ಭಾನುವಾರ, ಆಗಸ್ಟ್ 23, 2009

ಮೋದಕಪ್ರಿಯನಿಗೆ ಮೋದಕ ಮಾಲೆ

ಬಣ್ಣಬಣ್ಣದ ಗಣಪ
ಚೆನ್ನಮಣ್ಣಿನ ಗಣಪ
ನಿನ್ನ ವೈಭವ ಕಂಡು
ಕಣ್ಣು ತುಂಬಿತು ಕಣಪ

***

ಗಣಪಾ, ನಿನಗೆ ತರಾವರಿ ವೇಷ
ಜೊತೆಗೆ ಕೈಯಲ್ಲಿ ಅಂಕುಶ, ಪಾಶ
ಮೂಷಿಕ ಹೊತ್ತಿದೆ ಉದರಮಂಜೂಷ
ಈ ಪರಿ ನೋಡಲು ನಮಗೆ ಸಂತೋಷ

***

ತಂಡುಲ ದುಬಾರಿ
ಸೊಂಡಿಲ ಗಣಪಾ,
ಈ ಸಲ ನಿನಗೆ
ಕಡುಬಿಲ್ಲ ಕಣಪಾ

***

ಅಕ್ಕಿ, ಬೇಳೆ, ಬೆಲ್ಲ
ತುಟ್ಟಿಯಾಗಿವೆ ಎಲ್ಲ
ಮೋದಕ ಮಾಡಲು ನಮಗೆ
ಮೋದವೇ ಕೊರತೆಯಲ್ಲಾ!

***

ವಿದ್ವತ್ ಕೊಡು ಅಂತೀವಿ
ಗಣಪ, ನಿನ್ನ ಬಳಿ
ವಿದ್ಯುತ್ ಕೊಡು ಅಂತೀವಿ
ಅಪ್ಪ ಈಶ್ವರಪ್ಪನ ಬಳಿ

***

ಚುನಾವಣೆ, ಉಪಚುನಾವಣೆ
ಜನರ ಪಾಲಿಗೆ ತೀರದ ಬವಣೆ!
ವಿನಾಯಕಾ, ಪರಿಹರಿಸಯ್ಯ
ಜನನಾಯಕರ ಈ ಚಿತಾವಣೆ!

***

ಗುದ್ದಿದ ರಾವಣನಿಗೆ
ಬುದ್ಧಿ ಕಲಿಸಿದೆ ನೋಡು
ಸದ್ಯದ ರಾವಣರನ್ನು
ಗುದ್ದಿ ಸರಿಮಾಡು

***

ಬುದ್ಧಿ ಇದ್ದರೆ ಸಿದ್ಧಿ
ನಮ್ತಲೇಲೋ, ಲದ್ದಿ!
ಸಿದ್ಧಿ ಮತ್ತು ಬುದ್ಧಿ
ಹೊಂದಿ ಗಣಪಾ, ಗೆದ್ದಿ!

***

ಬೆವರಿಂದ ಹುಟ್ಟಿದೆ
ಮಣ್ಣಲ್ಲಿ ಮೂರ್ತಗೊಂಡೆ
ನೀರಲ್ಲಿ ಕರಗಿದೆ
ಮೂರರ ಮಹತ್ವವನೂ
ಜಗತ್ತಿಗೆ ಸಾರಿದೆ

***

ಅಮ್ಮನ ಸೆರಗು ಹಿಡಿದು ಬರ್‍ತೀಯ
ಚಿಕ್ಕಮ್ಮನ ಮಡಿಲೊಳಗೆ ಹೋಗ್ತೀಯ
ತಾಯಿ, ಮಲತಾಯಿ ಇಬ್ಬರನ್ನೂ
ಸಮಾನವಾಗಿ ಕಾಣ್ತೀಯ

***

ಸೋತೆ ನಾ ಜಗದೆದುರು
ಗಜವದನ.
ಸೋಲಿಸಬಲ್ಲುದೆ
ಗಜವ ದನ?

***

ಚಂದ ಸಂವಿಧಾನ ಹೊಂದಿದ ನಮ್ಮದು
’ಗಣತಂತ್ರ’
ತಂದೆತಾಯಿಯನು ಸುತ್ತಿದ ನಿನ್ನದು
’ಗಣಪ ತಂತ್ರ’!

***

ಗಣಪ ದೇವರಿಗೆ
ಮೂಷಿಕ ವಾಹನ
ಗಣಕ ಯಂತ್ರಕ್ಕೆ
ಮೂಷಿಕ ಚಾಲನ

***

ಮನೆಯಲ್ಲಿ ಜಪ
’ಹೇರಂಬ’
ಬಾರ್‌ನಲ್ಲಿ ಆಲಾಪ
’ಹೇ ರಂಭ’!

