ಹಾಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಾಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಮೇ 15, 2009

ಹೀಗೇಕಾಯಿತು?! (ಬೇತಾಳ ಕಥೆ)

ಛಲ ಬಿಡದ ತ್ರಿವಿಕ್ರಮನು ’ಚಂದಮಾಮ’ ಸಂಪಾದಕರ ಆಣತಿಯಂತೆ ಮತ್ತೆ ಮರದ ಬಳಿಬಂದು ಮರದಲ್ಲಿದ್ದ ಶವವನ್ನು ಹೆಗಲಿಗೇರಿಸಿಕೊಂಡು ಮುನ್ನಡೆದನು. ಶವದಲ್ಲಿದ್ದ ಬೇತಾಳವು, ’ಬೆನ್ನು ಬಿಡದ ಬೇತಾಳ’ ಎಂಬ ಗಾದೆಯಂತೆ ಯಥಾಪ್ರಕಾರ ತ್ರಿವಿಕ್ರಮನೊಡನೆ ಮಾತಿಗೆ ಮೊದಲಿಟ್ಟಿತು.

’ಎಲೈ ತ್ರಿವಿಕ್ರಮನೇ, ನಿನ್ನನ್ನು ನೋಡಿ ನನಗೆ ಮರುಕವುಂಟಾಗುತ್ತಿದೆ. ಈ ಪ್ರಜಾಪ್ರಭುತ್ವದ ಯುಗದಲ್ಲೂ ನೀನು ನಿನ್ನನ್ನು ಇನ್ನೂ ರಾಜನೆಂದೇ ಭಾವಿಸಿಕೊಂಡಿರುವೆ. ಆದರೆ ಅದೇ ವೇಳೆ, ’ಚಂದಮಾಮ’ ಸಂಪಾದಕರ ಆಣತಿಯನ್ನು ಅಕ್ಷರಶಃ ಶಿರಸಾವಹಿಸಿ ಪಾಲಿಸುತ್ತಿರುವೆ! ಹಿಂದೆ ಗದಗದ ಪಿ.ಸಿ.ಶಾಬಾದಿಮಠ ಎಂಬ ಪುಸ್ತಕ ಪ್ರಕಾಶಕರ ಅಪ್ಪಣೆಯನ್ನೂ ಇದೇ ರೀತಿ ಪಾಲಿಸುತ್ತಿದ್ದೆ. ಇರಲಿ. ನಿನ್ನ ಕರ್ಮ. ನಾನೇನೂ ಮಾಡುವಂತಿಲ್ಲ. ಶತಮಾನಗಳಿಂದ ಈ ರೀತಿ ಶವಧಾರಿಯಾಗಿ ನಡೆಯುತ್ತ ಸುಸ್ತುಹೊಡೆಯುತ್ತಿರುವ ನಿನ್ನ ಆಯಾಸ ಪರಿಹಾರಕ್ಕಾಗಿ ಸತ್ಯಕಥೆಯೊಂದನ್ನು ಹೇಳುತ್ತೇನೆ, ಕೇಳು’, ಎಂದು ಬೇತಾಳವು ಕಥೆಯನ್ನು ಹೇಳತೊಡಗಿತು.

’ಭರತಖಂಡದ ಲೋಕಸಭಾ ಚುನಾವಣೆಯ ಅಂಗವಾಗಿ ಕರ್ನಾಟಕದಲ್ಲೂ ಚುನಾವಣೆ ನಡೆದುದು ನಿನಗೆ ಗೊತ್ತಷ್ಟೆ. ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಪಿಳ್ಳಾರಿ ಲೋಕಸಭಾ ಕ್ಷೇತ್ರವು ವಿಶಿಷ್ಟವಾದುದು. ಕರ್ನಾಟಕಕ್ಕೆ ಸೇರಿದ್ದರೂ ಇಲ್ಲಿ ತೆಲುಗು ಭಾಷೆಯು ವಿಜೃಂಭಿಸುತ್ತಿದೆ. ಕುಬೇರರ ಆಡುಂಬೊಲವಾಗಿದ್ದರೂ ಇಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಲಕ್ಷಾಂತರ ಪ್ರಜೆಗಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಮೂವರು ಮಂತ್ರಿಗಳನ್ನು ನೀಡಿದ್ದೂ ಈ ಕ್ಷೇತ್ರವು ಸರಿಯಾದ ರಸ್ತೆಗಳಿಲ್ಲದೆ ಸದಾ ದೂಳಿನಲ್ಲಿ ಮುಳುಗಿರುತ್ತದೆ. ಆ ಕುಬೇರ ಮಂತ್ರಿಗಳು ಮಾತ್ರ ಇಡೀ ರಾಜ್ಯವನ್ನೇ ತಮ್ಮ ಕರಕಮಲದಲ್ಲಿಟ್ಟುಕೊಂಡು ಆಡಿಸುತ್ತಿದ್ದಾರೆ.

ಇಂಥ ಪಿಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಆ ಕುಬೇರ ಮಂತ್ರಿಯೊಬ್ಬರ ಸಮೀಪಬಂಧುವೇ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರ ಜಯವು ನಿಶ್ಚಿತವೆಂದು ಇಡೀ ಕ್ಷೇತ್ರ ಮಾತ್ರವಲ್ಲ, ಇಡೀ ರಾಜ್ಯ, ಇಡೀ ಭರತಖಂಡವೇ ಮಾತಾಡಿಕೊಳ್ಳುತ್ತಿತ್ತು. ಅಂತಹುದರಲ್ಲಿ ಆ ಅಭ್ಯರ್ಥಿಯು ಸೋತುಹೋದರು! ಈಗತಾನೇ ಬಂದ ಫಲಿತಾಂಶವನ್ನು ನೀನೂ ಗಮನಿಸಿರಬಹುದು. ಆ ಅಭ್ಯರ್ಥಿ ಮಾತ್ರವಲ್ಲ, ಅವರ ಎದುರಾಳಿ ಅಭ್ಯರ್ಥಿಯೂ ಸೋತುಹೋಗಿ, ಯಾರೋ ಒಬ್ಬರು ಹೆಸರೇ ಕೇಳಿಲ್ಲದ ಪಕ್ಷೇತರ ವ್ಯಕ್ತಿ ಲೋಕಸಭೆಗೆ ಆಯ್ಕೆಯಾಗಿಬಿಟ್ಟಿದ್ದಾರೆ!

ಹೀಗೇಕಾಯಿತು? ಉತ್ತರಿಸು. ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆಯು ಒಡೆದು ಸಹಸ್ರ ಚೂರಾಗುವುದು ಎಚ್ಚರಿಕೆ!’ ಎಂದು ಬೇತಾಳವು ಕಥೆಯನ್ನು ಮುಗಿಸಿತು.

ಆಗ ತ್ರಿವಿಕ್ರಮನು ಬೇತಾಳವನ್ನು ನೋಡಿ ನಸುನಗುತ್ತ ಇಂತೆಂದನು.
’ಎಲೈ ಬೇತಾಳವೇ, ಈ ಸಲ ನೀನು ಈಸೀ ಕ್ವೆಶ್ಚನ್ ಹಾಕಿರುವೆ. ಚಾಲ (ಬಹಳ) ಈಸೀ. ಪಿಳ್ಳಾರಿಯಿಂದ ಗೆದ್ದ ಆ ಅಪರಿಚಿತ ಪಕ್ಷೇತರ ವ್ಯಕ್ತಿಯ ಚುನಾವಣಾ ಚಿಹ್ನೆ ರೈಲ್ವೆ ಇಂಜಿನ್. ಪಕ್ಕದ ಆಂಧ್ರಪ್ರದೇಶದ ಜನಪ್ರಿಯ ಚಿತ್ರತಾರೆ ಪರಂಜೀವಿಯ ’ಮಜಾರಾಜ್ಯಂ’ ಪಕ್ಷದ ಚಿಹ್ನೆಯೂ ರೈಲ್ವೆ ಇಂಜಿನ್ನೇ. ಪಿಳ್ಳಾರಿ ಕ್ಷೇತ್ರದ ನಿರಕ್ಷರಿ ಮತದಾರರಲ್ಲಿ ಬಹುತೇಕರು ಮುಗ್ಧರು. ಅವರೆಲ್ಲ ತೆಲುಗು ಭಾಷಿಕರಾಗಿದ್ದು ಪಿರಂಜೀವಿ ಸಿನಿಮಾಗಳೆಂದರೆ ಅವರಿಗೆ ಪ್ರಾಣ. ಅವರೆಲ್ಲರೂ ಪಿರಂಜೀವಿ ಫ್ಯಾನುಗಳು ಮತ್ತು ಟಿವಿಯಲ್ಲಿ ಸದಾ ತೆಲುಗು ಚಾನೆಲ್‌ಗಳನ್ನೇ ನೋಡುತ್ತಿರುವವರು. ತಾವು ರೈಲ್ವೆ ಇಂಜಿನ್‌ಗೆ ಮತ ನೀಡಿದರೆ ಅದು ತಮ್ಮ ಹೀರೊ ಪಿರಂಜೀವಿಗೆ ಸೇರುತ್ತದೆಂದು ಭಾವಿಸಿ ಅವರೆಲ್ಲ ರೈಲ್ವೆ ಇಂಜಿನ್‌ಗೆ ಮತ ನೀಡಿಬಿಟ್ಟಿದ್ದಾರೆ! ಕರ್ನಾಟಕದಲ್ಲಿ ಪಿರಂಜೀವಿಯ ಪಕ್ಷವು ಸ್ಪರ್ಧಿಸಿಲ್ಲವೆಂಬುದು ಅವರಿಗೆ ಗೊತ್ತಿಲ್ಲ ಪಾಪ! ಎಲ್ಲ ಗೊತ್ತಿರುವ ವಿದ್ಯಾವಂತರು ವೋಟ್ ಮಾಡಿಲ್ಲ. ಪರಿಣಾಮ, ರೈಲ್ವೆ ಇಂಜಿನ್ ಗುರುತು ಹೊಂದಿದ್ದ ಪಕ್ಷೇತರನೊಬ್ಬ ಪಿಳ್ಳಾರಿಯಲ್ಲಿ ಗೆದ್ದುಬಿಟ್ಟಿದ್ದಾನೆ!’

ತ್ರಿವಿಕ್ರಮನು ಹೀಗೆ ಸರಿ ಉತ್ತರ ನೀಡಿದ್ದೇ ತಡ, ಅವನ ಮೌನ ಮುರಿದ ಬೇತಾಳವು ಶವಸಹಿತ ಮಾಯವಾಗಿ ಮರಳಿ ಮರ ಸೇರಿಕೊಂಡುಬಿಟ್ಟಿತು! ತ್ರಿವಿಕ್ರಮನು ಮತ್ತೆ ಪುನಃ ಎಗೈನ್....

ಬುಧವಾರ, ಮೇ 13, 2009

ಆನಂದರಾಮನ್ ಸತ್ತ ಸುದ್ದಿ

’ರಾಮನ್ ಸತ್ತ ಸುದ್ದಿ’. ಇದು ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅತ್ಯಂತ ಪ್ರಸಿದ್ಧ ಕವನಗಳಲ್ಲೊಂದು. ತಾವು ಬರೆದ ಕವನಗಳ ಪೈಕಿ ತಮಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಕವನ ಇದೆಂದು ಸ್ವಯಂ ನಿಸಾರರೇ ಹೇಳಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಸಿ.ವಿ.ರಾಮನ್ ನಿಧನವಾರ್ತೆಯ ಹಿನ್ನೆಲೆಯಲ್ಲಿ ಈ ಕವನವು ಜೀವನದರ್ಥದ ಗಹನ-ಗಂಭೀರ ಮಂಥನ ನಡೆಸುತ್ತದೆ. ಆ ಮಂಥನದ ಬಗೆ ಅನನ್ಯ.

ದಶಕಗಳಿಂದ ನನ್ನನ್ನು ಕಾಡುತ್ತಿರುವ ಕವನ ಇದು. ಈ ಕವನದಲ್ಲಿ ನಾನು ಕಂಡ ಕಾಣ್ಕೆ ಜೀವನಪಥದಲ್ಲಿ ನನಗದೊಂದು ಜ್ಞಾನೋದಯ. ಕವನದ ಪೂರ್ಣಪಾಠ ಇಂತಿದೆ:

ರಾಮನ್ ಸತ್ತ ಸುದ್ದಿ
------------------
(ರಚನೆ: ಕೆ.ಎಸ್.ನಿಸಾರ್ ಅಹಮದ್)

ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ
ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ
ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ-
ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ
ದುಃಖವಾಯಿತು. ಮೈಲಿಗೆ
ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ;
ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ
ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ,
ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ-
ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ
ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತಿದ್ದ; ಅಪ್ರಚಲಿತ
ಹಳ್ಳಿಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತಿದ್ದ.

ಕಂಡೊಡನೆ, ’ಹ್ಯಾಂಗಿದೀರಿ’ ಅಂದ;
ಈಚೀಚೆಗೆ ಅಪರೂಪವಲ್ಲ ಅಂದ, ಯಾಕೋ ಬಡವಾಗಿದ್ದೀರಿ
ಅಂದ, ಮಳೆ ಬೇಕಾಗಿಲ್ಲ ಅಂದ, ಫಸಲನ್ನು ಅಂದಾಜಿಸಿದ,
ನೆರೆಯವರೊಡನೆ ದಿನವಹಿ ಕಾದಾಟ ಸಾಕಾಗಿದೆ ಮಾರಾಯರೇ
ಅಂದ-ಕೊರೆಯುತ್ತಲೇ ಇದ್ದ-ಹೂಂಗುಟ್ಟಿದೆ-
ಅವನ ಮಾತಿಗೆ ಮಂಜಿನೊಳಗಿನ ಸೂರ್‍ಯ ನನ್ನ ಪ್ರಜ್ಞೆ.
’ರಾಮನ್ ಸತ್ತರೋ ಹನುಮ’ ಅನ್ನಬೇಕು, ಆಗ ತಡೆದು
ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೆ ಇವನ
ಅಶಿಕ್ಷಿತ ಅರಿವಿಗೆ?

ಆ ಕಡೆ ರಾಮನ್, ಈ ಕಡೆ ಹನುಮ;
ದಿನವಿಡೀ ಮೈ ಕೆಸರಿಸಿಕೊಂಡು, ನನ್ನಂಥವ ನೆನೆಯಲೂ
ನಿರಾಕರಿಸುವ ತಂಗಳುಂಡು, ರಾತ್ರಿ ಕಳ್ಳಭಟ್ಟಿಯ ಹೊಡೆದು-
ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನೆನ್ನೆಯ
ಪುನರಾವರ್ತನೆಯ ಏಕತಾನತೆಯಲ್ಲಿ-ಲೋಕ ಮರೆಯುವ
ಹನುಮನಿಗೆ ರಾಮನ್ ಹೋದರೆಷ್ಟೋ ರಸೆಲ್ ಹೋದರೂ ಅಷ್ಟೆ.
ಪತ್ರಿಕೆಯೋದುವುದಿಲ್ಲ; ನಾನು ಕವಿಯೆಂಬುದು ಗೊತ್ತಿಲ್ಲ:
ಹೊಟ್ಟೆಬಟ್ಟೆಯ ಅಗತ್ಯ ಮೀರಿದ ನನ್ನ ಹಸಿವು, ಅಸ್ವಸ್ಥತೆ
ಅರಿತಿಲ್ಲ; ಲೋಕದ ಪ್ರತಿನಿತ್ಯದ ಆಗು-ಹೋಗುಗಳಿಗೆ ಪ್ರತಿಕ್ರಿಯಿಸುವ
ಸೂಕ್ಷ್ಮತೆ ಕಂಡಿಲ್ಲ; ಅನೇಕ ಮಟ್ಟದಲ್ಲಿ ಬಾಳುವ ಪ್ರಶ್ನೆಯೇ
ಉದ್ಭವಿಸಿಲ್ಲ-ಆದರೂ ತೃಪ್ತ...
ಗದ್ದೆ, ಧಣಿ, ಹ್ಯಾಪ ಮೊಲೆಯ ಹೆಂಡಿರು, ಸಿಂಬಳಸುರುಕ ಮಕ್ಕಳು,
ದೇವರ ಗ್ರಾಮ್ಯ ಕಲ್ಪನೆ, ಊರಿನ ಪುಢಾರಿ-ಇಷ್ಟೇ ಜಗತ್ತು-ಆದರೂ ತೃಪ್ತ...

