gandhi ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
gandhi ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮೇ 12, 2009

ನೀವು ಕೇಳದಿರಿ - 10

* ಮತ ಎಣಿಕೆಯ ದಿನವಾದ ಇದೇ ದಿನಾಂಕ 16 ಹಿಂದು ತಿಥಿ ಪ್ರಕಾರ ’ಶ್ರೀರಾಮ ಪಟ್ಟಾಭಿಷೇಕ’ದ ದಿನ.

- ಅದಕ್ಕೇ ಅಡ್ವಾಣಿ, ’history repeats’, ಅಂತ ಕನಸು ಕಾಣುತ್ತಿದ್ದಾರೆ!

+++

* ವರುಣ್ ಗಾಂಧಿ ಪ್ರಧಾನಿಯಾದರೆ ದೇಶದಲ್ಲಿ ಕುಟುಂಬಯೋಜನೆ ಕಡ್ಡಾಯವಂತೆ?

- ಹೌದು. ರಾಹುಲ್ ಗಾಂಧಿ ಪ್ರಧಾನಿಯಾದರೆ (ಸ್ವ)ಕುಟುಂಬ ಕಲ್ಯಾಣ ಕಡ್ಡಾಯ.
ಮನಮೋಹನ್ ಸಿಂಗ್ ಪ್ರಧಾನಿಯಾದರೆ ಅವರಿಗೆ ಈ ದೇಶಕ್ಕಿಂತ ಸೋನಿಯಾ ಮೇಡಂ ಆದೇಶ ಕಡ್ಡಾಯ.
ಅಡ್ವಾಣಿ ಪ್ರಧಾನಿಯಾದರೆ ದೇಶಾದ್ಯಂತ ಪ್ರತಿನಿತ್ಯ ರಾಮ(ಮಂದಿರ)ಭಜನೆ ಕಡ್ಡಾಯ.
ಮೋದಿ ಪ್ರಧಾನಿಯಾದರೆ ದೇಶದ ಎಲ್ಲೆಡೆ (ಮಾತಿನ) ಮೋಡಿ ಪ್ರದರ್ಶನ ಕಡ್ಡಾಯ.
ಲಾಲೂ ಪ್ರಧಾನಿಯಾದರೆ ಭ್ರಷ್ಟಾಚಾರ ಕಡ್ಡಾಯ.
ಪಾಸ್ವಾನ್ ಪ್ರಧಾನಿಯಾದರೆ ಬಿಹಾರಿಗಳಿಗೆ ರೈಲ್ವೆ ಫ್ರೀ ಪಾಸ್ ಕಡ್ಡಾಯ.
ಮಾಯಾವತಿ ಪ್ರಧಾನಿಯಾದರೆ ದೇಶಾದ್ಯಂತ ತನ್ನ ಬರ್ತ್‌ಡೇ (with gifts) ಕಡ್ಡಾಯ. (ಕಜ್ಜಾಯ.)
ಮುಲಾಯಂ ಪ್ರಧಾನಿಯಾದರೆ ಗೂಂಡಾಗಿರಿ ಕಡ್ಡಾಯ.
ಪವಾರ್ ಪ್ರಧಾನಿಯಾದರೆ ಮಗಳು ಸುಪ್ರಿಯಾಗೆ ಮಂತ್ರಿಗಿರಿ ಕಡ್ಡಾಯ.
ಕರಟ್ ಪ್ರಧಾನಿಯಾದರೆ ಜನರ ಕೈಗೆ ಕರಟ ಕಡ್ಡಾಯ.
ದೇವೇಗೌಡರು ಪ್ರಧಾನಿಯಾದರೆ ದೇಶಾದ್ಯಂತ ರಾಗಿಮುದ್ದೆ ಊಟ ಕಡ್ಡಾಯ.

+++

* ’ಪ್ರಜಾರಾಜ್ಯಂ’ ಪಕ್ಷ ಹೀನಾಯವಾಗಿ ಸೋತರೆ?

- ಆಗ ಪಕ್ಷದ ಹೆಸರನ್ನು ’ವಜಾರಾಜ್ಯಂ’ ಎಂದು ಬದಲಾಯಿಸಲಾಗುವುದು.

+++

* ಕ್ರಿಕೆಟ್‌ನಲ್ಲಿ ಜೀವಮಾನದ ನಿಷೇಧ; ಆದರೆ ಲೋಕಸಭೆಗೆ ಸ್ಪರ್ಧಿಸಬಹುದೇ?!

