ಚುನಾವಣೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚುನಾವಣೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಮೇ 15, 2009

ಹೀಗೇಕಾಯಿತು?! (ಬೇತಾಳ ಕಥೆ)

ಛಲ ಬಿಡದ ತ್ರಿವಿಕ್ರಮನು ’ಚಂದಮಾಮ’ ಸಂಪಾದಕರ ಆಣತಿಯಂತೆ ಮತ್ತೆ ಮರದ ಬಳಿಬಂದು ಮರದಲ್ಲಿದ್ದ ಶವವನ್ನು ಹೆಗಲಿಗೇರಿಸಿಕೊಂಡು ಮುನ್ನಡೆದನು. ಶವದಲ್ಲಿದ್ದ ಬೇತಾಳವು, ’ಬೆನ್ನು ಬಿಡದ ಬೇತಾಳ’ ಎಂಬ ಗಾದೆಯಂತೆ ಯಥಾಪ್ರಕಾರ ತ್ರಿವಿಕ್ರಮನೊಡನೆ ಮಾತಿಗೆ ಮೊದಲಿಟ್ಟಿತು.

’ಎಲೈ ತ್ರಿವಿಕ್ರಮನೇ, ನಿನ್ನನ್ನು ನೋಡಿ ನನಗೆ ಮರುಕವುಂಟಾಗುತ್ತಿದೆ. ಈ ಪ್ರಜಾಪ್ರಭುತ್ವದ ಯುಗದಲ್ಲೂ ನೀನು ನಿನ್ನನ್ನು ಇನ್ನೂ ರಾಜನೆಂದೇ ಭಾವಿಸಿಕೊಂಡಿರುವೆ. ಆದರೆ ಅದೇ ವೇಳೆ, ’ಚಂದಮಾಮ’ ಸಂಪಾದಕರ ಆಣತಿಯನ್ನು ಅಕ್ಷರಶಃ ಶಿರಸಾವಹಿಸಿ ಪಾಲಿಸುತ್ತಿರುವೆ! ಹಿಂದೆ ಗದಗದ ಪಿ.ಸಿ.ಶಾಬಾದಿಮಠ ಎಂಬ ಪುಸ್ತಕ ಪ್ರಕಾಶಕರ ಅಪ್ಪಣೆಯನ್ನೂ ಇದೇ ರೀತಿ ಪಾಲಿಸುತ್ತಿದ್ದೆ. ಇರಲಿ. ನಿನ್ನ ಕರ್ಮ. ನಾನೇನೂ ಮಾಡುವಂತಿಲ್ಲ. ಶತಮಾನಗಳಿಂದ ಈ ರೀತಿ ಶವಧಾರಿಯಾಗಿ ನಡೆಯುತ್ತ ಸುಸ್ತುಹೊಡೆಯುತ್ತಿರುವ ನಿನ್ನ ಆಯಾಸ ಪರಿಹಾರಕ್ಕಾಗಿ ಸತ್ಯಕಥೆಯೊಂದನ್ನು ಹೇಳುತ್ತೇನೆ, ಕೇಳು’, ಎಂದು ಬೇತಾಳವು ಕಥೆಯನ್ನು ಹೇಳತೊಡಗಿತು.

’ಭರತಖಂಡದ ಲೋಕಸಭಾ ಚುನಾವಣೆಯ ಅಂಗವಾಗಿ ಕರ್ನಾಟಕದಲ್ಲೂ ಚುನಾವಣೆ ನಡೆದುದು ನಿನಗೆ ಗೊತ್ತಷ್ಟೆ. ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಪಿಳ್ಳಾರಿ ಲೋಕಸಭಾ ಕ್ಷೇತ್ರವು ವಿಶಿಷ್ಟವಾದುದು. ಕರ್ನಾಟಕಕ್ಕೆ ಸೇರಿದ್ದರೂ ಇಲ್ಲಿ ತೆಲುಗು ಭಾಷೆಯು ವಿಜೃಂಭಿಸುತ್ತಿದೆ. ಕುಬೇರರ ಆಡುಂಬೊಲವಾಗಿದ್ದರೂ ಇಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಲಕ್ಷಾಂತರ ಪ್ರಜೆಗಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಮೂವರು ಮಂತ್ರಿಗಳನ್ನು ನೀಡಿದ್ದೂ ಈ ಕ್ಷೇತ್ರವು ಸರಿಯಾದ ರಸ್ತೆಗಳಿಲ್ಲದೆ ಸದಾ ದೂಳಿನಲ್ಲಿ ಮುಳುಗಿರುತ್ತದೆ. ಆ ಕುಬೇರ ಮಂತ್ರಿಗಳು ಮಾತ್ರ ಇಡೀ ರಾಜ್ಯವನ್ನೇ ತಮ್ಮ ಕರಕಮಲದಲ್ಲಿಟ್ಟುಕೊಂಡು ಆಡಿಸುತ್ತಿದ್ದಾರೆ.

ಇಂಥ ಪಿಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಆ ಕುಬೇರ ಮಂತ್ರಿಯೊಬ್ಬರ ಸಮೀಪಬಂಧುವೇ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರ ಜಯವು ನಿಶ್ಚಿತವೆಂದು ಇಡೀ ಕ್ಷೇತ್ರ ಮಾತ್ರವಲ್ಲ, ಇಡೀ ರಾಜ್ಯ, ಇಡೀ ಭರತಖಂಡವೇ ಮಾತಾಡಿಕೊಳ್ಳುತ್ತಿತ್ತು. ಅಂತಹುದರಲ್ಲಿ ಆ ಅಭ್ಯರ್ಥಿಯು ಸೋತುಹೋದರು! ಈಗತಾನೇ ಬಂದ ಫಲಿತಾಂಶವನ್ನು ನೀನೂ ಗಮನಿಸಿರಬಹುದು. ಆ ಅಭ್ಯರ್ಥಿ ಮಾತ್ರವಲ್ಲ, ಅವರ ಎದುರಾಳಿ ಅಭ್ಯರ್ಥಿಯೂ ಸೋತುಹೋಗಿ, ಯಾರೋ ಒಬ್ಬರು ಹೆಸರೇ ಕೇಳಿಲ್ಲದ ಪಕ್ಷೇತರ ವ್ಯಕ್ತಿ ಲೋಕಸಭೆಗೆ ಆಯ್ಕೆಯಾಗಿಬಿಟ್ಟಿದ್ದಾರೆ!

ಹೀಗೇಕಾಯಿತು? ಉತ್ತರಿಸು. ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆಯು ಒಡೆದು ಸಹಸ್ರ ಚೂರಾಗುವುದು ಎಚ್ಚರಿಕೆ!’ ಎಂದು ಬೇತಾಳವು ಕಥೆಯನ್ನು ಮುಗಿಸಿತು.

ಆಗ ತ್ರಿವಿಕ್ರಮನು ಬೇತಾಳವನ್ನು ನೋಡಿ ನಸುನಗುತ್ತ ಇಂತೆಂದನು.
’ಎಲೈ ಬೇತಾಳವೇ, ಈ ಸಲ ನೀನು ಈಸೀ ಕ್ವೆಶ್ಚನ್ ಹಾಕಿರುವೆ. ಚಾಲ (ಬಹಳ) ಈಸೀ. ಪಿಳ್ಳಾರಿಯಿಂದ ಗೆದ್ದ ಆ ಅಪರಿಚಿತ ಪಕ್ಷೇತರ ವ್ಯಕ್ತಿಯ ಚುನಾವಣಾ ಚಿಹ್ನೆ ರೈಲ್ವೆ ಇಂಜಿನ್. ಪಕ್ಕದ ಆಂಧ್ರಪ್ರದೇಶದ ಜನಪ್ರಿಯ ಚಿತ್ರತಾರೆ ಪರಂಜೀವಿಯ ’ಮಜಾರಾಜ್ಯಂ’ ಪಕ್ಷದ ಚಿಹ್ನೆಯೂ ರೈಲ್ವೆ ಇಂಜಿನ್ನೇ. ಪಿಳ್ಳಾರಿ ಕ್ಷೇತ್ರದ ನಿರಕ್ಷರಿ ಮತದಾರರಲ್ಲಿ ಬಹುತೇಕರು ಮುಗ್ಧರು. ಅವರೆಲ್ಲ ತೆಲುಗು ಭಾಷಿಕರಾಗಿದ್ದು ಪಿರಂಜೀವಿ ಸಿನಿಮಾಗಳೆಂದರೆ ಅವರಿಗೆ ಪ್ರಾಣ. ಅವರೆಲ್ಲರೂ ಪಿರಂಜೀವಿ ಫ್ಯಾನುಗಳು ಮತ್ತು ಟಿವಿಯಲ್ಲಿ ಸದಾ ತೆಲುಗು ಚಾನೆಲ್‌ಗಳನ್ನೇ ನೋಡುತ್ತಿರುವವರು. ತಾವು ರೈಲ್ವೆ ಇಂಜಿನ್‌ಗೆ ಮತ ನೀಡಿದರೆ ಅದು ತಮ್ಮ ಹೀರೊ ಪಿರಂಜೀವಿಗೆ ಸೇರುತ್ತದೆಂದು ಭಾವಿಸಿ ಅವರೆಲ್ಲ ರೈಲ್ವೆ ಇಂಜಿನ್‌ಗೆ ಮತ ನೀಡಿಬಿಟ್ಟಿದ್ದಾರೆ! ಕರ್ನಾಟಕದಲ್ಲಿ ಪಿರಂಜೀವಿಯ ಪಕ್ಷವು ಸ್ಪರ್ಧಿಸಿಲ್ಲವೆಂಬುದು ಅವರಿಗೆ ಗೊತ್ತಿಲ್ಲ ಪಾಪ! ಎಲ್ಲ ಗೊತ್ತಿರುವ ವಿದ್ಯಾವಂತರು ವೋಟ್ ಮಾಡಿಲ್ಲ. ಪರಿಣಾಮ, ರೈಲ್ವೆ ಇಂಜಿನ್ ಗುರುತು ಹೊಂದಿದ್ದ ಪಕ್ಷೇತರನೊಬ್ಬ ಪಿಳ್ಳಾರಿಯಲ್ಲಿ ಗೆದ್ದುಬಿಟ್ಟಿದ್ದಾನೆ!’

ತ್ರಿವಿಕ್ರಮನು ಹೀಗೆ ಸರಿ ಉತ್ತರ ನೀಡಿದ್ದೇ ತಡ, ಅವನ ಮೌನ ಮುರಿದ ಬೇತಾಳವು ಶವಸಹಿತ ಮಾಯವಾಗಿ ಮರಳಿ ಮರ ಸೇರಿಕೊಂಡುಬಿಟ್ಟಿತು! ತ್ರಿವಿಕ್ರಮನು ಮತ್ತೆ ಪುನಃ ಎಗೈನ್....

ಮಂಗಳವಾರ, ಮೇ 12, 2009

ನೀವು ಕೇಳದಿರಿ - 10

* ಮತ ಎಣಿಕೆಯ ದಿನವಾದ ಇದೇ ದಿನಾಂಕ 16 ಹಿಂದು ತಿಥಿ ಪ್ರಕಾರ ’ಶ್ರೀರಾಮ ಪಟ್ಟಾಭಿಷೇಕ’ದ ದಿನ.

- ಅದಕ್ಕೇ ಅಡ್ವಾಣಿ, ’history repeats’, ಅಂತ ಕನಸು ಕಾಣುತ್ತಿದ್ದಾರೆ!

+++

* ವರುಣ್ ಗಾಂಧಿ ಪ್ರಧಾನಿಯಾದರೆ ದೇಶದಲ್ಲಿ ಕುಟುಂಬಯೋಜನೆ ಕಡ್ಡಾಯವಂತೆ?

- ಹೌದು. ರಾಹುಲ್ ಗಾಂಧಿ ಪ್ರಧಾನಿಯಾದರೆ (ಸ್ವ)ಕುಟುಂಬ ಕಲ್ಯಾಣ ಕಡ್ಡಾಯ.
ಮನಮೋಹನ್ ಸಿಂಗ್ ಪ್ರಧಾನಿಯಾದರೆ ಅವರಿಗೆ ಈ ದೇಶಕ್ಕಿಂತ ಸೋನಿಯಾ ಮೇಡಂ ಆದೇಶ ಕಡ್ಡಾಯ.
ಅಡ್ವಾಣಿ ಪ್ರಧಾನಿಯಾದರೆ ದೇಶಾದ್ಯಂತ ಪ್ರತಿನಿತ್ಯ ರಾಮ(ಮಂದಿರ)ಭಜನೆ ಕಡ್ಡಾಯ.
ಮೋದಿ ಪ್ರಧಾನಿಯಾದರೆ ದೇಶದ ಎಲ್ಲೆಡೆ (ಮಾತಿನ) ಮೋಡಿ ಪ್ರದರ್ಶನ ಕಡ್ಡಾಯ.
ಲಾಲೂ ಪ್ರಧಾನಿಯಾದರೆ ಭ್ರಷ್ಟಾಚಾರ ಕಡ್ಡಾಯ.
ಪಾಸ್ವಾನ್ ಪ್ರಧಾನಿಯಾದರೆ ಬಿಹಾರಿಗಳಿಗೆ ರೈಲ್ವೆ ಫ್ರೀ ಪಾಸ್ ಕಡ್ಡಾಯ.
ಮಾಯಾವತಿ ಪ್ರಧಾನಿಯಾದರೆ ದೇಶಾದ್ಯಂತ ತನ್ನ ಬರ್ತ್‌ಡೇ (with gifts) ಕಡ್ಡಾಯ. (ಕಜ್ಜಾಯ.)
ಮುಲಾಯಂ ಪ್ರಧಾನಿಯಾದರೆ ಗೂಂಡಾಗಿರಿ ಕಡ್ಡಾಯ.
ಪವಾರ್ ಪ್ರಧಾನಿಯಾದರೆ ಮಗಳು ಸುಪ್ರಿಯಾಗೆ ಮಂತ್ರಿಗಿರಿ ಕಡ್ಡಾಯ.
ಕರಟ್ ಪ್ರಧಾನಿಯಾದರೆ ಜನರ ಕೈಗೆ ಕರಟ ಕಡ್ಡಾಯ.
ದೇವೇಗೌಡರು ಪ್ರಧಾನಿಯಾದರೆ ದೇಶಾದ್ಯಂತ ರಾಗಿಮುದ್ದೆ ಊಟ ಕಡ್ಡಾಯ.

