ದೇವೇಗೌಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ದೇವೇಗೌಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮೇ 7, 2009

ಪ್ರಧಾನಿ ಪ್ರಸಂಗ

ರಾಹುಲ್ ಗಾಂಧಿಗೆ ಸಿಕ್ಕಿತು ಎಂದರೆ ಪೀಯೆಮ್ಮಿನ ಪಟ್ಟ
ರಾಹು-ಕೇತುಗಳು ಪಕ್ಕದಿ ಬರುವುವು ಆಗ ಅವನು ಕೆಟ್ಟ!
ಮತ್ತೇನಾದರು ಮನಮೋಹನನೇ ಆದರೆ ಪ್ರಧಾನಿಯು
ಕತ್ತೆಯಂತೇನೊ ದುಡಿವನು ಆದರೆ ಬಹಳೇ ನಿಧಾನಿಯು!

ಅದ್ವಾನಿಯು ಆದರು ಎಂದರೆ ಭಾರತದ ಪ್ರಧಾನ್ಮಂತ್ರಿ
ಅಧ್ವಾನವು ದೇಶವು ಭಾರತಕಾಗೆಂಥಾ ಗತಿ ಬಂತ್ರೀ!
ಕಾಂಗ್ರೆಸ್-ಕಮ್ಯುನಿಸ್ಟ್ ಹೀಗನ್ನುವುದು, ನಾನಂದದ್ದಲ್ರೀ
ಟಾಂಗ್ ಕೊಡುವುದೆ ಚಟ, ದೇಶದ ಯೋಚನೆ ಇವುಗಳಿಗೇನಿಲ್ರೀ!

ಮೂರನೆ ರಂಗವೊ ನಾಲ್ಕನೆ ಮಂಗವೊ ಆದರೆ ಪೀಯೆಮ್ಮು
ಮಾರನೆ ದಿನವೇ ಭರ್ಜರಿ ಸೀನು, ಫೈಟಿಂಗ್ ಏಕ್‌ದಮ್ಮು!
ಕರಟ್, ಮುಲಾಯಂ, ಪಾಸ್ವಾನ್, ಮಾಯಾ, ದೇವೇಗೌಡ, ಜಯಾ,
ಶರದ್, ಲಾಲುಗಳ ಶೀತಲ ಸಮರದಿ ದೇಶದ ಹಿತ ಮಾಯ!

ಭಾನುವಾರ, ಮೇ 3, 2009

ನೀವು ಕೇಳದಿರಿ - 3

* ಕರ್ನಾಟಕದಲ್ಲಿ ಮತದಾನ ಮುಗಿದರೂ ಪಕ್ಷಗಳ ಪರಸ್ಪರ ಕೆಸರೆರಚಾಟ ನಿಂತಿಲ್ಲವಲ್ಲ ಗುರುವೇ!

- ಎಲ್ಲರ ಬಳಿಯೂ ಆ ಪಾಟಿ ಕೆಸರಿದೆಯಲ್ಲಾ, ಅದನ್ನು ಹೇಳು ಶಿಷ್ಯಾ!

+++

* ಪಕ್ಷಗಳ ಕೆಸರೆರಚಾಟದ ಬಗ್ಗೆ ರವಷ್ಟು ಕಮೆಂಟ್ ಮಾಡಿ ಗುರುವೇ.

- ಓಕೆ ಶಿಷ್ಯಾ, ಕೇಳು.
’ಕೈ ಕೆಸರಾದರೆ ಬಾಯ್ ಮೊಸರು’, ಎಂದು ನಂಬಿ ಕಾಂಗ್ರೆಸ್ ’ಕೈ’ ಕೆಸರು ಮಾಡಿಕೊಳ್ಳುತ್ತಿದೆ.
ಜೆಡಿಎಸ್ ಪಿತಮಹಾಶಯ ಸ್ವಯಂ ಕೆಸರಿನ (ಮಣ್ಣಿನ) ಮಗ.
ಇನ್ನು ಬಿಜೆಪಿ; ಅದು ’ಕೆಸರಿನ ಕಮಲ’. ಕೆಸರಿದ್ದರೇನೇ ಕೇಸರಿಗೆ ಖುಷಿ (ಸದಾ ಆನಂದ).
ಹೀಗಿರುವಾಗ ಸದರಿ ಕೆಸರೆರಚಾಟದಲ್ಲಿ ವಿಶೇಷವೇನಿಲ್ಲ.
ನಮ್ಮೀ ಪಕ್ಷಗಳಿಗೆ ಗೊತ್ತಿರುವುದು ಎರಡೇ. ಕೆಸರಾಟ ಮತ್ತು ಕೊಸರಾಟ. ಏನಂತೀ ಶಿಷ್ಯಾ?