- ಲೋಕಸಭೆಯು ಈ ದೇಶಕ್ಕೆ ಕ್ರಿಕೆಟ್‌ನಷ್ಟು ಮುಖ್ಯ ಅಲ್ಲವಲ್ಲಾ, ಆದ್ದರಿಂದ ಸ್ಪರ್ಧಿಸಬಹುದು.

+++

* ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯ ನಿಜವಾಗುತ್ತೆಯೆ?

- ಒಂದು ಪ್ರಶ್ನೆಗೆ ಸ್ವಾಮೀಜಿ ರೂ.3000 ತಗೋತಾರೆ. ನನಗೆ ರೂ.6000 ಕೊಡಿ, ಉತ್ತರ ಹೇಳ್ತೀನಿ.

+++

* ’ಅಡ್ವಾಣಿಗೆ ಪ್ರಧಾನಿಯಾಗುವ ಯೋಗ ಇಲ್ಲ’, ಅಂತಾರೆ ಕೋಡಿಮಠದ ಸ್ವಾಮೀಜಿ!

- ಆ ಸ್ವಾಮೀಜಿಯನ್ನು ಭೆಟ್ಟಿಯಾಗಿ ಆಶೀರ್ವಾದ ಪಡೆದರೆ ಯೋಗ ಒದಗಿಬರಬಹುದು.

+++

* ಕೋಡಿಮಠದ ಭವಿಷ್ಯವಾಣಿ ಪ್ರಕಾರ ನೂತನ ಕೇಂದ್ರ ಸರ್ಕಾರದ ಆಡಳಿತ ಕೇವಲ ಎರಡೇ ವರ್ಷ!

- ಅನಂತರ ಕೋಡಿಮಠದ ಆಡಳಿತ.

+++

* ಇಲ್ಲೊಬ್ಬ, ’ಹುಚ್ಚುಖೋಡಿಮಠ’, ಅಂತಾನೆ!

- ಅಯ್ಯೋ, ಅವನಿಗೆ ಸುಮ್ಮನಿರೋಕೆ ಹೇಳಿ. ಇಲ್ಲದಿದ್ದರೆ ಸ್ವಾಮೀಜಿ ಅವನ ಭವಿಷ್ಯ ಹೇಳಿಬಿಡ್ತಾರೆ!

+++

* ’ಸಂಸ್ಕೃತದಿಂದ ಮಾತ್ರ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ’, ಅಂದಿದ್ದಾರೆ ಪೇಜಾವರ ಶ್ರೀಗಳು.

- ಮಠದ ಸಂಸ್ಕೃತವೋ, ಪೋಲೀಸ್ ಇಲಾಖೆಯ ಸಂಸ್ಕೃತವೋ ಗೊತ್ತಾಗಲಿಲ್ಲ.

+++

* ’ಉದ್ಯಾನ ನಗರಿ’ ಬೆಂಗಳೂರಿನ ಮರಗಳೆಲ್ಲ ಹೋದರೆ ಗತಿ?

- ಚಿಂತೆ ಬೇಡ, ಆಗ ಬೆಂಗಳೂರು ಆಗುತ್ತೆ ’ಅಮರಾವತಿ’!

+++

* ವನವಾಸಕ್ಕೆ ಹೋಗ್ತೀರಂತೆ?

- ಪತ್ರಿಕಾಗೋಷ್ಠೀಲಿ ನಾನು ಈ ಮಾತನ್ನು off the record ಹೇಳಿದ್ದು. ಆದ್ದರಿಂದ ನಾನು ಈ ಮಾತನ್ನು ಹೇಳಿಯೇ ಇಲ್ಲ.

+++

* ’ನೀವು ಕೇಳದಿರಿ’ಗೆ ಹತ್ತು.

- ಎಲೆ ಮುದುರೆತ್ತು.

--0--

ಮಂಗಳವಾರ, ಮೇ 5, 2009

ನೀವು ಕೇಳದಿರಿ - 4 (ಸಿನಿಮಾ ಸ್ಪೆಷಲ್)

* ’ಹೊಡಿಮಗ’ ಈಗ ’ಹ್ಯಾಟ್ರಿಕ್ ಹೊಡಿಮಗ’. ಅದರ ಡೈರೆಕ್ಟರ್?

- ’ಟ್ರಿಕ್ ಡೈರೆಕ್ಟರ್’.

