ವರುಣ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವರುಣ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮಾರ್ಚ್ 24, 2009

ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗ

ಪ್ರಿಯಾಂಕಾ ಉವಾಚ :
ವರುಣ್ ಗಾಂಧಿ ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಳ್ಳಲಿ.

ಶ್ರೀ ಗುಳಿಗೆಪ್ಪ ಉವಾಚ :
ವರುಣ್ ಗಾಂಧಿಯು ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರಂತೆಯೇ ನಡೆಯುತ್ತಿದ್ದಾನೆ.

’ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ’ ಎಂದ ಶ್ರೀಕೃಷ್ಣನ ಅಪರಾವತಾರವೇ ತಾನೆಂದು ತಿಳಿದುಕೊಂಡು (ಹಿಂದು)ಧರ್ಮಸಂಸ್ಥಾಪನೆಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದಾನೆ. (therefore ಆತನಿಗೆ ಉಘೇಉಘೇ!)

’ಅಸೌ ಮಯಾ ಹತಃ ಶತ್ರುಃ ಹನಿಷ್ಯೇ ಚಾಪರಾನಪಿ’ (ಅಧ್ಯಾಯ ೧೬, ಶ್ಲೋಕ ೧೪), ಅರ್ಥಾತ್, ’ಆ ಶತ್ರುವು ನನ್ನಿಂದ ಕೊಲ್ಲಲ್ಪಟ್ಟಿದ್ದಾನೆ; ಇತರರನ್ನೂ ನಾನು ಕೊಲ್ಲುತ್ತೇನೆ’, ಎಂದು ಸಾರಿ ಮುನ್ನಡೆದಿದ್ದಾನೆ. (ಸ್ಸಾರಿ, ವಿವರಣೆ ಅಗತ್ಯ: ಕೊಲ್ಲಲ್ಪಟ್ಟಿದ್ದು ಇಲ್ಲಿ ದೇಹವಲ್ಲ, ಮನಸ್ಸು.)

’ಪಶ್ಯ ಮೇ ಪಾರ್ಥ, ರೂಪಾಣಿ ಶತಶೋಥ ಸಹಸ್ರಶಃ’ (೧೧, ೫), ಎಂದ ಶ್ರೀಕೃಷ್ಣನಂತೆ ಈತನೂ ತನ್ನ ನೂರಾರು-ಸಹಸ್ರಾರು ರೂಪಗಳನ್ನು ಒಂದೊಂದಾಗಿ ತೋರಿಸಲು ಶುರುಮಾಡಿದ್ದಾನೆ.

’ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ’ (೯, ೩೧), ಅರ್ಥಾತ್, ’(ದುರಾಚಾರಿಯೂ ನನ್ನನ್ನು ಭಜಿಸಿದರೆ) ಬೇಗನೆ ಆತ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತ ಶಾಂತಿಯನ್ನು ಹೊಂದುತ್ತಾನೆ’, ಎಂದ ಶ್ರೀಕೃಷ್ಣನಂತೆ ವರುಣ್ ಕೂಡ, ’..ನನ್ನ(ಮಾತ)ನ್ನು ಭಜಿಸಿದರೆ ನೀವು (ಹಿಂದು)ಧರ್ಮಾತ್ಮರಾಗುತ್ತೀರಿ ಮತ್ತು ಶಾಶ್ವತ ಪರಿಹಾರವನ್ನು/ಶಾಂತಿಯನ್ನು ಹೊಂದುತ್ತೀರಿ’, ಎಂದು ನಮಗೆಲ್ಲ ಉಪ-ದೇಶಿಸುತ್ತಿದ್ದಾನೆ.

ಇಂತಿರುವ ವರುಣ್ ಗಾಂಧಿಯು, ಈಗ ಇದೋ, ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರನುಸಾರ ನಡೆಯುವಂತೆ ಪ್ರಿಯಾಂಕಾಳಿಗೇ ಆಣ್-ಅತಿ ಮಾಡುತ್ತಿದ್ದಾನೆ!

ವರುಣ್ ಉವಾಚ :
’ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ....ತಸ್ಯ ಪ್ರಜ್ಞಾ ಪ್ರತಿಷ್ಠಿತಾ’ (೨, ೫೮), ’ಜನರು ಯಾವಾಗ ಚಾಯ್ ಕಪ್ಪನ್ನು ಸಂಹರಿಸುತ್ತಾರೋ, ಯಾನೇ, ಟೀಯನ್ನು ಒಳಗಿಳಿಸಿ ಕಪ್ ಖಾಲಿಮಾಡುತ್ತಾರೋ ಆಗ ಅವರು ಪ್ರತಿಷ್ಠಿತರು; ಓಹ್, ಕ್ಷಮಿಸಿ, ಗಾಡಿ ಹಳಿ ತಪ್ಪಿತು, ಆಮೆಯು ತನ್ನ ಕಾಲುಗಳನ್ನು ಎಲ್ಲ ದಿಕ್ಕುಗಳಿಂದಲೂ (ಚಿಪ್ಪಿನ) ಒಳಕ್ಕೆಳೆದುಕೊಳ್ಳುವಂತೆ, ಪ್ರಿಯಾಂಕಾ, ಯಾವಾಗ ನೀನು ಬಾಯಿ ಮುಚ್ಕೊಂಡು ಗಪ್‌ಚುಪ್ ಆಗುತ್ತೀಯೋ ಆಗ ನಿನ್ನ ಪ್ರಜ್ಞೆ ಪ್ರತಿಷ್ಠಿತ ಎಂದರ್ಥ, ಆದ್ದರಿಂದ ನೀನು ಅಂಥ ಸ್ಥಿತಪ್ರಜ್ಞಳಾಗು; ಮಾತಾಡ್ಬೇಡ ಸುಮ್ಕಿರು.’