+++

* ಸ್ವಿಸ್ ಬ್ಯಾಂಕ್ ಹಣ ಭಾರತಕ್ಕೆ ಬರುತ್ತೆಯೆ?

- ಬರುತ್ತೆ, ಬರುತ್ತೆ; ಮತದಾನದ ಅಂತಿಮ ದಿನವಾದ ಮೇ ೧೩ರ ತನಕ ಬರ್ತಾನೇ ಇರುತ್ತೆ.

+++

* ಮುಷ್ಕರನಿರತ ಕಿರಿಯ ವೈದ್ಯರಿಗೆ ಏನಾಗಬೇಕು?

- ಕಿರಿ ವೈದ್ಯರು ಕಿರಿಕಿರಿ ವೈದ್ಯರಾಗದಿದ್ದರೆ ಸಾಕು.

+++

* ಕಸಬ್ ಏನೇನೋ ಡಿಮಾಂಡ್ ಮಾಡ್ತಿದ್ದಾನೆ!

- ಬೇರೆ ಕಸಬಿಲ್ಲ, ಇನ್ನೇನ್ಮಾಡ್ತಾನೆ?

+++

* ಪ್ರಪಂಚದಲ್ಲೇ ಅತೀ ಸುಂದರರು ಯಾರು?

- ಅಧಿಕಾರದ ಅಥವಾ ಜನಪ್ರಿಯತೆಯ ನಂಟುಳ್ಳವರು.
ಉದಾ: ಮಿಷೆಲ್ ಒಬಾಮಾ, ಫ್ರೀಡಾ ಪಿಂಟೊ, ದೇವ್ ಪಟೇಲ್....

+++

* ವಿಶ್ವಶಾಂತಿಗೆ ಯಾವಯಾವ ಹೋಮ ಮಾಡುತ್ತಾರೆ?

- ಸದ್ಯಕ್ಕೆ ಹಂದಿಗಳ ಮಾರಣಹೋಮ ಮಾಡುತ್ತಿದ್ದಾರೆ.

--೦--

ಗುರುವಾರ, ಏಪ್ರಿಲ್ 30, 2009

ಗುಳಿಗೆಪ್ಪ ತಂದ ಸುದ್ದಿಗಳು

ಪಾದರಕ್ಷೆ ಪರವಾಗಿ ಮೊಕದ್ದಮೆ!
-------------------------
ರಾಜಕಾರಣಿಗಳತ್ತ ಎಸೆಯುವ ಮೂಲಕ ಪಾದರಕ್ಷೆಗಳಿಗೆ ಅವಮಾನ ಎಸಗಲಾಗುತ್ತಿದೆಯೆಂದು ಬೆಂಗಳೂರಿನ ವಕೀಲರೊಬ್ಬರು ಕೋರ್ಟಿನ ಮೊರೆಹೊಕ್ಕಿದ್ದಾರೆ! ಚುನಾವಣೆ ವೇಳೆ ದೇಶದ ನಾನಾ ಕಡೆಗಳಲ್ಲಿ ರಾಜಕಾರಣಿಗಳತ್ತ ಶೂ ಹಾಗೂ ಚಪ್ಪಲಿಗಳನ್ನು ಎಸೆದವರೆಲ್ಲರ ವಿರುದ್ಧ ಸದರಿ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ (ಪಾದರಕ್ಷೆ ಪರವಾಗಿ) ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಪಾದರಕ್ಷೆಗಳಿಗೆ ಅವಮಾನವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯವು ಕೇಸ್ ದಾಖಲಿಸಿಕೊಂಡು ಚಪ್ಪಲಿ-ಶೂ ಎಸೆದವರಿಗೆಲ್ಲ ಶೂಕಾಸ್ ನೋಟೀಸ್ ಜಾರಿಮಾಡಿದೆ.

