿನಮೇಲೆ ’ಚೀನಾ’ ಎಂದು (ತಮ್ಮ ಲಿಪಿಯಲ್ಲಿ) ಬರೆದಿರುವ ಚಿತ್ರ ಪ್ರಸಾರವಾಗಿದೆ!

೧೯೬೨ರ ಯುದ್ಧ
----------------
೧೯೬೨ರಲ್ಲೂ ಹೀಗೇ ಆಯಿತು. ನಮ್ಮ ಸೈನ್ಯದ ಸನ್ನದ್ಧತೆಯನ್ನು ಪರೀಕ್ಷಿಸಲು ಚೀನಾ ನಮ್ಮ ಗಡಿಯೊಳಕ್ಕೆ ಆಗಾಗನುಗ್ಗಿಬರತೊಡಗಿತು. ’ಚೀನಾದ ವಿರುದ್ಧ ಯುದ್ಧದ ಸಾಧ್ಯತೆ ಸದ್ಯಕ್ಕಂತೂ ಇಲ್ಲ’ ಎಂದು ಆಗಸ್ಟ್ ತಿಂಗಳಲ್ಲಿ ನಮ್ಮ ಬ್ರಿಗೇಡಿಯರ್ ಡಿ.ಕೆ.ಪಲಿತ್ ಹೇಳಿದರು. ಆದರೆ ಅದಾಗಲೇ ಚೀನಾವು ಯುದ್ಧಕ್ಕೆ ಬೀಜಾಂಕುರ ಮಾಡಿ ಆಗಿತ್ತು! ಸೆಪ್ಟೆಂಬರ್‌ನಲ್ಲಿ ಯುದ್ಧವು ತೀವ್ರಗತಿಗೇರತೊಡಗಿದ್ದಾಗ ನಮ್ಮ ಮೇಜರ್ ಜನರಲ್ ಜೆ.ಎಸ್.ಧಿಲ್ಲಾನ್ ಅವರು, ’ಭಾರತದ ಸೈನ್ಯವು ಕೆಲವು ಸುತ್ತು ಗುಂಡು ಹಾರಿಸಿದರೆ ಸಾಕು, ಚೀನಾ ಸೈನಿಕರು ಓಡಿಹೋಗುತ್ತಾರೆ’, ಎಂದು ಹೇಳಿಕೆ ನೀಡಿದರು! ಆದರೆ ಆ ಯುದ್ಧವನ್ನು ಭಾರತ ಸೋತಿತು!

೧೯೫೪ರಲ್ಲಿ ಚೀನಾದೊಡನೆ ಮಾಡಿಕೊಂಡಿದ್ದ ’ಪಂಚಶೀಲ’ ಒಪ್ಪಂದವನ್ನು ನಂಬಿಕೊಂಡು, ’ಹಿಂದೀ-ಚೀನೀ ಭಾಯ್ ಭಾಯ್’, ಎನ್ನುತ್ತ ಕುಳಿತಿದ್ದ ನಮ್ಮ ಪ್ರಧಾನಿ ನೆಹರೂ ಅವರು ಅವಶ್ಯಕ ಪರಿಜ್ಞಾನ, ಮುಂದಾಲೋಚನೆ, ಪೂರ್ವಸಿದ್ಧತೆ ಮತ್ತು ದೃಢನಿರ್ಧಾರಗಳ ಕೊರತೆಯಿಂದಾಗಿ ಭಾರತದ ಸೋಲಿಗೆ ಮತ್ತು ಜಮ್ಮು-ಕಾಶ್ಮೀರದ ಭಾಗವಾಗಿದ್ದ ಅಕ್ಸಾಯ್ ಚಿನ್ ಪ್ರಾಂತ್ಯವು ಚೀನಾದ ತೆಕ್ಕೆಗೆ ಸೇರಲಿಕ್ಕೆ ಕಾರಣರಾದರು.

೧೯೬೨ರ ಭಾರತ-ಚೀನಾ ಯುದ್ಧದ ದಿನಗಳಲ್ಲಿ ಮಾಧ್ಯಮಿಕ ಶಾಲಾ ವಿದ್ಯಾರ್ಥಿಯಾಗಿದ್ದ ನಾನು ಪಡಿತರ ಅಂಗಡಿಯಲ್ಲಿ ಸರತಿಯಲ್ಲಿ ನಿಂತು ಬಿದಿರಕ್ಕಿ ಮತ್ತು ಗೋವಿನ ಜೋಳ ಖರೀದಿಸಿ ತಂದು ಬಿದಿರಕ್ಕಿ ಅನ್ನ ಮತ್ತು ಗೋವಿನ ಜೋಳದ ರೊಟ್ಟಿ ತಿಂದದ್ದು ಹಾಗೂ ಪರಿಹಾರ ನಿಧಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕೊಟ್ಟದ್ದು ನನಗೆ ಚೆನ್ನಾಗಿ ನೆನಪಿದೆ.

ಪುನರಾವರ್ತನೆ
----------------
೧೯೬೨ರಂತೆಯೇ ಮತ್ತೊಂದು ಯುದ್ಧಕ್ಕೆ ಚೀನಾ ತನ್ನನ್ನಿಂದು ಅಣಿಮಾಡಿಕೊಳ್ಳುತ್ತಿದೆ. ಅದಕ್ಕೆ ಮುನ್ನುಡಿಯಾಗಿ ಭಾರತದ ಸನ್ನದ್ಧತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳುತ್ತಿದೆ. ಇಡೀ ಮಣಿಪುರ ಪ್ರಾಂತ್ಯವೇ ತನ್ನದೆಂದು ಹೇಳಿಕೊಳ್ಳುತ್ತಿರುವ ಧೂರ್ತ ಚೀನಾ ಮುಖ್ಯವಾಗಿ ತವಾಂಗ್ ಬೌದ್ಧಕ್ಷೇತ್ರದಮೇಲೆ ತನ್ನ ಕಣ್ಣಿರಿಸಿದೆ.

ನಾವಿಂದು ೧೯೬೨ರ ಸ್ಥಿತಿಗಿಂತ ಹೆಚ್ಚು ಶಕ್ತರಾಗಿರಬಹುದು. ಆದರೆ ಚೀನಾ ನಮಗಿಂತ ಹೆಚ್ಚು ಶಕ್ತವಾಗಿದೆಯೆನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮಗಿಂತ ಹೆಚ್ಚು ಸೈನ್ಯಬಲ ಮತ್ತು ಶಸ್ತ್ರಾಸ್ತ್ರಗಳನ್ನು ಚೀನಾ ಹೊಂದಿದೆ. ಮೇಲಾಗಿ, ನಮ್ಮ ನೆರೆರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳ ಪರೋಕ್ಷ ಬೆಂಬಲ ಚೀನಾದ ಬೆನ್ನಿಗಿದೆ!

ಇದರ ಜೊತೆಗೆ, ಚೀನಾದೊಡನೆ ಬೃಹತ್ ವ್ಯವಹಾರ ಸಂಬಂಧ ಇಟ್ಟುಕೊಂಡಿರುವ ಅಮೆರಿಕವು ಇಂದು ತನಗೆ ಅಭಿವೃದ್ಧಿ ರಂಗದಲ್ಲಿ ಪ್ರತಿಸ್ಪರ್ಧಿಯಾಗಿರುವ ಭಾರತದ ಕುಸಿತವನ್ನು ಹಾರೈಸುತ್ತಿದೆ! ಆದ್ದರಿಂದ ಚೀನಾದ ಈ ಅತಿಕ್ರಮಣವನ್ನು ಭಾರತವು ಲಘುವಾಗಿ ಪರಿಗಣಿಸಬಾರದು. ಯುದ್ಧಕ್ಕೆ ನಾವು ಪೂರ್ಣ ಸನ್ನದ್ಧರಾಗಿರಬೇಕು. ಅದೇವೇಳೆ, ವಿಶ್ವಮಟ್ಟದಲ್ಲಿ ವಿವಿಧ ದೇಶಗಳ ಒಲವು ಗಳಿಸುವ ಸಲುವಾಗಿ ಅವಶ್ಯಕ ಲಾಬಿ ಕಾರ್ಯವನ್ನೂ ನಾವು ಕೈಕೊಳ್ಳಬೇಕು. ಯುದ್ಧ ಸಂಭವಿಸದಂತೆ ನೋಡಿಕೊಳ್ಳಲು ಕೂಡ ಇಂಥ ಲಾಬಿ ಅವಶ್ಯ.

ಸುತ್ತಲ ದುಷ್ಟರು
----------------
ನಮ್ಮ ನೆರೆರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳು ತಮ್ಮದೇ ಆದ ಕಾರಣಗಳಿಂದಾಗಿ ಮತ್ತು ಅನುಮಾನ-ಭ್ರಮೆಯಿಂದಾಗಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿವೆ. ಪಾಕಿಸ್ತಾನವಂತೂ ಭಾರತವನ್ನು ಶತ್ರುವಾಗಿ ಪರಿಗಣಿಸಿ ಭಾರತದ ಅಧಃಪತನಕ್ಕಾಗಿ ತನ್ನ ಹುಟ್ಟಿನಿಂದಲೂ ಏನೆಲ್ಲ ಪ್ರಯತ್ನಗಳನ್ನು ನಡೆಸಿಕೊಂಡೇ ಬಂದಿದೆ. ಉಗ್ರರನ್ನು ಮತ್ತು ಖೋಟಾ ನೋಟುಗಳನ್ನು ಭಾರತದೊಳಕ್ಕೆ ಕಳಿಸಲು ಅದು ನೇಪಾಳವನ್ನು ಬಳಸಿಕೊಳ್ಳುತ್ತಿರುವುದು, ನೇಪಾಳದ ಮಾಜಿ ಮಂತ್ರಿಯೊಬ್ಬನ ಪುತ್ರನೇ ಈ ಜಾಲದ ಮುಖ್ಯಸ್ಥನಾಗಿರುವುದು ಮತ್ತು ನೇಪಾಳದ ’ದೊರೆಮಗ’ನ ನೆರವು ಈ ಜಾಲಕ್ಕೆ ಇರುವುದು ಈಗ ಗುಟ್ಟಿನ ಸಂಗತಿಯಾಗಿಯೇನೂ ಉಳಿದಿಲ್ಲ.

ನೇಪಾಳಕ್ಕೆ ಭಾರತವೆಂದರೆ ಭಯ ಮತ್ತು ಈರ್ಷ್ಯೆ. ಅಲ್ಲಿ ಮಾವೋವಾದಿಗಳ ಕೈ ಮೇಲಾದ ಬಳಿಕವಂತೂ ಭಾರತದ ವಿರುದ್ಧ ಒಂದು ರೀತಿಯ ಹಗೆತನ! ಪಶುಪತಿನಾಥ ದೇವಾಲಯದ ಭಾರತೀಯ ಅರ್ಚಕರಮೇಲೆ ನಡೆದ ದಾಳಿ ಈ ಹಗೆತನದ ಒಂದು ಸೂಚನೆ. ಇನ್ನು, ಮಾವೋವಾದಿಗಳೆಂದಮೇಲೆ ಚೀನಾ ಬಗ್ಗೆ ಒಲವಿರುವುದಂತೂ ಸರ್ವವೇದ್ಯ.

ಭಾರತದ ಬಗ್ಗೆ ಭಯ, ಈರ್ಷ್ಯೆ ಮತ್ತು ಹಗೆತನದ ವಿಷಯದಲ್ಲಿ ಬಾಂಗ್ಲಾದೇಶವೇನೂ ಭಿನ್ನವಲ್ಲ. ಭಾರತದೊಳಕ್ಕೆ ಮುಸ್ಲಿಂ ಉಗ್ರರ ನುಸುಳುವಿಕೆಗೆ ಬಾಂಗ್ಲಾದೇಶದ ನೆರವು ಮತ್ತು ಭಾರತಕ್ಕೆ ಬಾಂಗ್ಲಾದೇಶೀಯರ ಅಕ್ರಮ ವಲಸೆ ಇವಂತೂ ಸರ್ವವಿದಿತ.

ಈ ರೀತಿ, ಅಕ್ಕಪಕ್ಕದಲ್ಲಿ ಕಂಟಕಪ್ರಾಯರನ್ನಿಟ್ಟುಕೊಂಡಿರುವ ನಾವು ಚೀನಾದ ಅತಿಕ್ರಮಣದ ಗಾತ್ರವನ್ನು ಮತ್ತು ಪರಿಣಾಮವನ್ನು ಅಂದಾಜುಮಾಡುವಾಗ ಈ ಕಂಟಕಪ್ರಾಯರ ದುಷ್ಟತನವನ್ನೂ ಸೇರಿಸಿ ಅಳೆಯಬೇಕಾಗುತ್ತದೆ. ಜೊತೆಗೆ, ಅಮೆರಿಕದ ಕುಟಿಲತನವನ್ನೂ ಈ ಸಂದರ್ಭದಲ್ಲಿ ಮುಂದಾಲೋಚಿಸಬೇಕಾಗುತ್ತದೆ.

ಏಷ್ಯಾದ ಮತ್ತು ಕ್ರಮೇಣ ಇಡೀ ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾವು ತನಗೆ ಪ್ರತಿಸ್ಪರ್ಧಿಯಾಗಿರುವ ಭಾರತವನ್ನು ಬಗ್ಗುಬಡಿಯಲು ಹಾತೊರೆಯುತ್ತಿದೆ. ಅಮೆರಿಕವು ಭಾರತ-ಚೀನಾ ಯುದ್ಧಕ್ಕೆ ಒಳಗಿಂದೊಳಗೇ ಪ್ರೋತ್ಸಾಹ ಕೊಡುವ ಮೂಲಕ ಎರಡೂ ದೇಶಗಳನ್ನೂ ಅವನತಿಯ ಅಂಚಿಗೆ ತಳ್ಳಲು ಸ್ಕೆಚ್ ಹಾಕತೊಡಗಿದೆ. ಅಭಿವೃದ್ಧಿರಂಗದಲ್ಲಿ ತನಗೆ ತೀವ್ರ ಪೈಪೋಟಿ ನೀಡುತ್ತಿರುವ ಎರಡೂ ದೇಶಗಳನ್ನೂ ಒಂದೇ ಕಲ್ಲಿನಲ್ಲಿ ಹೊಡೆದುಹಾಕಲು ಅಮೆರಿಕಕ್ಕೆ ಇದು ಉತ್ತಮ ಅವಕಾಶ ತಾನೆ? ಈ ಅಪಾಯದ ಗಂಟೆ ಭಾರತದ ಮಿದುಳಿನಲ್ಲಿ ಸದಾ ಬಾರಿಸುತ್ತಿರಬೇಕು. ಭಾರತವು ಸದಾ ಜಾಗೃತವಾಗಿರಬೇಕು.

ದುರ್ಬಳಕೆ
-----------
ಭಯೋತ್ಪಾದನೆಯ ನಿಗ್ರಹಕ್ಕೆಂದು ಅಮೆರಿಕ ನೀಡುತ್ತಿರುವ ಆರ್ಥಿಕ ಮತ್ತು ಮಿಲಿಟರಿ ನೆರವುಗಳನ್ನು ಆರಂಭದಿಂದಲೂ ಪಾಕಿಸ್ತಾನವು ಭಾರತದ ವಿರುದ್ಧ ಬಳಸುತ್ತಿದೆ. (ಈ ವಿಷಯವನ್ನು ಈಚೆಗೆ ಪಾಕ್‌ನ ಮಾಜಿ ಅಧ್ಯಕ್ಷ ಮುಷರಫ್ ಅವರೇ ಒಪ್ಪಿಕೊಂಡಿದ್ದಾರೆ. ನಂತರ ಅವರು ತಮ್ಮ ಹೇಳಿಕೆಯನ್ನು ನಿರಾಕರಿಸುವ ನಾಟಕ ಆಡಿದ್ದು ಬೇರೆ ಮಾತು.) ಈ ದುರ್ಬಳಕೆಯ ಸಂಗತಿ ಗೊತ್ತಿದ್ದೂ ಅಮೆರಿಕವು ಪಾಕಿಸ್ತಾನಕ್ಕೆ ನೆರವು ಮುಂದುವರಿಸಿದೆ.

ಚೀನಾವು ಪಾಕ್‌ಗೆ ಲಾಗಾಯ್ತಿನಿಂದಲೂ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದೆ.

ಪಾಕಿಸ್ತಾನವು ಶ್ರೀಲಂಕಾಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದೆ.

ಈ ಎಲ್ಲ ಆಗುಹೋಗುಗಳನ್ನೂ ಭಾರತವು ಕ್ಷ-ಕಿರಣದ ಕಣ್ಣುಗಳಿಂದ ನೋಡಬೇಕಾದುದು ಭಾರತದ ರಕ್ಷಣೆಯ ದೃಷ್ಟಿಯಿಂದ ಇಂದು ಅನಿವಾರ್ಯ.

ಭಾರತಕ್ಕೆ ಚೀನಾದಿಂದ ಎದುರಾಗಲಿರುವ ಅಪಾಯದ ಬಗ್ಗೆ ಜಾರ್ಜ್ ಫರ್ನಾಂಡಿಸ್ ಅವರು ಭಾರತದ ರಕ್ಷಣಾ ಮಂತ್ರಿಯ ಕುರ್ಚಿಯಿಂದಲೇ ಎಚ್ಚರಿಸಿದ್ದರು. ಇದೀಗ ಆ ಅಪಾಯ ಸಮೀಪಿಸುತ್ತಿರುವಂತಿದೆ. ಭಾರತ ಎಚ್ಚತ್ತುಕೊಳ್ಳಬೇಕು.

ಯುದ್ಧ ಬೇಡ
-------------
ಯುದ್ಧ ಯಾರಿಗೂ ಒಳ್ಳೆಯದಲ್ಲ. ಯುದ್ಧದ ಪರಿಣಾಮ ಎಂದಿದ್ದರೂ ನಷ್ಟ ಮತ್ತು ನಾಶವೇ. ಆದ್ದರಿಂದ, ಸಂಭವನೀಯ ಯುದ್ಧವು ತಪ್ಪಬೇಕೆಂದರೆ ಭಾರತವು ತನ್ನ ಪರವಾಗಿ ವಿಶ್ವದ ಒಲವನ್ನು ಗಳಿಸಬೇಕಾದುದು ಅತ್ಯವಶ್ಯ. ಭಾರತದ ನಿಲುವಿಗೆ ವಿಶ್ವದ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸತೊಡಗಿದವೆಂದರೆ ಆಗ ಚೀನಾವು ಯುದ್ಧದ ಬಗ್ಗೆ ಮರುಚಿಂತನೆ ಮಾಡುತ್ತದೆ. ವಿವಿಧ ದೇಶಗಳ ಸಹಮತಕ್ಕಾಗಿ ಭಾರತವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಯತ್ನವನ್ನು ಮಾಡಬೇಕು ಮತ್ತು ವಿವಿಧ ದೇಶಗಳ ಬೆಂಬಲಕ್ಕಾಗಿ ಸೂಕ್ತ ಲಾಬಿ ನಡೆಸುವ ಯೋಜನೆ ಹಾಕಿಕೊಳ್ಳಬೇಕು.

ಇಷ್ಟಾಗಿಯೂ ಯುದ್ಧ ತಪ್ಪದು ಎಂದರೆ, ಜೈ! ನಾವು ಜಯಿಸಿಯೇ ಸೈ!

ಬುಧವಾರ, ಅಕ್ಟೋಬರ್ 7, 2009

ಬರಹಗಾರರನ್ನು ಚುಚ್ಚಬೇಡಿ

ಬರಹಗಾರರು ತಮ್ಮ ಬರಹಗಳಲ್ಲಿ ಮಾತ್ರ ಮಾನವೀಯತೆ, ಪ್ರೀತಿ, ಅಂತಃಕರಣ, ಕನಿಕರಗಳನ್ನು ತೋರಿ ಶಹಭಾಸ್‌ಗಿರಿ ಪಡೆಯುತ್ತಾರೆಯೇ ಹೊರತು ನಿಜಜೀವನದಲ್ಲಿ ಇದ್ಯಾವುದಕ್ಕೂ ಸ್ಪಂದಿಸದೆ ತೆಪ್ಪಗೆ ಕುಳಿತುಬಿಡುತ್ತಾರೆ ಎಂಬ ಗಂಭೀರವಾದ ಆರೋಪವನ್ನು ಜಾಲತಾಣವೊಂದರಲ್ಲಿ ಸಹೃದಯರೋರ್ವರು ಮಾಡಿದ್ದಾರೆ.

ಉತ್ತರ ಕರ್ನಾಟಕದ ಪ್ರವಾಹಸಂತ್ರಸ್ತರಿಗೆ ಅಗತ್ಯವಾಗಿರುವ ನೆರವಿನ ವಿಷಯದಲ್ಲಿ ಈ ರೀತಿ ಆರೋಪ ಮಾಡಿರುವ ಆ ಸಹೃದಯರ ಸಾಮಾಜಿಕ ಕಳಕಳಿ ಮೆಚ್ಚುವಂಥದು. ಆದರೆ ಆರೋಪ ಮಾತ್ರ ಒಪ್ಪುವಂಥದಲ್ಲ. ಬರಹಗಾರರು ತಮ್ಮ ವೈಯಕ್ತಿಕ ನೆಲೆಗಳಲ್ಲಿ ಅಥವಾ ಉದ್ಯೋಗದಾತರ ಮೂಲಕ ನೆರೆಹಾವಳಿ ಸಂತ್ರಸ್ತರಿಗೆ ನೆರವು ನೀಡಿಲ್ಲವೆಂದು ಹೇಗೆ ಹೇಳಲು ಸಾಧ್ಯ?

ನಿರ್ದಿಷ್ಟ ಜಾಲತಾಣದ ಮಖಾಂತರ ಬರಹಗಾರರಿಂದ ದೇಣಿಗೆ ಸಂಗ್ರಹಿಸುವಂತೆ ಆ ಸಹೃದಯರು ಸಲಹೆ ಮಾಡಿದ್ದಾರೆ. ಹಾಗೆ ಮಾಡುವ ಮೂಲಕ ಆ ಜಾಲತಾಣದ ಸದಸ್ಯ ಬರಹಗಾರರಿಗೆ ಅವರು ಇರುಸುಮುರುಸುಂಟುಮಾಡಿದ್ದಾರೆಂದೇ ಹೇಳಬೇಕಾಗುತ್ತದೆ. ಏಕೆಂದರೆ, ಒಂದು ಉದ್ದೇಶಕ್ಕೆ ಒಂದಕ್ಕಿಂತ ಹೆಚ್ಚು ಕಡೆ ದೇಣಿಗೆ ನೀಡುವಷ್ಟು ಬಹುತೇಕ ಬರಹಗಾರರು ಶ್ರೀಮಂತರಾಗಿರುವುದಿಲ್ಲ. ಈಗಾಗಲೇ ಒಂದು ಕಡೆ ದೇಣಿಗೆ ನೀಡಿರುವ ಬರಹಗಾರರು ಸದರಿ ಸಹೃದಯರ ಆರೋಪದಿಂದ ಮುಕ್ತರಾಗಲು ತಮ್ಮ ದೇಣಿಗೆಯ ವಿವರವನ್ನು ಪ್ರಕಟಿಸಬೇಕೇ?!

ಇಷ್ಟಕ್ಕೂ, ’ಬರಹಗಾರರು ಬರಹಗಳಲ್ಲಷ್ಟೇ ಮಾನವೀಯತೆ ಇತ್ಯಾದಿ ತೋರುತ್ತಾರೆ, ಅಷ್ಟು ಮಾಡಿದರೆ ಸಾಲದು, ಅವರು ಫೀಲ್ಡಿಗೂ ಇಳಿಯಬೇಕು’, ಎಂದು ದೂರುವುದೇ ಯೋಗ್ಯವಲ್ಲ. ಬರಹಗಾರರು ಬರಹಗಳ ಮುಖಾಂತರ ಸಮಾಜಜಾಗೃತಿಯ ಕರ್ತವ್ಯವನ್ನು ಮಾಡಿದರೆ ಸಾಕು ಎಂಬುದು ನನ್ನ ಅಭಿಪ್ರಾಯ. ಅದೇನೂ ಸಣ್ಣ ಕರ್ತವ್ಯವಲ್ಲ. ಏಕೆಂದರೆ, ಬರಹಗಳು ಓದುಗರಲ್ಲಿ ಜಾಗೃತಿ ಹುಟ್ಟಿಸುತ್ತವೆ ಮತ್ತು ಕರ್ತವ್ಯೋನ್ಮುಖರಾಗಲು ಪ್ರೇರೇಪಿಸುತ್ತವೆ. ನನ್ನ ಬರಹದ ಎರಡು ಉದಾಹರಣೆಗಳನ್ನೇ ಕೊಡುತ್ತೇನೆ.

೧) ’ಈ ಸಲದ ದೀಪಾವಳಿಯಲ್ಲಿ ಪಟಾಕಿ ಸುಡದಿರಲು ನಿರ್ಧರಿಸಿ ಆ ಹಣವನ್ನು ನೆರೆಸಂತ್ರಸ್ತರ ಪರಿಹಾರನಿಧಿಗೆ ನೀಡೋಣ’, ಎಂದು ನಾನು ಇದೇ ದಿನಾಂಕ ಮೂರರಂದು, ಚರ್ಚಿತ ಜಾಲತಾಣ ಮತ್ತು ಈ ಬ್ಲಾಗೂ ಸೇರಿದಂತೆ ಹಲವು ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಬರೆದದ್ದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ನನ್ನ ವಿನಂತಿಗೆ ಓಗೊಡುವುದಾಗಿ ನನಗೆ ಅನೇಕರು ದೂರವಾಣಿ ಕರೆಮಾಡಿ ಹೇಳಿದ್ದಾರೆ.

೨) ’ಮರಣದಂಡನೆ ಅನಿವಾರ್ಯವೆ?’ ಎಂದು ಕೆಲ ಸಮಯದ ಹಿಂದೆ ’ಪ್ರಜಾವಾಣಿ’ ದಿನಪತ್ರಿಕೆಯು ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ನಾನು ಬರೆದ ನಾಲ್ಕು ಸಾಲುಗಳ ಚುಟುಕವು ’ಪ್ರಜಾವಾಣಿ’ಯಲ್ಲಿ ಪ್ರಕಟವಾಯಿತು. ಆ ಚುಟುಕ ಹೀಗಿತ್ತು:

ಸಾವಿಗೆ ಸಾವೇ ಉತ್ತರವಾದರೆ
ಬದುಕಿಗೆ ಏನರ್ಥ?
ಬದುಕುವ ಬಗೆಯನು ಕಲಿಸದ ಶಿಕ್ಷಣ
ಶಿಕ್ಷೆಗಳವು ವ್ಯರ್ಥ.

ಈ ಚುಟುಕದಿಂದ ಪ್ರಭಾವಿತರಾದ ನ್ಯಾಯಾಧೀಶರೊಬ್ಬರು, ತಾನಿನ್ನು ಮರಣದಂಡನೆ ಶಿಕ್ಷೆ ನೀಡುವ ಸಂದರ್ಭದಲ್ಲಿ ಈ ಚುಟುಕವನ್ನು ನೆನಪಿಸಿಕೊಂಡು ಶಿಕ್ಷೆಯ ಮರುಪರಿಶೀಲನೆ ಮಾಡುವುದಾಗಿಯೂ ಅಪರಾಧಿಗೆ ತಿದ್ದಿಕೊಳ್ಳುವ ಅವಕಾಶ ನೀಡುವುದು ಸಾಧ್ಯವಾದಲ್ಲಿ ಜೀವಾವಧಿ ಶಿಕ್ಷೆ ನೀಡುವ ಮೂಲಕ ಆತನ ಜೀವ ಉಳಿಸುವುದಾಗಿಯೂ ನನ್ನ ಬಳಿ ನುಡಿದರು.

ಓದುಗರ ಹೃದಯ ತಟ್ಟುವ ಬರಹಗಳು ಸಮಾಜದ ಒಳ್ಳಿತಿಗಾಗಿ ಸದಾ ಅವಶ್ಯ. ಅಂಥ ಬರಹಗಳನ್ನು ನೀಡುವ ಕೆಲಸ ಬರಹಗಾರನದು.

ಸಮಾಜದಲ್ಲಿ ಎಲ್ಲರೂ ಎಲ್ಲ ಕೆಲಸಗಳನ್ನೂ ಮಾಡುತ್ತೇವೆಂದರೆ ಯಾವ ಕೆಲಸವೂ ಸುಸೂತ್ರ ಆಗುವುದಿಲ್ಲ. ಯಾವುದೋ ಒಂದು ಯೋಜನೆ ಅಥವಾ ಚಳವಳಿ ಆಗಬೇಕೆಂದಿಟ್ಟುಕೊಳ್ಳಿ. ಬರಹಗಾರನೊಬ್ಬ, ಆ ಯೋಜನೆ ಅಥವಾ ಚಳವಳಿಯ ಕುರಿತು ತಾನು ಬರಹಗಳನ್ನೂ ಬರೆಯುತ್ತೇನೆ, ಯೋಜನೆಯ/ಚಳವಳಿಯ ರೂಪುರೇಷೆಗಳನ್ನೂ ತಯಾರಿಸುತ್ತೇನೆ, ಸಂಘಟನೆಯನ್ನೂ ಮಾಡುತ್ತೇನೆ, ದೇಣಿಗೆಯನ್ನೂ ನೀಡುತ್ತೇನೆ, ಅನುಷ್ಠಾನದಲ್ಲೂ ಭಾಗವಹಿಸುತ್ತೇನೆ, ಬೀದಿಗಿಳಿದು ಹೋರಾಟವನ್ನೂ ಮಾಡುತ್ತೇನೆ ಎಂದರೆ ಅದಷ್ಟೂ ಆತನಿಂದ ಸಾಧ್ಯವಾದೀತೆ? ಒಂದು ವೇಳೆ ಸಾಧ್ಯವಾದರೂ ಆ ಎಲ್ಲ ಕಾರ್ಯಗಳೂ ಗುಣಯುತವೂ ಸಮರ್ಥವೂ ಆಗಿರುತ್ತವೆಯೇ? ಬರಹಗಾರ ತನ್ನ ಬರಹಗಳಿಂದ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದರೆ ಸಾಕು, ಉಳಿದವರು ತಂತಮ್ಮ ಕೆಲಸ ಮಾಡಲಿ.

ಬರಹಗಾರನೂ ಜೀವನ ನಿರ್ವಹಣೆಗೆ ಒಂದು ವೃತ್ತಿ ಅಥವಾ ನೌಕರಿಯನ್ನು ಮಾಡುತ್ತಿದ್ದು ಇತರರಂತೆ ಆತನೂ ಅದಕ್ಕೆ ದಿನದ ಬಹುಪಾಲು ಸಮಯವನ್ನು ಮೀಸಲಿಡಬೇಕಲ್ಲವೆ? ಹಾಗಾಗಿ, ’ಬರಿದೆ ಬರೆಯುತ್ತೀರಿ, ಫೀಲ್ಡಿಗೆ ಯಾಕೆ ಇಳಿಯುವುದಿಲ್ಲ?’ ಎಂದು ಬರಹಗಾರರನ್ನು ದೂಷಿಸುವುದು ತರವಲ್ಲ. ’ಗೋಕಾಕ ಚಳವಳಿ’ಯಂಥ ಸಂದರ್ಭದಲ್ಲಿ ಬರಹಗಾರರು ಕಣಕ್ಕಿಳಿದ ಉದಾಹರಣೆ ನಮ್ಮೆದುರಿದೆ. ಹಾಗೆಂದು, ಬರೆಯುವವರೆಲ್ಲರೂ, ಬರೆದದ್ದೆಲ್ಲದರ ಬಗ್ಗೆಯೂ ಫೀಲ್ಡಿಗಿಳಿದು ಕಾರ್ಯೋನ್ಮುಖರಾಗಬೇಕು/ಹೋರಾಡಬೇಕು ಎಂದರೆ ಅವರು ತಮ್ಮ ವೃತ್ತಿ/ನೌಕರಿ ಮಾಡಿಕೊಂಡು, ಫೀಲ್ಡಿಗೂ ಇಳಿದು ಹೋರಾಡಿ, ಮತ್ತೆ ಬರೆಯುವುದು ಯಾವಾಗ? ಅಂತಹ ಅವಸರದ ಬರಹಗಳು ಅದಿನ್ನೆಷ್ಟು ಸತ್ತ್ವಯುತವಾಗಿದ್ದಾವು?

ಆದ್ದರಿಂದ, ಬರಹಗಾರರ ಬರಹಕ್ಕೆ ಪ್ರೋತ್ಸಾಹವಿರಲಿ, ಬರಹಗಾರರನ್ನು ಚುಚ್ಚುವುದು ಬೇಡ.

ಮಂಗಳವಾರ, ಅಕ್ಟೋಬರ್ 6, 2009

ಸೋನಿಯಾ ದೇಶ್!

ಆಂಧ್ರಪ್ರದೇಶದ ಕಡಪ ಜಿಲ್ಲೆಗೆ ವೈ ಎಸ್ ರಾಜಶೇಖರ ರೆಡ್ಡಿಯ ಹೆಸರನ್ನು ಸೇರಿಸಿ ಮರುನಾಮಕರಣ ಮಾಡಲಾಗುತ್ತಿದೆ!

ಪ್ರಕಾಶಂ, ರಂಗಾರೆಡ್ಡಿ ಮತ್ತು ಪೊಟ್ಟಿ ಶ್ರೀರಾಮುಲು ಹೆಸರುಗಳಲ್ಲಿ ಈಗಾಗಲೇ ಮೂರು ಜಿಲ್ಲೆಗಳು ಆಂಧ್ರಪ್ರದೇಶದಲ್ಲಿ ಅಸ್ತಿತ್ವದಲ್ಲಿವೆ.

