ಬಿಜೆಪಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬಿಜೆಪಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮೇ 11, 2009

ನೀವು ಕೇಳದಿರಿ - 9

* ಬಿಜೆಪಿ ನೇತೃತ್ವದ ಎನ್‌ಡಿಎ ದಿಢೀರನೆ ಒಗ್ಗಟ್ಟು ಪ್ರದರ್ಶಿಸ್ತಾ ಇದೆ! ಮುಂದೆ?

- ರಾಷ್ಟ್ರಮಟ್ಟದಲ್ಲಿ ’ಆಪರೇಷನ್ ಕಮಲ್’!

+++

* ’ಆಪರೇಷನ್ ಕಮಲ’ದಿಂದ ಜನತೆಗೆ ಏನು ಲಾಭ?

- (ಕಮಲದ) ದಂಟು!
ನಾಗರಿಕರಿಗೆ ಬೇಕಾಗಿರೋದು ಸರ್ಕಾರಿ ಅಧಿಕಾರಿಗಳ ಕೋ-ಆಪರೇಷನ್.
ಬಡವರಿಗೆ ಬೇಕಾಗಿರೋದು ರೇಷನ್.

+++

* ಬಿಜೆಪಿ ಪರವಾಗಿ ಮಾತನಾಡುವ ಮಠಾಧೀಶರು ಭಕ್ತರಿಗೆ ಆಶೀರ್ವಾದ ಮಾಡುವಾಗ ’ಹಸ್ತ’ ತೋರಿಸುತ್ತಾರಲ್ಲಾ?!

- ಮತ್ತೇನು, ಕೈಯಲ್ಲಿ ಕಮಲ ಹಿಡಕೊಂಡು ಆಶೀರ್ವಾದ ಮಾಡಬೇಕೇ?

+++

* ಪಕ್ಷದಿಂದ ವಜಾ ಆದರೆ ಅಮರ್ ಸಿಂಗ್ ಆಗ ಏನು ಮಾಡುತ್ತಾರೆ?

- ದಂಡಿಯಾಗಿ ದುಡ್ಡೂ ಇದೆ, ಕೆಲ್ಸಾನೂ ಇಲ್ಲ, ಅಮಿತಾಭ್ ಬಚ್ಚನ್‌ನ ಫುಲ್ ಫ್ಯಾಮಿಲಿ ಹಾಕ್ಕೊಂಡು ಸಿನಿಮಾ ತೆಗೀತಾರೆ! ಜಯಪ್ರದಾಗೆ ವಿಶೇಷ ಪಾತ್ರ.

+++

* ಶ್ರೀಲಂಕಾದಲ್ಲಿ ತಮಿಳು ನಿರಾಶ್ರಿತರಿಗೆ ಸುಲಿಗೆಕೋರರ ಹಾವಳಿಯಂತೆ?

- ಬರಗಾಲದಲ್ಲಿ ಅಧಿಕಮಾಸ, ಪಾಪ!

+++

* ಐಪಿಎಲ್‌ನಲ್ಲಿ ’Knight riders’ಗೆ ಎಂಥಾ ದುರ್ಗತಿ ಬಂತಲ್ಲಾ ಗುರುವೇ!

- Nightನಲ್ಲಿ ಯಾವುದಾದರೂ ವೆಹಿಕಲ್ ride ಮಾಡ್ಕೊಂಡು ಫುಲ್ ಟೀಮು ಎಲ್ಲಿಗಾದರೂ ಓಡಿಹೋಗೋದು ವಾಸಿ, ಅಲ್ವೆ ಶಿಷ್ಯಾ?

+++

* ಛಾಯಾಗ್ರಾಹಕರನ್ನು ಓಡಿಸೋಕಂತ ರೂಪದರ್ಶಿ ಲಿಂಡ್ಸೆ ಲೋಹನ್ ತನ್ನ ಮನೆಮೇಲಿನಿಂದ ಅವರತ್ತ ಮೊಟ್ಟೆ, ಪಿಜ್ಜಾ ಎಸೆದಳಂತೆ!

