ರಾಹುಲ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಾಹುಲ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮೇ 7, 2009

ಪ್ರಧಾನಿ ಪ್ರಸಂಗ

ರಾಹುಲ್ ಗಾಂಧಿಗೆ ಸಿಕ್ಕಿತು ಎಂದರೆ ಪೀಯೆಮ್ಮಿನ ಪಟ್ಟ
ರಾಹು-ಕೇತುಗಳು ಪಕ್ಕದಿ ಬರುವುವು ಆಗ ಅವನು ಕೆಟ್ಟ!
ಮತ್ತೇನಾದರು ಮನಮೋಹನನೇ ಆದರೆ ಪ್ರಧಾನಿಯು
ಕತ್ತೆಯಂತೇನೊ ದುಡಿವನು ಆದರೆ ಬಹಳೇ ನಿಧಾನಿಯು!

ಅದ್ವಾನಿಯು ಆದರು ಎಂದರೆ ಭಾರತದ ಪ್ರಧಾನ್ಮಂತ್ರಿ
ಅಧ್ವಾನವು ದೇಶವು ಭಾರತಕಾಗೆಂಥಾ ಗತಿ ಬಂತ್ರೀ!
ಕಾಂಗ್ರೆಸ್-ಕಮ್ಯುನಿಸ್ಟ್ ಹೀಗನ್ನುವುದು, ನಾನಂದದ್ದಲ್ರೀ
ಟಾಂಗ್ ಕೊಡುವುದೆ ಚಟ, ದೇಶದ ಯೋಚನೆ ಇವುಗಳಿಗೇನಿಲ್ರೀ!

ಮೂರನೆ ರಂಗವೊ ನಾಲ್ಕನೆ ಮಂಗವೊ ಆದರೆ ಪೀಯೆಮ್ಮು
ಮಾರನೆ ದಿನವೇ ಭರ್ಜರಿ ಸೀನು, ಫೈಟಿಂಗ್ ಏಕ್‌ದಮ್ಮು!
ಕರಟ್, ಮುಲಾಯಂ, ಪಾಸ್ವಾನ್, ಮಾಯಾ, ದೇವೇಗೌಡ, ಜಯಾ,
ಶರದ್, ಲಾಲುಗಳ ಶೀತಲ ಸಮರದಿ ದೇಶದ ಹಿತ ಮಾಯ!

ಶುಕ್ರವಾರ, ಮೇ 1, 2009

ನೀವು ಕೇಳದಿರಿ

’ಸುಧಾ’ದಲ್ಲಿ ’ನೀವು ಕೇಳಿದಿರಿ?’
’ಗುಳಿಗೆ’ಯಲ್ಲಿ ’ನೀವು ಕೇಳದಿರಿ’.
ನಾವೇ ಉತ್ತರಿಸುತ್ತೇವೆ ಆಗಾಗ(!)
ಆನಂದರಾಮನ ಪ್ರಶ್ನೆಗೆ ಅವನ
ಅಂತರಂಗದ ಮಿತ್ರ ಗುಳಿಗೆಪ್ಪನ
ಉತ್ತರದ ಯೋಗ!
--೦--

* ’ಗುಳಿಗೆ’ ಏನನ್ನು ಗುಣಪಡಿಸುತ್ತದೆ?

- ಹೇನನ್ನು.
ನುಂಗಿ ತಲೆ ಕೆರೆದುಕೊಂಡೂ ಕೆರೆದುಕೊಂಡೂ ಹೇನೆಲ್ಲ ಮಾಯ!

+++

* ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ಪ್ರಮಾಣದಲ್ಲಿ ಸುಧಾರಣೆ ಆಗಿದೆ!

- ಕೆಟ್ಟಮೇಲೆ ಬುದ್ಧಿ ಬಂತು!

+++

* ಮತದಾನದ ಗುರುತಿನ ಶಾಯಿಯನ್ನು ಯಡಿಯೂರಪ್ಪ ಬಲಗೈ ಬೆರಳಿಗೆ ಹಚ್ಚಿಸಿಕೊಂಡದ್ದು ಯಾಕೆ?

- ತಾನು ಬಲಪಂಥೀಯ ಎಂದು ಕ್ಯಾಮೆರಾಗಳೆದುರು ಸಾರಿ ತೋರಿಸಲಿಕ್ಕೆ.

+++

* ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಯಾರ್‍ಯಾರಿಗೆ ಎಷ್ಟೆಷ್ಟು ಸೀಟು ಬರಬಹುದು?

- ಎಲ್ಲರಿಗೂ ಒಟ್ಟು ಸೇರಿ ಇಪ್ಪತ್ತೆಂಟು.

+++

* ರೇಜಸ್ವಿನಿಮೇಲೆ ಶೂ ಎಸೆದರೆ?

- ’ಶೂ’ರ್ಪನಖಿ ಆಗುತ್ತಾರೆ.

+++

* ರಾಹುಲ್ ಗಾಂಧಿ ಮುಂದಿನ ಪ್ರಧಾನಿಯೆ?

- ಆಗುವುದಾದರೆ ಆತ ಮುಂದಿನ ಪ್ರಧಾನಿಯೇ ಆಗುತ್ತಾನೆ. ಮನಮೋಹನ್ ಸಿಂಗರಂತೆ ಮೇಡಂ ಹಿಂದಿನ ಪ್ರಧಾನಿ ಆಗುಳಿಯುವುದಿಲ್ಲ.

+++

* ಒಟ್ಟಾವಿಯೋ ಕ್ವಟ್ರೋಚಿಯನ್ನು ಸಿಬಿಐ ’ಕೈ’ಬಿಟ್ಟಂತೇನಾ?

- ದೇಶದ ಪ್ರಜೆಗಳಿಗೆ ಇವರೆಲ್ಲ ಸೇರಿ ’ಕೈ’ ಕ್ವಟ್ರೋ ಛಿ!
ಪ್ರಕರಣ ಒಟ್ಟಾವಿಯೋ!

+++

* ಚೀರ್ ಗರ್ಲ್‌ಗೆ ಕನ್ನಡದಲ್ಲಿ ಏನಂತಾರೆ?

- ಚೀರ್‌ತಾರೆ.

+++

* ಭಾರತಕ್ಕೆ ಹಂದಿ ಜ್ವರ ಕಾಡದಿರಲು ಏನು ಕ್ರಮ ಕೈಕೊಳ್ಳಬೇಕು?

- ವರಾಹವು ಶ್ರೀಮನ್ನಾರಾಯಣನ ಅವತಾರವಾದ್ದರಿಂದ ವರಾಹಪೂಜೆ, ವರಾಹಹೋಮ, ವರಹದಾನ ಮೊದಲಾದ ಆಚರಣೆಗಳನ್ನು ಕೈಕೊಳ್ಳಬೇಕೆಂದು ದೈವಅಜ್ಞ ರಾಮಯಾಜಿ ಹೇಳುತ್ತಾರೆ.