+++

* ಗಣೇಶ ’ಗೋಲ್ಡನ್ ಸ್ಟಾರ್’. ಅಂಬರೀಷ್?

- ’ಓಲ್ಡನ್ ಸ್ಟಾರ್’.

+++

* ಚುನಾವಣೆ ವೇಳೆ ಒಂದಷ್ಟು ದಿನ ಅಂಬಿ ತನ್ನ ಪಕ್ಷದ ವಿರುದ್ಧವೇ (ಅನಧಿಕೃತವಾಗಿ) ಬಂಡೆದ್ದದ್ದು ಯಾಕೆ?

- ತಾನು ’ರೆಬೆಲ್ ಸ್ಟಾರ್’ ಎಂಬುದು ಇದ್ದಕ್ಕಿದ್ದಂತೆ ನೆನಪಾಗಿರಬೇಕು!

+++

* ಪೂಜಾ ಗಾಂಧಿ ಕನ್ನಡ ಕಲೀತಿದ್ದಾರಾ?

- ಕಲೀತಿದ್ದಾರೆ ಕಲೀತಿದ್ದಾರೆ; ಕನ್ನಡದಲ್ಲೇ ನುಲೀತಿದ್ದಾರೆ; ಅದನ್ನು ಕೇಳಿ / ನೋಡಿ ಪಡ್ಡೆ ಹೈಕಳು ನಲೀತಿದ್ದಾರೆ!

+++

* ಪೂಜಾ ಗಾಂಧಿಯ ವೆಬ್‌ಸೈಟ್ ತಗೊಂಡು ನಾನೇನ್ಮಾಡಲಿ?

- Sight seeing ಮಾಡೋ ಮಾರಾಯ! ಕಣ್ಣು ತಂಪಾಗುತ್ತೆ!

+++

* ’ಕಿರಣ್ ಬೇಡಿ’ ಮಾಲಾಶ್ರೀ ಅವರ ನೆಕ್ಸ್ಟ್ ಫಿಲಂ ಹೆಸರೇನು?

- ’ಹೆದರ್‌ಬೇಡಿ’.
(ಈ ಹೆಸರಿನ ಮೇಲ್ಗಡೆ ಸಣ್ಣಕ್ಷರಗಳಲ್ಲಿ, ’ಸೈಜ್ ನೋಡಿ’ ಎಂದು ಬರೆದಿರುತ್ತೆ.)

+++

* ಪರಭಾಷಾ ನಟಿಯೋರ್ವಳಿಗೆ ಕನ್ನಡದಲ್ಲಿ ಮಾತಾಡಲು ನಾಲಗೆ ತಿರುಗೋಲ್ವಂತೆ!

- ಸ್ಟಾರ್‌ಟಂಗ್ ಟ್ರಬಲ್ ಪಾಪ!

--೦--

ಮಂಗಳವಾರ, ಮಾರ್ಚ್ 24, 2009

ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗ

ಪ್ರಿಯಾಂಕಾ ಉವಾಚ :
ವರುಣ್ ಗಾಂಧಿ ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಳ್ಳಲಿ.

ಶ್ರೀ ಗುಳಿಗೆಪ್ಪ ಉವಾಚ :
ವರುಣ್ ಗಾಂಧಿಯು ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರಂತೆಯೇ ನಡೆಯುತ್ತಿದ್ದಾನೆ.

’ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ’ ಎಂದ ಶ್ರೀಕೃಷ್ಣನ ಅಪರಾವತಾರವೇ ತಾನೆಂದು ತಿಳಿದುಕೊಂಡು (ಹಿಂದು)ಧರ್ಮಸಂಸ್ಥಾಪನೆಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದಾನೆ. (therefore ಆತನಿಗೆ ಉಘೇಉಘೇ!)

’ಅಸೌ ಮಯಾ ಹತಃ ಶತ್ರುಃ ಹನಿಷ್ಯೇ ಚಾಪರಾನಪಿ’ (ಅಧ್ಯಾಯ ೧೬, ಶ್ಲೋಕ ೧೪), ಅರ್ಥಾತ್, ’ಆ ಶತ್ರುವು ನನ್ನಿಂದ ಕೊಲ್ಲಲ್ಪಟ್ಟಿದ್ದಾನೆ; ಇತರರನ್ನೂ ನಾನು ಕೊಲ್ಲುತ್ತೇನೆ’, ಎಂದು ಸಾರಿ ಮುನ್ನಡೆದಿದ್ದಾನೆ. (ಸ್ಸಾರಿ, ವಿವರಣೆ ಅಗತ್ಯ: ಕೊಲ್ಲಲ್ಪಟ್ಟಿದ್ದು ಇಲ್ಲಿ ದೇಹವಲ್ಲ, ಮನಸ್ಸು.)