ಬೀದಿಗೆ, ಊರಿಗೆ ಪುಢಾರಿಗಳ ಹೆಸರಿಡುವ ಚೋದ್ಯವಂತೂ ಲಗಾಯ್ತಿನಿಂದಲೂ ದೇಶದ ಎಲ್ಲೆಡೆ ನಡೆದೇ ಇದೆ. ತಮ್ಮ ಮತ್ತು ತಮಗೆ ಬೇಕಾದವರ ಹೆಸರಿಡುವ ನಿಟ್ಟಿನಲ್ಲಿ ಮೊಘಲರ ಮತ್ತು ಬ್ರಿಟಿಷರ ಕೊಡುಗೆಯೂ ದಂಡಿಯಾಗಿದೆ. ಇದೀಗ ಇನ್ನೊಂದಿಡೀ ಜಿಲ್ಲೆಗೆ ರಾಜಕಾರಣಿಯೊಬ್ಬನ ಹೆಸರು ಸೇರಿಸುವ ಧೂರ್ತತನ!

ಹೀಗೇ ಮುಂದುವರಿದರೆ ಮುಂದೆ ನಮ್ಮ ದೇಶವು ನೆಹರೂ ಪ್ರದೇಶ್, ಇಂದಿರಾ ಪ್ರದೇಶ್, ರಾಜೀವ್‌ಸ್ಥಾನ್, ರಾಹುಲ್‌ಸ್ಥಾನ್, ಪ್ರಿಯಾಂಕಾ ಪ್ರದೇಶ್ ಮುಂತಾದ ರಾಜ್ಯಗಳನ್ನೊಳಗೊಂಡ ’ಸೋನಿಯಾ ದೇಶ್’ ಎಂದು ಮರುನಾಮಕರಣಗೊಂಡರೆ ಆಶ್ಚರ್ಯವಿಲ್ಲ.

ಹೀಗೆ, ಇಂದು ಒಂದು ಜಿಲ್ಲೆಯ, ನಾಳೆ ಒಂದು ರಾಜ್ಯದ, ನಾಳಿದ್ದು ಈ ದೇಶದ ಹೆಸರನ್ನೇ ಕಿತ್ತುಹಾಕಿ ತಮಗೆ ಬೇಕಾದ ಪುಢಾರಿಯ ಹೆಸರನ್ನಿಡುವ ಅಧಿಕಾರ ಪ್ರಜಾಪ್ರಭುತ್ವ ದೇಶದ ಯಃಕಶ್ಚಿತ್ ರಾಜಕಾರಣಿಗಳಿಗಿದೆಯೆಂಬುದೇ ಒಂದು ದುರಂತ! ಇಂಥ ಅನೇಕ ಅಧಿಕಾರಗಳನ್ನವರು ಸಂವಿಧಾನ ಮತ್ತು ಕಾನೂನುಗಳ ಕರಾಮತ್ತಿನಿಂದ ತಮಗೆ ಕೊಟ್ಟುಕೊಂಡಿದ್ದಾರೆ. ಅವರ ಅಧಿಕಾರಗಳ ಪುನರ್ವಿಮರ್ಶೆ ಈಗ ಅತ್ಯಗತ್ಯ. ಇಲ್ಲದಿದ್ದರೆ ಮುಂದೊಂದು ದಿನ ಈ ನಮ್ಮ ರಾಜಕಾರಣಿಗಳು ವೋಟ್ ಬ್ಯಾಂಕ್, ತುಷ್ಟೀಕರಣ ಮತ್ತು ಅಧಿಕಾರಕ್ಕಾಗಿ ನಮ್ಮ ದೇಶದ ಪರಂಪರಾಗತ ಗುರುತುಗಳನ್ನೇ ಅಳಿಸಿಹಾಕಿಯಾರು!

ಶನಿವಾರ, ಅಕ್ಟೋಬರ್ 3, 2009

ಪರಿಹಾರ ಕಾರ್ಯಕ್ಕೆ ಕೈಜೋಡಿಸೋಣ

ರೋಂ ನಗರ ಉರಿಯುತ್ತಿದ್ದಾಗ ಚಕ್ರವರ್ತಿ ನೀರೊ ಪಿಟೀಲು ಬಾರಿಸುತ್ತಿದ್ದನಂತೆ! ಉತ್ತರ ಕರ್ನಾಟಕವು ನೀರಿನಲ್ಲಿ ಮುಳುಗುತ್ತಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ ದಾಬಸ್‌ಪೇಟೆಯಲ್ಲಿ ಸನ್ಮಾನ ಮಾಡಿಸಿಕೊಳ್ಳುತ್ತಿದ್ದರು! ನೀರು ಬಂದು ಜನರನ್ನು ಆಹುತಿ ತೆಗೆದುಕೊಳ್ಳುತ್ತಿದ್ದಾಗ ಯಡಿಯೂರಪ್ಪನವರು ’ಕ್ಷೀರ ಬಂಧು’ ಬಿರುದು ಸ್ವೀಕರಿಸುತ್ತಿದ್ದರು!

ಉತ್ತರ ಕರ್ನಾಟಕದ ಈ ಕುಂಭದ್ರೋಣ ಮಳೆ ತೀರಾ ಅನಿರೀಕ್ಷಿತವೇನಲ್ಲ. ವಾರದ ಮೊದಲಿಂದಲೂ ಹವಾಮಾನ ಇಲಾಖೆಯು ವಾಯುಭಾರ ಕುಸಿತದ ಬಗ್ಗೆ ಮತ್ತು ಸಂಭವನೀಯ ಅತಿವೃಷ್ಟಿಯ ಬಗ್ಗೆ ಎಚ್ಚರಿಸುತ್ತಲೇ ಇತ್ತು. ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರವು ನದಿಪಾತ್ರಗಳ ಮತ್ತು ತಗ್ಗು ಪ್ರದೇಶಗಳ ಜನರನ್ನು ಆರಂಭದಲ್ಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದರೆ ಮತ್ತು ಮಾಧ್ಯಮಗಳ ವರದಿ ತಲುಪದ ಕುಗ್ರಾಮಗಳಲ್ಲಿ ಹಾಗೂ ಬಡ ಜನರ ವಾಸಸ್ಥಳಗಳಲ್ಲಿ ಡಂಗುರ ಸಾರಿಸಿ ಅತಿವೃಷ್ಟಿಯ ಬಗ್ಗೆ ಎಚ್ಚರಿಕೆ ಮತ್ತು ಅಗತ್ಯ ಸೂಚನೆಗಳನ್ನು ನೀಡಿದ್ದರೆ ಸಾವುನೋವಿನ ಪ್ರಮಾಣವನ್ನು ಸಾಕಷ್ಟು ತಗ್ಗಿಸಬಹುದಿತ್ತು. ಆದರೆ ಆ ಕೆಲಸವನ್ನು ಸರ್ಕಾರವು ಮಾಡಲಿಲ್ಲ.

ನಿಧಾನವಾಗಿಯಾದರೂ ಈಗ ಸರ್ಕಾರ ಎಚ್ಚತ್ತಿದೆ. ಸಮರೋಪಾದಿಯಲ್ಲಿ ಪರಿಹಾರಕಾರ್ಯಗಳನ್ನು ಕೈಗೊಂಡಿದೆ. ಪರಿಹಾರಕಾರ್ಯಗಳಿಗೆ ಸರ್ಕಾರದ ಜೊತೆ ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರೂ ಕೈಜೋಡಿಸುವುದು ಈ ತುರ್ತು ಸನ್ನಿವೇಶದಲ್ಲಿ ಅತ್ಯಗತ್ಯ. ಇಂದಲ್ಲ ನಾಳೆ ಮಳೆ ನಿಂತು ಪ್ರವಾಹವೇನೋ ಇಳಿಯುತ್ತದೆ, ಆದರೆ, ಆಹಾರದ ಕೊರತೆ, ಕುಡಿಯುವ ನೀರಿನ ಕೊರತೆ, ವಸತಿ ಸಮಸ್ಯೆ, ಸಾಂಕ್ರಾಮಿಕ ರೋಗಗಳು, ಮುಂತಾದ ಪಿಡುಗುಗಳು ಪ್ರವಾಹ ಸಂತ್ರಸ್ತರನ್ನು ದೀರ್ಘಕಾಲ ಕಾಡತೊಡಗುತ್ತವೆ. ಈ ಪಿಡುಗುಗಳ ನಿವಾರಣೆಯ ದಿಸೆಯಲ್ಲಿ ಸರ್ಕಾರವು ಸುಯೋಜಿತವಾಗಿ ಮತ್ತು ಕ್ಷಿಪ್ರಗತಿಯಲ್ಲಿ ಕಾರ್ಯೋನ್ಮುಖವಾಗಬೇಕು. ವಿವಿಧ ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರು ಸರ್ಕಾರಕ್ಕೆ ಸಹಾಯಹಸ್ತ ಚಾಚಬೇಕು. ಸಂಘಸಂಸ್ಥೆಗಳು ತಾವೂ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.

ಈ ಸಲದ ದೀಪಾವಳಿಯಲ್ಲಿ ನಾವೆಲ್ಲ ಪಟಾಕಿ ಸುಡದಿರಲು ನಿರ್ಧರಿಸೋಣ. ಆ ಹಣವನ್ನು ’ಮುಖ್ಯಮಂತ್ರಿಗಳ ಪರಿಹಾರ ನಿದಿ’ಗಾಗಲೀ ಯಾವುದಾದರೂ ವಿಶ್ವಸನೀಯ ’ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ’ಗಾಗಲೀ ನೀಡೋಣ. ನಮ್ಮ ಬಂಧುಗಳು ಅಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು, ರೋಗರುಜಿನಗಳಿಗೆ ತುತ್ತಾಗಿ, ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ, ಮಲಗಲು ಸೂರಿಲ್ಲದೆ ಸಂಕಟಪಡುತ್ತಿರುವಾಗ ನಾವಿಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಲು ಮನಸ್ಸಾದರೂ ಹೇಗೆ ಒಪ್ಪುತ್ತದೆ? ಅಲ್ಲವೆ?

ಶುಕ್ರವಾರ, ಅಕ್ಟೋಬರ್ 2, 2009

ಗಾಂಧೀಜಿ: ಚಳವಳಿ ಮೀರಿದ ಆದರ್ಶ ಪುರುಷ

ಗಾಂಧೀಜಿಯ ಬಗ್ಗೆ ನಾವು ಸಾಕಷ್ಟು ಓದಿದ್ದೇವೆ, ಭಾಷಣಗಳನ್ನು ಕೇಳಿದ್ದೇವೆ. ಗಾಂಧೀ ಸಾಹಿತ್ಯವೂ ಇಂದು ಕೈಗೆಟುಕುವ ದರಗಳಲ್ಲಿ ವಿವಿಧ ಭಾಷೆಗಳಲ್ಲಿ ದೇಶಾದ್ಯಂತ ಲಭ್ಯವಿದೆ. ತೆರೆದ ಪುಸ್ತಕದಂತಿದ್ದ ಗಾಂಧೀಜಿಯ ಜೀವನದ ಬಗ್ಗೆ ಹೊಸದಾಗಿ ಸಂಶೋಧಿಸಿ ಹೇಳಬೇಕಾದ್ದೇನೂ ಉಳಿದಿಲ್ಲ. ಗಾಂಧೀ ಪ್ರಣೀತ ತತ್ತ್ವಗಳ ಉಲ್ಲೇಖದ ನೆಪದಲ್ಲಿ ನಂನಮ್ಮ ಪಾಂಡಿತ್ಯ ಪ್ರದರ್ಶನವೂ ಇಂದು ಸಮಾಜಕ್ಕೆ ಬೇಕಾಗಿಲ್ಲ. ಸಮಾಜಕ್ಕೆ ಇಂದು ಅಗತ್ಯವಾಗಿರುವುದು ಗಾಂಧೀಜಿ ತೋರಿದ ಆದರ್ಶಗಳ ಪಾಲನೆ. ಗಾಂಧೀಜಿಯವರ ಜೀವನ, ಸಾಹಿತ್ಯ ಮತ್ತು ತತ್ತ್ವಗಳ ಅರಿವಿಲ್ಲದವರಿಗೆ, ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ, ಆ ಅರಿವು ಹುಟ್ಟಿಸಲು ವಿಪುಲ ಸಾಹಿತ್ಯ ಲಭ್ಯವಿದೆ. ಅವರು ಅರಿಯುವ ಮನಸ್ಸು ಮಾಡಬೇಕು ಅಷ್ಟೆ.

ಗಾಂಧಿ ಜಯಂತಿ ಬಂತೆಂದರೆ ನಮ್ಮ ರಾಜಕಾರಣಿಗಳು ಆಡುವ ನಾಟಕ ನೋಡಿ ಅಸಹ್ಯವಾಗುತ್ತದೆ! ಹಲವೊಮ್ಮೆ ಸಿಟ್ಟು ಉಕ್ಕಿಬರುತ್ತದೆ! ಪ್ರತಿ ದಿನ, ಪ್ರತಿ ಗಳಿಗೆ ಗಾಂಧೀ ತತ್ತ್ವದ ವಿರುದ್ಧ ಸಾಗುವ ಈ ರಾಜಕಾರಣಿಗಳು ಗಾಂಧಿ ಜಯಂತಿಯ ದಿನ ಅಪ್ಪಟ ಖಾದಿ ದಿರುಸು ಧರಿಸಿ, ಗಾಂಧಿಟೋಪಿ ತಲೆಗಿಟ್ಟುಕೊಂಡು, ಗಾಂಧೀಜಿ ಫೋಟೋಕ್ಕೆ ಹಾರ ಏರಿಸಿ, ಕ್ಯಾಮೆರಾಗಳ ಮುಂದೆ ಪೋಸು ಕೊಡುತ್ತಾರೆ! ಪರಮ ದುಷ್ಟರೂ ಕಡು ಭ್ರಷ್ಟರೂ ಆದ ಇವರು ಆ ದಿನ ಗಾಂಧೀಜಿಯ ಹೆಸರೆತ್ತಿಕೊಂಡು ನಮಗೆಲ್ಲ ಸತ್ಯ, ಅಹಿಂಸೆ, ಅಸ್ತೇಯ ಗುಣಗಳನ್ನು ಬೋಧಿಸುತ್ತಾರೆ! ತಮಗೇನೂ ಗೊತ್ತಿಲ್ಲದಿದ್ದರೂ ಮಹಾಪಂಡಿತರಂತೆ ಗಾಂಧೀಜಿಯ ಬಗ್ಗೆ ಬೂಸಾ ಬಿಡುತ್ತಾರೆ!

ಗಾಂಧೀಜಿ ಇಂದು ಈ ರಾಜಕಾರಣಿಗಳ ’ಕೈ’ಯಲ್ಲಿ ಜನರನ್ನು ಮರುಳು ಮಾಡುವ ಸಾಧನವಾಗಿದ್ದಾರೆ! ವ್ಯಾಪಾರಿಗಳಿಗೆ ಜಾಹಿರಾತಿನ ವಸ್ತುವಾಗಿದ್ದಾರೆ! ವಿದ್ಯಾರ್ಥಿ ಮತ್ತು ನೌಕರ ಸಮುದಾಯಕ್ಕೆ ವಾರ್ಷಿಕ ರಜಾದಿನದ ಹೇತುವಾಗಿದ್ದಾರೆ! ಗಾಂಧೀಜಿಯ ಬಗ್ಗೆ ಹೆಚ್ಚಿನ ಅರಿವಿಲ್ಲದ ಮತ್ತು ತಿಳಿದುಕೊಳ್ಳುವ ಅಪೇಕ್ಷೆಯೂ ಇಲ್ಲದ ಇಂದಿನ ’ಮಾಡರ್ನ್’ ಯುವ ಪೀಳಿಗೆಗೆ ಗಾಂಧೀಜಿ ಹಾಸ್ಯದ ವಸ್ತುವಾಗಿದ್ದಾರೆ! ಎಂ.ಜಿ.ರೋಡ್ ಆಗಿ ಅವರ ಬಾಯಲ್ಲಿ ಚಾಲ್ತಿಯಲ್ಲಿದ್ದಾರೆ!

ಯುಗಪುರುಷ ಗಾಂಧೀಜಿ ಗತಿಸಿ ಆರೇ ದಶಕಗಳಲ್ಲಿ ಎಂಥ ದುರಂತ!

ಗಾಂಧೀಜಿಯ ಅವತಾರ ಕೇವಲ ಸ್ವಾತಂತ್ರ್ಯ ಚಳವಳಿಯ ಮಟ್ಟಿಗಷ್ಟೇ ಪರಿಗಣನಾರ್ಹ ಎಂದು ನಾವು ಭಾವಿಸಿರುವುದರಿಂದಲ್ಲವೆ ಈ ದುರಂತ? ಸ್ವಾತಂತ್ರ್ಯ ಚಳವಳಿಯ ಸಾಧನೆಯನ್ನೂ ಮೀರಿದ ಆದರ್ಶ ಪುರುಷನೊಬ್ಬ ಗಾಂಧೀಜಿಯಲ್ಲಿದ್ದನೆಂಬುದನ್ನು ಮತ್ತು ಆ ಆದರ್ಶ ಇಂದಿಗೂ-ಎಂದೆಂದಿಗೂ ಅನುಸರಣೀಯವೆಂಬುದನ್ನು ನಾವೇಕೆ ಅರಿಯುತ್ತಿಲ್ಲ?

ಗಾಂಧಿ ಜಯಂತಿಯ ದಿನವಾದ ಇಂದು ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.

ಗುರುವಾರ, ಅಕ್ಟೋಬರ್ 1, 2009

ಕೆಂಡಸಂಪಿಗೆಯ ಪರಿಮಳ ಇನ್ನಿಲ್ಲ!

’ಕೆಂಡಸಂಪಿಗೆ’ ಆನ್‌ಲೈನ್ ಪತ್ರಿಕೆ ಅಚಾನಕ್ಕಾಗಿ ತನ್ನ ಪ್ರಕಟಣೆ ನಿಲ್ಲಿಸಿದೆ!
ಇದೀಗಷ್ಟೇ ವಿಷಯ ತಿಳಿದು ಅದರ ಖಾಯಂ ಓದುಗನಾದ ನಾನು ಆಘಾತಕ್ಕೊಳಗಾಗಿದ್ದೇನೆ!
ತತ್‌ಕ್ಷಣ ನನಗನ್ನಿಸಿದ್ದು ಹೀಗೆ:

ಘಮಘಮ ಪರಿಮಳ
ಮಸ್ತಿಷ್ಕದ ನಾಸಿಕಕ್ಕೆ;
ಮಧುರಾನುಭವ
ಅದರ ಹೃದಯಕ್ಕೆ

ಕಡು ಸುವಾಸನೆಯ
ಕೆಂಡಸಂಪಿಗೆ
ಇನ್ನಿಲ್ಲ!
ನಡುನೀರಿನಲ್ಲಿ
ಮುಳುಗಿಹೋಯಿತಲ್ಲ!

ಮಿದುಳ ಕಣ್ಣಿಗೆ ಅದರಂದ
ಸೊಂಪಾಗಿತ್ತು,
ಸಂಪಿಗೆ
ಹದುಳ ತಪ್ಪಿ
ಹೊರಟುಹೋಯಿತೇ?

ಘ್ರಾಣಿಸಿದವರೆ ಎಲ್ಲ,
ಪೋಷಿಸಿದವರಿಲ್ಲ
ಎಂದೇ
ಮುದುಡಿತೇ?

ಏನೇ ಆದರೂ
ಇದು ಸಲ್ಲ
ಇದು ಸಲ್ಲ.

***

ಹೀಗೆ ಅಂತರ್ಜಾಲದ ನಿಧಿಯೊಂದು ಕಣ್ಮರೆಯಾಗುವುದು ಆತಂಕಕಾರಿ ಬೆಳವಣಿಗೆ.
ಪ್ರಿಯ ಮಿತ್ರರೇ,
ನೀವು ’ಕೆಂಡಸಂಪಿಗೆ’ಯ ಓದುಗರಾಗಿದ್ದಿರಾ? ಹೌದಾದರೆ ನಿಮಗೇನನ್ನಿಸುತ್ತಿದೆ?

ಬುಧವಾರ, ಸೆಪ್ಟೆಂಬರ್ 30, 2009

ಮೆಣಸಪ್ಪ ಚಟ್ಟು!

ಮಲೆನಾಡಿನ ಕಡೆ ಒಂದು ಗಾದೆ ಇದೆ. ’ಕಲ್ಲಪ್ಪ ಗುಂಡಪ್ಪರ ನಡುವೆ ಮೆಣಸಪ್ಪ ಚಟ್ಟು!’ ಅಂತ. ಕೆಳಗೆ ರುಬ್ಬುವ ಕಲ್ಲು, ಮೇಲೆ ರುಬ್ಬುಗುಂಡು, ಮಧ್ಯೆ ಸಿಕ್ಕಿಬಿದ್ದ ಮೆಣಸಿನಕಾಯಿಯ ಅವಸ್ಥೆ ಬಜ್ಜಿ! ಹಾಗಾಗಿದೆ ಸರ್ಕಾರ ಮತ್ತು ಸರ್ಕಾರಿ ವೈದ್ಯರ ಸಂಘರ್ಷದ ನಡುವೆ ಸಿಕ್ಕಿಬಿದ್ದಿರುವ ಬಡ ರೋಗಿಯ ಗತಿ!

ಶೇಕಡಾ ೨೦ಕ್ಕಿಂತ ಹೆಚ್ಚು ಸಂಬಳ ಏರಿಕೆ ಮಾಡೆನೆಂದು ಸರ್ಕಾರವು ಕಲ್ಲಿನಂತೆ ಗಟ್ಟಿಯಾಗಿ ಕುಳಿತಿದ್ದರೆ ವೈದ್ಯರು ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರ ಸಮಾನ ವೇತನವೇ ಬೇಕೆಂದು ಹಠಹಿಡಿದು ರಾಜೀನಾಮೆ ಒಗಾಯಿಸುವ ಮೂಲಕ ಗುಂಡಾಗಿ ಸರ್ಕಾರವನ್ನು ರುಬ್ಬುತ್ತಿದ್ದಾರೆ! ಕಲ್ಲು ಮತ್ತು ಗುಂಡಿನ ಮಧ್ಯೆ ಸಿಕ್ಕಿಬಿದ್ದು ರುಬ್ಬಿಸಿಕೊಳ್ಳುತ್ತಿರುವವನು ಮಾತ್ರ ಬಡ ರೋಗಿ!

ತಾರತಮ್ಯರಹಿತ ವೇತನ ಕೊಡಬೇಕೆಂಬ ಪ್ರಜ್ಞೆ ಸರ್ಕಾರಕ್ಕೂ ಇಲ್ಲ, ವೇತನವನ್ನು ಗುರಿಯಾಗಿಸಿಕೊಂಡು ಬಡ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡಬಾರದೆಂಬ ಕರ್ತವ್ಯಪ್ರಜ್ಞೆ ಸರ್ಕಾರಿ ವೈದ್ಯರಿಗೂ ಇಲ್ಲ! ಪರಿಣಾಮ ಬಡ ರೋಗಿಯ ಅವಸ್ಥೆಯನ್ನು ಕೇಳುವವರಿಲ್ಲ!

ವೈದ್ಯರು ಲಕ್ಷಗಟ್ಟಲೆ ಖರ್ಚುಮಾಡಿ ಡಿಗ್ರಿ ಸಂಪಾದಿಸಿರಬಹುದು, ಆದರೆ ಸರ್ಕಾರ ಕೂಡ ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಗೂ ಪ್ರಜೆಗಳ ತೆರಿಗೆ ಹಣವನ್ನು ಲಕ್ಷದ ಲೆಕ್ಕದಲ್ಲೇ ಖರ್ಚುಮಾಡಿರುತ್ತದೆಂಬುದನ್ನು ವೈದ್ಯರು ಮರೆಯಬಾರದು. ವೈದ್ಯಕೀಯ ವಿದ್ಯಾರ್ಥಿಗಳು ತೆತ್ತ ಕ್ಯಾಪಿಟೇಷನ್ ಶುಲ್ಕ ಖಾಸಗಿ ಮೆಡಿಕಲ್ ಕಾಲೇಜುಗಳ ಮಾಲೀಕರುಗಳ ಕಿಸೆ ಸೇರಿರುತ್ತದೆಯೇ ಹೊರತು ಸರ್ಕಾರಕ್ಕಾಗಲೀ ಜನರಿಗಾಗಲೀ ಸಂದಿರುವುದಿಲ್ಲ. ಮೇಲಾಗಿ, ಜನರ ಸೇವೆಗೆಂದು ಪ್ರಮಾಣಮಾಡಿ ಅವರು ವೈದ್ಯರಾಗಿರುತ್ತಾರೆ. ಹೀಗಿರುವಾಗ ಅವರು ಬಡ ರೋಗಿಗಳಿಗೆ ತೊಂದರೆಮಾಡುವುದು ಯಾವ ದೃಷ್ಟಿಯಿಂದಲೂ ತರವಲ್ಲ. ಅದೇ ವೇಳೆ, ಅವಶ್ಯ ಸೇವೆಯಾದ ವೈದ್ಯಕೀಯ ಸೌಲಭ್ಯವು ಪ್ರಜೆಗಳಗೆ ಯಾವ ಚ್ಯುತಿಯೂ ಇಲ್ಲದೆ ನಿರಂತರ ದೊರೆಯುತ್ತಿರುವಂತೆ ನೋಡಿಕೊಳ್ಳಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯ.

ಎರಡೂ ಕಡೆಯವರೂ ತಂತಮ್ಮ ಆಡಳಿತಾತ್ಮಕ ಮತ್ತು ನೈತಿಕ ಹೊಣೆಗಾರಿಕೆಯನ್ನರಿತು ಮುನ್ನಡೆದರೆ ಸಮಸ್ಯೆಯ ಪರಿಹಾರ ಕಷ್ಟವೇನಲ್ಲ. ಉಭಯರೂ ಒಂದೊಂದಿಷ್ಟು ಬಿಗಿ ಸಡಿಲಿಸಬೇಕು ಅಷ್ಟೆ. ಬಡ ರೋಗಿಯನ್ನು ಹಿಂಸಿಸುವ ರಾಕ್ಷಸಬುದ್ಧಿ ಮಾತ್ರ ಯಾವುದೇ ಕಾರಣಕ್ಕೂ ಸರಿಯಲ್ಲ.

ಸರಕಾರದ ಯಶಸ್ಸಿಗೆ ಶಾಸ್ತ್ರಿ ಸೂತ್ರ

ಸೂತ್ರ ಹರಿದ ಗಾಳಿಪಟದಂತಾಗಿರುವ ಕರ್ನಾಟಕ ಸರ್ಕಾರದ ಯಶಸ್ಸಿಗೆ ನರೇಂದ್ರಮೋದಿಯವರು ಕೆಲವು ಸೂತ್ರಗಳನ್ನು ಉಪದೇಶಿಸಿದ್ದಾರೆ. ಪಾಪ, ಗುಜರಾತ್‌ನ ಮೋದಿಗೇನು ಗೊತ್ತು ಕರ್ನಾಟಕ ಸರ್ಕಾರದ ಯಶಸ್ಸಿನ ಸೂತ್ರ. ಕರ್ನಾಟಕದ ರಾಜಧಾನಿಯಲ್ಲೇ ವಾಸವಾಗಿರುವ ಅಪ್ರತಿಮ ರಾಜಕೀಯ ವಿಶ್ಲೇಷಕನಾದ ನಾನು ಹೇಳುತ್ತೇನೆ ಕೇಳಿ, ನಮ್ಮ ಬಿಜೆಪಿ ಸರ್ಕಾರವು ಯಶಸ್ಸು ಹೊಂದಲು ಅನುಸರಿಸಬೇಕಾದ ಸಪ್ತಸೂತ್ರ:

* ಬೆಳೆದ ಬೆಳೆಗೆ ರೈತನಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಗ್ರಾಹಕನಿಗೋ, ದವಸಧಾನ್ಯ, ತರಕಾರಿ, ಹಣ್ಣುಹಂಪಲು ಕೈಗೆಟುಕುತ್ತಿಲ್ಲ. ಮಧ್ಯೆ ಮಧ್ಯವರ್ತಿಗಳು ದುಡ್ಡು ಬಾಚುತ್ತಿದ್ದಾರೆ. ಆದ್ದರಿಂದ ಮಧ್ಯವರ್ತಿಗಳಿಂದ ನಿಯಮಿತವಾಗಿ ಪಾರ್ಟಿ ಫಂಡ್ ವಸೂಲುಮಾಡತಕ್ಕದ್ದು.

* ರೈತನ ಏಳಿಗೆಗಾಗಿ ಸಮಾರಂಭಗಳಲ್ಲಿ ಒಂದು ರೈತಗೀತೆ ಹಾಡಿಸಿ ಮೈಸೂರು ದಸರಾದಲ್ಲಿ ’ಉಳುವಾ ಯೋಗಿಯ ನೋಡಲ್ಲಿ’ ನೃತ್ಯ ಮಾಡಿಸಿಬಿಟ್ಟರೆ ಸಾಲದು. ರೈತನ ಪರವಾಗಿ ಕನ್ನಡದಲ್ಲಿ ಎಷ್ಟು ಹಾಡುಗಳಿವೆಯೋ ಅಷ್ಟನ್ನೂ ಹಾಡಿಸಿ ಕುಣಿಸತಕ್ಕದ್ದು. ಇನ್ನೂ ಬೇಕೆಂದರೆ ಸಂಘಪರಿವಾರದ ಸಾಹಿತಿಗಳು ರೈತರಾಷ್ಟ್ರಭಕ್ತಿಯ ಗೀತೆಗಳನ್ನು ರಚಿಸಿಕೊಡುತ್ತಾರೆ.

* ಮುಖ್ಯಮಂತ್ರಿಗಳು ದಿನಕ್ಕೊಂದು ಹೊಸ ಯೋಜನೆ ಪ್ರಕಟಿಸತಕ್ಕದ್ದು ಮತ್ತು ಕನಿಷ್ಠಪಕ್ಷ ದಿನಕ್ಕೆರಡು ಮಠಮಂದಿರ ಸಂಘಸಂಸ್ಥೆಗಳಿಗೆ ಸಹಾಯಧನ ಘೋಷಿಸತಕ್ಕದ್ದು.

* ರಸ್ತೆ ಸಾರಿಗೆ ಇಲಾಖೆ ವತಿಯಿಂದ ದಿನಕ್ಕೊಂದು ನಮೂನೆಯ ಬಸ್ಸನ್ನು ರಸ್ತೆಗಿಳಿಸುತ್ತ ಪ್ರಯಾಣಿಕರನ್ನು ಆಕರ್ಷಿಸುವ ಷೋಕಿ ಮೆರೆಯತಕ್ಕದ್ದು.

* ಉದ್ದೇಶಿತ ಸಂಸ್ಕೃತ ವೇದ ವಿಶ್ವವಿದ್ಯಾಲಯಕ್ಕೆ ಮಹಾನ್ ಸಂಸ್ಕೃತ ವಿದ್ವಾನ್ ರಾಮಚಂದ್ರಗೌಡರನ್ನು ಖಾಯಂ ಕುಲಪತಿಯನ್ನಾಗಿ ನೇಮಿಸತಕ್ಕದ್ದು.

* ಸರ್ಕಾರದ ಲೋಪದೋಷಗಳ ಬಗ್ಗೆ ಮತ್ತು ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಪತ್ರಕರ್ತರು ಏನೇ ಪ್ರಶ್ನೆ ಕೇಳಲಿ, ನಮ್ಮ ಮುಖ್ಯಮಂತ್ರಿಯವರು, "ಈ ರಾಜ್ಯದ ಐದೂವರೆ ಕೋಟಿ ಜನರಿಗೆ ನಿಜ ಏನು ಅನ್ನೋದು ಗೊತ್ತು", ಎಂಬ ಉತ್ತರ ನೀಡಿ ನುಣುಚಿಕೊಳ್ಳುತ್ತಿದ್ದಾರೆ. ಬಲು ಜಾಣ್ಮೆಯ ಉತ್ತರ! ಅದನ್ನೇ ಮುಂದುವರಿಸಿಕೊಂಡುಹೋಗತಕ್ಕದ್ದು.

* ಯುವಕರ ಕೈಗೆ ರಾಜ್ಯದ ಆಡಳಿತ ಕೊಡಬೇಕಾದ್ದು ಇಂದಿನ ಅಗತ್ಯ. ನಮ್ಮ ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಯುವಪುತ್ರರಿಬ್ಬರ ಕೈಗೆ ಭಾಗಶಃ ಆಡಳಿತವನ್ನು ಕೊಟ್ಟಿರುವುದು ಶ್ಲಾಘನೀಯ. ಸಂಪೂರ್ಣ ಆಡಳಿತವನ್ನು ಅವರಿಗೊಪ್ಪಿಸಿಬಿಡುವ ಮೂಲಕ ಆ ಯುವಪುತ್ರರತ್ನರಿಬ್ಬರು ಸ್ವ-ರಾಜ್ಯದ ಏಳಿಗೆಗಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಧನಸಂಗ್ರಹಣೆಯಲ್ಲಿ ತೊಡಗಲು ನೆರವಾಗತಕ್ಕದ್ದು.

ಈ ಸಪ್ತಸೂತ್ರಗಳನ್ನು ಅನುಷ್ಠಾನಕ್ಕೆ ತಂದರೆ ಸಾಕು, ನಮ್ಮ ಹಾಲಿ ಮುಖ್ಯಮಂತ್ರಿಗಳೂ ಅವರ ಪುತ್ರದ್ವಯರೂ ರಾಜಕಾರಣದಲ್ಲಿ ಭರ್ಜರಿ ಆಯುರಾರೋಗ್ಯ ಐಶ್ವರ್ಯ ಹೊಂದಿ ಶೋಭಿಸುವರು.

ಮಂಗಳವಾರ, ಸೆಪ್ಟೆಂಬರ್ 29, 2009

ಬ್ಲಾಗ್ ಕ್ರಾಂತಿ ದಿನ!