ನನ್ನಂತೆ ಕನ್ನಡ, ಗಡಿ, ನದಿ, ಪದ್ಯ, ಪ್ರತಿಷ್ಠೆ ಕಾಡುವುದಿಲ್ಲ-
ಹೆಂಡತಿಗೆ ಚೋಲಿ, ಹಿರಿ ಮಗನ ಶಾಲೆ
ಬೆಲ್ಲದ ಕಾಫಿಯ ಹಾಲೇಶಿಯ ಸಾಲ
ಹೊತ್ತು ಹೊತ್ತಿಗೆ ರುಚಿ ಗೌಣ ಅರಸಿಕ ಕೂಳು-ಚಿಂತೆಯಿಲ್ಲವೆಂದಲ್ಲ-ಆದರೂ ತೃಪ್ತ...

ಇದ ಮೆಚ್ಚಿ, ಕರುಬಿ, ಪೇಚಾಡಿ ನಡೆದಾಗ
ದೂರದಿಂದ, ಪ್ರಕೃತಿಯ ಅಗಾಧದಲ್ಲಿ ಹಿಮಾಚ್ಛಾದಿತ ಹನುಮ,
ಅವನ ಕೂದಲೆಳೆಯ ಕೂಗು-
ಅರ್ಥ ತೋರದ ಚುಕ್ಕೆ.

ಇಲ್ಲಿಂದ ನನಗೆ ವರ್ಗವಾಗುತ್ತೆ-ಒಂದು ದಿನ
ಹನುಮ ಸಾಯುತ್ತಾನೆ-ತಿಳಿಯುವುದಿಲ್ಲ.
ಇಲ್ಲಿನ ಹಳಬ ಅಲ್ಲಿ ಹೊಸಬನಾಗುತ್ತೇನೆ,
ಎಲ್ಲೋ ಹೇಗೋ ಸಾಯುತ್ತೇನೆ-ತಿಳಿಯುವುದಿಲ್ಲ.
ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು-ತಿಳಿಯುವುದಿಲ್ಲ.
ಈ ಪರಿಚಿತ ಆಕಾಶ, ತೆಂಗಿನ ಮರ, ಕಾಲುವೆ, ಗುಡ್ಡ, ಗುಡಿಸಲು-
ಇವು ಕೊಟ್ಟ ಧಾರಾಳ, ಅರ್ಥವಂತಿಕೆ, ಭಾವ ಸಂಚಾರ-ತಿಳಿಯುವುದಿಲ್ಲ.

ಕೊರಲು ಬಿಗಿದು ಒಬ್ಬಂಟಿ ನಿಧಾನ ನಡೆದಂತೆ
ರಾಮನ್ ಸತ್ತ ತೀವ್ರತೆ, ಕಳವಳ ತಣ್ಣಗಾಯಿತು...

***

ಇನ್ನು, ’ಆನಂದರಾಮನ್ ಸತ್ತ ಸುದ್ದಿ’. ನಿಸಾರರ ಕವನವನ್ನು ಅನುಸರಿಸಿ-ಅನುಕರಿಸಿ ನಾನು ಬರೆದಿರುವ ಈ ಅಣಕ ಕವನದಲ್ಲಿ ಬರುವ (ಸತ್ತಿರುವ) ಆನಂದರಾಮನ್ ಒಬ್ಬ ಲೇಖಕ. ಎಲ್ಲರಂತೆ ಅವನೂ ಸತ್ತ. ಅವನ ಸುತ್ತಮುತ್ತ ಹರಿದಿರುವ ಸಾಲುಗಳನ್ನು -ಕವನದ ಸಾಲುಗಳನ್ನು- ಓದಿ ಆನಂದಿಸಿರಿ ಅಥವಾ ದುಃಖಿಸಿರಿ.

ನಿಸಾರರ ಕ್ಷಮೆ ಕೋರಿ ನಾನು ಬೆಳಕಿಗೆ ತಂದ ನನ್ನ ಈ ಅಣಕವನ (ಅಣಕ ಕವನ) ಕಳೆದ ವರ್ಷದ (ಏಪ್ರಿಲ್ ೨೦೦೮) ’ಸುಧಾ’ ಹಾಸ್ಯ ಸಂಚಿಕೆಯಲ್ಲಿ ಪ್ರಕಟವಾಗಿದೆ.

(ಓದುಗ ಮಿತ್ರರೇ,
ಪತ್ರಿಕಾ ಬರವಣಿಗೆ, ಸಮಾಜಸೇವೆ ಮುಂತಾಗಿ ಮೈತುಂಬ-ತಲೆತುಂಬ ಕೆಲಸಗಳನ್ನು ತುಂಬಿಕೊಂಡಿರುವ ನಾನು ’ಗುಳಿಗೆ’ ವಿತರಣೆಯನ್ನು ಅನಿರ್ದಿಷ್ಟ ಕಾಲದವರೆಗೆ ಸ್ಥಗಿತಗೊಳಿಸಬೇಕಾದುದು ಅನಿವಾರ್ಯವಾಗಿದೆ. ನಿಮ್ಮ ಗಮನ-ಮೆಚ್ಚುಗೆ-ವಿಮರ್ಶೆ-ಪ್ರೋತ್ಸಾಹ ನನಗೆ ಅತೀವ ಸಂತಸ ತಂದಿದೆ. ನಿಮಗೆಲ್ಲರಿಗೂ ನನ್ನ ತುಂಬುಹೃದಯದ ಧನ್ಯವಾದ. ಮುಂದೆಂದಾದರೂ ಇಲ್ಲಿ ಮತ್ತೆ ಭೇಟಿಯಾಗೋಣ. ನಮಸ್ಕಾರ.)

ಆನಂದರಾಮನ್ ಸತ್ತ ಸುದ್ದಿ
-------------------------
(ರಚನೆ: ಎಚ್.ಆನಂದರಾಮ ಶಾಸ್ತ್ರೀ)

ಆನಂದರಾಮನ್ ಸತ್ತ ದಿನ ಬೆಂಗಳೂರಿನಲ್ಲಿ
ದರಿದ್ರ ಥಂಡಿ; ಚಳಿಗಾಲದಲ್ಲೇ ಸಾಯುವುದೆ
ಈ ಬರಹಗಾರ, ಕೊರೆದದ್ದು ಸಾಲದೆ ಬದುಕಿದ್ದಾಗ
ಕೊರೆವ ಚಳಿಯಲ್ಲೇ ಸತ್ತು ಬೆಳಗಿನ ಹೊತ್ತು
ಹೊರಗೆ ಬರುವಂತಾಯ್ತಲ್ಲಾ ಈ ಚಳಿಗೆ
ಅವನ ಪಾರ್ಥಿವ ಶರೀರದ ಬಳಿಗೆ ಎಂದು
ದುಃಖವಾಯಿತು ಅವನ ಬಂಧು
-ಗಳಿಗೆ, ಪರಿಚಿತರಿಗೆ ಮತ್ತು ಸಹ
-ಬರಹಗಾರರ ಬಳಗಕ್ಕೆ.

ಪತ್ರಿಕೆಗಳಿಗೆ ಪತ್ರ ಬರೆಯುತ್ತ
ವಾಚಕರಿಗೆ ಕೀಚಕಪ್ರಾಯ ಆದಾತ,
ಕವಿಗೋಷ್ಠಿಗಳಲಿ ಭಯಂಕರ
ಕೊರೆದಾತ, ತಾನು ಬಲು ಆದರ್ಶ ವ್ಯಕ್ತಿ
ಎಂದು ಮೆರೆದಾತ, ಸಾಯಲಿ ಬಿಡು ಪೀಡೆ
ತೊಲಗಿತು ಎಂದರು ಬಹುತೇಕ ಎಲ್ಲ ಜನರು.

ಆದರೆ, ಅವನೊಬ್ಬ ಹನುಮ ಮಾತ್ರ,
ಹಳ್ಳಿ ಗಮಾರ, ಒಳ್ಳೆ ಕೆಲಸಗಾರ,
ಹಳ್ಳಿ ಪದದ ಅಶಾಸ್ತ್ರೀಯ ಮಟ್ಟನ್ನು
ಕುರುಕುವ ಹರಕಲು ಬಟ್ಟೆಯ
ಗಾಯನಶೂರ, ದಿವಂಗತ ಆನಂದರಾಮನ
ಅತೀವ ಪ್ರೀತಿಗೆ ಪಾತ್ರ; ಅವನಿಗೆ ಆನಂದರಾಮ
ಕವಿಯೆಂಬುದು ಗೊತ್ತಿಲ್ಲ, ಬರಹ
ಓದಿಲ್ಲ, ಅಸಲು ಓದಲಿಕ್ಕೇ ಬರೋಲ್ಲ,
ಆದರೂ ದುಃಖಿಸಿದ ಮನಸಾರೆ; ಕಾರಣವಿಲ್ಲದಿಲ್ಲ.

ಕೆಟ್ಟು ಪಟ್ಟಣ ಸೇರಿದ್ದಾಗ ಹನುಮ,
ಹಸಿವು, ಅಸ್ವಸ್ಥತೆಯ ಗೂಡಾಗಿದ್ದಾಗ,
ಆಸರೆ ನೀಡಿದ್ದು ಇದೇ ಆನಂದರಾಮ.
ಪ್ರೀತಿಸಿದ್ದು ಸಹ; ಕನ್ನಡ, ಗಡಿ, ನದಿ,
ಪದ್ಯ, ಪ್ರತಿಷ್ಠೆಗಳನ್ನು ಮೀರಿ.

ಖಡ್ಗಕ್ಕಿಂತ ಲೇಖನಿಗೆ ಬಲ ಹೆಚ್ಚಂತೆ, ಗೊತ್ತಿಲ್ಲ.
ಲೇಖನಿಗಿರದ ಬಲ ಪ್ರೀತಿಗೆ; ಎರಡು ಮಾತಿಲ್ಲ.

ಈ ಕಡೆ ಹನುಮ, ಆ ಕಡೆ ಆನಂದರಾಮ;
ಮಧ್ಯೆ ಅಗಾಧ ಬಂಧು-ಬಳಗ,
ಸ್ಹೇಹಿತರು, ಸಹ ಲೇಖಕರು, ’ಅಭಿಮಾನಿಗಳು’.
ಮಧ್ಯದಲ್ಲಿ ಕಳಚಿದ ಕೊಂಡಿ.

ನಿಧನವಾಗಿಹೋದ ಆನಂದರಾಮನ್
ಒಬ್ಬಂಟಿ. ಕಳವಳಗೊಂಡು ಕುಳಿತಿರುವ
ಹನುಮ ಸಹ ಒಬ್ಬಂಟಿ. ಅಗಾಧ
ಜನಸಾಗರ ಕರ್ಮಕ್ಕೆ.

--೦--

ಮಂಗಳವಾರ, ಮೇ 12, 2009

ಚು.ಜೈ!

ಆ ಕಾಲವೊಂದಿತ್ತು.

ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಹರಟುತ್ತ ಒಂದೊಂದೇ ಖಾದ್ಯವನ್ನು ಸವಿಯುತ್ತ ವಿಮರ್ಶಿಸುತ್ತ ನಿಧಾನವಾಗಿ ಸರಕು ಒಳಗಿಳಿಸುತ್ತಿದ್ದ ಭವ್ಯ ಭೋಜನದ ದಿವ್ಯ ಕಾಲ ಅದಾಗಿತ್ತು. ಈಗ ಗಡಿಬಿಡಿಯಲ್ಲಿ ’ಟೂ ಮಿನಿಟ್ಸ್ ನೂಡಲ್ಸ್’ ನುಂಗಿ ಎದ್ದೇಳುವ ಕಾಲ ಬಂದಿದೆ. ಇನ್ನೂ ಅರ್ಜೆಂಟ್ ಇರುವವರು ಬ್ರೆಡ್ಡಿನ ತುಣುಕುಗಳನ್ನು ಬಸ್ಸಿನಲ್ಲೋ ತಮ್ಮ ಕಾರಿನಲ್ಲೋ ತಿಂದು ಮುಗಿಸಿ ಡ್ಯೂಟಿಗೆ ಹಾಜರಾಗುತ್ತಾರೆ. ಮಧ್ಯಾಹ್ನ ಕಚೇರಿಯ ಬಿಡುವಿನ ವೇಳೆಯಲ್ಲಿ ಕ್ಯಾರಿಯರ್ ತಂಗಳನ್ನು ಗಬಗಬನೆ ಮುಕ್ಕಿ ನೀರು ಕುಡಿಯುತ್ತಾರೆ. ಊಟ ಚುಟುಕಾಗಿದೆ. ಎರಡು ಹೊತ್ತಿನ ಊಟಕ್ಕಾಗಿ ಜೀವನವಿಡೀ ಕಷ್ಟಪಡುವ ನಾವು ಆ ಊಟವನ್ನು ಆನಂದಿಸುವಷ್ಟು ಸಮಯ ಹೊಂದಿಲ್ಲ!

ಹಿಂದೆಲ್ಲ ಗಂಡಸರು ಮನೆ ಜಗಲಿಯ ಮೇಲೋ ಊರ ಅರಳಿಕಟ್ಟೆಯ ಮೇಲೋ ಕುಳಿತು ಗಂಟೆಗಟ್ಟಲೆ ಹರಟುತ್ತಿದ್ದರು. ಹೆಂಗಸರು ದೇವಸ್ಥಾನದಲ್ಲೋ ತಂತಮ್ಮ ಮನೆಗಳ ತುಳಸಿಕಟ್ಟೆಗಳೆದುರೋ ಮುಖಾಮುಖಿಯಾಗಿ ಕೇರಿ ಸುದ್ದಿಯೆಲ್ಲ ಸುದೀರ್ಘವಾಗಿ ಮಾತಾಡುತ್ತಿದ್ದರು. ಈಗೇನಿದ್ದರೂ ’ಹಾಯ್, ಬಾಯ್, ಆರಾಮಾ?, ಹ್ಞೂಂ, ಕೆಲ್ಸ ಆಯ್ತಾ, ಇನ್ನೂ ಇಲ್ಲ’, ಇಷ್ಟೆ. ಹೆಚ್ಚೆಂದರೆ ದೂರವಾಣಿಯಲ್ಲಿ - ಅವರು ಹತ್ತಿರದಲ್ಲೇ ಇದ್ದರೂ - ಒಂದೆರಡು ಮಾತು, ಫಿನಿಷ್. ಕೆಲವರಿಗೆ ಅದಕ್ಕೂ ಸಮಯವಿಲ್ಲ ಅಥವಾ ಮನಸ್ಸಿಲ್ಲ, ಅವರದು ಬರೀ ಎಸ್‌ಎಂಎಸ್! ಮಾತು ಚುಟುಕಾಗಿದೆ. ಪಶುಪಕ್ಷಿಗಳಿಗಿಂತ ನಾವು ಭಿನ್ನವಾಗಿರುವುದೇ ನಮ್ಮ ನಡೆ’ನುಡಿ’ಯಿಂದಾಗಿ ಎಂಬ ಅರಿವಿದ್ದೂ ಸುಸೂತ್ರ ನಾಲ್ಕು ಮಾತಾಡುವಷ್ಟು ನಮಗಿಂದು ವ್ಯವಧಾನವಿಲ್ಲ ಅಥವಾ ಮನಸ್ಸಿಲ್ಲ!