--೦--

ಗುರುವಾರ, ಏಪ್ರಿಲ್ 30, 2009

ಗುಳಿಗೆಪ್ಪ ತಂದ ಸುದ್ದಿಗಳು

ಪಾದರಕ್ಷೆ ಪರವಾಗಿ ಮೊಕದ್ದಮೆ!
-------------------------
ರಾಜಕಾರಣಿಗಳತ್ತ ಎಸೆಯುವ ಮೂಲಕ ಪಾದರಕ್ಷೆಗಳಿಗೆ ಅವಮಾನ ಎಸಗಲಾಗುತ್ತಿದೆಯೆಂದು ಬೆಂಗಳೂರಿನ ವಕೀಲರೊಬ್ಬರು ಕೋರ್ಟಿನ ಮೊರೆಹೊಕ್ಕಿದ್ದಾರೆ! ಚುನಾವಣೆ ವೇಳೆ ದೇಶದ ನಾನಾ ಕಡೆಗಳಲ್ಲಿ ರಾಜಕಾರಣಿಗಳತ್ತ ಶೂ ಹಾಗೂ ಚಪ್ಪಲಿಗಳನ್ನು ಎಸೆದವರೆಲ್ಲರ ವಿರುದ್ಧ ಸದರಿ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ (ಪಾದರಕ್ಷೆ ಪರವಾಗಿ) ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಪಾದರಕ್ಷೆಗಳಿಗೆ ಅವಮಾನವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯವು ಕೇಸ್ ದಾಖಲಿಸಿಕೊಂಡು ಚಪ್ಪಲಿ-ಶೂ ಎಸೆದವರಿಗೆಲ್ಲ ಶೂಕಾಸ್ ನೋಟೀಸ್ ಜಾರಿಮಾಡಿದೆ.

***

ರಾಹುಲ್‌ಗೆ ಇಂದಿರಾ ಪ್ರಶಸ್ತಿ
----------------------
ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಯನ್ನು ರಾಹುಲ್ ಗಾಂಧಿಗೆ ನೀಡಲಾಗುವುದು. ಚುನಾವಣಾ ವೇಳೆ ರಾಹುಲ್ ಗಾಂಧಿಯು ವಿಮಾನ, ಹೆಲಿಕಾಪ್ಟರ್ ಮತ್ತು ಕಾರಿನಲ್ಲಿ ದೇಶದ ಕೆಲವು ಸ್ಥಳಗಳಿಗೆ ಭೇಟಿಕೊಟ್ಟು, ಬಡಬಗ್ಗರೊಡನೆ ಕ್ಯಾಮೆರಾಗಳಿಗೆ ಪೋಸು ಕೊಟ್ಟು, ಯುವಕ-ಯುವತಿಯರ ’ಕೈ’ಕುಲುಕಿ, ವೇದಿಕೆಯಿಂದ ಭಾವಾವೇಶಭರಿತ ಭಾಷಣ ಮಾಡಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಕೊಡಲಾಗುವುದು. ಈ ಬಗ್ಗೆ ಪ್ರಕಟಣೆ ಹೊರಬೀಳುತ್ತಲೇ ರಾಹುಲ್‌ನನ್ನು ಮುತ್ತಿಕೊಂಡ ಪತ್ರಕರ್ತೆಯರೊಡನೆ ಮಾತನಾಡುತ್ತ ರಾಹುಲ್, ’ಈ ಪ್ರಶಸ್ತಿಗೆ ನನಗಿಂತ ನನ್ನ ಅಕ್ಕ ಹೆಚ್ಚು ಅರ್ಹಳು. ಗೀತೋಪದೇಶೋಪದೇಶದ ಮೂಲಕ ರಾಷ್ಟ್ರಾದ್ಯಂತ ಭಾವೈಕ್ಯತೆಯ ಮಿಂಚಿನ ಸಂಚಾರ ಉಂಟುಮಾಡಿದ್ದಾಳೆ ಆಕೆ’, ಎಂದಿದ್ದಾರೆ.
ರಾಹುಲ್‌ನ ಈ ವಿನಯಪೂರ್ಣ ಮಾತಿಗಾಗಿ ಆತನಿಗೆ ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನೂ ಕೊಡತಕ್ಕದ್ದೆಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

***

ವರುಣ್‌ಗೆ ಶೌರ್ಯ ಪ್ರಶಸ್ತಿ
---------------------
ಕೈ ಕತ್ತರಿಸುತ್ತೇನೆಂದು ಹೇಳುವ ಮೂಲಕ ಅಪ್ರತಿಮ ಶೌರ್ಯ ಮೆರೆದಿದ್ದಕ್ಕಾಗಿ ವರುಣ್ ಗಾಂಧಿಗೆ ಈ ಸಲದ ’ಮಹಾಕಮಲಚಕ್ರ’ ಶೌರ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆದರೆ, ತಾನು ಹೇಳಿದ್ದು ನಿಜವಾದ ಕೈಗಳ ಬಗ್ಗೆ ಅಲ್ಲ, ಕಾಂಗ್ರೆಸ್‌ನ ’ಕೈ’ ಚಿಹ್ನೆಯ ಬಗ್ಗೆ, ಎಂದು ಸ್ಪಷ್ಟನೆ ನೀಡಿ ವರುಣ್ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

***

ಕೋಟಿ ರಾಮು ಹೊಸ ಚಿತ್ರ
---------------------
’ಕಿರಣ್ ಬೇಡಿ’ ಚಿತ್ರದ ಮೂಲಕ ಪತ್ನಿ ಮಾಲಾಶ್ರೀಗೆ ಬೆಳ್ಳಿ ತೆರೆಮೇಲೆ ಮರುಹುಟ್ಟು ನೀಡಿರುವ ನಿರ್ಮಾಪಕ ಕೋಟಿ ರಾಮು ಅವರು ತಮ್ಮ ಮುಂದಿನ ಚಿತ್ರಕ್ಕಾಗಲೇ ನಾಮಕರಣ ಮಾಡಿದ್ದಾರೆ. "ಅತ್ತೆಗಿಂತ ಒಂದು ’ಕೈ’ ಮಿಗಿಲಾದ ಸೊಸೆ" ಎಂಬ ಇಷ್ಟುದ್ದದ ಹೆಸರು ಹೊತ್ತು ನಿರ್ಮಾಣವಾಗಲಿರುವ ಆ ಚಿತ್ರದ ವಿಶೇಷವೆಂದರೆ ಅದರಲ್ಲಿ ಅತ್ತೆಯ ಪಾತ್ರವೇ ಇಲ್ಲ! ಇಂದಿರಾಗಾಂಧಿಯನ್ನು ಹೋಲುವ ಭಾವಚಿತ್ರಗಳಿಂದಲೇ ಅತ್ತೆಯ ಪಾತ್ರವನ್ನು ಬಿಂಬಿಸಲಾಗುವುದು. ಸೊಸೆಯ ಪಾತ್ರದ ಮೂಲಕ ಸಂಸದೆ ತೇಜಸ್ವಿನಿ ಗೌಡ ಅವರು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.
’ಕಿರಣ್ ಬೇಡಿ’ ಯಶಸ್ಸಿನಿಂದ ಸ್ಫೂರ್ತಿಹೊಂದಿ ನೀವಿನ್ನು ’ಸಾಂಗ್ಲಿಯಾನಾ ಭಾಗ-೪’ ತೆಗೆಯುವಿರಾ ಎಂಬ ಪತ್ರಕರ್ತರೋರ್ವರ ಪ್ರಶ್ನೆಗೆ ರಾಮು ಕೆರಳಿ ಕೆಂಡಾಮಂಡಲ ಆದರೆಂದು ವರದಿಯಾಗಿದೆ.