+++

* ’ಪ್ರಜಾರಾಜ್ಯಂ’ ಪಕ್ಷ ಹೀನಾಯವಾಗಿ ಸೋತರೆ?

- ಆಗ ಪಕ್ಷದ ಹೆಸರನ್ನು ’ವಜಾರಾಜ್ಯಂ’ ಎಂದು ಬದಲಾಯಿಸಲಾಗುವುದು.

+++

* ಕ್ರಿಕೆಟ್‌ನಲ್ಲಿ ಜೀವಮಾನದ ನಿಷೇಧ; ಆದರೆ ಲೋಕಸಭೆಗೆ ಸ್ಪರ್ಧಿಸಬಹುದೇ?!

- ಲೋಕಸಭೆಯು ಈ ದೇಶಕ್ಕೆ ಕ್ರಿಕೆಟ್‌ನಷ್ಟು ಮುಖ್ಯ ಅಲ್ಲವಲ್ಲಾ, ಆದ್ದರಿಂದ ಸ್ಪರ್ಧಿಸಬಹುದು.

+++

* ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯ ನಿಜವಾಗುತ್ತೆಯೆ?

- ಒಂದು ಪ್ರಶ್ನೆಗೆ ಸ್ವಾಮೀಜಿ ರೂ.3000 ತಗೋತಾರೆ. ನನಗೆ ರೂ.6000 ಕೊಡಿ, ಉತ್ತರ ಹೇಳ್ತೀನಿ.

+++

* ’ಅಡ್ವಾಣಿಗೆ ಪ್ರಧಾನಿಯಾಗುವ ಯೋಗ ಇಲ್ಲ’, ಅಂತಾರೆ ಕೋಡಿಮಠದ ಸ್ವಾಮೀಜಿ!

- ಆ ಸ್ವಾಮೀಜಿಯನ್ನು ಭೆಟ್ಟಿಯಾಗಿ ಆಶೀರ್ವಾದ ಪಡೆದರೆ ಯೋಗ ಒದಗಿಬರಬಹುದು.

+++

* ಕೋಡಿಮಠದ ಭವಿಷ್ಯವಾಣಿ ಪ್ರಕಾರ ನೂತನ ಕೇಂದ್ರ ಸರ್ಕಾರದ ಆಡಳಿತ ಕೇವಲ ಎರಡೇ ವರ್ಷ!

- ಅನಂತರ ಕೋಡಿಮಠದ ಆಡಳಿತ.

+++

* ಇಲ್ಲೊಬ್ಬ, ’ಹುಚ್ಚುಖೋಡಿಮಠ’, ಅಂತಾನೆ!

- ಅಯ್ಯೋ, ಅವನಿಗೆ ಸುಮ್ಮನಿರೋಕೆ ಹೇಳಿ. ಇಲ್ಲದಿದ್ದರೆ ಸ್ವಾಮೀಜಿ ಅವನ ಭವಿಷ್ಯ ಹೇಳಿಬಿಡ್ತಾರೆ!

+++

* ’ಸಂಸ್ಕೃತದಿಂದ ಮಾತ್ರ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ’, ಅಂದಿದ್ದಾರೆ ಪೇಜಾವರ ಶ್ರೀಗಳು.

- ಮಠದ ಸಂಸ್ಕೃತವೋ, ಪೋಲೀಸ್ ಇಲಾಖೆಯ ಸಂಸ್ಕೃತವೋ ಗೊತ್ತಾಗಲಿಲ್ಲ.

+++

* ’ಉದ್ಯಾನ ನಗರಿ’ ಬೆಂಗಳೂರಿನ ಮರಗಳೆಲ್ಲ ಹೋದರೆ ಗತಿ?

- ಚಿಂತೆ ಬೇಡ, ಆಗ ಬೆಂಗಳೂರು ಆಗುತ್ತೆ ’ಅಮರಾವತಿ’!

+++

* ವನವಾಸಕ್ಕೆ ಹೋಗ್ತೀರಂತೆ?

- ಪತ್ರಿಕಾಗೋಷ್ಠೀಲಿ ನಾನು ಈ ಮಾತನ್ನು off the record ಹೇಳಿದ್ದು. ಆದ್ದರಿಂದ ನಾನು ಈ ಮಾತನ್ನು ಹೇಳಿಯೇ ಇಲ್ಲ.

+++

* ’ನೀವು ಕೇಳದಿರಿ’ಗೆ ಹತ್ತು.

- ಎಲೆ ಮುದುರೆತ್ತು.

--0--

ಸೋಮವಾರ, ಮೇ 11, 2009

ನೀವು ಕೇಳದಿರಿ - 9

* ಬಿಜೆಪಿ ನೇತೃತ್ವದ ಎನ್‌ಡಿಎ ದಿಢೀರನೆ ಒಗ್ಗಟ್ಟು ಪ್ರದರ್ಶಿಸ್ತಾ ಇದೆ! ಮುಂದೆ?

- ರಾಷ್ಟ್ರಮಟ್ಟದಲ್ಲಿ ’ಆಪರೇಷನ್ ಕಮಲ್’!

+++

* ’ಆಪರೇಷನ್ ಕಮಲ’ದಿಂದ ಜನತೆಗೆ ಏನು ಲಾಭ?

- (ಕಮಲದ) ದಂಟು!
ನಾಗರಿಕರಿಗೆ ಬೇಕಾಗಿರೋದು ಸರ್ಕಾರಿ ಅಧಿಕಾರಿಗಳ ಕೋ-ಆಪರೇಷನ್.
ಬಡವರಿಗೆ ಬೇಕಾಗಿರೋದು ರೇಷನ್.

+++

* ಬಿಜೆಪಿ ಪರವಾಗಿ ಮಾತನಾಡುವ ಮಠಾಧೀಶರು ಭಕ್ತರಿಗೆ ಆಶೀರ್ವಾದ ಮಾಡುವಾಗ ’ಹಸ್ತ’ ತೋರಿಸುತ್ತಾರಲ್ಲಾ?!

- ಮತ್ತೇನು, ಕೈಯಲ್ಲಿ ಕಮಲ ಹಿಡಕೊಂಡು ಆಶೀರ್ವಾದ ಮಾಡಬೇಕೇ?

+++

* ಪಕ್ಷದಿಂದ ವಜಾ ಆದರೆ ಅಮರ್ ಸಿಂಗ್ ಆಗ ಏನು ಮಾಡುತ್ತಾರೆ?

- ದಂಡಿಯಾಗಿ ದುಡ್ಡೂ ಇದೆ, ಕೆಲ್ಸಾನೂ ಇಲ್ಲ, ಅಮಿತಾಭ್ ಬಚ್ಚನ್‌ನ ಫುಲ್ ಫ್ಯಾಮಿಲಿ ಹಾಕ್ಕೊಂಡು ಸಿನಿಮಾ ತೆಗೀತಾರೆ! ಜಯಪ್ರದಾಗೆ ವಿಶೇಷ ಪಾತ್ರ.

+++

* ಶ್ರೀಲಂಕಾದಲ್ಲಿ ತಮಿಳು ನಿರಾಶ್ರಿತರಿಗೆ ಸುಲಿಗೆಕೋರರ ಹಾವಳಿಯಂತೆ?

- ಬರಗಾಲದಲ್ಲಿ ಅಧಿಕಮಾಸ, ಪಾಪ!

+++

* ಐಪಿಎಲ್‌ನಲ್ಲಿ ’Knight riders’ಗೆ ಎಂಥಾ ದುರ್ಗತಿ ಬಂತಲ್ಲಾ ಗುರುವೇ!

- Nightನಲ್ಲಿ ಯಾವುದಾದರೂ ವೆಹಿಕಲ್ ride ಮಾಡ್ಕೊಂಡು ಫುಲ್ ಟೀಮು ಎಲ್ಲಿಗಾದರೂ ಓಡಿಹೋಗೋದು ವಾಸಿ, ಅಲ್ವೆ ಶಿಷ್ಯಾ?

+++

* ಛಾಯಾಗ್ರಾಹಕರನ್ನು ಓಡಿಸೋಕಂತ ರೂಪದರ್ಶಿ ಲಿಂಡ್ಸೆ ಲೋಹನ್ ತನ್ನ ಮನೆಮೇಲಿನಿಂದ ಅವರತ್ತ ಮೊಟ್ಟೆ, ಪಿಜ್ಜಾ ಎಸೆದಳಂತೆ!

- ಅವನ್ನು ತಾನೇ ತಿಂದು ಕೆಳಗಿನಿಂದ ಒಂದು ವಾಯುಬಾಣ ಬಿಟ್ಟಿದ್ದರೆ ಛಾಯಾಗ್ರಾಹಕರೆಲ್ಲ ಒಂದೇ ಉಸಿರಿಗೆ ಮೂಗು ಮುಚ್ಚಿಕೊಂಡು ಪರಾರಿಯಾಗ್ತಿದ್ದರು!

+++

* ಇಡೀ ರಾತ್ರಿ ನಿದ್ದೆಮಾಡೋಕಾಗೋಲ್ಲ; ಮನೆ ಹೊರಗಡೆ ಬೀದಿನಾಯಿ ಗಟ್ಟಿಯಾಗಿ ಬೊಗಳ್ತಾ ಇರುತ್ತೆ!

- ಇಡೀ ರಾತ್ರಿ ನಿದ್ದೆಮಾಡ್ತೀಯಾ? ಎಂಥಾ ಅರಸಿಕ ನೀನು!

+++

* ಎಲ್ಲಾ ಬೋಗಸ್ ಪ್ರಶ್ನೆಗಳನ್ನೇ ಹಾಕ್ಕೊಳ್ತೀಯಲ್ಲಾ!

- ಸದ್ಯ! ಬೋಗಸ್ ಉತ್ತರ ಅನ್ನಲಿಲ್ಲವಲ್ಲಾ, ನಾನು ಬಚಾವು!

--೦--

ಭಾನುವಾರ, ಮೇ 10, 2009

ನೀವು ಕೇಳದಿರಿ - 8

* ಮೊಯ್ಲಿ ಪದಚ್ಯುತರಾದರು. ಚುನಾವಣೆಯಲ್ಲೂ ಸೋತರೆ ಆಗ?

- ’ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯ ಬರೆದು ಮುಗಿಸಿರುವ ಮಹಾಕವಿ ’ಮಹಾಭಾರತ ಮಹಮಹಾನ್ವೇಷಣಂ’ ಮಹಮಹಾಕಾವ್ಯ ಆರಂಭಿಸಬಹುದು!

+++

* ಮೊಯ್ಲಿ ತಮ್ಮದು ಪದಚ್ಯುತಿ ಅಲ್ಲ ಅಂತಾರೆ?!

- ಹಾಗಾದರೆ ಅದು ರಾಮಾಯಣ!

+++

* ಮೊಯ್ಲಿ ಸಾಹೇಬರದು ಅಂದು ಟೇಪ್ ಹಗರಣ, ಇಂದು?

- ಟ್ರ್ಯಾಪ್ ಹಗರಣ!

+++

* ಶ್ರುತಿ ಮೇಡಂ ತಿರುಪತಿಯಲ್ಲಿ ಮರುಮದುವೆಯಾಗ್ತಾರಂತೆ?

- ಚಕ್ರವರ್ತಿಗೆ ತಿರುಪತಿ ಲಡ್ಡು, ಮಹೇಂದರ್‌ಗೆ ತಿರುಪತಿ ನಾಮ ಎಂಬುದರ ಸಂಕೇತವಾಗಿ ತಿರುಪತಿಯಲ್ಲಿ ಮದುವೆ!

+++

* ಚಿರಂಜೀವಿ ಸ್ಪರ್ಧೆ ತಿರುಪತಿಯಲ್ಲಿ, ಶ್ರುತಿ ಮದುವೆ ತಿರುಪತಿಯಲ್ಲಿ!

- ಹೌದು, ಎರಡೂ ತಿರುಪತಿಯೇ!

+++

* ಶ್ರುತಿಯ ಭಾವಿ ಪತಿಯ ಹೆಸರು ಚಂದ್ರಚೂಡ ಚಕ್ರವರ್ತಿ ಅಂತನಾ?