ಚುಟುಕು-ಜೋಕು
----------------
ಕಾಳಿದಾಸನ ಮಹಾಕಾವ್ಯಗಳು ನಮಗೆ ಗೊತ್ತು. ಗೊತ್ತು ಅಂದರೆ, ಕನಿಷ್ಠ ಅವುಗಳ ಹೆಸರಾದರೂ ಗೊತ್ತು. ಅದೂ ಗೊತ್ತಿಲ್ಲದ ವಿದ್ಯಾವಂತರಿಗೆ ಕೊನೇಪಕ್ಷ ಕಾಳಿದಾಸ ಎಂಬ ಹೆಸರಾದರೂ ಗೊತ್ತು. ಇದೇರೀತಿ ಬಾಣನ ಬೃಹತ್ ’ಕಾದಂಬರಿ’ ನಮಗೆ ಗೊತ್ತು. ಪಂಪನ ಮಹಾಭಾರತದಿಂದ ಮೊದಲ್ಗೊಂಡು ಕುವೆಂಪುರವರ ’ಶ್ರೀ ರಾಮಾಯಣ ದರ್ಶನಂ’ವರೆಗೆ ಅನೇಕಾನೇಕ ಮಹಮಹಾ ಮಹಾಕಾವ್ಯಗಳನ್ನು ನಮ್ಮ ಹಿರಿಯರು ಓದಿದ್ದಾರೆ, ನಾವು ಹೆಸರು ಕೇಳಿದ್ದೇವೆ. ಆದರೆ ಇಂದು ಕಥೆ, ಕಾವ್ಯ ಎಲ್ಲ ಚುಟುಕಾಗಿದೆ. ಕಾರ್ಡಿನಲ್ಲಿ ಕಥೆ, ಒಂದೇ ವಾಕ್ಯದ ಕಥೆ, ಅರ್ಧ ವಾಕ್ಯದ ಕಥೆ, ಇಂಥವು ಜನಪ್ರಿಯವಾಗತೊಡಗಿವೆ. ಪೂರ್ಣ ಪ್ರಮಾಣದ ಕವಿತೆಗಳಿಗಿಂತ ಚುಟುಕಗಳೇ ಮೆರೆಯತೊಡಗಿವೆ. ’ಚುಟುಕ ಕವಿ’ಗೋಷ್ಠಿಗಳಲ್ಲಿ ಚುಟುಕು ಕವಿಗಳು ಚುಟುಕಾಗಿ ಕುಟುಕುವುದು ಜನರಿಗೆ ಇಷ್ಟವಾಗತೊಡಗಿದೆ. ಅಂಥ ಕವಿಗಳಿಗೆ ’ಚುಟುಕ ಶ್ರೀ’, ’ಚುಟುಕ ವೀರ’, ಮೊದಲಾದ ಬಿರುದುಬಾವಲಿಗಳು ಸಲ್ಲುತ್ತಿವೆ. ಸುದೀರ್ಘ ಲಲಿತ ಪ್ರಬಂಧವನ್ನಾಗಲೀ ಹಾಸ್ಯಬರಹವನ್ನಾಗಲೀ ಓದಲು ಯಾರಿಗೆ ಈಗ ಸಮಯವಿದೆ? ಸಮಯವಿದ್ದರೂ ಅಂಥ ಓದು ಯಾರಿಗೆ ಬೇಕಾಗಿದೆ? ನಗೆಹನಿಗಳನ್ನು ಓದಿ ನಕ್ಕು-ಬಿಡೋಣ, ಸಾಕು, ಹೀಗಾಗಿದೆ ನಮ್ಮ ಇಂದಿನ ಮನೋಭಾವ. ಅಂದು ನಾಡಿಗೇರ ಕೃಷ್ಣರಾಯರಾಗಲೀ ಬೀಚಿಯವರಾಗಲೀ ಮಾಡುತ್ತಿದ್ದಂಥ ಸುದೀರ್ಘ ಲಘುಭಾಷಣಗಳು ಇಂದು ನಮಗೆ ಬೇಕಿಲ್ಲ. ಅಭಿನವ ಬೀ’ಛಿ’ಗಳ ಚುಟುಕು-ಜೋಕುಗಳಿಗೆ ಬಿದ್ದುಬಿದ್ದು ನಕ್ಕು ಎದ್ದುನಡೆಯುವ ಜೋಕುಮಾರರು ನಾವಾಗಿದ್ದೇವೆ. ಕಿರಿ-ಕಿರಿ ಜೋಕು ನಮಗೆ ಸಾಕು. ’ಔರೇಕ್ ಜೋಕ್ ಮಾರೋ ಸಾಮೀ’, ಎನ್ನುತ್ತೇವೆ, ಅವರು ಜೋಕು ಮಾರುತ್ತಾರೆ. ನಾವು (ಕೇಳಿದ್ದನ್ನೇ ಕೇಳಿ)ಕೊಂಡು - ನಗಾಡಿಕೊಂಡು - ಎದ್ದು ನಡೆಯುತ್ತೇವೆ.

ಸಾಹಿತ್ಯವೂ ಚುಟುಕು
-------------------
ಜೋಕಿನ ವಿಷಯ ಬಿಡಿ. ಆಧ್ಯಾತ್ಮ, ಮನೋವಿಕಾಸ, ಜೀವನವಿಧಾನ, ಇಂಥ ಗಂಭೀರ ವಿಷಯಗಳೂ ನಮಗಿಂದು ಚುಟುಕಾಗಿಯೇ ತಿಳಿಸಲ್ಪಡಬೇಕು. ಮೂರುಮೂರು ಗಂಟೆಯ ಹರಿಕಥೆ, ಪ್ರವಚನ, ಉಪನ್ಯಾಸಗಳನ್ನು ಕೇಳಲು ನಮಗಿಂದು ವ್ಯವಧಾನವಿಲ್ಲ. (’ಎಲ್ಲೀ ಹರಿಕಥೆ ಹಚ್ಚಿದಿ, ಷಾರ್ಟಾಗಿ ಒದರು’, ಅನ್ನುತ್ತೇವೆ.) ಮೂರು ನಿಮಿಷದಲ್ಲಿ ರೇಡಿಯೋದಲ್ಲಿ ’ಚಿಂತನ’ ಮುಗಿದುಬಿಡಬೇಕು, ಐದು ನಿಮಿಷದಲ್ಲಿ ಟಿವಿಯಲ್ಲಿ ಉಪನ್ಯಾಸ ಶುಭಂ ಆಗಬೇಕು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಗಹನಪ್ರಬಂಧವೊಂದು ಆರೇಳು ನಿಮಿಷಗಳೊಳಗೆ ಮಂಡನೆಯಾಗಿಬಿಡಬೇಕು. ಇಲ್ಲದಿದ್ದಲ್ಲಿ ಆರೇಳು ಮಂದಿಯನ್ನುಳಿದು ಇತರರೆಲ್ಲ, ’ಯಾರಿಗೆ ಬೇಕು ಈ ಬೈರಿಗೆ’, ಎಂದು ಗೊಣಗುತ್ತ ಎದ್ದು ನಡೆದುಬಿಡುವರೆಂದು (ವೃಥಾ) ಭಯ ಸಂಘಟಕರಿಗೆ! ಒಟ್ಟಾರೆ, ಸಾಹಿತ್ಯವೂ ಇಂದು ಚುಟುಕಾಗಿರಬೇಕು. ಕ್ಷಣಹೊತ್ತಿನೊಳಗೇ ಆಣಿಮುತ್ತು ಉದುರಿಬಿಡಬೇಕು!

ಸಾಹಿತ್ಯ ಮಾತ್ರವಲ್ಲ, ಸಂಗೀತ, ನಾಟಕ, ಎಲ್ಲ ಅಷ್ಟೇ. ಅಹೋರಾತ್ರಿ ಶಾಸ್ತ್ರೀಯ ಸಂಗೀತ, ಬೆಳತನಕ ಯಕ್ಷಗಾನ-ಬಯಲಾಟ, ಅಂಥ ಕಾಲ ಹೋಯಿತು. ಈಗ - ಟಿವಿಯಲ್ಲಿ ನೋಡುವುದಿಲ್ಲವೆ, ಆ ರೀತಿ - ಅರ್ಧ, ಹೆಚ್ಚೆಂದರೆ ಒಂದು ಗಂಟೆಯೊಳಗೆ ಸಂಗೀತ, ಯಕ್ಷಗಾನ ಮುಗಿದುಬಿಡಬೇಕು. ಟಿವಿಯಲ್ಲಂತೂ ಒಮ್ಮೊಮ್ಮೆ ಮೂರೇ ನಿಮಿಷದಲ್ಲಿ ಒಂದು ಶಾಸ್ತ್ರೀಯ ಗಾಯನ ಪೂರೈಸಿಬಿಡಬೇಕು. ಝಲಕ್ ಆದರೂ ಸರಿಯೇ. (ಅಶಾಸ್ತ್ರೀಯವಾದರೂ ಚಿಂತೆಯಿಲ್ಲ!) ಚುಟುಕಾಗಿ ಮುಗಿದುಬಿಡುವುದು ಮುಖ್ಯ.

’ಟಿವಿ ಧಾರಾವಾಹಿ ಮಾತ್ರ ಚುಟುಕಾಗಿಲ್ಲ, ಅದೆಂದಿದ್ದರೂ ಮೆಗಾ ಮಗಾ’, ಅನ್ನುವಿರಾ? ಇಲ್ಲೇ ನೀವು ಎಡವಿದ್ದು. ಮೇಲ್ನೋಟಕ್ಕೇನೋ ಅದು ಮೆಗಾ ಅನ್ನಿಸುತ್ತದೆ, ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಟಿವಿ ಧಾರಾವಾಹಿಗಿಂತ ಚುಟುಕು ಇನ್ನೊಂದಿಲ್ಲ ಎಂಬ ಸತ್ಯದ ಅರಿವಾಗುತ್ತದೆ! ಪ್ರತಿ ಎಪಿಸೋಡೂ ಕೇವಲ ಅರ್ಧಗಂಟೆ; ಅದರಲ್ಲಿ ಜಾಹಿರಾತು ಕಳೆದರೆ ಉಳಿಯುವುದು ಹದಿನೈದೇ ನಿಮಿಷ; ಅದರಲ್ಲಿ ಐದು ನಿಮಿಷ ಟೈಟಲ್, ಶೀರ್ಷಿಕೆ ಗೀತೆ, ಇದುವರೆಗಿನ ಕಥೆ, ಇತ್ಯಾದಿ; ಉಳಿದ ಹತ್ತು ನಿಮಿಷದಲ್ಲಿ ಅರ್ಧಪಾಲು ಅವಧಿ ಮಾತಿಲ್ಲದ ಕ್ಲೋಸಪ್ ಷಾಟುಗಳು; ಇದೆಲ್ಲ ಜಾತಾ, ಕಥೆಗೆ ಮೀಸಲಾದ ಸಮಯ (ವಾರದಲ್ಲಿ) ಕೇವಲ ಐದೇ ನಿಮಿಷ! ಇದು ಚುಟುಕಲ್ಲದೆ ಮತ್ತೇನು? ಇಷ್ಟಾಗಿ, ಒಂದು ವರ್ಷವಿಡೀ ಓಡಿದ (ಕುಂಟಿದ) ಧಾರಾವಾಹಿಯ ಕಥೆಯನ್ನು ಚುಟುಕಾಗಿ ಒಂದೇ ವಾಕ್ಯದಲ್ಲಿ ಹೇಳಿಬಿಡಬಹುದಲ್ಲವೆ?

ಪಾಠ-ಆಟ
----------
ಶಾಲಾ ಕಾಲೇಜುಗಳ ಪರೀಕ್ಷಾ ಉತ್ತರಗಳೂ ಚುಟುಕಾಗತೊಡಗಿವೆ. ನಾವು ಚಿಕ್ಕವರಿದ್ದಾಗ ಅಡಿಷನಲ್ ಷೀಟುಗಟ್ಟಲೆ ಬರೆಬರೆದು ಲಗತ್ತಿಸುತ್ತಿದ್ದೆವು. ಇದೀಗ ನ್ಯೂ ಟೈಪ್. ಪ್ರಶ್ನೆಪತ್ರಿಕೆಯಲ್ಲೇ ಉತ್ತರ ಟಿಕ್ ಮಾಡಿ ವಾಪಸ್ ಕೊಟ್ಟರಾಯಿತು. ಏಕ್‌ದಂ ಚುಟುಕು. ಕಾಲೇಜು ವಿದ್ಯಾರ್ಥಿಗಳಿಗಂತೂ ಪುಸ್ತಕಗಳೂ ಚುಟುಕು. ತೆಳುವಾದ ಒಂದು ನೋಟ್‌ಬುಕ್ಕನ್ನು ಕೈಯಲ್ಲಿ ತೂಗಾಡಿಸಿಕೊಂಡು ಹೋದರೆ ಸಾಕು, ಇಡೀ ದಿನದ ಕಾಲೇಜು ಪಾಠ ಅಟೆಂಡ್ ಮಾಡಬಹುದು. ಅಂಥ ಎರಡು ನೋಟ್‌ಬುಕ್ ಇದ್ದರೆ ಸಾಕು, ಇಡೀ ವರ್ಷ ತಳ್ಳಬಹುದು! ಪ್ರೈಮರಿ ಶಾಲೆಗಳ ಪುಸ್ತಕಗಳ ಹೊರೆಯನ್ನೂ ಚುಟುಕುಗೊಳಿಸುವ ಚಿಂತನೆ ತೀವ್ರವಾಗಿ ನಡೆದಿದೆ.

ಪಾಠವಷ್ಟೇ ಅಲ್ಲ, ಆಟವೂ ಚುಟುಕಾಗಿದೆ. ಐದು ದಿನಗಳ ಕ್ರಿಕೆಟ್ ಪಂದ್ಯ ಇತ್ತು. ಮೂರು ದಿನಕ್ಕಿಳಿಯಿತು. ಒಂದು ದಿನದ ಪಂದ್ಯ ಶುರುವಾಯಿತು. ಇದೀಗ ಟ್ವೆಂಟಿ೨೦ ಭರಾಟೆ. ಮೂರೇ ಗಂಟೆಯಲ್ಲಿ ಪಂದ್ಯ ಖಲಾಸ್! ಮುಂದೆ, ಟೆನ್೧೦, ಫೈವ್೫, ಕೊನೆಗೆ ’ಏಕಾ ಏಕಿ’ ಪಂದ್ಯ ಬಂದರೂ ಆಶ್ಚರ್ಯವಿಲ್ಲ. ಕಚೇರಿ ಕೆಲಸದ ಮಧ್ಯೆ ಎದ್ದುಹೋಗಿ ಸಿಗರೇಟ್ ಸೇದಿಬರುವಂತೆ ಒನ್೧ ಪಂದ್ಯ ನೋಡಿಬಿಟ್ಟು ಬರಬಹುದು! ಚುಟುಕಿನ ಪರಾಕಾಷ್ಠೆಯಲ್ಲವೆ ಇದು?

ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಚುಟುಕು, ’ಮುಂದುವರಿದ’ವರ ಮನೆಗಳಲ್ಲಿ - ಆಮಂತ್ರಣ ಪತ್ರಿಕೆ ಸಹಿತ - ಮದುವೆ ಮುಂಜಿ ಚುಟುಕು, ಶ್ರಾದ್ಧವಂತೂ ’ಸಂಕಲ್ಪ ಶ್ರಾದ್ಧ’ವೆಂಬ ಹೆಸರಿನಲ್ಲಿ ಚುಟುಕೋ ಚುಟುಕು, ವಿದ್ಯೆ ಹೆಚ್ಚಾದಂತೆಲ್ಲ ಜನರ ನಡುವಿನ ಸಂಭಾಷಣೆ ಚುಟುಕು, ಪತ್ರ ವ್ಯವಹಾರ ಚುಟುಕು, ಪತ್ರಿಕೆಗಳಲ್ಲಿ ಸ್ಥಳಾಭಾವದಿಂದ ಲೇಖನಗಳೂ ಚುಟುಕು, ರಾಜ್, ಜಯ್, ವಿಷ್, ವಿನು, ಅನು, ಹೀಗೆ ಹೆಸರುಗಳೂ ಚುಟುಕು, ಇವರ ಉಡುಪುಗಳೂ ಚುಟುಕು.......ಎಲ್ಲಾ ಚುಟುಕವೋ, ಪ್ರಭುವೇ, ಎಲ್ಲಾ ಚುಟುಕವೋ!

ಚುಟುಕು ಅನಾದಿ
----------------
ಹಾಗಂತ, ಈ ಚುಟುಕೆಂಬುದು ಇಂದಿನ ಧಾವಂತದಿಂದಾಗಿ ಹುಟ್ಟಿರುವ ಕೂಸೆಂದು ವಿಶ್ಲೇಷಿಸುವುದೂ ತಪ್ಪಾಗುತ್ತದೆ. ಮಹಾಭಾರತವನ್ನು ರಚಿಸಿದ ವ್ಯಾಸಮಹರ್ಷಿಗಳೇ, ’ಪರೋಪಕಾರಂ ಪುಣ್ಯಾಯ, ಪಾಪಾಯ ಪರಪೀಡನಂ’, ಎಂದು ಮಹಾಭಾರತದ ಸಾರವನ್ನು ಚುಟುಕಾಗಿ ಎರಡೇ ಮಾತಿನಲ್ಲಿ ಹೇಳಿಬಿಟ್ಟಿದ್ದಾರೆ. ’ಈ ಎರಡು ಮಾತುಗಳೇ ಹದಿನೆಂಟೂ ಪುರಾಣಗಳ ಸಾರಾಂಶ (ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಂ)’, ಎಂದು ತೀರ್ಮಾನಿಸುವ ಮೂಲಕ ನಮ್ಮ ಹಿರಿಯರು ಅಷ್ಟಾದಶ ಪುರಾಣಗಳಿಗೂ ಚುಟುಕು ರೂಪವನ್ನು ಬಲು ಹಿಂದೆಯೇ ಕೊಟ್ಟುಬಿಟ್ಟಿದ್ದಾರೆ. ರಾಮಾಯಣದಂಥ ರಾಮಾಯಣವನ್ನು ಕೂಡ ನಮ್ಮ ಹಿರಿಯರು ಚುಟುಕಾಗಿ, ’ಪೂರ್ವಂ ರಾಮ ತಪೋವನಾತ್ ಗಮನಂ, ಹತ್ವಾ ಮೃಗಂ ಕಾಂಚನಂ. ವೈದೇಹಿ ಹರಣಂ. ಜಟಾಯು ಮರಣಂ, ಸುಗ್ರೀವ ಸಂಭಾಷಣಂ, ವಾಲೀ ನಿಗ್ರಹಂ, ಸಮುದ್ರ ತರಣಂ, ಲಂಕಾಪುರೀ ದಹನಂ, ಪಶ್ಚಾತ್ ರಾವಣ ಕುಂಭಕರ್ಣ ಹನನಂ, ಏತತ್ ಹಿ ರಾಮಾಯಣಂ’, ಎಂದು ಸಾರಿಬಿಟ್ಟಿದ್ದಾರೆ. ಇನ್ನೂ ಅಗ್ದಿ ಚುಟುಕುಪ್ರಿಯರು ಇದನ್ನು, ’ಶ್ರೀರಾಮ ಜನನಂ, ಸೀತಾಪಹರಣಂ, ರಾವಣ ಹನನಂ, ಏತತ್ ರಾಮಾಯಣಂ’, ಎಂದು ಇನ್ನಷ್ಟು ಮೊಟಕುಗೊಳಿಸಿದ್ದಾರೆ! ’ಶ್ಲೋಕಾರ್ಧೇನ ಪ್ರವಕ್ಷ್ಯಾಮಿ ಯದುಕ್ತಂ ಗ್ರಂಥಕೋಟಿಭಿಃ, ಬ್ರಹ್ಮಂ ಸತ್ಯಂ ಜಗನ್ಮಿಥ್ಯಂ ಜೀವೋ ಬ್ರಹ್ಮಸ್ಯ ನಾಪರಃ’, ಎಂದು ಸಾರುವ ಮೂಲಕ ಆದಿಶಂಕರರು ಕೋಟಿ ಗ್ರಂಥಗಳ ಸಾರವನ್ನು ಚುಟುಕಾಗಿ ಕೇವಲ ಅರ್ಧ ಶ್ಲೋಕದಲ್ಲಿ ಹೇಳಲು ಯತ್ನಿಸಿದ್ದಾರೆ. ಇದನ್ನೆಲ್ಲ ಗಮನಿಸಿ ನಾನೀಗ ಚುಟುಕಾಗಿ ಹೇಳುವುದಿಷ್ಟೆ: ’ಚುಟುಕು-ಚುಟುಕ ಇದು ಅನಾದಿ ಸಂಗತಿ; ಸನಾತನವಾದದ್ದು; ಇಂದು ಇದಕ್ಕೆ ಡಿಮಾಂಡ್ ಅತಿ; ಅಷ್ಟೆ’.

ಈ ಬ್ರಹ್ಮಾಂಡದಲ್ಲಿ ನಾವೆಲ್ಲ ಒಂದು ತಟಕು. ಅನಂತ ಕಾಲದೆದುರು ನಮ್ಮ ಜೀವಿತಾವಧಿಯೇ ಒಂದು ಚುಟುಕು.

ಆದ್ದರಿಂದ, ಚುಟುಕಿಗೆ ಜೈ!

ಕ್ಷಮಿಸಿ. ಚು.ಜೈ!

ಶನಿವಾರ, ಮೇ 9, 2009

ಶಾಂತಿ-ಕ್ರಾಂತಿ-ಸಂಕ್ರಾಂತಿ

ಈ ಲಘುಬರಹಕ್ಕೆ ಕಥಾವಸ್ತು ಇಲ್ಲ. ಮೂರು ಗಂಟೆ ಅವಧಿಯ ಚಲನಚಿತ್ರವೇ ಕಥೆಯಿಲ್ಲದೆ ಓಡಿ ಹಿಟ್ಟಾಗುವಾಗ ಮೂರು ನಿಮಿಷದ ಓದಿನ ಈ ಬರಹಕ್ಕೆ ಕಥಾವಸ್ತುವಿಗಾಗಿ ನಾನೇಕೆ ತಲೆ ಕೆಡಿಸಿಕೊಳ್ಳಲಿ? ಕಥಾವಸ್ತುವನ್ನು ಎಳೆದುತಂದಿಟ್ಟು ನಿಮ್ಮ ತಲೆಯನ್ನಾದರೂ ಏಕೆ ಕೆಡಿಸಲಿ? ಹಾಗೇ ಹಗುರಾಗಿ ಲಘುವಾಗಿ ಲಗುವಾಗಿ ಬರೆದು ಮುಗಿಸಿಬಿಡುತ್ತೇನೆ, ನೀವೂ ಲಗುಲಗೂನೆ ಓದಿ ’ಮುಗಿಸಿಬಿಡಿ.’

ಲಘುಬರಹವಾದರೂ ಇದರಲ್ಲಿ ಸೀರಿಯಸ್ ಘಟ್ಟವುಂಟು. ಕೊನೆತನಕ ತಲೆಬುಡವಿಲ್ಲದೆ ಓಡಿ ಕೊನೆಯಲ್ಲಿ ಕ್ಲೈಮ್ಯಾಕ್ಸ್ ಎಂಬ ಸೀರಿಯಸ್ ಹಂತಕ್ಕೆ ಧುತ್ತೆಂದು ಬಂದು ನಿಲ್ಲುವ ಅದ್ಭುತ ಚಲನಚಿತ್ರದೋಪಾದಿ ಈ ಬರಹವೂ ಒಂದು ಅದ್’ಭೂತ’ ಬರಹ! ’ಭೂತಬರಹ’ ಎಂದಾಕ್ಷಣ ’ಘೋಸ್ಟ್ ರೈಟಿಂಗ್’ ಎಂದು ಭಾವಿಸಬೇಡಿ. ನಾನೆಂಬ ನಾನೇ ಬರೆದ ಬರಹವಿದು. ಭೂತಕಾಲದ ಬರಹವೂ ಇದಲ್ಲ. ಇದೊಂದು ಭೂತಪ್ರಾಯ ಬರಹ! ಅರ್ಥಾತ್, ನಿಮಗೆ ಭೂತ ಹೇಗೆ ಇಷ್ಟವೋ ಹಾಗೆಯೇ ಈ ಬರಹವೂ ಇಷ್ಟವಾಗುತ್ತದೆ.

ಅಂದರೆ, ಭೂತದ ಹಾಗೆ ಕಾಡುತ್ತದೆ? ಹಾಗೇನಿಲ್ಲ ಸ್ವಾಮೀ, ಇದು ಲಘುಬರಹ. ಓದಿ ನೋಡಿ, ಗೊತ್ತಾಗುತ್ತದೆ.

ಅರ್ಥಪೂರ್ಣಮಲ್ತೆ?
----------------
ಶಾಂತಿ-ಕ್ರಾಂತಿ-ಸಂಕ್ರಾಂತಿ. ಎಷ್ಟು ಅರ್ಥಪೂರ್ಣ ಈ ನುಡಿಗಟ್ಟು! ಶಾಂತಿ ಯಾರಿಗೆ ಬೇಡ? ಯುದ್ಧಮಾಡುವ ಎಲ್ಲ ದೇಶಗಳೂ ಶಾಂತಿಗಾಗಿಯೇ ಯುದ್ಧಮಾಡುವುದು, ಅಲ್ಲವೆ? ಅಮೆರಿಕವಂತೂ ಶಾಂತಿಸ್ಥಾಪನೆಗೆಂದೇ ಬಾಂಬುಗಳನ್ನು ತಯಾರಿಸಿ ಕಂಡಕಂಡ ದೇಶಗಳ ಮೇಲೆಲ್ಲ ಎಸೆಯುವುದು. ಶಾಂತಿ ಇಂದು ಪ್ರಪಂಚದಲ್ಲಿ ಅತ್ಯಂತ ತುರ್ತಾಗಿ ಅವಶ್ಯವಾಗಿರುವ ವಸ್ತು. ಎಂದೇ ಯುದ್ಧಗಳು. ’ವಾರ್ ಅಂಡ್ ಪೀಸ್’. ಪೀಸ್ ಪೀಸ್.

ಶಾಂತಿ ಎಂದರೆ ನಮ್ಮ ಗುಳಿಗೆಪ್ಪಗೂ ಬಹಳ ಇಷ್ಟ. ಎಂದೇ ಸದಾ ಶಾಂತಿಯ ಮನೆಯೆದುರೇ ಠಳಾಯಿಸುತ್ತಿರುತ್ತಾನೆ, ಇರಲಿ.

ಇನ್ನು ಕ್ರಾಂತಿ. ಈ ಪದದ ಅರ್ಥ-ವ್ಯಾಪ್ತಿಯನ್ನೆಂತು ಬಣ್ಣಿಸಲಿ! ಕ್ಷೀರಕ್ರಾಂತಿ (ಗೊಮ್ಮಟೇಶ್ವರನಿಗೆ ಕ್ಷೀರಾಭಿಷೇಕ), ಹಸಿರುಕ್ರಾಂತಿ (ಹಸಿರು ಶಾಲಿನವರ ಕ್ರಾಂತಿ), ಕೆಂಪುಕ್ರಾಂತಿ (ಇದು ’ಎಡ’ ಅಂತಾರಪ್ಪ, ಯಾರೋ), ರಕ್ತಕ್ರಾಂತಿ (ಉಗ್ರರು ಪ್ರಪಂಚದೆಲ್ಲೆಡೆ ಮಾಡುತ್ತಿರುವ -ಅನ್ಯರ ರಕ್ತದ- ಕ್ರಾಂತಿ), ಧರ್ಮಕ್ರಾಂತಿ (’ಶರಣ’ರ ಕೊರಳ ಹೂವಿನ ಹಾರವಯ್ಯಾ), ಅಧರ್ಮಕ್ರಾಂತಿ (’ಮಾತೆ’ಯ ಮಾತಿಗೆ ಎದುರಾಡುವರಯ್ಯಾ), ಹೀಗೆ, ಕ್ರಾಂತಿಯಿಲ್ಲದ ವಸ್ತು ಅದಾವುದಿಹುದೀ ಜಗದಲ್ಲಿ? ಮುವ್ವತ್ತು ಸೆಕೆಂಡಿನ ಟಿವಿ ಜಾಹಿರಾತುಗಳಲ್ಲೂ ’ಕ್ಷಿಪ್ರ’ಕ್ರಾಂತಿ! ಕ್ರಾಂತಿಗೆ ನಮೋ!

ಮೂರನೆಯದು ಸಂಕ್ರಾಂತಿ. ’ಎಳ್ಳು ಬೆಲ್ಲ ತಿಂದು ಒಳ್ಳೆಮಾತಾಡಿ.’ ಇಷ್ಟೇ ನನಗೆ ಗೊತ್ತಿರೋದು.

ಎಳ್ಳು ಬೆಲ್ಲ ತುಟ್ಟಿಯಾಗಿದ್ದರೂ ನಾವು ಕೊಳ್ಳಬಲ್ಲೆವು ಎಂದಾದರೆ, ತಿನ್ನಲು ನಮ್ಮ ದೇಹಸ್ಥಿತಿಯೂ -ಷುಗರ್ ಇತ್ಯಾದಿ ಇಲ್ಲದೆ- ಸರಿಯಾಗಿದೆ ಎಂದಾದರೆ ಮತ್ತು ಒಳ್ಳೆಮಾತನ್ನಾಡುವ ಸದ್ಗುಣ ನಮ್ಮಲ್ಲಿದೆಯೆಂದಾದರೆ ಮೇಲಿನ ಲೋಕೋಕ್ತಿಗಿಂತ ಮಿಗಿಲಾಗಿ ಇನ್ನೇನನ್ನು ತಾನೇ ಸಂಕ್ರಾಂತಿಗೆ ಆರೋಪಿಸುವ ಅವಶ್ಯಕತೆ ಇದೆ? ’What do you say?’
’ಕನ್ನಡ, ಕನ್ನಡ!’
’ಓ, sorry!’

ಏನ್ ಛಂದ!
-----------
ಶಾಂತಿ-ಕ್ರಾಂತಿ-ಸಂಕ್ರಾಂತಿ, ಈ (ಮೂರು ಪದಗಳನ್ನೂ ಒಟ್ಟಿಗೆ ಕಟ್ಟಿದ) ನುಡಿಗಟ್ಟಿಗೆ ಎಷ್ಟು ಛಂದ ಅರ್ಥ ಅದ, ನೋಡ್ರಲಾ!

’ಶಾಂತಿ-ಕ್ರಾಂತಿ’ ಒಂದು ಅದ್ಭುತ ಸಿನಿಮಾ. ಮನದಲ್ಲಿ ಏನೋ ಭ್ರಾಂತಿ ಇಟ್ಟುಕೊಂಡು ಥಿಯೇಟರ್‌ಗೆ ಹೋದದ್ದರಿಂದಾಗಿ ನಾನು ವಿಭ್ರಾಂತನಾಗಿ ಹೊರಬರಬೇಕಾಯಿತು. ನನ್ನ ದೌರ್ಬಲ್ಯವದು. ಅದಕ್ಕೆ ನಿರ್ಮಾಪಕರನ್ನು ದೂರುವುದೇ?

’ಕ್ರಾಂತಿ-ಸಂಕ್ರಾಂತಿ’ ಎಂಬ ಸಿನಿಮಾ ಸೆಟ್ಟೇರುವುದಿತ್ತು, ಆದರೆ ’ಶಾಂತಿ-ಕ್ರಾಂತಿ’ಯ ಕ್ರಾಂತಿ ಕಂಡು ದಂಗಾದ ನಿರ್ಮಾಪಕರು ’ಕ್ರಾಂತಿ-ಸಂಕ್ರಾಂತಿ’ಯನ್ನು ಸೆಟ್ಟೇರಿಸುವ ಸಾಹಸ ಮಾಡಲಿಲ್ಲ.

ಆದರೆ ’ಕ್ರಾಂತಿ-ಸಂಕ್ರಾಂತಿ’ಯು ಕನ್ನಡ ಕವಿಗಳ ಲೇಖನಿ ಮೂಲಕ ಕ್ರಾಂತಿಯೆಸಗಿಯೇಬಿಟ್ಟಿದೆ. ಉದಾಹರಣೆಗೆ ಚಿತ್ರಕವಿ ’ಕವಿಮಹಾರಾಜ್’ ರಚಿಸಿರುವ ಚಿತ್ರಗೀತೆಯೊಂದರ ಸಾಲುಗಳನ್ನು ಗಮನಿಸಿ.

ಕ್ರಾಂತೀ ಸಂಕ್ರಾಂತೀ
ಏನಂತೀ ಶಾಂತೀ
ಆಹಾ! ಮುಖದ ಕಾಂತಿ
ಮಾಡಿಕೊಂಡೆ ವಾಂತಿ
ಎಷ್ಟು ತಿಂಗಳು? ಹೇಳೇ ಶಾಂತೀ
ಕ್ರಾಂತಿಕ್ರಾಂತಿಕ್ರಾಂತಿ!

ಇತರರ ಉದಾಹರಣೆಯೇಕೆ, ’ಆಂದೋಲನ ಮಹಾನ್ವೇಷಣಂ’ ಎಂಬ ಮಹಾಕಾವ್ಯ ರಚಿಸಿ ’ಮಹಾಕವಿ’ಯೆಂದು ಸ್ವಯಂ ಬಿರುದಾಂಕಿತನಾಗಿರುವ ಸ್ವಯಂ ನನ್ನ ಸ್ವಂತ ಸ್ವರಚನೆಯನ್ನೇ ಗಮನಿಸಿ.

ಏನಿದು ಭ್ರಾಂತಿ!
ಎಂಥ ವಿಭ್ರಾಂತಿ!
ಇದಾ ನಿನ್ನ ಕ್ರಾಂತಿ?!
ಹೊಟ್ಟೆಗೇನು ತಿಂತಿ?
ಏನು ಹೇಳಿದರು ಗಾಂಧಿ,
ಬುದ್ಧ, ಬಸವ, ಅಂಬೇಡ್ಕರರು?
ಮದರ್ ತೆರೇಸಾ, ತಾಯಿ ಸೋನಿಯಾ, ಮತ್ತೆ
ಮಾತೆ ಮಹದೇವಿಯರು?
ನಾನಿಲ್ಲಿ ಶರ್ಮರೊಡನೆ ಮಾತಾಡುತ್ತಿದ್ದಾಗ
ಆಫ್ರಿಕದಲ್ಲಿ ಬೆಳ್ಳಂಬೆಳಗು.
ಕ್ರಾಂತಿ-ಸಂಕ್ರಾಂತಿ.

ನನ್ನ ಈ ಕವನಕ್ಕೆ ’ಮೋಕ್ಷಗುಂಡಿ ಪ್ರಶಸ್ತಿ’, ’ದ್ರಾವಿಡಭಟ್ಟ ಪ್ರಶಸ್ತಿ’, ’ಕನ್ನಡಮಳ್ಳ (ಪ್ರಿಂಟ್ ಮಿಸ್ಟೇಕ್ ಅಲ್ಲ) ಪ್ರಶಸ್ತಿ’, ಹೀಗೆ ಹತ್ತು ಹಲವು ಪ್ರಶಸ್ತಿಗಳು ಬಂದಿವೆ. ’ಕ್ರಾಂತಿ-ಸಂಕ್ರಾಂತಿ’ ಪದದ ಮಹಿಮೆಯೇ ಅಂಥದು!

ಒಂದಾದಮೇಲೊಂದು
-------------------
ಈಗ ಧುತ್ತೆಂದು ಕ್ಲೈಮ್ಯಾಕ್ಸಿಗೆ(?) ಬಂದುಬಿಡೋಣ.
ಶಾಂತಿ-ಕ್ರಾಂತಿ-ಸಂಕ್ರಾಂತಿ.
ಒಂದಾದಮೇಲೊಂದು.
ಒಟ್ಟಿನಲ್ಲಿ/ಒಟ್ಟಾಗಿ/ಒಟ್ಟಾರೆ ಪರಿಣಾಮ? ಈಗ ಓದಿ.

೮೦೦೦ ವರ್ಷಗಳ ಕೆಳಗೆ ಜಂಬೂದ್ವೀಪದಲ್ಲಿ ಶಾಂತಿ ನೆಲೆಸಿತ್ತು. ಇಂದಿನ ರಷ್ಯಾ-ಸೈಬೀರಿಯಾದಿಂದ ಹಿಡಿದು ನಮ್ಮ ಕನ್ಯಾಕುಮಾರಿಯವರೆಗೂ ವ್ಯಾಪಿಸಿರುವ ವಿಶಾಲ ಪ್ರದೇಶವೇ ಅಂದಿನ ಜಂಬೂದ್ವೀಪ. ಆ ಜಂಬೂದ್ವೀಪವು ೭೦೦೦ ವರ್ಷಗಳ ಕಾಲ ಶಾಂತಿ, ಸಮೃದ್ಧಿಗಳಿಂದ ಶೋಭಿಸುತ್ತಿತ್ತು. ಅಂದರೆ, ಇಂದಿನ ಭಾರತ ದೇಶವೂ ೭೦೦೦ ವರ್ಷ ಕಾಲ ಶಾಂತಿ, ಸಮೃದ್ಧಿಗಳಿಂದ ನಳನಳಿಸುತ್ತಿತ್ತು. ಆಗ ಬಂದ ನೋಡಿ, ಅಲೆಕ್ಸಾಂಡರು! ಬಂದರು ನೋಡಿ, ಗ್ರೀಕರು, ಹೂಣರು, ಶಕರು!

ಆಮೇಲೆ ಬಿಡಿ, ಮಹಮದ್ ಬಿನ್ ಕಾಸಿಮ್, ಘಜ್ನಿ, ಘೋರಿ, ಮೊಗಲರು, ಯೂರೋಪಿಯನ್ನರು-ಬ್ರಿಟಿಷ್ ಬ...ಮಕ್ಕಳು!

ಶಾಂತಿಪರ್ವ ಫಿನಿಷ್!

ನಾವು ಸಾವಿರ ವರ್ಷ ಕಾಲ, ಪಡಬಾರದ ಪಾಡು ಪಟ್ಟೆವು. ಆಗ ಶುರುವಾಯಿತು ಕ್ರಾಂತಿ’ಪರ್ವ’.

ಮಂಗಳ್ ಪಾಂಡೆ, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸುಖದೇವ್, ರಾಜಗುರು, ಸುಭಾಷ್‌ಚಂದ್ರ ಬೋಸ್, ಸಾವರ್‌ಕರ್, ಮದನ್‌ಲಾಲ್ ಧಿಂಗ್ರ, ರಾಸ್ ಬಿಹಾರಿ ಬೋಸ್, ಜತೀಂದ್ರನಾಥ್ ಮುಖೋಪಾಧ್ಯಾಯ, ಅರೊಬಿಂದೊ,......

ಕ್ರಾಂತಿ’ಪರ್ವ’ದ ಏಟು ತಾಳಲಾರದೆ ಬ್ರಿಟಿಷರು ಓಡಿಹೋದರು. ಭಾರತ ಸ್ವತಂತ್ರವಾಯಿತು.

ಸ್ವಾತಂತ್ರ್ಯ ದೊರೆತು ಅರವತ್ತೊಂದು ಗತಿಸಿ ಇದೀಗ ಅರವತ್ತೆರಡು ನಡೆಯುತ್ತಿದೆ. ಪರ್ವದೋಲ್ ಕೈಕೊಂಡ ಕ್ರಾಂತಿಯಿಂ ದೊರೆತ ಸ್ವಾತಂತ್ರ್ಯಮಂ ಬಳಸಿದ ನಿಮಿತ್ತಂ ಈ ಸಂವತ್ಸರ ಷಷ್ಟಿ ಮೇಲೊಂದರ ಪರ್ವಕಾಲದೊಳ್ ಆದುದೆಮ್ಮ ಸಂಕ್ರಾಂತಿ! ಇದೀಗ ಎಮ್ಮದು ’ಸಂಕ್ರಾಂತಿಪರ್ವ’!

ಸಂಕ್ರಾಂತಿ. ಅಂದರೆ, ಸೂರ್ಯನ ’ರಾಶಿಚಲನ’. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನ ’ಚಲಿಸುವಿಕೆ’. ಸಂಕ್ರಮಣ.

ನಮ್ಮೀ ’ಭಾರತಸೂರ್ಯ’ ಕೈಕೊಂಡಿರುವ ಸಂಕ್ರಮಣ ಎಲ್ಲಿಂದ ಎಲ್ಲಿಗೆ, ಗೊತ್ತೆ?
ಸ್ವಸಂಸ್ಕೃತಿಯಿಂದ ಪಾಶ್ಚಾತ್ಯ ಸಂಸ್ಕೃತಿಯೆಡೆಗೆ!
ಸ್ವದೇಶದಿಂದ ಅಮೆರಿಕದೆಡೆಗೆ!
’ಅಧ್ಯಾತ್ಮ ಸಂಸ್ಕಾರ’ದಿಂದ ’ಉಪಭೋಗ ಸಂಸ್ಕೃತಿ’ಯೆಂಬ ವಿಕೃತಿಯೆಡೆಗೆ!
ಕರ್ಣಾನಂದಕರ, ಮನೋಲ್ಲಾಸಕರ, ಜ್ಞಾನೇಂದ್ರಿಯ ಮಧುರ (ಸ್ವಕೀಯ) ಶಾಸ್ತ್ರೀಯ ಸಂಗೀತದಿಂದ ಕರ್ಣಕಠೋರ, ಮನೋವಿಕಾರಕರ, ಜ್ಞಾನಪೀಠಿ ಬಂಧುರ ಲೈವ್ ಬ್ಯಾಂಡ್‌ನೆಡೆಗೆ!
ದೇಹಾಲಸ್ಯ-ಆಯಾಸಗಳನ್ನು ದೂರಮಾಡುವ ಚಾರಣ-ಯಾತ್ರೆಗಳಿಂದ ಮತ್ತು ಚಿತ್ತಕ್ಲೇಶವನ್ನು ದೂರಮಾಡುವ ದೈವದರ್ಶನ-ಪುರಾಣಶ್ರವಣಗಳಿಂದ ಮತ್ತೇರಿಸುವ ರೇವ್ ಪಾರ್ಟಿಯೆಡೆಗೆ!

ಈ ರೀತಿ,
ಸರಿದು ನಾವು ಶಾಂತಿಯಿಂದ ಕ್ರಾಂತಿಯೆಡೆಗೆ, ಸರಿಯುತ್ತಿದ್ದೇವಿಂದು ಕ್ರಾಂತಿಯಿಂದ ಸಂಕ್ರಾಂತಿಯೆಡೆಗೆ.

ಇದುವೇ ನಮ್ಮ
’ಶಾಂತಿ-ಕ್ರಾಂತಿ-ಸಂಕ್ರಾಂತಿ’!
ಓಂ ಶಾಂತಿಃ ಶಾಂತಿಃ ಶಾಂತಿಃ.
ಊಹ್ಞೂಂ.
’ಓಂ ಶಾಂತಿ ಓಂ’!

--0--

ಗುರುವಾರ, ಮೇ 7, 2009

ಚಂದ್ರಾಯಣ!

ಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.

ಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು ಏನು ಮಾಡಿದರು ಗೊತ್ತೆ? ಅಂತರರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸಿ ಕಾನೂನಿನ ಅಡೆತಡೆಗಳನ್ನು ನಿವಾರಿಸಿಕೊಂಡು, ಕೇಂದ್ರ ಸರ್ಕಾರದೊಡನೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆವಶ್ಯಕ ಒಪ್ಪಂದಗಳನ್ನು ಮಾಡಿಕೊಂಡು ಚಂದ್ರನ ಒಂದಷ್ಟು ನೆಲವನ್ನು ಖರೀದಿಸಿ ತಮ್ಮ ಸಂಸ್ಥೆಗಳ ಹೆಸರುಗಳಲ್ಲಿ ರಿಜಿಸ್ಟರ್ ಮಾಡಿಸಿಕೊಂಡರು. ಅನಂತರ ಆ ನೆಲದಲ್ಲಿ ನಿವೇಶನ ಇತ್ಯಾದಿಗಳನ್ನು ಗಣಕಯಂತ್ರದ ಸಹಾಯದಿಂದ ’ನಿರ್ಮಿಸಿ’ ಮಾಧ್ಯಮಗಳಲ್ಲಿ ಆಕರ್ಷಕ ಜಾಹಿರಾತುಗಳನ್ನು ನೀಡಿ ಸಾರ್ವಜನಿಕರಿಗೆ ಮಾರತೊಡಗಿದರು! ವಿವಿಧ ವಿಸ್ತೀರ್ಣಗಳ ಸೈಟುಗಳು ಅಲ್ಲಿ ಲಭ್ಯ!

’ಡೂ ಯೂ ವಾಂಟ್ ಎ ಸೈಟ್ ಆನ್ ಮೂನ್? ಚಾಂದ್ ಕೇ ಊಪರ್ ಸೈಟ್ ಹೋನಾ?’ ಎಂದು ಕೇಳಿಕೊಂಡು ಈ ರಿಯಲ್ ಎಸ್ಟೇಟ್ ಉದ್ಯಮಗಳ ಏಜಂಟರು ಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್, ಟಿ.ಕೆ.ಅಲೆಕ್ಸ್ ಇವರುಗಳ ಮನೆಬಾಗಿಲನ್ನೂ ಬಡಿದು ಬೈಸಿಕೊಂಡು ವಾಪಸಾದರು!

ಕೈಯಲ್ಲಿ ಕಾಸು ಓಡಾಡುತ್ತಿದ್ದ ಕಾಲ, ಭಾರತದ ಸಾಫ್ಟ್‌ವೇರ್ ಉದ್ಯೋಗಿಗಳು ಮುಗಿಬಿದ್ದು ಚಂದ್ರನಮೇಲೆ ಸೈಟುಗಳನ್ನು ಖರೀದಿಸಿದರು. ಹಾಗೆ ಖರೀದಿಸಿದವರಲ್ಲಿ ಸಹಜವಾಗಿಯೇ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗಳದ್ದೇ ಸಿಂಹಪಾಲು.

ಇದೆಲ್ಲ ಹಳೆಯ ಕಥೆ. ಇದೀಗ ಒಬಾಮಾ, ’ಬ್ಯಾಂಗಲೋರ್ ನೋ, ಬಫೆಲೋ ಯೆಸ್’, ಅಂದನಲ್ಲಾ, ಬಹಳಷ್ಟು ಸಾಫ್ಟ್‌ವೇರ್ ಉದ್ಯೋಗಿಗಳ ಉದ್ಯೋಗ ಹೊರಟುಹೋಗಿದೆ! ಅವರೀಗ ಜೀವನೋಪಾಯಕ್ಕಾಗಿ ಚಂದ್ರನಮೇಲಿನ ತಮ್ಮ ಸೈಟುಗಳನ್ನು ಮಾರಲು ಹೊರಟಿದ್ದಾರೆ. ಆದರೆ, ಕೊಳ್ಳಲು ಗಿರಾಕಿಯೇ ಇಲ್ಲ! ಕಾರಣ ಆರ್ಥಿಕ ಹಿಂಜರಿತ!

ಎಲ್ಲಿಗೆ ಬಂತು ನೋಡಿ ಅವಸ್ಥೆ!

ಬುಧವಾರ, ಮೇ 6, 2009

ಕೋತಿಚೇಷ್ಟೆ

ಕೋತಿಚೇಷ್ಟೆ ಎಂಬ ನುಡಿಗಟ್ಟನ್ನು ಸೃಷ್ಟಿಸಿದ್ದು ನಾನಲ್ಲ. ಯಾರೋ ಪೂರ್ವಜರು, ತಮ್ಮ ಮಕ್ಕಳನ್ನೋ ಮೊಮ್ಮಕ್ಕಳನ್ನೋ ಸುಧಾರಿಸಲು ಕಷ್ಟವಾದಾಗ, ತಮ್ಮ ಪೂರ್ವಜರನ್ನು ನೆನೆದು, ಈ ನುಡಿಗಟ್ಟನ್ನು ಸೃಷ್ಟಿಸಿರಬೇಕು. ತಮ್ಮ ಕಂದಮ್ಮಗಳಮೇಲಿನ, ಹಾಗೂ, ತಮ್ಮ ಆ ಪೂರ್ವಜರಮೇಲಿನ ಪ್ರೀತಿಯಿಂದಲೇ ಈ ನುಡಿಗಟ್ಟನ್ನವರು ಹುಟ್ಟುಹಾಕಿರುತ್ತಾರೆಂಬುದು ನನ್ನ ಅಚಲ ನಂಬಿಕೆ. ಪರಂಪರಾನುಗತವಾಗಿ ಬಳಕೆಯಲ್ಲಿ ಬಂದಿರುವ ಈ ವಿಶೇಷಪದವನ್ನು ಎಲ್ಲರಂತೆಯೇ ನಾನೂ ಬಳಸುತ್ತಿದ್ದೇನೆ ಅಷ್ಟೆ. ಆದಾಗ್ಗ್ಯೂ, ಅಣೋರಣೀಯನೂ ಮಹತೋ ಮಹೀಯನೂ ಆಗಿರುವ ಮುಖ್ಯಪ್ರಾಣನ (ಪ್ರಾಣಿ)ರೂಪವನ್ನು ಈ ರೀತಿ ಲಘುವಾಗಿ ಬಳಸಿಕೊಳ್ಳುತ್ತಿರುವುದಕ್ಕಾಗಿ ಆ ಸ್ವಾಮಿಯಲ್ಲಿ ಮಾಫಿ ಮಾಂಗುತ್ತೇನೆ. ಆಂಜನೇಯಾ, ಕ್ಷಮಿಸೆನ್ನನು.

ಇಷ್ಟಕ್ಕೂ, ಈ "ಕೋತಿಚೇಷ್ಟೆ" ಎಂಬ ನುಡಿಗಟ್ಟನ್ನು ನಾನು ನನ್ನ ಮಕ್ಕಳಮೇಲೋ ಮೊಮ್ಮಕ್ಕಳಮೇಲೋ ಇನ್ನಾರಮೇಲೋ ಆರೋಪಿಸುತ್ತಿಲ್ಲ. ಅಸಲಿಗೆ, ನರರ ಕುರಿತು ಅಲ್ಲವೇಅಲ್ಲ ನನ್ನೀ ಬರಹ (ಆರೋಪ). ವಾನರರ ಕುರಿತಾದುದು ಈ ನನ್ನ ಕೊರೆತ! ಆದ್ದರಿಂದ, ಈ ಬರಹದ ತಲೆಬರಹವಾಗಿ "ಕೋತಿಚೇಷ್ಟೆ" ಓಕೆ; ಹಿಂಜರಿಕೆ ಯಾಕೆ? ಅಲ್ವಾ?

ಈಗ ವಿಷಯಕ್ಕೆ ಬರುತ್ತೇನೆ. ವಿದ್ಯಾರಣ್ಯಪುರ ಎಂಬಲ್ಲಿ ಒಂದು ಮನೆ ಖರೀದಿಸಿ ವಾಸಿಸತೊಡಗಿದೆ. ಪುರಕ್ಕಿಂತ ಅರಣ್ಯಕ್ಕೇ ಹೆಚ್ಚು ಸನಿಹದಲ್ಲಿರುವ ಒಂದು ಬಡಾವಣೆ ಅದು. ಕಡಿಮೆ ರೇಟಿಗೆ ಮನೆ ಸಿಗಬೇಕೆಂದರೆ ಸಿಟಿ ಮಧ್ಯದಲ್ಲಿ ಸಿಗುತ್ತೆಯೇ? ಊರಿಂದ ಹೊರಗೆ, ದೂರ ಹೋಗ್ಬೇಕಾಗುತ್ತಪ್ಪ. ಅಂಥದೊಂದು ಸ್ಥಳ ವಿದ್ಯಾರಣ್ಯಪುರ. ಹೆಸರಿಗೆ ಸಿಟಿ ; ಅನುಭವಕ್ಕೆ ಕಾಡು ಕಂ ಪ್ರಕೃತಿ ಕಂ ರೆಸಾರ್ಟು! ಒಂಥರಾ ಮಲ್ಟಿಪರ್ಪಸ್ ಲೇಔಟು!

ಇಂತಿಪ್ಪ ವಿದ್ಯಾರಣ್ಯಪುರದ ನನ್ನ ಮನೆಯ ದೇವರಕೋಣೆಯೊಳ್ ಎಂದಿನಂತೆ ಅಂದೂ ಸಹ ನಾನು ದೇವರ ಪೂಜೆಗೆ ಕುಳಿತಿದ್ದೆ. ಪ್ರಾತಃಸಂಧ್ಯಾವಂದನೆ ಪೂರೈಸಿ, ಪೂಜಾವಿಧಿಯ ಅಂತಿಮ ಹಂತಕ್ಕೆ ಬಂದು, ಇನ್ನೇನು, ದೇವರಿಗೆ ನೈವೇದ್ಯ ಅರ್ಪಿಸಬೇಕು, ಅಷ್ಟರಲ್ಲಿ ನನ್ನ ಹಿಂದೆ ಏನೋ ಸದ್ದಾದಂತನ್ನಿಸಿತು. ಹಿಂತಿರುಗಿ ನೋಡಿದರೆ, ಅದೆಲ್ಲಿಂದ ಒಳಗೆ ಬಂತೋ, ಒಂದು ಕೋತಿಮರಿ ನನ್ನ ಹಿಂದೆ ನಿಂತು ಡ್ಯಾನ್ಸ್ ಮಾಡ್ತಿದೆ! ಮರುಕ್ಷಣವೇ ಆ ಕೋತಿಮರಿ ಮುಂದಕ್ಕೆ ಜಿಗಿದು, ನಾನು ನೈವೇದ್ಯಕ್ಕೆಂದು ಇಟ್ಟಿದ್ದ ಜೋಡಿ ಬಾಳೆಹಣ್ಣನ್ನು ಎತ್ತಿಕೊಂಡು ಪರಾರಿಯಾಯಿತು! ರಾಮನ ನೈವೇದ್ಯಕ್ಕೆಂದು ಇಟ್ಟಿದ್ದ ಹಣ್ಣನ್ನು ರಾಮಬಂಟ ಸ್ವೀಕರಿಸಿದ, ಹೋಗಲಿ ಬಿಡು, ಅಂದುಕೊಂಡು ರಾಮನಿಗೆ ಸಕ್ಕರೆ ತಿನ್ನಿಸಿ ಮಂಗಳಾರತಿ ಎತ್ತಿದೆ.

ಇದಾದ ಮರುದಿನ ಬೆಳಿಗ್ಗೆ. ಎಂದಿನಂತೆ ಸಂಧ್ಯಾವಂದನೆ, ಪೂಜೆ. ಮುಗಿಯಿತು. ಹಿಂದಿನ ದಿನದಹಾಗೆ ಮರಿಮಾರುತಿರಾಯ ಬಂದು ನೃತ್ಯಸೇವೆ ಮಾಡಲಿಲ್ಲ, ಸದ್ಯ! ಆದರೆ............! ಅದೇ ರಾಯ ತನ್ನ ಮಾತಾಪಿತೃರೊಂದಿಗೆ ಆಗಮಿಸಿ ನನ್ನ ಮನೆಯ ಹಿತ್ತಿಲಲ್ಲಿ ಪಟ್ಟಾಗಿ ಕೂತುಬಿಟ್ಟಿದ್ದಾನೆ! ಗಿಡಕ್ಕೆ ಪೂಜೆಯ ನೀರು ಚೆಲ್ಲಲು ಹೋದ ನನ್ನನ್ನು ನೋಡಿ "ಗುರ್ರ್" ಅನ್ನುತ್ತಾನೇ! ನನಗೆ ಅರ್ಥವಾಯಿತು. ನೈವೇದ್ಯ ಮಾಡಿದ್ದ ಬಾಳೆಹಣ್ಣನ್ನು ಕೊಟ್ಟೆ. ತಗೊಂಡು ಸಂಸಾರ ಡೀಸೆಂಟಾಗಿ ಜಾಗ ಖಾಲಿಮಾಡಿತು.

ಅದರ ಮರುದಿನ ಅದೇವೇಳೆಗೆ ಹಿತ್ತಲಲ್ಲಿ ಕರೆಕ್ಟಾಗಿ ಒಂಭತ್ತು ಕೋತಿಗಳು ಹಾಜರ್! ನಿನ್ನೆ ಬಂದ ಆ ಮೂರು, ಪ್ಲಸ್, ಬೇರೆಯವು ಆರು! ನನ್ನ ಬಳಿ ಇರುವುದು ಎರಡೇ ಬಾಳೆಹಣ್ಣು. ಏನು ಮಾಡಲಿ? ಆ ಎರಡು ಬಾಳೆಹಣ್ಣನ್ನೇ ಅವುಗಳ ಕಡೆಗೆ ಎಸೆದೆ. ಮರುಕ್ಷಣವೇ ಅವುಗಳ ಮಧ್ಯೆ ಮಹಾಭಾರತ ಯುದ್ಧ!

ಅದರ ಮರುದಿನ ನಾನು ಹುಷಾರಾದೆ. ಕರೆಕ್ಟಾದ ಟೈಮಿಗೆ, ಕರೆಕ್ಟಾಗಿ ಒಂಭತ್ತೇ ಸಂಖ್ಯೆಯಲ್ಲಿ ಬಿಜಯಂಗೈದ ಪವನಸುತ-ಸುತೆಯರಿಗೆ ನಾನು ನನ್ನ ಸತಿಯ ದ್ವಾರಾ ಒಂದು ಬೊಗಸೆ ನೆಲಗಡಲೆ ಕಾಳು ಅರ್ಪಿಸಿದೆ. ತಿಂದು ತೇಗಿ ಖುಷ್ ಆಗಿ ಹೊರಟುಹೋದವು.

ಅದರ ಮರುದಿನವೇ ಅವುಗಳ ಚೇಷ್ಟೆ ನಮ್ಮ ಅನುಭವಕ್ಕೆ ಬಂದದ್ದು. ಸರಿಯಾದ ಸಮಯಕ್ಕೆ ಒಂಭತ್ತೂ ವಾನರಗಳೂ ಹಿತ್ತಲಲ್ಲಿ ಪ್ರತ್ಯಕ್ಷವಾದವು. ಸದರಿ ಮರಿವಾನರ ಇದ್ದಕ್ಕಿದ್ದಂತೆ ನಮ್ಮ ಅಡಿಗೆಮನೆಯೊಳಕ್ಕೆ ನುಗ್ಗಿತು! ಹಿಂದಿನ ದಿನ ಗಮನಿಸಿರಬೇಕು ಶಾಣ್ಯಾ, ನೇರವಾಗಿ ನೆಲಗಡಲೆ ಡಬ್ಬದ ಬಳಿಗೇ ಚಂಗನೆ ನೆಗೆದು ಡಬ್ಬ ಎತ್ತಿಕೊಂಡು ಹೈ ಸ್ಪೀಡಿನಲ್ಲಿ ವಾಪಸ್ ಹಿತ್ತಲಿಗೆ ಓಡಿತು! ಮರುಕ್ಷಣವೇ ಒಂಭತ್ತೂ ಕಪಿಗಳೂ ಡಬ್ಬದ ಸಮೇತ ಮನೆಯ ಟೆರೇಸ್‌ಮೇಲಿದ್ದವು! ಮುಂದಿನ ಹದಿನೈದು ನಿಮಿಷ ಅವುಗಳಿಗೆ ಸಮಾರಾಧನೆ! ಎಲ್ಲವೂ ನೆಲಗಡಲೆಯನ್ನು ಹೊಟ್ಟೆತುಂಬ ತಿಂದು, ಗಂಟಲ ಚೀಲದಲ್ಲಿ ತುಂಬಿಕೊಂಡು, ಇನ್ನೂ ನೆಲಗಡಲೆ ಉಳಿದಿರುವುದನ್ನು ಕಂಡು ಖುಷಿಯಿಂದ ಅದರಲ್ಲಿ ವಿವಿಧ ಆಟಗಳನ್ನು ಆಡತೊಡಗಿದವು! ಎಸೆದಾಟ, ಕ್ಯಾಚ್ ಹಿಡಿಯುವಾಟ, ಗೋಲಿಯಾಟ, ಕಿವಿ ಮೂಗುಗಳಲ್ಲಿ ತುರುಕಿಕೊಳ್ಳುವಾಟ, ಹೀಗೆ ಆ ನೆಲಗಡಲೆ ಕಾಳುಗಳಲ್ಲಿ ಹಲಬಗೆಯ ಆಟಗಳನ್ನಾಡಿ ಕೊನೆಗೆ ಖಾಲಿ ಡಬ್ಬವನ್ನು ಪಕ್ಕದ ಮನೆಯ ಕಾಂಪೌಂಡಿನೊಳಕ್ಕೆ ಎಸೆದವು! ಮುಂದಿನ ಒಂದು ನಿಮಿಷದಲ್ಲಿ, ಒಂದೊಂದಾಗಿ ಟೆರೇಸಿನಿಂದ ಕಾಲುಕಿತ್ತವು. ಅಷ್ಟರಲ್ಲಿ ನನ್ನಾಕೆಯ ಕೈಗೆ ನಾಲ್ಕು ಸಲ ಪೊರಕೆ ಬಂದಿತ್ತು!