***

ನಟರಾಜನಾದ ಶಂಕರ
------------------
ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಎಂ.ಎನ್.ವಿದ್ಯಾಶಂಕರ್ ಅವರು ಭರತನಾಟ್ಯ ಪ್ರವೀಣರು ಎಂಬ ಸ್ವಾರಸ್ಯಕರ ಸಂಗತಿ ಬಯಲಾಗಿದೆ. ಚುನಾವಣೆ ವೇಳೆ ಪತ್ರಿಕಾಗೋಷ್ಠಿಗಳಲ್ಲಿ ಅವರ ಹಾವಭಾವ ಕಂಡು ಅನುಮಾನಗೊಂಡ ಪತ್ರಕರ್ತನೊಬ್ಬ ವಿದ್ಯಾಶಂಕರ್ ಅವರನ್ನು ವಿಚಾರಿಸಿದಾಗ ಅವರೇ ಈ ಸಂಗತಿಯನ್ನು ಹೊರಗೆಡಹಿದ್ದಾರೆ. ಹೈಸ್ಕೂಲ್ ದಿನಗಳಿಂದಲೂ ತಾನು ಭರತನಾಟ್ಯ ಅಭ್ಯಾಸ ಮಾಡಿದುದಾಗಿಯೂ, ವಿದ್ಯಾಭ್ಯಾಸ, ಐಎಎಸ್ ತಯಾರಿ ಮತ್ತು ಉನ್ನತ ಅಧಿಕಾರಿಯಾಗಿ ಆಡಳಿತ ನಿರ್ವಹಣೆ ಈ ಒತ್ತಡಗಳ ದೆಸೆಯಿಂದಾಗಿ ತನಗೆ ನೃತ್ಯ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಲಿಲ್ಲವೆಂದೂ, ಇಷ್ಟು ವರ್ಷ ತಾನು ಅದುಮಿಟ್ಟುಕೊಂಡ ಆ ಅಭಿಲಾಷೆಯು ಈಗ ಪತ್ರಿಕಾಗೋಷ್ಠಿಗಳಲ್ಲಿ ಆಂಗಿಕ ಅಭಿನಯ ಮತ್ತು ಹಾವಭಾವಗಳ ಮೂಲಕ ಪ್ರಕಟಗೊಳ್ಳುತ್ತಿದೆಯೆಂದೂ ವಿದ್ಯಾಶಂಕರ್ ಅವರು ಹೇಳಿದ್ದಾರೆ.
ನೌಕರಿಯಿಂದ ನಿವೃತ್ತಿ ಹೊಂದಿದ ನಂತರ ತಾವು ಭರತನಾಟ್ಯ ಶಾಲೆಯೊಂದನ್ನು ತೆರೆಯಲಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

***

’ಕಿಸ್ಬಾಯಿ ರೋಗ’ ಮಾಯ!
----------------------
’ಹಂದಿ ರೋಗ’ಕ್ಕಿಂತ ವ್ಯಾಪಕವಾಗಿ ದೇಶಾದ್ಯಂತ ಹರಡಿದ್ದ ’ಕಿಸ್ಬಾಯಿ ರೋಗ’ವು ಈಗ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆಯೆಂದು ಭಾರತೀಯ ವೈದ್ಯಕೀಯ ಮಂಡಳಿಯು ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಚುನಾವಣಾ ಸಮಯದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಈ ರೋಗವು ಪುಢಾರಿಗಳಿಗೆ ಮಾತ್ರ ತಗುಲಿತ್ತು.
’ಈ ರೋಗಪೀಡಿತರು ಸದಾಕಾಲ ಬಾಯಿ ಕಿಸಿದುಕೊಂಡೇ ಇರುತ್ತಾರೆ, ಮತದಾನ ಮುಗಿದ ತಕ್ಷಣ ಅವರ ಈ ಕಾಯಿಲೆಯು ತಂತಾನೇ ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತದೆ’, ಎಂಬ ಭಾವೈಮಂಡಳಿಯ ಹೇಳಿಕೆಯನುಸಾರ ಇದೀಗ ಮತದಾನ ಮುಗಿದ ಕ್ಷೇತ್ರಗಳಲ್ಲಿ ಈ ರೋಗವು ಹೇಳಹೆಸರಿಲ್ಲದಂತೆ ಮಾಯವಾಗಿದೆ!
ದೇಶದಲ್ಲಿ ಎಲ್ಲೋ ಕೆಲವರಿಗೆ ಮಾತ್ರ ಕಿಸ್ಬಾಯಿ ರೋಗವು ಸದಾಕಾಲ ಇರುತ್ತದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಸದಾನಂದ ಗೌಡರು ಅಂಥವರಲ್ಲೊಬ್ಬರು. ರೋಗಿಗಳಿಗೆ ಈ ಕಾಯಿಲೆಯಿಂದ ಏನೂ ನಷ್ಟವಿಲ್ಲ, ಬದಲಾಗಿ ಲಾಭವಾಗುವ ಸಾಧ್ಯತೆ ಇದೆ! ಆದರೆ, ಕಿಸ್ಬಾಯಿ ರೋಗಿಗಳ ಎದುರಿರುವವರು ಮಾತ್ರ ಮೋಸವೆಂಬ ಹಾನಿಗೊಳಗಾಗುವ ಸಂಭವವಿದೆ ಎಂದು ವೈದ್ಯಕೀಯ ಮಂಡಳಿಯು ಎಚ್ಚರಿಸಿದೆ.