- ಅವನ್ನು ತಾನೇ ತಿಂದು ಕೆಳಗಿನಿಂದ ಒಂದು ವಾಯುಬಾಣ ಬಿಟ್ಟಿದ್ದರೆ ಛಾಯಾಗ್ರಾಹಕರೆಲ್ಲ ಒಂದೇ ಉಸಿರಿಗೆ ಮೂಗು ಮುಚ್ಚಿಕೊಂಡು ಪರಾರಿಯಾಗ್ತಿದ್ದರು!

+++

* ಇಡೀ ರಾತ್ರಿ ನಿದ್ದೆಮಾಡೋಕಾಗೋಲ್ಲ; ಮನೆ ಹೊರಗಡೆ ಬೀದಿನಾಯಿ ಗಟ್ಟಿಯಾಗಿ ಬೊಗಳ್ತಾ ಇರುತ್ತೆ!

- ಇಡೀ ರಾತ್ರಿ ನಿದ್ದೆಮಾಡ್ತೀಯಾ? ಎಂಥಾ ಅರಸಿಕ ನೀನು!

+++

* ಎಲ್ಲಾ ಬೋಗಸ್ ಪ್ರಶ್ನೆಗಳನ್ನೇ ಹಾಕ್ಕೊಳ್ತೀಯಲ್ಲಾ!

- ಸದ್ಯ! ಬೋಗಸ್ ಉತ್ತರ ಅನ್ನಲಿಲ್ಲವಲ್ಲಾ, ನಾನು ಬಚಾವು!

--೦--

ಗುರುವಾರ, ಮೇ 7, 2009

ಪ್ರಧಾನಿ ಪ್ರಸಂಗ

ರಾಹುಲ್ ಗಾಂಧಿಗೆ ಸಿಕ್ಕಿತು ಎಂದರೆ ಪೀಯೆಮ್ಮಿನ ಪಟ್ಟ
ರಾಹು-ಕೇತುಗಳು ಪಕ್ಕದಿ ಬರುವುವು ಆಗ ಅವನು ಕೆಟ್ಟ!
ಮತ್ತೇನಾದರು ಮನಮೋಹನನೇ ಆದರೆ ಪ್ರಧಾನಿಯು
ಕತ್ತೆಯಂತೇನೊ ದುಡಿವನು ಆದರೆ ಬಹಳೇ ನಿಧಾನಿಯು!

ಅದ್ವಾನಿಯು ಆದರು ಎಂದರೆ ಭಾರತದ ಪ್ರಧಾನ್ಮಂತ್ರಿ
ಅಧ್ವಾನವು ದೇಶವು ಭಾರತಕಾಗೆಂಥಾ ಗತಿ ಬಂತ್ರೀ!
ಕಾಂಗ್ರೆಸ್-ಕಮ್ಯುನಿಸ್ಟ್ ಹೀಗನ್ನುವುದು, ನಾನಂದದ್ದಲ್ರೀ
ಟಾಂಗ್ ಕೊಡುವುದೆ ಚಟ, ದೇಶದ ಯೋಚನೆ ಇವುಗಳಿಗೇನಿಲ್ರೀ!

ಮೂರನೆ ರಂಗವೊ ನಾಲ್ಕನೆ ಮಂಗವೊ ಆದರೆ ಪೀಯೆಮ್ಮು
ಮಾರನೆ ದಿನವೇ ಭರ್ಜರಿ ಸೀನು, ಫೈಟಿಂಗ್ ಏಕ್‌ದಮ್ಮು!
ಕರಟ್, ಮುಲಾಯಂ, ಪಾಸ್ವಾನ್, ಮಾಯಾ, ದೇವೇಗೌಡ, ಜಯಾ,
ಶರದ್, ಲಾಲುಗಳ ಶೀತಲ ಸಮರದಿ ದೇಶದ ಹಿತ ಮಾಯ!