ಅದರ ಮಾರನೆಯ ದಿನ ಒಂಭತ್ತೂ ವಾನರಗಳೂ ಅತಿ ಸಭ್ಯರಂತೆ ಮತ್ತೆ ಹಾಜರ್! ಮುನ್ನೆಚ್ಚರಿಕೆ ಕ್ರಮವಾಗಿ ನನ್ನಾಕೆ ಅಡಿಗೆಮನೆ ಬಾಗಿಲನ್ನು ಮುಚ್ಚಿಕೊಂಡು ಒಳಗಿಂದ ಬೋಲ್ಟ್ ಹಾಕಿಕೊಂಡಿದ್ದಳು. ಅವಳ ಆದೇಶದಮೇರೆಗೆ ನಾನೂ ಆ ವಾನರಸಮೂಹಕ್ಕೆ ಬಾಳೆಹಣ್ಣು ಕೊಡಲಿಲ್ಲ. ಒಂದಷ್ಟು ಹೊತ್ತು ಕಾದವು, ಆಮೇಲೊಂದಷ್ಟು ಹೊತ್ತು "ಗುರ್ರ್" ಅಂದವು, ಬಳಿಕ ಮನೆಗೆ ಒಂದು ಪ್ರದಕ್ಷಿಣೆ ಹಾಕಿ ಒಳನುಗ್ಗುವ ದಾರಿ ಏನಾದರೂ ಇದೆಯಾ ಎಂದು ನೋಡಿದವು, ಪ್ರಯೋಜನವಾಗದಿದ್ದಾಗ ಕಾಂಪೌಡ್ ಒಳಗಿನ ಮಾವಿನಮರ ಏರಿ ಕುಳಿತವು. ಅದರಲ್ಲೊಂದು ಕಪಿಯು ಮರದಮೇಲಿಂದ ಪಕ್ಕದಮನೆಯವರ ಕಾರಿನಮೇಲೆ ಜಿಗಿಯಿತು. ಕೂಡಲೇ ಕಾರು "ಭೊಂವ್" ಎಂದು ಒಂದು ಭರ್ಜರಿ ಆವಾಜ್ ಹಾಕಿತು! ಆಟೋಮ್ಯಾಟಿಕ್ ಹಾರ್ನ್ ಅಳವಡಿಸಿದ್ದರ ಪರಿಣಾಮ! ಮಂಗಗಳಿಗೆ ರೋಮಾಂಚನವಾಯಿತು! ಚೊಂಗಪ್ಪ ಹತ್ತಿದವರಂತೆ ಎಲ್ಲಾ ಮಂಗಗಳೂ ಸರದಿಮೇಲೆ ಮರದಿಂದ ಕಾರಿನ ಟಾಪ್‌ಗೆ ಜಿಗಿಯತೊಡಗಿದವು! ಜಿಗಿಯುವುದು, ಕುಣಿಕುಣಿಯುತ್ತ ಮತ್ತೆ ಮರ ಏರುವುದು, ಮತ್ತೆ ಜಿಗಿಯುವುದು, ಮತ್ತೆ ಮರ ....... ಹೀಗೇ ಸಾಗಿತು ಅವುಗಳ ಆಟ! ಒಂದೊಂದು ಜಿಗಿತಕ್ಕೂ ಒಂದೊಂದು "ಭೊಂವ್" ಲೆಕ್ಕದಲ್ಲಿ ಕಾರಿನ ಹಾರ್ನು ಸತತವಾಗಿ "ಭೊಂವ್, ಭೊಂವ್, ಭೊಂವ್, ಭೊಂವ್, ..........."! ಇಡೀ ವಿದ್ಯಾರಣ್ಯಪುರಕ್ಕೆ ಕೇಳಿಸುವಂಥಾ ಸೌಂಡು! "ಹುಷ್" ಅಂತ ನಾನು ಹೆದರಿಸಲು ಯತ್ನಿಸಿದರೆ ಆ ಮಂಗಗಳಿಗೆ ಕೇರೇ ಇಲ್ಲ! ಕಾರಿನ ಮಾಲೀಕರು ಪಾಪ, ಅರವತ್ತೈದು ಅಂಡ್ ಅರವತ್ತರ ಯುವ ದಂಪತಿ, ನಿಧಾನವಾಗಿ ಬಂದು ಕೋಲು ತೋರಿಸಿ ಅವುಗಳನ್ನು ಓಡಿಸುವಷ್ಟರಲ್ಲಿ ಆ ವಾನರವೃಂದ ಬರೋಬ್ಬರಿ ಹತ್ತು ನಿಮಿಷ ಭರ್ಜರಿ ನೃತ್ಯ-ವಾದ್ಯಗೋಷ್ಠಿ ನಡೆಸಿತ್ತು! (ಮುಂದೆ ಒಂದು ತಿಂಗಳು ಪಕ್ಕದಮನೆಯ ಆ ದಂಪತಿ ನಮ್ಮೊಡನೆ "ಠೂ" ಬಿಟ್ಟಿದ್ದರು!)

ಇಷ್ಟೆಲ್ಲ ಆದರೂ ಆ ಕಪಿಸಂಕುಲಕ್ಕೆ ಮಾನ, ಮರ್ಯಾದೆ, ನಾಚಿಕೆ, ಅಂಜಿಕೆ, ಯಾವುದೂ ಇಲ್ಲ ನೋಡಿ, ಮಾರನೇ ದಿನವೂ ಮತ್ತೆ ಹಾಜರ್! ಯಥಾಪ್ರಕಾರ ಹಿತ್ತಲಲ್ಲಿ ಚಿತ್ತೈಸಿ, "ಪ್ರಸಾದ" ಬಯಸಿ ಎಲ್ಲವೂ ಅತ್ಯಂತ ವಿನಯದಿಂದ ಸಾಲಾಗಿ ಕುಳಿತವು! ನಾನೂ ನನ್ನವಳೂ ತಲಾ ಒಂದೊಂದು ದೊಣ್ಣೆ ತೋರಿಸಿದೆವು. ಕೂಡಲೇ ಅವು ಓಡಿದವು. ಎಲ್ಲಿಗೆ? ನಮ್ಮ ಟೆರೇಸಿಗೆ! ಟೆರೇಸಲ್ಲಿ ಏನಾದರೂ ಮಾಡಿಕೊಳ್ಳಲಿ ಅಂತ ನಾವು ಸುಮ್ಮನಾದೆವು. ಮುಂದಿನ ಹತ್ತು ನಿಮಿಷ ಅವು ಟೆರೇಸ್‌ಮೇಲೆ ಓಡುವ, ಜಿಗಿಯುವ, ಇತ್ಯಾದಿ ಸಪ್ಪಳ ನಮಗೆ ಕೇಳಿಸುತ್ತಿತ್ತು. ಆಗ ಇದ್ದಕ್ಕಿದ್ದಂತೆ ನನ್ನಾಕೆಗೆ ನೆನಪಾಗಿ, "ಅಯ್ಯಯ್ಯೋ, ಒಣಹಾಕಿದ ಬಟ್ಟೆ!" ಎಂದು ಕೂಗುತ್ತಾ ಟೆರೇಸಿಗೆ ಓಡಿದಳು! ಹಿಂದೆಯೇ ನಾನೂ ಓಡಿದೆ. ಹೋಗಿ ನೋಡಿದರೆ, ಅಲ್ಲಿ ಏನು ನಡೆದಿದೆ? ಒಣಹಾಕಿದ ಸೀರೆಯಲ್ಲಿ ಎರಡು ಕಪಿಗಳು ಉಯ್ಯಾಲೆ ಆಡುತ್ತಿವೆ! ಇನ್ನೆರಡು ಕಪಿಗಳು ನನ್ನ ಪ್ಯಾಂಟ್‌ನೊಳಗೆ ಸೇರಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿವೆ! ಉಳಿದವು, ಉಳಿದ ಬಟ್ಟೆಗಳನ್ನೆಲ್ಲಾ ಹಗ್ಗದಿಂದ ಕೆಳಕ್ಕೆ ಎಳೆದುಹಾಕಿಕೊಂಡು ಮನಸೋಇಚ್ಛೆ ಹರಿಯುತ್ತಿವೆ! ತಿನ್ನಲು ಕೊಡದೇಇದ್ದುದಕ್ಕೆ ನಮಗೆ ಶಾಸ್ತಿ! ಅವುಗಳಿಂದ ಛೇದಗೊಳ್ಳದೆ ಉಳಿದ ಬಟ್ಟೆಯೆಂದರೆ ನನ್ನ ಕರ್ಚೀಫ್ ಒಂದೇ! ಮರುದಿನದಿಂದ ಮನೆಯೊಳಗೇ ಬಟ್ಟೆ ಒಣಹಾಕತೊಡಗಿದೆವು. ಒಣಗದಿದ್ದರೆ ಅಷ್ಟೇಹೋಯ್ತು!

ಮುಂದಿನ ದಿನಗಳಲ್ಲಿ ಸದರಿ ಕಪಿಸೈನ್ಯವು ನಮ್ಮ ಕೇಬಲ್ ವೈರ್ ಮೇಲೆ ಸರ್ಕಸ್ಸು, ಹಿತ್ತಿಲಿನ ನಲ್ಲಿ ತಿರುಗಿಸಿ ನೀರು ಬಿಟ್ಟುಕೊಂಡು ಆಟ, ಸಿಂಟೆಕ್ಸ್ ಟ್ಯಾಂಕಿನ ಮುಚ್ಚಳ ತೆಗೆದು ಎಸೆಯಾಟ, ಮನೆಗೆಲಸದವಳು ಹೊರಗೆ ಬಿಟ್ಟ ಚಪ್ಪಲಿಗಳನ್ನು ಹರಿಯುವ ಆಟ, ಹೀಗೆ ವಿವಿಧ ಆಟಗಳನ್ನಾಡುತ್ತ ನಮ್ಮಮೇಲೆ ಸೇಡು ತೀರಿಸಿಕೊಳ್ಳತೊಡಗಿತು! ಹೀಗೇ ಒಂದಷ್ಟು ದಿನ ಮುಂದುವರಿಯಿತು. ಆಡೀ ಆಡೀ ಸಾಕಾಗಿರಬೇಕು, ಒನ್ ಫೈನ್ ಮಾರ್ನಿಂಗ್ ಇದ್ದಕ್ಕಿದ್ದಂತೆ ಇಡೀ ಸೈನ್ಯ ನಾಪತ್ತೆ! ನಾನೂ ನನ್ನಾಕೆಯೂ ನೆಮ್ಮದಿಯ ನಿಟ್ಟುಸಿರಿಟ್ಟೆವು.

ಪ್ರಿಯ ವಾಚಕರೇ, ಇಷ್ಟೆಲ್ಲ ಆಗಿ ಇಂದಿಗೆ, ಅಂದರೆ ನಾನು ಈ (ನಮ್ಮ ಹಣೆ)ಬರಹ ಬರೆಯುತ್ತಿರುವ ಈ ದಿನಕ್ಕೆ, ಒಂದು ತಿಂಗಳು ಕಳೆದಿದೆ. ಒಂದು ತಿಂಗಳಿನಿಂದ ಯಾವೊಂದು ಮಂಗವೂ ನಮ್ಮ ಮನೆಕಡೆ ಸುಳಿದಿಲ್ಲ.

ಇವತ್ತು ನನ್ನಾಕೆ ಅಡಿಗೆಮನೆಯೊಳಗೆ ಚಕ್ಲಿ ಕಾರ್ಖಾನೆ ಶುರುಮಾಡ್ಕೊಂಡಿದ್ದಾಳೆ. ಮಂಗಗಳ ಕಾಟ ತಪ್ಪಿ ತಿಂಗಳಾದದ್ದನ್ನು ಸೆಲೆಬ್ರೇಟ್ ಮಾಡಲಿಕ್ಕಲ್ಲ, ಅಳಿಯ-ಮಗಳು ಬರ್ತಾ ಇದ್ದಾರೆ, ಅದಕ್ಕೆ.

ಅಗೋ, ಅಳಿಯ-ಮಗಳು ಬಂದೇಬಿಟ್ರು, ಕಾಲಿಂಗ್ ಬೆಲ್ ಸದ್ದಾಯ್ತಲ್ಲ.

ಹೋಗಿ ಬಾಗಿಲು ತೆಗೆದೆ. ಎಲ್ಲಿದ್ದಾರೆ ಅಳಿಯ-ಮಗಳು? ಹೊರಗಡೆ ಯಾರೂ ಇಲ್ಲ! ಹಾಗಾದ್ರೆ ಕಾಲಿಂಗ್ ಬೆಲ್ ಒತ್ತಿದ್ದು ಯಾರು? ಆಚೆ ಈಚೆ ನೋಡಿದೆ. ಯಾರೂ ಕಾಣಿಸಲಿಲ್ಲ. ಒಂದು ಕ್ಷಣ ಅಲ್ಲೇ ನಿಂತು ಯೋಚಿಸಿದೆ. ಊಹ್ಞೂ. ಏನೂ ಗೊತ್ತಾಗಲಿಲ್ಲ. ಇದೊಳ್ಳೆ ಮ್ಯಾಜಿಕ್ ಆಯ್ತಲ್ಲಾ, ಅಂದುಕೊಳ್ಳುತ್ತಾ ಇನ್ನೇನು ವಾಪಸ್ ಬಾಗಿಲು ಮುಚ್ಚಬೇಕು, ಆಗ, ಕಾಲಿಂಗ್ ಬೆಲ್ ಪಕ್ಕದ ಕಿಟಕಿಮೇಲಿನ ಪ್ಯಾರಾಪೆಟ್ ಗೋಡೆಯ ಮೇಲ್ಗಡೆಯಿಂದ, ತಲೆ ಕೆಳಗೆ ಮಾಡಿಕೊಂಡು ಇಣುಕಿತೊಂದು ಕೋತಿಮರಿ! ತಿಂಗಳ ಕೆಳಗೆ ಸೈನ್ಯಸಮೇತ ದಾಳಿಯಿಟ್ಟಿತ್ತಲ್ಲಾ ಅದೇ ಕೋತಿಮರಿ!