***

ಗೌಡರ ಮುದ್ದೆ
-----------
ಹಿಂದಿ ಭಾಷೆಯ ಅಜ್ಞಾನದಿಂದಾಗಿ ದೇವೇಗೌಡರು ಮುಜುಗರಕ್ಕೊಳಗಾದ ಪ್ರಕರಣ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
ತೃತೀಯ ರಂಗದ ಚುನವಣಾ ಪ್ರಚಾರಕ್ಕಾಗಿ ಈಚೆಗೆ ಯು.ಪಿ.ಗೆ ಹೋಗಿದ್ದ ಗೌಡರು ಅಲ್ಲಿನ ಗ್ರಾಮವೊಂದರ ಸಭೆಯಲ್ಲಿ ಭಾಗವಹಿಸಿದ್ದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷನು ತನ್ನ ಭಾಷಣದಲ್ಲಿ, ’ಹಮಾರೇ ಸಾಮ್ನೆ ಅತ್ಯಂತ್ ಪ್ರಮುಖ್ ಮುದ್ದೆ ಹೈ..’ ಎಂದಾಕ್ಷಣ ದೇವೇಗೌಡರು, ’ಹೌದಾ? ಎಲ್ಲದೆ, ತತ್ತಾ’, ಎಂದು ಕೈಚಾಚಿದರೆಂದು ವರದಿಯಾಗಿದೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಆ ಹಳ್ಳಿಗನು ಒಂದು ಕ್ಷಣ ಏನೂ ತೋಚದೇ ಸುಮ್ಮನೆ ನಿಂತುಬಿಟ್ಟ. ಕೂಡಲೇ ಮಧ್ಯಪ್ರವೇಶಿಸಿದ ವೈ.ಎಸ್.ವಿ.ದತ್ತ ಉಭಯರಿಗೂ ಅರ್ಥ ವಿವರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಭೆಯ ನಂತರ ತಮ್ಮತಮ್ಮೊಳಗೇ ದೇವೇಗೌಡರನ್ನು ಗೇಲಿಮಾಡಿ ಮಾತಾಡಿಕೊಳ್ಳುತ್ತಿದ್ದ ಪತ್ರಕರ್ತರತ್ತ ಧಾವಿಸಿದ ದತ್ತ, ’ಹಿಂದಿ ಭಾಷಿಕರಾದ ನೀವೇನು ಬಹುಭಾಷಾಪಂಡಿತರೇ? ಗೌಡ ಅನ್ನುವ ಬದಲು ನಿಮ್ಮಲ್ಲನೇಕರು ಘೋಡಾ ಅನ್ನುತ್ತೀರಲ್ಲ!’ ಎಂದು ದಬಾಯಿಸಿ ಪತ್ರಕರ್ತರ ಬಾಯಿಮುಚ್ಚಿಸಿದ್ದಾಗಿ ವರದಿಯಾಗಿದೆ.

ಎಷ್ಟೊಂದು ಪ್ರಧಾನಿಗಳು!

ಭಾರತದ ಪ್ರಧಾನಮಂತ್ರಿಯ ಹುದ್ದೆಗೆ ಈ ಸಲ ಭಾರೀ ಪೈಪೋಟಿ ಏರ್ಪಟ್ಟಿದೆ.

’ಮನಮೋಹಕ’ವಾಗಿ ದೇಶ ಆಳಿದ್ದಾರೆ, ಆದ್ದರಿಂದ ಮನಮೋಹನ್ ಸಿಂಗರೇ ಮುಂದುವರಿಯಲಿ ಎಂದು ಸೋನಿಯಾ ಹೇಳುತ್ತಿದ್ದಾರೆ.

’ರಾಹುಕಾಲ’ ಕಳೆದಿದೆ, ರಾಹುಲ್ ಗಾಂಧಿಗೆ ಇನ್ನು ಪ್ರಧಾನಿ ಪಟ್ಟ ಕಟ್ಟಬಹುದು ಎಂದು ಸ್ವಯಂ ಎಂಎಂ ಸಿಂಗರೇ ಸಂಗೀತ ಹಾಡುತ್ತಿದ್ದಾರೆ.

’ಮೂಕರ್ಜಿ’ ನನ್ನದೂ ಇದೆ ಪ್ರಧಾನಿ ಪಟ್ಟಕ್ಕೆ, ಎಂದು ಪ್ರಣವ್ ಮುಖರ್ಜಿ ಪ್ರಣವನಾದಗೈಯುತ್ತಿದ್ದಾರೆ.

’ಪ್ರಕಾಶ’ ನನ್ನದೇನು ಕಮ್ಮಿಯೇ? ಪ್ರಧಾನಿ ಪಟ್ಟಕ್ಕೆ ನಾನೂ ಅಭ್ಯರ್ಥಿಯೇ ಎನ್ನುತ್ತಿದ್ದಾರೆ ಪ್ರಕಾಶ್ ಕಾರಟ್.
(ಹೌದೌದು, ನನ ಗಂಡ ೨೪ ಕ್ಯಾರಟ್ ಅಪ್ಪಟ ಚಿನ್ನ; ನನ್ನ ಪ್ರಕಾಶ ಪ್ರಕಾಶಮಾನ ವಜ್ರ ಅನ್ನುತ್ತಿದ್ದಾರೆ ಬೃಂದಾ ಕಾರಟ್.)

ರಾಂ ರಾಂ ’ಸೀತಾರಾಂ’, ಅಹಂ ಅಪಿ ಅರ್ಹಂ ಎಂದು ಸಿತಾರಂ ಬಾರಿಸತೊಡಗಿದ್ದಾರೆ ಚಾರ್ವಾಕ ಯೆಚೂರಿ ಸೀತಾರಾಂ.

’ಅಧ್ವಾನ’ದ ಮಾತಾಡಬೇಡಿ, ಇದು ರಾಮ ಮಂದಿರ, ನಾ ರಾಮಚಂದಿರ, ಅನ್ನುತ್ತಿದ್ದಾರೆ ಈಗಾಗಲೇ ಪಟ್ಟಾಭಿಷೇಕ ಆದಂತೆ ಕನಸು ಕಾಣುತ್ತಿರುವ ಅದ್ವಾನಿ.

’ಮೋಡೀ’ ಹಮಾರೀ, ಜಮೇಗಾ ಐಸೇ ಜಾನೀ, ಹಮ್ ತೋ ಹ್ಞೈ ಮುಖ್‌ಮಂತ್ರಿ, ಕಲ್ ಬನ್‌ತೇ ಹ್ಞೈ ಪರ್‌ಧಾನೀ, ಎಂದು ’ಔಲಾದ್’ ಫಿಲಂ ಸ್ಟೈಲ್‌ನಲ್ಲಿ ಒಳಗೊಳಗೇ ಹಾಡಿಕೊಳ್ಳುತ್ತಿದ್ದಾರೆ ನರೇಂದ್ರ ಮೋದಿ.
(ಜೋಡೀ ಹಮಾರೀ, ಕಹೇಗಾ ಐಸೇ ಜಾನೀ, ಎಂದು ’ಮೋಡಿ’ಯ (ಅಂತರಂಗದ) ಮಾತನ್ನು ಚಲಾವಣೆಗೆ ತರುತ್ತಿದ್ದಾರೆ ಶೌರಿ-ಜೇಟ್ಲಿ ಜೋಡಿ.)