ಬ್ಲಾಗ್, ಪೋರ್ಟಲ್ ಇವುಗಳ ಬಗ್ಗೆ ಪತ್ರಿಕೆಯೊಂದಕ್ಕೆ ನಾನು ಲೇಖನವೊಂದನ್ನು ಕಳಿಸಿದಾಗ ಆ ಪತ್ರಿಕೆಯಿಂದ ನನಗೆ ಬಂದ ಉತ್ತರ ಹೀಗಿತ್ತು: ’ಪತ್ರಿಕೆಯ ಓದುಗರ ಪೈಕಿ ಶೇಕಡಾ ಒಂದರಷ್ಟು ಜನರೂ ಅಂತರ್ಜಾಲವನ್ನು ಬಳಸುವುದಿಲ್ಲ, ಹೀಗಿರುವಾಗ ನಾವು ಪತ್ರಿಕೆಯಲ್ಲಿ ಅಂತರ್ಜಾಲದ ಬಗ್ಗೆ ಲೇಖನಗಳನ್ನು ಏಕೆ ಹಾಕಬೇಕು?’

ಏಕೆ ಹಾಕಬೇಕು ಎಂದು ವಿವರಿಸಿ ಒಂದು ಸುದೀರ್ಘ ಲೇಖನವನ್ನೇ ನಾನು ಬರೆಯಬಲ್ಲೆ. ಆದರೆ ಅಂಥ ಲೇಖನದ ಅಗತ್ಯ ನನಗೇನೂ ಕಂಡುಬರದು. ಏಕೆಂದರೆ, ಅಂತರ್ಜಾಲವು ಮುಂದೆ ಸರ್ವಾಂತರ್ಯಾಮಿ ಹಂತ ತಲುಪತೊಡಗಿದಾಗ ಮುದ್ರಣ ಮಾಧ್ಯಮವು ತಂತಾನೇ ’ದಾರಿಗೆ’ ಬರುತ್ತದೆ ಬಿಡಿ.

ಆದರೆ ನನಗೆ ಬಂದ ಆ ಉತ್ತರವು ವಿಚಾರಾರ್ಹವಂತೂ ಹೌದು. ಬ್ಲಾಗ್, ಪೋರ್ಟಲ್, ಆನ್‌ಲೈನ್ ಪತ್ರಿಕೆ ಮುಂತಾದ ಅಂತರ್ಜಾಲ ಸೌಲಭ್ಯಗಳನ್ನು ನಾವಿನ್ನೂ ಬರವಣಿಗೆ, ಚರ್ಚೆ ಮತ್ತು ಅಭಿಪ್ರಾಯ ವಿನಿಮಯಗಳಿಗಾಗಿ ಸೂಕ್ತವಾಗಿ ದುಡಿಸಿಕೊಳ್ಳುತ್ತಿಲ್ಲ.

ಬ್ಲಾಗ್‌ನ ಮಟ್ಟಿಗೆ ಹೇಳುವುದಾದರೆ, ಅಂತರ್ಜಾಲದ ಪ್ರತಿಯೊಬ್ಬ ಬಳಕೆದಾರನೂ ತನ್ನೊಂದು ಬ್ಲಾಗ್ ಹೊಂದಿ ತನ್ನ ಅಭಿಪ್ರಾಯಗಳನ್ನು ಅಂತರ್ಜಾಲಿಗರ ಮುಂದೆ ಇಡುವಂತಾದರೆ ಅದರ ಪರಿಣಾಮ ಅದ್ಭುತ! ಪ್ರತಿಯೊಬ್ಬ ವ್ಯಕ್ತಿಗೂ ಅವನದಾದ ಅಭಿಪ್ರಾಯಗಳಂತೂ ಇದ್ದೇ ಇರುತ್ತವಷ್ಟೆ. ಅಂತರ್ಜಾಲದ ಬಳಕೆದಾರನೆಂದಮೇಲೆ ಆತ ತಕ್ಕಮಟ್ಟಿಗಾದರೂ ವಿದ್ಯಾವಂತನೂ ಜ್ಞಾನಿಯೂ ಆಗಿಯೇ ಇರುತ್ತಾನೆ. ಅಂದಮೇಲೆ, ತನ್ನದಾದ ಬ್ಲಾಗ್ ಹೊಂದಿ ವಿವಿಧ ವಿಷಯಗಳ ಬಗ್ಗೆ ತನ್ನ ಅನ್ನಿಸಿಕೆಗಳನ್ನು ಇತರರೊಡನೆ ಹಂಚಿಕೊಳ್ಳಲು ಅವನಿಗೆ ಏನಡ್ಡಿ? ಮನುಷ್ಯ ಏನಿದ್ದರೂ ಸಂಘಜೀವಿಯೇ ತಾನೆ.

ನಮಗೆಲ್ಲ ಗೊತ್ತಿರುವಂತೆ ಬ್ಲಾಗ್‌ನ ಪ್ರಯೋಜನಗಳು ಅನೇಕ. ಆ ಪ್ರಯೋಜನಗಳು ಮುದ್ರಣಮಾಧ್ಯಮ ಹಾಗೂ ದೃಶ್ಯಮಾಧ್ಯಮಗಳಿಗಿಂತ ಭಿನ್ನ ಹಾಗೂ ತ್ವರಿತ. ನಮಗೆ ಗೊತ್ತಿರುವ ಏನೆಲ್ಲವನ್ನೂ ಮತ್ತು ನಮ್ಮೆಲ್ಲ ಅನ್ನಿಸಿಕೆಗಳನ್ನೂ ನಮ್ಮ ಬ್ಲಾಗ್‌ಗಳಲ್ಲಿ ನಾವು ಯಥಾವತ್ತಾಗಿ ಪ್ರಕಟಿಸಬಹುದು. ಶೈಲಿ ಹಾಗೂ ಲೇಖನಪಾಂಡಿತ್ಯದ ಬಗ್ಗೆ ಚಿಂತಿಸಬೇಕಿಲ್ಲ. ಹಾಗೆ ನಾವು ಪ್ರಕಟಿಸಿದ ಬರಹವು ತತ್ ಕ್ಷಣವೇ ಪ್ರಪಂಚವ್ಯಾಪಿಯಾಗಿಬಿಡುತ್ತದೆ. ಜಗತ್ತಿನಲ್ಲಿ ಯಾರಿಗೆ ಬೇಕಾದರೂ ಅದು ಆ ಕ್ಷಣದಿಂದಲೇ ಲಭ್ಯ. ನಮಗೆ ಬೇಕಾದವರಿಗೆ ಅಥವಾ ಆ ಲೇಖನಕ್ಕೆ ಸಂಬಂಧಿಸಿದವರಿಗೆ ನಾವು ಆ ಲೇಖನದ ಕೊಂಡಿ ನೀಡಿ ಅವರ ಗಮನ ಸೆಳೆಯಬಹುದು. ಲೇಖನ ಪ್ರಕಟವಾದ ಕ್ಷಣದಿಂದಲೇ ಲೇಖನದ ಬಗ್ಗೆ ಚರ್ಚೆಯ ಆರಂಭವು ಸಾಧ್ಯ. ಜಗತ್ತಿನ ಮೂಲೆಮೂಲೆಯಿಂದಲೂ ಇಚ್ಛುಕರು ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಮುಖಾಮುಖಿ ಮಾತನಾಡುವ ರೀತಿಯಲ್ಲೇ ಚರ್ಚಿಸಬಹುದು. ಮೇಲಾಗಿ, ನಮ್ಮ ಬ್ಲಾಗ್ ಬರಹವನ್ನು ಮುಂದೆ ಎಂದೇ ಆಗಲೀ ಯಾರೇ ಆಗಲೀ ಕ್ಷಣಮಾತ್ರದಲ್ಲಿ ಹುಡುಕಿ ತೆಗೆದು ಓದಬಹುದು.

ಈ ಎಲ್ಲ ಸಾಧ್ಯತೆಗಳ ಗರಿಷ್ಠ ಪ್ರಯೋಜನವು ಸಮಾಜಕ್ಕೆ ಆಗಬೇಕೆಂದರೆ ಹೆಚ್ಚೆಚ್ಚು ಮಂದಿ ಅಂತರ್ಜಾಲ ಬಳಸತೊಡಗಬೇಕು ಮತ್ತು ಬ್ಲಾಗ್ ಹೊಂದತೊಡಗಬೇಕು. ಬ್ಲಾಗ್ ಬರಹಗಳನ್ನು ಪ್ರಕಟಿಸತೊಡಗಬೇಕು ಮತ್ತು ಅಂತರ್ಜಾಲದ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಬ್ಲಾಗ್ ಬಗ್ಗೆ ಇತರರಿಗೆ ತಿಳಿಸತೊಡಗಬೇಕು.

ಸಾರ್ವತ್ರಿಕ ಮಹತ್ತ್ವದ ಯಾವುದೇ ಒಂದು ವಿಷಯದಲ್ಲಿ ಜಗತ್ತಿನ ಬ್ಲಾಗಿಗರೆಲ್ಲ ಒಂದಾಗಿ ಮುಂದುವರಿಯುವಂತಾದರಂತೂ ಈ ನೆಲದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಹುದು. ಅಂಥದೊಂದು ಪ್ರಯತ್ನವು ಇದೇ ಅಕ್ಟೋಬರ್ ೧೫ರಂದು ನಡೆಯುತ್ತಿದೆ. ’ಬ್ಲಾಗ್ ಆಕ್ಷನ್ ಡೇ ೦೯’ ಎಂಬ ಹೆಸರಿನಲ್ಲಿ ಆ ದಿನ ಜಗತ್ತಿನ ಎಲ್ಲ ಬ್ಲಾಗಿಗರೂ ಒಂದೇ ವಿಷಯ ಕುರಿತು ತಂತಮ್ಮ ಬ್ಲಾಗ್‌ನಲ್ಲಿ ಬರಹ, ಚಿತ್ರ, ದೃಶ್ಯಗಳನ್ನು ಪ್ರಕಟಿಸಲಿದ್ದಾರೆ ಮತ್ತು ಓದುಗರೊಡನೆ ಚರ್ಚೆ ಆರಂಭಿಸಲಿದ್ದಾರೆ. ಅದಕ್ಕಾಗಿ ಅವರು ಆಯ್ಕೆಮಾಡಿಕೊಂಡಿರುವ ವಿಷಯ ’ಹವಾಮಾನ ಬದಲಾವಣೆ’. ಅಂತರ್ಜಾಲ ಬಳಕೆದಾರರೆಲ್ಲರೂ ಅಂದು ಈ ಪ್ರಯತ್ನದಲ್ಲಿ ಭಾಗಿಗಳಾದಲ್ಲಿ ಹವಾಮಾನ ವೈಪರೀತ್ಯವನ್ನು ತಡೆಯುವ ಮತ್ತು ಮೆಟ್ಟಿನಿಲ್ಲುವ ಕಾರ್ಯಕ್ಕೆ ಇನ್ನಷ್ಟು ಪುಷ್ಟಿ ದೊರೆತೀತು. ಹವಾಮಾನ ಬದಲಾವಣೆಗೆ ಜಗತ್ತಿನ ಸ್ಪಂದನ ಕುರಿತು ಇದೇ ಡಿಸೆಂಬರ್‍ನಲ್ಲಿ ಜಾಗತಿಕ ನೇತಾರರು ನಡೆಸಲಿರುವ ಸಮಾಲೋಚನೆಗೆ ಈ ’ಬ್ಲಾಗ್ ಕ್ರಾಂತಿ’ಯು ಮಾರ್ಗದರ್ಶಿಯೂ ಆದೀತು. ( ’ಬ್ಲಾಗ್ ಕ್ರಾಂತಿ’ಯಲ್ಲಿ ಭಾಗಿಗಳಾಗಲು http://blogactionday.org/promote/en ಇಲ್ಲಿ ಬ್ಲಾಗಿಗರು ಹೆಸರು ದಾಖಲಿಸಿಕೊಳ್ಳಿ. ನಾನು ದಾಖಲಿಸಿಕೊಂಡಿದ್ದೇನೆ. ನನ್ನ ’ಗುಳಿಗೆ’ ಬ್ಲಾಗ್‌ನಲ್ಲಿ ಆ ದಿನ ’ಹವಾಮಾನ ಬದಲಾವಣೆ’ ಬಗ್ಗೆ ನನ್ನ ’ವಿಚಾರ’ ಪ್ರಕಟಿಸುತ್ತೇನೆ.)

ಸೋಮವಾರ, ಸೆಪ್ಟೆಂಬರ್ 28, 2009

ಜಂಬೂಸವಾರಿ, ಪಂಜಿನ ಕವಾಯಿತು: ಇನ್ನಷ್ಟು ಕೆದಕಾಟ!

’ಜಂಬೂಸವಾರಿ ಸ್ಪೆಷಲ್!’ ಟಿಪ್ಪಣಿ ಓದಿ ಹಿರಿಯ ಪತ್ರಕರ್ತ-ಅಂಕಣಕಾರ ಮಿತ್ರರೊಬ್ಬರು ವ್ಯಕ್ತಪಡಿಸಿದ ಪ್ರತಿಕ್ರಿಯೆಯನ್ನೂ ಮತ್ತು ಅದಕ್ಕೆ ನನ್ನ ಮರುತ್ತರವನ್ನೂ ನಿಮ್ಮ ಓದಿನ ಸ್ವಾರಸ್ಯಕ್ಕಾಗಿ ಈ ಕೆಳಗೆ ನೀಡಿದ್ದೇನೆ:

ಪತ್ರಕರ್ತ ಮಿತ್ರರ ಪ್ರತಿಕ್ರಿಯೆ
----------------------------
ನಿಮಗೆ ಕಂಡಿರಬಹುದಾದ ಇನ್ನೂ ಕೆಲವು ಇಲ್ಲಿವೆ:
ತಾಬ್ಲೋ ಎಂದರೆ ಬರೀ ದೇವರ ಗುಡಿ ಗೋಪುರ ಗಳದ್ದೇ ಸಾಲು ಸಾಲು. ಬಿ ಜೆ ಪಿ ವಿಶೇಷವೇ?
ವೀಕ್ಷಕ ವಿವರಣೆಯಲ್ಲಿ ಕಂತೆ ಕಂತೆ 'ತಕ್ಕಂತ' ಗಳು. 'ಬೆಟ್ಟದ ಮೇಲೆ ಇರತಕ್ಕಂತ ಅರಮನೆ ಕೂಡ ನಮಗೆ ಇಲ್ಲಿಂದಲೇ ಕಾಣ ತಕ್ಕಂತದಿದ್ದರೂ ತೋಪುಗಳಿಂದ ಹೊಮ್ಮಿರತಕ್ಕಂತ ಹೊಗೆ ಅರಮನೆ ಮುಚ್ಚಿ ಹೋಗಿರತಕ್ಕಂತ ಒಂದು ವಿದ್ಯಮಾನ.... ' ರೇಜಿಗೆ ಹುಟ್ಟಿಸುತ್ತಿತ್ತು.
ರಸ್ತೆಯುದ್ದಕ್ಕೂ ಯದ್ವಾ ತದ್ವಾ ಓಡಾಡುವ ಜನ ಜಂಗುಳಿ. ಅದರತ್ತ ಕಣ್ಣೆತ್ತಿ ನೋಡದೆ ನೋಡದೆ ಆಕಳಿಸುತ್ತಾ ನಿತ್ತ ಸಮವಸ್ತ್ರದ ಸಿಬ್ಬಂದಿ.
ತುಸುವೂ ಪೂರ್ವ ಸಿದ್ಧತೆ ಮಾಡದೆ ಪೆದ್ದು ಪೆದ್ದಾಗಿ ನಮಗೆ ಕಾಣುವುದನ್ನೇ ತೊದಲುತ್ತ ಹೇಳಿದ ಕಮೆಂಟರಿ.
ಇನ್ನೊಂದು ತಮಾಷೆ ಗಮನಿಸಿದಿರಾ? ಅಂಬಾರಿಯ ತೂಕ 750 ಕಿಲೊ ಅನ್ತಿದ್ದಾರಲ್ಲ, ಅದು ಆ ಆನೆಯನ್ನೂ ಸೇರಿಸಿ ಹೇಳ್ತಿದಾರೆ ಅಂತ ಕಾಣುತ್ತಿದೆ. ಬಲರಾಮನ ಬೆನ್ನಿನ ಮೇಲೆ ಅಂಥ ತೂಕ್ಕದ್ದು ಏನಿದೆ? ಒಂದಷ್ಟು ಹತ್ತಿ ಮೆತ್ತೆ, ಕವೆಗೋಲು, ಸಣಕಲು ಕಂಬಗಳ ಅಂಬಾರಿ . ಆ ಗಾತ್ರದ ಅಂಬಾರಿಯನ್ನು ಅತ್ಯಂತ ತೂಕದ್ದೆನಿಸಿದ ಸೀಸ ಲೋಹದಿಂದ ಮಾಡಿದ್ದರೂ 70 ಕೇಜಿ ತೂಗಬಹುದೇನೊ. ಇವರಿಗೆ 750 ಹೇಳಿದವರು ಯಾರು? ಅದನ್ನು ಯಾವ ಕ್ರೇನ್ ಮೂಲಕ ಎತ್ತಿ ಆನೆಯ ಮೇಲಿಡುವ ಸಂಪ್ರದಾಯ?

ನನ್ನ ಮರುತ್ತರ
---------------
ಹೌದು, ನನ್ನ ಗಮನಕ್ಕೆ ಬಂದಿವೆ ಇವೆಲ್ಲವೂ.
ಮತ್ತು, ’ಸ್ತಬ್ಧಚಿತ್ರಣ’, ’ಗತ ಇತಿಹಾಸ’ ಇಂಥ ಮೂರ್ಖ ಪದಪ್ರಯೋಗಗಳೂ!
ಪಂಜಿನ ಕವಾಯಿತಿನಲ್ಲಂತೂ ದೂರದರ್ಶನದ ನಿರೂಪಕದ್ವಯರ ಆಂಗ್ಲಭಾಷಾ ಪ್ರೇಮ ಮತ್ತು ತಾನು ದ್ವಿಭಾಷಾಪಂಡಿತನೆಂದು ಶಂಕರ್ ಪ್ರಕಾಶ್ ತೋರಿಸಿಕೊಳ್ಳುತ್ತಿದ್ದ ಬಗೆ ಇವು ಹೇಸಿಗೆ ಹುಟ್ಟಿಸುವಂತಿದ್ದವು!
’ತಕ್ಕಂತ’ಗಳಂತೂ ಅಸಹನೀಯ! (ಛಕ್ಕಂತ ತಲೆಗೇನೂ ಹೊಳೆಯದಿದ್ದಾಗ ’ತಕ್ಕಂತ’?)
ವಾಕ್ಯಕ್ಕೆರಡು ಸಲ ಖರ್ಗೆ ಸಾಹೇಬರು ’ಅಂತಕ್ಕಂಥಾ’ ಅಂತಕ್ಕಂಥ ಮಾತುಗಳು ನನಗೆ ನೆನಪಿಗೆ ಬಂದವು!
ಯಡಿಯೂರಪ್ಪನವರಂತೂ ಬನ್ನಿಮಂಟಪದಲ್ಲಿ ಪಂಜಿನ ಬೆಂಕಿಯಲ್ಲಿ ’JAI JAWAN JAI KISAN' 'JAI VIGYAN' ಅಕ್ಷರ ತೋರಿಸುವ ಮೂಲಕ ಈ ಮೂರೂ ರಂಗಗಳಿಗೂ ಅನುಪಮ ಕೊಡುಗೆ ನೀಡಿ ಕೃತಾರ್ಥರಾದರು!
ವಾರ್ತಾ ಇಲಾಖೆಯ ವತಿಯಿಂದ ಲೇಸರ್ ಚಿತ್ರಸಹಿತ ತಮ್ಮ ಪ್ರಶಂಸೆ ಮಾಡಿಸಿಕೊಂಡು ಬೀಗಿದರು!
’ಉಳುವಾ ಯೋಗಿಯ ನೋಡಲ್ಲಿ’ ಎಂದು ಒಂದಷ್ಟು ಜನರನ್ನು ಕುಣಿಸುವ ಮೂಲಕ ರೈತನಿಗೆ ಭಾರೀ ಉಪಕಾರ ಮಾಡಿದರು!
ಆದರೆ ರೈತನೀಗ ’ಅಳುವಾ ರೋಗಿ’ ಆಗಿದ್ದಾನೆ!
ಯಡಿಯೂರಪ್ಪನೋ, ’ಆಳುವಾ ಭೋಗಿ’ ಆಗಿದ್ದಾರೆ!
ಜೈ ಶ್ರೀರಾಮ್!
ಇನ್ನು ಅಂಬಾರಿಯ ತೂಕದ ವಿಷಯ. ಮಹಾರಾಜರದ್ದು ಅಂದಮೇಲೆ ಅದು ತೂಕದ್ದಿರಲೇಬೇಕು! ಏನಂತೀರಿ?
ಅಂದಹಾಗೆ, ಅಂಬಾರಿಯನ್ನು ಆನೆಯಮೇಲೆ ಇಬ್ಬರು ಆರಾಮಾಗಿ ಆಚೆ ಈಚೆ ಸರಿಸುತ್ತಿದ್ದರು! ಅವರು ಹರ್ಕ್ಯುಲಿಸ್ ಪುತ್ರರೇ ಇರಬೇಕು!

ಜಂಬೂಸವಾರಿ ಸ್ಪೆಷಲ್!

ಇದೀಗಷ್ಟೇ ಮೈಸೂರಿನ ದಸರಾ ಜಂಬೂಸವಾರಿ ಮೆರವಣಿಗೆಯ ದೂರದರ್ಶನ ನೇರಪ್ರಸಾರ ನೋಡಿದ ನಾನು ಪ್ರತಿ ವರ್ಷದಂತೆ ಈ ವರ್ಷವೂ ಗಮನಿಸಿದ ವಿಶೇಷ ಆಕರ್ಷಣೆಗಳು:

* ಆಕರ್ಷಕ ಸ್ತಬ್ಧಚಿತ್ರಗಳ ಮತ್ತು ಜಾನಪದ ಕಲಾ ತಂಡಗಳ ಮೆರವಣಿಗೆಯ ಮಧ್ಯೆ ಪದೇ ಪದೇ ಕ್ಯಾಮೆರಾಕ್ಕೆ ಪೋಸು ಕೊಡುತ್ತಿದ್ದ ದೂರದರ್ಶನದ ’ಅತ್ಯಾಕರ್ಷಕ’ ನಿರ್ದೇಶಕ ಮಹೇಶ್ Joshಇ.

* ವಿದ್ವಾಂಸ ನಿರೂಪಕರ ನಡುವೆ ಸೇರಿಕೊಂಡು ಅಧ್ವಾನದ ನಿರೂಪಣೆ ನೀಡುತ್ತಿದ್ದ ಅಜ್ಞಾನಿ ನಿರೂಪಕರು.

* ದೊರೆತನ ಕಸಿದುಕೊಂಡದ್ದಕ್ಕೆ ಸರ್ಕಾರದ ವಿರುದ್ಧ ಪ್ರತಿಭಟನೆಯ ಸಂಕೇತವೋ ಎಂಬಂತೆ ನೈಟ್ ಡ್ರೆಸ್‌ನಂಥ ಉಡುಪಿನಲ್ಲಿ ಅಂಬಾರಿ ಪೂಜೆಗೆ ಆಗಮಿಸಿದ ’ಮಹಾರಾಜ’ ಶ್ರೀಕಂಠದತ್ತ ಒಡೆಯರ್.

* ಮೈಸೂರು ದಸರೆಯ ಯಶಸ್ಸೇ ಈ ರಾಜ್ಯದ ಜನತೆಗೆ ತನ್ನ ಪರಮೋಚ್ಚ ಕೊಡುಗೆ ಎಂಬಂತೆ ಬೀಗಿಕೊಂಡಿದ್ದ ಶೋಭಾ ಕರಂದ್ಲಾಜೆ.

* ಉಪ್ಪಿಟ್ಟಿನಲ್ಲಿ ಅಲ್ಲೊಂದು ಇಲ್ಲೊಂದು ಕಾಣುವ ಒಗ್ಗರಣೆ ಸಾಸಿವೆಕಾಳಿನಂತೆ ದೇಶೀಜನಸಮೂಹದ ಮಧ್ಯೆ ಅಲ್ಲೊಬ್ಬರು ಇಲ್ಲೊಬ್ಬರು ಕಾಣುತ್ತಿದ್ದ ಬಿಳಿದೊಗಲಿನ ವಿದೇಶೀಯರು.

* ಜನಸಾಗರವನ್ನು ಆಗಾಗ ಹೆದರಿಸುತ್ತಿದ್ದ ಮಳೆಮೋಡ.

ಮತ್ತು

* ಪ್ರಸಾರದ ಮಧ್ಯೆ ಕೈಕೊಟ್ಟ ನಮ್ಮ ಏರಿಯಾದ ವಿದ್ಯುತ್!

ಭಾನುವಾರ, ಸೆಪ್ಟೆಂಬರ್ 27, 2009

ಚಂದ್ರಜಲ ಮತ್ತು ವಿಜಯ್ ಮಲ್ಯ: ಒಂದು ಕಿ(ರಿ)ಕ್!

ಮಲ್ಯ ಉವಾಚ
---------------

ಚಂದ್ರನಲ್ಲಿ ಸಿಕ್ಕಿರೋದು ನೀರು
ಮಾಡ್ತೀನಿ ಅದನ್ನು ಬೀರು!
ಹಾರಿಸ್ತೀನಿ ಅಲ್ಲಿಗೆ ಕಿಂಗ್‌ಫಿಷರು
ತೋರಿಸ್ತೀನಿ ನನ್ನ ಕಾರು’ಬಾರು’!

***

ಶಶಿಯೊಡಲಲ್ಲಿ ನೀರು ಕಂಡುಹಿಡಿದದ್ದು ಇಸ್ರೋ
ಖುಷಿಕೊಡುವಂಥ ಬೀರು ಕಂಡುಹಿಡಿದದ್ದು ನಾನು
ನಿಮ್ಮ್ ಸಂಶೋಧನೆ ಮುಂದುವರಿಸ್ರೋ
ನಾಕೌಟ್ ಆಗುವಷ್ಟು ಕೊಟ್ಟೇನು!

***

ಹಳೇದಾಯ್ತು ಕಿಂಗ್‌ಫಿಷರ್
ಮತ್ತು ನಾಕೌಟ್.
ಹೊಸಾ ಬ್ರ್ಯಾಂಡು ಮೂನ್‌ವಾಟರ್!
ಕುಡಿದ್ರೆ ಫುಲ್ ಟೈಟ್!

***

ನೀಲ್ ಆರ್ಮ್‌ಸ್ಟ್ರಾಂಗ್ ಕಾಲ್ ಇಟ್ಟರು
ಕಸ್ತೂರಿ ರಂಗನ್ ನೀರ್ ಹುಡುಕಿದರು
ಮಸ್ತ್ ಹುಡುಗೀರ್ ‍ಜತೆ ಮಲ್ಯ ನಾನಲ್ಗೋಗಿ
ಮಾಡ್ತೀನಿ ಬಲು ಸ್ಟ್ರಾಂಗ್ ಕ್ಯಾಲೆಂಡರು!

***

’ಟಿಪ್ಪೂ ಖಡ್ಗ ತಂದೆ, ಗಾಂಧಿ ಕಣ್ಣಡಕ ತಂದೆ,
ಚಂದ್ರನ ಬಳಿ ಹೋಗಿ ನೀರನ್ನೂ ತರಲೇ?’
’ಏನೂ ಬೇಡ ತಂದೆ, ಸೊಲ್ಪ ಸುಮ್ಕಿರು ಎಂದೆ;
ನೀ ಕುಡಿಸಿದ ಬೀರೇ ಮಾಡ್ತಾ ಇದೆ ತರಲೆ!’

***

ಗೇರ್ ಗೇರ್ ಮಂಗಣ್ಣ!
ನೀರ್ ನೀರ್ ಚಂದ್ರಣ್ಣ!
ಬೀರ್ ಬೀರ್ ಮಲ್ಯಣ್ಣ!
ಚೀರ್ ಚೀರ್ ಶಾಸ್ತ್ರ್ಯಣ್ಣ!

ಶನಿವಾರ, ಸೆಪ್ಟೆಂಬರ್ 26, 2009

ಚಂದ್ರನಲ್ಲಿ ನೀರು, ಮಹಾನವಮಿ ತೇರು!

ನಲವತ್ತು ವರ್ಷಗಳಿಂದ ನಾಸಾ
ನಡೆಸಿತ್ತು ಯತ್ನ ಅನವರತ
ಚಂದ್ರನಲ್ಲಿ ನೀರಿರುವುದನ್ನು
ಪತ್ತೆಹಚ್ಚಿದ್ದು ಭಾರತ!

***

ರಜನಿಗಾ ಚಂದ್ರ ಭೂಷಣಂ
ಚಂದ್ರನಿಗೆ ಜಲ ಭೂಷಣಂ
ಭಾರತದಿಂದ ಚಂದ್ರಜಲಾನ್ವೇಷಣಂ
ಅಮೆರಿಕದ್ದು ಬರೀ ಭಾಷಣಂ!

***

ಮಾತೆತ್ತಿದರೆ ಸಾಕು, ಅಮೆರಿಕಾ ಅಂತೀವಿ
ಮಹಾನ್ ಸಾಧನೆಗಂತ ಅಲ್ಲಿಗೆ ಓಡ್ತೀವಿ
ಚಂದ್ರನಲ್ಲಿ ನೀರು ಗುರುತಿಸಿದ್ದು
ಭಾರತ, ಸ್ವಾಮೀ.
ಕಣ್ಣಗಲಿಸಿ ನಮ್ಮತ್ತ ನೋಡ್ತಿದೆ
ಈಗ ಇಡೀ ಭೂಮಿ!

***

ಆ ಚಂದ್ರನಮೇಲಿನ
ಜಲದ ಪತ್ತೆ
ಆಚಂದ್ರಾರ್ಕ ಕೀರ್ತಿಯಲ್ಲವೆ
ನಮಗೆ ಮತ್ತೆ?

***

’ನಾನು ಮತ್ತು ಹಾವು ಕಚ್ಚಿ
ಅವನನ್ನು ಕೊಂದೆವು’
ಅಂದಿತಂತೆ ಇರುವೆ!
’ನಾನು ಮತ್ತು ಭಾರತ ಸೇರಿ
ಚಂದ್ರೋದಕ ಪತ್ತೆಮಾಡಿದೆವು’
ಅನ್ನುತ್ತಿದೆ ಅಮೆರಿಕ!

***

ಚಂದ್ರನಲ್ಲಿ ನೀರಿರುವುದು
ಆಶ್ಚರ್ಯವೇನಲ್ಲ
ಸೋಮಶೇಖರನ ಜಟೆಯಲ್ಲಿ
ಗಂಗೆಯೂ ಇರಲೇಬೇಕಲ್ಲಾ!

***

ಚಂದ್ರನ ಒಡಲಲ್ಲಿ ನೀರು
ಜೀವಜಲಪುಷ್ಪ!
ವಿಜ್ಞಾನಿ ಕಣ್ಣಲ್ಲಿ ನೀರು
ಆನಂದಬಾಷ್ಪ!

***

ಚಕೋರಂಗೆ ಚಂದ್ರಮನ
ಬೆಳಕಿನಾ ಚಿಂತೆ
ಇಸ್ರೋಗೆ ಚಂದ್ರಮನ
ಜಲನಿಧಿಯ ಚಿಂತೆ!

***

ಚಂದ್ರಮುಖೀ ಪ್ರಾಣಸಖೀ
ಚತುರೇ ನೀ ಕೇಳೇ;
ಇಂದು ಜಲಜಾತೆ ಜಲಜಾಕ್ಷಿಯು ನೀ
ಚಂದವ ತಾ ಹೇಳೇ!

***

ಚೌದವೀನ್ ಕಾ ಚಾಂದ್ ಹೋ
ಯಾ ಜಲ್ ಕೀ ಬೂಂದ್ ಹೋ
ಜೋ ಭೀ ಹೋ ತುಮ್ ಖುದಾ ಕೀ ಕಸಂ
ಲಾಜವಾಬ್ ಹೋ!

***

Honeymoon
ಅಲ್ಲ,
ಇನ್ನು
Watermoon!

***

ಚಂದಕ್ಕಿ ಮಾಮ, ಚಕ್ಕುಲಿ ಮಾಮ
ಚಕ್ಕುಲಿ ತಿಂದು ನೀರ್ ಕುಡಿ ಮಾಮ!

***

ಚಂದಿರನೇತಕೆ ಓಡುವನಮ್ಮ,
ಮೋಡವ ಹಿಡಿಯಲಿಕೇ?
ಮೋಡವ ಹಿಡಿದು ಮಳೆಯನು ಪಡೆದು
ನೀರನು ಕುಡಿಯಲಿಕೇ?

***

’ಚಂದ್ರನಲ್ಲಿ ನೀರು ಪತ್ತೆಯಾಗಿದೆ’
ಅಂದ, ಪತ್ನಿಗೆ ತಿಪ್ಪೇಶಿ.
’ನಲ್ಲೀಲಿನ್ನು ದಿನಾ ನೀರು ಬರುತ್ತಾ?’
ಕೇಳಿದಳು ಪತ್ನಿ ಮೀನಾಕ್ಷಿ!

***

ಚಂದ್ರನಲ್ಲಿ ಸಿಕ್ಕಿದೆ ನೀರು.
ರಿಯಲ್ ಎಸ್ಟೇಟ್ ಮಂದಿ ಲಗ್ಗೆಯಿಟ್ಟಾರು!
’ಟ್ವೆಂಟಿಫೋರ್ ಅವರ್ಸ್ ವಾಟರ್’ ಅಂತ
ಲೇಔಟ್ ಜಾಹಿರಾತು ಬರುತ್ತೆ,
ನೋಡ್ತಿರಿ ಪೇಪರು!

***

ನವರಾತ್ರಿಗೆ
ರಾಮಾಯಣ, ಮಹಾಭಾರತದ
ಪ್ರಸ್ಥಾನದ ಹೆಗ್ಗಳಿಕೆಯಿದೆ;
ಇನ್ನೀಗ, ಆಧುನಿಕ ಭಾರತದ
ಸಾಧನೆಯ ಅಗ್ಗಳಿಕೆಯೂ ಇದೆ!