ವರುಣನ ಈ ಮಾತು’ಗುಳಿಗೆ’ ಪ್ರಿಯಾಂಕಾ ಏನೆನ್ನುವಳು?
’ಯಾಕಾ ತಮ್ಮಾ, ಇಂಗಾಡ್ತಿ?!’ ಎನ್ನುವಳು.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗಃ

ದಶದಿಕ್ಕುಗಳಿಗೂ ವರುಣಪ್ರತಾಪ!

(ಚಿತ್ರ ಕೃಪೆ : telegraphindia.com)

ರೈತರಿಗೆ ಸಲಹೆ. ಕ್ಷಮಿಸಿ, ರೇಡಿಯೋ ಕೇಳಿ ಕೇಳಿ ಈ ನುಡಿಗಟ್ಟು ಬಂತು.
ರೈತರಿಗೆ ಸ್ಪಷ್ಟನೆ: ಈ ಕೆಳಗಿನ ಲೇಖನವು ಮಳೆ ಕುರಿತಾದದ್ದಲ್ಲ. ಮಳೆಗಾಗಿ ಹವಾಮಾನ ಇಲಾಖೆಯನ್ನು ಸಂಪರ್ಕಿಸಿ (ಮೋಸಹೋಗಿ).

ವರುಣ್ ಗಾಂಧಿಯ ಪ್ರತಾಪವು ಇಂದು ದಶದಿಕ್ಕುಗಳಿಗೂ ಹರಡಿದೆ. ಅಷ್ಟದಿಕ್ಪಾಲಕರಂತೂ ತಮ್ಮ ಪಟ್ಟಗಳನ್ನು ’ವಗಾಂ’ಗೆ ವರ್ಗಾಯಿಸಿ (ಒಗಾಯಿಸಿ) ರಿ-tired! ಈಗ ವರುಣ್ ಗಾಂಧಿಯೇ ಅಷ್ಟದಿಕ್ಕುಗಳೊಡೆಯ! ’ನಮೋನ್ನಮಃ ಜೀಯಾ!’
’ ಓಂ ಇಂದ್ರಾಯ ನಮಃ ಅಗ್ನಯೇ ನಮಃ ಯಮಾಯ ನಮಃ ನಿರುತಯೇ ನಮಃ ವರುಣಾಯ ನಮಃ ವಾಯವೇ ನಮಃ ಕುಬೇರಾಯ ನಮಃ ಈಶಾನ್ಯಾಯ ನಮಃ .’

ವರುಣ್ ಗಾಂಧಿ ಅಷ್ಟದಿಕ್ಕುಗಳೊಡೆಯ ಹೇಗೆ?

ಹೀಗೆ :
* ಹಿಂದುವಾದಿಗಳಿಗಾತ ಇಂದ್ರ.
* ನಿರ್ದಿಷ್ಟ ಕೋಮುಗಳೆರಡರ ಮಧ್ಯೆ ಆತ ಅಗ್ನಿ.
* ಕೋಮೊಂದರ ಪಾಲಿಗಾತ ಯಮ(ಪ್ರಾಯ).
(ಪ್ರಾಯ ಅಂಥದು, ಏನ್ಮಾಡೋದು ಹೇಳಿ.)
* ಹಿಂದುಸೇನೆಗಳ ದೃಷ್ಟಿಯಲ್ಲಾತ ದುರ್ಗಾಪತಿ ನಿರುತಿ.
* ವರುಣ...ಅದೇ ತಾನೇ ಆತ? (ಹಿಂದುವಾದಿಗಳಿಗೆ ಆತನ ಮಾತು ತಂಪಾದ ಮಳೆ.)
* ವಾಯು...ಹೌದು, ಪ್ರಸಕ್ತ ಚುನಾವಣಾ ರಾಜಕಾರಣದಲ್ಲಾತ ಜಂಝಾವಾತ! (’ರಾಂಗ್. ಜಂಝಾನಿಲ.’ ’ಓಕೆ.’)
* ಬಿಜೆಪಿ ಪಾಲಿಗೀಗ ಆತ ಮತಕುಬೇರ. (ಹಿಂದು ಮತ ಅಲ್ಲ, ವೋಟ್ ಎಂಬ ಮತ.)
ಮತ್ತು
* ’ಬಲ’ಗಡೆಯವರಿಗಾತ ಈಶ; ’ಎಡ’ಗಡೆಯವರಿಗಾತ ಅನ್ಯ; ಒಟ್ಟು ಈಶಾನ್ಯ.