ಭಾನುವಾರ, ಮೇ 3, 2009

ನೀವು ಕೇಳದಿರಿ - 3

* ಕರ್ನಾಟಕದಲ್ಲಿ ಮತದಾನ ಮುಗಿದರೂ ಪಕ್ಷಗಳ ಪರಸ್ಪರ ಕೆಸರೆರಚಾಟ ನಿಂತಿಲ್ಲವಲ್ಲ ಗುರುವೇ!

- ಎಲ್ಲರ ಬಳಿಯೂ ಆ ಪಾಟಿ ಕೆಸರಿದೆಯಲ್ಲಾ, ಅದನ್ನು ಹೇಳು ಶಿಷ್ಯಾ!

+++

* ಪಕ್ಷಗಳ ಕೆಸರೆರಚಾಟದ ಬಗ್ಗೆ ರವಷ್ಟು ಕಮೆಂಟ್ ಮಾಡಿ ಗುರುವೇ.

- ಓಕೆ ಶಿಷ್ಯಾ, ಕೇಳು.
’ಕೈ ಕೆಸರಾದರೆ ಬಾಯ್ ಮೊಸರು’, ಎಂದು ನಂಬಿ ಕಾಂಗ್ರೆಸ್ ’ಕೈ’ ಕೆಸರು ಮಾಡಿಕೊಳ್ಳುತ್ತಿದೆ.
ಜೆಡಿಎಸ್ ಪಿತಮಹಾಶಯ ಸ್ವಯಂ ಕೆಸರಿನ (ಮಣ್ಣಿನ) ಮಗ.
ಇನ್ನು ಬಿಜೆಪಿ; ಅದು ’ಕೆಸರಿನ ಕಮಲ’. ಕೆಸರಿದ್ದರೇನೇ ಕೇಸರಿಗೆ ಖುಷಿ (ಸದಾ ಆನಂದ).
ಹೀಗಿರುವಾಗ ಸದರಿ ಕೆಸರೆರಚಾಟದಲ್ಲಿ ವಿಶೇಷವೇನಿಲ್ಲ.
ನಮ್ಮೀ ಪಕ್ಷಗಳಿಗೆ ಗೊತ್ತಿರುವುದು ಎರಡೇ. ಕೆಸರಾಟ ಮತ್ತು ಕೊಸರಾಟ. ಏನಂತೀ ಶಿಷ್ಯಾ?

+++

* ಸ್ವಿಸ್ ಬ್ಯಾಂಕ್ ಹಣ ಭಾರತಕ್ಕೆ ಬರುತ್ತೆಯೆ?

- ಬರುತ್ತೆ, ಬರುತ್ತೆ; ಮತದಾನದ ಅಂತಿಮ ದಿನವಾದ ಮೇ ೧೩ರ ತನಕ ಬರ್ತಾನೇ ಇರುತ್ತೆ.

+++

* ಮುಷ್ಕರನಿರತ ಕಿರಿಯ ವೈದ್ಯರಿಗೆ ಏನಾಗಬೇಕು?

- ಕಿರಿ ವೈದ್ಯರು ಕಿರಿಕಿರಿ ವೈದ್ಯರಾಗದಿದ್ದರೆ ಸಾಕು.

+++

* ಕಸಬ್ ಏನೇನೋ ಡಿಮಾಂಡ್ ಮಾಡ್ತಿದ್ದಾನೆ!

- ಬೇರೆ ಕಸಬಿಲ್ಲ, ಇನ್ನೇನ್ಮಾಡ್ತಾನೆ?

+++

* ಪ್ರಪಂಚದಲ್ಲೇ ಅತೀ ಸುಂದರರು ಯಾರು?

- ಅಧಿಕಾರದ ಅಥವಾ ಜನಪ್ರಿಯತೆಯ ನಂಟುಳ್ಳವರು.
ಉದಾ: ಮಿಷೆಲ್ ಒಬಾಮಾ, ಫ್ರೀಡಾ ಪಿಂಟೊ, ದೇವ್ ಪಟೇಲ್....

+++

* ವಿಶ್ವಶಾಂತಿಗೆ ಯಾವಯಾವ ಹೋಮ ಮಾಡುತ್ತಾರೆ?

