ಸೋಮವಾರ, ಆಗಸ್ಟ್ 3, 2009

ದಿನಕ್ಕೊಂದು ಕವನ: (೧೪) ಮಾತಿನ ಮನೆಯಿಂದ...

ಮಾತಿನ ಮನೆಯಿಂದ ಹೊರಬಂದು
ನೋಡಿದರೆ ಮೌನದಾಗಸದ ವೈಶಾಲ್ಯ
ಅರಿವಾಗುವುದು. ಉಜ್ವಲ ಚಿಂತನೆ
ಯ ಸೂರ್ಯ ಜಾಗೃತಿಯ ಹಗಲಿಗೆ
ದಾರಿತೋರುವನು. ಚಿತ್ತಶಾಂತಿ
ಯ ಚಂದ್ರ ವಿಶ್ರಾಂತಿಯ ರಾತ್ರಿಗೆ
ತಂಪೆರೆಯುವನು. ಸುಪ್ತ ಬಯಕೆಗಳು
ತಾರೆಗಳಾಗಿ ಮಿನುಗುವುವು ನಿಶೆಯಲಿ
ಮನಸು ಕಾಣುವ ಕನಸಿನಲಿ ಖುಷಿ
ನೀಡುವುವು. ಆಗಾಗ ಬೇಸರ
ದ ಮೋಡ ಕವಿದರೂ ಮೌನದಾಗಸ
ದಲ್ಲಿ ಕರಗಿ ಅದು
ನೆಲಕಚ್ಚುವುದು
ನಿಶ್ಚಿತ.
ಮೈತೊಳೆದಂತೆ ಮತ್ತೆ ಮೈ
ದಳೆವ ಆಗಸವೀಗ ಶುಭ್ರ,
ನಿರಭ್ರ.

ಆದರೆ,
ಅರಮನೆಯ ಭ್ರಮೆ
ಯ ಸೆರೆಮನೆಯಿಂದ
ಹೊರಬರುವುದೇ
ಕಷ್ಟ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