ಇನ್ನು, ಮೇಲೂ ಕೆಳಗೂ ಆತನ ಪ್ರತಾಪವೇನು ಕಮ್ಮಿಯೇ?

ಕೈಯನ್ನು ಮೇಲಕ್ಕೆತ್ತಿ ಒಮ್ಮೆ ಗರ್ಜಿಸಿದನೆಂದರೆ ಆ-ಕಾಶವೇ ಅದುರಬೇಕು! ಇಷ್ಟಕ್ಕೂ ಆತನ ಪ್ರ-ತಾಪ-ಮಾನಗಳೆಲ್ಲ ಆಕಾಶಮಾರ್ಗವಾಗಿಯೇ ಅಲ್ಲವೆ ಎಲ್ಲರ ಮನೆಗಳ ಮೂರ್ಖಪೆಟ್ಟಿಗೆಯನ್ನು ಸೇರುವುದು?

ಓಕೇ. ಮೇಲಾಯಿತು; ಕೆಳಗೆ?

ಶ್! ಅಂಡರ್-ಗ್ರೌಂಡ್ ಎಕ್ಟಿವಿಟಿ/ಆಕ್ಟಿವಿಟಿ/ಯಾಕ್ಟಿವಿಟಿ/ಕಟಿಪಿಟಿ ಮಾಡುವ ಮೂಲ-ಭೂತ-ವಾದಿಗಳಿಗಷ್ಟೇ ಗೊತ್ತು ಈ ವಿಷಯ, pub-leak ಮಾಡುವಂತಿಲ್ಲ.

ಹೀಗೆ ದಶದಿಕ್ಕುಗಳಿಗೂ ವ್ಯಾಪಿಸಿರುವ ಪ್ರತಾಪಸಿಂಹ - ಕ್ಷಮಿಸಿ - ಪ್ರತಾಪಶಾಲಿ ವರುಣನಿಗೆ ಗುಳಿಗೆಪ್ಪನ ನಮೋನ್ನಮಃ.

ಶುಕ್ರವಾರ, ಮಾರ್ಚ್ 20, 2009

ವರುಣೋದಯ ಗೀ-ತೆಗಳು

-೧-
ವರುಣನ ಅವಕೃಪೆಗೆ ತುತ್ತಾದರೆ
ರೈತ ಪಾಪರ್.
ಪಕ್ಷದ ಅವಕೃಪೆಗೆ ತುತ್ತಾದರೆ
ವರುಣ ಪಾಪ-ರ್.

***

-೨-
ಕೈ ಕತ್ತರಿಸಬೇಕೆಂದು
ನಾನಂದಿದ್ದು
ಆ ಪಕ್ಷದ ಚಿಹ್ನೆ ’ಕೈ’ಯನ್ನು
ಅಂದನಂತೆ
ವರುಣ್ ಗಾಂಧಿ.

’ಸರಿ,
ಮತಯಂತ್ರದಲ್ಲಿ
ಆ ಚಿಹ್ನೆಯ ಮುಂದೆ
ಕತ್ತರಿ
ಮಾರ್ಕ್‌
ಒತ್ತಿರಿ’
ಅಂದನಂತೆ
ರಾಹುಲ್ ಗಾಂಧಿ.

ಯಾರು ಚತುರರು ನಿಮಗೆ
ಈ ಈರ್ವರೊಳಗೆ?

(ಈ ಅಂಬೋಣಗಳು ಗುಳಿಗೆಪ್ಪನವರಿಗೆ ಮಾತ್ರ ತಲುಪಿದ ಎಕ್ಸ್ಕ್ಲೂಸಿವ್ ರಿಪೋರ್ಟ್. ಆದ್ದರಿಂದ ಈ ವರದಿ ’ಗುಳಿಗೆ’ಯಲ್ಲಿ ಮಾತ್ರ.) (ಇದು ಗುಳಿಗೆಯಲ್ಲಿ ಮಾತ್ರೆ! ಅರ್ಥವಾಗಬೇಕಾದರೆ ಇಂದಿನ ’.....’ ಪತ್ರಿಕೆ ನೋಡಿ.)

***

-೩-
’ತಲೆ ತೆಗಿ, ಕೈ ತೆಗಿ’, ಅಂದರೇನಂತೆ,
’ಸಾವಿನ ವ್ಯಾಪಾರಿ’, ಅಂದರೇನಂತೆ;
ಮನಗಳನ್ನೂ ಮಾನವನ್ನೂ ಕೊಂದರೇನಂತೆ,
ಜನನಾಯಕರಾಗಿ ಇವರೇ
ಲೋಕಸಭೆಯಲ್ಲಿ ಸೇರುವರು ಸಂತೆ!