- ಮಹೇಂದರ್ ಷಾರ್ಟಾಗಿ ’ಚಂಚ’ ಅಂತಾರೆ.
(ಶ್ರುತಿಗೆ ಚೂಡ!) (ಜಗೀಬಹುದು!)

+++

* ಚಂದ್ರಚೂಡ ಚಕ್ರವರ್ತೀನ ಷಾರ್ಟ್ ಆಗಿ ಸೀಸೀ ಅನ್ನಬಹುದಾ?

- ಶ್ರುತಿಗೆ ಸೀಸೀ, ಮಹೇಂದರ್‌ಗೆ ಕಹಿಕಹಿ!
(ನೋಡಿದವರಿಗೆ ’ಇಸ್ಸೀಸೀ!’)

+++

* ಐಪಿಎಲ್ ವಾಣಿಜ್ಯೀಕರಣವನ್ನು ಕೇಂದ್ರ ಕ್ರೀಡಾ ಸಚಿವ ಗಿಲ್ ಆಕ್ಷೇಪಿಸಿದ್ದಾರೆ?

- ಕ್ರಿಕೆಟ್ಟಾಟ ಇರಲಿ, ಕೆಟ್ಟಾಟ ಬೇಡ ಅಂದಿದ್ದಾರೆ.

+++

* ಎಸ್ಸೆಸ್ಸೆಲ್ಸಿಯಲ್ಲಿ ಉಡುಪಿ ಜಿಲ್ಲೆ ಟಾಪ್, ಪಿಯುಸಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಟಾಪ್!

- ಡಿಗ್ರಿಯಲ್ಲಿ ಅವೆರಡೂ ಟಾಪ್! ಬೇಸಿಗೇಲಿ ೪೦ರಿಂದ ೪೬ ಡಿಗ್ರಿವರೆಗೂ ಹೋಗುತ್ತೆ!

--೦--

ಶನಿವಾರ, ಮೇ 9, 2009

ನೀವು ಕೇಳದಿರಿ - 7

* ಭಾರತದಲ್ಲಿ ಹಂದಿಜ್ವರ ಇದೆಯೆ?

- ಚುನಾವಣೆ ಸೀಸನ್ನಾದ್ದರಿಂದ ಸೇಂದಿಜ್ವರ ಇದೆ.

+++

* ವರುಣ್ ವಿರುದ್ಧ ಮಾಯಾವತಿ ಹೂಡಿದ್ದ ಮೊಕದ್ದಮೆ ವಜಾ ಆಯ್ತಲ್ಲ ಗುರುವೇ!

- ಹೌದು. ವರುಣ್ ಮೇಲೆ ಮಾಯಾ-ಮಂತ್ರ ನಡೆಯಲಿಲ್ಲ. ಮಾಯಾಜಾಲದಿಂದ ವರುಣ್ ಹೊರಬಂದ. ಅವನಿಗೆ ಇನ್ನಾವ ಮಾಯಾಬಜಾರ್ ಕಾದಿದೆಯೋ ’ಮಾಯಾವಿ’ತಿಯೇ ಬಲ್ಲಳು!

+++

* ಹಿಂದೂ-ಮುಸ್ಲಿಮರು ಬಯಸಿದ ದಿನ ರಾಮಮಂದಿರ ನಿರ್ಮಾಣ ಮಾಡುತ್ತಾರಂತೆ ಅಡ್ವಾಣಿ?

- ’ಆದರೆ-ಹೋದರೆ, ಅತ್ತಿ ಮರದಲ್ಲಿ ಹತ್ತಿ ಬೆಳೆದರೆ, ಅಜ್ಜಾ, ನಿನಗೊಂದು ರೇಷ್ಮೆಪಂಚೆ’!

+++

* ನೆಹರೂ ಅವರು ಮಕ್ಕಳನ್ನು ಬಲು ಇಷ್ಟಪಡುತ್ತಿದ್ದರೇ?

- ಮಗಳನ್ನು ಹಾಗೂ ಮಗಳ ಮಕ್ಕಳನ್ನು ಬಲು ಇಷ್ಟಪಡುತ್ತಿದ್ದರು. ಆ ಇಷ್ಟದ ಫಲವನ್ನೇ ನಾವೀಗ ಉಣ್ಣುತ್ತಿರುವುದು!

+++

* ವಿಜಯ್ ಮೋರೆ ಮುಖಕ್ಕೆ ಮಸಿ ಬಳಿದ ಪ್ರಕರಣ ಮೂರೂವರೆ ವರ್ಷಗಳ ನಂತರ ಈಗ ವಿಚಾರಣೆಗೆ ಬಂದಿದೆಯಲ್ಲಾ ಗುರೂ!

- ಹೌದು.
ಮೋರೆ ಮೋರೆಗೆ ಮಸಿ
ಈಗ ತಟ್ಟಿದೆ ಬಿಸಿ
ಇನ್ನೂ ಕಾಯಿರಿ ಒಸಿ
ಆಗುತ್ತೆಲ್ಲಾ ಹುಸಿ

+++

* ಶ್ರುತಿ ಅಭಿಮಾನಿ ನಿಮ್ಮಮೇಲೆ ಕೇಸ್ ಹಾಕ್ತಾನಂತೆ?

- ಮಹೇಂದರ್ ಅಭಿಮಾನಿ ನನ್ನ ಪರವಾಗಿ ವಕೀಲನನ್ನಿಡ್ತಾನೆ.

+++

* ಷೋಗಳ ಟೈಮ್ ಬದಲಾದಕೂಡಲೇ ಸಿನಿಮಾ ಥಿಯೇಟರ್‌ಗೆ ಜನ ನುಗ್ತಾರೆಯೆ?

- ಇಲ್ಲ. ಪ್ರೊಡ್ಯೂಸರ್‌ಗೆ ಟೈಮ್ ಕೂಡಿಬರಬೇಕು!

+++

* ಆ ನೇಪಾಳಿ ಇದ್ದಾನಲ್ಲಾ, ಆತ ಚಂಡನೋ, ಪ್ರಚಂಡನೋ?

- ನಿರ್ಧರಿಸುವುದು ರಣರಂಗ.

+++

* ಅಂತೂ ಕಸಬ್ ವಿರುದ್ಧ ಮೊದಲ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆ ದಾಖಲಾಯಿತು.

- ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಕಸಬ್ ಕೃತ್ಯಕ್ಕೆ ಸಾಕ್ಷಿ ಏಕೆ?

--೦--

ಶುಕ್ರವಾರ, ಮೇ 8, 2009

ನೀವು ಕೇಳದಿರಿ - 6 (ತಾರಾಜಕೀಯ ಸ್ಪೆಷಲ್)

* ಶ್ರುತಿ ಅವರು ಚಕ್ರವರ್ತಿ ಎಂಬುವವರನ್ನು ಮದುವೆಯಾಗುತ್ತಾರಂತೆ?

- ದೇವತೆಗಳ ಚಕ್ರವರ್ತಿ ಮಹೇಂದ್ರನಿಗಿಂತ ಆಯಮ್ಮಗೆ ಈ ಚಕ್ರವರ್ತಿಯೇ ಮೇಲಾದನೇ?!

+++

* ಸಿನಿಮಾ ಮತ್ತು ನಿಜಜೀವನ ಎರಡೂ ಒಂದೇನಾ?

- ಒಂದಕ್ಕೊಂದು ವಿರುದ್ಧ.
ಸಿನಿಮಾದಲ್ಲಿ ಶ್ರುತಿ ಅಳುತ್ತಿದ್ದರು, ನಿಜಜೀವನದಲ್ಲಿ ಮಹೇಂದರ್ ಅಳುತ್ತಾರೆ.

+++

* ’ಶ್ರುತಿ’? ’ಶೃತಿ’?

- ಮಹೇಂದರ್‌ಗಿನ್ನು ಕೇವಲ ’ಸ್ಮೃತಿ’!

+++

* ’ಜೈ ಹೋ’ ಬಳಸಿತಲ್ಲಾ ಕಾಂಗ್ರೆಸ್, ಅದಕ್ಕೆ ಜಯವಾಗುತ್ತೆಯೆ?

- ಗೆದ್ದರೆ ’ಜೈ ಹೋಗಯಾ’, ಸೋತರೆ ’ಜೈ ಹೋ ಗಯಾ’!

+++

* ಈ ಸಲ ಲೋಕಸಭೆಗೆ ಸ್ಪರ್ಧಿಸಿರುವ ಎಲ್ಲ ತಾರಾಮಣಿಗಳೂ ಗೆದ್ದುಬಿಟ್ಟು ಮನಮೋಹನ್ ಸಿಂಗರೇ ಮತ್ತೆ ಪ್ರಧಾನಿಯಾದರೆ?

- ವಿ.ಪಿ.ಸಿಂಗ್‌ಗೆ ಮಂಡಲ್ ಆಯೋಗ, ಎಂಎಂ ಸಿಂಗ್‌ಗೆ ತಾರಾಮಂಡಲ ಯೋಗ!

+++

* ’ಚಕ್ ದೇ ಇಂಡಿಯಾ - 2’ ಚಿತ್ರದಲ್ಲಿ ಶಾರುಖ್ ಖಾನ್ ಕ್ರಿಕೆಟ್ ಕೋಚ್ ಅಂತೆ!?

- ’ಕೋಲ್ಕತ್ತಾ ನೈಟ್ ರೈಡರ್ಸ್’ ತಂಡದ ಆಟಗಾರರೇ ಚಿತ್ರದ ಪಾತ್ರಧಾರಿಗಳು ಅಂತ ಪ್ರೊಡ್ಯೂಸರ್ ಹೇಳಿದ್ದಕ್ಕೆ ಶಾರುಖ್ ಖಾನ್ ಸಾಹೇಬರು, ’ನಾನು ಕೋಚ್ ಪಾತ್ರ ಮಾಡೋಲ್ಲ, ಬೇರೆಯವರಿಂದ ಮಾಡಿಸ್ಕಳಿ’ ಅಂದುಬಿಟ್ಟರಂತೆ!

--೦--

ಡಿ ವಿ ಜಿ ದೃಷ್ಟಿಯಲ್ಲಿ ಮಹಾಚುನಾವಣೆ

ದಾರ್ಶನಿಕ ಕವಿ ಡಿ ವಿ ಜಿ ಅವರು ಮಹಾಚುನಾವಣೆಯ ಬಗ್ಗೆ ಕೆಲವು ಸೊಗಸಾದ ಪದ್ಯಗಳನ್ನು ಬರೆದಿದ್ದಾರೆಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಆ ಪದ್ಯಗಳನ್ನು ಓದಿದಾಗ ನಮಗೆ, ’ಡಿ ವಿ ಜಿ ಕಾಲಕ್ಕೂ ಇಂದಿಗೂ ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ವ್ಯತ್ಯಾಸವೇನಿಲ್ಲ’, ಎಂಬ ಸತ್ಯದ ಅರಿವು ಉಂಟಾಗುತ್ತದೆ. ೧೯೬೫ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಎಂಥ ನಿಂತ ನೀರೆಂಬುದು ನಮಗೆ ವೇದ್ಯವಾಗುತ್ತದೆ!

ಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. ದಿನೇದಿನೇ ಕೊಳಕು ಹೆಚ್ಚಾಗುತ್ತಿದೆ ಅಷ್ಟೆ.

ಅಂದು ಡಿ ವಿ ಜಿ ಬರೆದ ಪದ್ಯಗಳು ಇಂದಿಗೂ ಹೇಗೆ ಪ್ರಸ್ತುತವೆನಿಸುತ್ತವೆಂಬುದನ್ನು ಕೆಲ ಉದಾಹರಣೆಗಳ ಮೂಲಕ ನೋಡೋಣ.

ಮಹಾಚುನಾವಣೆಯನ್ನು ಡಿ ವಿ ಜಿ ಅವರು ’ವರಣ ಪ್ರಸ್ತ’ ಎಂದು ಕರೆಯುತ್ತಾರೆ. ’(ಜನಪ್ರತಿನಿಧಿಗಳನ್ನು) ಆರಿಸುವ ಶುಭ ಸಮಾರಂಭ’ ಎಂದು ಇದರರ್ಥ. ’ವರಣ ಪ್ರಸ್ತ’ ಎಂಬ ಶೀರ್ಷಿಕೆಯ ಪದ್ಯದಲ್ಲಿ ಡಿ ವಿ ಜಿ ಹೇಳುತ್ತಾರೆ:

ಏನು ಜಾತ್ರೆಯದು? ಏನಾ ಪ್ರಸ್ತವೊ!
ವೋಟಿನ ಹಾರಾಟಾ,
ಮಗುವೇ, ವೋಟಿನ ಹಾರಾಟಾ.
ನಾನು ತಾನೆನುತ್ತಿರುವಾ ಪ್ರತಿನಿಧಿ
ಪೋಟಿಯ ಮೇಲಾಟಾ,
ಮಗುವೇ, ಮೇಲುಪೋಟಿಯಾಟಾ.