- ಸದ್ಯಕ್ಕೆ ಹಂದಿಗಳ ಮಾರಣಹೋಮ ಮಾಡುತ್ತಿದ್ದಾರೆ.

--೦--

ಬೆರಳ್‌ನ ತಿರುಳ್

ಲೋಕಸಭಾ ಚುನಾವಣೆಯ ಮತದಾನದ ಗುರುತಿನ ಶಾಯಿಯನ್ನು ಕೆಲ ಗಣ್ಯರು ಬೇರೆ ಬೆರಳುಗಳಿಗೆ ಹಚ್ಚಿಸಿಕೊಂಡದ್ದಕ್ಕೆ ಕಾರಣಗಳನ್ನು ಈ ಕೆಳಗೆ ಬಯಲುಗೊಳಿಸಲಾಗಿದೆ.

ಚಿತ್ರ ಕೃಪೆ: Deccan Herald

ಬಲಪಂಥೀಯ ಯಡಿಯೂರಪ್ಪನವರು ಪಕ್ಷದ ಬಲವರ್ಧನೆಗಾಗಿ ಬಲಮುರಿ ಗಣಪತಿ ದೇವಸ್ಥಾನದ ಅರ್ಚಕರ ಸಲಹೆಯಂತೆ ಹಾಗೂ ತಮ್ಮ ಬಲಗೈ ಬಂಟ ಮುಜರಾ(ಯಿ) ಸಚಿವ ಕೃಷ್ಣಯ್ಯ ಶೆಟ್ಟರ ಸೂಚನೆಯಂತೆ ಬಲಗೈ ಬೆರಳಿಗೆ ಶಾಯಿ ಹಚ್ಚಿಸಿಕೊಂಡಿದ್ದಾರೆ. ತಮ್ಮ ಹೆಸರನ್ನು ಹಲವರು ’ಎಡ’ಯೂರಪ್ಪ ಎಂದು ಉಚ್ಚರಿಸುವುದರಿಂದ ಅದನ್ನು ’ಬಲ’ಯೂರಪ್ಪ ಎಂದು ಬದಲಿಸಿಕೊಳ್ಳುವ ಆಲೋಚನೆಯೂ ಮಾನ್ಯ ಮುಖ್ಯಮಂತ್ರಿಗಳಿಗಿದೆಯಂತೆ. ಅವರ ಸುಪುತ್ರ ರಾಘವೇಂದ್ರ ಮಾತ್ರ ಮಾಡರ್ನ್ ಗೈ ಆಗಿರುವುದರಿಂದ ಎಡಗೈ ಬೆರಳಿಗೇ ಶಾಯಿ ಹಚ್ಚಿಸಿಕೊಂಡಿದ್ದಾನೆ.

ಚಿತ್ರ ಕೃಪೆ: Reuters

ಚಿತ್ರ ಕೃಪೆ: AP

ಅಮಿತಾಭ್ ಬಚ್ಚನ್‌ನ ಪೂರಾ ಕುಟುಂಬವೇ ತೋರು ಬೆರಳಿನ ಬದಲು ಮಧ್ಯಬೆರಳಿಗೆ ಶಾಯಿ ಹಚ್ಚಿಸಿಕೊಂಡಿದೆ. ಏಕೆಂದರೆ, ಆ ಕುಟುಂಬವು ಸದಾ ’ಸೆಂಟರ್’ ಆಫ್ ಅಟ್ರ್ಯಾಕ್ಷನ್ ಆಗಿರಬಯಸುತ್ತದೆ.
’ನಾನೇನು ಕಮ್ಮಿ? ನಾನೂ ಅಷ್ಟೇಯ’, ಎಂದು ಅಮೀರ್ ಖಾನ್ ಕೂಡ ’ಸೆಂಟರ್’ ಫಿಂಗರಿಗೆ ಶಾಯಿ ಹಚ್ಚಿಸಿಕೊಂಡಿದ್ದಾನೆ.
(ಬಚ್ಚನ್ ಕುಟುಂಬವು ಕ್ಯಾಮೆರಾಗಳಿಗೆ ಮಧ್ಯಬೆರಳನ್ನು ಚಾಚಿ ತೋರಿಸುತ್ತಿರುವ ಚಿತ್ರವನ್ನು ಪತ್ರಿಕೆಗಳಲ್ಲಿ ಕಂಡು ಅಮೆರಿಕದ ಕೆಲ ಎನ್ನಾರೈ ಸಂಘಟನೆಗಳು ’ಛೀಛೀ’ ಎಂದು ಅಸಹ್ಯಪಟ್ಟುಕೊಂಡಿವೆಯೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.)