’ಘರ್ ಘರ್ ಮೇ ಪಕಾತೇ ಹ್ಞೈ ಆಲೂ, ಸರ್‌ಕಾರ್ ಕೋ ಚಲಾತೇ ಹ್ಞೈ ಲಾಲೂ’, ಎನ್ನುತ್ತಿದ್ದಾರೆ ಲಾಲೂ ಪ್ರಸಾದ ತಿಂದ ಭಕ್ತರು.

’ರಾಮ್’ ಕಭೀ ನಹೀ ಕಿಯಾ ’ವಿಲಾಸ್’, ಅಬ್ ಪಿಎಂ ಬನೇಗಾ ರಾಮ್ ವಿಲಾಸ್, ಅನ್ನುತ್ತಿದ್ದಾರೆ ಪಾಸ್ವಾನ್.

’ಮುಲಾಂ’ನಂತೆ ’ಮುಲಾಯಂ’ ನಾನು, ಈ ಸಲ ಪ್ರಧಾನಿಯಾದೇನು ಎಂದು ಕನಸು ಕಾಣುತ್ತಿದ್ದಾರೆ ರಫ್ ಅಂಡ್ ಟಫ್ ಮುಲಾಯಂ ಸಿಂಗ್ ಯಾದವ್.

’ಚಂದ್ರ’ ಸೂರ್ಯುಡು ಸಾಕ್ಷಿ, ನೇನೇ ನೆಕ್ಸ್ಟ್ ಪ್ರಧಾನುಡು ಬಾಬೂ, ಅನ್ನುತ್ತಿದ್ದಾರೆ ಚಂದ್ರಬಾಬು ನಾಯ್ಡು.

’ಪವರ್’ಫುಲ್ ಕಣ್ರೀ ನಾನು, ಪ್ರಧಾನಿ ಆಗ್ದೇ ಏನು? ಎಂದು ಸೋಟೆ ತಿರುವಿ ಚಾಲೆಂಜ್ ಹಾಕುತ್ತಿದ್ದಾರೆ ಶರದ್ ಪವಾರ್.

ಸಿಕ್ಕರೆ ಚಾನ್ಸು ’ಜೈ’ ಅಂತೀನಿ, ಪುರಚ್ಚಿ ತಲೈವಿ ಸೈ ಅಂತೀನಿ, ಅನ್ತಿದ್ದಾರೆ ಜೈಲಲಿತಮ್ಮ. (ಕ್ಷಮಿಸಿ, ಅಮ್ಮ ಅಲ್ಲ, ಕುಮಾರಿ.)

ಎಲ್ಲಾ ’ಮಾಯ’ವೋ ಪ್ರಭುವೇ, ಎಲ್ಲಾ ಮಾಯವೋ; ಸಿಎಂ ಮಾಯವೋ ಪಿಎಂ ಮಾಯವೋ, ನಾ ಪೀಯೆಮ್ಮಾದ್ರೆ ದೇಶ್ವೇ ಮಾಯವೋ, ಎಂದು ಗುರಿ ತಪ್ಪದ ಮಗಳಂತೆ ಹಾಡುತ್ತಿದ್ದಾರೆ ಮಾಯಾವತಿ ಮೇ’ಢಂ’. (ಮಾಯಾವತಿ ಮೇ ದಂ ಕಿತ್‌ನಾ!)

ಪ್ರಧಾನಿ ಹುದ್ದೆಗೆ ಇಷ್ಟೆಲ್ಲ ಮಂದಿ ಕೂಗು ಹಾಕುತ್ತಿರುವಾಗ ನಮ್ಮ ದೇವೇಗೌಡರು ಮಾತ್ರ, ’ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ ನೆಮ್ಮದಿಗೆ ಭಂಗವಿಲ್ಲ, ಮುದ್ದೇ ನಿನಗೆ ಸಾಟಿಯಿಲ್ಲ, ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನಾ ಅಳುಕದೆ ಮುಂದೇ ಸಾಗುವೆ’, ಎಂದು ಹಾಡುತ್ತ ಕೂಲಾಗಿ ಮನ್ನಡೆದಿದ್ದಾರೆ.
ನಾಳೆ ಅವರು, ’ದೇವರ ಆಟ ಬಲ್ಲವರಾರು, ಆತನ ಎದಿರು ನಿಲ್ಲುವರಾರು, ಕೇಳದೆ ಸುಖವ ತರುವ, ಹೇಳದೆ ಕುರ್ಚಿಯ ಕೊಡುವ’, ಎಂದು ದೇವರ ಕಡೆ ಕೈತೋರಿಸಿ ಪಿಎಂ ಕುರ್ಚಿಯ ಕಡೆ ನಡೆದರೂ ಆಶ್ಚರ್ಯವಿಲ್ಲ. ಗೌಡರ ಹೆಜ್ಜೆ ಬಲ್ಲವರಾರು? ೧೯೯೬ರ ಉದಾಹರಣೆ ನಮ್ಮೆದುರಿದೆಯಲ್ಲಾ!