ಮುಂದುವರಿದು ಅವರು ಚುನಾವಣಾ ರ್‍ಯಾಲಿ(rally)ಗಳ ಬಗ್ಗೆ ಹೇಳುತ್ತಾರೆ:

ಶಿಕ್ಷಣವಂತರು ಲಕ್ಷಣವತಿಯರು
ಲಕ್ಷಮಂದಿ ಪರಿಷೇ,
ಮಗುವೇ, ಲಕ್ಷಾಂತರ ಪರಿಷೇ.
ಅಕ್ಷರವರಿಯದ ಕುಕ್ಷಿಯ ಮರೆಯದ
ಅಕ್ಷಯಜನ ಪರಿಷೇ,
ಮಗುವೇ, ಸಾಕ್ಷಾತ್ ಜನ ಪರಿಷೇ.

ಪದ್ಯದ ಕೊನೆಯಲ್ಲಿ ಡಿ ವಿ ಜಿ ಅವರು ಅಭ್ಯರ್ಥಿಗಳ ಕಾಪಟ್ಯವನ್ನು ಹೀಗೆ ಬಿಚ್ಚಿಡುತ್ತಾರೆ:

ದೇಶೋದ್ಧಾರಕ ಮೋಸನಿವಾರಕ
ವೇಷದ ನಾಟಕವೋ,
ಮಗುವೇ, ವೇಷದ ನಾಟಕವೋ.
ಆಶಾದಾಯಕ ಘೋಷಣಕಾರಕ
ಹಾಸ್ಯವಿಕಾರಕವೋ,
ಮಗುವೇ, ಹಾಸ್ಯವಿಕಾರಕವೋ.

ವಿವಿಧ ಪಕ್ಷಗಳವರು ಮತಯಾಚನೆ ಮಾಡುವ ಬಗೆಯನ್ನು ’ಜನಜನವರಿಗೆ’ ಎಂಬ ಪದ್ಯದಲ್ಲಿ ಡಿ ವಿ ಜಿ ಸೊಗಸಾಗಿ ಬಣ್ಣಿಸುತ್ತಾರೆ:

ದೇಶಸ್ವತಂತ್ರಕ್ಕೆ ಮೀಶೆಬಿಟ್ಟವ ನಾನು;
ಕೊಡಿರೆನಗೆ ಮತವ,
ಹಿಡಿಯಿರಿದೊ ಹಿತವ;
ಇಂತೆಂದು ಬಂದನಾ ಘನ ಕಾಂಗ್ರೆಸಿಗನು.
ಬೇಸಾಯಗಾರಂಗೆ ಬೆನ್ನುಮೂಳೆಯೊ ನಾನು;
ತನ್ನಿರಾ ಮತವ,
ಬನ್ನಿ, ಕೊಳಿ ಹಿತವ;
ಇಂತೆಂದು ಬಂದನಾ ಕಿಸುಕಿಸಾನವನು.
ಕೂಲಿಯಾಳ್ಗಲನೆಲ್ಲ ಮೇಲಕೆತ್ತುವೆ ನಾನು;
ಇತ್ತ ಕೊಡಿ ಮತವ,
ಎತ್ತಿಕೊಳಿ ಹಿತವ;
ಇಂತೆಂದು ಬಂದನಾ ಮಜ್ದೂರಿನವನು.
...........................
ಕೀಳು ಮೇಲೆಂಬರ್‍ಗೆ ಕಾಲಾಂತಕನು ನಾನು;
ನೀಡಿರಾ ಮತವ,
ನೋಡಿರೀ ಹಿತವ;
ಇಂತೆಂದು ಬಂದನಾ ಹರಿಜನೋದ್ಧರನು.
ಸಾಲಹೊರೆ ಹೊತ್ತರ್‍ಗೆ ಕೀಲುಕುದುರೆಯು ನಾನು;
ಚಾಚಿರಾ ಮತವ,
ಬಾಚಿಕೊಳಿ ಹಿತವ;
ಇಂತೆಂದು ಬಂದನಾ ಋಣವಿಮೋಚಕನು.
.............................
ಧರ್ಮದುದ್ಧಾರವೇ ಪೆರ್‍ಮೆಯೆಂಬನು ನಾನು;
ಮುಡುಪಿಡಿರಿ ಮತವ,
ಪಿಡಿಯಿರಿದೊ ಹಿತವ;
ಇಂತೆಂದು ಬಂದನಾ ಹಿಂದುಸಭೆಯವನು.

ಹೀಗೆ ಮುಂದುವರಿಯುತ್ತದೆ ’ಜನಜನವರಿಗೆ’ ಪದ್ಯ.

’ಅಂಗೈಯ ವೈಕುಂಠ’ ಎಂಬ ಪದ್ಯದಲ್ಲಿ ಡಿ ವಿ ಜಿ ಅವರು ಚುನಾವಣೆ ದಾಟಿ ಮುಂದಕ್ಕೆ ಹೋಗುತ್ತಾರೆ.
ಪೊಳ್ಳು ಆಶ್ವಾಸನೆಗಳನ್ನು ನೀಡಿ ಆಯ್ಕೆಯಾದ ಅಭ್ಯರ್ಥಿಯು ’ಹೆಮ್ಮಂತ್ರಿ’ಯಾಗಿ ಮೆರೆಯುತ್ತಾನೆ, ಆದರೆ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ. ’ರೋಸಿದ್ದ ಜನವೆಲ್ಲ ಕಡೆಗೂರ ಚೌಕದಲಿ’ ನೆರೆದು, ಔತಣದ ನೆಪದಲ್ಲಿ ಆ ಮಂತ್ರಿಯನ್ನು ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗ ಮಂತ್ರಿ ಉತ್ತರಿಸುತ್ತಾನೆ:

ವೇಷ ತೊಟ್ಟೆನು ನಿಮ್ಮ ಮನಮೆಚ್ಚಿಗಾಗಿ,
ಭಾಷೆ ಕೊಟ್ಟೆನು ನಿಮ್ಮ ವರಪತ್ರಕಾಗಿ.
ಅದೇ ಬಾಯಲ್ಲಿ ಆತ ಮತ್ತೆ ಹೇಳುತ್ತಾನೆ:
ಈ ಸಾರಿ ನೀಮೆನ್ನನಾರಿಸಿರಿ, ನಾನು
ಮೂಸಲದ ಋಣಬಡ್ಡಿಯೆಲ್ಲ ತೀರಿಪೆನು.

ಮುಗ್ಧ ಮತದಾರರು ಅವನನ್ನು ಮತ್ತೆ ನಂಬುತ್ತಾರೆ!

ದೂರ್‍ವುದೇಕವನ ನಾಮ್? ಅವನ ಮನಸೊಳಿತು;
ಪೂರ್ವಕರ್ಮವು ನಮ್ಮದದರ ಫಲವಿನಿತು.

ಹೀಗೆಂದುಕೊಂಡು ಜನರು ಮತ್ತೆ ಮುಂದಿನ ಚುನಾವಣೆಯಲ್ಲೂ ಆತನನ್ನೇ ಆಯ್ಕೆಮಾಡುತ್ತಾರೆ! ಆತನದೋ, ಮತ್ತೆ ಅದೇ ಚಾಳಿ! ಇದನ್ನು ಕಂಡು ಕವಿ (ಡಿ ವಿ ಜಿ) ಉದ್ಗರಿಸುತ್ತಾರೆ:

ಕಲಿಯಿತೇಂ ಜನತೆಯಂಗೈಯ ವೈಕುಂಠದಿಂ
ರಾಜ್ಯಪಾಠವನು?
ತಿಳಿಯಿತೇಂ ಕಂಡ ಮುಂಗೈಯ ಕೈಲಾಸದಿಂ
ಭೋಜ್ಯದೂಟವನು?
ಮರೆವು ಕವಿಯಿತು ಜನವ ನಿಶಿನಿದ್ದೆಯೊಡನೆ;
ಕರಗಿತಾ ಕಹಿನೆನಪು ಬಿಸಿಮುದ್ದೆಯೊಡನೆ.

ಡಿ ವಿ ಜಿ ಅವರ ಈ ಮಾತು ಇಂದಿಗೂ ಅಷ್ಟೇ ಪ್ರಸ್ತುತವಲ್ಲವೆ? ’ಪಬ್ಲಿಕ್ ಮೆಮೊರಿ ಈಸ್ ಷಾರ್ಟ್’ ತಾನೆ? ಅದರ ದುರುಪಯೋಗವನ್ನೇ ಅಲ್ಲವೆ ನಮ್ಮ ಪುಢಾರಿಗಳು ಮಾಡಿಕೊಳ್ಳುತ್ತಿರುವುದು? ಇಂಥ ಪುಢಾರಿಯನ್ನು ’ಜನನಾಯಕ’ ಎಂಬ ಪದ್ಯದಲ್ಲಿ ಡಿ ವಿ ಜಿ ಅವರು ಸಖತ್ತಾಗಿ ಬೆಂಡೆತ್ತಿದ್ದಾರೆ. ಆ ಪದ್ಯದ ಪೂರ್ಣಪಾಠ ಇಂತಿದೆ:

ಎಲ್ಲಿಂದ ಬಂದೆಯೋ ಜನನಾಯಕಾ-ಎಂಥ
ಒಳ್ಳೆಯದ ತಂದೆಯೋ ಜನನಾಯಕ.
ಬೆಲ್ಲವನು ಕಿವಿಗೀವ ಜನನಾಯಕಾ ನೀನು
ಸುಳ್ಳಾಡದಿರು ಸಾಕು-ಜನನಾಯಕಾ.
ಗಗನದಿಂದಿಳಿದೆಯಾ ಮಘವಂತ ದೂತನೇ
ಮುಗಿಲಂತೆ ಗುಡುಗಾಡುತಿರುವೆಯೇಕೋ?
ಸೊಗವೀವ ಮಳೆಯ ನೀಂ ಕರೆಯಬಲ್ಲೆಯ ಬರಿ
ಹೊಗೆಯ ಮೋಡವೊ ನೀನು-ಜನನಾಯಕಾ.
ಪಾತಾಳದಿಂದೆದ್ದು ಬಂದಿಹೆಯ ನೀನು,
ಭೇತಾಳ ಮಾಯೆಗಳ ಮಾಡಲಿಹೆಯಾ?
ಮಾತಿನಿಂ ಮಾತೆಗೇನುದ್ಧಾರವೋ ನಿನ್ನ
ಬೂತಾಟಿಕೆಗಳೇಕೊ-ಜನನಾಯಕಾ.
ಕಡಲ ಮಧ್ಯದಿನೆದ್ದು ಬಂದಿರುವೆಯಾ ನೀನು,
ಕಡೆದು ನಮಗಮೃತವನು ತಂದಿರುವೆಯಾ?
ಪೊಡವಿಯಾಳ್ತನವೇನು ಬುಡುಬುಡುಕಿಯಾಟವೇ?
ದುಡಿತ ನೀನೇನರಿವೆ?-ಜನನಾಯಕಾ.
ನಾಗಲೋಕದಿನೆದ್ದು ಬಂದೆಯೇನೋ ಬರಿಯ
ಲಾಗಾಟ ಕೂಗಾಟ ನಿನ್ನ ಬದುಕು.
ನೇಗಿಲನು ಪಿಡಿದು ನೆಲನುಳಬಲ್ಲೆಯಾ ನೀನು
ನಾಗರ ಕಳಿಂಗನೋ-ಜನನಾಯಕಾ.
ಯಾವ ವಿದ್ಯೆಯ ಬಲ್ಲೆ? ಯಾವ ವ್ರತವ ಗೈದೆ?
ಜೀವನದ ಮರ್ಮವೇನರಿತವನೆ ನೀಂ?
ಸಾವಧಾನದ ತಪಸ್ಸಲ್ಲವೇನೋ ರಾಷ್ಟ್ರ-
ಸೇವೆಯ ಮಹಾಕಾರ್ಯ-ಜನನಾಯಕಾ.
ಗಾಂಧಿ ಗಾಂಧಿಯೆನುತ್ತಲಡಿಗಡಿಗೆ ಕೂಗುತಿಹೆ
ಗಾಂಧಿವೋಲನುದಿನದಿ ಬಾಳುತಿಹೆಯಾ?
ದಾಂಧಲೆಯ ಮಾಡಿ ನೀಂ ಪದವಿಗೇರುವನೆಂದು
ಸಂದೇಹವೋ ನಮಗೆ-ಜನನಾಯಕಾ.
ಗಾಳಿತಿತ್ತಿಯೊ ನೀನು ಜನನಾಯಕಾ-ಹಳಸು
ಕೂಳು ಬುತ್ತಿಯೊ ನೀನು ಜನನಾಯಕಾ.
ದಾಳದಾಟವೊ ನೀನು ಜನನಾಯಕಾ-ನಮ್ಮ
ಫಾಲಲಿಪಿಯೋ ನೀನು-ಜನನಾಯಕಾ.

ದಾರ್ಶನಿಕ ಕವಿ ಡಿ ವಿ ಜಿ ಅವರು ಈ ಪದ್ಯದ ಕೊನೆಯಲ್ಲಿ, ’ಇಂಥ ಜನನಾಯಕನನ್ನು ಹೊಂದಿರುವುದು ನಮ್ಮ ಹಣೆಬರಹ’ ಎಂಬ ತೀರ್ಮಾನಕ್ಕೆ ಬಂದಿರುವುದನ್ನು ನೋಡಿದರೆ ಅಂದಿನ ರಾಜಕಾರಣವೂ ಎಷ್ಟು ಹೊಲೆಗಟ್ಟಿತ್ತೆಂಬುದನ್ನು ನಾವು ಊಹಿಸಬಹುದು. ಡಿ ವಿ ಜಿ ಅವರ ಬೇಗುದಿಯೂ ಇಲ್ಲಿ ನಮ್ಮ ಕಣ್ಣಿಗೆ ಕಟ್ಟುತ್ತದೆ.

ಇನ್ನು, ಮಹಾಚುನಾವಣೆಯೆಂಬ ಈ ’ಜನವಂಚನೆ’ಯ ಬಗ್ಗೆ ಕವಿಯ ಕಲ್ಪನೆಯು ಎಂಥ ಉತ್ತುಂಗವನ್ನು ತಲುಪಿದೆಯೆಂದರೆ, ಪುಢಾರಿಗಳ ಬಾಯಲ್ಲಿ ಸಿಕ್ಕಿಬಿದ್ದ ಸರಸ್ವತಿಯು ಬಿಡುಗಡೆಗಾಗಿ ಬ್ರಹ್ಮನ ಮೊರೆಹೊಗುತ್ತಾಳೆ! ’ಸರಸ್ವತಿಯ ಪ್ರಾರ್ಥನೆ’ ಪದ್ಯದಲ್ಲಿ ಆ ದೇವಿಯು ಬ್ರಹ್ಮನನ್ನು ಈ ರೀತಿ ಪ್ರಾರ್ಥಿಸುತ್ತಾಳೆ:

ಬಿಡಿಸೆನ್ನ ರಾಜ್ಯಕರ ಹಿಡಿತದಿಂ ವಿಧಿಯೇ
ತೊದಲು ತುಟಿಗೆನ್ನ ಬಲಿಕೊಡಬೇಡ ಪತಿಯೇ.
ದೇಶದುದ್ಧಾರಕ್ಕೆ ಭಾಷಣವೆ ಪಥವಂತೆ,
ಘೋಷಣೆಯ ಲೋಕ ಸಂತೋಷ ನಿಧಿಯಂತೆ.
ಆಶೆಯಾಗಿಸೆ ಜನಕೆ ವೇಷ ತೊಡಿಸುವರೆನಗೆ
ವೇಶಿತನವನದೆಂತು ಸೈಸಲಹುದಜನೇ.
ಮಾತು ನೂಲನು ಜೇಡ ಬಲೆಯಾಗಿ ನೆಯ್ದು
ವೋಟು ನೊಣಗಳ ಪಿಡಿವ ಹೂಟವನು ಹೂಡಿ
ಊಟಕ್ಕೆ ಬಾಯ್ದೆರೆವ ಮಾಟಗಾರರಿಗೆ ನಾಂ
ಚೇಟಿಯಾಗುವೆನೆ? ಈ ಕೋಟಲೆಯ ಹರಿಸೈ.

ಕವಿಯ ಕಲ್ಪನೆಯಿಲ್ಲಿ ಅನ್ಯಾದೃಶವಲ್ಲವೆ?

ಮಹಾಚುನಾವಣೆಯ ಬಗ್ಗೆ ಡಿ ವಿ ಜಿ ಅವರು ಅಂದು ಆಡಿರುವ ನುಡಿಗಳು ಇಂದಿಗೂ ಪ್ರಸ್ತುತ.

ಡಿ ವಿ ಜಿ ಅವರ ’ಮಂಕುತಿಮ್ಮನ ಕಗ್ಗ’ ಅದೊಂದು ಲೋಕಸತ್ಯ; ಸಾರ್ವಕಾಲಿಕ ಸತ್ಯ. ಆದರೆ, ಮಹಾಚುನಾವಣೆಯ ಬಗ್ಗೆ ಡಿ ವಿ ಜಿ ಅವರು ಆಡಿರುವ ನುಡಿಗಳು ಸಾರ್ವಕಾಲಿಕ ಸತ್ಯ ಆಗದಿರಲಿ ಎಂಬುದು ನಮ್ಮ ನಿಮ್ಮೆಲ್ಲರ ಅಪೇಕ್ಷೆ. ಡಿ ವಿ ಜಿ ಅವರ ಅಪೇಕ್ಷೆಯೂ ಇದೇ ಆಗಿತ್ತಲ್ಲವೆ?

ಈ ಅಪೇಕ್ಷೆಯನ್ನು ನಿಜವಾಗಿಸುವ ಅವಕಾಶ, ಅರ್ಥಾತ್, ದುಷ್ಟ-ಭ್ರಷ್ಟ ಜನನಾಯಕರಿಗೆ ’ಗತಿ ಕಾಣಿಸುವ’ ಅವಕಾಶ ದೇಶಾದ್ಯಂತ ನಮಗೀಗ ಒದಗಿಬಂದಿದ್ದು, ಮತಪತ್ರಗಳ ಮೂಲಕ ನಾವು ಆ ಕೆಲಸವನ್ನು ಮಾಡಿದ್ದೇವೆಯೇ?
ಇದೇ ೧೬ರಂದು ಗೊತ್ತಾಗುತ್ತದೆ.

ಮಂಗಳವಾರ, ಮೇ 5, 2009

ನೀವು ಕೇಳದಿರಿ - 4 (ಸಿನಿಮಾ ಸ್ಪೆಷಲ್)

* ’ಹೊಡಿಮಗ’ ಈಗ ’ಹ್ಯಾಟ್ರಿಕ್ ಹೊಡಿಮಗ’. ಅದರ ಡೈರೆಕ್ಟರ್?

- ’ಟ್ರಿಕ್ ಡೈರೆಕ್ಟರ್’.

+++

* ಗಣೇಶ ’ಗೋಲ್ಡನ್ ಸ್ಟಾರ್’. ಅಂಬರೀಷ್?

- ’ಓಲ್ಡನ್ ಸ್ಟಾರ್’.

+++

* ಚುನಾವಣೆ ವೇಳೆ ಒಂದಷ್ಟು ದಿನ ಅಂಬಿ ತನ್ನ ಪಕ್ಷದ ವಿರುದ್ಧವೇ (ಅನಧಿಕೃತವಾಗಿ) ಬಂಡೆದ್ದದ್ದು ಯಾಕೆ?

- ತಾನು ’ರೆಬೆಲ್ ಸ್ಟಾರ್’ ಎಂಬುದು ಇದ್ದಕ್ಕಿದ್ದಂತೆ ನೆನಪಾಗಿರಬೇಕು!

+++

* ಪೂಜಾ ಗಾಂಧಿ ಕನ್ನಡ ಕಲೀತಿದ್ದಾರಾ?

- ಕಲೀತಿದ್ದಾರೆ ಕಲೀತಿದ್ದಾರೆ; ಕನ್ನಡದಲ್ಲೇ ನುಲೀತಿದ್ದಾರೆ; ಅದನ್ನು ಕೇಳಿ / ನೋಡಿ ಪಡ್ಡೆ ಹೈಕಳು ನಲೀತಿದ್ದಾರೆ!

+++

* ಪೂಜಾ ಗಾಂಧಿಯ ವೆಬ್‌ಸೈಟ್ ತಗೊಂಡು ನಾನೇನ್ಮಾಡಲಿ?

- Sight seeing ಮಾಡೋ ಮಾರಾಯ! ಕಣ್ಣು ತಂಪಾಗುತ್ತೆ!

+++

* ’ಕಿರಣ್ ಬೇಡಿ’ ಮಾಲಾಶ್ರೀ ಅವರ ನೆಕ್ಸ್ಟ್ ಫಿಲಂ ಹೆಸರೇನು?

- ’ಹೆದರ್‌ಬೇಡಿ’.
(ಈ ಹೆಸರಿನ ಮೇಲ್ಗಡೆ ಸಣ್ಣಕ್ಷರಗಳಲ್ಲಿ, ’ಸೈಜ್ ನೋಡಿ’ ಎಂದು ಬರೆದಿರುತ್ತೆ.)

+++

* ಪರಭಾಷಾ ನಟಿಯೋರ್ವಳಿಗೆ ಕನ್ನಡದಲ್ಲಿ ಮಾತಾಡಲು ನಾಲಗೆ ತಿರುಗೋಲ್ವಂತೆ!

- ಸ್ಟಾರ್‌ಟಂಗ್ ಟ್ರಬಲ್ ಪಾಪ!

--೦--

ಭಾನುವಾರ, ಮೇ 3, 2009

ನೀವು ಕೇಳದಿರಿ - 3

* ಕರ್ನಾಟಕದಲ್ಲಿ ಮತದಾನ ಮುಗಿದರೂ ಪಕ್ಷಗಳ ಪರಸ್ಪರ ಕೆಸರೆರಚಾಟ ನಿಂತಿಲ್ಲವಲ್ಲ ಗುರುವೇ!

- ಎಲ್ಲರ ಬಳಿಯೂ ಆ ಪಾಟಿ ಕೆಸರಿದೆಯಲ್ಲಾ, ಅದನ್ನು ಹೇಳು ಶಿಷ್ಯಾ!

+++

* ಪಕ್ಷಗಳ ಕೆಸರೆರಚಾಟದ ಬಗ್ಗೆ ರವಷ್ಟು ಕಮೆಂಟ್ ಮಾಡಿ ಗುರುವೇ.

- ಓಕೆ ಶಿಷ್ಯಾ, ಕೇಳು.
’ಕೈ ಕೆಸರಾದರೆ ಬಾಯ್ ಮೊಸರು’, ಎಂದು ನಂಬಿ ಕಾಂಗ್ರೆಸ್ ’ಕೈ’ ಕೆಸರು ಮಾಡಿಕೊಳ್ಳುತ್ತಿದೆ.
ಜೆಡಿಎಸ್ ಪಿತಮಹಾಶಯ ಸ್ವಯಂ ಕೆಸರಿನ (ಮಣ್ಣಿನ) ಮಗ.
ಇನ್ನು ಬಿಜೆಪಿ; ಅದು ’ಕೆಸರಿನ ಕಮಲ’. ಕೆಸರಿದ್ದರೇನೇ ಕೇಸರಿಗೆ ಖುಷಿ (ಸದಾ ಆನಂದ).
ಹೀಗಿರುವಾಗ ಸದರಿ ಕೆಸರೆರಚಾಟದಲ್ಲಿ ವಿಶೇಷವೇನಿಲ್ಲ.
ನಮ್ಮೀ ಪಕ್ಷಗಳಿಗೆ ಗೊತ್ತಿರುವುದು ಎರಡೇ. ಕೆಸರಾಟ ಮತ್ತು ಕೊಸರಾಟ. ಏನಂತೀ ಶಿಷ್ಯಾ?

+++

* ಸ್ವಿಸ್ ಬ್ಯಾಂಕ್ ಹಣ ಭಾರತಕ್ಕೆ ಬರುತ್ತೆಯೆ?

- ಬರುತ್ತೆ, ಬರುತ್ತೆ; ಮತದಾನದ ಅಂತಿಮ ದಿನವಾದ ಮೇ ೧೩ರ ತನಕ ಬರ್ತಾನೇ ಇರುತ್ತೆ.

+++

* ಮುಷ್ಕರನಿರತ ಕಿರಿಯ ವೈದ್ಯರಿಗೆ ಏನಾಗಬೇಕು?

- ಕಿರಿ ವೈದ್ಯರು ಕಿರಿಕಿರಿ ವೈದ್ಯರಾಗದಿದ್ದರೆ ಸಾಕು.

+++

* ಕಸಬ್ ಏನೇನೋ ಡಿಮಾಂಡ್ ಮಾಡ್ತಿದ್ದಾನೆ!

- ಬೇರೆ ಕಸಬಿಲ್ಲ, ಇನ್ನೇನ್ಮಾಡ್ತಾನೆ?

+++

* ಪ್ರಪಂಚದಲ್ಲೇ ಅತೀ ಸುಂದರರು ಯಾರು?

- ಅಧಿಕಾರದ ಅಥವಾ ಜನಪ್ರಿಯತೆಯ ನಂಟುಳ್ಳವರು.
ಉದಾ: ಮಿಷೆಲ್ ಒಬಾಮಾ, ಫ್ರೀಡಾ ಪಿಂಟೊ, ದೇವ್ ಪಟೇಲ್....

+++

* ವಿಶ್ವಶಾಂತಿಗೆ ಯಾವಯಾವ ಹೋಮ ಮಾಡುತ್ತಾರೆ?

- ಸದ್ಯಕ್ಕೆ ಹಂದಿಗಳ ಮಾರಣಹೋಮ ಮಾಡುತ್ತಿದ್ದಾರೆ.

--೦--

ಶನಿವಾರ, ಏಪ್ರಿಲ್ 4, 2009

ರಾಜಕಾರಣಿಗಳೆಂಬ ಜನಶೇವಕರ ಕಥೆ

ಭಾರತದ ರಾಜಕಾರಣಿಗಳು ವಿಶ್ವದಲ್ಲೇ ಅತ್ಯಂತ ಶ್ರೇಷ್ಠರು. ರೂಢಿಯೊಳಗುತ್ತಮರು.
’ದಾಸನಂತಾಗುವೆನು ಧರೆಯೊಳಗೆ ನಾನು’, ಎಂಬ ದಾಸವಾಣಿಯಂತೆ ನಡೆಯುವವರು ಇವರು.
ಚುನಾವಣೆ ಎದುರಿರುವಾಗ ಇವರು ನಮ್ಮ ಮನೆಬಾಗಿಲಿಗೆ ಬಂದು ನಮ್ಮ ದಾಸಾನುದಾಸರಂತೆ ಕೈಮುಗಿದು, ಹಲ್ಲು ಕಿರಿದು, ಎಲ್ಲ ಸುಖ-ಕಷ್ಟ ವಿಚಾರಿಸಿ, ’ಇಲ್ಲಿರುವುದು ಸುಮ್ಮನೆ, ಅಲ್ಲಿ ಡೆಲ್ಲಿಯಲ್ಲಿರುವುದು ಪಾರ್ಲಿಮೆಂಟ್ ಎಂಬ ನಮ್ಮನೆ’, ಎಂದು ನುಡಿದು, ಪೆಪ್ಪರಮಿಂಟ್ ತಿಂದವರಂತೆ ಜೊಲ್ಲು ಸುರಿಸುತ್ತ ಮುಂದಿನ ಮನೆಬಾಗಿಲಿಗೆ ಬಿಜಯಂಗೈಯುವವರು.
’ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ವೋಟರ್ ಪ್ರಭುವೆ’, ಎನ್ನುವ ಇವರ ಆ ವಿನಯ, ಎನ್ನ ಸ್ವಾಮೀ, ರೊಂಬ ಅದ್ಭುತಂ!
ಮತದಾರನ ಮನೆಯೇನಾದರೂ ಒಳಗಿನಿಂದ ಬೋಲ್ಟಿಸಲ್ಪಟ್ಟಿದ್ದರೆ ಆಗ ಈ ಜನಸೇವಕರು, ’ಪೂಜಿಸಲೆಂದೇ ಹೂನಗೆ ತಂದೆ, ದರುಶನ ಕೋರಿ ನಾ ನಿಂದೆ, ತೆರೆಯೋ ಬಾಗಿಲನು’, ಎಂದು ಗಾರ್ದಭರಾಗದಲ್ಲಿ ಹಾಡಿ ಬಾಗಿಲು ತೆರೆಸಿ, ಪಾಂಪ್ಲೆಟ್ ನೀಡಿ, "ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ನಾಣ್ಣುಡಿಯಂತೆ ನಾವಿವತ್ತು ನಿಮ್ಮ ಕಾಲು ಹಿಡೀಲಿಕ್ಕೆ ಬಂದಿದ್ದೀವಿ, ನಮಗೇ ವೋಟ್ ಹಾಕಿ", ಎಂದು ಮುವ್ವತ್ತೆರಡೂ ಹಲ್ಲುಗಳನ್ನು (ಸದಾನಂದಗೌಡರಂತೆ) ಪ್ರದರ್ಶಿಸುತ್ತಾರೆ. ಇವರ ಈ ವಿನಯ ಅಂಥಿಂಥದೇ? ಚಾಲಾ ಗೊಪ್ಪದಿ!
’ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ’, ಎಂದು ಈ ದೈವಭಕ್ತಶಿಖಾಮಣಿಗಳು ಚುನಾವಣೆಯ ಸಂದರ್ಭದಲ್ಲಿ ಕಂಡಕಂಡ ದೇವರುದಿಂಡಿರಿಗೆಲ್ಲ ಮೊರೆಹೊಗುವ ಪರಿಯನ್ನೆಂತು ಬಣ್ಣಿಸಲಿ!
’ಕಂಡುಕಂಡು ನೀ ಎನ್ನ ಕೈಬಿಡುವರೇ ಪ್ರಭುವೆ, ಉಂಡು ಮಲಗದೆ ಅಂದು ಮತ ನೀಡು ಒಡೆಯಾ’, ಎಂದು ಮತದಾರನನ್ನು ಇವರು ಬೇಡಿಕೊಳ್ಳುವ ಪರಿಯೂ ಅನನ್ಯ!
ನಮ್ಮೀ ರಾಜಕಾರಣಿಗಳು ಅತ್ಯಂತ ಪ್ರಾಮಾಣಿಕರು. ಸತ್ಯಸಂಧರು. ಸಿದ್ಧಾಂತಬದ್ಧರು. ನಿಷ್ಪೃಹರು. ಅತಿ ವಿಧೇಯರು. ಮತ್ತು ಜಾತ್ಯತೀತರು.
ಇವರ ಚುನಾವಣಾ ಭಾಷಣಗಳೇ ನನ್ನ ಈ ಮಾತಿಗೆ ಸಾಕ್ಷಿ.
ವಿರೋಧಿಗಳ ಟೀಕೆಯೇ ತುಂಬಿರುವ ತಮ್ಮ ಭಾಷಣದಲ್ಲಿ ಇವರು, ಒಂದುವೇಳೆ ತಾವು ಆರಿಸಿಬಂದರೆ ತಮ್ಮ ಕ್ಷೇತ್ರಕ್ಕೆ ಏನೇನು ಕೆಲಸಕಾರ್ಯಗಳನ್ನು ಮಾಡಲಿದ್ದೇವೆಂಬುದನ್ನು ಎಂದಿಗೂ ತಿಳಿಸುವುದಿಲ್ಲ. ಏಕೆಂದರೆ, ಆರಿಸಿಬಂದಮೇಲೆ ಇವರು ಕ್ಷೇತ್ರಕ್ಕಾಗಿ ಯಾವ ಕೆಲಸವನ್ನೂ ಮಾಡುವವರಲ್ಲ. ಅಂದಮೇಲೆ ಇವರದು ಅತ್ಯಂತ ಪ್ರಾಮಾಣಿಕ ಭಾಷಣವಲ್ಲವೆ?
ಪ್ರತಿಯೊಂದು ಪಕ್ಷದವರೂ ತಮ್ಮ ವಿರೋಧಿಗಳ ಭ್ರಷ್ಟಾಚಾರವನ್ನೂ ಅನಾಚಾರವನ್ನೂ ಚುನಾವಣಾ ಭಾಷಣದಲ್ಲಿ ಬಣ್ಣಿಸುತ್ತಾರಷ್ಟೆ. ನಾವು ಎಲ್ಲರ ಭಾಷಣಗಳನ್ನೂ ಹಂಡ್ರೆಡ್ ಪರ್ಸೆಂಟ್ ನಂಬುತ್ತೇವೆ. ಎಲ್ಲರೂ ಸತ್ಯವನ್ನೇ ಹೇಳುತ್ತಿದ್ದಾರೆಂಬುದು ಇವರ ಹಾವ-ಭಾವ, ಉದ್ರೇಕ-ಉನ್ಮಾದ, ಕೋಪ-ತಾಪ ಮತ್ತು ಇವರು (ಭಾಷಣಗಳಲ್ಲಿ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ) ಪ್ರದರ್ಶಿಸುವ ಕಾಗದ-ಪತ್ರ-ಪತ್ರಿಕೆಗಳು ಇವುಗಳಿಂದ ಗೊತ್ತಾಗುತ್ತದೆ.
ನಮ್ಮೀ ರಾಜಕಾರಣಿಗಳು ಸಿದ್ಧಾಂತಬದ್ಧರು. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸುವುದು, ಯೇನಕೇನ ಪ್ರಕಾರೇಣ ಗೆಲ್ಲುವುದು ಮತ್ತು ಗೆದ್ದಮೇಲೆ ಮಂತ್ರಿಗಿರಿ/ನಿಗಮ/ಮಂಡಳಿ ಯಾವುದಾದರೊಂದು ಕುರ್ಚಿಯಲ್ಲಿ ರಾರಾಜಿಸುವುದು ಈ ತ್ರಿವಿಧ (ಸ್ವಯಂ)ದಾಸೋಹವೇ ತಮ್ಮ ರಾಜಕೀಯ ಜೀವನದ ಪರಮಗುರಿಯೆಂಬುದು ಇವರ ಸಿದ್ಧಾಂತ. ಈ ಸಿದ್ಧಾಂತಪಾಲನೆಗಾಗಿಯೇ ಇವರು ದಿನಕ್ಕೆರಡುಬಾರಿ ಪಕ್ಷಾಂತರ ಮಾಡುವುದು. ಸಿದ್ಧಾಂತಪಾಲನೆಗಾಗಿ ಎಂಥ ಕಡುಕಷ್ಟ, ಪಾಪ!
ಇನ್ನು, ಇವರ ನಿಷ್ಪೃಹ ಮನೋಭಾವನ್ನು ನಾನೆಂತು ಬಣ್ಣಿಸಲಿ! ಅದೆಷ್ಟು ನಿಷ್ಪೃಹರಾಗಿ, ಅರ್ಥಾತ್ ನಿಃಸ್ವಾರ್ಥದಿಂದ ಇವರು ಜನಸೇವೆ ಮಾಡುತ್ತಾರೆಂದರೆ, ಯಾವ ವಿಶೇಷ ಆಸ್ತಿಪಾಸ್ತಿಗಳನ್ನೂ ಇವರು ಗಳಿಸಿರುವುದಿಲ್ಲ. ಇವರ ಪೈಕಿ ಎಷ್ಟೋ ಮಂದಿಗೆ ಮನೆಯೂ ಇರುವುದಿಲ್ಲ, ವಾಹನವೂ ಇರುವುದಿಲ್ಲ! ಏನೋ, ಇವರ ಹೆಂಡತಿ ಟೈಲರಿಂಗ್ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ. ಗಂಡಂದಿರನ್ನು ಈ ಹೆಂಡತಿಯರೇ ಸಾಕುತ್ತಾರೆ.
ಇನ್ನು, ಈ ಜನಸೇವಕರ ವಿಧೇಯತೆಯೆಂದರೆ ಅಂಥಿಂಥದೇ? ಹೈಕಮಾಂಡು ತನ್ನ ಕಾಲಲ್ಲಿ ತೋರಿಸಿದ್ದನ್ನು ಇವರು ’ಕೈ’ಯಲ್ಲಿ ಎತ್ತಿಕೊಂಡು ತಲೆಯಮೇಲೆ ಇಟ್ಟುಕೊಳ್ಳುತ್ತಾರೆ! ಇಂಥ ವಿಧೇಯತೆಯು ವಿಶ್ವದ ಇನ್ನಾವ ರಾಷ್ಟ್ರದ ರಾಜಕಾರಣಿಗಳಲ್ಲೂ ಇಲ್ಲ ಬಿಡಿ.
ವಯಸ್ಸು ೭೬ರ ದೇವೇಗೌಡರಾಗಿರಲಿ, ೮೨ರ ಅಡ್ವಾಣಿಯಾಗಿರಲಿ, ೮೩ರ ಬಾಳ್ ಠಾಕ್ರೆ ಆಗಿರಲಿ, ೮೫ರ ಕರುಣಾನಿಧಿ ಆಗಿರಲಿ, ೯೫ರ ಜ್ಯೋತಿ ಬಸು ಆಗಿರಲಿ, ಸೋನಿಯಾ, ರಾಹುಲ್,....ಕೊನೆಗೆ ಎಂಟು ವರ್ಷದ ರೈಹನ್ ವಡ್ರಾ ಅಥವಾ ಆರು ವರ್ಷದ ಮಿರಯಾ ವಡ್ರಾನೇ ಆಗಿರಲಿ, ಹೈಕಮಾಂಡ್ ಎಂದರೆ ಹೈಯೇ. ಪಕ್ಷದ ಎಲ್ಲರೂ ಆ ಹೈಕಮಾಂಡ್‌ನಡಿ ಲೋ! ವೆರಿ ಲೋ!! ವೆರಿ ವೆರಿ ಲೋ!!! ಎಂಥ ವಿಧೇಯತೆ!
ನಮ್ಮೀ ರಾಜಕಾರಣಿಗಳ ಜಾತ್ಯತೀತ ಮನೋಭಾವವಂತೂ ಇಡೀ ವಿಶ್ವಕ್ಕೇ ಮಾದರಿ! ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಎಂಬ ಭೇದಭಾವವಿಲ್ಲದೆ ಚುನಾವಣೆಯ ಸಂದರ್ಭದಲ್ಲಿ ಎಲ್ಲ ಮತೀಯರ ದೇಗುಲ-ಪ್ರಾರ್ಥನಾಸ್ಥಳಗಳಿಗೂ (ಆಯಾ ಉಡುಪುಗಳಲ್ಲಿ) ಭೇಟಿಯಿತ್ತು, ಕೈಮುಗಿದು-ಅಡ್ಡಬಿದ್ದು ಕೃತಾರ್ಥರಾಗುವ ಇವರ ಮತಾತೀತ ಭಕ್ತಿಭಾವವಾಗಲೀ, ಎಲ್ಲ ಜಾತಿ-ಮತಗಳವರ ಮನೆಬಾಗಿಲಿಗೂ ಹೋಗಿ ಹಲ್ಕಿರಿದು ಮತ ಅಂಗಲಾಚುವ ಇವರ ಜಾತ್ಯತೀತ ಮನೋಭಾವವಾಗಲೀ ವರ್ಣನಾತೀತ!
’ಹನುಮನ ಮತವೇ ಹರಿಮತವೋ. ಹರಿಯ ಮತವೆ ಹನುಮನ ಮತವೊ’, ಎಂಬ ದಾಸವಾಣಿಯೊಲ್ ಇವರು, ’ಪ್ರಜೆಗಳ ಮತವೇ ನಮ್ಮ್ ಹಿತವೋ. ನಮ್ಮ ಮತದಾಟ ಪ್ಲಾನ್‌ಯುತವೊ’, ಎಂದು ಮಸಾಲ್ದೋಸವಾಣಿಯಂ ಹರಿಬಿಡುವರು.
ಚುನಾವಣೆಯಾದಮೇಲೆ, ’ನೀನ್ಯಾಕೋ ನಿನ್ನ ಹಂಗ್ಯಾಕೋ’, ಅನ್ನುವ (ಪುರಂದರದಾಸಸಮಾನ) ಧುರಂಧರರಿವರು!
ಇವರಲ್ಲಿ ಕೆಲವರು ’ಧರ್ಮವೆ ಜಯವೆಂಬ ದಿವ್ಯಮಂತ್ರ’ವನ್ನು ಜಪಿಸಿದರೆ, ಉಳಿದವರು ’ಜಯವೆ ಧರ್ಮವೆಂಬ ದಿವ್ಯಮಂತ್ರ’ವನ್ನು ಜಪಿಸುವವರು.
’ಮಣ್ಣಿಂದ ಕಾಯ ಮಣ್ಣಿಂದ’, ಎನ್ನುತ್ತ, ಮಣ್ಣನ್ನು ಗಳಿಸಲೆಂದೇ ಎಲೆಕ್ಷನ್ನಿಗೆ ನಿಲ್ಲುವ ’ಮಣ್ಣಿನ ಮಕ್ಕಳು’ ಇವರು.
’ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಲ್ಲ’, ಎಂಬ ದಾಸವಾಣಿಯ ಮರ್ಮವನ್ನರಿತೇ ಇವರು ಆದಷ್ಟು ಬೇಗನೆ ’ಅಷ್ಟೈಶ್ವರ್ಯಭಾಗ್ಯ’ಶಾಲಿಗಳಾಗಿ ಆ ಭಾಗ್ಯವನ್ನು ಸ್ಥಿರವಾಗಿ ಸ್ವಿಸ್ ಬ್ಯಾಂಕಿನಲ್ಲಿಡಲು ಹೊರಟವರು.
’ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ’, ಎಂಬಂತಾಗಬಾರದೆಂದು ಇವರು ನರ-ಹರಿ ಕೊಡುವುದನ್ನೆಲ್ಲ ಉಣ್ಣುತ್ತ ಕೂರುವವರು.
’ಊಟಕ್ಕೆ ಬಂದೆವು ನಾವು, ನಿಮ್ಮ ಆಟಪಾಠವ ಬಿಟ್ಟು ನಮಗೆ ನೀಡ್ರಯ್ಯಾ’, ಎಂದು ಕೇಳಿ ನೀಡಿಸಿಕೊಂಡು ಉಣ್ಣುವವರು.
ಇಂಥ ಪ್ರಾಮಾಣಿಕ, ಸತ್ಯಸಂಧ, ಸಿದ್ಧಾಂತಬದ್ಧ, ನಿಷ್ಪೃಹ, ದೈವಭಕ್ತ, ಅತಿ ವಿಧೇಯ ಮತ್ತು ಜಾತ್ಯತೀತ ರಾಜಕಾರಣಿಗಳನ್ನು ಹೊಂದಿರುವ ಭಾರತೀಯರಾದ ನಾವೇ ಧನ್ಯರು!
ಇಂಥ ಶ್ರೇಷ್ಠರೂ ರೂಢಿಯೊಳಗುತ್ತಮರೂ ಆದ ರಾಜಕಾರಣಿಗಳ ಬಗ್ಗೆ, ಇವರನ್ನು ಆರಿಸಿ ಕಳಿಸುವ ಮತದಾರ ಬಾಂಧವರ ಬಗ್ಗೆ ಮತ್ತು ಇವರ ಅದ್ಭುತ ಆಳ್ವಿಕೆಗೆ ಒಳಪಟ್ಟಿರುವ ಈ ನಾಡಿನ ಬಗ್ಗೆ ಬರೆಯಲು ಇನ್ನು ನನ್ನಲ್ಲಿ ಪದಗಳೇ ಇಲ್ಲ!
ಲೇಖನಸನ್ಯಾಸ ಸ್ವೀಕರಿಸಿ ಕಾಡಿಗೆ ಹೋಗಿ ಕಂದಮೂಲ ತಿಂದುಕೊಂಡಿರುವುದೇ ನನಗಿನ್ನು ಸೂಕ್ತವೆನ್ನಿಸುತ್ತದೆ.
ಅಂತೆಯೇ ಮಾಡುತ್ತೇನೆ.