ಚಿತ್ರ ಕೃಪೆ: AFP

ಈ ನಡುವೆ, ಬಲಪಂಥೀಯ ಅಡ್ವಾಣಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾ ಸಾರಾಭಾಯ್ ಕೂಡ ಬಲಗೈ ಬೆರಳಿಗೆ ಶಾಯಿ ಹಚ್ಚಿಸಿಕೊಂಡಿರುವುದು ಕಾಂಗ್ರೆಸ್ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಮಲ್ಲಿಕಾ ಅವರು ’ಆಪರೇಷನ್ ಕಮಲ’ಕ್ಕೆ ಬಲಿಯಾಗಲಿದ್ದಾರೆಯೇ ಎಂಬ ಅನುಮಾನ ಕಾಂಗ್ರೆಸ್ ವಲಯದಲ್ಲಿ ಹುಟ್ಟಿಕೊಂಡಿದೆ. ಆದರೆ, ಮಲ್ಲಿಕಾ ಅವರ ಪುತ್ರಿ ಅನಾಹಿತಾ, ’ಹಾಗೇನಿಲ್ಲ, ನಮ್ಮಮ್ಮ ಕೂಚಿಪುಡಿ-ಭರತನಾಟ್ಯಗಳಲ್ಲೇ ಜೀವನ ಕಳೆದದ್ದರಿಂದ ಅವರಿಗೆ ಯಾವ ಬೆರಳಿಗೆ ಶಾಯಿ ಹಚ್ಚಿಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ, ಹಾಗಾಗಿ ಪರಪಾಟಾಯಿತು, ಅಷ್ಟೆ’, ಎಂದು ಪತ್ರಿಕಾ ಹೇಳಿಕೆ ನೀಡುವ ಮೂಲಕ ವಿಷಯವನ್ನು ತಿಳಿಗೊಳಿಸಲೆತ್ನಿಸಿದ್ದಾರೆ.

ಚಿತ್ರ ಕೃಪೆ: AP

ಎಲ್ಲರಿಗಿಂತ ಬುದ್ಧಿವಂತರೆಂದರೆ ನರೇಂದ್ರ ಮೋದಿ. ಮಾಧ್ಯಮಗಳ ಕ್ಯಾಮೆರಾಗಳಿಗೆ ಶಾಯಿಯ ಬೆರಳನ್ನು ತೋರಿಸುವ ನೆಪದಲ್ಲಿ ಮೋದಿಯು ಪಕ್ಕದ ಬೆರಳನ್ನೂ ಜೊತೆಗೆ ಚಾಚಿ ವಿಜಯದ ಸಂಕೇತವನ್ನೂ (ಹಿಂದುಮುಂದಾಗಿ) ಬೀರಿಬಿಟ್ಟಿದ್ದಾರೆ! ಫಲಿತಾಂಶಕ್ಕೆ ಮುನ್ನವೇ ಜನರನ್ನು ಈ ರೀತಿ ಮೋಡಿ ಮಾಡಲೆತ್ನಿಸುವ ಮೋದಿಯ ಮಿದುಳೆಂದರೆ ಸಾಮಾನ್ಯವೆ?!

ಮಂಗಳವಾರ, ಮಾರ್ಚ್ 24, 2009

ದಶದಿಕ್ಕುಗಳಿಗೂ ವರುಣಪ್ರತಾಪ!

