ಭಾನುವಾರ, ಆಗಸ್ಟ್ 9, 2009

ದಿನಕ್ಕೊಂದು ಕವನ: (೨೦) ನಾನೊಬ್ಬ ಕವಿ

ನಾನೊಬ್ಬ ಕವಿ
ಎದೆಭಾರವನ್ನು ಪದಗಳಲ್ಲಿಳಿಸುವವನು
ಹೃದಯ ತುಂಬಿದಾಗ
ಹಾಳೆಗಳಮೇಲೆ
ಹದುಳವಾಗಿ
ಹರಿಸುವವನು
ಶಬ್ದಗಳಿಗೆಂದೂ ಹುಡುಕಾಡದವನು
ನಿಶ್ಶಬ್ದವಾಗಿದ್ದೂ ಶಬ್ದ ಹುಟ್ಟಿಸುವವನು

ನಾನೊಬ್ಬ ಕವಿ
ಪತ್ರಿಕೆಗಳಲ್ಲಿ ಹೆಚ್ಚು ಜಾಗ ತಿನ್ನದವನು
(ಆದಾಗ್ಗ್ಯೂ ಓದುಗನ ತಲೆ ತಿನ್ನುವವನು)
ಜಾಗ ಇದ್ದರೆ ಹಿಗ್ಗುವವನು
ಇಲ್ಲದಿದ್ದರೆ ಕುಗ್ಗುವವನು
ಖಾಲಿ ಜಾಗ ಉಳಿದರೆ ಅಲ್ಲಿ ನಾನು
ಸ್ಪೇಸ್ ಫಿಲ್ಲರ್ ಆಗಿ
ಉಪಯೋಗಿಸಲ್ಪಟ್ಟು
ಉಳಿಸುವೆನು
ಮರ್ಯಾದೆ
ಕಳೆದುಕೊಳ್ಳುವೆನು.
(ಹೇಳಿದ್ದರಂತೆ ಹಿಂದೊಬ್ಬ ಸಂಪಾದಕರು
’ಜಾಗ ಉಳಿಯಿತೇ? ತುರುಕಿ ಶಾಸ್ತ್ರಿಯನು.’)

ನಾನೊಬ್ಬ ಕವಿ
ಸಾಹಿತ್ಯ ಸಮ್ಮೇಳನಗಳ ಅನಿವಾರ್ಯ ಅಂಗ
ವಿಚಾರ ಸಂಕಿರಣಗಳಿಗೂ ನನ್ನ ಸಂಗ
ನನ್ನ ಗೋಷ್ಠಿಗೆ ಬೇಡ ಯಾವುದೂ ವಿಷಯ
ಎವರ್ ರೆಡಿ ಈ ಕವಿ ಮಹಾಶಯ!

ಏಕೆನ್ನುವಿರೋ?

ಕವನ ಇಂದು ಅಗ್ಗ
ಕವಿಗಳು ಅಗ್ಗದಲ್ಲಿ ಅಗ್ಗ
ತೋಚಿದ್ದನ್ನು ಗೀಚಿದರೆ ಅದೇ ಕವನ.
ಬೇಕಾದವರನ್ನೆಲ್ಲ ಎಲ್ಲಿ ಹಾಕುವುದೆಂದು
ತೋಚದಾದಾಗ
ಅವರಿಗೆಲ್ಲ
ಕವಿಗೋಷ್ಠಿಯಲ್ಲಿ ಸ್ಥಾನ!

ಆದರೂ,

ಕಾರ್ಡು ಗೀಚಿ ಕರೆದರೂ ಸಾಕು
ಹೋಗುತ್ತೇನೆ ನಾನೂ.
ಏಕೆ ಗೊತ್ತೆ?
ಹೋಗದೇ ಇದ್ದರೆ
ಒಂದು ದಿನ
ಈ ಜನಗಳ ಮಧ್ಯೆ
ಇಲ್ಲವಾಗಿಹೋದೇನು!

2 ಕಾಮೆಂಟ್‌ಗಳು:

  1. ಆನ೦ದ ಸಾರ್ ,
    ನಿಮ್ಮನ್ನು ನೀವು ಹೀಗೆ ಲೇವಡಿ ಮಾಡಿದ್ದು ಜಾಸ್ತಿ ಯಾಯಿತು... .. ನಾನು ನಿಮ್ಮ ಲೇಖನಕ್ಕಾಗಿ ತು೦ಬಾ ಸಲ ಪುಸ್ತಕವನ್ನು ತೆಗೆದು ಕೊ೦ಡಿದ್ದೇನೆ .. ನೀವು ಸ್ಪೇಸ್ ಫಿಲ್ಲರ್ ಅಲ್ಲ .. ಆ ಸ್ಪೇಸ್ಗೆ ಹಾಗು ಆ ಪೇಜ್ ಗೆ ಮಹತ್ವ ನಿಮ್ಮಿ೦ದ ..
    "ಸಾಹಿತ್ಯ ಸಮ್ಮೇಳನಗಳ ಅನಿವಾರ್ಯ ಅಂಗ" ಇಲ್ಲದಿದ್ದರೆ ಜನ ಬರುವುದೇ ಇಲ್ಲ ಆ ಗೊಡ್ಡು ಭಾಷಣ ಕೇಳಲು .. ನೀವು ಇದ್ದರೆ ಎಲ್ಲ ಜನ ಹಾಜರ್ ನಿಮ್ಮ ಕವನ ಕೇಳಲು ..
    "ಕವನ ಇಂದು ಅಗ್ಗ " ಇದನ್ನು ನಾನು ಒಪ್ಪುವುದಿಲ್ಲ .. ನಿಮ್ಮ ಕವನಗಳು ಎಷ್ಟು ಸೊಗಸಾಗಿ ಎಷ್ಟು ಅರ್ಥವತ್ತಾಗಿ ಇದೆ .. ಅದು ಅಗ್ಗ ಹೇಗೆ ಆಗುತ್ತದೆ ..
    ದಯವಿಟ್ಟು ಸಾರ್ ನೀವು ನಿಮ್ಮನ್ನು ಲೇವಡಿ ಮಾಡಿದ್ದು ಸಾಕು .. ನೀವು ಬೇರೆಯಾವರನ್ನು ಲೇವಡಿ ಮಾಡಿದರೆ ಅದು ಚೆ೦ದ ..

    ಪ್ರತ್ಯುತ್ತರಅಳಿಸಿ
  2. ’ಏನು ಧನ್ಯಳೋ, ಲಕುಮಿ, ಎಂಥ ಮಾನ್ಯಳೋ!’ ಎಂದಂತೆ,
    ’ಏನು ಧನ್ಯನೋ, ಶಾಸ್ತ್ರಿ, ಎಂಥ ಮಾನ್ಯನೋ!’
    ಧನ್ಯನಾದೆ!
    ಧನ್ಯವಾದ ಅಮ್ಮಾ, ರೂಪಾ.

    ಪ್ರತ್ಯುತ್ತರಅಳಿಸಿ