***

ಅಜ್ಞಾತವಾಸ ಮುಗಿಸಿ ಅಂದು
ಮಹಾಭಾರತ ಯುದ್ಧಕ್ಕೆ ಪ್ರಸ್ಥಾನ.
ವಿಜ್ಞಾನಿಗಳು ಸಾಧಿಸಿ ಇಂದು
ಭಾರತ ದೇಶಕ್ಕೆ ಸನ್ಮಾನ.

***

ಚಂದ್ರನಲ್ಲಿ ನೀರು
ಮಹಾನವಮಿ ತೇರು!
ಹಬ್ಬ ಈ ಸಲ ಜೋರು
ಇಸ್ರೊ ಸಾಧನೆ ಮೇರು!

ಮಂಗಳವಾರ, ಸೆಪ್ಟೆಂಬರ್ 22, 2009

ಭ್ರಷ್ಟಾಚಾರ ನಿರ್ಮೂಲನ: ಬೆಕ್ಕಿಗೆ ಗಂಟೆ ಕಟ್ಟುವ ಕೆಲಸ!

ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಇದೇ ದಿನಾಂಕ ೯ರಂದು ಬೆಂಗಳೂರಿನಲ್ಲಿ ನೀಡಿದ ’ನ್ಯಾಯಮೂರ್ತಿ ಎಸ್. ರಂಗರಾಜನ್ ಸ್ಮಾರಕ ದತ್ತಿ ಉಪನ್ಯಾಸ’ದ ಆಯ್ದ ಭಾಗವು ಇದೇ ದಿನಾಂಕ ೧೮ರ ’ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ’ಭ್ರಷ್ಟಾಚಾರ: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’ ಎಂಬ ತಲೆಬರಹದಡಿ ಪ್ರಕಟವಾಗಿದೆ.

ಕಳೆದೆರಡು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ನನ್ನ ಲೇಖನಗಳ ಪೈಕಿ ಆಯ್ದ ಕೆಲವನ್ನು ನಾನು ಮೇಲಿನ ಪ್ರಶ್ನೆಗೆ ಉತ್ತರವಾಗಿ ಇಲ್ಲಿ ಸಾದರಪಡಿಸಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಸುಖೀ ಸಮಾಜದ ನಿರ್ಮಾಣಕ್ಕೆ ಅದು ಮಾರ್ಗದರ್ಶಿಯಾಗಬಲ್ಲದೆಂಬ ಆಶಯ ನನ್ನದು.

-೦-

(ಸೆಪ್ಟೆಂಬರ್ ೨೦೦೮ರ ’ಪ್ರಜಾವಾಣಿ’ ’ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟಿತ ಬರಹ)

ಎರಡೂ ಬದಿಯ ಅನುಭವ
--------------------------

ನನ್ನ ಜೀವನದಲ್ಲಿ ಇದುವರೆಗೆ ನಾನು ಲಂಚ ಕೊಟ್ಟಿಲ್ಲ, ತೆಗೆದುಕೊಂಡಿಲ್ಲ. ಇದರಿಂದಾಗಿ ನಾನು ಜೀವನದಲ್ಲಿ ಏನನ್ನೂ ಕಳೆದುಕೊಂಡಿಲ್ಲ, ಬದಲಿಗೆ ಅಭಿಮಾನವನ್ನೂ ಆತ್ಮಸಂತೃಪ್ತಿಯನ್ನೂ ಗಳಿಸಿದ್ದೇನೆ. ಈ ಬಗ್ಗೆ ಹೇಳಬೇಕೆಂದರೆ ಅದೆಷ್ಟೋ ಘಟನೆಗಳಿವೆ. ಎರಡನ್ನು ಮಾತ್ರ ಇಲ್ಲಿ ಹೇಳುತ್ತೇನೆ.

೧೯೮೦ರ ದಶಕ. ಬೆಂಗಳೂರಿಗೆ ವರ್ಗವಾಗಿ ಬಂದ ನಾನು ಪಡಿತರ ಚೀಟಿಯ ವರ್ಗಾವಣೆಗಾಗಿ ಬೆಂಗಳೂರಿನ ಸಂಬಂಧಿತ ಇಲಾಖಾ ಕಚೇರಿಗೆ ಹೋದೆ. ವರ್ಗಾವಣೆ ದಾಖಲೆಗಳೆಲ್ಲ ಸರಿಯಾಗಿದ್ದರೂ ಅಲ್ಲಿ ನನ್ನನ್ನು ಸತಾಯಿಸಲು ಮೊದಲಿಟ್ಟರು. ಏಜೆಂಟೊಬ್ಬರ ಮೂಲಕ ೩೫ ರೂಪಾಯಿ ’ಖುಷಿ’ ಹಣದ ಡಿಮಾಂಡ್ ಬಂತು. ನಾನು ಒಪ್ಪಲಿಲ್ಲ. ನನ್ನ ಮನೆಗೆ ಇನ್‌ಸ್ಪೆಕ್ಷನ್‌ಗೆ ಬರುವುದಾಗಿ ತಿಳಿಸಲಾಯಿತು. ಅದೂ ಮುಗಿಯಿತು. ಆದರೂ ಪಡಿತರ ಚೀಟಿ ಸಿಗಲಿಲ್ಲ. ಮತ್ತೆ ನಾಲ್ಕು ತಿಂಗಳು ಓಡಾಡಿದೆ. ಪ್ರಯೋಜನವಾಗಲಿಲ್ಲ. ರೋಸಿಹೋದ ನಾನು ಕಚೇರಿಯ ಹೊರಗೆ ಒಂದು ಸಣ್ಣ ಗಲಾಟೆ ಮಾಡಿ ಬಂದೆ. ಅದಾದ ಎರಡೇ ದಿನದಲ್ಲಿ, ಪಡಿತರ ಚೀಟಿ ಕೊಂಡೊಯ್ಯಬಹುದೆಂಬ ಸೂಚನೆ ಬಂತು!

ಇನ್ನೊಂದು ಘಟನೆ ಭಿನ್ನರೀತಿಯದು. ಇದು ನಡೆದದ್ದು ಆಂಧ್ರಪ್ರದೇಶದ ಯೆಮ್ಮಿಗನೂರಿನಲ್ಲಿ. ಒಂದು ದಿನ ಬೆಳಗ್ಗೆ ನನ್ನ ಮನೆಗೆ ಯುವಕನೊಬ್ಬ ಬಂದ. ಮೂರು ದಿನಗಳ ಕೆಳಗಷ್ಟೇ ಈ ಯುವಕ ನಾನು ಮೇನೇಜರ್ ಆಗಿದ್ದ ಬ್ಯಾಂಕ್ ಶಾಖೆಗೆ ಬಂದು ಯಾವುದಾದರೂ ನೌಕರಿ ಕೊಡಿಸುವಂತೆ ಕೇಳಿಕೊಂಡಿದ್ದ. ಬ್ಯಾಂಕ್‌ನಲ್ಲಿ ತಾತ್ಕಾಲಿಕವಾಗಿ ಅಟೆಂಡರ್ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆಂದು ಇವನಿಗೆ ಯಾರೋ ಹೇಳಿದ್ದರಂತೆ. ನನ್ನ ಶಾಖೆಯಲ್ಲಿ ಅಂಥ ಅವಕಾಶವೇನೂ ಇಲ್ಲವೆಂದು ಈತನಿಗೆ ಹೇಳಿ ವಾಪಸು ಕಳಿಸಿದ್ದೆ.

ಈಗ ಮನೆಗೆ ಬಂದ ಈ ಯುವಕ ಮತ್ತೆ ಅದೇ ಬೇಡಿಕೆಯನ್ನಿಟ್ಟ. ಸಾಧ್ಯವಿಲ್ಲವೆಂದು ಆತನಿಗೆ ನಾನು ವಿವರಿಸುತ್ತಿದ್ದಂತೆಯೇ ಆತ ತನ್ನ ಪ್ಯಾಂಟ್ ಕಿಸೆಯೊಳಗಿಂದ ಹತ್ತರ ನೂರು ನೋಟುಗಳ ಒಂದು ಕಟ್ಟು ಹೊರತೆಗೆದು ಎರಡೂ ಕೈಗಳಿಂದ ಅತಿ ದೀನನಾಗಿ ನನಗೆ ಕೊಡಲು ಬಂದ. ಅದನ್ನು ನಿರಾಕರಿಸಿದ ನಾನು ಅವನಿಗೆ ತಿಳಿಹೇಳತೊಡಗಿದೆ. ಆದರೆ ನನ್ನ ಮಾತಿಗೆ ಗಮನ ಕೊಡದೆ ಆತ ತನ್ನ ಪ್ರಯತ್ನ ಮುಂದುವರಿಸಿದ. ಕೆಲವು ದಿನಗಳ ಅವಕಾಶ ಕೊಟ್ಟರೆ ಇನ್ನೊಂದು ಸಾವಿರ ರೂಪಾಯಿಯನ್ನು ಹೊಂದಿಸಿ ತರುತ್ತೇನೆಂದೂ ಹೇಳಿದ!

ನನ್ನನ್ನು ಅಪಾರ್ಥ ಮಾಡಿಕೊಂಡ ಆತನಮೇಲೆ ನನಗೆ ಎಲ್ಲಿಲ್ಲದ ಸಿಟ್ಟು ಬಂತು. ಅವನ ಕೈಯಿಂದ ನೋಟಿನ ಕಟ್ಟನ್ನು ಕಿತ್ತುಕೊಂಡು ಮನೆಯಿಂದ ಹೊರಗೆಸೆದೆ. ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಕೂಡಲೇ ಹೊರಕ್ಕೆ ಧಾವಿಸಿ ಆತ ನೋಟುಗಳನ್ನು ಬಾಚಿಕೊಳ್ಳತೊಡಗಿದ. ಜೊತೆಗೇ ಭೋರೆಂದು ಅಳತೊಡಗಿದ!

ನೋಟೆಲ್ಲವನ್ನೂ ಹೆಕ್ಕಿ ವಾಪಸು ಕಿಸೆಯೊಳಗಿಟ್ಟುಕೊಂಡಮೇಲೂ ಆತನ ಅಳು ನಿಲ್ಲಲಿಲ್ಲ. ಮನೆಯ ಹೊರಗೆ ಅಂಗಳದಲ್ಲಿ ನಿಂತು ಒಂದೇಸವನೆ ಅಳತೊಡಗಿದ. ಆ ಅಳುವಿನಲ್ಲಿ ಪಶ್ಚಾತ್ತಾಪದ ಜೊತೆಗೆ ತೀವ್ರ ಅಸಹಾಯಕತೆಯೂ ನನಗೆ ಗೋಚರವಾದ್ದರಿಂದ ಆತನನ್ನು ಒಳಗೆ ಕರೆದು ಆತನ ಪೂರ್ವಾಪರ ವಿಚಾರಿಸಿದೆ. ಕೃಷಿ ಕಾರ್ಮಿಕ ತಂದೆಯ ಅಕಾಲಮರಣದಿಂದಾಗಿ ಓದು ಮೊಟಕುಗೊಳಿಸಿ ಕೂಲಿ ಕೆಲಸಕ್ಕಿಳಿದಿದ್ದ ಆತನಿಗೆ ತಾಯಿ ಮತ್ತು ಮೂವರು ತಮ್ಮ-ತಂಗಿಯರ ಜವಾಬ್ದಾರಿ ನೋಡಿಕೊಳ್ಳಲಿಕ್ಕಾಗಿ ನೌಕರಿಯೊಂದರ ತೀವ್ರ ಅವಶ್ಯಕತೆ ಇತ್ತು! ತಾಯಿಯನ್ನು ದುಡಿಮೆಗೆ ಹಚ್ಚಲು ಆತನ ಮನಸ್ಸು ಒಪ್ಪುತ್ತಿರಲಿಲ್ಲ!

ಪರಿಚಿತರಲ್ಲಿ ಆತನಿಗೊಂದು ಕೆಲಸ ಕೊಡಿಸಿ ಓದಿನ ವ್ಯವಸ್ಥೆಯನ್ನೂ ಮಾಡಿದೆ. ಲಂಚ ಕೊಡಲು ಬರುವವರೆಲ್ಲಾ ಧೂರ್ತರಲ್ಲ ಎಂಬ ಸತ್ಯದ ಅರಿವು ಅಂದು ನನಗಾಗಿತ್ತು. ಜೊತೆಗೆ, ’ಭ್ರಷ್ಟಾಚಾರಮುಕ್ತ ವ್ಯವಸ್ಥೆಯಿದ್ದಿದ್ದರೆ ಈ ಯುವಕ ಹಣ ಹಿಡಿದು ಏಕೆ ಬರುತ್ತಿದ್ದ, ಬರಿಗೈಯಲ್ಲಿ ಬಂದು ನೇರವಾಗಿ ತನ್ನ ದುಃಖ ಹೇಳಿಕೊಳ್ಳುತ್ತಿದ್ದ’, ಎಂದೂ ಅನ್ನಿಸಿತು.

ಭ್ರಷ್ಟಾಚಾರಮುಕ್ತ ವ್ಯವಸ್ಥೆ ನಮ್ಮದಾಗಬೇಕೆಂದರೆ, ಲಂಚ ಕೊಡುವವರು ಮತ್ತು ಪಡೆಯುವವರು ಇಬ್ಬರೂ ಮನಸ್ಸು ಮಾಡಬೇಕು.

=====================================================================

(೩ ಜೂನ್ ೨೦೦೭ರ ’ಉದಯವಾಣಿ’ ’ಸಾಪ್ತಾಹಿಕ ಸಂಪದ’ದಲ್ಲಿ ಪ್ರಕಟಿತ ಬರಹ)

ಲಂಚ ಬೇಕೋ, ಕೊನೆಗಾಲದ ಜೀವನಸಂತೃಪ್ತಿ ಬೇಕೋ?
-------------------------------------------------------

ನನ್ನ ಮುವ್ವತ್ತು ವರ್ಷಗಳ ಬ್ಯಾಂಕಿಂಗ್ ವೃತ್ತಿಯಲ್ಲಿ ಮತ್ತು ಐವತ್ತಾರು ವರ್ಷಗಳ ಜೀವನದಲ್ಲಿ ಎಂದೂ ಲಂಚ ಕೊಟ್ಟಿಲ್ಲ, ತೆಗೆದುಕೊಂಡಿಲ್ಲ. ಅರ್ಧ ದೇಶ ತಿರುಗಾಡಿದ್ದೇನೆ, ನಾನಾ ರಾಜ್ಯಗಳಲ್ಲಿ ಜೀವಿಸಿದ್ದೇನೆ, ಲಂಚದ ಅನೇಕ ಸನ್ನಿವೇಶಗಳನ್ನು ದಿಟ್ಟವಾಗಿ ಎದುರಿಸಿದ್ದೇನೆ, ಎದುರಿಸಿ ಲಂಚವಿಲ್ಲದೆ ಕೆಲಸ ಮಾಡಿಸಿಕೊಳ್ಳುವಲ್ಲಿಯೂ ಮತ್ತು ಲಂಚದ ವಿರುದ್ಧ ಸೆಣಸಾಡುವಲ್ಲಿಯೂ ಯಶಸ್ವಿಯಾಗಿದ್ದೇನೆ.

ಸಮಯ, ಬುದ್ಧಿ, ದೇಹಾರೋಗ್ಯ ಮತ್ತು ಒಂದಷ್ಟು ಹಣ ವ್ಯಯವಾಗಿದೆ, ನಿಜ. ಕೆಲ ಕಷ್ಟ ನಷ್ಟಗಳೂ ಆಗಿವೆ. ಆದರೆ, ಈ ಹೊತ್ತು ಸಂತೃಪ್ತಿಯ ಜೀವನ ನನ್ನದಾಗಿದೆ; ಸಾರ್ಥಕ ಬಾಳು ನನ್ನದೆಂಬ ಅಭಿಮಾನ ನನಗಿದೆ. ಈ ಸಂತೋಷವು ಮಿಕ್ಕೆಲ್ಲ ಸಂತೋಷಗಳಿಗಿಂತಲೂ ಬಹಳ ದೊಡ್ಡದು. ಜೊತೆಗೆ, ಲಂಚವನ್ನು ತೆಗೆದುಕೊಳ್ಳದೇ ಮತ್ತು ಕೊಡದೇ ಇದ್ದುದರಿಂದ ನನಗೇನೂ ಹೊಟ್ಟೆಬಟ್ಟೆಗೆ ಕಡಿಮೆಯಾಗಲಿಲ್ಲ; ಆಯುಷ್ಯ ಕುಂದಲಿಲ್ಲ. ಉಪಭೋಗ ಕಡಿಮೆಯಾಗಿರಬಹುದು, ಆದರೆ, ಜೀವನಸಂತೃಪ್ತಿ ಮತ್ತು ಸಂತಸ ನನ್ನದಾಗಿದೆಯಲ್ಲಾ!

ನಾನೊಬ್ಬ ಶ್ರೀಸಾಮಾನ್ಯ. ನನಗೆ ಸಾಧ್ಯವಾದದ್ದು ಈ ನಾಡಿನ ಎಲ್ಲಾ ಜನರಿಗೂ ಖಂಡಿತ ಸಾಧ್ಯ. ಮನಸ್ಸನ್ನು ಸಿದ್ಧಗೊಳಿಸಿಕೊಳ್ಳಬೇಕು, ಅಷ್ಟೆ. ’ಜೀವನದ ಅರ್ಥ’ ಮತ್ತು ’ಪರಮಾರ್ಥ’ ಇವುಗಳ ಚಿಂತನೆ ಉಂಟಾದಲ್ಲಿ ಮನಸ್ಸು ಸಿದ್ಧವಾಗುತ್ತದೆ. ಜೀವನವು ಕೊನೆಗಾಲದಲ್ಲಿ ಸಂತೃಪ್ತಿ ನೀಡಬೇಕೆಂದರೆ ನಾವು ಇಂದೇ ’ಜೀವನದ ಅರ್ಥ’ ಮತ್ತು ’ಪರಮಾರ್ಥ’ ಇವುಗಳ ಚಿಂತನೆ ಮಾಡಬೇಕಾದ್ದು ಅವಶ್ಯ. ಇಲ್ಲದಿದ್ದಲ್ಲಿ, ಕೊನೆಗಾಲದಲ್ಲಿ ಮನಸ್ಸು ವಿಹ್ವಲಗೊಳ್ಳುತ್ತದೆ; ಬಾಳು ವ್ಯರ್ಥವಾಯಿತೆಂಬ ಕಡು ಸಂಕಟ ಆವರಿಸುತ್ತದೆ.

ಇಷ್ಟಕ್ಕೂ, ಲಂಚ ನೀಡದಿರುವುದರಿಂದ ಹಾಗೂ ಪಡೆಯದಿರುವುದರಿಂದ ತತ್ಕಾಲಕ್ಕೆ ನಷ್ಟವೆಂದು ತೋರಿದರೂ ಕಾಲಾಂತರದಲ್ಲಿ ಮತ್ತು ದೀರ್ಘಕಾಲೀನವಾಗಿ ಏನೂ ನಷ್ಟವಿಲ್ಲ, ಮಾತ್ರವಲ್ಲ, ಲಾಭವೇ. ನನ್ನ ಶುದ್ಧ ನಡೆಯಿಂದ ನನ್ನ ಮಗ, ಮೊಮ್ಮಗ, ಮಾತ್ರವಲ್ಲ, ಕಾಲಾಂತರದಲ್ಲಿ ನಾನೂ ಲಾಭಾನುಭವಿಯೇ ಆಗುವುದು ನಿಶ್ಚಿತ. ಅಲ್ಲಿಯತನಕ ಸಹನೆ ಮತ್ತು ವಿಶ್ವಾಸ ಬೇಕು, ಅಷ್ಟೆ. ವ್ಯಕ್ತಿಯ ಮಟ್ಟಿಗಷ್ಟೇ ಅಲ್ಲ, ಸಮಾಜದ ಮಟ್ಟಿಗೂ ಈ ಮಾತು ಅನ್ವಯ.

ಈ ಸಂದರ್ಭದಲ್ಲಿ ನಾನು ಲೋಕಾಯುಕ್ತದ ಉಲ್ಲೇಖ ಮಾಡಬಯಸುತ್ತೇನೆ. ಲೋಕಾಯುಕ್ತಕ್ಕೆ ಹಲವು ಅಧಿಕಾರ ಮತ್ತು ಜವಾಬ್ದಾರಿಗಳಿವೆ. ಪ್ರಜೆಗಳಾದ ನಾವು ಆ ಬಗ್ಗೆ ತಿಳಿದುಕೊಂಡು ಲೋಕಾಯುಕ್ತವನ್ನು ಬಳಸಿಕೊಂಡು ನ್ಯಾಯ ದೊರಕಿಸಿಕೊಳ್ಳುವ ಮತ್ತು ಅನ್ಯಾಯವನ್ನು ಮಟ್ಟಹಾಕುವ ಕೆಲಸವನ್ನು ಮಾಡಬೇಕಾದ್ದು (ಸ್ವಪ್ರಯೋಜನದ ದೃಷ್ಟಿಯಿಂದಲೇ) ಅಪೇಕ್ಷಣೀಯ, ಮಾತ್ರವಲ್ಲ, ಸಾಮಾಜಿಕರಾದ ನಮ್ಮ ಆದ್ಯ ಕರ್ತವ್ಯ ಕೂಡ. ಈ ಸಮಾಜವು ನನಗಾಗಿ ಮತ್ತು ನನ್ನಿಂದಾಗಿ; (ನಾನೂ ಈ ಸಮಾಜದ್ದೇ ಒಂದು ಭಾಗ); ಅಲ್ಲವೆ?

ಭ್ರಷ್ಟಾಚಾರ ನಿರ್ಮೂಲನದ ನಿಟ್ಟಿನಲ್ಲಿ ಲೋಕಾಯುಕ್ತಕ್ಕೆ ಸ್ವಪ್ರೇರಣೆಯಿಂದ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನಾಗಲೀ ಕಾನೂನಿನ ಪರಮಾಧಿಕಾರವನ್ನಾಗಲೀ ಈ ನಮ್ಮ ಕಡುಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೊಟ್ಟಾರೆಯೇ? ’ಕೊಟ್ಟಂತಿರಬೇಕು, ಕೊಟ್ಟಿರಬಾರದು’; ’ಕೊಡುತ್ತೇವೆಂದು ಹೇಳುತ್ತಿರಬೇಕು, ಕೊಡಬಾರದು’. ಇಂಥ ’ಮಾಯಾಮಾರ್ಗ’ ನಮ್ಮ ಸರ್ಕಾರಗಳದ್ದು! ಪರಮಾಧಿಕಾರ ಕೊಡುವ ಪ್ರಾಮಾಣಿಕತೆ ನಮ್ಮ ಸರ್ಕಾರಗಳಿಗೆ ಸರ್ವಥಾ ಇಲ್ಲ. ಇಂಥ ಪ್ರಾಮಾಣಿಕತೆಯನ್ನೇನಾದರೂ ನಮ್ಮ ಸರ್ಕಾರಗಳು ತೋರಿಬಿಟ್ಟರೆ ಮರುದಿನದಿಂದ ಲೋಕಾಯುಕ್ತದ ಅಗತ್ಯವೇ ಇರುವುದಿಲ್ಲ!

ಇದೇನೇ ಇರಲಿ, ಪ್ರಜೆಗಳಾದ ನಾವೇ, ಮೇಲೆ ವಿವರಿಸಿರುವಂತೆ ನಮ್ಮ ಕೆಲಸ, ಅಲ್ಲ, ಕರ್ತವ್ಯ ಮಾಡೋಣ.

ಭ್ರಷ್ಟಾಚಾರಮುಕ್ತ ಸಮಾಜದ ಅವಶ್ಯಕತೆಯ ಬಗ್ಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೈತಿಕ-ಆಧ್ಯಾತ್ಮಿಕ ನೆಲೆಯಲ್ಲಿ ಅರಿವು ಮೂಡಿಸುವ ನಮ್ಮ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ಕಾರ್ಯ ಅತ್ಯಂತ ಉಪಯುಕ್ತವಾದುದು. ನನ್ನ ಮಿತಿಯಲ್ಲಿ ನಾನೂ ಸ್ವಯಂಪ್ರೇರಣೆಯಿಂದ ಈ ಕಾರ್ಯವನ್ನು ವರ್ಷಗಳಿಂದಲೂ ಮಾಡಿಕೊಂಡುಬಂದಿದ್ದೇನೆ. ನಾಳಿನ ಪರಿಶುದ್ಧ ಸಮಾಜವನ್ನು ಮತ್ತು ತತ್ಫಲವಾದ ಸುಖೀ ಸಮಾಜವನ್ನು ನಿರ್ಮಿಸುವ ಕಾರ್ಯವಿದು. ಪರಿಶುದ್ಧ ಹಾಗೂ ಸುಖೀ ಸಮಾಜದ ನಿರ್ಮಾಣದ ನಿಟ್ಟಿನಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಮತ್ತು ಉಪಲೋಕಾಯುಕ್ತ ಪತ್ರಿ ಬಸವನಗೌಡ ಇವರ ಪ್ರಯತ್ನಗಳು ನಿಜಕ್ಕೂ ಪ್ರಶಂಸಾರ್ಹ.

=====================================================================

(೨೪ ಅಕ್ಟೋಬರ್ ೨೦೦೮ರ ’ಉದಯವಾಣಿ’ಯಲ್ಲಿ ಪ್ರಕಟಿತ ಬರಹ)

ಗುಡ್ಡಕ್ಕೆ ಮಣ್ಣು ಹೊತ್ತಂತೆ!
-------------------------

ಈಚೆಗೆ ನಾನು ಮಧ್ಯ ಕರ್ನಾಟಕದ ನನ್ನ ಸ್ವಂತ ಊರಿಗೆ ಹೋಗಿದ್ದೆ. ನನ್ನ ಬಂಧುವಿನೊಡನೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ. ಆಗ ಎದುರಾದ ಹಿರಿಯ ಗಣ್ಯ ವ್ಯಕ್ತಿಯೊಬ್ಬರನ್ನು ನನ್ನ ಬಂಧು ನನಗೆ ಪರಿಚಯಿಸಿದರು. ಸೌಮ್ಯ ಕಳೆಯ ಆ ಹಿರಿಯರು ತುಂಬ ಗೌರವದಿಂದ ನನ್ನೊಡನೆ ಮಾತನಾಡಿದರು. ನನ್ನ ಬಂಧುವೂ ಆ ವ್ಯಕ್ತಿಗೆ ತುಂಬ ಗೌರವ ಕೊಟ್ಟು ಮಾತನಾಡಿಸಿದರು. ಅದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಒಂದಿಬ್ಬರು ಕೂಡ ನಿಂತು ಆ ಹಿರಿಯ ವ್ಯಕ್ತಿಗೆ ವಂದಿಸಿ ಮುನ್ನಡೆದರು. ಆ ವ್ಯಕ್ತಿ ಆಚೆ ಹೋದಮೇಲೆ ನನ್ನ ಬಂಧು ನನಗೆ ಹೇಳಿದರು, ’ಕೆಲ ತಿಂಗಳ ಕೆಳಗೆ ಇಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿತ್ತಲ್ಲಾ, ಭಾರೀ ತಿಮಿಂಗಿಲ, ಸಾರಿಗೆ ಇಲಾಖೆ ಅಧಿಕಾರಿ, ಇವರೇ. ಕೋಟಿಗಟ್ಟಲೆ ಮೊತ್ತದ ಅಕ್ರಮ ಆಸ್ತಿ ಪತ್ತೆಯಾದರೂ ಇವರ ಕೂದಲೂ ಕೊಂಕಿಲ್ಲ!’

ಇದು ನಮ್ಮ ವ್ಯವಸ್ಥೆ!

ಲೋಕಾಯುಕ್ತ ದಾಳಿಯನ್ನು ನಾವು ಟಿವಿಯಲ್ಲಿ ನೋಡಿ, ಪತ್ರಿಕೆಗಳಲ್ಲಿ ಓದಿ ಖುಷಿಪಡುತ್ತೇವೆ. ಆದರೆ ಭ್ರಷ್ಟ ಸರ್ಕಾರಗಳು ನಮ್ಮನ್ನು ವಂಚಿಸುತ್ತಲೇ ಇವೆ! ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡದಿರುವ ಮೂಲಕ ಸರ್ಕಾರಗಳು ಲೋಕಾಯುಕ್ತದ ಪರಿಶ್ರಮವೆಲ್ಲ ಗುಡ್ಡಕ್ಕೆ ಮಣ್ಣು ಹೊತ್ತಂತಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ!

=====================================================================

(೧೩ ಸೆಪ್ಟೆಂಬರ್ ೨೦೦೯ರ ’ಕರ್ಮವೀರ’ದಲ್ಲಿ ಪ್ರಕಟಿತ ಲೇಖನ)

ನಮಗೆ ಧಿಕ್ಕಾರವಿರಲಿ!
----------------------

ಭಾರೀ ಬಂಗಲೆ. ಅದರಲ್ಲಿ ವಾಸವಾಗಿರುವವರಿಗೆ ತಲೆಗೊಂದೊಂದರಂತೆ ಕಾರು, ಕಾಲಿಗೊಬ್ಬೊಬ್ಬ ಆಳು. ಆ ಬಂಗಲೆಯ ನಾಯಿಗೂ ರಾಜೋಪಚಾರ! ಷಾಪಿಂಗ್‌ಗೆ ಹೋದರೆ ಈ ಬಂಗ್ಲೆವಾಸಿಗಳಿಗೆ ರಾಜಾತಿಥ್ಯ! ಅನೇಕ ಸಂಘಸಂಸ್ಥೆಗಳಲ್ಲಿ ಗೌರವ ಪದಾಧಿಕಾರಿಗಳಾಗಿರುವ ಇವರು ಸಮಾಜದ ಗಣ್ಯ ವ್ಯಕ್ತಿಗಳು.

ಇವರ ವೃತ್ತಿ ದಲ್ಲಾಳಿ ಕೆಲಸ. ಯಾರೋ ಉತ್ಪಾದಿಸಿದ್ದನ್ನು ಇನ್ನಾರಿಗೋ ದಾಟಿಸಿ ಅದಕ್ಕಾಗಿ ಕಮಿಷನ್ ಬಾಚುವ ಮಧ್ಯವರ್ತಿ ಇವರು. ಅತ್ತ ಉತ್ಪಾದಕರನ್ನೂ ಇತ್ತ ಗ್ರಾಹಕರನ್ನೂ ಸುಲಿದು ತಾವು ಸಂಪತ್ತು ಕೂಡಿಹಾಕುತ್ತಿದ್ದಾರೆ. ಇವರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿಲ್ಲ. ವೃತ್ತಿ ತೆರಿಗೆ, ಮಾರಾಟ ತೆರಿಗೆ, ಆದಾಯ ತೆರಿಗೆ, ಸಂಪತ್ತು ತೆರಿಗೆ ಎಲ್ಲವನ್ನೂ ವಂಚಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಲಂಚ ಕೊಟ್ಟು ’ಅಡ್ಜಸ್ಟ್’ ಮಾಡುತ್ತಿದ್ದಾರೆ. ಇದೆಲ್ಲ ನಮಗೆ ಗೊತ್ತು.

ಆದರೂ ನಾವು ಇವರನ್ನು ದೊಡ್ಡಮನುಷ್ಯರೆಂದು ಪರಿಗಣಿಸಿ ವಿಶೇಷ ಮನ್ನಣೆ ನೀಡುತ್ತೇವೆ! ಇವರ ಮುಖ ಕಂಡರೆ ಹಲ್ಲುಕಿರಿಯುತ್ತೇವೆ! ಇವರ ನಾಯಿಯನ್ನೂ ಬೆರಗುಗಣ್ಣಿನಿಂದ ನೋಡುತ್ತೇವೆ!

*೦*

ಸರ್ಕಾರಿ ಕಚೇರಿ. ಹವಾನಿಯಂತ್ರಿತ ಕೊಠಡಿಯೊಳಗೆ ಉನ್ನತಾಧಿಕಾರಿ. ನಗರದ ಸಕಲ ಉಸ್ತುವಾರಿ ಆತನ ಹೊಣೆ. ಆತನನ್ನು ಕಾಣಬೇಕೆಂದರೆ ನಾವು ಕೊಠಡಿಯ ಹೊರಗೆ ಗಂಟೆಗಟ್ಟಲೆ ಕಾಯಬೇಕು. ಆತ ನಮ್ಮೊಡನೆ ಅರ್ಧ ನಿಮಿಷ ಮಾತಾಡಿದರೆ ಅದು ನಮ್ಮ ಸೌಭಾಗ್ಯ!

ಕೋಟಿಗಟ್ಟಲೆಯ ಆಸ್ತಿಯನ್ನು ಈ ಅಧಿಕಾರಿ ಮಾಡಿಕೊಂಡಿದ್ದಾನೆ. ಇವನ ಸಂಬಳ ಇವನ ಮನೆಯ ಬೆಕ್ಕು-ನಾಯಿ ಸಾಕಲಿಕ್ಕೂ ಸಾಲದು! (ಅಂಥ ರಾಜಭೋಗ ಅವುಗಳಿಗೆ!) ಇವನ ಆಸ್ತಿಸಂಚಯ, ಸಂಸಾರದ ಅಯ್ಯಾಷ್ ಎಲ್ಲ ನಡೆದಿರುವುದು ಗಿಂಬಳದ ಹಣದಿಂದ! ಅತ್ತ ಸರ್ಕಾರವು ಜನೋಪಯೋಗಿ ಯೋಜನೆಗಳಿಗೆ ಬಿಡುಗಡೆ ಮಾಡಿದ ಹಣವನ್ನೂ ಈತ ತಿನ್ನುತ್ತಾನೆ, ಇತ್ತ ಜನರಿಂದಲೂ ಎಂಜಲು ತಿನ್ನುತ್ತಾನೆ.