ಶನಿವಾರ, ಏಪ್ರಿಲ್ 4, 2009

ರಾಜಕಾರಣಿಗಳೆಂಬ ಜನಶೇವಕರ ಕಥೆ

ಭಾರತದ ರಾಜಕಾರಣಿಗಳು ವಿಶ್ವದಲ್ಲೇ ಅತ್ಯಂತ ಶ್ರೇಷ್ಠರು. ರೂಢಿಯೊಳಗುತ್ತಮರು.
’ದಾಸನಂತಾಗುವೆನು ಧರೆಯೊಳಗೆ ನಾನು’, ಎಂಬ ದಾಸವಾಣಿಯಂತೆ ನಡೆಯುವವರು ಇವರು.
ಚುನಾವಣೆ ಎದುರಿರುವಾಗ ಇವರು ನಮ್ಮ ಮನೆಬಾಗಿಲಿಗೆ ಬಂದು ನಮ್ಮ ದಾಸಾನುದಾಸರಂತೆ ಕೈಮುಗಿದು, ಹಲ್ಲು ಕಿರಿದು, ಎಲ್ಲ ಸುಖ-ಕಷ್ಟ ವಿಚಾರಿಸಿ, ’ಇಲ್ಲಿರುವುದು ಸುಮ್ಮನೆ, ಅಲ್ಲಿ ಡೆಲ್ಲಿಯಲ್ಲಿರುವುದು ಪಾರ್ಲಿಮೆಂಟ್ ಎಂಬ ನಮ್ಮನೆ’, ಎಂದು ನುಡಿದು, ಪೆಪ್ಪರಮಿಂಟ್ ತಿಂದವರಂತೆ ಜೊಲ್ಲು ಸುರಿಸುತ್ತ ಮುಂದಿನ ಮನೆಬಾಗಿಲಿಗೆ ಬಿಜಯಂಗೈಯುವವರು.
’ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ವೋಟರ್ ಪ್ರಭುವೆ’, ಎನ್ನುವ ಇವರ ಆ ವಿನಯ, ಎನ್ನ ಸ್ವಾಮೀ, ರೊಂಬ ಅದ್ಭುತಂ!
ಮತದಾರನ ಮನೆಯೇನಾದರೂ ಒಳಗಿನಿಂದ ಬೋಲ್ಟಿಸಲ್ಪಟ್ಟಿದ್ದರೆ ಆಗ ಈ ಜನಸೇವಕರು, ’ಪೂಜಿಸಲೆಂದೇ ಹೂನಗೆ ತಂದೆ, ದರುಶನ ಕೋರಿ ನಾ ನಿಂದೆ, ತೆರೆಯೋ ಬಾಗಿಲನು’, ಎಂದು ಗಾರ್ದಭರಾಗದಲ್ಲಿ ಹಾಡಿ ಬಾಗಿಲು ತೆರೆಸಿ, ಪಾಂಪ್ಲೆಟ್ ನೀಡಿ, "ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ನಾಣ್ಣುಡಿಯಂತೆ ನಾವಿವತ್ತು ನಿಮ್ಮ ಕಾಲು ಹಿಡೀಲಿಕ್ಕೆ ಬಂದಿದ್ದೀವಿ, ನಮಗೇ ವೋಟ್ ಹಾಕಿ", ಎಂದು ಮುವ್ವತ್ತೆರಡೂ ಹಲ್ಲುಗಳನ್ನು (ಸದಾನಂದಗೌಡರಂತೆ) ಪ್ರದರ್ಶಿಸುತ್ತಾರೆ. ಇವರ ಈ ವಿನಯ ಅಂಥಿಂಥದೇ? ಚಾಲಾ ಗೊಪ್ಪದಿ!
’ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ’, ಎಂದು ಈ ದೈವಭಕ್ತಶಿಖಾಮಣಿಗಳು ಚುನಾವಣೆಯ ಸಂದರ್ಭದಲ್ಲಿ ಕಂಡಕಂಡ ದೇವರುದಿಂಡಿರಿಗೆಲ್ಲ ಮೊರೆಹೊಗುವ ಪರಿಯನ್ನೆಂತು ಬಣ್ಣಿಸಲಿ!
’ಕಂಡುಕಂಡು ನೀ ಎನ್ನ ಕೈಬಿಡುವರೇ ಪ್ರಭುವೆ, ಉಂಡು ಮಲಗದೆ ಅಂದು ಮತ ನೀಡು ಒಡೆಯಾ’, ಎಂದು ಮತದಾರನನ್ನು ಇವರು ಬೇಡಿಕೊಳ್ಳುವ ಪರಿಯೂ ಅನನ್ಯ!
ನಮ್ಮೀ ರಾಜಕಾರಣಿಗಳು ಅತ್ಯಂತ ಪ್ರಾಮಾಣಿಕರು. ಸತ್ಯಸಂಧರು. ಸಿದ್ಧಾಂತಬದ್ಧರು. ನಿಷ್ಪೃಹರು. ಅತಿ ವಿಧೇಯರು. ಮತ್ತು ಜಾತ್ಯತೀತರು.
ಇವರ ಚುನಾವಣಾ ಭಾಷಣಗಳೇ ನನ್ನ ಈ ಮಾತಿಗೆ ಸಾಕ್ಷಿ.
ವಿರೋಧಿಗಳ ಟೀಕೆಯೇ ತುಂಬಿರುವ ತಮ್ಮ ಭಾಷಣದಲ್ಲಿ ಇವರು, ಒಂದುವೇಳೆ ತಾವು ಆರಿಸಿಬಂದರೆ ತಮ್ಮ ಕ್ಷೇತ್ರಕ್ಕೆ ಏನೇನು ಕೆಲಸಕಾರ್ಯಗಳನ್ನು ಮಾಡಲಿದ್ದೇವೆಂಬುದನ್ನು ಎಂದಿಗೂ ತಿಳಿಸುವುದಿಲ್ಲ. ಏಕೆಂದರೆ, ಆರಿಸಿಬಂದಮೇಲೆ ಇವರು ಕ್ಷೇತ್ರಕ್ಕಾಗಿ ಯಾವ ಕೆಲಸವನ್ನೂ ಮಾಡುವವರಲ್ಲ. ಅಂದಮೇಲೆ ಇವರದು ಅತ್ಯಂತ ಪ್ರಾಮಾಣಿಕ ಭಾಷಣವಲ್ಲವೆ?
ಪ್ರತಿಯೊಂದು ಪಕ್ಷದವರೂ ತಮ್ಮ ವಿರೋಧಿಗಳ ಭ್ರಷ್ಟಾಚಾರವನ್ನೂ ಅನಾಚಾರವನ್ನೂ ಚುನಾವಣಾ ಭಾಷಣದಲ್ಲಿ ಬಣ್ಣಿಸುತ್ತಾರಷ್ಟೆ. ನಾವು ಎಲ್ಲರ ಭಾಷಣಗಳನ್ನೂ ಹಂಡ್ರೆಡ್ ಪರ್ಸೆಂಟ್ ನಂಬುತ್ತೇವೆ. ಎಲ್ಲರೂ ಸತ್ಯವನ್ನೇ ಹೇಳುತ್ತಿದ್ದಾರೆಂಬುದು ಇವರ ಹಾವ-ಭಾವ, ಉದ್ರೇಕ-ಉನ್ಮಾದ, ಕೋಪ-ತಾಪ ಮತ್ತು ಇವರು (ಭಾಷಣಗಳಲ್ಲಿ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ) ಪ್ರದರ್ಶಿಸುವ ಕಾಗದ-ಪತ್ರ-ಪತ್ರಿಕೆಗಳು ಇವುಗಳಿಂದ ಗೊತ್ತಾಗುತ್ತದೆ.
ನಮ್ಮೀ ರಾಜಕಾರಣಿಗಳು ಸಿದ್ಧಾಂತಬದ್ಧರು. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸುವುದು, ಯೇನಕೇನ ಪ್ರಕಾರೇಣ ಗೆಲ್ಲುವುದು ಮತ್ತು ಗೆದ್ದಮೇಲೆ ಮಂತ್ರಿಗಿರಿ/ನಿಗಮ/ಮಂಡಳಿ ಯಾವುದಾದರೊಂದು ಕುರ್ಚಿಯಲ್ಲಿ ರಾರಾಜಿಸುವುದು ಈ ತ್ರಿವಿಧ (ಸ್ವಯಂ)ದಾಸೋಹವೇ ತಮ್ಮ ರಾಜಕೀಯ ಜೀವನದ ಪರಮಗುರಿಯೆಂಬುದು ಇವರ ಸಿದ್ಧಾಂತ. ಈ ಸಿದ್ಧಾಂತಪಾಲನೆಗಾಗಿಯೇ ಇವರು ದಿನಕ್ಕೆರಡುಬಾರಿ ಪಕ್ಷಾಂತರ ಮಾಡುವುದು. ಸಿದ್ಧಾಂತಪಾಲನೆಗಾಗಿ ಎಂಥ ಕಡುಕಷ್ಟ, ಪಾಪ!
