ಶುಕ್ರವಾರ, ಜುಲೈ 31, 2009

ದಿನಕ್ಕೊಂದು ಕವನ: (೧೧) ಜ್ಞಾನೋದಯ

ದೇಶ ಸುತ್ತಿ ಬಂದವನನ್ನು ಕೇಳಿದೆ
ವಿಶೇಷವೇನೆಂದು
ತಾನು ಕ್ಷೇಮ ಎಂದ
ದೇಶ ಸುತ್ತುವ ಆಸೆ ಬಿಟ್ಟೆ
ಕೋಶ ಓದಿದವನನ್ನು ಕೇಳಿದೆ
ವಿಶೇಷವೇನೆಂದು
ತಾನು ಶೂನ್ಯ ಎಂದ
ಕೋಶ ಓದುವ ಬಯಕೆ ತೊರೆದೆ

ಕಾಸು ಮಾಡಿದವನನ್ನು ಕೇಳಿದೆ
ಹೇಗಿದ್ದೀಯೆ ಎಂದು
ಯೋಚಿಸಿ ಹೇಳುವೆ ಎಂದ
ಕಾಸಿನ ಯೋಚನೆ ಬಿಟ್ಟೆ
ಮೋಸ ಮಾಡುವವನನ್ನು ಕೇಳಿದೆ
ಹೇಗಿದ್ದೀಯೆ ಎಂದು
ಕಾಸು ಮಾಡುತ್ತಿರುವೆ ಎಂದ
ಮೋಸದ ಯೋಜನೆ ತೊರೆದೆ

ಸಂಸಾರಿಯನ್ನು ಕೇಳಿದೆ
ಬಾಳು ಹೇಗುಂಟೆಂದು
ಬಾಳು ಏಕುಂಟೆಂದ
ಬಾಳಿನ ಭರವಸೆ ಬಿಟ್ಟೆ
ಸನ್ಯಾಸಿಯನ್ನು ಕೇಳಿದೆ
ಬಾಳು ಹೇಗುಂಟೆಂದು
ಬಾಳಲೇನುಂಟೆಂದ
ಬಾಳಲಿ ಭರವಸೆ ತೊರೆದೆ

ಕೇಳುವುದನ್ನು ಕೈಬಿಟ್ಟೆ
ಹೇಳಿದ್ದನ್ನು
ಕೇಳುವುದನ್ನೂ ತೊರೆದೆ
ನನಗೀಗ
ಜ್ಞಾನೋದಯವಾಗಿದೆ

3 ಕಾಮೆಂಟ್‌ಗಳು:

  1. ಸರ್...

    ಎಷ್ಟು ಸರಳವಾಗಿ ನಮಗೂ ಜ್ಞಾನೋದಯ ಮಾಡಿಬಿಟ್ಟಿದ್ದೀರಿ...

    ಅಲ್ಲಲ್ಲಿ ಹುಡುಕಿದರೂ..
    ಸಿಗದದ್ದು...
    ನಮ್ಮೊಳಗೇ ಸಿಗುವದು...
    ನಾವೇ ಕಂಡುಕೊಳ್ಳ ಬೇಕು...
    ಕಾಣುವ ಕಣ್ಣನ್ನು ತೆರೆದು ನೋಡ ಬೇಕು...

    ಚಂದದ ಕವನಕ್ಕೆ ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  2. ಆನ೦ದ ಸರ್ ,
    ನಿಮ್ಮ ಕವಿತೆಗಳಿಗೆ ಪ್ರತಿಕ್ರಿಯೆ ಏನು ಕೊಡುವುದು ಎ೦ದು ಗೊತ್ತಾಗುವುದಿಲ್ಲ .. ಪ್ರತಿಯೊ೦ದು ಕವಿತೆಗಳು ಸು೦ದರ ,ಸರಳವಾಗಿ ಹಾಗು ಜ್ಞಾನೋದಯವಾಗು ವ೦ತೆ ಬರೆಯುತ್ತಿರಿ.
    ಧನ್ಯವಾದಗಳು .

    ಪ್ರತ್ಯುತ್ತರಅಳಿಸಿ
  3. ಅರಿವಿನರಮನೆ ಹೊಕ್ಕು ಮುದಗೊಂಡಿರುವ ಮಿತ್ರದ್ವಯರಿಗೆ ಹೃತ್ಪೂರ್ವಕ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