***

ರಾಹುಲ್‌ಗೆ ಇಂದಿರಾ ಪ್ರಶಸ್ತಿ
----------------------
ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಯನ್ನು ರಾಹುಲ್ ಗಾಂಧಿಗೆ ನೀಡಲಾಗುವುದು. ಚುನಾವಣಾ ವೇಳೆ ರಾಹುಲ್ ಗಾಂಧಿಯು ವಿಮಾನ, ಹೆಲಿಕಾಪ್ಟರ್ ಮತ್ತು ಕಾರಿನಲ್ಲಿ ದೇಶದ ಕೆಲವು ಸ್ಥಳಗಳಿಗೆ ಭೇಟಿಕೊಟ್ಟು, ಬಡಬಗ್ಗರೊಡನೆ ಕ್ಯಾಮೆರಾಗಳಿಗೆ ಪೋಸು ಕೊಟ್ಟು, ಯುವಕ-ಯುವತಿಯರ ’ಕೈ’ಕುಲುಕಿ, ವೇದಿಕೆಯಿಂದ ಭಾವಾವೇಶಭರಿತ ಭಾಷಣ ಮಾಡಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಕೊಡಲಾಗುವುದು. ಈ ಬಗ್ಗೆ ಪ್ರಕಟಣೆ ಹೊರಬೀಳುತ್ತಲೇ ರಾಹುಲ್‌ನನ್ನು ಮುತ್ತಿಕೊಂಡ ಪತ್ರಕರ್ತೆಯರೊಡನೆ ಮಾತನಾಡುತ್ತ ರಾಹುಲ್, ’ಈ ಪ್ರಶಸ್ತಿಗೆ ನನಗಿಂತ ನನ್ನ ಅಕ್ಕ ಹೆಚ್ಚು ಅರ್ಹಳು. ಗೀತೋಪದೇಶೋಪದೇಶದ ಮೂಲಕ ರಾಷ್ಟ್ರಾದ್ಯಂತ ಭಾವೈಕ್ಯತೆಯ ಮಿಂಚಿನ ಸಂಚಾರ ಉಂಟುಮಾಡಿದ್ದಾಳೆ ಆಕೆ’, ಎಂದಿದ್ದಾರೆ.
ರಾಹುಲ್‌ನ ಈ ವಿನಯಪೂರ್ಣ ಮಾತಿಗಾಗಿ ಆತನಿಗೆ ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನೂ ಕೊಡತಕ್ಕದ್ದೆಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

***

ವರುಣ್‌ಗೆ ಶೌರ್ಯ ಪ್ರಶಸ್ತಿ
---------------------
ಕೈ ಕತ್ತರಿಸುತ್ತೇನೆಂದು ಹೇಳುವ ಮೂಲಕ ಅಪ್ರತಿಮ ಶೌರ್ಯ ಮೆರೆದಿದ್ದಕ್ಕಾಗಿ ವರುಣ್ ಗಾಂಧಿಗೆ ಈ ಸಲದ ’ಮಹಾಕಮಲಚಕ್ರ’ ಶೌರ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆದರೆ, ತಾನು ಹೇಳಿದ್ದು ನಿಜವಾದ ಕೈಗಳ ಬಗ್ಗೆ ಅಲ್ಲ, ಕಾಂಗ್ರೆಸ್‌ನ ’ಕೈ’ ಚಿಹ್ನೆಯ ಬಗ್ಗೆ, ಎಂದು ಸ್ಪಷ್ಟನೆ ನೀಡಿ ವರುಣ್ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

***

ಕೋಟಿ ರಾಮು ಹೊಸ ಚಿತ್ರ
---------------------
’ಕಿರಣ್ ಬೇಡಿ’ ಚಿತ್ರದ ಮೂಲಕ ಪತ್ನಿ ಮಾಲಾಶ್ರೀಗೆ ಬೆಳ್ಳಿ ತೆರೆಮೇಲೆ ಮರುಹುಟ್ಟು ನೀಡಿರುವ ನಿರ್ಮಾಪಕ ಕೋಟಿ ರಾಮು ಅವರು ತಮ್ಮ ಮುಂದಿನ ಚಿತ್ರಕ್ಕಾಗಲೇ ನಾಮಕರಣ ಮಾಡಿದ್ದಾರೆ. "ಅತ್ತೆಗಿಂತ ಒಂದು ’ಕೈ’ ಮಿಗಿಲಾದ ಸೊಸೆ" ಎಂಬ ಇಷ್ಟುದ್ದದ ಹೆಸರು ಹೊತ್ತು ನಿರ್ಮಾಣವಾಗಲಿರುವ ಆ ಚಿತ್ರದ ವಿಶೇಷವೆಂದರೆ ಅದರಲ್ಲಿ ಅತ್ತೆಯ ಪಾತ್ರವೇ ಇಲ್ಲ! ಇಂದಿರಾಗಾಂಧಿಯನ್ನು ಹೋಲುವ ಭಾವಚಿತ್ರಗಳಿಂದಲೇ ಅತ್ತೆಯ ಪಾತ್ರವನ್ನು ಬಿಂಬಿಸಲಾಗುವುದು. ಸೊಸೆಯ ಪಾತ್ರದ ಮೂಲಕ ಸಂಸದೆ ತೇಜಸ್ವಿನಿ ಗೌಡ ಅವರು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.
’ಕಿರಣ್ ಬೇಡಿ’ ಯಶಸ್ಸಿನಿಂದ ಸ್ಫೂರ್ತಿಹೊಂದಿ ನೀವಿನ್ನು ’ಸಾಂಗ್ಲಿಯಾನಾ ಭಾಗ-೪’ ತೆಗೆಯುವಿರಾ ಎಂಬ ಪತ್ರಕರ್ತರೋರ್ವರ ಪ್ರಶ್ನೆಗೆ ರಾಮು ಕೆರಳಿ ಕೆಂಡಾಮಂಡಲ ಆದರೆಂದು ವರದಿಯಾಗಿದೆ.