ಶನಿವಾರ, ಏಪ್ರಿಲ್ 4, 2009

ಆಹಾ! ಹಾಸ್ಯವೇ! (ವಿದಾಯಲೇಖ)

ಮೂರ್ಖರ ದಿನ ಆಚರಣೆಯಲ್ಲಿ ನಾವು ಹಾಸ್ಯಕ್ಕೂ ಮೂರ್ಖತನಕ್ಕೂ ಸಂಬಂಧ ಕಲ್ಪಿಸುತ್ತೇವೆ! ಹೀಗೆ ಸಂಬಂಧ ಕಲ್ಪಿಸುವುದೇ ಒಂದು ರೀತಿಯಲ್ಲಿ ಮೂರ್ಖತನ!
ಹಾಸ್ಯವೆಂಬುದು ಜಾಣರಿಂದ, ಜಾಣರಿಗಾಗಿ ಇರುವ ಜಾಣತನ. ’ಮೂರ್ಖರ ದಿನದಂದು ಯಾರನ್ನಾದರೂಮೂರ್ಖರನ್ನಾಗಿಸಲು ನಾವು ಜಾಣತನವನ್ನೇನೋ ಉಪಯೋಗಿಸಬೇಕು, ಸರಿಯೇ, ಆದರೆ ಜಾಣತನವುಮೋಸ’ವೇ ಹೊರತುಹಾಸ್ಯವಲ್ಲ. ಹಲವು ಸಲ ಅದು ಅಪಹಾಸ್ಯ!
ಮೂರ್ಖರ ದಿನ ಆಸುಪಾಸಿನಲ್ಲಿ ಮಾಧ್ಯಮಗಳಲ್ಲಿಹಾಸ್ಯ ಭರ್ಜರಿ ಬೆಳೆ. ಆದರೆ ಅವು ಬಹುತೇಕ ನಿರುಪಯುಕ್ತ ಕಳೆ. ಕೆಲವು ಕೊಳೆ. ಮತ್ತೆ ಕೆಲವಂತೂ ಹಾಸ್ಯದ ಕೊಲೆ! ಕನ್ನಡದ ಮಟ್ಟಿಗೆ ಹೇಳುವುದಾದರೆ, ಮಾಧ್ಯಮಗಳಲ್ಲಿಮೂರ್ಖರ ದಿನ ಸಂದರ್ಭದಲ್ಲಿ ಮಾತ್ರವಲ್ಲ, ಉಳಿದಂತೆಯೂ ಬೆಳಕು ಕಾಣುವ ತಥಾಕಥಿತ ಹಾಸ್ಯದ ಬೆಳೆಯಲ್ಲಿ ನಿರುಪಯುಕ್ತ ಕಳೆ ಮತ್ತು ಹಾಸ್ಯದ ಕೊಲೆಯೇ ಜಾಸ್ತಿ!
ಹಾಸ್ಯಪ್ರಜ್ಞೆಯನ್ನಾಗಲೀ ವಿಡಂಬನಾ ಚಾತುರ್ಯವನ್ನಾಗಲೀ ಹೊಂದಿರದವರು ಸೃಷ್ಟಿಸಿದ ಬೈರಿಗೆಗಳಿಂದ ಓದುಗ/ಕೇಳುಗ/ನೋಡುಗ ಕೊರೆಸಿಕೊಳ್ಳುವುದು, ನಗೆಹನಿಗಳನ್ನು ಹಿಗ್ಗಿಸಿನಗೆಬರಹವೆಂದು ಪ್ರತಿಪಾದಿಸುವವರ ಅಂಥ ಬರಹಗಳನ್ನು ಓದುವ ಶಿಕ್ಷೆ ಅನುಭವಿಸುವುದು, ಚುಟುಕು/ಚೂರು/ತಟುಕು ಜೋಕು, ಎಸ್.ಎಂ.ಎಸ್.ಗಳಿಗೇ ತೃಪ್ತಿಪಟ್ಟುಕೊಳ್ಳುವುದು, ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗುವ ಆಂಗಿಕ ಚೇಷ್ಟೆಗಳನ್ನು ಹಾಸ್ಯಾಭಿನಯವೆಂದು ಸ್ವೀಕರಿಸಬೇಕಾದ ಅನಿವಾರ್ಯಕ್ಕೀಡಾಗುವುದು ಮತ್ತು (ಅಪ)ಹಾಸ್ಯghostಇಗಳನ್ನು ಹಾಸ್ಯದ ಉತ್ತುಂಗ ಶಿಖರವೆಂದು ಒತ್ತಾಯಪೂರ್ವಕವೆಂಬಂತೆ ಭಾವಿಸಿ, ನೂರೊಂದನೇ ಸಲ ಕೇಳುತ್ತಿರುವ ಜೋಕಿಗೇ ನಕ್ಕುನಲಿದಾಡುವುದು, ಬಹುತೇಕ ಇವೇ ಕನ್ನಡದಲ್ಲಿಂದು ಓದುಗ/ಕೇಳುಗ/ನೋಡುಗನಿಗಿರುವ ಆಯ್ಕೆಗಳಾಗಿವೆ!
ಜೋಕು, ಶ್ಲೇಷೆ, ಅಂಗಚೇಷ್ಟೆ ಇವುಗಳನ್ನು ಮೀರಿದ ಹಾಸ್ಯವಿದೆ, ಹಾಸ್ಯವು ಕೇವಲ ತೆಳು ಪದರವಲ್ಲ, ಆಳ-ವಿಸ್ತಾರ ಹೊಂದಿರುವ ರಸಘಟ್ಟಿ, ವಿಡಂಬನೆಯೆಂಬುದು ಹಾಸ್ಯದ ಒಂದು ತೇಜೋಮಯ ಮುಖ ಎಂಬ ಸತ್ಯದ ಅರಿವಿನಿಂದಲೇ ಇಂದಿನ ಯುವ ಪೀಳಿಗೆಯನ್ನು ವಂಚಿಸುವ ಕೆಲಸವನ್ನು ನಮ್ಮ ಬಹಳಷ್ಟು ಮಾಧ್ಯಮಸಂಸ್ಥೆಗಳಿಂದು ಅರಿತೋ ಅರಿಯದೆಯೋ ಮಾಡುತ್ತಿವೆ. ಅಂಥ ಮಾಧ್ಯಮಸಂಸ್ಥೆಗಳು ಹಾಸ್ಯದ ವಿಷಯದಲ್ಲಿ ತೀರಾ ಲಘು ಧೋರಣೆ ಹೊಂದಿರುವುದಂತೂ ಸತ್ಯ. ಯುಕ್ತ ಧೋರಣೆಯ ಮಾತಿರಲಿ, ಕೆಲವು ಪತ್ರಿಕೆಗಳಿಗಂತೂ ಹಾಸ್ಯ ಸಾಹಿತ್ಯವೇ ಅಸ್ಪೃಶ್ಯ! ಕನ್ನಡದ ದೃಶ್ಯಮಾಧ್ಯಮದ ಹಾಸ್ಯಾಸ್ಪದ ಹಾಸ್ಯ ಕಾರ್ಯಕ್ರಮಗಳ ಬಗೆಗಂತೂ ಚರ್ಚಿಸದಿರುವುದೇ ಒಳ್ಳೆಯದು. ಏಕೆಂದರೆ, ಅವು ನೋಡುಗರನ್ನು ಎಷ್ಟು ಬ್ರೈನ್-ವಾಶ್ ಮಾಡಿಟ್ಟುಬಿಟ್ಟಿವೆಯೆಂದರೆ, ಅವುಗಳ ಬಗೆಗಿನ ಸಾರ್ವಜನಿಕ ಚರ್ಚೆಯು ದಿಕ್ಕು ತಪ್ಪುವ ಸಾಧ್ಯತೆಯೇ ಹೆಚ್ಚು!
ಹಾಸ್ಯಲೇಖಕನಾಗಿ ನಾಲ್ಕು ದಶಕಗಳಿಂದ ಸಾಹಿತ್ಯಕೃಷಿ ಮಾಡುತ್ತಿರುವ ನನಗೆ, ಹಾಸ್ಯದ ಬಗ್ಗೆ ಇಂದು ಬಹುತೇಕರು ಹೊಂದಿರುವ ಪರಿಕಲ್ಪನೆಯನ್ನು ಗಮನಿಸಿದಾಗ ತೀವ್ರ ನಿರಾಶೆಯಾಗುತ್ತದೆ. ಜೊತೆಗೆ, ಇಂದಿನ ಧಾವಂತದ ಜೀವನ, ಅನ್ಯಾಸಕ್ತಿ, ತತ್ಫಲವಾದದಿಢೀರ್ ಹಾಗೂ ಷಾರ್ಟ್ಹಾಸ್ಯದ ಒಲವುಇವುಗಳಿಂದಾಗಿ ಬಹುತೇಕರಲ್ಲಿ ಹಾಸ್ಯಸಾಹಿತ್ಯದ ಆಳಕ್ಕಿಳಿಯುವ, ಇಳಿದು ಅರಿತು ಅನುಭವಿಸಿ ಆನಂದಿಸುವ ಪ್ರಯತ್ನ ಮತ್ತು ಪ್ರವೃತ್ತಿಗಳೇ ಇಲ್ಲವಾಗಿರುವುದು ನನಗೆ ಬೇಸರ ಉಂಟುಮಾಡುತ್ತದೆ. ಸಲದಮೂರ್ಖರ ದಿನ ಆಸುಪಾಸಿನಲ್ಲಿ ಕೆಲ ಮಾಧ್ಯಮಸಂಸ್ಥೆಗಳ ಕೊಡುಗೆ ಗಮನಿಸಿ ನನಗೆ ಅತೀವ ಬೇಸರವಾಗಿದೆ.
ಹೀಗಿರುವಾಗ ನಾನೂ ಇದೇ ಪ್ರವಾಹದಲ್ಲಿ ಕೊಚ್ಚಿಹೋಗಬಾರದೆಂಬ ನನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ನಾನು ಬ್ಲಾಗ್ ಓದುಗರಾದ ತಮ್ಮಲ್ಲಿ ಮಾರ್ಚ್೨೬ರಂದುಅರಿಕೆಯೊಂದರ ಮೂಲಕ ಸೂಚ್ಯವಾಗಿ ನನ್ನ ಮನದ ನೋವನ್ನು ಅರುಹಿ, ಹಾಸ್ಯವಿಡಂಬನೆಗೆಂದೇ ಪ್ರಾರಂಭಿಸಿದ್ದ ಬ್ಲಾಗ್ ಬರವಣಿಗೆಯನ್ನು ಸ್ಥಗಿತಗೊಳಿಸಿದೆ. ಆದರೆ, ಬ್ಲಾಗ್ನಲ್ಲಿ ಅದುವರೆಗಿನ ನನ್ನ ಪ್ರತಿದಿನದ ಬರವಣಿಗೆಯನ್ನೂ ಆಯಾ ದಿನವೇ ತಪ್ಪದೇ ಓದಿ ಮುಗಿಸಿದ್ದ ಅನೇಕರು ಆ ನಂತರವೂ ಇಂದಿನವರೆಗೂ ಪ್ರತಿದಿನ ಬ್ಲಾಗ್ಗೆ ಭೇಟಿ ನೀಡುತ್ತಿದ್ದಾರೆ!
ಅವರೆಲ್ಲರ ಕ್ಷಮೆ ಕೋರುತ್ತ, ಮನ್ನಿಸಿರೆಂದು ಇತರ ಓದುಗರನ್ನೂ ಕೇಳಿಕೊಳ್ಳುತ್ತ ಗುಳಿಗೆಯಂಗಡಿಯನ್ನು ಪರ್ಮನೆಂಟಾಗಿ ಮುಚ್ಚುತ್ತಿದ್ದೇನೆ. ಕೊನೆಯ ಕೊಡುಗೆಯಾಗಿ ಜನಶೇವಕರ ಕಥೆಯೊಂದನ್ನು ಸೆಪರೇಟಾಗಿ ಕೆಳಗೆ ನೀಡಿದ್ದೇನೆ. ತೀರಾ ಲಘು ಬರಹ ಅದು.
ನಮಸ್ಕಾರ.

ಗುರುವಾರ, ಮಾರ್ಚ್ 26, 2009

ಅರಿಕೆ

ಆತ್ಮೀಯ ಮಿತ್ರರೆಲ್ಲರಿಗೂ ಯುಗಾದಿಯ ಸಂದರ್ಭದಲ್ಲಿ ಹಾರ್ದಿಕ ಶುಭಾಶಯ.

ನನ್ನನ್ನಿಂದು
ಪತ್ರಿಕೆಯೊಂದು
ಹಾಸ್ಯ,
ವಿಡಂಬನೆ
ಮತ್ತು
ಶ್ಲೇಷೆ
ಕೃಷಿಯ ಬಗ್ಗೆ
ಮರುಚಿಂತನಕ್ಕೆ
ಹಚ್ಚಿದೆ.
ಆದ್ದರಿಂದ
ನಾನಿಂದು
ಗುಳಿಗೆಯಂಗಡಿಯನ್ನು
ಮುಚ್ಚಿದೆ.

ನಿಮ್ಮ ಅಭಿಮಾನದಿಂದ
ನನ್ನ ಸಂತೋಷ
ಹೆಚ್ಚಿದೆ.
ಈ ಕೆಳಗಿನ
ನನ್ನ ಕವಿತೆ
ನನ್ನ ಮನವನ್ನು
ನಿಮ್ಮೆದುರು
ಬಿಚ್ಚಿದೆ.

ಪೊಡಮಡುವೆನೀ ಜಗಕೆ
-------------------
ಪೊಡಮಡುವೆನೀ ಜಗಕೆ ಬೆಡಗು ಬೀರುವ ಯುಗಕೆ
ಸಡಗರದ ಸೆಲೆಯಾದ ಜೀವಕುಲಕೆ
ಒಡವೆಯಂದದಿ ಮೆರೆವ ಪರಮ ಪುಣ್ಯೋದಯಕೆ
ನಡುಬಾಗಿ ನಮಿಪೆ ಪ್ರಭು, ನಿನ್ನಭಯಕೆ

ಬಂದೆನೆಂಬುದೆ ಇಲ್ಲಿ ಒಂದು ಸಾಕ್ಷಾತ್ಕಾರ
ಮುಂದೆ ಕಾಣುವ ನೋಟ ಬಲು ಸುಂದರ
ಇಂದು ನಾಳೆಗಳೆಂಬ ಚಂದ ಮುತ್ತಿನಹಾರ
ತಂದು ತೊಡಿಸಿದ ದೊರೆಯೆ, ನಾ ಋಣಿ ಚಿರ

ಭವದ ಸಾಗರವೆನ್ನುವರು ಈಸಲಂಜುವರು
ಅವತೀರ್ಣ ಸ್ಥಿತಿಗಾಗಿ ತವಕಿಸುವರು
ಭುವಿಯ ಭವ್ಯತೆಯಂದ ಏನು ಬಲ್ಲರು ಅವರು
ಸವಿಯಲೆಂದೇ ಬಂದೆ ನಾನಾದರೂ

ಪ್ರತಿ ಘಳಿಗೆಯೂ ಇಲ್ಲಿ ನನಗೆ ಅಮೃತಘಳಿಗೆ
ಪ್ರತಿ ವಸಂತವು ಪ್ರಭುವೆ ನಿನ್ನ ಒಸಗೆ
ಪ್ರತಿ ವಸ್ತುವೂ ಇಲ್ಲಿ ಇಹುದು ನನಗಾಗೇ
ಅತಿ ಭಾಗ್ಯವಂತ ನಾನ್ ಅಖಿಲ ಇಳೆಗೇ

ಎಲ್ಲಿ ನೋಡಿದರಲ್ಲಿ ನಿನ್ನ ಚೆಲುವೇ ಚೆಲುವು
ಬಲ್ಲಿದನೆ, ಈ ರಚನೆ ಅಸಮಾನವು
ಇಲ್ಲಿಯಲ್ಲದೆ ನನಗೆ ಇನ್ನಾವ ಸ್ವರ್ಗವೂ
ಇಲ್ಲವೈ, ಈ ಜಗವೆ ನನ್ನ ತಾವು

ಇಡು ಇಲ್ಲಿ ನನ್ನನು ಅದೆಷ್ಟು ದಿನವಾದರೂ
ಬಿಡು ಎನ್ನನೆನ್ನ ಪಾಡಿಗೆ, ಅಲ್ಲಿರು
ಕಡೆದಿನದವರೆಗೆ ಅನುಭವಿಸಿಯೇ ಈ ಊರು
ಬಿಡುವೆ ನಾ, ಸೇರುವೆನು ನಿನ್ನ ಊರು