ಈತನ ಉಸ್ತುವಾರಿಯಲ್ಲಿ ನಗರವೆಲ್ಲ ಗಬ್ಬೆದ್ದುಹೋಗಿದೆ! ಎಲ್ಲಿ ನೋಡಿದರೂ ಕಸದ ರಾಶಿ! ಊರಿಡೀ ಕೊಳಚೆ ಗುಂಡಿ! ವಿಪರೀತ ಸೊಳ್ಳೆ! ರೋಗರುಜಿನ ಯಥೇಚ್ಛ! ಕೆರೆ, ಉದ್ಯಾನ, ಕೊನೆಗೆ ಪಾದಚಾರಿ ಮಾರ್ಗ ಕೂಡ ಭೂಗಳ್ಳರ ಮತ್ತು ಅತಿಕ್ರಮಣಕಾರರ ಪಾಲು! ಇವೆಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯಗಳೇ.

ಆದರೂ ನಾವು ಈ ಅಧಿಕಾರಿಗೆ ಸಲಾಂ ಹೊಡೆಯುತ್ತೇವೆ! ಈತನೆದುರು ಹಲ್ಲು ಗಿಂಜಿಕೊಂಡು ನಿಲ್ಲುತ್ತೇವೆ! (ಹಲವರು ದಕ್ಷಿಣೆಯನ್ನೂ ಸಲ್ಲಿಸುತ್ತೇವೆ!) ಈತನ ಮಕ್ಕಳು-ಮರಿಗಳಿಗೆ, ಕೊನೆಗೆ ಈತನ ಮನೆಯ ನಾಯಿಗೂ ಎಲ್ಲಿಲ್ಲದ ಗೌರವ ಕೊಡುತ್ತೇವೆ!

*೦*

ಆರಕ್ಷಕ ಠಾಣೆ. ಅಲ್ಲಿರಬೇಕಾದವರು ಆರಕ್ಷಕರು. ಆದರೆ ಅಲ್ಲಿರುವವರು ಆ ರಾಕ್ಷಸರು! ನಮ್ಮ ರಕ್ಷಣೆಗೆಂದು ಸಂಬಳ ಪಡೆಯುವ ಅವರು ನಮ್ಮ ದುಡಿಮೆಯನ್ನೂ ಭಕ್ಷಿಸಿ ನಮ್ಮನ್ನೇ ಅನ್ಯಾಯವಾಗಿ ಶಿಕ್ಷಿಸುತ್ತಾರೆ! ಅವರನ್ನು ಕಂಡರೆ ಸುಭದ್ರತೆಯ ಭಾವ ಹೊಂದಬೇಕಾದ ನಾವು ಅವರನ್ನು ಕಂಡರೆ ಹೆದರಿ ಸಾಯುತ್ತೇವೆ!

*೦*

ಇನ್ನು, ವಿಧಾನ ಸೌಧ. ನಮ್ಮ ಸೇವಕರು ಅಲ್ಲಿದ್ದಾರೆ. ನಮ್ಮ ಸೇವೆ ಮಾಡಲೆಂದೇ ಕೋಟಿಗಟ್ಟಲೆ ಹಣ ಖರ್ಚುಮಾಡಿಕೊಂಡು ಅಲ್ಲಿ ಹೋಗಿ ಕೂತಿದ್ದಾರೆ! ಎಂಥ ಮಹಾತ್ಮರು!

ಮೇಲೆ ಹೇಳಿದ ಎಲ್ಲ ಅನ್ಯಾಯಗಳಿಗೂ ಈ ಮಹಾತ್ಮರೇ ಕಾರಣರು! ಎಲ್ಲ ಅವ್ಯವಸ್ಥೆಗಳಿಗೂ ಇವರೇ ಮೂಲ! ಮೇಲಾಗಿ, ಎಲ್ಲರಿಗಿಂತ ದೊಡ್ಡ ನುಂಗಪ್ಪಗಳು ಇವರು! ಇಡೀ ನಾಡಿಗೇ ಇವರ ಗುಣ ಗೊತ್ತು. ಪಬ್ಲಿಕ್ಕಾಗಿಯೇ ನಾವು ಇವರ ಬಗ್ಗೆ ಆಡಿಕೊಳ್ಳುತ್ತೇವೆ.

ಆದಾಗ್ಗ್ಯೂ, ಎದುರು ಸಿಕ್ಕರೆಂದರೆ ಇವರು ನಮಗೆ ದೇವರ ಸಮಾನ! ದೇವರಿಗಿಂತ ಮಿಗಿಲು! ಬಗ್ಗಿ ಡೊಗ್ಗಿ ಸಲಾಮು ಹೊಡೆಯುತ್ತೇವೆ! ಇವರು ಕಾಲಲ್ಲಿ ತೋರಿಸಿದ್ದನ್ನು ನಾವು ತಲೆಯಮೇಲೆ ಇಟ್ಟುಕೊಳ್ಳುತ್ತೇವೆ!

*೦*

ಛಿ! ಎಂಥ ನರಸತ್ತವರು ನಾವು! ನಮಗೆ ಧಿಕ್ಕಾರವಿರಲಿ!

=====================================================================

(ಸೆಪ್ಟೆಂಬರ್ ೨೦೦೮ರ ’ಪ್ರಜಾವಾಣಿ’ ’ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟಿತ ಬರಹ)

ಅಂಡು ಸುಟ್ಟ ಬೆಕ್ಕು!
-------------------

ಸರ್ಕಾರಿ ಅಧಿಕಾರಿಗಳ ಕಾರ್ಯದಲ್ಲಿ ಜನಪ್ರತಿನಿಧಿಗಳು ಮೂಗುತೂರಿಸಬಾರದೆಂದು ವಾಚಕರೋರ್ವರು ಬರೆದ ಪತ್ರ ಓದಿದಾಗ ನನಗೆ ದಶಕಗಳ ಕೆಳಗಿನ ಘಟನೆಯೊಂದು ನೆನಪಿಗೆ ಬಂತು.

ನಾನಾಗ ಆಂಧ್ರಪ್ರದೇಶದ ಆದೋನಿಯಲ್ಲಿದ್ದೆ. ಅಲ್ಲಿಯ ಶಾಸಕರು ಒಂದು ದಿನ ಸ್ಥಳೀಯ ಆರಕ್ಷಕ ಠಾಣೆಗೆ ಹೋಗಿ, ಬಂಧನಕ್ಕೊಳಗಾದ ಆರೋಪಿಯೊಬ್ಬನನ್ನು ಬಿಟ್ಟುಬಿಡುವಂತೆ ಪೋಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ಹೇಳಿದರು. ಅದಕ್ಕಾತ ಸಕಲ ಗೌರವದೊಂದಿಗೆ ಉತ್ತರಿಸಿದ್ದು ಹೀಗೆ:

’ಅಯ್ಯಾ, ತಮಗೆ ಮಾತನಾಡಲು ಅಷ್ಟು ದೊಡ್ಡ ವಿಧಾನಸಭೆ ಇದೆ. ತಮ್ಮ ಮಾತನ್ನು ಆಲಿಸಲು ಮುಖ್ಯಮಂತ್ರಿ ಸಮೇತ ಇಡೀ ಮಂತ್ರಿಮಂಡಳವೇ ಅಲ್ಲಿರುತ್ತದೆ. ಅದೆಲ್ಲ ಬಿಟ್ಟು ಒಂದು ಚಿಕ್ಕ ಪೋಲೀಸ್ ಸ್ಟೇಷನ್‌ಗೆ, ಒಬ್ಬ ಯಃಕಶ್ಚಿತ್ ಸಬ್ ಇನ್‌ಸ್ಪೆಕ್ಟರ್ ಬಳಿ ಮಾತಾಡಲಿಕ್ಕೆ ಯಾಕೆ ಬಂದಿರಿ ಅಯ್ಯಾ, ಇದು ತಮ್ಮ ಘನತೆಗೆ ಕಮ್ಮಿ ಅಯ್ಯಾ, ದಯವಿಟ್ಟು ಇಲ್ಲಿಂದ ದಯಮಾಡಿಸಿ.’

ಆ ಶಾಸಕರು ಅಂಡು ಸುಟ್ಟ ಬೆಕ್ಕಿನ ಮುಖ ಮಾಡಿಕೊಂಡು ಅಲ್ಲಿಂದೆದ್ದು ಹೊರನಡೆದರು!

=====================================================================

(ಮೇ ೨೦೦೮ರ ’ಕರ್ಮವೀರ’ದಲ್ಲಿ ಪ್ರಕಟಿತ ಲೇಖನದ ಆಯ್ದ ಭಾಗ)

ಮತದಾರನೊಬ್ಬನ ಮನದಾಳದ ಮಾತು
---------------------------------------

ನಮ್ಮನ್ನಾಳುವ ಗೌರವಾನ್ವಿತ ನೇತಾರರೇ,

ಥೂ! ನಿಮ್ಮ ಜನ್ಮಕ್ಕಿಷ್ಟು......!
ಎಂಥ ಜನ್ಮರೀ ನಿಮ್ದು, ಸುಡುಗಾಡು ಜನ್ಮ!

ಹಣ, ಹಣ, ಹಣ, ನಿಮ್ಮ ಹೆಣ! ಏನು ತಗೊಂಡ್ಹೋಗ್ತೀರ್ರೀ ಹೋಗೋವಾಗ? ಇದ್ದಾಗಂತೂ ಮಾನ ಇಲ್ಲ, ಮರ್ಯಾದೆ ಇಲ್ಲ, ದೋಚಿದ ಸಂಪತ್ತು ಅನುಭವಿಸೋ ಯೋಗನಾದ್ರೂ ಇದೆಯಾ, ಅದೂ ಇಲ್ಲ, ಮುದಿಯಾಗೋವರೆಗೂ ಕೊಳಕು ರಾಜಕಾರಣದ ಟೆನ್ಷನ್ನು, ಮುದುಕರಾಗ್ತಲೇ ಕಿತ್ತು ತಿನ್ನೋ ಕಾಯಿಲೆಗಳು, ಒಂದು ವೇಳೆ ದೇಹಕ್ಕೆ ಅಂಥಾ ಏನೂ ಕಾಯಿಲೆ ಇಲ್ಲದಿದ್ದರೂ ಮನಸ್ಸು ಮಾತ್ರ ಚಕಣಾಚೂರಾಗಿ ನಿಮ್ಮ ತಲೆಗೂದಲನ್ನೇ ನೀವು ಕಿತ್ತುಕೋಬೇಕು, ಹಾಗಾಗದೇ ಇದ್ದರೆ ಕೇಳಿ. ವರ್ಷಗಟ್ಟಲೆ ಕೊಳೆತಿರುತ್ತಲ್ಲಾ ತಲೆ, ಕೊನೆಗಾಲದಲ್ಲಿ ಅದ್ಹೇಗೆ ಆರೋಗ್ಯಕರವಾಗಿರೋಕೆ ಸಾಧ್ಯ? ಭಾಳಾ ಮಂದಿ ನಿಮ್ಮಂಥೋರ್‍ನ ಬಲು ಹತ್ತಿರದಿಂದ ನೋಡಿದ್ದೀನ್ರೀ. ನಿಜಲಿಂಗಪ್ಪ, ಕಾಮರಾಜ್, ಹಳ್ಳಿಕೇರಿ ಗುದ್ಲೆಪ್ಪ, ಇಂಥ ಯೋಗ್ಯರಿಂದ ಮೊದಲ್ಗೊಂಡು ಇಂದಿನ ನಿಮ್ಮಂಥ ಅಯೋಗ್ಯರವರೆಗೆ ಅದೆಷ್ಟೋ ಮಂದಿ ರಾಜಕಾರಣಿಗಳನ್ನು ಬಲು ಹತ್ತಿರದಿಂದ ನೋಡಿ, ಒಡನಾಡಿ, ಹಲವರನ್ನು ಮೇಲಕ್ಕೆತ್ತಿ (ನಂತರ ಪರಿತಪಿಸಿ), ನಿಮ್ಮಂಥವರ ಆದಿ-ಅಂತ್ಯ ಎಲ್ಲಾ ಕಂಡು ತಿಳಕೊಂಡೇ ಹೇಳುತ್ತಿದ್ದೇನೆ, ನಿಮ್ಮ ಪೈಕಿ ಯೋಗ್ಯರಾಗಿರುವ ಎಲ್ಲೋ ಕೆಲವರನ್ನು ಹೊರತುಪಡಿಸಿದರೆ ಪಕ್ಕಾ ಅಯೋಗ್ಯರಾದ ನಿಮಗ್ಯಾರಿಗೂ ಸುಖ ಜೀವನವಿಲ್ಲ, ಸುಖ ಮರಣವಿಲ್ಲ. ಮಾಡಿದ್ದುಣ್ಣೋ ಮಹರಾಯ. ನೀವು ಮಾಡಿದ್ದೆಂದರೆ ಸಂಪತ್ತಲ್ಲ. ಅದು ನೀವು ದೋಚಿದ್ದು. ನೀವು ಮಾಡಿದ್ದು ಪಾಪ. ಅದನ್ನು ನೀವು ಉಣ್ಣಲೇಬೇಕು. ಮೇಲಾಗಿ, ಇದು ಕಲಿಕಾಲ; ಈ ಜನ್ಮದಲ್ಲಿ ಮಾಡಿದ್ದನ್ನು ಈ ಜನ್ಮದಲ್ಲೇ ಉಂಡುಬಿಡಬೇಕು. ನೀವು ಮಾಡಿದ ಪಾಪಕ್ಕೆ, ಪಾಪ, ನಿಮ್ಮ ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಉಣ್ಣಬೇಕು! ಹಿರಿಯ ನಾಗರ ನಂಜು ಮರಿಯ ನಾಗರ ಪಾಲು, ತಂದೆ ಮಾಡಿದ ಪಾಪ ಮಗನ ಪಾಲು!

ಹೀಗಿದ್ದೂ ನಿಮ್ಮದೆಂಥಾ ಭಂಡ ಧೈರ್ಯಾರೀ, ದುಡ್ಡು, ದುಡ್ಡು ಅಂತ ಸಾಯ್ತೀರಿ! ಅಧಿಕಾರಕ್ಕೆ ಬರೋದಕ್ಕಾಗಿ ಮಾಡಬಾರದ್ದನ್ನೆಲ್ಲಾ ಮಾಡ್ತೀರಿ, ಅಧಿಕಾರಕ್ಕೆ ಬಂದ್ಮೇಲೆ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋ ಬದಲು ಅವರನ್ನು ಜೊತೆಗೆ ಸೇರಿಸ್ಕೊಂಡು ನೀವು ಮಹಾಭ್ರಷ್ಟರಾಗ್ತೀರಿ. ನಿಮಗೆ ದೇಶ ಬೇಡ, ನಾಡು ಬೇಡ, ನುಡಿ ಬೇಡ, ಜನರ ಸುಖ ದುಃಖ ಬೇಡವೇ ಬೇಡ, ಬೇಕಾದ್ದು ಕುರ್ಚಿ, ಮತ್ತೆ ದುಡ್ಡು, ದುಡ್ಡು, ದುಡ್ಡು! ಈಪಾಟಿ ದುಡ್ಡು ಕೂಡಿಡೋ ನಿಮಗಿಂತ ಎರಡು ಹೊತ್ತು ಗಂಜಿ ತಿಂದು ಬದುಕೋ ಬಡವ ನೆಮ್ಮದಿಯಿಂದ ಇರ್‍ತಾನೆ ಗೊತ್ತೇನ್ರೀ. ಜೊತೆಗೆ ಅವ್ನು ತನ್ನ ಅಭಿಮಾನಾನೂ ಕಾಪಾಡಿಕೊಳ್ತಾನೆ. ನೀವೋ, ನಾಚಿಕೆ, ಮಾನ, ಮರ್ಯಾದೆ ಮೂರೂ ಬಿಟ್ಟೇ ತಾನೆ ರಾಜಕಾರಣದ ಫೀಲ್ಡಿಗೆ ಬರೋದು? ಆದರೆ, ಆದರಣೀಯ ರಾಜಕಾರಣಿಗಳೇ, ಮೂರೂ ಬಿಟ್ಟು ಬರೋದು ಅನಿವಾರ್ಯವೇನೂ ಅಲ್ಲವಷ್ಟೆ? ಆದಾಗ್ಗ್ಯೂ ನೀವು.......! ಥೂ!

ಮೂರೂ ಬಿಟ್ಟ ನಿಮಗಾದರೂ ಅದೆಂಥಾ ಅಧಿಕಾರದಾಸೇರೀ! ನಿಮ್ಮ ಮೇಲೆ ಜನರಿಗೆ ಗೌರವವೇ ಇಲ್ಲವೆಂದಮೇಲೆ ನಿಮಗೆ ಅಧಿಕಾರ ಅದ್ಯಾವ ಘನತೆಯನ್ನು ತಂದುಕೊಡುತ್ತೇರೀ, ನಿಮ್ಮ ಪಿಂಡ! ನಿಮ್ಮ ಕುರ್ಚಿಗೋ ಐಶ್ವರ್ಯಕ್ಕೋ ಹೆದರಿ ಯಾರಾದರೂ ನಿಮಗೆ ಸಲಾಂ ಹೊಡೆದರೆ, ತಮ್ಮ ಸ್ವಾರ್ಥಕ್ಕಾಗಿ ನಿಮ್ಮ ಕಾಲಿಗೆ ಬಿದ್ದರೆ, ನಿಮ್ಮದು ನಾಟಕ ಅಂತ ಗೊತ್ತಿದ್ದೇ ಅದಕ್ಕೆ ಕೃತ್ರಿಮ ನಗೆ ಬೀರಿದರೆ ಅದರಿಂದ ನಿಮಗೆ ಗೌರವ ದೊರೆತಂತೇನು? ಇದು ನಿಮಗೆ ಗೊತ್ತಿಲ್ಲವೇನು? ಗೊತ್ತಿದ್ದೂ ಅಧಿಕಾರಕ್ಕಾಗಿ ಒದ್ದಾಡ್ತೀರಲ್ರೀ, ನಿಮ್ಮ ತಲೇಲಿ ಏನಿದೆ? ಅಧಿಕಾರಕ್ಕಾಗಿ ’ಬಿ’ ಫಾರಂನಲ್ಲಿನ ಹೆಸರನ್ನೇ ಬದಲಾಯಿಸ್ತೀರೀ! (ಕೊನೆಗೆ ಇಂಗು ತಿಂದ ಮಂಗ ಆಗ್ತೀರಿ!)

ಅಧಿಕಾರಕ್ಕಾಗಿ ಏನೆಲ್ಲಾ ಮಾಡ್ತೀರಿ! ದಿನಕ್ಕೆರಡು ಪಕ್ಷ ಬದಲಾಯಿಸ್ತೀರಿ! ಇವತ್ತು ನೀವೇ ಬೈದವರ ಕಾಲನ್ನು ನಾಳೆ ಹೋಗಿ ಗಟ್ಟಿಯಾಗಿ ಹಿಡ್ಕೋತೀರಿ! ಮೊಮ್ಮಕ್ಕಳಿಗೆ ಟಿಕೆಟ್ ಕೊಡದಿದ್ದರೆ ಪಕ್ಷ ಬಿಡ್ತೀರಿ, ರಾಯಭಾರೀನೋ ರಾಜ್ಯಪಾಲನೋ ಮತ್ತೇನೋ ಒಂದು ಸುಡುಗಾಡು ಮಾಡ್ತೀನಿ ಅಂದಾಕ್ಷಣ ಮತ್ತೆ ಪಕ್ಷಕ್ಕೆ ಅಂಟಿಕೊಳ್ತೀರಿ! ಜನರು (ನಿಜದಲ್ಲಿ) ಒಂದಿಷ್ಟೂ ಗೌರವ ನೀಡದ ಆ ನಿಮ್ಮ ಅಧಿಕಾರ ಯಾವ ಖರ್ಮಕ್ಕೆ?

ಇಂಥಾ ನೀವು ಗಾಂಧೀಜಿಯ ಗುಣಗಾನ ಮಾಡ್ತೀರಿ! ಆ ಮುದ್ಕ ಏನಾದ್ರೂ ಬಂದ್ಗಿಂದ ಅಂತಂದ್ರೆ ಅಹಿಂಸೆ, ಅಸ್ತೇಯ ಎರಡೂ ಬಿಟ್ಟು ಯಾರ್‍ದಾದ್ರೂ ಲಾಳದ ಮೊಳೆ ಹೊಡೆದ ಹಳೇ ಚಡಾವು ತಗೊಂಬಂದು ಯಕ್ಕಾಮಕ್ಕಿ ಇಕ್ತಾನೆ ನಿಮಗೆ, ಹ್ಞಾ! ನೀವು ಮಾಡೋದೆಲ್ಲ ನಾಟ್ಕ, ಆಡೋದೆಲ್ಲ ಸುಳ್ಳು, ಬಿಡೋದೆಲ್ಲ ಬೊಗಳೆ ಅಂತ ಜನರಿಗೆ ಗೊತ್ತಿದೆ ಅನ್ನೋದು ನಿಮಗೆ ಗೊತ್ತಿದ್ದರೂ ಆ ಬುದ್ಧಿ ಮಾತ್ರ ಬಿಡೊಲ್ಲ ನೀವು! ನಿಮ್ಮನ್ನು ಹೊಗಳೋರು, ನಿಮಗೆ ಗೌರವ ಕೊಡೋರು, ಅಡ್ಡಬೀಳೋರು, ಜೈಕಾರ ಹಾಕೋರೆಲ್ಲ ತಮ್ಮ ಸ್ವಾರ್ಥಕ್ಕಾಗಿಯೋ ಅಥವಾ ಭಯದಿಂದಲೋ ಹಾಗೆ ಮಾಡ್ತಾರಂತ ನಿಮಗೆ ಗೊತ್ತಿದ್ದಾಗ್ಗ್ಯೂ ಅವರು ಹೊಗಳಿದಾಗ ಹಲ್ಲು ಕಿರೀತೀರಿ, ಜೈಕಾರ ಹಾಕಿದಾಗ ಬೀಗುತೀರಿ! ಒಂದ್ರೀತಿ ಭ್ರಾಮಕ ಜಗತ್ತಿನಲ್ಲಿ ಬದುಕ್ತಾ ಇದ್ದೀರಿ, ಮೈ ಪೂರ್ (ಇಂಪ್ಯೂರ್) ಪೊಲಿಟಿಷಿಯನ್ಸ್! ನಿಜ ಜಗತ್ತಿಗೆ ಬನ್ನಿ, (ಧೂರ್ತ) ಧುರೀಣರೇ.

ನಿಜ ಜಗತ್ತಿನ ಸುಖ ಕಷ್ಟ ಅರಿಯಿರಿ. ಜನರ ಜತೆ ಬೆರೆಯಿರಿ. ಜನರನ್ನು ಮರುಳುಗೊಳಿಸಿ, ಕೆರಳಿಸಿ, ಒಡೆದು ಆಳುವ ಬದಲು ಜನರ ಮನ ಗೆದ್ದು ಜನರನ್ನು ಒಂದುಗೂಡಿಸಿ ಅವರೊಡನೆ ಒಂದಾಗಿ ಆಡಳಿತ ನಡೆಸುವ ಗುಣ ರೂಪಿಸಿಕೊಳ್ಳಿ. ನಾಡಿಗಾಗಿ ನಿಃಸ್ವಾರ್ಥದಿಂದ ದುಡಿಯಲು ಸಾಧ್ಯವಾದರೆ ನೇತಾರರಾಗಿ ಆಡಳಿತದ ಚುಕ್ಕಾಣಿ ಹಿಡಿಯಿರಿ, ಇಲ್ಲದಿದ್ದರೆ ರಾಜಕಾರಣ ಬಿಟ್ಟು ಹೊರಗೆ ಬನ್ನಿರಿ. ಬದುಕಲಿಕ್ಕೇನು ಸಾವಿರ ಮಾರ್ಗಗಳು. ರಾಜಕಾರಣ ಇರುವುದು ನೀವು ಬದುಕಲಿಕ್ಕಲ್ಲ, ಪ್ರಜೆಗಳ ಬದುಕು ರೂಪಿಸಲಿಕ್ಕೆ.

ದಿ ಗ್ರೇಟ್ ಲೀಡರ್‌ಗಳೇ,
ಎಲ್ಲರಂತೆ ನೀವೂ ಮನುಷ್ಯರೇ. ನೀವೇನೂ ಮೇಲಿನಿಂದ ಇಳಿದು ಬಂದಿಲ್ಲ. ಮಾನವ ಜನ್ಮಕ್ಕೆ ಒಂದು ಅರ್ಥ ಇದೆ, ಒಂದು ಉದ್ದೇಶ ಇದೆ. ದೇವರು ನಿಗದಿಪಡಿಸಿರುವ ಅರ್ಥ-ಉದ್ದೇಶ ಅದು. ಅದಕ್ಕನುಗುಣವಾಗಿ ಬದುಕದಿದ್ದರೆ ದೇವರು ಮೆಚ್ಚಲಾರ. ದೇವರನ್ನು ಎದುರುಹಾಕಿಕೊಂಡು ಬಾಳಿದರೆ ಎಂದಾದರೂ ಸುಖವುಂಟೆ? ಹಾಗೆ ಬಾಳಿ ಜಯಿಸಲಾದರೂ ಸಾಧ್ಯವೆ? ನಿಮಗೆ ಹೇಗೂ ಕಾನೂನಿನ ಭಯವಿಲ್ಲ, ಏಕೆಂದರೆ ಕಾನೂನುಗಳ ಸೃಷ್ಟಿಕರ್ತರೂ ನೀವೇ, ಪಾಲನೆಯ ಉಸ್ತುವಾರಿಯೂ ನಿಮ್ಮದೇ; ಹಾಗಾಗಿ, ನಿಮಗೆ ಬೇಕಾದಂತೆ ಕಾನೂನು; ನೀವು ನಡಕೊಂಡದ್ದೇ ಕಾನೂನುಬದ್ಧ! ’ಕಾನೂನುಬಾಹಿರರು’ ನೀವು! ಆದರೆ, ದೇವರ ಭಯವಾದರೂ ಬೇಡವೆ? ಯೋಚಿಸಿರಿ. ಯೋಚಿಸಿ ನಿಮ್ಮನ್ನು ನೀವು ತಿದ್ದಿಕೊಳ್ಳಿ. ಆಗ, ಜೀವನದ ಕೊನೆಗಾಲದಲ್ಲಿ ನಿಮಗೆ ನೆಮ್ಮದಿಯಾದರೂ ಸಿಕ್ಕೀತು. ಇಲ್ಲದಿದ್ದಲ್ಲಿ ಕೊನೆಗಾಲದಲ್ಲಿ, ’ಅಯ್ಯೋ ನನ್ನ ಬಾಳೇ, ಹೀಗೇ ಮುಗಿದೋಗ್ತದಲ್ಲಾ’, ಅಂತ ಯಾರಿಗೂ ಹೇಳಲಾರದೆ ಮನಸ್ಸಿನೊಳಗೇ ಪರಿತಪಿಸೋ ಅವಸ್ಥೆ ನಿಮ್ಮದಾಗೋದು ಗ್ಯಾರಂಟಿ. ಹಾಗಾದಾಗ, ಅದುವರೆಗೂ ನೀವು ಸಂಪಾದಿಸಿದ ಸಂಪತ್ತು, ಹೆಸರು, ಮಾಡಿದ ಮೋಜು, ಎಲ್ಲಾ ವೇಸ್ಟಾ!

=====================================================================

(ಡಿಸೆಂಬರ್ ೨೦೦೮ರಲ್ಲಿ ಪತ್ರಿಕೆಯೊಂದರ ಪತ್ರ ವಿಭಾಗದಲ್ಲಿ ಪ್ರಕಟಿತ ಬರಹ)

ಕಲಾಂ ಅವರ ಧೀಮಂತಿಕೆಗೊಂದು ನಿದರ್ಶನ
--------------------------------------------

ಈಚೆಗಷ್ಟೇ ಬೆಂಗಳೂರಿಗೆ ಬಂದು ಶಾಸಕರಿಗೆ ಪಾಠ ಹೇಳಿ ಹೋದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಅದಕ್ಕೆ ಪೂರ್ವಭಾವಿಯಾಗಿ ಪ್ರಶ್ನಾವಳಿಯೊಂದನ್ನು ಶಾಸಕರಿಗೆಲ್ಲ ಕಳಿಸಿದ್ದರಷ್ಟೆ. ನಾನು ಶಾಸಕನಲ್ಲದಿದ್ದರೂ ಆ ಪ್ರಶ್ನಾವಳಿಯ ಎಲ್ಲ ಒಂಬತ್ತು ಪ್ರಶ್ನೆಗಳಿಗೂ ವಿಡಂಬನಾತ್ಮಕ ಉತ್ತರ ಬರೆದು ಕಲಾಂ ಅವರಿಗೆ ಮಿಂಚಂಚೆ (ಇಮೇಲ್) ಮೂಲಕ ರವಾನಿಸಿದ್ದೆ. ಅದನ್ನೋದಿದ ಕಲಾಂ ಅವರು ನನ್ನ ವಿಚಾರಲಹರಿಯ ಬಗ್ಗೆ ಆಸಕ್ತಿ ತಳೆದು ನನಗೆ ತಿರುಗಿ ಮಿಂಚಂಚೆ ಪತ್ರ ಬರೆದರು.

’ಹಲವು ಅಂಶಗಳನ್ನು ತಿಳಿಸುವ ತೊಂದರೆ ತೆಗೆದುಕೊಂಡಿದ್ದೀರಿ; ಅದಕ್ಕಾಗಿ ಧನ್ಯವಾದಗಳು’, ಎಂದು ಆತ್ಮೀಯ ಸಂಬೋಧನೆಯೊಂದಿಗೆ ಬರೆದ ಆ ಪತ್ರದಲ್ಲಿ ಕಲಾಂ ಅವರು, ’ನಮ್ಮ ಶಾಸಕರು ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲಂಥ ಕ್ಷೇತ್ರವೊಂದನ್ನು ತಿಳಿಸಿ’, ಎಂದು ನನಗೆ ಸೂಚಿಸಿದರು. ಅದರನುಸಾರ ನಾನು, ಕೃಷಿಗೆ ಉತ್ತೇಜನ ಮತ್ತು (ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವ ಮೂಲಕ) ಭ್ರಷ್ಟಾಚಾರ ನಿರ್ಮೂಲನ, ಈ ಎರಡು ಕ್ಷೇತ್ರಗಳನ್ನು ಸೂಚಿಸಿ ವಿವರವಾದ ಉತ್ತರ ಕಳಿಸಿದೆ.

ಅನಂತರದಲ್ಲಿ ಶಾಸಕರಿಗೆ ನೀಡಿದ ’ಪಾಠ’ದಲ್ಲಿ ಕಲಾಂ ಅವರು ಈ ಎರಡೂ ವಿಷಯಗಳ ಬಗ್ಗೆ ಒತ್ತು ನೀಡಿದ್ದನ್ನು ತಿಳಿದು ನನಗೆ ಅತೀವ ಸಂತಸವಾಯಿತು. ನನ್ನ ಪತ್ರವಲ್ಲದಿದ್ದರೂ ಕಲಾಂ ಅವರು ಈ ವಿಷಯಗಳ ಬಗ್ಗೆ ಶಾಸಕರಿಗೆ ಹೇಳಿಯೇ ಹೇಳುತ್ತಿದ್ದರು; ಕೃಷಿಯ ಬಗ್ಗೆ ಅವರ ಪ್ರಶ್ನಾವಳಿಯಲ್ಲೇ ಪ್ರಸ್ತಾಪವಿತ್ತಷ್ಟೆ; ನನ್ನ ಪತ್ರವೇನೂ ಮಹತ್ತಲ್ಲ. ಮಹತ್ತು ಯಾವುದೆಂದರೆ, ಮಾಜಿ ರಾಷ್ಟ್ರಪತಿಯೊಬ್ಬರ ವಿನಯ, ಸೌಜನ್ಯ, ಸರಳ ಸ್ವಭಾವ, ಸಮಾನತಾಭಾವ, ಸಮಾಜಹಿತಕ್ಕಾಗಿ ಅವರಲ್ಲಿರುವ ತುಡಿತ, ಕಾರ್ಯೋತ್ಸಾಹ, ತಾನೇ ಸರ್ವಜ್ಞನೆಂದುಕೊಳ್ಳದೆ ಇತರರ ಅಭಿಪ್ರಾಯಗಳನ್ನು ಕೋರುವ ನಿರಹಂಕಾರ, ವಿವೇಚಿಸುವ ವಿವೇಕ ಮತ್ತು ಸ್ವೀಕರಿಸುವ ವಿಶಾಲ ಮನೋಭಾವ, ಈ ಗುಣಗಳು ಮಹತ್ತ್ವದವು. ಇವು ಮನುಕುಲದ ಶ್ರೇಷ್ಠ ಗುಣಗಳು. ಈ ಗುಣಗಳಿಂದಾಗಿ ಕಲಾಂ ದೊಡ್ಡವರೆನಿಸಿಕೊಳ್ಳುತ್ತಾರೆ.

ರಾಷ್ಟ್ರಪತಿ ಹುದ್ದೆಯಿಂದಾಗಿ ಕಲಾಂ ಅವರಿಗೆ ದೊಡ್ಡಸ್ತಿಕೆ ಬರಲಿಲ್ಲ; ಕಲಾಂ ಅವರಿಂದಾಗಿ ರಾಷ್ಟ್ರಪತಿ ಹುದ್ದೆಯ ಘನತೆ ಹೆಚ್ಚಿತು.