***

ನಟರಾಜನಾದ ಶಂಕರ
------------------
ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಎಂ.ಎನ್.ವಿದ್ಯಾಶಂಕರ್ ಅವರು ಭರತನಾಟ್ಯ ಪ್ರವೀಣರು ಎಂಬ ಸ್ವಾರಸ್ಯಕರ ಸಂಗತಿ ಬಯಲಾಗಿದೆ. ಚುನಾವಣೆ ವೇಳೆ ಪತ್ರಿಕಾಗೋಷ್ಠಿಗಳಲ್ಲಿ ಅವರ ಹಾವಭಾವ ಕಂಡು ಅನುಮಾನಗೊಂಡ ಪತ್ರಕರ್ತನೊಬ್ಬ ವಿದ್ಯಾಶಂಕರ್ ಅವರನ್ನು ವಿಚಾರಿಸಿದಾಗ ಅವರೇ ಈ ಸಂಗತಿಯನ್ನು ಹೊರಗೆಡಹಿದ್ದಾರೆ. ಹೈಸ್ಕೂಲ್ ದಿನಗಳಿಂದಲೂ ತಾನು ಭರತನಾಟ್ಯ ಅಭ್ಯಾಸ ಮಾಡಿದುದಾಗಿಯೂ, ವಿದ್ಯಾಭ್ಯಾಸ, ಐಎಎಸ್ ತಯಾರಿ ಮತ್ತು ಉನ್ನತ ಅಧಿಕಾರಿಯಾಗಿ ಆಡಳಿತ ನಿರ್ವಹಣೆ ಈ ಒತ್ತಡಗಳ ದೆಸೆಯಿಂದಾಗಿ ತನಗೆ ನೃತ್ಯ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಲಿಲ್ಲವೆಂದೂ, ಇಷ್ಟು ವರ್ಷ ತಾನು ಅದುಮಿಟ್ಟುಕೊಂಡ ಆ ಅಭಿಲಾಷೆಯು ಈಗ ಪತ್ರಿಕಾಗೋಷ್ಠಿಗಳಲ್ಲಿ ಆಂಗಿಕ ಅಭಿನಯ ಮತ್ತು ಹಾವಭಾವಗಳ ಮೂಲಕ ಪ್ರಕಟಗೊಳ್ಳುತ್ತಿದೆಯೆಂದೂ ವಿದ್ಯಾಶಂಕರ್ ಅವರು ಹೇಳಿದ್ದಾರೆ.
ನೌಕರಿಯಿಂದ ನಿವೃತ್ತಿ ಹೊಂದಿದ ನಂತರ ತಾವು ಭರತನಾಟ್ಯ ಶಾಲೆಯೊಂದನ್ನು ತೆರೆಯಲಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

***

’ಕಿಸ್ಬಾಯಿ ರೋಗ’ ಮಾಯ!
----------------------
’ಹಂದಿ ರೋಗ’ಕ್ಕಿಂತ ವ್ಯಾಪಕವಾಗಿ ದೇಶಾದ್ಯಂತ ಹರಡಿದ್ದ ’ಕಿಸ್ಬಾಯಿ ರೋಗ’ವು ಈಗ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆಯೆಂದು ಭಾರತೀಯ ವೈದ್ಯಕೀಯ ಮಂಡಳಿಯು ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಚುನಾವಣಾ ಸಮಯದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಈ ರೋಗವು ಪುಢಾರಿಗಳಿಗೆ ಮಾತ್ರ ತಗುಲಿತ್ತು.
’ಈ ರೋಗಪೀಡಿತರು ಸದಾಕಾಲ ಬಾಯಿ ಕಿಸಿದುಕೊಂಡೇ ಇರುತ್ತಾರೆ, ಮತದಾನ ಮುಗಿದ ತಕ್ಷಣ ಅವರ ಈ ಕಾಯಿಲೆಯು ತಂತಾನೇ ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತದೆ’, ಎಂಬ ಭಾವೈಮಂಡಳಿಯ ಹೇಳಿಕೆಯನುಸಾರ ಇದೀಗ ಮತದಾನ ಮುಗಿದ ಕ್ಷೇತ್ರಗಳಲ್ಲಿ ಈ ರೋಗವು ಹೇಳಹೆಸರಿಲ್ಲದಂತೆ ಮಾಯವಾಗಿದೆ!
ದೇಶದಲ್ಲಿ ಎಲ್ಲೋ ಕೆಲವರಿಗೆ ಮಾತ್ರ ಕಿಸ್ಬಾಯಿ ರೋಗವು ಸದಾಕಾಲ ಇರುತ್ತದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಸದಾನಂದ ಗೌಡರು ಅಂಥವರಲ್ಲೊಬ್ಬರು. ರೋಗಿಗಳಿಗೆ ಈ ಕಾಯಿಲೆಯಿಂದ ಏನೂ ನಷ್ಟವಿಲ್ಲ, ಬದಲಾಗಿ ಲಾಭವಾಗುವ ಸಾಧ್ಯತೆ ಇದೆ! ಆದರೆ, ಕಿಸ್ಬಾಯಿ ರೋಗಿಗಳ ಎದುರಿರುವವರು ಮಾತ್ರ ಮೋಸವೆಂಬ ಹಾನಿಗೊಳಗಾಗುವ ಸಂಭವವಿದೆ ಎಂದು ವೈದ್ಯಕೀಯ ಮಂಡಳಿಯು ಎಚ್ಚರಿಸಿದೆ.

***

ಗೌಡರ ಮುದ್ದೆ
-----------
ಹಿಂದಿ ಭಾಷೆಯ ಅಜ್ಞಾನದಿಂದಾಗಿ ದೇವೇಗೌಡರು ಮುಜುಗರಕ್ಕೊಳಗಾದ ಪ್ರಕರಣ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
ತೃತೀಯ ರಂಗದ ಚುನವಣಾ ಪ್ರಚಾರಕ್ಕಾಗಿ ಈಚೆಗೆ ಯು.ಪಿ.ಗೆ ಹೋಗಿದ್ದ ಗೌಡರು ಅಲ್ಲಿನ ಗ್ರಾಮವೊಂದರ ಸಭೆಯಲ್ಲಿ ಭಾಗವಹಿಸಿದ್ದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷನು ತನ್ನ ಭಾಷಣದಲ್ಲಿ, ’ಹಮಾರೇ ಸಾಮ್ನೆ ಅತ್ಯಂತ್ ಪ್ರಮುಖ್ ಮುದ್ದೆ ಹೈ..’ ಎಂದಾಕ್ಷಣ ದೇವೇಗೌಡರು, ’ಹೌದಾ? ಎಲ್ಲದೆ, ತತ್ತಾ’, ಎಂದು ಕೈಚಾಚಿದರೆಂದು ವರದಿಯಾಗಿದೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಆ ಹಳ್ಳಿಗನು ಒಂದು ಕ್ಷಣ ಏನೂ ತೋಚದೇ ಸುಮ್ಮನೆ ನಿಂತುಬಿಟ್ಟ. ಕೂಡಲೇ ಮಧ್ಯಪ್ರವೇಶಿಸಿದ ವೈ.ಎಸ್.ವಿ.ದತ್ತ ಉಭಯರಿಗೂ ಅರ್ಥ ವಿವರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಭೆಯ ನಂತರ ತಮ್ಮತಮ್ಮೊಳಗೇ ದೇವೇಗೌಡರನ್ನು ಗೇಲಿಮಾಡಿ ಮಾತಾಡಿಕೊಳ್ಳುತ್ತಿದ್ದ ಪತ್ರಕರ್ತರತ್ತ ಧಾವಿಸಿದ ದತ್ತ, ’ಹಿಂದಿ ಭಾಷಿಕರಾದ ನೀವೇನು ಬಹುಭಾಷಾಪಂಡಿತರೇ? ಗೌಡ ಅನ್ನುವ ಬದಲು ನಿಮ್ಮಲ್ಲನೇಕರು ಘೋಡಾ ಅನ್ನುತ್ತೀರಲ್ಲ!’ ಎಂದು ದಬಾಯಿಸಿ ಪತ್ರಕರ್ತರ ಬಾಯಿಮುಚ್ಚಿಸಿದ್ದಾಗಿ ವರದಿಯಾಗಿದೆ.

ಎಷ್ಟೊಂದು ಪ್ರಧಾನಿಗಳು!

ಭಾರತದ ಪ್ರಧಾನಮಂತ್ರಿಯ ಹುದ್ದೆಗೆ ಈ ಸಲ ಭಾರೀ ಪೈಪೋಟಿ ಏರ್ಪಟ್ಟಿದೆ.

’ಮನಮೋಹಕ’ವಾಗಿ ದೇಶ ಆಳಿದ್ದಾರೆ, ಆದ್ದರಿಂದ ಮನಮೋಹನ್ ಸಿಂಗರೇ ಮುಂದುವರಿಯಲಿ ಎಂದು ಸೋನಿಯಾ ಹೇಳುತ್ತಿದ್ದಾರೆ.

’ರಾಹುಕಾಲ’ ಕಳೆದಿದೆ, ರಾಹುಲ್ ಗಾಂಧಿಗೆ ಇನ್ನು ಪ್ರಧಾನಿ ಪಟ್ಟ ಕಟ್ಟಬಹುದು ಎಂದು ಸ್ವಯಂ ಎಂಎಂ ಸಿಂಗರೇ ಸಂಗೀತ ಹಾಡುತ್ತಿದ್ದಾರೆ.

’ಮೂಕರ್ಜಿ’ ನನ್ನದೂ ಇದೆ ಪ್ರಧಾನಿ ಪಟ್ಟಕ್ಕೆ, ಎಂದು ಪ್ರಣವ್ ಮುಖರ್ಜಿ ಪ್ರಣವನಾದಗೈಯುತ್ತಿದ್ದಾರೆ.

’ಪ್ರಕಾಶ’ ನನ್ನದೇನು ಕಮ್ಮಿಯೇ? ಪ್ರಧಾನಿ ಪಟ್ಟಕ್ಕೆ ನಾನೂ ಅಭ್ಯರ್ಥಿಯೇ ಎನ್ನುತ್ತಿದ್ದಾರೆ ಪ್ರಕಾಶ್ ಕಾರಟ್.
(ಹೌದೌದು, ನನ ಗಂಡ ೨೪ ಕ್ಯಾರಟ್ ಅಪ್ಪಟ ಚಿನ್ನ; ನನ್ನ ಪ್ರಕಾಶ ಪ್ರಕಾಶಮಾನ ವಜ್ರ ಅನ್ನುತ್ತಿದ್ದಾರೆ ಬೃಂದಾ ಕಾರಟ್.)

ರಾಂ ರಾಂ ’ಸೀತಾರಾಂ’, ಅಹಂ ಅಪಿ ಅರ್ಹಂ ಎಂದು ಸಿತಾರಂ ಬಾರಿಸತೊಡಗಿದ್ದಾರೆ ಚಾರ್ವಾಕ ಯೆಚೂರಿ ಸೀತಾರಾಂ.

’ಅಧ್ವಾನ’ದ ಮಾತಾಡಬೇಡಿ, ಇದು ರಾಮ ಮಂದಿರ, ನಾ ರಾಮಚಂದಿರ, ಅನ್ನುತ್ತಿದ್ದಾರೆ ಈಗಾಗಲೇ ಪಟ್ಟಾಭಿಷೇಕ ಆದಂತೆ ಕನಸು ಕಾಣುತ್ತಿರುವ ಅದ್ವಾನಿ.

’ಮೋಡೀ’ ಹಮಾರೀ, ಜಮೇಗಾ ಐಸೇ ಜಾನೀ, ಹಮ್ ತೋ ಹ್ಞೈ ಮುಖ್‌ಮಂತ್ರಿ, ಕಲ್ ಬನ್‌ತೇ ಹ್ಞೈ ಪರ್‌ಧಾನೀ, ಎಂದು ’ಔಲಾದ್’ ಫಿಲಂ ಸ್ಟೈಲ್‌ನಲ್ಲಿ ಒಳಗೊಳಗೇ ಹಾಡಿಕೊಳ್ಳುತ್ತಿದ್ದಾರೆ ನರೇಂದ್ರ ಮೋದಿ.
(ಜೋಡೀ ಹಮಾರೀ, ಕಹೇಗಾ ಐಸೇ ಜಾನೀ, ಎಂದು ’ಮೋಡಿ’ಯ (ಅಂತರಂಗದ) ಮಾತನ್ನು ಚಲಾವಣೆಗೆ ತರುತ್ತಿದ್ದಾರೆ ಶೌರಿ-ಜೇಟ್ಲಿ ಜೋಡಿ.)

’ಘರ್ ಘರ್ ಮೇ ಪಕಾತೇ ಹ್ಞೈ ಆಲೂ, ಸರ್‌ಕಾರ್ ಕೋ ಚಲಾತೇ ಹ್ಞೈ ಲಾಲೂ’, ಎನ್ನುತ್ತಿದ್ದಾರೆ ಲಾಲೂ ಪ್ರಸಾದ ತಿಂದ ಭಕ್ತರು.

’ರಾಮ್’ ಕಭೀ ನಹೀ ಕಿಯಾ ’ವಿಲಾಸ್’, ಅಬ್ ಪಿಎಂ ಬನೇಗಾ ರಾಮ್ ವಿಲಾಸ್, ಅನ್ನುತ್ತಿದ್ದಾರೆ ಪಾಸ್ವಾನ್.

’ಮುಲಾಂ’ನಂತೆ ’ಮುಲಾಯಂ’ ನಾನು, ಈ ಸಲ ಪ್ರಧಾನಿಯಾದೇನು ಎಂದು ಕನಸು ಕಾಣುತ್ತಿದ್ದಾರೆ ರಫ್ ಅಂಡ್ ಟಫ್ ಮುಲಾಯಂ ಸಿಂಗ್ ಯಾದವ್.

’ಚಂದ್ರ’ ಸೂರ್ಯುಡು ಸಾಕ್ಷಿ, ನೇನೇ ನೆಕ್ಸ್ಟ್ ಪ್ರಧಾನುಡು ಬಾಬೂ, ಅನ್ನುತ್ತಿದ್ದಾರೆ ಚಂದ್ರಬಾಬು ನಾಯ್ಡು.

’ಪವರ್’ಫುಲ್ ಕಣ್ರೀ ನಾನು, ಪ್ರಧಾನಿ ಆಗ್ದೇ ಏನು? ಎಂದು ಸೋಟೆ ತಿರುವಿ ಚಾಲೆಂಜ್ ಹಾಕುತ್ತಿದ್ದಾರೆ ಶರದ್ ಪವಾರ್.

ಸಿಕ್ಕರೆ ಚಾನ್ಸು ’ಜೈ’ ಅಂತೀನಿ, ಪುರಚ್ಚಿ ತಲೈವಿ ಸೈ ಅಂತೀನಿ, ಅನ್ತಿದ್ದಾರೆ ಜೈಲಲಿತಮ್ಮ. (ಕ್ಷಮಿಸಿ, ಅಮ್ಮ ಅಲ್ಲ, ಕುಮಾರಿ.)

ಎಲ್ಲಾ ’ಮಾಯ’ವೋ ಪ್ರಭುವೇ, ಎಲ್ಲಾ ಮಾಯವೋ; ಸಿಎಂ ಮಾಯವೋ ಪಿಎಂ ಮಾಯವೋ, ನಾ ಪೀಯೆಮ್ಮಾದ್ರೆ ದೇಶ್ವೇ ಮಾಯವೋ, ಎಂದು ಗುರಿ ತಪ್ಪದ ಮಗಳಂತೆ ಹಾಡುತ್ತಿದ್ದಾರೆ ಮಾಯಾವತಿ ಮೇ’ಢಂ’. (ಮಾಯಾವತಿ ಮೇ ದಂ ಕಿತ್‌ನಾ!)

ಪ್ರಧಾನಿ ಹುದ್ದೆಗೆ ಇಷ್ಟೆಲ್ಲ ಮಂದಿ ಕೂಗು ಹಾಕುತ್ತಿರುವಾಗ ನಮ್ಮ ದೇವೇಗೌಡರು ಮಾತ್ರ, ’ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ ನೆಮ್ಮದಿಗೆ ಭಂಗವಿಲ್ಲ, ಮುದ್ದೇ ನಿನಗೆ ಸಾಟಿಯಿಲ್ಲ, ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನಾ ಅಳುಕದೆ ಮುಂದೇ ಸಾಗುವೆ’, ಎಂದು ಹಾಡುತ್ತ ಕೂಲಾಗಿ ಮನ್ನಡೆದಿದ್ದಾರೆ.
ನಾಳೆ ಅವರು, ’ದೇವರ ಆಟ ಬಲ್ಲವರಾರು, ಆತನ ಎದಿರು ನಿಲ್ಲುವರಾರು, ಕೇಳದೆ ಸುಖವ ತರುವ, ಹೇಳದೆ ಕುರ್ಚಿಯ ಕೊಡುವ’, ಎಂದು ದೇವರ ಕಡೆ ಕೈತೋರಿಸಿ ಪಿಎಂ ಕುರ್ಚಿಯ ಕಡೆ ನಡೆದರೂ ಆಶ್ಚರ್ಯವಿಲ್ಲ. ಗೌಡರ ಹೆಜ್ಜೆ ಬಲ್ಲವರಾರು? ೧೯೯೬ರ ಉದಾಹರಣೆ ನಮ್ಮೆದುರಿದೆಯಲ್ಲಾ!

ಗುರುವಾರ, ಮಾರ್ಚ್ 26, 2009

ಎಲೆಕ್ಷನ್ ಕಾಲ

ಕಾಲ ಕೆಟ್ಟೋಯ್ತು!

ಸ್ಪರ್ಧಿಸ್ತೀನಿ ಅಂದೋರು ಸ್ಪರ್ಧಿಸೋಲ್ಲ! (ಕೃಷ್ಣಕೃಷ್ಣಾ!)
ಸ್ಪರ್ಧಿಸೋಲ್ಲ ಅಂದೋರು ಸ್ಪರ್ಧಿಸ್ತಾರೆ! (ರಾಘವೇಂದ್ರಾ!)
ಸತ್ಯಹರಿಶ್ಚಂದ್ರನ್ಹಾಗಾಡೋರು ಸುಳ್ಳು ಮತದಾರರನ್ನ ಸೃಷ್ಟಿಸ್ತಾರೆ! (ಜನಾರ್ದನಾ!)
ಪೊಳ್ಳು ಭರವಸೆ ನೀಡೋರು ಒಳ್ಳೆ ಹೀರೋ ಹಂಗಾಡ್ತಾರೆ! (ರಾಮ(ಶ್ರೀ)ರಾಮಾ!)
ನೀತಿ ಮಾತಾಡೋರು ಸಂಹಿತೆ ಉಲ್ಲಂಘಿಸ್ತಾರೆ! (ಯಡಿಯೂರೇಶ್ವರಾ!)
ಒಳಗೆ ಕುದಿಯುವವರು ಹೊರಗೆ ಹಲ್ಕಿರ್‍ಕೊಂಡಿರ್ತಾರೆ! (ಸದಾನಂದಾ!)
ಅಜ್ಜನ ವಯಸ್ಸಿನವರು ರಾಹುಲ್ ಅನ್ತಕ್ಕಂಥಾ ಹುಡುಗನಿಗೆ ಸಲಾಂ ಹೊಡೀತಾರೆ! (ಚೆನ್ನ-ಮಲ್ಲಿಕಾರ್ಜುನಾ!)
ಹುಲಿಯಂಗಾಡೋರು ಒಂದು ಯಃಕಶ್ಚಿತ್ ಹೆಣ್ಣಿಲಿಗೆ ಹೆದರ್ತಾರೆ! (ಶಿವಶಿವಾ!)
ಖಾಲಿ ಬುರುಡೆಯವರು ತುಂಬಿದವರಂಗೆ ತುಳು’ಕಾಡ್ತಾರೆ’! (ಉಗ್ರ-ನರಸಿಂಹಾ!)
ಮಾಜಿ ಪ್ರಧಾನಿಗಳು ಸದಾಕಾಲ ’ಮುದ್ದೆ-ನಿದ್ದೆ-ಗೆದ್ದೆ’ ಜಪ ಮಾಡ್ತಾರೆ! (ದೇವದೇವಾ!)
ಹಾಲಿ ಹಾಲಧ್ಯಕ್ಷರು ಸಿಎಂ ಕುರ್ಚಿಯ ಕನಸು ಕಾಣ್ತಾರೆ! (ರೇವರೇವಾ!)
ಪ್ರತಿಭೆಯಿದ್ದವರು ಮನೇಲಿ ಕೂತು ಕೊರಗ್ತಾರೆ! (ಅಂಬಾ-ಭವಾನೀ!)
ಚಾಣಾಕ್ಷರು ರಾಜ-ಕುಮಾರ ಆಗ್ತಾರೆ! (ಕುಮಾರಾ-ಸ್ವಾಮೀ!)
ದತ್ತುಪುತ್ರರು ಕತ್ತು ಬಗ್ಗಿಸಿ ಕತ್ತೆಯಹಾಗೆ ದುಡೀತಾರೆ! (why? yes! we (are one ಅನ್ನುವ) ದತ್ತಾ!)
ಕನ್ನಡದ ಕಾಮಗಾರಿ ಗೊತ್ತಿಲ್ಲದೋರು ಬರಿದೆ ’ನಾಮಫಲಕ’ ಅಂತ ಬೊಬ್ಬೆಹೊಡೀತಾರೆ! (ಚಂದ್ರುಶೇಖರಾ!)
ಮತ್ತು
ತನ್ದು ತಾನ್ ನೋಡ್ಕೊಂಡು ’ಆನಂದ’ವಾಗಿರೋದ್ ಬಿಟ್ಟು ಹ’ರಾಮ’ಖೋರ್ ಸಾಸ್ತ್ರಿ ಎಲ್ಲಾರ್ಗೂ ಗುಳಿಗೆ ಗುಂಡಾಂತರ ಮಾಡ್ತಾನೆ! (ಆನಂದ(ಹ)ರಾಮ ರಾಮಾ!)

ಶನಿವಾರ, ಮಾರ್ಚ್ 21, 2009

ಖೇಣಿ-ದೇಗೌ

ಖೇಣಿಗೆ
ಬೇಕು
ಸಂಸದ ಸ್ಥಾನ
ಭವಿಷ್ಯದ
ಏಣಿಗೆ
ಮೆಟ್ಟಿಲಾಗಿ
ಮತ್ತು
’ದೇಗೌ’ರನ್ನು
ಮೆಟ್ಟಲಿಕ್ಕಾಗಿ.

’ದೇಗೌ’ರಿಗೆ ಬೇಕು
ಸಂಸದ ಸ್ಥಾನ,
ಪ್ರಧಾನಿ ಪಟ್ಟ,
ಸಿಗುವುದಾದರೆ
ಮುಂದೆ
ರಾಷ್ಟ್ರಪತಿ ಹುದ್ದೆ
ಮತ್ತು
ಕಂಪಲ್ಸರಿ
ರಾಗಿಮುದ್ದೆ
ತಮ್ಮ
ಜೀವನದ ಗುರಿ
ಮುಟ್ಟಲಿಕ್ಕಾಗಿ.