modi ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
modi ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 3, 2009

ಬೆರಳ್‌ನ ತಿರುಳ್

ಲೋಕಸಭಾ ಚುನಾವಣೆಯ ಮತದಾನದ ಗುರುತಿನ ಶಾಯಿಯನ್ನು ಕೆಲ ಗಣ್ಯರು ಬೇರೆ ಬೆರಳುಗಳಿಗೆ ಹಚ್ಚಿಸಿಕೊಂಡದ್ದಕ್ಕೆ ಕಾರಣಗಳನ್ನು ಈ ಕೆಳಗೆ ಬಯಲುಗೊಳಿಸಲಾಗಿದೆ.

ಚಿತ್ರ ಕೃಪೆ: Deccan Herald

ಬಲಪಂಥೀಯ ಯಡಿಯೂರಪ್ಪನವರು ಪಕ್ಷದ ಬಲವರ್ಧನೆಗಾಗಿ ಬಲಮುರಿ ಗಣಪತಿ ದೇವಸ್ಥಾನದ ಅರ್ಚಕರ ಸಲಹೆಯಂತೆ ಹಾಗೂ ತಮ್ಮ ಬಲಗೈ ಬಂಟ ಮುಜರಾ(ಯಿ) ಸಚಿವ ಕೃಷ್ಣಯ್ಯ ಶೆಟ್ಟರ ಸೂಚನೆಯಂತೆ ಬಲಗೈ ಬೆರಳಿಗೆ ಶಾಯಿ ಹಚ್ಚಿಸಿಕೊಂಡಿದ್ದಾರೆ. ತಮ್ಮ ಹೆಸರನ್ನು ಹಲವರು ’ಎಡ’ಯೂರಪ್ಪ ಎಂದು ಉಚ್ಚರಿಸುವುದರಿಂದ ಅದನ್ನು ’ಬಲ’ಯೂರಪ್ಪ ಎಂದು ಬದಲಿಸಿಕೊಳ್ಳುವ ಆಲೋಚನೆಯೂ ಮಾನ್ಯ ಮುಖ್ಯಮಂತ್ರಿಗಳಿಗಿದೆಯಂತೆ. ಅವರ ಸುಪುತ್ರ ರಾಘವೇಂದ್ರ ಮಾತ್ರ ಮಾಡರ್ನ್ ಗೈ ಆಗಿರುವುದರಿಂದ ಎಡಗೈ ಬೆರಳಿಗೇ ಶಾಯಿ ಹಚ್ಚಿಸಿಕೊಂಡಿದ್ದಾನೆ.

ಚಿತ್ರ ಕೃಪೆ: Reuters

ಚಿತ್ರ ಕೃಪೆ: AP

ಅಮಿತಾಭ್ ಬಚ್ಚನ್‌ನ ಪೂರಾ ಕುಟುಂಬವೇ ತೋರು ಬೆರಳಿನ ಬದಲು ಮಧ್ಯಬೆರಳಿಗೆ ಶಾಯಿ ಹಚ್ಚಿಸಿಕೊಂಡಿದೆ. ಏಕೆಂದರೆ, ಆ ಕುಟುಂಬವು ಸದಾ ’ಸೆಂಟರ್’ ಆಫ್ ಅಟ್ರ್ಯಾಕ್ಷನ್ ಆಗಿರಬಯಸುತ್ತದೆ.
’ನಾನೇನು ಕಮ್ಮಿ? ನಾನೂ ಅಷ್ಟೇಯ’, ಎಂದು ಅಮೀರ್ ಖಾನ್ ಕೂಡ ’ಸೆಂಟರ್’ ಫಿಂಗರಿಗೆ ಶಾಯಿ ಹಚ್ಚಿಸಿಕೊಂಡಿದ್ದಾನೆ.
(ಬಚ್ಚನ್ ಕುಟುಂಬವು ಕ್ಯಾಮೆರಾಗಳಿಗೆ ಮಧ್ಯಬೆರಳನ್ನು ಚಾಚಿ ತೋರಿಸುತ್ತಿರುವ ಚಿತ್ರವನ್ನು ಪತ್ರಿಕೆಗಳಲ್ಲಿ ಕಂಡು ಅಮೆರಿಕದ ಕೆಲ ಎನ್ನಾರೈ ಸಂಘಟನೆಗಳು ’ಛೀಛೀ’ ಎಂದು ಅಸಹ್ಯಪಟ್ಟುಕೊಂಡಿವೆಯೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.)