ಇನ್ನು, ಇವರ ನಿಷ್ಪೃಹ ಮನೋಭಾವನ್ನು ನಾನೆಂತು ಬಣ್ಣಿಸಲಿ! ಅದೆಷ್ಟು ನಿಷ್ಪೃಹರಾಗಿ, ಅರ್ಥಾತ್ ನಿಃಸ್ವಾರ್ಥದಿಂದ ಇವರು ಜನಸೇವೆ ಮಾಡುತ್ತಾರೆಂದರೆ, ಯಾವ ವಿಶೇಷ ಆಸ್ತಿಪಾಸ್ತಿಗಳನ್ನೂ ಇವರು ಗಳಿಸಿರುವುದಿಲ್ಲ. ಇವರ ಪೈಕಿ ಎಷ್ಟೋ ಮಂದಿಗೆ ಮನೆಯೂ ಇರುವುದಿಲ್ಲ, ವಾಹನವೂ ಇರುವುದಿಲ್ಲ! ಏನೋ, ಇವರ ಹೆಂಡತಿ ಟೈಲರಿಂಗ್ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ. ಗಂಡಂದಿರನ್ನು ಈ ಹೆಂಡತಿಯರೇ ಸಾಕುತ್ತಾರೆ.
ಇನ್ನು, ಈ ಜನಸೇವಕರ ವಿಧೇಯತೆಯೆಂದರೆ ಅಂಥಿಂಥದೇ? ಹೈಕಮಾಂಡು ತನ್ನ ಕಾಲಲ್ಲಿ ತೋರಿಸಿದ್ದನ್ನು ಇವರು ’ಕೈ’ಯಲ್ಲಿ ಎತ್ತಿಕೊಂಡು ತಲೆಯಮೇಲೆ ಇಟ್ಟುಕೊಳ್ಳುತ್ತಾರೆ! ಇಂಥ ವಿಧೇಯತೆಯು ವಿಶ್ವದ ಇನ್ನಾವ ರಾಷ್ಟ್ರದ ರಾಜಕಾರಣಿಗಳಲ್ಲೂ ಇಲ್ಲ ಬಿಡಿ.
ವಯಸ್ಸು ೭೬ರ ದೇವೇಗೌಡರಾಗಿರಲಿ, ೮೨ರ ಅಡ್ವಾಣಿಯಾಗಿರಲಿ, ೮೩ರ ಬಾಳ್ ಠಾಕ್ರೆ ಆಗಿರಲಿ, ೮೫ರ ಕರುಣಾನಿಧಿ ಆಗಿರಲಿ, ೯೫ರ ಜ್ಯೋತಿ ಬಸು ಆಗಿರಲಿ, ಸೋನಿಯಾ, ರಾಹುಲ್,....ಕೊನೆಗೆ ಎಂಟು ವರ್ಷದ ರೈಹನ್ ವಡ್ರಾ ಅಥವಾ ಆರು ವರ್ಷದ ಮಿರಯಾ ವಡ್ರಾನೇ ಆಗಿರಲಿ, ಹೈಕಮಾಂಡ್ ಎಂದರೆ ಹೈಯೇ. ಪಕ್ಷದ ಎಲ್ಲರೂ ಆ ಹೈಕಮಾಂಡ್‌ನಡಿ ಲೋ! ವೆರಿ ಲೋ!! ವೆರಿ ವೆರಿ ಲೋ!!! ಎಂಥ ವಿಧೇಯತೆ!
ನಮ್ಮೀ ರಾಜಕಾರಣಿಗಳ ಜಾತ್ಯತೀತ ಮನೋಭಾವವಂತೂ ಇಡೀ ವಿಶ್ವಕ್ಕೇ ಮಾದರಿ! ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಎಂಬ ಭೇದಭಾವವಿಲ್ಲದೆ ಚುನಾವಣೆಯ ಸಂದರ್ಭದಲ್ಲಿ ಎಲ್ಲ ಮತೀಯರ ದೇಗುಲ-ಪ್ರಾರ್ಥನಾಸ್ಥಳಗಳಿಗೂ (ಆಯಾ ಉಡುಪುಗಳಲ್ಲಿ) ಭೇಟಿಯಿತ್ತು, ಕೈಮುಗಿದು-ಅಡ್ಡಬಿದ್ದು ಕೃತಾರ್ಥರಾಗುವ ಇವರ ಮತಾತೀತ ಭಕ್ತಿಭಾವವಾಗಲೀ, ಎಲ್ಲ ಜಾತಿ-ಮತಗಳವರ ಮನೆಬಾಗಿಲಿಗೂ ಹೋಗಿ ಹಲ್ಕಿರಿದು ಮತ ಅಂಗಲಾಚುವ ಇವರ ಜಾತ್ಯತೀತ ಮನೋಭಾವವಾಗಲೀ ವರ್ಣನಾತೀತ!
’ಹನುಮನ ಮತವೇ ಹರಿಮತವೋ. ಹರಿಯ ಮತವೆ ಹನುಮನ ಮತವೊ’, ಎಂಬ ದಾಸವಾಣಿಯೊಲ್ ಇವರು, ’ಪ್ರಜೆಗಳ ಮತವೇ ನಮ್ಮ್ ಹಿತವೋ. ನಮ್ಮ ಮತದಾಟ ಪ್ಲಾನ್‌ಯುತವೊ’, ಎಂದು ಮಸಾಲ್ದೋಸವಾಣಿಯಂ ಹರಿಬಿಡುವರು.
ಚುನಾವಣೆಯಾದಮೇಲೆ, ’ನೀನ್ಯಾಕೋ ನಿನ್ನ ಹಂಗ್ಯಾಕೋ’, ಅನ್ನುವ (ಪುರಂದರದಾಸಸಮಾನ) ಧುರಂಧರರಿವರು!
ಇವರಲ್ಲಿ ಕೆಲವರು ’ಧರ್ಮವೆ ಜಯವೆಂಬ ದಿವ್ಯಮಂತ್ರ’ವನ್ನು ಜಪಿಸಿದರೆ, ಉಳಿದವರು ’ಜಯವೆ ಧರ್ಮವೆಂಬ ದಿವ್ಯಮಂತ್ರ’ವನ್ನು ಜಪಿಸುವವರು.
’ಮಣ್ಣಿಂದ ಕಾಯ ಮಣ್ಣಿಂದ’, ಎನ್ನುತ್ತ, ಮಣ್ಣನ್ನು ಗಳಿಸಲೆಂದೇ ಎಲೆಕ್ಷನ್ನಿಗೆ ನಿಲ್ಲುವ ’ಮಣ್ಣಿನ ಮಕ್ಕಳು’ ಇವರು.
’ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಲ್ಲ’, ಎಂಬ ದಾಸವಾಣಿಯ ಮರ್ಮವನ್ನರಿತೇ ಇವರು ಆದಷ್ಟು ಬೇಗನೆ ’ಅಷ್ಟೈಶ್ವರ್ಯಭಾಗ್ಯ’ಶಾಲಿಗಳಾಗಿ ಆ ಭಾಗ್ಯವನ್ನು ಸ್ಥಿರವಾಗಿ ಸ್ವಿಸ್ ಬ್ಯಾಂಕಿನಲ್ಲಿಡಲು ಹೊರಟವರು.
’ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ’, ಎಂಬಂತಾಗಬಾರದೆಂದು ಇವರು ನರ-ಹರಿ ಕೊಡುವುದನ್ನೆಲ್ಲ ಉಣ್ಣುತ್ತ ಕೂರುವವರು.
’ಊಟಕ್ಕೆ ಬಂದೆವು ನಾವು, ನಿಮ್ಮ ಆಟಪಾಠವ ಬಿಟ್ಟು ನಮಗೆ ನೀಡ್ರಯ್ಯಾ’, ಎಂದು ಕೇಳಿ ನೀಡಿಸಿಕೊಂಡು ಉಣ್ಣುವವರು.
ಇಂಥ ಪ್ರಾಮಾಣಿಕ, ಸತ್ಯಸಂಧ, ಸಿದ್ಧಾಂತಬದ್ಧ, ನಿಷ್ಪೃಹ, ದೈವಭಕ್ತ, ಅತಿ ವಿಧೇಯ ಮತ್ತು ಜಾತ್ಯತೀತ ರಾಜಕಾರಣಿಗಳನ್ನು ಹೊಂದಿರುವ ಭಾರತೀಯರಾದ ನಾವೇ ಧನ್ಯರು!
ಇಂಥ ಶ್ರೇಷ್ಠರೂ ರೂಢಿಯೊಳಗುತ್ತಮರೂ ಆದ ರಾಜಕಾರಣಿಗಳ ಬಗ್ಗೆ, ಇವರನ್ನು ಆರಿಸಿ ಕಳಿಸುವ ಮತದಾರ ಬಾಂಧವರ ಬಗ್ಗೆ ಮತ್ತು ಇವರ ಅದ್ಭುತ ಆಳ್ವಿಕೆಗೆ ಒಳಪಟ್ಟಿರುವ ಈ ನಾಡಿನ ಬಗ್ಗೆ ಬರೆಯಲು ಇನ್ನು ನನ್ನಲ್ಲಿ ಪದಗಳೇ ಇಲ್ಲ!
ಲೇಖನಸನ್ಯಾಸ ಸ್ವೀಕರಿಸಿ ಕಾಡಿಗೆ ಹೋಗಿ ಕಂದಮೂಲ ತಿಂದುಕೊಂಡಿರುವುದೇ ನನಗಿನ್ನು ಸೂಕ್ತವೆನ್ನಿಸುತ್ತದೆ.
ಅಂತೆಯೇ ಮಾಡುತ್ತೇನೆ.

