ಶನಿವಾರ, ಆಗಸ್ಟ್ 1, 2009

ದಿನಕ್ಕೊಂದು ಕವನ: (೧೨) ಗೊತ್ತಿದ್ದಿದ್ದರೆ...

ಮುಂದೊಮ್ಮೆ
ಅಪಹರಣವೆಂಬುದು
ಇಷ್ಟು ಕ್ಷುಲ್ಲಕವಾಗುತ್ತದೆಂದು
ಗೊತ್ತಿದ್ದಿದ್ದರೆ
ರಾವಣ ಅಂದು
ಸೀತೆಯನ್ನು ಅಪಹರಿಸುತ್ತಲೇ ಇರಲಿಲ್ಲ
ಅಗ್ನಿಪರೀಕ್ಷೆಯ
ದುರುಪಯೋಗ ಉಂಟಾಗುತ್ತದೆಂದು
ಊಹಿಸಿದ್ದರೆ ರಾಮ
ಹೆಂಡತಿಯನ್ನು ಬೆಂಕಿಗೆಸೆಯುತ್ತಲೇ ಇರಲಿಲ್ಲ

ಸ್ವಾರ್ಥಸಾಧನೆಗಾಗಿ
ಚಪ್ಪಲಿ ಹೊರುವವರ
ಕಲ್ಪನೆಯಿದ್ದಿದ್ದರೆ ಭರತ
ಅಣ್ಣನ ಪಾದರಕ್ಷೆ ಹೊರುತ್ತಲೇ ಇರಲಿಲ್ಲ
’ಹೆನ್‌ಪೆಕ್ಡ್’, ’ಜೋರೂ ಕಾ ಗುಲಾಂ’
’ಪತ್ನೀದಾಸ’, ’ಮಗನಿಗೇ ಮೋಸ’
ಈ ಪದಗಳ ಸುಳಿವು
ಕಂಡಿದ್ದರೆ ದಶರಥ
ಕೈಕೇಯಿಗೆ ವಚನಕೊಡುತ್ತಲೇ ಇರಲಿಲ್ಲ

ಹೆಣ್ಣಿಗಾಗಿ ಹೊಡೆದಾಡುವವರು
ಹುಟ್ಟಿಕೊಳ್ಳುತ್ತಾರೆಂದು
ಹೊಳೆದಿದ್ದರೆ ತಲೆಗೆ
ರಾಘವ ಬಿಲ್ಲು ಮುರಿಯುತ್ತಲೇ ಇರಲಿಲ್ಲ
ಕಾರ್ಯವಾಸಿ ಕೈಜೋಡಿಸುವವರು
ಕಾಣಿಸಿಕೊಳ್ಳುತ್ತಾರೆಂದು
ತಿಳಿದಿದ್ದರೆ ಹೃದಯಕ್ಕೆ
ಕಪಿಯು ಕೈಮುಗಿದು ನಿಲ್ಲುತ್ತಲೇ ಇರಲಿಲ್ಲ

ಮುಂದೆ ಹೀಗೆಲ್ಲ
ಅನರ್ಥಗಳಾಗುತ್ತವೆಂದು
ಅರಿತಿದ್ದಿದ್ದರೆ
ವಾಲ್ಮೀಕಿ
(ಅಥವಾ ಆ
ಆತ)
ರಾಮಾಯಣ
ಬರೆಯುತ್ತಲೇ ಇರಲಿಲ್ಲ

3 ಕಾಮೆಂಟ್‌ಗಳು: