ಮಂಗಳವಾರ, ಆಗಸ್ಟ್ 11, 2009

ಕರುಣಾನಿಧಿಯನ್ನು ನಂಬಿ ಕೆಡದಿರೋಣ

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡಿದ ಮರುದಿನವೇ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ಕರೆದು ಕರುಣಾನಿಧಿಯವರು, ’ಪ್ರತಿಮೆ ಅನಾವರಣವು ಕಾವೇರಿ ಜಲವಿವಾದದ ಚೌಕಾಸಿ ಅಲ್ಲ’, ಎಂದಿದ್ದಾರೆ!

’ಜಲವಿವಾದ ಬಗೆಹರಿಸಿಕೊಳ್ಳುವತ್ತ ಇದು ಮೊದಲ ಹೆಜ್ಜೆ’, ಅನ್ನಬಹುದಿತ್ತು ಅವರು; ಆದರೆ ಹಾಗನ್ನಲಿಲ್ಲ! ಸೌಹಾರ್ದದ ಬಗ್ಗೆ ಪತ್ರಕರ್ತರೆದುರು ಒಟ್ಟಾರೆಯಾಗಿ ಸಾರಿಸಿ ಹೇಳಿ ಮುಗಿಸಿದ್ದಾರೆ ಅಷ್ಟೆ.

ನಮ್ಮ ಯಡಿಯೂರಪ್ಪನವರು ಮಾತ್ರ ಕರುಣಾನಿಧಿಯವರಮೇಲೆ ಅಪರಿಮಿತ ವಿಶ್ವಾಸ ಹೊಂದಿರುವಂತಿದೆ! ನಂಬಿಕೆಯೆಂಬುದು ಒಳ್ಳೆಯದೇ. ’ನಂಬಿ ಕೆಟ್ಟವರಿಲ್ಲವೊ, ರಂಗಯ್ಯನ ನಂಬಲಾರದೆ ಕೆಟ್ಟರು’, ಎಂದಿದ್ದಾರೆ ಪುರಂದರ ದಾಸರು. ಅದರಂತೆ ಕರ್ನಾಟಕದ ’ತಂಬಿ’ ಈಗ ತಮಿಳುನಾಡಿನ ’ಅಣ್ಣ’ನನ್ನು ನಂಬಿದ್ದಾನೆ. ಆದರೆ ಇತಿಹಾಸದಿಂದ ನಾವು ಪಾಠ ಕಲಿಯಬೇಕು.

ಕಾವೇರಿ ಜಲವಿವಾದ ಬಗೆಹರಿಯುವ ನಿಟ್ಟಿನಲ್ಲಿ ನಮ್ಮ ಇದುವರೆಗಿನ ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ನಮ್ಮ ನೆಲ-ಜಲ-ಭಾಷೆ ಇವುಗಳ ವಿಷಯದಲ್ಲಿ ನ್ಯಾಯ ದೊರಕಿಸಿಕೊಳ್ಳುವ ಹಾದಿಯಲ್ಲಿ ಇದುವರೆಗೆ ನಾವು ಕೇಂದ್ರ ಸರ್ಕಾರದಮೇಲೆ ಹಾಗೂ ಸಂಬಂಧಿತ ನೆರೆರಾಜ್ಯಗಳಮೇಲೆ ಇಟ್ಟ ನಂಬಿಕೆಗಳಿಗೆಲ್ಲ ಮೋಸವಾಗಿದೆ. ಕೇಂದ್ರ ಸರ್ಕಾರದಮೇಲೆ ಮತ್ತು ನೆರೆರಾಜ್ಯಗಳಮೇಲೆ ನಾವು ವಿಶ್ವಾಸವಿಡುತ್ತಲೇ ಬಂದಿದ್ದೇವೆ, ಆದರೆ ಅವು ಎಂದಿಗೂ ನಮ್ಮ ನಂಬಿಕೆಗೆ ತಕ್ಕಂತೆ ನಡೆದುಕೊಂಡಿಲ್ಲ. ಪ್ರಸ್ತುತ ನಂಬಿಕೆಯ ಗತಿಯೂ ಅದೇ ರೀತಿ ಆಗಬಾರದು. ಜೊತೆಗೆ, ತಮಿಳುನಾಡಿನೊಂದಿಗಿನ ವಿವಾದಗಳನ್ನು ಬಗೆಹರಿಸಿಬಿಟ್ಟೆನೆಂಬ ಕೀರ್ತಿ ತನ್ನದಾಗಿಸಿಕೊಳ್ಳಲು ಯಡಿಯೂರಪ್ಪನವರು ಕನ್ನಡಿಗರ ಹಿತಾಸಕ್ತಿ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು.

ಕರುಣಾನಿಧಿಯವರನ್ನಿರಲಿ, ಈ ವಿಷಯದಲ್ಲಿ ನಮ್ಮ ಯಡಿಯೂರಪ್ಪನವರನ್ನು ನಂಬಬಹುದೇ?

2 ಕಾಮೆಂಟ್‌ಗಳು: