ಅರಿಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅರಿಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮಾರ್ಚ್ 26, 2009

ಅರಿಕೆ

ಆತ್ಮೀಯ ಮಿತ್ರರೆಲ್ಲರಿಗೂ ಯುಗಾದಿಯ ಸಂದರ್ಭದಲ್ಲಿ ಹಾರ್ದಿಕ ಶುಭಾಶಯ.

ನನ್ನನ್ನಿಂದು
ಪತ್ರಿಕೆಯೊಂದು
ಹಾಸ್ಯ,
ವಿಡಂಬನೆ
ಮತ್ತು
ಶ್ಲೇಷೆ
ಕೃಷಿಯ ಬಗ್ಗೆ
ಮರುಚಿಂತನಕ್ಕೆ
ಹಚ್ಚಿದೆ.
ಆದ್ದರಿಂದ
ನಾನಿಂದು
ಗುಳಿಗೆಯಂಗಡಿಯನ್ನು
ಮುಚ್ಚಿದೆ.

ನಿಮ್ಮ ಅಭಿಮಾನದಿಂದ
ನನ್ನ ಸಂತೋಷ
ಹೆಚ್ಚಿದೆ.
ಈ ಕೆಳಗಿನ
ನನ್ನ ಕವಿತೆ
ನನ್ನ ಮನವನ್ನು
ನಿಮ್ಮೆದುರು
ಬಿಚ್ಚಿದೆ.

ಪೊಡಮಡುವೆನೀ ಜಗಕೆ
-------------------
ಪೊಡಮಡುವೆನೀ ಜಗಕೆ ಬೆಡಗು ಬೀರುವ ಯುಗಕೆ
ಸಡಗರದ ಸೆಲೆಯಾದ ಜೀವಕುಲಕೆ
ಒಡವೆಯಂದದಿ ಮೆರೆವ ಪರಮ ಪುಣ್ಯೋದಯಕೆ
ನಡುಬಾಗಿ ನಮಿಪೆ ಪ್ರಭು, ನಿನ್ನಭಯಕೆ

ಬಂದೆನೆಂಬುದೆ ಇಲ್ಲಿ ಒಂದು ಸಾಕ್ಷಾತ್ಕಾರ
ಮುಂದೆ ಕಾಣುವ ನೋಟ ಬಲು ಸುಂದರ
ಇಂದು ನಾಳೆಗಳೆಂಬ ಚಂದ ಮುತ್ತಿನಹಾರ
ತಂದು ತೊಡಿಸಿದ ದೊರೆಯೆ, ನಾ ಋಣಿ ಚಿರ

ಭವದ ಸಾಗರವೆನ್ನುವರು ಈಸಲಂಜುವರು
ಅವತೀರ್ಣ ಸ್ಥಿತಿಗಾಗಿ ತವಕಿಸುವರು
ಭುವಿಯ ಭವ್ಯತೆಯಂದ ಏನು ಬಲ್ಲರು ಅವರು
ಸವಿಯಲೆಂದೇ ಬಂದೆ ನಾನಾದರೂ

ಪ್ರತಿ ಘಳಿಗೆಯೂ ಇಲ್ಲಿ ನನಗೆ ಅಮೃತಘಳಿಗೆ
ಪ್ರತಿ ವಸಂತವು ಪ್ರಭುವೆ ನಿನ್ನ ಒಸಗೆ
ಪ್ರತಿ ವಸ್ತುವೂ ಇಲ್ಲಿ ಇಹುದು ನನಗಾಗೇ
ಅತಿ ಭಾಗ್ಯವಂತ ನಾನ್ ಅಖಿಲ ಇಳೆಗೇ

ಎಲ್ಲಿ ನೋಡಿದರಲ್ಲಿ ನಿನ್ನ ಚೆಲುವೇ ಚೆಲುವು
ಬಲ್ಲಿದನೆ, ಈ ರಚನೆ ಅಸಮಾನವು
ಇಲ್ಲಿಯಲ್ಲದೆ ನನಗೆ ಇನ್ನಾವ ಸ್ವರ್ಗವೂ
ಇಲ್ಲವೈ, ಈ ಜಗವೆ ನನ್ನ ತಾವು

ಇಡು ಇಲ್ಲಿ ನನ್ನನು ಅದೆಷ್ಟು ದಿನವಾದರೂ
ಬಿಡು ಎನ್ನನೆನ್ನ ಪಾಡಿಗೆ, ಅಲ್ಲಿರು
ಕಡೆದಿನದವರೆಗೆ ಅನುಭವಿಸಿಯೇ ಈ ಊರು
ಬಿಡುವೆ ನಾ, ಸೇರುವೆನು ನಿನ್ನ ಊರು