***

ಸಿಂಗಾರ ಮಂಟಪದಲ್ಲಿ
ಗಾಡ್ ಗಣೇಶ
ಮುಂಗಾರು ಮಳೆಯಲ್ಲಿ
ಸ್ಟಾರ್ ಗಣೇಶ

-೦-

5 ಕಾಮೆಂಟ್‌ಗಳು:

  1. ಆನ೦ದ ಸಾರ್,
    ನಿಮ್ಮ ಮೋದಕ ಮಾಲೆ ಸೊಗಸಾಗಿ ಇದೆ . ನನಗೆ ಮೋದಕ ತಿ೦ದಸ್ಟು ಸ೦ತೊಷವಾಯಿತು .

    ಪ್ರತ್ಯುತ್ತರಅಳಿಸಿ
  2. ಮುಜರಾಯಿ ಇಲಾಖೆಯ ಹೊಂದಿದವರಿಗೆ ಚುನಾವಣೆಗಳಲ್ಲಿ ಜಯವಿಲ್ಲವಂತೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುವರಂತೆ.
    ರಾಜಕೀಯದಲ್ಲೂ ಇಂಥಾ ನಂಬಿಕೆ(?)ಗಳು ಚಲಾವಣೆಯಲ್ಲಿವೆ. ರಾಜಕೀಯದ ಮಂದಿ ಜ್ಯೋತಿಷ್ಯವನ್ನು ನಂಬುವಷ್ಟು, ಮೂಢನಂಬಿಕೆಯನ್ನು ಅಂಟಿಕೊಳ್ಳುವಷ್ಟು, ವಾಸ್ತುವನ್ನು ಬಿಡಲಾರದಷ್ಟು ಬೇರೆ ಯಾರೂ ಇಲ್ಲ. ಜಾತ್ಯತೀತವೆಂದು ಹಣೆಪಟ್ಟಿ ಆದರೆ 365 ದಿನವೂ ಒಂದಿಲ್ಲೊಂದು ಹೋಮ, ಹವನ, ಮಾಟ, ಮಂತ್ರ, ವಶೀಕರಣ, ಇತ್ಯಾದಿ. ಇಂದು ಕೇರಳ, ನಾಳೆ ತಮಿಳುನಾಡು, ನಾಡಿದ್ದು ಕರ್ನಾ್ಟಕದ ದೇವಸ್ಥಾನಗಳ ಟೂರು. ಬೆಳಗ್ಗೆ ಹಿಂದೂ,ಮಧ್ಯಾಹ್ನ ಕ್ರಿಶ್ಚಿಯನ್, ರಾತ್ರಿ ಮುಸ್ಲಿಮ್. ಇಫ್ತಾರ ಕೂಟದಲ್ಲಿ ಪಲಾವ್ ಬಡಿಸಲೂ ತಯಾರ್. ಮಾವಿನಕೆರೆ ದೇವಸ್ಥಾನದಲ್ಲಿ ವಿಶೇಷ ಸೇವೆಗೂ ಸಿದ್ಧ. ಈ ಬಗೆಯ ಇಬ್ಬಂದಿತನ ನಮ್ಬ್ಮ ಜನನಾಯಕರದು, ಮಣ್ಣಿನಮಗನದು. ಹರದನಹಳ್ಳಿಯ ಹೈದನದು. ಬೇರೆಯವರೂ ಇದಕ್ಕೆ ಹೊರತಲ್ಲ. ಈ ಕುರಿತು ಸ್ವಲ್ಪ ನಿಮ್ಮ ಗುಳಿಗೆಯ ಗಮನ ಹರಿಸಿ ಕೊಂಚ ಖಾರವೂ ಇರಲಿ ಕೊಂಚ ನಗುವೂ ತರಿಸಲಿ. ಒಟ್ಟಿನಲ್ಲಿ ಮಜಾ ಇರಲಿ. `ರಾಜಕಾರಣಿಗಳ ಜಾತ್ಯತೀತತೆ' ಶೀರ್ಷಿಕೆಯಡಿಯಲ್ಲಿ.

    ಪ್ರತ್ಯುತ್ತರಅಳಿಸಿ
  3. ಆಪ್‌ನೇ ತೋ ಮೇರೇ ಮುಹ್ ಕೀ ಬಾತ್ ಛೀನ್ ಲೀ ಯಾರ್!
    ಬಿಡುವಾದಾಗ ಖಂಡಿತ ಬರೆಯುವೆ, ಆರ್.

    ಪ್ರತ್ಯುತ್ತರಅಳಿಸಿ
  4. Deve Gowdara charithre 5 volumegaLalli brutthadanthe. monne chunavaNeyalli ninthu sotha Prof.Radhakrishna adhannu bareyutthiddharanthe. Aa pusthakadoLage yenirabahudu annuva kuthoohala hechchagide. Gowdara meduLinalliruva gobbarave idharalloo tumbirabahudu. Pure waste of precious paper. Yenantheeri?

    ಪ್ರತ್ಯುತ್ತರಅಳಿಸಿ