ಚಿತ್ರ ಕೃಪೆ: AFP

ಈ ನಡುವೆ, ಬಲಪಂಥೀಯ ಅಡ್ವಾಣಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾ ಸಾರಾಭಾಯ್ ಕೂಡ ಬಲಗೈ ಬೆರಳಿಗೆ ಶಾಯಿ ಹಚ್ಚಿಸಿಕೊಂಡಿರುವುದು ಕಾಂಗ್ರೆಸ್ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಮಲ್ಲಿಕಾ ಅವರು ’ಆಪರೇಷನ್ ಕಮಲ’ಕ್ಕೆ ಬಲಿಯಾಗಲಿದ್ದಾರೆಯೇ ಎಂಬ ಅನುಮಾನ ಕಾಂಗ್ರೆಸ್ ವಲಯದಲ್ಲಿ ಹುಟ್ಟಿಕೊಂಡಿದೆ. ಆದರೆ, ಮಲ್ಲಿಕಾ ಅವರ ಪುತ್ರಿ ಅನಾಹಿತಾ, ’ಹಾಗೇನಿಲ್ಲ, ನಮ್ಮಮ್ಮ ಕೂಚಿಪುಡಿ-ಭರತನಾಟ್ಯಗಳಲ್ಲೇ ಜೀವನ ಕಳೆದದ್ದರಿಂದ ಅವರಿಗೆ ಯಾವ ಬೆರಳಿಗೆ ಶಾಯಿ ಹಚ್ಚಿಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ, ಹಾಗಾಗಿ ಪರಪಾಟಾಯಿತು, ಅಷ್ಟೆ’, ಎಂದು ಪತ್ರಿಕಾ ಹೇಳಿಕೆ ನೀಡುವ ಮೂಲಕ ವಿಷಯವನ್ನು ತಿಳಿಗೊಳಿಸಲೆತ್ನಿಸಿದ್ದಾರೆ.

ಚಿತ್ರ ಕೃಪೆ: AP

ಎಲ್ಲರಿಗಿಂತ ಬುದ್ಧಿವಂತರೆಂದರೆ ನರೇಂದ್ರ ಮೋದಿ. ಮಾಧ್ಯಮಗಳ ಕ್ಯಾಮೆರಾಗಳಿಗೆ ಶಾಯಿಯ ಬೆರಳನ್ನು ತೋರಿಸುವ ನೆಪದಲ್ಲಿ ಮೋದಿಯು ಪಕ್ಕದ ಬೆರಳನ್ನೂ ಜೊತೆಗೆ ಚಾಚಿ ವಿಜಯದ ಸಂಕೇತವನ್ನೂ (ಹಿಂದುಮುಂದಾಗಿ) ಬೀರಿಬಿಟ್ಟಿದ್ದಾರೆ! ಫಲಿತಾಂಶಕ್ಕೆ ಮುನ್ನವೇ ಜನರನ್ನು ಈ ರೀತಿ ಮೋಡಿ ಮಾಡಲೆತ್ನಿಸುವ ಮೋದಿಯ ಮಿದುಳೆಂದರೆ ಸಾಮಾನ್ಯವೆ?!

ಗುರುವಾರ, ಏಪ್ರಿಲ್ 30, 2009

ಎಷ್ಟೊಂದು ಪ್ರಧಾನಿಗಳು!

ಭಾರತದ ಪ್ರಧಾನಮಂತ್ರಿಯ ಹುದ್ದೆಗೆ ಈ ಸಲ ಭಾರೀ ಪೈಪೋಟಿ ಏರ್ಪಟ್ಟಿದೆ.

’ಮನಮೋಹಕ’ವಾಗಿ ದೇಶ ಆಳಿದ್ದಾರೆ, ಆದ್ದರಿಂದ ಮನಮೋಹನ್ ಸಿಂಗರೇ ಮುಂದುವರಿಯಲಿ ಎಂದು ಸೋನಿಯಾ ಹೇಳುತ್ತಿದ್ದಾರೆ.