ಗುರುವಾರ, ಮಾರ್ಚ್ 26, 2009

ಸ್ವರ್ಗ-ನರಕದ ಸುದ್ದಿ

ಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾ ಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು. ಪತ್ರಕರ್ತರಿಗಾಗಿ ಉಭಯ ಕಡೆಗಳಿಗೂ ದೇವೇಂದ್ರನ ಕಚೇರಿಯು ವಿಶೇಷ ಸಾರಿಗೆ ವ್ಯವಸ್ಥೆ ಮಾಡಿತ್ತು. ಕ್ಯಾಮೆರಾ, ಮೊಬೈಲ್ ಫೋನ್, ಕಂಪ್ಯೂಟರ್, ಚಿತ್ರಗ್ರಾಹಕ ಯಂತ್ರಗಳು ಹಾಗೂ ಧ್ವನಿಮುದ್ರಕ ಯಂತ್ರಗಳನ್ನು ನಿಷೇಧಿಸಲಾಗಿತ್ತು. ಪತ್ರಕರ್ತರು ಖಾಲೀಹಾತ್ ಬರಬೇಕಿತ್ತು. ಪೆನ್ನು ಮತ್ತು ಹಾಳೆಗಳನ್ನು ಅಲ್ಲಿಯೇ ಒದಗಿಸುವ ವ್ಯವಸ್ಥೆಯಾಗಿತ್ತು. ದೃಶ್ಯಮಾಧ್ಯಮದವರೂ ಕೂಡ ಈ ನಿಯಮಕ್ಕೆ ಒಳಪಡಬೇಕಾಗಿತ್ತು. ಆ ಪೆನ್ನು-ಹಾಳೆಗಳೋ, ಭೂಲೋಕದಿಂದ ತರಿಸಿದವೇ ಆಗಿದ್ದವು!

ಸ್ವರ್ಗದ ಪತ್ರಿಕಾಗೋಷ್ಠಿಗೆ ಹೋಗಿಬರಲು ಪತ್ರಕರ್ತರ ನೂಕುನುಗ್ಗಲು. ನರಕಕ್ಕೆ ಹೋಗಿಬರಲು ಯಾರೂ ತಯಾರಿಲ್ಲ. ಕೊನೆಗೆ ಜ್ಯೂನಿಯರ್ ಪತ್ರಕರ್ತ-ಕರ್ತೆಯರನ್ನು ನರಕಕ್ಕೆ ಅಟ್ಟಲಾಯಿತು.

ನರಕದ ಪತ್ರಿಕಾಗೋಷ್ಠಿಯಲ್ಲಿ ಯಮನ ವಕ್ತಾರನು, ಭೂಲೋಕದ ರಾಜಕಾರಣಿಗಳಿಗಾಗಿಯೇ ಸ್ಥಾಪಿಸಲಾಗುವ ಸದರಿ ವಿಶೇಷ ಘಟಕದ ಬಗ್ಗೆ ಈ ರೀತಿ ವಿವರಿಸಿದನು:
’ರಾಜಕಾರಣಿಗಳು ತಾವು ಮಾಡಿದ ಪಾಪಗಳಿಗೆ ಭೂಲೋಕದಲ್ಲಿ ಯಾವುದೇ ಶಿಕ್ಷೆಯನ್ನು ಅನುಭವಿಸದೇ ಹಾಯಾಗಿ ಮಜಾಮಾಡಿಕೊಂಡಿದ್ದು ಕೊನೆಗೆ ನರಕಕ್ಕೆ ಬರುತ್ತರಾದ್ದರಿಂದ ನರಕದಲ್ಲಿ ಅವರಿಗೆ ನಾನಾ ಬಗೆಯ ಶಿಕ್ಷೆಗಳನ್ನು ಕೊಡುವ ಅವಶ್ಯಕತೆಯಿದೆ. ಭೂಲೋಕದಿಂದ ಬರುವ ರಾಜಕಾರಣಿಗಳ ಸಂಖ್ಯೆಯೂ ಬರಬರುತ್ತ ಏರತೊಡಗಿದೆ. ಆದ್ದರಿಂದ ಅವರಿಗಾಗಿಯೇ ವಿಶೇಷ ಘಟಕವನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಸಲದ ಭಾರತೀಯ ಯುಗಾದಿಯ ಮುನ್ನಾದಿನವಾದ ಅಮಾವಾಸ್ಯೆಯ ರಾತ್ರಿ ಹನ್ನೆರಡಕ್ಕೆ ಘಟಕದ ಉದ್ಘಾಟನೆ’, ಎಂದು ನರಕದ ವಕ್ತಾರನು ಪತ್ರಕರ್ತರಿಗೆ ವಿವರಿಸಿದನು.

’ಭೂಲೋಕದಲ್ಲಿ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದವರಿಗೆ ಇಲ್ಲಿ ಯಾವ ರೀತಿಯ ಶಿಕ್ಷೆಗಳನ್ನು ಕೊಡುತ್ತೀರಿ?’ ಎಂದು ಇಂಗ್ಲಿಷ್ ದೃಶ್ಯಮಾಧ್ಯಮವೊಂದರ ಪ್ರತಿನಿಧಿ ಕೇಳಿದಳು. (ಅವಳ ಹೆಸರು ಬುರ್ಖಾ ದತ್.)

’ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದವರಿಗೆ ಯಾವ ಶಿಕ್ಷೆಯನ್ನೂ ಇಲ್ಲಿ ನೀಡಲಾಗುವುದಿಲ್ಲ. ಏಕೆಂದರೆ ನೀತಿಸಂಹಿತೆ ಉಲ್ಲಂಘನೆಗಾಗಿ ಅವರೆಲ್ಲ ಭೂಲೋಕದಲ್ಲೇ ಚುನಾವಣಾ ಆಯೋಗದ ಕೈಲಿ ತಕ್ಕ ಶಿಕ್ಷೆ ಅನುಭವಿಸಿಯೇ ಬಂದಿರುತ್ತಾರೆ. ಆದ್ದರಿಂದ ಅದಕ್ಕಾಗಿ ಇಲ್ಲಿ ಪುನಃ ಶಿಕ್ಷೆ ಕೊಡುವ ಅಗತ್ಯವಿಲ್ಲ’, ಎಂದು ನರಕದ ವಕ್ತಾರನು ಉತ್ತರಿದನು.

ಅತ್ತ ಸ್ವರ್ಗದ ಪತ್ರಿಕಾಗೋಷ್ಠಿಯಲ್ಲಿ ಸ್ವರ್ಗದ ವಕ್ತಾರನು ಹೇಳಿದ್ದಿಷ್ಟು:
’ಈ ಸಲದ ಭಾರತೀಯ ಯುಗಾದಿಯ ಆರಂಭದ ಶುಭಗಳಿಗೆಯಾದ ರಾತ್ರಿ ಹನ್ನೆರಡು ಗಂಟೆ, ಒಂದು ಸೆಕೆಂಡಿಗೆ ನಮ್ಮ ವಿಶೇಷ ಘಟಕದ ಉದ್ಘಾಟನೆ. ತಮ್ಮ ನ್ಯಾಯಬದ್ಧ ಬೇಡಿಕೆಗಳನ್ನು ಹಿಡಿದುಕೊಂಡು ಸರ್ಕಾರಿ ಕಚೇರಿಗಳಿಗೆ ಅಥವಾ/ಮತ್ತು ರಾಜಕಾರಣಿಗಳ ಬಳಿಗೆ ಓಡಾಡಿ ಓಡಾಡಿ ಓಡಾಡಿ ಬೇಸತ್ತು ಸತ್ತು ಇಲ್ಲಿಗೆ ಬರುವ ಬಡಪಾಯಿಗಳಿಗೆ ವಿಶೇಷ ಸುಖ-ಸೌಲತ್ತುಗಳನ್ನು ನೀಡುವ ಮೂಲಕ ನ್ಯಾಯ ದೊರಕಿಸಿಕೊಡಲಿಕ್ಕಾಗಿ ಈ ಘಟಕದ ಸ್ಥಾಪನೆ.’

ಆಗ ವರದಾ ನಾಯಕ್ ಎಂಬ ಟಿವಿ ಪತ್ರಕರ್ತೆ ಬಾಲಕಿಯು ಈ ರೀತಿ ಪ್ರಶ್ನೆ ಕೇಳಿದಳು:
’ಮುಖ್ಯಮಂತ್ರಿಗಳ ಜನತಾದರ್ಶನದ ಬಲೆಗೆ ಬಿದ್ದು ಒದ್ದಾಡಿದ ಮಿಕಗಳಿಗೇನಾದರೂ ವಿಶೇಷ ಸುಖ-ಸೌಲತ್ತುಗಳಿವೆಯೆ?’

ವಕ್ತಾರನ ಉತ್ತರ:
’ಖಂಡಿತ ಖಂಡಿತ. ಇಲ್ಲದಿದ್ದರೆ ಹೇಗೆ?’

ಮೇಲಿನ ಎರಡೂ ಪತ್ರಿಕಾಗೋಷ್ಠಿಗಳಿಗೆ (ಊಹ್ಞೂಂ, ಒಂದು ಮೇಲಿನ ಮತ್ತು ಇನ್ನೊಂದು ಕೆಳಗಿನ ಪತ್ರಿಕಾಗೋಷ್ಠಿಗೆ) ಹೋಗಿಬಂದ ಪತ್ರಕರ್ತರನ್ನು ಗುಳಿಗೆಪ್ಪನವರು ವಿಚಾರಿಸಿದಾಗ ಒಂದು ಆಶ್ಚರ್ಯಕರ ಸಂಗತಿ ಹೊರಬಿತ್ತು!
ಸದಾಕಾಲ ಮೃಷ್ಟಾನ್ನಭೋಜನವನ್ನೇ ಉಂಡು ಉಂಡು ನಾಲಗೆ ಜಡ್ಡು ಹಿಡಿಸಿಕೊಂಡಿದ್ದ ಸ್ವರ್ಗದ ವ್ಯವಸ್ಥಾಪಕರು ಇದೇ ಅವಕಾಶವೆಂದು ಪತ್ರಿಕಾಗೋಷ್ಠಿಯಲ್ಲಿ ಸಖ್ಖತ್ ಖಾರದ ಅಡುಗೆ (ಅಂದರೆ ಎನ್.ವಿ. ಅಲ್ಲ) ಮಾಡಿಸಿದ್ದರಂತೆ! ’ಯಮ’ಖಾರವಂತೆ! ಅದೇವೇಳೆ ನರಕದಲ್ಲಿ, ಇದೇ ಚಾನ್ಸ್ ಎಂದು ಅಲ್ಲಿನ ವ್ಯವಸ್ಥಾಪಕರು ಬಗೆಬಗೆಯ ಭಕ್ಷ್ಯಭೋಜ್ಯಗಳ ಭೂರಿಭೋಜನದ ಏರ್ಪಾಟು ಮಾಡಿದ್ದರಂತೆ!

ಇನ್ನೊಂದು ವಿಷಯವೆಂದರೆ, ಬಹುಪಾಲು ನಟನಟಿಯರು, ಜನನಾಯಕರು, ರೂಪದರ್ಶಿಯರು ಇತ್ಯಾದಿಯವರೆಲ್ಲ ನರಕದಲ್ಲೇ ಇದ್ದರಂತೆ! ಪತ್ರಕರ್ತರಿಗೆ ಅವರನ್ನೆಲ್ಲ ಕಾಣುವ ಅವಕಾಶ ದೊರಕಿತಂತೆ. ಸ್ವರ್ಗದಲ್ಲೋ, ಅಪ್ಪಟ ಗಾಂಧಿವಾದಿಗಳು, ನಿಜಸನ್ಯಾಸಿಗಳು, ಮುಗ್ಧರು, ಭೂಲೋಕದಲ್ಲಿ ನಾನಾ ಬಗೆಯ ಶೋಷಣೆಗೊಳಗಾದವರು ಇಂಥವರೇ ತುಂಬಿದ್ದರಂತೆ.

ಸ್ವರ್ಗಕ್ಕೆ ಹೋಗಿಬಂದ ಪತ್ರಕರ್ತರೀಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ!

ಬುಧವಾರ, ಮಾರ್ಚ್ 25, 2009

’ಕೈ’-’ಲಾಗ’-ದವರು

ಇವತ್ತಿನ ಪತ್ರಿಕೆಗಳನ್ನು ನೋಡಿದಿರಾ?
’ಕೈ’ ಲಾಗದ ಇಬ್ಬರು ವೃದ್ಧರು ಪರಸ್ಪರ ಅದೇನನ್ನೋ ಹೇಳಲು-ಕೇಳಲು ಒದ್ದಾಡುತ್ತಿರುವ ಫೋಟೋ ಗಮನಿಸಿದಿರಾ?

ಗಾಲಿ ಕುರ್ಚಿ ಬಿಟ್ಟು ಎದ್ದೇಳಲಾರದ ಅರ್ಜುನಸಿಂಗರು, ’ಕಿವಿ ಸ್ವಲ್ಪ ದೂರ’ (pun intended) ಇರುವ ಪ್ರಣವ ಮುಖರ್ಜಿಗೆ ಏನನ್ನೋ ಹೇಳಲು ತಮ್ಮ ಮುಖ ಮುಂದೆಚಾಚಿ ಒದ್ದಾಡುತ್ತಿರುವರು; ಅದನ್ನು ಕೇಳಿಸಿಕೊಳ್ಳಲು ಪ್ರಣವರು ತಮ್ಮ ಕಿವಿಗೆ ಕೈ ಅಡ್ಡ ಇಟ್ಟುಕೊಂಡು ಒದ್ದಾಡುತ್ತಿರುವರು!
ಹಿಂದೆ ಕುಳಿತ ನಮ್ಮ ಬಿ.ಕೆ.ಹರಿಪ್ರಸಾದರು ಇದನ್ನು ನೋಡಿ ಮುಖ ಎತ್ತಿ ನಗುತ್ತಿರುವರು!

ಇವತ್ತಿನ ಪತ್ರಿಕೆಗಳಲ್ಲೇ ಇನ್ನೊಂದು ಫೋಟೋ ಗಮನಿಸಿದಿರಾ?

ವಯಸ್ಸಾಗಿದ್ದರೂ ತಾನು ನಡೆದಾಡಬಲ್ಲೆ, ತನಗೆ ಚುನಾವಣಾ ಟಿಕೆಟ್ ಬೇಕು, ಎಂದು ಹೇಳಿ, ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿಯ ಮನೆಯವರೆಗೆ ಪಾದಯಾತ್ರೆಗೈದು ತೋರಿಸಲು ಬಿಹಾರಕ್ಕೆ ಬಂದಿಳಿದ ಜಾರ್ಜ್‌ ಫರ್ನಾಂಡಿಸರು ವಿಮಾನ ನಿಲ್ದಾಣದಲ್ಲಿ ದಿಗ್ವಿಜಯಸಿಂಗರ ನೆರವಿನಿಂದ ನಡೆಯುತ್ತಿರುವರು! ನಡೆದಾಡಲೂ ಕಷ್ಟಪಡುವ ಇವರು ತಾನು ಸುದೃಢವಾಗಿರುವೆನೆಂದು ತೋರಿಸಿಕೊಳ್ಳಲು ’ಲಾಗ’ಹಾಕುತ್ತಿರುವರು!

ಇವತ್ತಿನ ಪತ್ರಿಕೆಗಳಲ್ಲೇ ಇನ್ನೂ ಒಂದು ಫೋಟೋ ನೋಡಿದಿರಾ?

83ರ ಹರಯದ ’ಎವರ್ ಗ್ರೀನ್ ಹೀರೊ’ ದೇವಾನಂದ್ ’ಚಾರ್ಜ್‌‌ಶೀಟ್’ ಸಲ್ಲಿಸುತ್ತಿರುವ ಫೋಟೋ! ಅರ್ಥಾತ್ ತನ್ನ ಮುಂಬರುವ ಚಿತ್ರ ’ಚಾರ್ಜ್‌‌ಶೀಟ್’ ಬಗ್ಗೆ ಮಾತನಾಡುತ್ತಿರುವ ಫೋಟೋ.

ಕಾರುಬಾರು ನೋಡಿದರೆ ಪ್ರಣವ್, ದೇವಾನಂದ್ ಓಕೆ; ಅರ್ಜುನ್, ಜಾರ್ಜ್‌ (ಇನ್ನೂ) ಯಾಕೆ?
ವಾಜಪೇಯಿಯಹಾಗೆ ಡೀಸೆಂಟಾಗಿ ಮನೇರಿಲೋಕಾಗೋಲ್ವೆ?
ಈ ಅ(ರ್ಜುನ್)ಜಾ(ರ್ಜ್‌)ರಿಷ್ಟರ ಸಾಲಿಗೆ ಮಹಾ-ದ್ರಾವಿಡ ವೃದ್ಧ (ಕರುಣಾ)ನಿಧಿಯನ್ನೂ ಮತ್ತು ಮಹಾ-ರಾಷ್ಟ್ರೀಯ(ವಾದಿ) ಬಾಳ್ ಠಾಕ್ರೆಯನ್ನೂ ಸೇರಿಸಬಹುದಷ್ಟೆ.
(ನಡೆಯೋದು ನೋಡಿದರೆ, ’ರಾಮ)ರಾಮಾ!’ಈಶ್ವರ ಠಾಕೂರ್ ಏನು ಕಮ್ಮಿಯೇ?
ರಾಮೇಶ್ವರ ಠಾ’ಕೂರ’ರಿಗೆ ಕೂರಲೂ ಕಷ್ಟ, ಏಳಲೂ ಕಷ್ಟ!
ನಮ್ಮ ದೇವೇಗೌಡರೂ ರೇಸ್‌ನಲ್ಲಿದ್ದಾರಾದರೂ ಸಂಪೂರ್ಣ ಅರ್ಹತೆ ಇನ್ನೂ ಪಡೆದಿಲ್ಲ; ಪಡೆಯುವುದೂ ಬೇಡವೆಂಬುದು ನಮ್ಮ ಹಾರೈಕೆ. (ಏಕೆಂದರೆ, ಇದು ಓಡಲಾರದವರ-ಓಡಾಡಲಾರದವರ ರೇಸ್ ತಾನೆ.)
ರೇಸಿಗರ ಪಟ್ಟಿ ಇನ್ನೂ ಉದ್ದವಿದೆ.

ಹೇಸಿಗೆ ಹುಟ್ಟುವಷ್ಟು ಒದ್ದಾಟ ಮಾಡಿಕೊಂಡು ಅಧಿಕಾರದ ರೇಸಿಗೆ ಇಳಿಯುವ ಈ ’ಕೈ’-’ಲಾಗ’ದ ವಯೋವೃದ್ಧರನ್ನು ಕಂಡು ಅಯ್ಯೋ ಅನ್ನಬೇಕೆನ್ನಿಸುತ್ತದೆ. ಆದರೆ ನಾನು ಅನ್ನುವುದಿಲ್ಲ. ಏಕೆಂದರೆ, ಅಧಿಕಾರದ ಗದ್ದುಗೆ ಏರಿ(!) ಇವರು ಸುದ್ದಿಯಲ್ಲಿದ್ದುಕೊಂಡು ಆರಾಮಾಗಿ ನಿದ್ದೆಹೋಗುತ್ತಾರೆ; ಇಂಥವರ ಆಳ್ವಿಕೆಯಿಂದ ಅನುಭವಿಸುವುದು ಪ್ರಜೆಗಳಾದ ನಾವು.

ನಮ್ಮ ಬಗ್ಗೆಯೂ ಯಾರೂ ಅಯ್ಯೋ ಅನ್ನಬೇಕಾದ್ದಿಲ್ಲ. ಏಕೆಂದರೆ, ಇಂಥವರನ್ನು ಆರಿಸಿ ಕಳಿಸುವುದೇ/ಇಂಥವರ ಅಧಿಕಾರ ಚಲಾವಣೆಗೆ ಅನುವು ಮಾಡಿಕೊಡುವುದೇ ನಾವು ತಾನೆ?
ಆದ್ದರಿಂದ, ಮಾಡಿದ್ದುಣ್ಣೋ ಮಹರಾಯ!

ಟೈಂ ಕಿಲ್ಲರ್ (bullets ಅಲ್ಲ, pillets) ‍

-1-
ಹೆಸರು ಮಲ್ಲಿಕಾ
ಕೆಲಸ ಕಿಲ್ಲಿಕಾ
ಶಿಕ್ಷೆ ಗಲ್ಲ್, ಇಕಾ.

-2-
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ
ಮೂರು ರೂಪಾಯಿಗೆ ಕೆಜಿ ಅಕ್ಕಿ-ಗೋಧಿ!
ಕೊಟ್ಟರೆ ಒಂದು ಪಕ್ಷ ನಾಳೆ
ತಿಂದೋರಿಗೆ ಗ್ಯಾರಂಟಿ ವಾಂತಿ-ಭೇದಿ!

-3-
ಸೌತ್ ಆಫ್ರಿಕಾದಲ್ಲಿ ಐಪಿಎಲ್ ಕ್ರಿಕೆಟ್.
ಇಂಡಿಯಾದಲ್ಲಿ ಟೂರ್ನಿ kicked the ಬಕೆಟ್!
ಅಂದು ಆಫ್ರಿಕದಲ್ಲಿ
eradication of the apartheid.
ಇಂದು ಅಲ್ಲಿ
rehabilitation of the disabled!

-4-
’ಈ ಸಲದ ಚುನಾವಣೇಲಿ
ಮುಖವಾಡಗಳದ್ದೇ ಕಾರುಬಾರಂತೆ.’
’ಪ್ರತಿ ಸಲವೂ ನಡೀತಿರೋದು
ಅದೇ ಅಲ್ದೆ ಇನ್ನೇನಂತೆ?’