ಶುಕ್ರವಾರ, ಮಾರ್ಚ್ 20, 2009

ವರುಣೋದಯ ಗೀ-ತೆಗಳು

-೧-
ವರುಣನ ಅವಕೃಪೆಗೆ ತುತ್ತಾದರೆ
ರೈತ ಪಾಪರ್.
ಪಕ್ಷದ ಅವಕೃಪೆಗೆ ತುತ್ತಾದರೆ
ವರುಣ ಪಾಪ-ರ್.

***

-೨-
ಕೈ ಕತ್ತರಿಸಬೇಕೆಂದು
ನಾನಂದಿದ್ದು
ಆ ಪಕ್ಷದ ಚಿಹ್ನೆ ’ಕೈ’ಯನ್ನು
ಅಂದನಂತೆ
ವರುಣ್ ಗಾಂಧಿ.

’ಸರಿ,
ಮತಯಂತ್ರದಲ್ಲಿ
ಆ ಚಿಹ್ನೆಯ ಮುಂದೆ
ಕತ್ತರಿ
ಮಾರ್ಕ್‌
ಒತ್ತಿರಿ’
ಅಂದನಂತೆ
ರಾಹುಲ್ ಗಾಂಧಿ.

ಯಾರು ಚತುರರು ನಿಮಗೆ
ಈ ಈರ್ವರೊಳಗೆ?

(ಈ ಅಂಬೋಣಗಳು ಗುಳಿಗೆಪ್ಪನವರಿಗೆ ಮಾತ್ರ ತಲುಪಿದ ಎಕ್ಸ್ಕ್ಲೂಸಿವ್ ರಿಪೋರ್ಟ್. ಆದ್ದರಿಂದ ಈ ವರದಿ ’ಗುಳಿಗೆ’ಯಲ್ಲಿ ಮಾತ್ರ.) (ಇದು ಗುಳಿಗೆಯಲ್ಲಿ ಮಾತ್ರೆ! ಅರ್ಥವಾಗಬೇಕಾದರೆ ಇಂದಿನ ’.....’ ಪತ್ರಿಕೆ ನೋಡಿ.)

***

-೩-
’ತಲೆ ತೆಗಿ, ಕೈ ತೆಗಿ’, ಅಂದರೇನಂತೆ,
’ಸಾವಿನ ವ್ಯಾಪಾರಿ’, ಅಂದರೇನಂತೆ;
ಮನಗಳನ್ನೂ ಮಾನವನ್ನೂ ಕೊಂದರೇನಂತೆ,
ಜನನಾಯಕರಾಗಿ ಇವರೇ
ಲೋಕಸಭೆಯಲ್ಲಿ ಸೇರುವರು ಸಂತೆ!