’ರಾಹುಕಾಲ’ ಕಳೆದಿದೆ, ರಾಹುಲ್ ಗಾಂಧಿಗೆ ಇನ್ನು ಪ್ರಧಾನಿ ಪಟ್ಟ ಕಟ್ಟಬಹುದು ಎಂದು ಸ್ವಯಂ ಎಂಎಂ ಸಿಂಗರೇ ಸಂಗೀತ ಹಾಡುತ್ತಿದ್ದಾರೆ.

’ಮೂಕರ್ಜಿ’ ನನ್ನದೂ ಇದೆ ಪ್ರಧಾನಿ ಪಟ್ಟಕ್ಕೆ, ಎಂದು ಪ್ರಣವ್ ಮುಖರ್ಜಿ ಪ್ರಣವನಾದಗೈಯುತ್ತಿದ್ದಾರೆ.

’ಪ್ರಕಾಶ’ ನನ್ನದೇನು ಕಮ್ಮಿಯೇ? ಪ್ರಧಾನಿ ಪಟ್ಟಕ್ಕೆ ನಾನೂ ಅಭ್ಯರ್ಥಿಯೇ ಎನ್ನುತ್ತಿದ್ದಾರೆ ಪ್ರಕಾಶ್ ಕಾರಟ್.
(ಹೌದೌದು, ನನ ಗಂಡ ೨೪ ಕ್ಯಾರಟ್ ಅಪ್ಪಟ ಚಿನ್ನ; ನನ್ನ ಪ್ರಕಾಶ ಪ್ರಕಾಶಮಾನ ವಜ್ರ ಅನ್ನುತ್ತಿದ್ದಾರೆ ಬೃಂದಾ ಕಾರಟ್.)

ರಾಂ ರಾಂ ’ಸೀತಾರಾಂ’, ಅಹಂ ಅಪಿ ಅರ್ಹಂ ಎಂದು ಸಿತಾರಂ ಬಾರಿಸತೊಡಗಿದ್ದಾರೆ ಚಾರ್ವಾಕ ಯೆಚೂರಿ ಸೀತಾರಾಂ.

’ಅಧ್ವಾನ’ದ ಮಾತಾಡಬೇಡಿ, ಇದು ರಾಮ ಮಂದಿರ, ನಾ ರಾಮಚಂದಿರ, ಅನ್ನುತ್ತಿದ್ದಾರೆ ಈಗಾಗಲೇ ಪಟ್ಟಾಭಿಷೇಕ ಆದಂತೆ ಕನಸು ಕಾಣುತ್ತಿರುವ ಅದ್ವಾನಿ.

’ಮೋಡೀ’ ಹಮಾರೀ, ಜಮೇಗಾ ಐಸೇ ಜಾನೀ, ಹಮ್ ತೋ ಹ್ಞೈ ಮುಖ್‌ಮಂತ್ರಿ, ಕಲ್ ಬನ್‌ತೇ ಹ್ಞೈ ಪರ್‌ಧಾನೀ, ಎಂದು ’ಔಲಾದ್’ ಫಿಲಂ ಸ್ಟೈಲ್‌ನಲ್ಲಿ ಒಳಗೊಳಗೇ ಹಾಡಿಕೊಳ್ಳುತ್ತಿದ್ದಾರೆ ನರೇಂದ್ರ ಮೋದಿ.
(ಜೋಡೀ ಹಮಾರೀ, ಕಹೇಗಾ ಐಸೇ ಜಾನೀ, ಎಂದು ’ಮೋಡಿ’ಯ (ಅಂತರಂಗದ) ಮಾತನ್ನು ಚಲಾವಣೆಗೆ ತರುತ್ತಿದ್ದಾರೆ ಶೌರಿ-ಜೇಟ್ಲಿ ಜೋಡಿ.)

’ಘರ್ ಘರ್ ಮೇ ಪಕಾತೇ ಹ್ಞೈ ಆಲೂ, ಸರ್‌ಕಾರ್ ಕೋ ಚಲಾತೇ ಹ್ಞೈ ಲಾಲೂ’, ಎನ್ನುತ್ತಿದ್ದಾರೆ ಲಾಲೂ ಪ್ರಸಾದ ತಿಂದ ಭಕ್ತರು.

’ರಾಮ್’ ಕಭೀ ನಹೀ ಕಿಯಾ ’ವಿಲಾಸ್’, ಅಬ್ ಪಿಎಂ ಬನೇಗಾ ರಾಮ್ ವಿಲಾಸ್, ಅನ್ನುತ್ತಿದ್ದಾರೆ ಪಾಸ್ವಾನ್.

’ಮುಲಾಂ’ನಂತೆ ’ಮುಲಾಯಂ’ ನಾನು, ಈ ಸಲ ಪ್ರಧಾನಿಯಾದೇನು ಎಂದು ಕನಸು ಕಾಣುತ್ತಿದ್ದಾರೆ ರಫ್ ಅಂಡ್ ಟಫ್ ಮುಲಾಯಂ ಸಿಂಗ್ ಯಾದವ್.

’ಚಂದ್ರ’ ಸೂರ್ಯುಡು ಸಾಕ್ಷಿ, ನೇನೇ ನೆಕ್ಸ್ಟ್ ಪ್ರಧಾನುಡು ಬಾಬೂ, ಅನ್ನುತ್ತಿದ್ದಾರೆ ಚಂದ್ರಬಾಬು ನಾಯ್ಡು.

’ಪವರ್’ಫುಲ್ ಕಣ್ರೀ ನಾನು, ಪ್ರಧಾನಿ ಆಗ್ದೇ ಏನು? ಎಂದು ಸೋಟೆ ತಿರುವಿ ಚಾಲೆಂಜ್ ಹಾಕುತ್ತಿದ್ದಾರೆ ಶರದ್ ಪವಾರ್.

ಸಿಕ್ಕರೆ ಚಾನ್ಸು ’ಜೈ’ ಅಂತೀನಿ, ಪುರಚ್ಚಿ ತಲೈವಿ ಸೈ ಅಂತೀನಿ, ಅನ್ತಿದ್ದಾರೆ ಜೈಲಲಿತಮ್ಮ. (ಕ್ಷಮಿಸಿ, ಅಮ್ಮ ಅಲ್ಲ, ಕುಮಾರಿ.)

ಎಲ್ಲಾ ’ಮಾಯ’ವೋ ಪ್ರಭುವೇ, ಎಲ್ಲಾ ಮಾಯವೋ; ಸಿಎಂ ಮಾಯವೋ ಪಿಎಂ ಮಾಯವೋ, ನಾ ಪೀಯೆಮ್ಮಾದ್ರೆ ದೇಶ್ವೇ ಮಾಯವೋ, ಎಂದು ಗುರಿ ತಪ್ಪದ ಮಗಳಂತೆ ಹಾಡುತ್ತಿದ್ದಾರೆ ಮಾಯಾವತಿ ಮೇ’ಢಂ’. (ಮಾಯಾವತಿ ಮೇ ದಂ ಕಿತ್‌ನಾ!)

ಪ್ರಧಾನಿ ಹುದ್ದೆಗೆ ಇಷ್ಟೆಲ್ಲ ಮಂದಿ ಕೂಗು ಹಾಕುತ್ತಿರುವಾಗ ನಮ್ಮ ದೇವೇಗೌಡರು ಮಾತ್ರ, ’ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ ನೆಮ್ಮದಿಗೆ ಭಂಗವಿಲ್ಲ, ಮುದ್ದೇ ನಿನಗೆ ಸಾಟಿಯಿಲ್ಲ, ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನಾ ಅಳುಕದೆ ಮುಂದೇ ಸಾಗುವೆ’, ಎಂದು ಹಾಡುತ್ತ ಕೂಲಾಗಿ ಮನ್ನಡೆದಿದ್ದಾರೆ.
ನಾಳೆ ಅವರು, ’ದೇವರ ಆಟ ಬಲ್ಲವರಾರು, ಆತನ ಎದಿರು ನಿಲ್ಲುವರಾರು, ಕೇಳದೆ ಸುಖವ ತರುವ, ಹೇಳದೆ ಕುರ್ಚಿಯ ಕೊಡುವ’, ಎಂದು ದೇವರ ಕಡೆ ಕೈತೋರಿಸಿ ಪಿಎಂ ಕುರ್ಚಿಯ ಕಡೆ ನಡೆದರೂ ಆಶ್ಚರ್ಯವಿಲ್ಲ. ಗೌಡರ ಹೆಜ್ಜೆ ಬಲ್ಲವರಾರು? ೧೯೯೬ರ ಉದಾಹರಣೆ ನಮ್ಮೆದುರಿದೆಯಲ್ಲಾ!