’ಪಶ್ಯ ಮೇ ಪಾರ್ಥ, ರೂಪಾಣಿ ಶತಶೋಥ ಸಹಸ್ರಶಃ’ (೧೧, ೫), ಎಂದ ಶ್ರೀಕೃಷ್ಣನಂತೆ ಈತನೂ ತನ್ನ ನೂರಾರು-ಸಹಸ್ರಾರು ರೂಪಗಳನ್ನು ಒಂದೊಂದಾಗಿ ತೋರಿಸಲು ಶುರುಮಾಡಿದ್ದಾನೆ.

’ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ’ (೯, ೩೧), ಅರ್ಥಾತ್, ’(ದುರಾಚಾರಿಯೂ ನನ್ನನ್ನು ಭಜಿಸಿದರೆ) ಬೇಗನೆ ಆತ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತ ಶಾಂತಿಯನ್ನು ಹೊಂದುತ್ತಾನೆ’, ಎಂದ ಶ್ರೀಕೃಷ್ಣನಂತೆ ವರುಣ್ ಕೂಡ, ’..ನನ್ನ(ಮಾತ)ನ್ನು ಭಜಿಸಿದರೆ ನೀವು (ಹಿಂದು)ಧರ್ಮಾತ್ಮರಾಗುತ್ತೀರಿ ಮತ್ತು ಶಾಶ್ವತ ಪರಿಹಾರವನ್ನು/ಶಾಂತಿಯನ್ನು ಹೊಂದುತ್ತೀರಿ’, ಎಂದು ನಮಗೆಲ್ಲ ಉಪ-ದೇಶಿಸುತ್ತಿದ್ದಾನೆ.

ಇಂತಿರುವ ವರುಣ್ ಗಾಂಧಿಯು, ಈಗ ಇದೋ, ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರನುಸಾರ ನಡೆಯುವಂತೆ ಪ್ರಿಯಾಂಕಾಳಿಗೇ ಆಣ್-ಅತಿ ಮಾಡುತ್ತಿದ್ದಾನೆ!

ವರುಣ್ ಉವಾಚ :
’ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ....ತಸ್ಯ ಪ್ರಜ್ಞಾ ಪ್ರತಿಷ್ಠಿತಾ’ (೨, ೫೮), ’ಜನರು ಯಾವಾಗ ಚಾಯ್ ಕಪ್ಪನ್ನು ಸಂಹರಿಸುತ್ತಾರೋ, ಯಾನೇ, ಟೀಯನ್ನು ಒಳಗಿಳಿಸಿ ಕಪ್ ಖಾಲಿಮಾಡುತ್ತಾರೋ ಆಗ ಅವರು ಪ್ರತಿಷ್ಠಿತರು; ಓಹ್, ಕ್ಷಮಿಸಿ, ಗಾಡಿ ಹಳಿ ತಪ್ಪಿತು, ಆಮೆಯು ತನ್ನ ಕಾಲುಗಳನ್ನು ಎಲ್ಲ ದಿಕ್ಕುಗಳಿಂದಲೂ (ಚಿಪ್ಪಿನ) ಒಳಕ್ಕೆಳೆದುಕೊಳ್ಳುವಂತೆ, ಪ್ರಿಯಾಂಕಾ, ಯಾವಾಗ ನೀನು ಬಾಯಿ ಮುಚ್ಕೊಂಡು ಗಪ್‌ಚುಪ್ ಆಗುತ್ತೀಯೋ ಆಗ ನಿನ್ನ ಪ್ರಜ್ಞೆ ಪ್ರತಿಷ್ಠಿತ ಎಂದರ್ಥ, ಆದ್ದರಿಂದ ನೀನು ಅಂಥ ಸ್ಥಿತಪ್ರಜ್ಞಳಾಗು; ಮಾತಾಡ್ಬೇಡ ಸುಮ್ಕಿರು.’

ವರುಣನ ಈ ಮಾತು’ಗುಳಿಗೆ’ ಪ್ರಿಯಾಂಕಾ ಏನೆನ್ನುವಳು?
’ಯಾಕಾ ತಮ್ಮಾ, ಇಂಗಾಡ್ತಿ?!’ ಎನ್ನುವಳು.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗಃ