ಬುಧವಾರ, ಮಾರ್ಚ್ 25, 2009

’ಕೈ’-’ಲಾಗ’-ದವರು

ಇವತ್ತಿನ ಪತ್ರಿಕೆಗಳನ್ನು ನೋಡಿದಿರಾ?
’ಕೈ’ ಲಾಗದ ಇಬ್ಬರು ವೃದ್ಧರು ಪರಸ್ಪರ ಅದೇನನ್ನೋ ಹೇಳಲು-ಕೇಳಲು ಒದ್ದಾಡುತ್ತಿರುವ ಫೋಟೋ ಗಮನಿಸಿದಿರಾ?

ಗಾಲಿ ಕುರ್ಚಿ ಬಿಟ್ಟು ಎದ್ದೇಳಲಾರದ ಅರ್ಜುನಸಿಂಗರು, ’ಕಿವಿ ಸ್ವಲ್ಪ ದೂರ’ (pun intended) ಇರುವ ಪ್ರಣವ ಮುಖರ್ಜಿಗೆ ಏನನ್ನೋ ಹೇಳಲು ತಮ್ಮ ಮುಖ ಮುಂದೆಚಾಚಿ ಒದ್ದಾಡುತ್ತಿರುವರು; ಅದನ್ನು ಕೇಳಿಸಿಕೊಳ್ಳಲು ಪ್ರಣವರು ತಮ್ಮ ಕಿವಿಗೆ ಕೈ ಅಡ್ಡ ಇಟ್ಟುಕೊಂಡು ಒದ್ದಾಡುತ್ತಿರುವರು!
ಹಿಂದೆ ಕುಳಿತ ನಮ್ಮ ಬಿ.ಕೆ.ಹರಿಪ್ರಸಾದರು ಇದನ್ನು ನೋಡಿ ಮುಖ ಎತ್ತಿ ನಗುತ್ತಿರುವರು!

ಇವತ್ತಿನ ಪತ್ರಿಕೆಗಳಲ್ಲೇ ಇನ್ನೊಂದು ಫೋಟೋ ಗಮನಿಸಿದಿರಾ?

ವಯಸ್ಸಾಗಿದ್ದರೂ ತಾನು ನಡೆದಾಡಬಲ್ಲೆ, ತನಗೆ ಚುನಾವಣಾ ಟಿಕೆಟ್ ಬೇಕು, ಎಂದು ಹೇಳಿ, ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿಯ ಮನೆಯವರೆಗೆ ಪಾದಯಾತ್ರೆಗೈದು ತೋರಿಸಲು ಬಿಹಾರಕ್ಕೆ ಬಂದಿಳಿದ ಜಾರ್ಜ್‌ ಫರ್ನಾಂಡಿಸರು ವಿಮಾನ ನಿಲ್ದಾಣದಲ್ಲಿ ದಿಗ್ವಿಜಯಸಿಂಗರ ನೆರವಿನಿಂದ ನಡೆಯುತ್ತಿರುವರು! ನಡೆದಾಡಲೂ ಕಷ್ಟಪಡುವ ಇವರು ತಾನು ಸುದೃಢವಾಗಿರುವೆನೆಂದು ತೋರಿಸಿಕೊಳ್ಳಲು ’ಲಾಗ’ಹಾಕುತ್ತಿರುವರು!

ಇವತ್ತಿನ ಪತ್ರಿಕೆಗಳಲ್ಲೇ ಇನ್ನೂ ಒಂದು ಫೋಟೋ ನೋಡಿದಿರಾ?

83ರ ಹರಯದ ’ಎವರ್ ಗ್ರೀನ್ ಹೀರೊ’ ದೇವಾನಂದ್ ’ಚಾರ್ಜ್‌‌ಶೀಟ್’ ಸಲ್ಲಿಸುತ್ತಿರುವ ಫೋಟೋ! ಅರ್ಥಾತ್ ತನ್ನ ಮುಂಬರುವ ಚಿತ್ರ ’ಚಾರ್ಜ್‌‌ಶೀಟ್’ ಬಗ್ಗೆ ಮಾತನಾಡುತ್ತಿರುವ ಫೋಟೋ.

ಕಾರುಬಾರು ನೋಡಿದರೆ ಪ್ರಣವ್, ದೇವಾನಂದ್ ಓಕೆ; ಅರ್ಜುನ್, ಜಾರ್ಜ್‌ (ಇನ್ನೂ) ಯಾಕೆ?
ವಾಜಪೇಯಿಯಹಾಗೆ ಡೀಸೆಂಟಾಗಿ ಮನೇರಿಲೋಕಾಗೋಲ್ವೆ?
ಈ ಅ(ರ್ಜುನ್)ಜಾ(ರ್ಜ್‌)ರಿಷ್ಟರ ಸಾಲಿಗೆ ಮಹಾ-ದ್ರಾವಿಡ ವೃದ್ಧ (ಕರುಣಾ)ನಿಧಿಯನ್ನೂ ಮತ್ತು ಮಹಾ-ರಾಷ್ಟ್ರೀಯ(ವಾದಿ) ಬಾಳ್ ಠಾಕ್ರೆಯನ್ನೂ ಸೇರಿಸಬಹುದಷ್ಟೆ.
(ನಡೆಯೋದು ನೋಡಿದರೆ, ’ರಾಮ)ರಾಮಾ!’ಈಶ್ವರ ಠಾಕೂರ್ ಏನು ಕಮ್ಮಿಯೇ?
ರಾಮೇಶ್ವರ ಠಾ’ಕೂರ’ರಿಗೆ ಕೂರಲೂ ಕಷ್ಟ, ಏಳಲೂ ಕಷ್ಟ!
ನಮ್ಮ ದೇವೇಗೌಡರೂ ರೇಸ್‌ನಲ್ಲಿದ್ದಾರಾದರೂ ಸಂಪೂರ್ಣ ಅರ್ಹತೆ ಇನ್ನೂ ಪಡೆದಿಲ್ಲ; ಪಡೆಯುವುದೂ ಬೇಡವೆಂಬುದು ನಮ್ಮ ಹಾರೈಕೆ. (ಏಕೆಂದರೆ, ಇದು ಓಡಲಾರದವರ-ಓಡಾಡಲಾರದವರ ರೇಸ್ ತಾನೆ.)
ರೇಸಿಗರ ಪಟ್ಟಿ ಇನ್ನೂ ಉದ್ದವಿದೆ.

ಹೇಸಿಗೆ ಹುಟ್ಟುವಷ್ಟು ಒದ್ದಾಟ ಮಾಡಿಕೊಂಡು ಅಧಿಕಾರದ ರೇಸಿಗೆ ಇಳಿಯುವ ಈ ’ಕೈ’-’ಲಾಗ’ದ ವಯೋವೃದ್ಧರನ್ನು ಕಂಡು ಅಯ್ಯೋ ಅನ್ನಬೇಕೆನ್ನಿಸುತ್ತದೆ. ಆದರೆ ನಾನು ಅನ್ನುವುದಿಲ್ಲ. ಏಕೆಂದರೆ, ಅಧಿಕಾರದ ಗದ್ದುಗೆ ಏರಿ(!) ಇವರು ಸುದ್ದಿಯಲ್ಲಿದ್ದುಕೊಂಡು ಆರಾಮಾಗಿ ನಿದ್ದೆಹೋಗುತ್ತಾರೆ; ಇಂಥವರ ಆಳ್ವಿಕೆಯಿಂದ ಅನುಭವಿಸುವುದು ಪ್ರಜೆಗಳಾದ ನಾವು.

ನಮ್ಮ ಬಗ್ಗೆಯೂ ಯಾರೂ ಅಯ್ಯೋ ಅನ್ನಬೇಕಾದ್ದಿಲ್ಲ. ಏಕೆಂದರೆ, ಇಂಥವರನ್ನು ಆರಿಸಿ ಕಳಿಸುವುದೇ/ಇಂಥವರ ಅಧಿಕಾರ ಚಲಾವಣೆಗೆ ಅನುವು ಮಾಡಿಕೊಡುವುದೇ ನಾವು ತಾನೆ?
ಆದ್ದರಿಂದ, ಮಾಡಿದ್ದುಣ್ಣೋ ಮಹರಾಯ!

5 ಕಾಮೆಂಟ್‌ಗಳು:

  1. ಸರ್...
    ರಾಜಕೀಯಕ್ಕೂ "ನಿವ್ರತ್ತಿಯ ವಯಸ್ಸು" ಕಡ್ಡಾಯ ಮಾಡಬೇಕು..
    ವಯಸ್ಸಾದವರು ಸಲಹೆ ಮಾತ್ರ ಕೊಡಬೇಕು..
    ಸಕ್ರೀಯ ರಾಜಕಾರಣದಿಂದ ದೂರವಾಗಿರಬೇಕು..

    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  2. ಸರ್,
    ಇ೦ತಹ "ಕೈ" ಲಾಗದವರಿ೦ದಲೇ ನಮ್ಮ ದೇಶ ಈ ಸ್ಥಿತಿಗೆ ಬ೦ದಿದೆ. ಮು೦ದೇನೋ,?? ದೇವ್ರೇ ಗತಿ.

    ಪ್ರತ್ಯುತ್ತರಅಳಿಸಿ
  3. ನನ್ನ ಬರಹಕ್ಕೆ ಪೂರಕ ಅಭಿಪ್ರಾಯಗಳನ್ನು ನೀಡಿದ್ದೀರಿ.
    ಇಬ್ಬರಿಗೂ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ನಿಮ್ಮದೊಂದು ಬ್ಲಾಗ್ ಇದೆಯೆಂದು ತಿಳಿದದ್ದೇ ನೆನ್ನೆ. ತಿಳಿದು ಖುಷಿಯಾಯಿತು.ಇನ್ನು ಮುಂದೆ ಪತ್ರಿಕೆಯಲ್ಲಿ ಮಾತ್ರವಲ್ಲದೆ ಬ್ಲಾಗ್ ನಲ್ಲೂ ನಿಮ್ಮ ವಿಡಂಬನಾತ್ಮಕ ಬರಹ ನೋಡಬಹುದು.
    ನಿಮ್ಮ ಈ ಬರಹ ಓದಿದರೆ ಯಾರಿಗಾದರೂ ‘ನಡೆಯಲೂ’ ಆರದವರ ಬಗ್ಗೆ ಹೇಸಿಗೆ ಹುಟ್ಟುವುದು ನಿಜ. ಆದರೆ ಅವರಿಗೆ?

    ಪ್ರತ್ಯುತ್ತರಅಳಿಸಿ
  5. ..ಅವರು, "ಅಹಮೇವ ಪಾರ್ಥ, ’ಅಹಂ’ ಫರ್ನಾಂಡಿಸ್ ತಥಾ", ಅನ್ನುತ್ತಾರೆ ಸ್ವಾಮೀ, ಚಂದ್ರಕಾಂತಾ!

    ಪ್ರತ್ಯುತ್ತರಅಳಿಸಿ