=====================================================================

(ಡಿಸೆಂಬರ್ ೨೦೦೮ರ ’ಕರ್ಮವೀರ’ದಲ್ಲಿ ಪ್ರಕಟಿತ ಲೇಖನ)

ರಾಜಕಾರಣಿಗಳನ್ನೂ ಅಧಿಕಾರಿಗಳನ್ನೂ ದೂಷಿಸುತ್ತೇವೆ, ಆದರೆ ನಾವೆಂಥವರು?
---------------------------------------------------------------------------

* ೯೦ರ ದಶಕ. ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಅಧಿಕಾರಿಯಾಗಿದ್ದೆ. ಸರ್ಕಾರದ ಬೃಹತ್ ಯೋಜನೆಯೊಂದರ ಅನುಷ್ಠಾನದಿಂದಾಗಿ ಕೋಟಿಗಳ ವ್ಯವಹಾರ ನಾನಾ ಬ್ಯಾಂಕ್‌ಗಳ ಶಾಖೆಗಳಲ್ಲಿ ನಡೆದಿತ್ತು. ಸರ್ಕಾರದ ಉನ್ನತಾಧಿಕಾರಿಗಳು ಭರ್ಜರಿಯಾಗಿ ಕಬಳಿಸುತ್ತಿದ್ದರು. ಸಾಕ್ಷ್ಯಾಧಾರಗಳಿಲ್ಲದಿದ್ದರೂ ಇದು ಊರಿಗೆಲ್ಲ ಗೊತ್ತಿರುವ ಸಂಗತಿಯಾಗಿತ್ತು. ಇಂಥ ಸಂದರ್ಭದಲ್ಲಿ ನಾನು ಭ್ರಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ನಿರಾಕರಿಸಿದೆನಲ್ಲದೆ ಸರ್ಕಾರದ ಆಡಳಿತಾಂಗ ವ್ಯವಸ್ಥೆಯ ಭ್ರಷ್ಟತನವನ್ನು ಬಹಿರಂಗವಾಗಿ ವಿರೋಧಿಸಿದೆ. ಪರಿಣಾಮ, ಸರ್ಕಾರದ ಉನ್ನತಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾದೆ. ಸ್ಥಳೀಯ ಭ್ರಷ್ಟ ಪುಢಾರಿಯೊಬ್ಬ ನನ್ನನ್ನು ಮಗ್ಗುಲ ಮುಳ್ಳಿನಂತೆ ಕಾಣತೊಡಗಿದ. ಅತ್ಯಂತ ವಿಷಾದದ ಸಂಗತಿಯೆಂದರೆ, ಆ ಊರಿನ ಸಾರ್ವಜನಿಕರು ಯಾರೂ ನನ್ನ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಬದಲಾಗಿ, ಚುನಾವಣೆಯಲ್ಲಿ ಆ ಪುಢಾರಿಯನ್ನು ವಿಧಾನಸಭೆಗೆ ಆರಿಸಿ ಕಳಿಸಿದರು!

ಈ ಪ್ರಕರಣದಲ್ಲಿ, ನನ್ನ ಬ್ಯಾಂಕಿಗೆ ಆಗಬಹುದಾಗಿದ್ದ ಲಕ್ಷಾಂತರ ರೂಪಾಯಿ ನಷ್ಟವನ್ನು ಉಳಿಸುವಲ್ಲಿ ಮಾತ್ರ ನಾನು ಸಫಲನಾದೆ. ಭ್ರಷ್ಟರಿಗೆ ಬ್ಯಾಂಕ್ ಅನುಕೂಲಗಳನ್ನು ನೀಡದಿರುವ ಮೂಲಕ, ಅರ್ಥಾತ್ ಕಟ್ಟುಬಾಕಿಗೆ ಅವಕಾಶ ಮಾಡಿಕೊಡದಿರುವ ಮೂಲಕ, ಸಾರ್ವಜನಿಕರ ಹಣವು ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಪುಢಾರಿಗಳ ಪಾಲಾಗದಂತೆ ನೋಡಿಕೊಂಡ ತೃಪ್ತಿ ನನ್ನದಾಯಿತು.

* ೮೦ರ ದಶಕ. ಬೆಂಗಳೂರು. ಬೇರೊಂದು ಊರಿನಿಂದ ವರ್ಗವಾಗಿ ಬಂದ ನಾನು ಪಡಿತರ ಚೀಟಿಗಾಗಿ ಸಂಬಂಧಿತ ಸರ್ಕಾರಿ ಕಚೇರಿಗೆ ಹೋದಾಗ ಅಲ್ಲಿ ೩೫ ರೂಪಾಯಿಗಳ ಲಂಚಕ್ಕೆ ಬೇಡಿಕೆ ಬಂತು. ಕೊಡಲು ನಿರಾಕರಿಸಿದೆ. ತಿಂಗಳುಗಟ್ಟಲೆ ಓಡಾಡಿಸಿದರು. ಆದರೂ ನಾನು ಜಗ್ಗಲಿಲ್ಲ. ಸದರಿ ಕಚೇರಿಯೆದುರು ಒಂದು ದಿನ ಪಬ್ಲಿಕ್ಕಾಗಿ ಆ ಭ್ರಷ್ಟರ ಜನ್ಮ ಜಾಲಾಡತೊಡಗಿದೆ. ಸಾರ್ವಜನಿಕರೆಲ್ಲ ನನ್ನನ್ನು ಮೃಗಾಲಯದ ಪ್ರಾಣಿಯಂತೆ ನೋಡತೊಡಗಿದರಾಗಲೀ ಯಾರೂ ನನ್ನೊಡನೆ ದನಿಗೂಡಿಸಲಿಲ್ಲ!

ಆದರೆ, ಇದಾದ ಎರಡೇ ದಿನಗಳಲ್ಲಿ, ಪಡಿತರ ಚೀಟಿ ಕೊಂಡೊಯ್ಯಬಹುದೆಂಬ ಸೂಚನೆ ಬಂತು! ಆದರೆ ಅಷ್ಟರೊಳಗೆ ನನಗೆ ಆರು ತಿಂಗಳಿನ ಪಡಿತರ ನಷ್ಟವಾಗಿತ್ತು. ಮುಂದೆ, ಪಡಿತರ ಚೀಟಿಯ ಸೌಲಭ್ಯದ ಅರ್ಹತೆಯನ್ನು ನಾನು ದಾಟಿದ ತಕ್ಷಣ ಪಡಿತರ ಚೀಟಿಯನ್ನು ಇಲಾಖೆಗೆ ಹಿಂತಿರುಗಿಸಿದೆ. ನನ್ನ ನೆರೆಹೊರೆಯವರು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಬಹುಪಾಲು ಬಂಧುಗಳೂ ಈ ವಿಷಯದಲ್ಲಿ ನನ್ನನ್ನು ದಡ್ಡನೆಂದು ಜರಿದರು!

* ಕೆಲ ತಿಂಗಳುಗಳ ಹಿಂದೆ. ಇದೇ ಬೆಂಗಳೂರು. ನಾಯಿಗಳ ಉಪಟಳದ ಬಗ್ಗೆ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯೊಂದು ನಡೆಯಿತು. ಅದರಲ್ಲಿ ನಾನು ಸಕ್ರಿಯ ಪಾತ್ರ ವಹಿಸಿದ್ದೆ. ಕಾರ್ಯಯೋಜನೆಯ ನಿರ್ಧಾರ ಮತ್ತು ಅನುಷ್ಠಾನಕ್ಕಾಗಿ ಮುಂದಿನ ಸಮಾಲೋಚನಾ ಸಭೆಯ ದಿನಾಂಕ ನಿಗದಿಯಾಯಿತು. ಆದರೆ ತದನಂತರದಲ್ಲಿ ಆ ಸಭೆಯನ್ನು ಮಹಾನಗರಪಾಲಿಕೆಯು ಕಾರಣಾಂತರದಿಂದ ಮುಂದೂಡಿತು. ಹಲವು ತಿಂಗಳುಗಳುರುಳಿದರೂ ಇನ್ನೂ ಮಹಾನಗರಪಾಲಿಕೆಯು ಸಭೆಯನ್ನು ಏರ್ಪಡಿಸಿಲ್ಲ. ನನ್ನ ವಿಚಾರಣೆಗಳು ಅರಣ್ಯರೋದನವಾಗಿವೆ. ವಿಷಾದದ ಸಂಗತಿಯೆಂದರೆ, ಬಹುತೇಕ ಸಂಘಸಂಸ್ಥೆಗಳವರೇ ಈಗ ಈ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ!

* ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ. ಬೆಂಗಳೂರಿನ ಒಂದು ’ವಿದ್ಯಾ’ವಂತ ಬಡಾವಣೆ. ವಿಳಾಸ ಬದಲಾದ ಮತದಾರರ ಗುರುತಿನ ಚೀಟಿಗಾಗಿ ಸರತಿಯಲ್ಲಿ ನಿಂತು ಫೋಟೋ ತೆಗಿಸಿಕೊಂಡೆ. ಚೀಟಿಗೆ ಹೊದಿಸುವ ಪ್ಲಾಸ್ಟಿಕ್ ಹಾಳೆ ಖಾಲಿಯಾಗಿದೆಯೆಂದು ಹೇಳಿ ಚೀಟಿಯನ್ನು ಮರುದಿನ ಮಹಾನಗರಪಾಲಿಕೆ ಕಚೇರಿಗೆ ಬಂದು ಪಡೆದುಕೊಳ್ಳುವಂತೆ ಅಲ್ಲಿದ್ದ ಸಿಬ್ಬಂದಿ ’ಆದೇಶಿಸಿದರು’. ಇನ್ನೊಮ್ಮೆ ಬರಲು ಹೇಳಿ ಎಲ್ಲರ ಸಮಯವನ್ನೂ ಪೋಲು ಮಾಡುವುದು ಉಚಿತವಲ್ಲವೆಂದೂ ಪ್ಲಾಸ್ಟಿಕ್ ಹಾಳೆಯನ್ನು ತರಿಸಿರೆಂದೂ ಸಿಬ್ಬಂದಿಯನ್ನು ಒತ್ತಾಯಿಸತೊಡಗಿದೆ. ಅಷ್ಟರಲ್ಲಿ ಅಲ್ಲಿದ್ದ ಸಾರ್ವಜನಿಕರೇ ನನ್ನಮೇಲೆ ಹರಿಹಾಯ್ದರು! ’ಹೋಗ್ಹೋಗ್ರೀ, ಪ್ಲಾಸ್ಟಿಕ್ ಇಲ್ಲ ಅಂತ ಅವ್ರು ಹೇಳ್ತಾ ಇಲ್ವಾ? ನಾಳೆ ಆಫೀಸ್‌ಗ್ಹೋಗಿ ತಗೊಳ್ಳಿ. ಸುಮ್ನೆ ಹೋಗಿ’, ಎಂದು ನನಗೇ ದಬಾಯಿಸತೊಡಗಿದರು! ಅಷ್ಟರಲ್ಲಾಗಲೇ ಪ್ಲಾಸ್ಟಿಕ್ ಹಾಳೆಗಾಗಿ ಅದೆಲ್ಲಿಗೋ ಫೋನ್ ಮಾಡಿ ಮಾತಾಡುತ್ತಿದ್ದ ಮಹಾನಗರಪಾಲಿಕೆ ನೌಕರನು ಜನರ ಈ ಮಾತು ಕೇಳಿದವನೇ ಮೊಬೈಲ್ ಕಟ್ ಮಾಡಿ ಕಿಸೆಯೊಳಗಿಟ್ಟುಕೊಂಡು ಸುಮ್ಮನೆ ಕುಳಿತುಬಿಟ್ಟ!

ಮರುದಿನದಿಂದ ನಾಲ್ಕು ದಿನ ಮಹಾನಗರಪಾಲಿಕೆಯ ಕಚೇರಿಗೆ ಓಡಾಡಿದರೂ ಚೀಟಿ ಸಿಗಲಿಲ್ಲ. ನನ್ನಂತೆ ಅನೇಕರು ಎಡತಾಕುತ್ತಿದ್ದರು. ಕೊನೆಗೆ ನನ್ನ ಒತ್ತಡ ಜೋರಾದಾಗ, ಜೊತೆಗೆ, ಬರಹಗಾರನಾದ ನಾನು ಪತ್ರಿಕೆಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸಿಯೇನೆಂಬ ಅನುಮಾನ ಸಂಬಂಧಿತ ಸಿಬ್ಬಂದಿಗೆ ಉಂಟಾದಾಗ ಗುರುತಿನ ಚೀಟಿ ನನ್ನ ಮನೆಬಾಗಿಲಿಗೇ ಬಂತು!

* ಈ ಚುನಾವಣೆಯ ಸಂದರ್ಭದಲ್ಲೇ, ಮತದಾನದ ಕರ್ತವ್ಯದ ಬಗ್ಗೆ ನಾನು ಬರೆದಿದ್ದ ಸುದೀರ್ಘ ಲೇಖನವೊಂದು ಜನಪ್ರಿಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅನೇಕ ಕಡೆಗಳಲ್ಲಿ ನಾನು ಸಾರ್ವಜನಿಕರನ್ನುದ್ದೇಶಿಸಿ ಮಾತಾಡಿಯೂ ಇದ್ದೆ. ಆದರೆ ಪರಿಣಾಮ ಮಾತ್ರ ಶೂನ್ಯ. ನನ್ನ ಬಡಾವಣೆಯೂ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಮತದಾನದ ಪ್ರಮಾಣ ಎಂದಿನಂತೆ ಶೇಕಡಾ ೪೫ರಿಂದ ೫೫ ಅಷ್ಟೆ! ವೋಟು ಹಾಕದೇ ಮನೆಯಲ್ಲೇ ಉಳಿದಿದ್ದ ವಿದ್ಯಾವಂತ ’ಗಣ್ಯ’ರೊಬ್ಬರನ್ನು ನಾನು ವಿಚಾರಿಸಿದಾಗ ಅವರ ಉತ್ತರ, ’ಇಷ್ಟು ಮಾತಾಡ್ತೀರಲ್ಲಾ, ನೀವು ವೋಟು ಹಾಕಿದ್ದೀರಾ?’ ಅವರಿಗೆ ನನ್ನ ಬೆರಳಿನ ಮಸಿ ಗುರುತನ್ನು ತೋರಿಸಿದೆ. ಅದಕ್ಕೆ ಅವರ ಮರುಪ್ರಶ್ನೆ, ’ನಿಮ್ಮ ಫ್ಯಾಮಿಲಿ ಮೆಂಬರ್‍ಸ್ ಎಲ್ರೂ ಹಾಕಿದ್ದಾರಾ?’ ’ಹೌದು, ಎಲ್ರೂ ಹಾಕಿದ್ದಾರೆ. ಬೇಕಾದರೆ ಮನೆಗೆ ಬಂದು ನೋಡಿ’, ಎಂದೆ. ಸುಮ್ಮನಾದರು. ಅವರ ಮನೆಯಲ್ಲಿ ಮೂರು ಮತಗಳಿದ್ದು ಯಾರೂ ಮತದಾನ ಮಾಡಿರಲಿಲ್ಲ!’

ಒಟ್ಟಾರೆ ಸಾರಾಂಶ ಇಷ್ಟೆ. ಪ್ರಜೆಗಳಾದ ನಾವು ಜಾಗೃತರಾಗಬೇಕಾಗಿದೆ; ಸೋಮಾರಿತನ ಬಿಟ್ಟು ಎದ್ದೇಳಬೇಕಾಗಿದೆ; ಸ್ವಾರ್ಥ ತೊರೆದು ಭ್ರಷ್ಟರ ವಿರುದ್ಧ ಸಂಘಟಿತರಾಗಿ ಹೋರಾಡಬೇಕಾಗಿದೆ; ಮೊದಲು ಸ್ವಯಂ ನಾವು ಭ್ರಷ್ಟತನದಿಂದ ದೂರಾಗಬೇಕಾಗಿದೆ.

ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡುವ ಮೂಲಕ ಇದ್ದುದರಲ್ಲಿಯೇ ಯೋಗ್ಯರನ್ನು (ಅಥವಾ ಕಡಿಮೆ ಅಯೋಗ್ಯರನ್ನು) ಆರಿಸಬೇಕಾಗಿದೆ. ತನ್ಮೂಲಕ ಆಡಳಿತಾಂಗದ ಭ್ರಷ್ಟತನ ಮತ್ತು ಸೋಮಾರಿತನವನ್ನು ಜನಪ್ರತಿನಿಧಿಗಳು ಪೋಷಿಸುವ ವಾತಾವರಣವನ್ನು ನಿವಾರಿಸುವತ್ತ ಹೆಜ್ಜೆಯಿರಿಸಬೇಕಾಗಿದೆ.

ಆಡಳಿತಾಂಗದ ಆಲಸ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ನಾನೂ ಸೇರಿದಂತೆ ಹಲವರು ನಡೆಸುತ್ತಿರುವ ಸಂಘಟಿತ ಹೋರಾಟಗಳ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪಾಲ್ಗೊಳ್ಳುವಿಕೆ ನೀರಸ. ಸಾರ್ವಜನಿಕರ ಪಾಲ್ಗೊಳ್ಳುವಿಕೆಯು ವ್ಯಾಪಕವಾಗಬೇಕಾಗಿದೆ. ಪತ್ರಿಕೆಗಳ ಬರಹ/ಪತ್ರಗಳಿಗೆ ಸ್ಪಂದನ ಮತ್ತು ಹೋರಾಟಗಳಲ್ಲಿ ಪಾಲ್ಗೊಳ್ಳುವಿಕೆ ಇವು ಸಾರ್ವಜನಿಕರಿಂದ ಹೆಚ್ಚೆಚ್ಚು ವ್ಯಕ್ತವಾಗಬೇಕಾಗಿದೆ.

ಇಂದು ಸರ್ಕಾರವಾಗಲೀ ದೇಶವಾಗಲೀ ರಾಜಕಾರಣಿಗಳಿಗಿಂತ ಹೆಚ್ಚಾಗಿ ಅಧಿಕಾರಿಗಳ ಕೈಯಲ್ಲಿದೆ. ಆದರೆ ಆಡಳಿತಾಂಗವನ್ನು ಅಂಕೆಯಲ್ಲಿಟ್ಟುಕೊಳ್ಳುವಂಥ ಶಾಸಕಾಂಗದ ಆಯ್ಕೆ ಮತದಾರರ ಕೈಯಲ್ಲಿದೆ. ಜೊತೆಗೆ, ಆಡಳಿತಾಂಗವನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುವುದೂ ಸಾರ್ವಜನಿಕರಿಗೆ ಸಾಧ್ಯ. ಅಂಥದೊಂದು ಇಚ್ಛಾಶಕ್ತಿಯನ್ನು ನಾವು ರೂಢಿಸಿಕೊಳ್ಳಬೇಕಾಗಿದೆ. ’ಯಾರ ಚಿಂತೆ ನಮಗ್ಯಾಕೆ? ನಮ್ಮ ಚಿಂತೆ (ನಮ್ಮ ಸ್ವಾರ್ಥ) ನಮಗೆ ಸಾಕು’, ಎಂದುಕೊಂಡಿದ್ದರೆ ಯಾವುದೇ ಬದಲಾವಣೆ ಅಸಾಧ್ಯ. ಪರಿಣಾಮ, ಮುಂದಿನ ದಿನಗಳು ನಮ್ಮ ಮಕ್ಕಳು-ಮೊಮ್ಮಕ್ಕಳಿಗೇ ದುರ್ಭರ!

=====================================================================
ಎಚ್. ಆನಂದರಾಮ ಶಾಸ್ತ್ರೀ
=====================================================================

ಶುಕ್ರವಾರ, ಸೆಪ್ಟೆಂಬರ್ 18, 2009

ಭಾರತದಲ್ಲಿ ಕ್ರಿಕೆಟ್ ಮತ್ತು ಇತರ ಕ್ರೀಡೆಗಳು

ಇದೇ ಬ್ಲಾಗ್‌ನಲ್ಲಿ ಈ ಹಿಂದೆ ಪ್ರಕಟವಾಗಿದ್ದ ನನ್ನ ಎರಡು ಬರಹಗಳು ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಆಯ್ದ ಕೆಲವು ಈ ಕೆಳಗಿನಂತಿವೆ.
ಕೊನೆಯಲ್ಲಿ, ಇಂದಿನ DNA ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂದರ್ಶನವೊಂದರ ಯಥಾ ನಕಲು ಇದೆ.
ಅಷ್ಟನ್ನೂ ಒಂದಾದಮೇಲೊಂದರಂತೆ ಓದಿರಿ.

(17 ಜೂನ್ 2009ರಂದು ಪ್ರಕಟವಾಗಿರುವ ನನ್ನ ಲೇಖನ ಮತ್ತು ಆಯ್ದ ಪ್ರತಿಕ್ರಿಯೆಗಳು)

ಟ್ವೆಂಟಿ20: ಪೋಸ್ಟ್ ಮಾರ್ಟಮ್

ಗಬ್ಬರ್ ಸಿಂಗ್ ಹೇಳ್ತಾನೆ ಷೋಲೆ ಫಿಲಂನಲ್ಲಿ,
’ತೀನೋ ಬಚ್ ಗಯೇ!’
ಆಡಿದ್ದು ಮೂರಾಟ ಸೂಪರ್ ಎಯ್ಟ್‌ನಲ್ಲಿ,
’ತೀನೋ ಹಾರ್ ಗಯೇ!’

ಗಬ್ಬರ್ ಸಿಂಗ್ ಕುದೀತಿದ್ದ,
ಅವನ ಬಂಟರು ಔಟ್!
ಮಹೇಂದ್ರ ಸಿಂಗ್ ಜಾರಿಬಿದ್ದ,
ಅವನ ಟೀಮೇ ಔಟ್!

ಪಾಕ್, ಶ್ರೀಲಂಕಾ ಪಾಸಾದವು,
ಭಾರತ ಮಾತ್ರ ಫೇಲಾಯ್ತು!
ಪುಟಗೋಸಿ ದೇಶಗಳು ಮೆರೆದವು,
ಮಹಾನ್ ಭಾರತ ಸೊರಗಿತು!

ಇದು ಈ ಸಲದ ಟ್ವೆಂಟಿ20 ಯಲ್ಲಿ
ಭವ್ಯ ಭಾರತದ ಕಥೆಯು ಮಗಾ.
ಐಪಿಎಲ್‌ನ ದುಡ್ಡಿನ ಮುಂದೆ
ದೇಶದ ಗೌರವ ಗೌಣ ಮಗಾ!


man with no name ಹೇಳಿದರು...

Tempted as one might be to react with a knee-jerk response and come to conclusions such as cricketers play for the money involved and not for the country, on account of a loss in one tournament, one must really refrain from doing so, or atleast think twice. It's one thing to be critical of a bad performance, but questioning someone's love towards his country is really not in good taste.
As for the issue of players endorsing products, it can't be viewed as a distraction simply because players earn a lot more (these days atleast)playing cricket and enjoy better incentives winning matches than appearing in a commercial ad. I do agree that the choice of certain products that these players endorse leaves a lot to be desired of them since they are seen as role models. But thats a topic for another discussion another day.
Most of these players would've come from lower middle class family. So it would be really hard to ignore the lure of easy money earned from a thirty second commercial. It's human tendency.

Money is involved in every sport, some of the most viewed, followed and discussed sports involve BIG BUCKS.
Let's put this into perspective-
A few cases in point
1. Tennis
Not played for the country.
Players end their careers earning dollars in multiples of 10 million.
Players conveniently skip davis cup ties, and until quite recently, even the olympics on the pretext of an injury so as to save their best for a forthcoming grand slam.

2. Golf-
Lesser said the better about this sport. Waste of land, waste of time, skill etc.
But one of the richest sports around. Again not played for the country.

3. Football
Enjoys the lion's share of popularity among all sports.
Apart from the world cups and continental cups very litlle international games played.
Players are known to end their international career prematurely in order to prolong their career at the club level.
Needless to say they get paid astronomical amounts as transfer fees, match fees etc.

4. Formula 1
Not played for the country, huge money involved

Yet, we don't see people from their respecive nations baying for their blood,burning effigy or resorting to doubting their patriotism.

I can understand that people are passionate about cricket in India and thus, tend to be emotionally hurt when India loses in a major tournament, and that's exactly why people have the liberty to criticize the very players who would once have been the objects of their praise and affection.
But one can't really self righteously criticize the players when they themselves are doing precious little in terms of making the country proud.

People should get over these antiquated notions about cricket and cricketers. They have to realize that cricketers work as much hard honing their skills and perfoming at the highest level to the best of their potential as any other person from any other walk of life.

I can understand if someone blames dhoni for his tryst with the media before the tournament began and his obsession to draw people's attention towards him. They are pretty fair and aren't ugly. But you cannot question his loyalty towards the nation.

Some ponits to ponder over

Kaustuba Venugopal

man with no name ಹೇಳಿದರು...

I'm a big fan of cricket and couldn't just take these comments lying down. Sorry if I have hurt anybody. My intention was to guard the sport.

Kaustuba Venugopal

(22 ಜೂನ್ 2009ರಂದು ಪ್ರಕಟವಾಗಿರುವ ನನ್ನ ಲೇಖನ ಮತ್ತು ಆಯ್ದ ಪ್ರತಿಕ್ರಿಯೆಗಳು)

ಕ್ರಿಕೆಟ್ ಮತ್ತು ಭಾರತ

ಟ್ವೆಂಟಿ೨೦ ಕ್ರಿಕೆಟ್ ವಿಶ್ವಕಪ್ ಪಾಕಿಸ್ತಾನದ ಮಡಿಲು ಸೇರಿದೆ. ಕಳೆದ ಸಲ ಛಾಂಪಿಯನ್ ಆಗಿದ್ದ ಭಾರತವು ಈ ಸಲ ಸೂಪರ್ ಎಯ್ಟ್ ಹಂತದಲ್ಲೇ ಸೋತು ಮನೆಗೆ ಮರಳಿದೆ. ಆದರೆ ನಮ್ಮ ಕ್ರಿಕೆಟ್ ಆಟಗಾರರಿಗೆ ಜಾಹಿರಾತುಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬಂದೇಬರುತ್ತದೆ; ಜನಕೋಟಿಯ ಕ್ರಿಕೆಟ್ ಪ್ರೇಮವೂ ಅಬಾಧಿತವಾಗಿ ಮುಂದುವರಿಯುತ್ತದೆ. ಜಾಹಿರಾತಿಗಾಗಿ ಕ್ರಿಕೆಟ್ಟಿಗರಿಗೆ ಕೋಟಿಗಟ್ಟಲೆ ಕೊಟ್ಟ ಕಂಪೆನಿಗಳು ಆ ಹಣವನ್ನು ಕ್ರಿಕೆಟ್ ಪ್ರೇಮಿಗಳಿಂದ ಹಾಗೂ ಕ್ರಿಕೆಟ್ ಪ್ರೇಮಿಗಳಲ್ಲದವರಿಂದಲೂ ಬಡ್ಡಿ ಸಮೇತ ವಸೂಲು ಮಾಡುವ ಪ್ರಕ್ರಿಯೆಯೂ ಎಂದಿನಂತೆ ವ್ಯವಸ್ಥಿತವಾಗಿ ಸಾಗುತ್ತದೆ.

ಈಗ ಕೊಂಚ ಹಿಂದಕ್ಕೆ ಹೋಗೋಣ.
ಸೆಪ್ಟೆಂಬರ್ ೨೪, ೨೦೦೭. ಭಾರತ ಹುಚ್ಚೆದ್ದು ಕುಣಿಯಿತು!
ಸಹಜವೇ. ಪ್ರಪ್ರಥಮ ಟ್ವೆಂಟಿ೨೦ ಕ್ರಿಕೆಟ್ ವಿಶ್ವ ಕಪ್ಪನ್ನು ಭಾರತ ತನ್ನದಾಗಿಸಿಕೊಂಡ ದಿನ ಅದು. ಮೇಲಾಗಿ, ನಾವು ಜಯಿಸಿದ್ದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಮೇಲೆ! ಕುಣಿದಾಡದಿರಲು ಸಾಧ್ಯವೇ?

ಆ ಜಯವೇನೂ ಸಣ್ಣದಲ್ಲ. ತಿಂಗಳುಗಳ ಕೆಳಗಷ್ಟೇ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲೇ ಸೋಲುಂಡು ಮನೆಗೆ ವಾಪಸಾಗಿದ್ದವರು ನಾವು. (ಅಂತೆಯೇ ಪಾಕಿಸ್ತಾನ ಕೂಡಾ.) ರಾಹುಲ್, ಸಚಿನ್, ಸೌರವ್ ಕುಂಬ್ಳೆಯಂಥ ಅನುಭವಿಗಳನ್ನು ಕೈಬಿಟ್ಟು ಬಹುಪಾಲು ಅನನುಭವಿ ಹುಡುಗರನ್ನೇ ಹಾಕಿಕೊಂಡು ಟ್ವೆಂಟಿ೨೦ ಪಂದ್ಯಾವಳಿಗೆ ಹೋದವರು ನಾವು. ನಮ್ಮ ಟೀಮಿನಲ್ಲಿ ಕೆಲವರು ಕೇವಲ ಒಂದೇ ಒಂದು ಟ್ವೆಂಟಿ೨೦ ಪಂದ್ಯ ಆಡಿದ ಅನುಭವ ಹೊಂದಿದವರಾಗಿದ್ದರೆ ಕೆಲವರಿಗೆ ಇದೇ ಚೊಚ್ಚಲ ಟ್ವೆಂಟಿ೨೦ ಪಂದ್ಯ! ಇಂಥ ಟೀಮನ್ನು ಕೊಂಡೊಯ್ದ ನಮಗೆ ಫೈನಲ್ ತಲುಪುವ ವಿಶ್ವಾಸವೇ ಇರಲಿಲ್ಲ. ಮೇಲಾಗಿ, ಲೀಗ್ ಹಂತದಲ್ಲೇ ಪಾಕಿಸ್ತಾನವನ್ನು ಮಣಿಸಬೇಕಾಗಿತ್ತು. ಸೂಪರ್ ಎಯ್ಟ್‌ನಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಸವಾಲು. ಸೆಮಿಫೈನಲ್‌ನಲ್ಲಂತೂ ಅಜೇಯ ದೈತ್ಯ ಆಸ್ಟ್ರೇಲಿಯಾ ಎದುರಾಳಿ! ಅದೇ ಹೊಸದಾಗಿ ನಾಯಕನಾದವ ನಮ್ಮ ಮಹೇಂದ್ರಸಿಂಗ್ ದೋನಿ. ಆದಾಗ್ಗ್ಯೂ ಈ ಎಲ್ಲ ದೇಶಗಳನ್ನೂ ಸೋಲಿಸಿ ಫೈನಲ್ ತಲುಪಿಯೇಬಿಟ್ಟೆವು. ಫೈನಲ್‌ನಲ್ಲಿ "ಜಿದ್ದಿನ" ಪಾಕಿಸ್ತಾನವನ್ನು ರೋಮಾಂಚಕರ ರೀತಿಯಲ್ಲಿ ಮಣಿಸಿ ವಿಶ್ವಕಪ್ ಗೆದ್ದೇಬಿಟ್ಟೆವು. ಕುಣಿದಾಡದಿರಲು ಸಾಧ್ಯವೇ?

ಓವರಿನ ಆರೂ ಬಾಲ್‌ಗಳನ್ನೂ ಸಿಕ್ಸರ್ ಎತ್ತಿದ ಯುವರಾಜ(ಸಿಂಗ್)ನ ಆಟ ಮರೆಯಲು ಸಾಧ್ಯವೇ? ಭಾರತದ ಹೆಮ್ಮೆಗೆ ಎರಡು ಮಾತಿಲ್ಲ. ಸಂತೋಷಕ್ಕೆ ಪಾರವಿಲ್ಲ. ವಾರವಿಡೀ ದೇಶಾದ್ಯಂತ ವಿಜಯೋತ್ಸವ. ಬಡವ-ಬಲ್ಲಿದ ಭೇದವಿಲ್ಲದೆ, ಹಿರಿ-ಕಿರಿಯರೆನ್ನದೆ ಎಲ್ಲರೂ ಈ ವಿಜಯೋತ್ಸವದಲ್ಲಿ ಭಾಗಿಗಳು. ಇಡೀ ದೇಶ ಒಂದಾದ ಅಪೂರ್ವ ರಸಘಳಿಗೆ. ಭಾರತ ಪ್ರಕಾಶಿಸಿದ ಅಮೃತ ಘಳಿಗೆ. ಕ್ರೀಡೆಯೊಂದಕ್ಕೆ ಈ ಶಕ್ತಿಯಿರುವುದು ನಿಜಕ್ಕೂ ದೇಶದ ಆರೋಗ್ಯಕ್ಕೆ ಒಳ್ಳಿತು. ಕ್ರೀಡೆಯ ಉದ್ದೇಶವೇ ಹೃದಯಗಳನ್ನು ಅರಳಿಸುವುದು ಮತ್ತು ಬೆಸೆಯುವುದು. ಅಲ್ಲವೆ?

ಈಗ ಕೊಂಚ ವಿಷಯದ ಆಳಕ್ಕೆ ಹೋಗೋಣ. ಕ್ರೀಡೆಯು ಹೃದಯಗಳನ್ನು ಬೆಸೆಯಬೇಕು, ಬೆಸೆಯುತ್ತದೆ, ನಿಜ. ಆದರೆ ಈ ಮಾತು ಭಾರತ-ಪಾಕಿಸ್ತಾನ ನಡುವಣ ಪಂದ್ಯಗಳ ಮಟ್ಟಿಗೆ ನಿಜವಾಗಿದೆಯೇ? ಭಾರತ-ಪಾಕ್ ನಡುವಣ ಕ್ರಿಕೆಟ್ ಪಂದ್ಯವಾಗಲೀ ಹಾಕಿ ಪಂದ್ಯವಾಗಲೀ ಎರಡೂ ದೇಶಗಳ ಹೃದಯಗಳನ್ನು ಪರಸ್ಪರ ಬೆಸೆದಿದೆಯೇ? ಇಲ್ಲವೆಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಹೃದಯ ಒಂದಾಗಿಸುವ ಬದಲು ಈ ಪಂದ್ಯಗಳು ಪರಸ್ಪರ ದ್ವೇಷವನ್ನು ಇನ್ನಷ್ಟು ಹೆಚ್ಚಿಸುತ್ತಿವೆಯೇನೋ ಎಂದು ಭಾಸವಾಗುತ್ತಿದೆ ಪಂದ್ಯ ನಡೆಯುವ ಸಂದರ್ಭದ ಆಗುಹೋಗುಗಳನ್ನು ನೋಡಿದಾಗ! ಪ್ರಥಮ ಟ್ವೆಂಟಿ೨೦ ವಿಶ್ವಕಪ್ ಸಂದರ್ಭದಲ್ಲಿ ಅಂದಿನ ಪಾಕ್ ಅಧ್ಯಕ್ಷ ಮುಷರಫ್ ತನ್ನ ಕ್ರಿಕೆಟ್ ತಂಡದ ನಾಯಕನಿಗೆ ಫೋನ್ ಮಾಡಿ ಭಾರತದ ವಿರುದ್ಧ ಪಂದ್ಯವನ್ನು ಗೆಲ್ಲಲೇಬೇಕೆಂದು ತಾಕೀತುಮಾಡಿದುದು, ಸೋತಾಗ ಆಟಗಾರರು ಅತೀವ ಅವಹೇಳನಕ್ಕೆ ಗುರಿಯಾದುದು, ಪಾಕಿಸ್ತಾನ ಗೆದ್ದಾಗ ಭಾರತದಲ್ಲಿನ ಕೆಲವು ಮುಸ್ಲಿಮರು "ಪಾಕಿಸ್ತಾನ್ ಜಿಂದಾಬಾದ್" ಎಂದು ಜೈಕಾರ ಹಾಕುವುದು, ರೇಡಿಯೋಕ್ಕೆ-ಟಿ.ವಿ.ಗೆ ಹಾರ ಹಾಕುವುದು (!), ತಂತಮ್ಮ ದೇಶ ಸೋತಾಗ ಉಭಯರೂ ಪ್ರತಿಕೃತಿಗಳನ್ನು ಸುಡುವುದು, ಅಲ್ಲಲ್ಲಿ ಹಿಂದೂ-ಮುಸ್ಲಿಮರು ಪರಸ್ಪರ ಘರ್ಷಣೆಗಿಳಿಯುವುದು, ಇಂಥ ಹತ್ತು ಹಲವು ದ್ವೇಷದ ಕಿಚ್ಚನ್ನು ಉಭಯ ದೇಶಗಳೂ ಉರಿಸುವುದನ್ನು ನಾವು ಕಾಣುತ್ತಿದ್ದೇವೆ. ೨೦೦೭ರ ನಮ್ಮ ಟ್ವೆಂಟಿ೨೦ ವಿಜಯದ ಬಳಿಕವಂತೂ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ’ಯು ಟ್ಯೂಬ್’ನಲ್ಲಿ ಎಲ್ಲೆ ಮೀರಿದ ವಾಕ್ ಸಮರವನ್ನೇ ನಡೆಸಿದರು! ಇದರಲ್ಲಿ ಪಾಕಿಸ್ತಾನೀಯರ ದ್ವೇಷಪೂರಿತ ಆರ್ಭಟವೇ ಹೆಚ್ಚಾಗಿತ್ತು! ಇಂಥ ಬೆಳವಣಿಗೆಗಳಿಗೇನಾ ಆಟ ಇರುವುದು? ಉಭಯ ದೇಶಗಳ ಜನತೆ ಮತ್ತು ಮುಖ್ಯವಾಗಿ ಇಂಥ ಕಿಚ್ಚಿನ ಪ್ರೋತ್ಸಾಹಕರಾದ ಪುಢಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಾಕಿಸ್ತಾನಕ್ಕೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ.

ದೇಶದಮೇಲೆ ಪರಿಣಾಮ
-------------------------
ಇನ್ನು, ಕ್ರಿಕೆಟ್ ಕ್ರೀಡೆಯು ನಮ್ಮ ದೇಶದಮೇಲೆ ಎಂಥ ಪರಿಣಾಮ ಉಂಟುಮಾಡಿದೆಯೆಂಬುದನ್ನು ಒಂದಿಷ್ಟು ಯೋಚಿಸೋಣ. "ಹದಿಮೂರು (೧೧+೨) ಮಂದಿ ಆಡುವುದನ್ನು ಹದಿಮೂರು ಸಾವಿರ ಮಂದಿ ದಿನವಿಡೀ ಕೆಲಸ ಬಿಟ್ಟು ಕೂತು ನೋಡುವುದೇ ಕ್ರಿಕೆಟ್" ಎಂಬ ಚಾಟೂಕ್ತಿಯು ಜನಜನಿತವಷ್ಟೆ. ಇದೀಗ, ಟ್ವೆಂಟಿ೨೦ ಪಂದ್ಯಗಳಿಂದಾಗಿ ಒಪ್ಪೊತ್ತು ಕೂತು ನೋಡಿದರೆ ಸಾಕಾಗುತ್ತದೆ, ಆದರೆ, ಟೆಲಿವಿಷನ್ ಮಾಧ್ಯಮದಿಂದಾಗಿ, ಹದಿಮೂರು ಸಾವಿರ ಜನರ ಬದಲು ಹದಿಮೂರು ಕೋಟಿ ಜನ, ಇನ್ನೂ ಹೆಚ್ಚು ಜನ, ಕೆಲಸ ಬಿಟ್ಟು ಆಟ ನೋಡುವ ಪರಿಸ್ಥಿತಿ ಉಂಟಾಗಿದೆ! ಬೇರೆ ಆಟಗಳೂ ನೋಡುಗರ ಕಾಲಹರಣ ಮಾಡುತ್ತವಾದರೂ ಕ್ರಿಕೆಟ್ಟಿನಷ್ಟಲ್ಲ. ಆಟಗಳನ್ನು ನೋಡುವುದು ಜೀವನದ ಅವಶ್ಯಕ, ಆನಂದದಾಯಕ ಮತ್ತು ಅವಿಭಾಜ್ಯ ಅಂಗ ಹೌದಾದರೂ ಅದಕ್ಕೊಂದು ಮಿತಿ, ಲಕ್ಷ್ಮಣರೇಖೆ ಇರಬೇಕಷ್ಟೆ? ಈಚೀಚೆಗಂತೂ ಕ್ರಿಕೆಟ್ ಪಂದ್ಯಗಳ ಸಂಖ್ಯೆ ಹೆಚ್ಚಿ, ಜೊತೆಗೆ ಟಿವಿಯಲ್ಲಿ ಕ್ರಿಕೆಟ್‌ನದೇ ಪ್ರತ್ಯೇಕ ವಾಹಿನಿಗಳು ಪ್ರತ್ಯಕ್ಷವಾಗಿ ಈ ಲಕ್ಷ್ಮಣರೇಖೆ ಕನಸಿನ ಮಾತಾಗತೊಡಗಿದೆ. ಹೀಗೇ ಮುಂದುವರಿದರೆ ವಿದ್ಯಾರ್ಜನೆಯಲ್ಲಿರುವ ಮಕ್ಕಳ ಪಾಡೇನು? ಗಂಭೀರವಾಗಿ ಯೋಚಿಸಬೇಕಾಗಿರುವ ವಿಷಯವಿದು.

ಕ್ರಿಕೆಟ್ ಎಂಬ ಈ ದೈತ್ಯನು ನಮ್ಮ ದೇಶದ ಆರ್ಥಿಕ ರಂಗವನ್ನು ಹೇಗೆ ಆಡಿಸುತ್ತಾನೆಂಬುದನ್ನು ನೋಡೋಣ. ಒಂದು ಓವರ್‌ನಲ್ಲಿ ಆರು ಆರೋಟ(ಸಿಕ್ಸರ್)ಗಳನ್ನು ಗಳಿಸಿದ ಯುವರಾಜನಿಗೆ ಕ್ರಿಕೆಟ್ ಮಂಡಳಿಯಿಂದ ಒಂದು ಕೋಟಿ ರೂಪಾಯಿ ಬಹುಮಾನ ಮತ್ತು ಒಂದು ಸ್ಪೋರ್ಟ್ಸ್ ಕಾರು. ತಂಡಕ್ಕೆ ಮೂರು ಮಿಲಿಯನ್ ಡಾಲರ್ ಭಕ್ಷೀಸು. ಇದಿಷ್ಟೂ ಎಂದಿನ ಗೌರವಧನದ ಜೊತೆಗೆ ಹೆಚ್ಚುವರಿಯಾಗಿ! ಇಷ್ಟು ಹಣ ನಮ್ಮ ಕ್ರಿಕೆಟ್ ಮಂಡಳಿಗೆ ಎಲ್ಲಿಂದ ಬರುತ್ತದೆ? ಮುಖ್ಯವಾಗಿ ಟಿವಿ ಪ್ರಸಾರ ಹಕ್ಕು ಮಾರಾಟದಿಂದ ತಾನೆ? ಕೋಟ್ಯಂತರ ರೂಪಾಯಿ ಕೊಟ್ಟು ಪ್ರಸಾರದ ಹಕ್ಕು ಪಡೆದುಕೊಂಡ ಟಿವಿ ವಾಹಿನಿಗಳವರು ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಾರೆಂದಮೇಲೆ ಅವರಿಗೆ ವಿವಿಧ ಕಂಪೆನಿಗಳ ಜಾಹಿರಾತು ಹಣ ಇನ್ನೆಷ್ಟು ಹರಿದುಬರುತ್ತಿರಬೇಕು, ಯೋಚಿಸಿ. ಕ್ರಿಕೆಟ್ಟಿಗರಮೇಲೆ ಚೆಲ್ಲಿದ ಜಾಹಿರಾತು ಹಣವೂ ಸೇರಿದಂತೆ ಎಲ ಜಾಹಿರಾತು ಹಣವನ್ನೂ, ಮೇಲೆ ಲಾಭವನ್ನೂ ಕಂಪೆನಿಗಳು ಗ್ರಾಹಕನಿಂದ ತಾನೆ ವಸೂಲುಮಾಡುವುದು? ಅಂದಾಗ, ಪ್ರಜೆಗಳಾದ ನಮ್ಮ ಹಣವನ್ನು ಕ್ರಿಕೆಟ್‌ನ ಹೆಸರಲ್ಲಿ ಕಂಪೆನಿಗಳು ಅದೆಷ್ಟು ಭಾರಿಯಾಗಿ ಲೂಟಿಮಾಡುತ್ತಿವೆ, ಊಹಿಸಿ. ನಮ್ಮ ಅಪರಿಮಿತ ಕ್ರಿಕೆಟ್ ಹುಚ್ಚನ್ನಲ್ಲವೆ ಈ ಕಂಪೆನಿಗಳು ನಗದೀಕರಿಸಿಕೊಳ್ಳುತ್ತಿರುವುದು? ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಶ್ರೀಸಾಮಾನ್ಯನ ಜೀವನ ನಿರ್ವಹಣೆಯ ಗತಿಯೇನು, ಯೋಚಿಸಿ.

ಲೋಹಿಯಾ ನುಡಿ
-------------------
ಧೀಮಂತ ಸಮಾಜವಾದೀ ಚಿಂತಕ ರಾಮಮನೋಹರ ಲೋಹಿಯಾ ಒಂದೆಡೆ ಹೇಳಿದ್ದಾರೆ, "ಭಾರತದ ಅತಿ ದೊಡ್ಡ ಸಮಸ್ಯೆಯೆಂದರೆ ಲಕ್ಷಾಂತರ ಜನರಿಗೆ ಉದ್ಯೋಗಗಳನ್ನು ಒದಗಿಸುವುದು. ಆದ್ದರಿಂದ, ಸಣ್ಣ ಯಂತ್ರಗಳ ಬಳಕೆಯೇ (ಸಣ್ಣ ಕೈಗಾರಿಕೆಗಳೇ) (ಈ ಸಮಸ್ಯೆಗೆ) ಏಕೈಕ ಪರಿಹಾರ." ಆದರೆ ಈಗೇನಾಗಿದೆ? ಆರ್ಥಿಕ ಉದಾರೀಕರಣ, ಜಾಗತೀಕರಣಗಳ ಜೊತೆಗೆ ನಮ್ಮ ದೇಶದಲ್ಲಿ ಕ್ರಿಕೆಟ್ ದೈತ್ಯನೂ ಸೇರಿ ದೇಶದ ಸಂಪತ್ತೆಲ್ಲ ಕೆಲವೇ ಬಲಾಢ್ಯ ಕಂಪೆನಿಗಳ (ಅದರಲ್ಲೂ ಬಹುರಾಷ್ಟ್ರೀಯ ಕಂಪೆನಿಗಳ) ಕೈಗೆ ಹೋಗಿ ಸೇರುವ ಸನ್ನಿವೇಶ ಸೃಷ್ಟಿಯಾಗಿದೆ. "ಭಾರತವು ರಷ್ಯಾದೊಡನೆಯಾಗಲೀ ಅಮೆರಿಕಾದೊಡನೆಯಾಗಲೀ ಕೈಜೋಡಿಸಬಾರದು", ಎಂದರು ಲೋಹಿಯಾ. ಆದರೆ ನಾವು ಮೊನ್ನೆ ಮೊನ್ನೆಯ ತನಕ ರಷ್ಯಾವನ್ನು ನಂಬಿ ಮೋಸಹೋದೆವು, ಇದೀಗ ಅಮೆರಿಕಾಕ್ಕೆ ರತ್ನಗಂಬಳಿ ಹಾಸಿ ನಮ್ಮನ್ನು ಒಪ್ಪಿಸಿಕೊಳ್ಳುತ್ತಿದ್ದೇವೆ! ಈ ಕ್ರಿಯೆಯಲ್ಲಿ ಅವಾಂಛಿತವಾಗಿ ಹಾಗೂ ಅಪ್ರತ್ಯಕ್ಷವಾಗಿಯಾದರೂ ಸಹ ಕ್ರಿಕೆಟ್‌ನ ಪಾತ್ರವೂ ಇರುವುದು ಆತಂಕದ ವಿಷಯವಲ್ಲವೆ? ಕ್ರಿಕೆಟ್ ಎಂಬ "ಸಮೂಹಸನ್ನಿ"ಗೊಳಗಾಗುತ್ತಿರುವ ಇಂದಿನ ಜನತೆ, ಅದರಲ್ಲೂ ಮಖ್ಯವಾಗಿ ಯುವ ಜನತೆ ಈ ತಥ್ಯವನ್ನು ಗಮನಿಸಬೇಕು.

ಕ್ರಿಕೆಟ್ ಬೇಕು, ನಿಜ. ನನಗೂ ಅದು (ನೋಡಲು) ಇಷ್ಟವಾದ ಆಟವೇ. ಆದರೆ, ಅತಿಯಾಗಬಾರದಷ್ಟೆ. "ಈಟ್ ಕ್ರಿಕೆಟ್, ಡ್ರಿಂಕ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್,............ಲಿವ್ ಕ್ರಿಕೆಟ್, ಡೈ (ಫಾರ್) ಕ್ರಿಕೆಟ್" ಆಗಬಾರದಷ್ಟೆ! ದೇಶದಲ್ಲಿ ಎಲ್ಲಿ ನೋಡಿದರೂ ಕ್ರಿಕೆಟ್. ಯಾರ ಬಾಯಲ್ಲಿ ನೋಡಿದರೂ ಕ್ರಿಕೆಟ್. ಯಾವಾಗ ನೋಡಿದರೂ ಕ್ರಿಕೆಟ್. ಒಂದೋ, ಅನವರತ ಆಡುವವರು, ಇಲ್ಲವೇ ಅನವರತ ನೋಡುವವರು. ಇದರಿಂದಾಗಿ ಅಂತಿಮವಾಗಿ ನಮ್ಮ ಸಮಯವೇ ಹಾಳು, ನಮ್ಮ ಚಟುವಟಿಕೆಯೇ ಹಾಳು, ನಮ್ಮ ಕಿಸೆಗೇ ಕತ್ತರಿ, ಮಾತ್ರವಲ್ಲ, ಇತರ ಕ್ರೀಡೆಗಳಿಗೂ ಕಂಟಕ! ಕ್ರಿಕೆಟ್ ಎಂಬ ಕಣ್ಣು ಕುಕ್ಕುವ ಬೆಳಕಿನಲ್ಲಿ ನಮಗೆ ಬೇರಾವ ಅದ್ಭುತ ಆಟವೂ ಗೋಚರಿಸುತ್ತಲೇಇಲ್ಲ! ಇತರ ಒಂದೆರಡು ಕ್ರೀಡೆ ಬಿಟ್ಟರೆ ಬೇರೆ ಕ್ರೀಡೆಗಳಿಗೆ ಹಾಗೂ ಕ್ರೀಡಾಳುಗಳಿಗೆ ಹಣವೂ ಇಲ್ಲ, ಪ್ರೋತ್ಸಾಹವೂ ಇಲ್ಲ. ಇಷ್ಟಾಗಿಯೂ ಹಾಕಿಯಲ್ಲಿ, ಚೆಸ್‌ನಲ್ಲಿ, ಬಿಲಿಯರ್ಡ್ಸ್‌ನಲ್ಲಿ, ಬ್ಯಾಡ್ಮಿಂಟನ್‌ನಲ್ಲಿ ಮಂತಾದ ಆಟಗಳಲ್ಲಿ ನಮ್ಮ ಕ್ರೀಡಾಳುಗಳು ವಿಶ್ವಮಟ್ಟದ ಸಾಧನೆ ಮಾಡಿದರೆ ಆ ಸಾಧನೆಗೆ ಸೂಕ್ತ ಪ್ರೋತ್ಸಾಹವೂ ಇಲ್ಲ, ತಕ್ಕ ಪ್ರಚಾರವೂ ಇಲ್ಲ.

ಹೀಗೊಂದು ಲೆಕ್ಕಾಚಾರ
------------------------
ಹೀಗೇ ಒಂದು ಲೆಕ್ಕಾಚಾರದತ್ತ ನಿಮ್ಮನ್ನು ಕೊಂಡೊಯ್ಯುತ್ತೇನೆ; ಮೈದಾನ ನುಂಗುವ ರಾಕ್ಷಸ ಗಾಲ್ಫ್ ಅನ್ನು ಬದಿಗಿಟ್ಟು ನೋಡಿದರೆ, ಹಾಕಿ, ಫುಟ್‌ಬಾಲ್ ಮುಂತಾದ ಆಟಗಳಿಗೆ ಕ್ರಿಕೆಟ್ ಮೈದಾನಕ್ಕಿಂತ ಚಿಕ್ಕ ಮೈದಾನ ಸಾಕು. ಏಕಕಾಲದಲ್ಲಿ ಕ್ರಿಕೆಟ್ ಆಟಗಾರರಿಗಿಂತ ಹೆಚ್ಚು ಆಟಗಾರರು ಆಡಬಹುದು. ಕ್ರಿಕೆಟ್‌ನಂತೆ ಇಡೀ ದಿನ ವ್ಯಯವಾಗದೆ ಒಂದೆರಡು ಗಂಟೆಗಳಲ್ಲಿ ಆಟ ಮುಗಿದುಹೋಗುತ್ತದೆ. ಈ ಮೂರು ಅನುಕೂಲಗಳಿಂದಾಗಿ, ಕ್ರಿಕೆಟ್ ಅಭ್ಯಾಸಿಗಳಿಗಿಂತ ಹೆಚ್ಚು ಸಂಖ್ಯೆಯ ಮಕ್ಕಳು-ವಿದ್ಯಾರ್ಥಿಗಳು-ಯುವಕರು ಆ ಒಂದು ಮೈದಾನದಲ್ಲಿ ಮತ್ತು ಅಷ್ಟೇ ವೇಳೆಯಲ್ಲಿ ಬೇರೆ ಆಟಗಳನ್ನು ಕಲಿಯಬಹುದು. ಶಾಲಾ ಕಾಲೇಜುಗಳ ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ಶಿಕ್ಷಕರು ವಿವಿಧ ಆಟಗಳಲ್ಲಿ ತೊಡಗಿಸಬಹುದು. ನಲಿವು, ಆರೋಗ್ಯ ಮತ್ತು ಸಾಧನೆ ಈ ಮೂರೂ ವಿಷಯಗಳಲ್ಲೂ ಹೆಚ್ಚಿನ ಲಾಭವನ್ನು ಪಡೆಯಬಹುದು. ಆದರೀಗ ಏನಾಗಿದೆ? ಅದೇ ತಾನೇ ನಡೆಯಲು ಕಲಿಯುತ್ತಿರುವ ಎಳೆ ಮಕ್ಕಳಿಂದ ಮೊದಲ್ಗೊಂಡು ಮುದುಕರವರೆಗೆ ಎಲ್ಲರೂ ಬರೀ ಕ್ರಿಕೆಟ್ ಆಡುವವರೇ! ಯಾವ ಮೈದಾನದಲ್ಲಿ ನೋಡಿದರೂ ಕ್ರಿಕೆಟ್ಟೇ!

ಕ್ರಿಕೆಟ್ ಬೇಕು. ಆದರೆ ಅದಕ್ಕೊಂದು ಮಿತಿಯಿರಬೇಕು. ಕ್ರಿಕೆಟ್ ಆಗಲೀ ಯಾವೊಂದು ಆಟವೇ ಆಗಲೀ ಇತರ ಕ್ರೀಡೆಗಳನ್ನು ನುಂಗಿ ತಾನೊಂದೇ ಮೆರೆಯಲೆತ್ನಿಸುವುದು, ಅದೂ ಭಾರತದಂಥ ಬೃಹತ್ ದೇಶದಲ್ಲಿ, ಸರಿಯಲ್ಲ.

ಕ್ರಿಕೆಟ್‌ಮೇಲಿನ ನಮ್ಮ ಈ ಅತಿ ವ್ಯಾಮೊಹವನ್ನೇ ಅಲ್ಲವೆ ಕಂಪೆನಿಗಳು ನಗದೀಕರಿಸಿಕೊಳ್ಳುತ್ತಿರುವುದು? ಅಭಿಮಾನಿಗಳಾದ ನಾವು ಹೆಚ್ಚಿನ ಸಂಖ್ಯೆಯಲ್ಲಿ ಇತರ ಆಟಗಳೆಡೆಗೂ ಗಮನ ಹರಿಸಿದೆವೆಂದರೆ ಆಗ ಇದೇ ಕಂಪೆನಿಗಳು ಆ ಆಟಗಳಮೇಲೆಯೂ ಜಾಹಿರಾತು, ಪ್ರಾಯೋಜಕತ್ವ ಮುಂತಾಗಿ ಹಣ ಹೂಡುತ್ತವಷ್ಟೆ. ಕನಿಷ್ಟಪಕ್ಷ, ನಮ್ಮ ಹಣವು ಇತರ ಆಟಗಳಿಗೂ ಒಂದಿಷ್ಟು ಹರಿದು ಆ ಆಟಗಳೂ ಹಾಗೂ ಆಟಗಾರರೂ ಪ್ರಗತಿ ಹೊಂದುವುದು ಸಂಭವ ತಾನೇ. ಬೇರೆ ಆಟಗಳನ್ನೂ ನಾವು ಆಪ್ತವಾಗಿಸಿಕೊಳ್ಳುವುದು ಅಸಂಭವವೇನಲ್ಲ. ಈ ನನ್ನ ಅಭಿಪ್ರಾಯದ ಸಮರ್ಥನೆಗೆ ಟೆನ್ನಿಸ್ ಕ್ಷೇತ್ರದಲ್ಲಿ ಸಾನಿಯಾ ಮಿರ್ಜಾ ಪ್ರವೇಶ ಮತ್ತು ಸಾಧನೆಯ ಉದಾಹರಣೆ ಸಾಕಲ್ಲವೆ? ಕ್ರಿಕೆಟ್ ಆಡೋಣ, ನೋಡೋಣ, ಗೆದ್ದಾಗ ಸಂಭ್ರಮಿಸೋಣ. ಅದಕ್ಕೊಂದು ಗರಿಷ್ಠ ಮಿತಿಯನ್ನು ಹಾಕಿ ಇತರ ಆಟಗಳಿಗೂ ಪ್ರೋತ್ಸಾಹ ನೀಡೋಣ; ನಮ್ಮ ಮಕ್ಕಳಿಗೆ ಎಳವೆಯಿಂದಲೇ ಇತರ ಆಟಗಳ ಬಗ್ಗೆಯೂ ಹೆಚ್ಚೆಚ್ಚು ಅರಿವು-ಆಸಕ್ತಿ ಹುಟ್ಟಿಸೋಣ. ಏನಂತೀರಿ?

ನಾನು ಕ್ರಿಕೆಟ್ ದ್ವೇಷಿಯೇನಲ್ಲ. ಬ್ಯಾಂಕ್ ಅಧಿಕಾರಿಯಾಗಿದ್ದ ನನ್ನ ಕೈಕೆಳಗೆ ಸುಮಾರು ಎರಡು ದಶಕಗಳ ಹಿಂದೆ ಸುನಿಲ್ ಜೋಶಿ ಕೆಲಸ ಮಾಡುತ್ತಿದ್ದ. ಮಧ್ಯಾಹ್ನಾನಂತರ ಕ್ರಿಕೆಟ್ ಆಟಕ್ಕಾಗಿ ಹೊರಹೋಗಲು ಆತನಿಗೆ ಅನುಮತಿ ನೀಡುವಲ್ಲಿ ಉನ್ನತಾಧಿಕಾರಿಯೊಬ್ಬರು ಮನಸ್ಸುಮಾಡದಿದ್ದಾಗ ನಾನು ಸುನಿಲ್ ಜೋಶಿಯ ಪರವಾಗಿ ಕಾರ್ಯೋನ್ಮುಖನಾಗಿದ್ದೆ. ನನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಅಂತರರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಒಬ್ಬ ಸಾಧನೆಯ ನಿಟ್ಟಿನಲ್ಲಿ ಹಣದ ಕೊರತೆಯಿಂದಾಗಿ ಪಾಡುಪಟ್ಟಿದ್ದನ್ನೂ ನಾನು ಗಮನಿಸಿದ್ದೇನೆ.

ಒಲಿಂಪಿಕ್ಸ್ ಸಾಧನೆ
---------------------
ಒಲಿಂಪಿಕ್ಸ್‌ನಲ್ಲಿ ನಮ್ಮ ಸಾಧನೆ ಶೂನ್ಯಕ್ಕೆ ಹತ್ತಿರ. ಒಲಿಂಪಿಕ್ಸ್ ಸಾಧನೆಯ ವಿಷಯದಲ್ಲಿ ನೆರೆರಾಷ್ಟ್ರ ಚೀನಾದ ಮುಂದೆ ನಾವು ಏನೇನೂ ಅಲ್ಲ. ಚೀನಾ ವಿರುದ್ಧ ಯುದ್ಧದ ಸಮಯದಲ್ಲಿ ನಾವು ಚೀನೀಯರನ್ನು ಜಿರಲೆ-ಕಪ್ಪೆ-ಹಾವು ತಿನ್ನುವವರೆಂದು ಹೀಯಾಳಿಸಿದೆವು. ಯುದ್ಧವನ್ನು ಸೋತೆವು. ಕ್ರೀಡಾ ತರಬೇತಿಗಾಗಿ ಮಕ್ಕಳನ್ನು ಹಿಂಸಿಸುವವರೆಂದು ಬೀಜಿಂಗ್ ಒಲಿಂಪಿಕ್ಸ್ ಸಂದರ್ಭದಲ್ಲಿ ಚೀನೀಯರನ್ನು ನಾವು ತೆಗಳಿದೆವು. ಅವರು ನೂರು ಪದಕಗಳನ್ನು ಗೆದ್ದರು, ನಾವು ಮೂರಕ್ಕೆ ತೃಪ್ತಿಪಟ್ಟುಕೊಂಡೆವು! ಇಷ್ಟಾದಮೇಲೂ ಅವರ ಕ್ರೀಡಾ ತರಬೇತಿ ಕಾಲದ ತಥಾಕಥಿತ ಬಾಲಶೋಷಣೆಯನ್ನು ಟೀಕಿಸುವುದನ್ನು ನಾವು ನಿಲ್ಲಿಸಲಿಲ್ಲ. ಎಳೆ ಕಂದಮ್ಮಗಳನ್ನು ಪ್ರತಿದಿನ ಬೇಬಿ ಸಿಟ್ಟಿಂಗ್ ಕೇಂದ್ರಗಳಿಗೆ ಅಟ್ಟಿ ತಂದೆತಾಯಂದಿರು ನೌಕರಿಗೆ ಬಿಜಯಂಗೈಯುವುದೂ ಒಂದು ರೀತಿಯ ಶಿಶುಹಿಂಸೆಯೇ ಎನ್ನುವುದನ್ನು ನಾವು ಮರೆತಂತಿದೆ!

ಕೆರೆ-ಕೊಳ್ಳ-ನದಿ-ಸರೋವರಗಳಲ್ಲಿ ಸ್ವಚ್ಛಂದ ಈಜುವ ನಮ್ಮ ಗ್ರಾಮೀಣ ಬಾಲಕ-ಬಾಲಕಿಯರಿಗೆ, ಹೊಟ್ಟೆಪಾಡಿಗಾಗಿ ಹಾದಿಬೀದಿಗಳಲ್ಲಿ ದೊಂಬರಾಟವಾಡುವ ಹುಡುಗ-ಹುಡುಗಿಯರಿಗೆ, ಬೆಟ್ಟ-ಗುಡ್ಡ-ಕಣಿವೆ-ಕಂದರಗಳಲ್ಲಿ ಜೀವಿಸುವ ಆದಿವಾಸಿಗಳಿಗೆ, ಇಂಥವರಿಗೆಲ್ಲ ಶಿಸ್ತುಬದ್ಧ ತರಬೇತು ನೀಡಿದರೆ ಒಲಿಂಪಿಕ್ಸ್ ಮೊದಲಾದ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ನಮ್ಮ ದೇಶವು ದಂಡಿಯಾಗಿ ಪದಕಗಳನ್ನು ಕೊಳ್ಳೆಹೊಡೆಯುವುದರಲ್ಲಿ ಸಂಶಯವಿಲ್ಲ. ಆದರೇನು ಮಾಡುವುದು, ನಮ್ಮನ್ನಿಂದು ಕ್ರಿಕೆಟ್ಟೊಂದೇ ಆಕ್ರಮಿಸಿಕೊಂಡಿಬಿಟ್ಟಿದೆ! ಕ್ರಿಕೆಟ್ಟಿನೆದುರು ನಮಗಿಂದು ಉಳಿದ ಕ್ರೀಡೆಗಳೆಲ್ಲ ಯಃಕಶ್ಚಿತ್ ಆಗಿ ಕಾಣತೊಡಗಿವೆ!

ಈ ಸಲದ ಟ್ವೆಂಟಿ೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಫ್ರೆಂಚ್ ಓಪನ್ ಟೆನ್ನಿಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್ (ಚೆಕ್ ರಿಪಬ್ಲಿಕ್‌ನ ಲೂಕಾಸ್ ಡ್ಲೌಹಿ ಜೊತೆಗೂಡಿ) ಡಬಲ್ಸ್ ಪ್ರಶಸ್ತಿ ಗೆದ್ದದ್ದು ದೊಡ್ಡ ಸುದ್ದಿಯಾಗಲಿಲ್ಲ, ಆದರೆ ಅದೇ ದಿನ ಟ್ವೆಂಟಿ೨೦ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತವು ದುರ್ಬಲ ಬಾಂಗ್ಲಾದೇಶದ ವಿರುದ್ಧ ಆರಂಭಿಕ ಪಂದ್ಯವನ್ನು ಗೆದ್ದದ್ದು ನಮ್ಮ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಯಿತು! ಕ್ರಿಕೆಟ್ ಫೈನಲ್‌ನ ದಿನವೇ ನಮ್ಮ ಸೈನಾ ನೆಹ್ವಾಲ್ ’ಇಂಡೋನೇಷ್ಯಾ ಸೂಪರ್ ಸೀರೀಸ್’ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದದ್ದು ಮಾಧ್ಯಮಗಳಿಗೆ ಕ್ರಿಕೆಟ್‌ನಷ್ಟು ದೊಡ್ಡ ಸುದ್ದಿಯಾಗಿ ಕಂಡಿಲ್ಲ, ಬಹುಪಾಲು ಪ್ರಜೆಗಳಿಗೆ ಸೈನಾ ಹೆಸರೇ ಗೊತ್ತಿಲ್ಲ! ಚೆಸ್‌ನಲ್ಲಿ ವಿಶ್ವ ಛಾಂಪಿಯನ್ ಆಗಿ ಮೆರೆದ ನಮ್ಮ ವಿಶ್ವನಾಥನ್ ಆನಂದ್ ಜನಪ್ರಿಯತೆಯು ನಮ್ಮೀ ದೇಶದಲ್ಲಿ ನಮ್ಮ ಕ್ರಿಕೆಟ್ಟಿಗರ ಜನಪ್ರಿಯತೆಯ ಮುಂದೆ ಏನೂ ಅಲ್ಲ! ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನ ವಿಶ್ವಶ್ರೇಷ್ಠ ಆಟಗಾರನಾಗಿರುವ ನಮ್ಮ ಬೆಂಗಳೂರಿನ ಹುಡುಗ ಪಂಕಜ್ ಅಡ್ವಾಣಿಯ ಹೆಸರಾಗಲೀ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟವಾಗಲೀ ವಿದ್ಯಾವಂತರಾದ ಅದೆಷ್ಟೋ ಕನ್ನಡಿಗರಿಗೆ ಗೊತ್ತೇ ಇಲ್ಲ! ಆದರೆ ಕ್ರಿಕೆಟ್ ಗೊತ್ತಿಲ್ಲದ ವಿದ್ಯಾವಂತರೇ ಇಲ್ಲ!

ನಮ್ಮ ಈ ಅತಿಯಾದ ಕ್ರಿಕೆಟ್ ವ್ಯಾಮೋಹವು ಇತರ ಕ್ರೀಡೆಗಳನ್ನು ಮಂಕಾಗಿಸಿದೆ; ಇತರ ಕ್ರೀಡಾಳುಗಳನ್ನು ಮೂಲೆಗುಂಪಾಗಿಸಿದೆ. ಹೋದಲ್ಲಿ-ಬಂದಲ್ಲಿ ನಮ್ಮ ಕ್ರಿಕೆಟ್ಟಿಗರಿಗೆ ರಾಜೋಪಚಾರ ಮತ್ತು ಹೇರಳ ಹಣ ದೊರೆಯುತ್ತಿದ್ದರೆ ಇತರ ಕ್ರೀಡಾಳುಗಳು ಪಂದ್ಯಗಳಲ್ಲಿ ಭಾಗವಹಿಸಲು ಸರ್ಕಾರದೆದುರು ಮತ್ತು ಪ್ರಾಯೋಜಕರೆದುರು ಭಿಕ್ಷಾಪಾತ್ರೆ ಹಿಡಿದು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ! ಕೆಲವೇ ದೇಶಗಳಲ್ಲಿ - ಮುಖ್ಯವಾಗಿ, ಬ್ರಿಟಿಷರು ಆಳಿದ ದೇಶಗಳಲ್ಲಿ - ಚಾಲ್ತಿಯಲ್ಲಿರುವ ಕ್ರಿಕೆಟ್‌ನಿಂದಾಗಿ, ವಿಶ್ವಾದ್ಯಂತ ಚಾಲ್ತಿಯಲ್ಲಿರುವ ಅನೇಕ ಕ್ರೀಡೆಗಳು ಭಾರತದಲ್ಲಿಂದು ಅವಗಣನೆಗೆ ತುತ್ತಾಗಿವೆ.

ಈ ಅನ್ಯಾಯ ನಿವಾರಣೆಗೊಳ್ಳಬೇಕು. ಹಾಗಾಗಬೇಕಾದರೆ ಮೊದಲು ನಾವು ಅನ್ಯ ಕ್ರೀಡೆಗಳ ಬಗ್ಗೆಯೂ ಒಲವು ಬೆಳೆಸಿಕೊಳ್ಳುವ ಚಿಂತನ ಮಾಡಬೇಕು. ನಮ್ಮ ಮಕ್ಕಳು ನಡೆಯುವಂತಾಗುವ ಮೊದಲೇ ಅವುಗಳ ಕೈಗೆ ಕ್ರಿಕೆಟ್ ಬ್ಯಾಟು-ಬಾಲು ಕೊಡುವ ನಾವು ಇತರ ಆಟಗಳೆಡೆಗೂ ನಮ್ಮ ಮಕ್ಕಳ ಗಮನ ಹರಿಯುವಂತೆ ನೋಡಿಕೊಳ್ಳಬೇಕು. ಆಟವೆಂದರೆ ಕ್ರಿಕೆಟ್ಟೊಂದೇ ಅಲ್ಲ ಎಂಬುದನ್ನು ನಾವು ಅರಿಯಬೇಕು.

ಮೂರನೇ ಶಕ್ತಿಕೂಟ
--------------------
ಕೊನೆಯಲ್ಲಿ, ನನ್ನ ಹೃದಯದಾಳದ ಒಂದು ಹಾರೈಕೆ: ಭಾರತ-ಪಾಕಿಸ್ತಾನದ ಬಾಂಧವ್ಯ ಸುಧಾರಣೆಯು ತಕ್ಕಮಟ್ಟಿಗೆ ಕ್ರಿಕೆಟ್‌ನಿಂದ ಸಾಧ್ಯ. ಅದು ಸಾಧ್ಯವಾಗುವುದು ಗೆಲುವನ್ನು ಈಗಿನಂತೆ ಕೊಚ್ಚಿಕೊಂಡು ಎದುರಾಳಿಯನ್ನು ಚುಚ್ಚುವುದರಿಂದ ಅಲ್ಲ, ಸೋಲನ್ನು ಎತ್ತಿಕೊಂಡು ಕತ್ತಿ ಮಸೆಯುವುದರಿಂದ ಅಲ್ಲ. ಕ್ರಿಕೆಟ್‌ನ ಗೆಲುವು, ಸೋಲು ಎರಡನ್ನೂ ಎರಡೂ ದೇಶಗಳೂ ಸ್ನೇಹಪೂರ್ವಕವಾಗಿ ಸ್ವೀಕರಿಸಿ ಖುಷಿ-ಬೇಸರಗಳನ್ನು ಮನಃಪೂರ್ವಕವಾಗಿ ಹಂಚಿಕೊಳ್ಳುವುದರಿಂದ ಬಾಂಧವ್ಯ ಸುಧಾರಣೆ ಸಾಧ್ಯ. ಲೋಹಿಯಾ ಹೇಳಿದಂತೆ,"ಏಷಿಯಾ ಮತ್ತು ಆಫ್ರಿಕಾಗಳ ಸ್ವತಂತ್ರ ರಾಷ್ಟ್ರಗಳು ಒಟ್ಟಾಗಿ ಮೂರನೇ ಶಕ್ತಿಕೂಟವಾಗಬೇಕು." ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣದ ಹೆಸರಿನಲ್ಲಿ ಅಮೆರಿಕವೇ ಮೊದಲಾದ ಮುಂದುವರಿದ ರಾಷ್ಟ್ರಗಳು ಮೂರನೇ ಜಗತ್ತನ್ನು (ಹಿಂದುಳಿದ ಮತ್ತು ಅಭಿವೃದ್ಧಿಶೀಲ ದೇಶಗಳನ್ನು) ಸುಲಿಯುತ್ತಿರುವ ಈ ದಿನಗಳಲ್ಲಿ ಇಂಥದೊಂದು ಮೂರನೇ ಶಕ್ತಿಯ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚು ಇದೆ. ಭಾರತ-ಪಾಕಿಸ್ತಾನದ ಮಟ್ಟಿಗೆ ಕ್ರಿಕೆಟ್ ಆಟವು ಈ ಅವಶ್ಯಕತೆಯನ್ನು ಪೂರೈಸುವಲ್ಲಿ ಮಹತ್ತರ ಕೊಡುಗೆ ನೀಡಬಲ್ಲುದು, ನೀಡಲಿ. ಈ ನಿಟ್ಟಿನಲ್ಲಿ ಪಾಕಿಸ್ತಾನವು ಇತ್ಯಾತ್ಮಕ ಗುಣದ ಕೊರತೆ ಹೊಂದಿರುವುದರಿಂದ ಭಾರತಕ್ಕಿಂತ ಪಾಕ್‌ನ ಗುಣ ಪರಿವರ್ತನೆಯ ಅವಶ್ಯಕತೆ ಹೆಚ್ಚು ಇದೆ. ಪಾಕಿಸ್ತಾನವು ಭಾರತವನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು. ಕ್ರಿಕೆಟ್ ಮೂಲಕವೇ ಆ ಕಲಿಕೆ ಶುರುವಾಗಲಿ. ಇಲ್ಲಿನ ನಮ್ಮ ಮುಸ್ಲಿಂ ಬಾಂಧವರು ಅಂಥ ಕಲಿಕೆಯ ಬಗ್ಗೆ - ಸೂಕ್ತ ನಡಾವಳಿಗಳ ಮೂಲಕ ಮತ್ತು ಸೂಕ್ತ ಮಾಧ್ಯಮಗಳ ಮೂಲಕ - ಪಾಕಿಸ್ತಾನಕ್ಕೆ ಅರಿವುಂಟುಮಾಡಲಿ. ಮುಸ್ಲಿಮೇತರರು ಈ ವಿಷಯದಲ್ಲಿ ಸಹಕರಿಸಲಿ.

ಈ ಲೇಖನದಲ್ಲಿನ ನನ್ನ ಅಭಿಪ್ರಾಯಗಳಿಗೆ ಸಮರ್ಥನೆಯಾಗಿ ಕೆಲ ಮಾಹಿತಿಗಳನ್ನು ಈ ಕೆಳಗೆ ನೀಡಿದ್ದೇನೆ.

ಇವರ ಕಥೆ-ವ್ಯಥೆ ಓದಿ
----------------------
ಮಿಹಿರ್ ಸೆನ್:
ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಪ್ರಪ್ರಥಮ ಏಷಿಯನ್ ಈತ. ಎಲ್ಲ ಏಳು ಜಲಸಂಧಿಗಳನ್ನೂ ಒಂದೇ ವರ್ಷದಲ್ಲಿ ಈಜಿ ದಾಟಿದ ಸಾಹಸಿ. ಪದ್ಮಶ್ರೀ(೧೯೫೯) ಮತ್ತು ಪದ್ಮಭೂಷಣ(೧೯೬೭) ಪ್ರಶಸ್ತಿ ವಿಜೇತ. ಜೀವನಾಂತ್ಯದಲ್ಲಿ ಆಲ್ಜಿಮರ್ ಮತ್ತು ಪಾರ್ಕಿನ್‌ಸನ್ ಕಾಯಿಲೆಗಳಿಂದ ಬಳಲುತ್ತಿದ್ದ ಈತನ ನೆರವಿಗೆ ಸರ್ಕಾರವೂ ಸೇರಿದಂತೆ ಯಾರೂ ಬರಲಿಲ್ಲ. ಎಲ್ಲೋ ಕೆಲವರ ದಾನ, ಮತ್ತು, ಆಸ್ಪತ್ರೆ ಸೇರಿದಮೇಲೆ ಒಂದು ವರ್ಷ ಹೆಣ್ಣುಮಕ್ಕಳು (ಈತನಿಗೆ ನಾಲ್ವರು ಪುತ್ರಿಯರು) ಕಳಿಸುತ್ತಿದ್ದ ಸಣ್ಣ ಮೊತ್ತದ ಹಣ, ಇಷ್ಟರಿಂದಲೇ ದಿನ ದೂಡಬೇಕಾದ ಪರಿಸ್ಥಿತಿ ಈತನದಾಯಿತು. ಈ ನತದೃಷ್ಟ ಸಾಹಸಿ ಆಸ್ಪತ್ರೆಯಲ್ಲಿ ಅಜ್ಞಾತನ ಬಾಳು ಬಾಳಿ ಅಜ್ಞಾತನಂತೆ ತನ್ನ ೬೭ನೇ ವಯಸ್ಸಿನಲ್ಲಿ ಬ್ರಾಂಕಿಯಲ್ ನ್ಯುಮೋನಿಯಾ, ಹಾರ್ಟ್ ಅಟ್ಯಾಕ್ ಸಹಿತ ಕಾಯಿಲೆಗಳ ಭಾರದಿಂದ ಸಾಯುವಾಗ (ಜೂನ್ ೧೧, ೧೯೯೭) ಈತನ ಹಾಸಿಗೆಯ ಪಕ್ಕದಲ್ಲಿ ಯಾರೂ ಇರಲಿಲ್ಲ! ಜಗತ್ತಾಗಲೇ ಬಹುತೇಕ ಈತನನ್ನು ಮರೆತೇಬಿಟ್ಟಿತ್ತು!

ಜಿಯಾಉದ್ದೀನ್ ಖಾತಿಬ್:
ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸರ್ ಆಗಿರುವ ಈತನಿಗೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸರ್ಕಾರದ ಸಹಾಯವೂ ಇಲ್ಲ, ಖಾಸಗಿ ಪ್ರಾಯೋಜಕರೂ ಇಲ್ಲ. ಧನಸಹಾಯಕ್ಕಾಗಿ ಒದ್ದಾಡಿ ಒದ್ದಾಡಿ ಸುಸ್ತಾದವನೀತ. ಇವನನ್ನು ಸ್ಟಂಟ್ ಇನ್‌ಸ್ಟ್ರಕ್ಟರ್‌ನನ್ನಾಗಿ ನೇಮಿಸಿಕೊಂಡ ಬಾಲಿವುಡ್ ತಾರೆಯರಾದ ಜಾನ್ ಅಬ್ರಹಾಂ, ಬಿಪಾಷಾ ಬಸು ಮೊದಲಾದವರು ಕೂಡಾ ಈತನ ನೆರವಿಗೆ ಬರಲಿಲ್ಲ!

ನಿಶಾ ಮಿಲ್ಲೆಟ್:
ಅಂತಾರಾಷ್ಟ್ರೀಯ ಮಟ್ಟದ ಈಜು ಸೌಲಭ್ಯ ಸಿಗುತ್ತದೆಂದು ಸಂಸಾರ ಸಮೇತ ಕರ್ನಾಟಕಕ್ಕೆ ಬಂದು ನೆಲಸಿದ ಈಜುಗಾರ್ತಿ ಈಕೆ. ಈಜಿನಲ್ಲಿ ಈಕೆಯ ಸಾಧನೆ ಅಮೋಘ. ಇಂಫಾಲ್‌ನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಗೆದ್ದ ೨೮ ಬಂಗಾರದ ಪದಕಗಳಲ್ಲಿ ಅರ್ಧಪಾಲು ಈಕೆಯದೇ! ಈಕೆ ಗೆದ್ದ ಪದಕಗಳಿಗೆ, ಮುರಿದ ದಾಖಲೆಗಳಿಗೆ ಲೆಕ್ಕವಿಲ್ಲ. ದೊಡ್ಡ ಶಸ್ತ್ರಚಿಕಿತ್ಸೆಯೊಂದರ ನಂತರವೂ ಈಜಿ ದಾಖಲೆಗಳನ್ನು ಮುರಿದ ಸಾಹಸಿ ಈಕೆ! ಅರ್ಜುನ ಪ್ರಶಸ್ತಿ(೧೯೯೯) ವಿಜೇತೆ.

ಗೆದ್ದ ಪ್ರತಿ ಬಂಗಾರದ ಪದಕಕ್ಕೂ ೩೦೦೦೦ ರೂ. ಮತ್ತು ಮುರಿದ ಪ್ರತಿ ದಾಖಲೆಗೂ ೫೦೦೦೦ ರೂ. ಕೊಡುವ ಕರ್ನಾಟಕ ಸರ್ಕಾರದ ನೀತಿಯಿದ್ದ ಕಾಲದಲ್ಲಿ ಈಕೆ ಒಂಭತ್ತು ಬಂಗಾರದ ಪದಕ ಗಳಿಸಿ ಒಂಭತ್ತು ದಾಖಲೆ ಮುರಿದಾಗ ಈಕೆಗೆ ಸರ್ಕಾರ ಕೊಟ್ಟದ್ದು ಕೇವಲ ಒಂದೂವರೆ ಲಕ್ಷ ರೂಪಾಯಿ! ಸರ್ಕಾರದ "ಜಾಣ" ಲೆಕ್ಕಾಚಾರ ಅಂಥದು! ಸ್ವಂತ ಹಣದಲ್ಲೇ ಬಹುಪಾಲು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಹೋಗಿ ದೇಶಕ್ಕೆ ಪದಕಗಳನ್ನು ಬಾಚಿಕೊಟ್ಟ ಈಕೆ ವಿದೇಶದ ತರಬೇತಿಗೂ ಯಾರೂ ಪ್ರಾಯೋಜಕರು ಸಿಗದಾದಾಗ ಬೇಸತ್ತು ಇದೀಗ ವಿದ್ಯಾರ್ಥಿಗಳಿಗೆ ಈಜುವಿಕೆಯ ಕೋಚಿಂಗ್ ಮಾಡುತ್ತಿದ್ದಾರೆ.

ಇವು ಕೆಲವು ಉದಾಹರಣೆಗಳಷ್ಟೆ.

ಈ ಸಾಧಕರನ್ನೆಷ್ಟು ಬಲ್ಲಿರಿ?
---------------------------
ಫುಟ್‌ಬಾಲ್; ಫುಟ್‌ಬಾಲ್‌ನಲ್ಲಿ ಭಾರತದ ಸಾಧನೆ ಅಂಥದೇನಿಲ್ಲವೆನ್ನುತ್ತಿದ್ದಾಗ್ಗ್ಯೂ ನಮ್ಮವರು ೨೦೦೨ರಲ್ಲಿ ವಿಯೆಟ್ನಾಂನಲ್ಲಿ ಎಲ್‌ಜಿ ಕಪ್ ಮತ್ತು ೧೯೯೩, ೧೯೯೭, ೧೯೯೯ ಮತ್ತು ೨೦೦೫ರಲ್ಲಿ ಒಟ್ಟು ನಾಲ್ಕು ಸಲ ಸೌತ್ ಏಷಿಯನ್ ಫುಟ್‌ಬಾಲ್ ಫೆಡರೇಷನ್ ಕಪ್ ಗೆದ್ದಿದ್ದಾರೆ.

ಕಬಡ್ಡಿ: ಪ್ರಪಂಚದ ಶ್ರೇಷ್ಠ ಟೀಮ್ ನಮ್ಮದು. ಆದರೆ ಈ ಆಟ ಮತ್ತು ಆಟಗಾರರ ತಂಡ ಎರಡಕ್ಕೂ ಪ್ರಚಾರ, ಪ್ರೋತ್ಸಾಹ ಸಾಲದು.

ಹಾಕಿ; ೧೯೭೫ರಲ್ಲಿ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್ ಗೆಲ್ಲುವುದರಿಂದ ಹಿಡಿದು ಹಾಕಿಯಲ್ಲಿ ನಮ್ಮವರ ಸಾಧನೆ ಅಸದಳ. ಆದರೆ, ಈ ವಿಶ್ವಕಪ್ ಗೆದ್ದ ನಾಯಕ ಅಜಿತ್‌ಪಾಲ್ ಸಿಂಗ್, ಅರ್ಜುನ್ ಪ್ರಶಸ್ತಿ ವಿಜೇತ ಗಗನ್ ಅಜಿತ್ ಸಿಂಗ್, ಅರ್ಜುನ್ ಪ್ರಶಸ್ತಿ ಮತ್ತು ಪದ್ಮಶ್ರೀ ವಿಜೇತ ಮೊಹಮ್ಮದ್ ಶಹೀದ್, ಖೇಲ್ ರತ್ನ ಪ್ರಶಸ್ತಿ ಮತ್ತು ಪದ್ಮಶ್ರೀ ವಿಜೇತ ಧನ್‌ರಾಜ್ ಪಿಳ್ಳೆ ಇವರ ಹೆಸರುಗಳನ್ನು ಅದೆಷ್ಟು ಜನರು ಬಲ್ಲರು? ಹಾಕಿ ದಂತಕಥೆ ಧ್ಯಾನ್‌ಚಂದ್ ಹೆಸರು ಅದೆಷ್ಟು ಜನರಿಗೆ ಗೊತ್ತು?

ಈಚಿನ ಇತರ ಕೆಲ ಪ್ರಮುಖ ಕ್ರೀಡಾಳುಗಳ ಹೆಸರುಗಳು ಇಂತಿವೆ:

ಬಿಲ್ಲುಗಾರಿಕೆ: ವಿಶ್ವ ದಾಖಲೆ ಮಾಡಿದ ಅರ್ಜುನ್ ಪ್ರಶಸ್ತಿ ವಿಜೇತ ಲಿಂಬಾರಾಮ್, ಅರ್ಜುನ್ ವಿಜೇತರಾದ ತರುಣ್‌ದೀಪ್ ರೈ ಮತ್ತು ಡೋಲಾ ಬ್ಯಾನರ್ಜಿ.

ಬ್ಯಾಡ್ಮಿಂಟನ್; ದಂತಕಥೆ ಪ್ರಕಾಶ್ ಪಡುಕೋಣೆ, ಸಮಾಜಹಿತದ ದೃಷ್ಟಿಯಿಂದ ಜಾಹಿರಾತಿನ ಆಫರ್ ಒಂದನ್ನು ನಿರಾಕರಿಸಿದ ಧೀಮಂತ ಪುಲ್ಲೆಲ ಗೋಪಿಚಂದ್, ಅರ್ಜುನ್ ಪ್ರಶಸ್ತಿ ವಿಜೇತೆ ಅಪರ್ಣಾ ಪೋಪಟ್ ಮತ್ತು ಪ್ರಸ್ತುತ ’ಇಂಡೋನೇಷ್ಯಾ ಸೂಪರ್ ಸೀರೀಸ್’ ಚಾಂಪಿಯನ್ ಸೈನಾ ನೆಹ್ವಾಲ್.

ಬಿಲಿಯರ್ಡ್ಸ್: ವಿಶ್ವ ಛಾಂಪಿಯನ್/ಸಾಧಕರಾದ ಮೈಕೇಲ್ ಫೆರೀರಾ, ಅಶೋಕ್ ಶಾಂಡಿಲ್ಯ, ಗೀತ್ ಸೇಥಿ ಮತ್ತು ನಮ್ಮ ಹೀರೋ ಪಂಕಜ್ ಆದ್ವಾನಿ.

ಬಾಕ್ಸಿಂಗ್: ಡಿಂಗ್‌ಕೋ ಸಿಂಗ್.

ಚೆಸ್: ದಂತಕಥೆಯಾಗಿರುವ ವಿಶ್ವನಾಥನ್ ಆನಂದ್ ಹಾಗೂ ಕೊನೇರು ಹಂಪಿ.

ಟೆನ್ನಿಸ್: ನಾನಾ ಪ್ರಮುಖ ಛಾಂಪಿಯನ್ ಪಟ್ಟಗಳನ್ನು ತಮ್ಮದಾಗಿಸಿಕೊಂಡ ರಾಮನಾಥನ್ ಕೃಷ್ಣನ್, ರಮೇಶ್ ಕೃಷ್ಣನ್, ವಿಜಯ್ ಅಮೃತರಾಜ್, ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ.

ಟೇಬಲ್ ಟೆನ್ನಿಸ್: ಚೇತನ್ ಬಬೂರ್, ಕಮಲೇಶ್ ಮೆಹ್ತಾ.

ಗಾಲ್ಫ್: ದಂತಕಥೆ ಮಿಲ್ಕಾ ಸಿಂಗ್‌ನ ಮಗ ಜೀವ್ ಮಿಲ್ಕಾ ಸಿಂಗ್.

ಷೂಟರ್‍ಸ್: ಒಲಿಂಪಿಕ್ ಹೀರೋ ರಾಜ್ಯವರ್ಧನ್ ಸಿಂಗ್ ರಾಥೋಡ್, ಅಭಿನವ್ ಭಿಂದ್ರಾ, ಅಂಜಲಿ ಭಾಗವತ್, ಜಸ್ಪಾಲ್ ರಾಣಾ, ೧೮ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಶ್ರೇಷ್ಠ ಕ್ರೀಡಾಳು ಪ್ರಶಸ್ತಿ ವಿಜೇತ ಸಮರೇಶ್ ಜಂಗ್.

ಅಥ್ಲೆಟಿಕ್ಸ್: ಅಂಜು ಬಾಬಿ ಜಾರ್ಜ್, ಪಿ.ಟಿ.ಉಷಾ, ಜ್ಯೋತಿರ್ಮಯಿ ಸಿಕ್ದರ್, ಟಿ.ಸಿ.ಯೋಹಾನನ್ ಮತ್ತು ದಂತಕಥೆ ಮಿಲ್ಕಾ ಸಿಂಗ್.

ಈಜು: ಖಜಾನ್ ಸಿಂಗ್, ಬೂಲಾ ಚೌಧರಿ.

ಇವರು ಕೆಲ ಪ್ರಮುಖರು ಅಷ್ಟೆ. ಕ್ರಿಕೆಟ್ಟನ್ನು ಜೀವಕ್ಕೆ ಸಮನಾಗಿ ಪ್ರೀತಿಸುವ ನಮ್ಮ ಅಭಿಮಾನಿಸಮೂಹದಲ್ಲಿ ಅದೆಷ್ಟು ಮಂದಿಗೆ ಈ ಕ್ರೀಡಾಳುಗಳ ಹೆಸರುಗಳು ಗೊತ್ತಿವೆ? ಇವರ ಪೈಕಿ ಕೇವಲ ಬೆರಳೆಣಿಕೆಯ ಕೆಲವರನ್ನುಳಿದು ಇತರರ್‍ಯಾರೂ, ತಮ್ಮ ಅಪ್ರತಿಮ ಸಾಧನೆಯ ಮಧ್ಯೆಯೂ, ಅಷ್ಟೇನೂ ಜನಪ್ರಿಯರೂ ಆಗಿಲ್ಲ, ಕಾಸೂ ಗಳಿಸಿಲ್ಲ. ಕ್ರಿಕೆಟ್ಟಿಗರಿಗೆ ಹೋಲಿಸಿದಾಗ ಇವರು ನತದೃಷ್ಟರೇ ಸರಿ. ಈ ಅಸಮಾನತೆಗೆ ಕಾರಣ ಕ್ರಿಕೆಟ್ ಹುಚ್ಚಿನ ನಾವು ಮತ್ತು ತಾರತಮ್ಯಭಾವದ ನಮ್ಮ ಸರ್ಕಾರಗಳೇ ಅಲ್ಲವೆ?
sunaath ಹೇಳಿದರು...

ಶಾಸ್ತ್ರಿಗಳೇ,
ಬಿಜಾಪುರದ ಮಕ್ಕಳು National Cycling champions. ಅವರಿಗೆ ಬಡತನದಿಂದಾಗಿ ಒಂದು ರೇಸಿಂಗ್ ಸೈಕಲ್ ಕೊಳ್ಳೋಕೆ ಆಗ್ತಾ ಇಲ್ಲ. ನಮ್ಮ ಕ್ರಿಕೆಟಿಗರು ಎಂಟೋ ಹತ್ತೋ ರನ್ನು ಹೊಡೆದು ಕೋಟಿಗಟ್ಟಲೆ ಗಳಿಸುತ್ತಾರೆ. ಹೀಗಾಗಿ ಆಯ್ಕೆಯಲ್ಲಿಯೂ ಸಹ ಸಾಕಷ್ಟು ರಾಜಕೀಯ ಇದೆ.
Cricket should be banned.

man with no name ಹೇಳಿದರು...

First of all, I wouldn't even bother commenting on statements like cricket should be banned. I have neither the patience nor the inclination to convince such people. You might say nobody entrusted me with this responsibility in the first place. But by the virtue of having frittered away a considerable amount of my boyhood indulging in this seemingly squanderous activity, I take it upon myself to put in my two ruppes worth here. And even my two rupees is more valuable than such rash a comment, which has already used up so many sentences of mine.

Blaming indirectly a mere "passtime activity" (yes, in quotes)for the plight of a country seems too far fetched to me. If that be the case then we should really question our merit and propriety to exist as a nation. I think our people are smarter than that. Our educated youth does not have such impressionable minds to play into the hands of the evil Corporations, hand in glove with the BCCI, in their apparent bid to siphon off people's hard earned money into their coffers. What you are talking about is simply an offshoot of a capitalist economy. You might want to blame Manmohan singh for this as he was the one who was instrumental in opening the doors to our economy to the various MNCs in question. They chose cricket because of it's marketablity. And cricket earned it by making itself marketable, first through the performances of the teams of the eighties and then because of the business acumen of people who were at the helm of the affairs administration wise.

By trying to connect cricket with the current state of the nation, one is missing the real point. I'm not omniscient enough to pin point at the problem, but I can say with confidence that it's definitely not cricket. To draw a parallel would be to blame Raj Kumar for the riots his death caused rather than calling it what it was, a law and order situation. People spend a lot of time watching movies, listening to music, being idle. And they prefer movies to theatre (play). And movies are twice or thrice as long as plays are. So is the solution to curb people's interest in movies? or repackaging the theatre to keep pace with the changing times? Yes, cricket is one of the longest form of sports duration wise, but nobody is forcing anybody to watch it. People consciouly spen their money to come and watch it. And that doesn't mean it hampers the productivity. The whole country doesn't stop working on a match day. If people do come to watch a day-match they probably would've utilised a leave that was due. Even my company has TVs installed in our cafeteria. That doesn't mean, we'll let our deadlines be stretched because of the match. If at all, we spend half an hour in front of the T.V, we stretch in the evening by half an hour. And I would not go on about how other sports like football reach a bigger audience than cricket. I run the risk of sounding too repititive. I would only like to say that the Organizers of the next FIFA world cup are taking a leaf out of IPL's book and contemplating reducing the ticket prices like in IPL to make it affordable to more people.

man with no name ಹೇಳಿದರು...

And now coming to the point of cricket having encroached into the lengths and breadths of other sports. Like I mentioned earlier, cricket is where it is today because it was marketed well, and little to no interference from the government was entertained. How K P S Gill could have been the president of the IHF long enough for him to throw the sport to a point of no return is beyond me. Viren Rasquinha, a very promising player in the Indian line up was so disillusioned by the handling of Hockey's administration that he quit the sport altogether and pursued an MBA degree at ISB. And when people did acheive great feats in other sports they did get recognised. A country whose sense of patriotism is slightly misplaced, where acheivements of people from other country with only Indian origins to their credit are lauded so much or works of art that augment the western stereotypes about India and Indians win major awards and are lapped up by the Indian media, it is really unimaginable that an acheivement by our own compatriot would go unnoticed. When sania won her solitary WTA title in Hyderabad the country rejoiced with her and the nation watched her exploits live on television. I watched Sania's third round loss to Serena Williams in her maiden outing at a grand slam though I knew Serena was at the pink of her form and our lass had no chance against her. And Saina Nehwal's victory at the Indonesian open was over and above the T20 world cup finals and that's how it was in today's dailies as well. P Gopichand's victory at the All England Badminton championship coincided with one of India's greatest cricketing acheivements, where Harbhajan, Laxman and Dravid scripted India's greatest victory in a Test match. But In the newspapers ( at least the ones that was we subscibe to) gave Gopichand's victory more prominence than Harbhajan's hat-trick.

You spoke about Yuvraj Singh getting as much money as he did for his exploits in the previous T 20 world cup. But, what you might also want to mention is the fact that Vijender Kumar Jitender Kumar and Akhil kumar were rewarded with 25 lakh rupees each even before they had won a medal. ( Only Vijender eventually won a medal).I know this wasn't the case before, but times are changing now. The first Rajiv Gandhi Khel Ratna award was bestowed upon a certain Vishwanathan Anand and not a bat wielding or a ball slinging virtuoso from another sporting discipline. I still rate Anand's acheivements in Chess much above what any cricketer has ever acheived (what with him having won multiple world championships and chess oscars and all), though finishing a close second to a certain illusionist called Dhyan Chand. And when Indian cricketers have crossed the line they have been reprimanded. A more saner member of the Gill community, M S Gill rightly admonished Dhoni and Harbhajan for not receiving their awards in person.

ne last comment before I turn in, it would be preposterous to use the fact that a certain sportsman from the fifties or sixties didn't get his due recognition for winning in a tournament as a means to criticize cricket simply because cricketers weren't rewarded back then for their acheivements either.

Cricket's boom started after India won two back to back world championships in 83 and 85.

Oh, and also, I'm only glad that I'm not in China and my country is as far from it's infuence as possible. I wouldn't want my freedom of speech, thought, right to a completely elected government, right to information taken away from me. Russia and Germany were the most prosperous countries during the rules of Stalin and Hitler respectively. We all know where that led these two countries to. I wouldn't want to be in a country that invests all it's time, energy and brains into trying to go one up on a particular nation just to prove a non existent point.

IF THERE IS EVEN AN OUNCE OF TRUTH OR SENSE IN WHAT I HAVE WRITTEN I STAND VINDICATED, ELSE I STAND CORRECTED. EITHER WAYS I WOULD REQUEST EVERYONE WHO HAS POSTED A COMMENT ON THIS ARTICLE TO READ THESE VIEWS OF MINE COMPLETELY


(ಇಂದಿನ, ಅಂದರೆ 18 ಸೆಪ್ಟೆಂಬರ್ 2009ರ DNA ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂದರ್ಶನ)

I am dying a new death every day: Baljit Singh

Tushar Dutt
Friday, September 18, 2009 2:51 IST
A freak injury nearly robbed Baljit Singh of his eyesight. While the hockeygoalkeeper will get over the physical pain, it is the mental trauma that is killing him every single day of his life. DNA finds out

How are you feeling now? How is the treatment going on?
The treatment is going step by step. So far, I have had two surgeries. There is some improvement, no doubt. When I was discharged from AIIMS (New Delhi), I had a zero vision in the right eye. However, it's around 10-15% now.

What are the doctors saying?
I get daily updates from the doctors and authorities here. The rehabilitation programme is expected to take at least six months to complete. Even then, there is no guarantee about getting back 100% vision.

Who is footing the bills? Is everything fine on the monetary front?

The Sports Authority of India (SAI) is paying for the treatment and my expenses here. But, I am encountering some financial problems as my father and a friend have accompanied me. SAI is taking care of my father's expenses but I am taking care of my friend.

Didn't you ask SAI to sponsor your friend? I presume he's there to help your father.
After I landed in Alabama, I had a doctor from India with me. My father came here a few days later. But the doctor left as soon as my father joined me. This is the first time he has stepped out of Chandigarh. He wasn't able to communicate with the doctors here. That's when we decided to have my friend here. We requested SAI to foot my friend's expenses, but they refused. Ultimately, we had to get him here on our own as we had no choice. The expenses, which have gone beyond Rs 2 lakh now, are being borne by us.

Apart from the treatment expenses, what support have you got from the Indian authorities?

This is the worst part. I have not received a single assurance call from the sports ministry, the Punjab government or the Centre. Nobody has promised a single penny for my future. Forget about the money, I haven't even got a single condolence call or assurance, saying that 'we care for you'. It is getting very depressing for me as the treatment is very slow and there is no guarantee for my future. I don't know if I'll be able to play again or not.

You must be very disappointed.

Yes, of course. I have always played for the pride of my country. In hockey, a player survives only because he plays for national pride as there are no big bucks in the game. The only thing I expect now is the moral support from the authorities. I am not getting that. I am dying a new death every day.

Do you think you are a victim of discrimination?
When Sachin Tendulkar was suffering from tennis elbow, everyone rushed to wish him good health. And mind you, his injury was curable. But when I got injured, no one even bothered to ask about my health. I have nothing against Sachin, and I respect him a lot. My point is that like Sachin, even we play for India. So why this discrimination? Yes, they (SAI) are paying for my treatment, lekin agar chot unhone di hai, toh ilaaj bhi unko hi karwana padega (if they have given caused the injury, then they will have to pay for that). I feel so bad that I did so much for my country and when I am going through trauma; my country is not there to support me. Bahut bura lagta hai (I feel very bad).

Please go on...

They call hockey our national game, but they don't care about the players. They should have come up and said that 'tum ilaaj karwao, hum tumhare saath hain' (You get the treatment done, we are with you).

What have you thought about your future?
For me, hockey was everything since childhood. I did not pay attention on my studies as I wanted to focus on my dream of playing for the country. But today, I am not sure whether I will be able to play for India again. I don't know what my future will be as I am just a graduate and no one gives a job to a graduate these days. This is very sad as there is no guarantee for a sportsperson's future in India. Here in the United States, even club players have a secure future. They are all insured and don't have to worry. But in India, this is not the case.

If you get your vision back, will you play for the country again?

If I recover completely, I will be proud to play for the country again, but not for anyone else. Not for any state, not for any federation.

(Courtesy: DNA daily) (ಕೃಪೆ: ಡಿಎನ್‌ಎ ದಿನಪತ್ರಿಕೆ)