(ಚಿತ್ರ ಕೃಪೆ : telegraphindia.com)

ರೈತರಿಗೆ ಸಲಹೆ. ಕ್ಷಮಿಸಿ, ರೇಡಿಯೋ ಕೇಳಿ ಕೇಳಿ ಈ ನುಡಿಗಟ್ಟು ಬಂತು.
ರೈತರಿಗೆ ಸ್ಪಷ್ಟನೆ: ಈ ಕೆಳಗಿನ ಲೇಖನವು ಮಳೆ ಕುರಿತಾದದ್ದಲ್ಲ. ಮಳೆಗಾಗಿ ಹವಾಮಾನ ಇಲಾಖೆಯನ್ನು ಸಂಪರ್ಕಿಸಿ (ಮೋಸಹೋಗಿ).

ವರುಣ್ ಗಾಂಧಿಯ ಪ್ರತಾಪವು ಇಂದು ದಶದಿಕ್ಕುಗಳಿಗೂ ಹರಡಿದೆ. ಅಷ್ಟದಿಕ್ಪಾಲಕರಂತೂ ತಮ್ಮ ಪಟ್ಟಗಳನ್ನು ’ವಗಾಂ’ಗೆ ವರ್ಗಾಯಿಸಿ (ಒಗಾಯಿಸಿ) ರಿ-tired! ಈಗ ವರುಣ್ ಗಾಂಧಿಯೇ ಅಷ್ಟದಿಕ್ಕುಗಳೊಡೆಯ! ’ನಮೋನ್ನಮಃ ಜೀಯಾ!’
’ ಓಂ ಇಂದ್ರಾಯ ನಮಃ ಅಗ್ನಯೇ ನಮಃ ಯಮಾಯ ನಮಃ ನಿರುತಯೇ ನಮಃ ವರುಣಾಯ ನಮಃ ವಾಯವೇ ನಮಃ ಕುಬೇರಾಯ ನಮಃ ಈಶಾನ್ಯಾಯ ನಮಃ .’

ವರುಣ್ ಗಾಂಧಿ ಅಷ್ಟದಿಕ್ಕುಗಳೊಡೆಯ ಹೇಗೆ?

ಹೀಗೆ :
* ಹಿಂದುವಾದಿಗಳಿಗಾತ ಇಂದ್ರ.
* ನಿರ್ದಿಷ್ಟ ಕೋಮುಗಳೆರಡರ ಮಧ್ಯೆ ಆತ ಅಗ್ನಿ.
* ಕೋಮೊಂದರ ಪಾಲಿಗಾತ ಯಮ(ಪ್ರಾಯ).
(ಪ್ರಾಯ ಅಂಥದು, ಏನ್ಮಾಡೋದು ಹೇಳಿ.)
* ಹಿಂದುಸೇನೆಗಳ ದೃಷ್ಟಿಯಲ್ಲಾತ ದುರ್ಗಾಪತಿ ನಿರುತಿ.
* ವರುಣ...ಅದೇ ತಾನೇ ಆತ? (ಹಿಂದುವಾದಿಗಳಿಗೆ ಆತನ ಮಾತು ತಂಪಾದ ಮಳೆ.)
* ವಾಯು...ಹೌದು, ಪ್ರಸಕ್ತ ಚುನಾವಣಾ ರಾಜಕಾರಣದಲ್ಲಾತ ಜಂಝಾವಾತ! (’ರಾಂಗ್. ಜಂಝಾನಿಲ.’ ’ಓಕೆ.’)
* ಬಿಜೆಪಿ ಪಾಲಿಗೀಗ ಆತ ಮತಕುಬೇರ. (ಹಿಂದು ಮತ ಅಲ್ಲ, ವೋಟ್ ಎಂಬ ಮತ.)
ಮತ್ತು
* ’ಬಲ’ಗಡೆಯವರಿಗಾತ ಈಶ; ’ಎಡ’ಗಡೆಯವರಿಗಾತ ಅನ್ಯ; ಒಟ್ಟು ಈಶಾನ್ಯ.

ಇನ್ನು, ಮೇಲೂ ಕೆಳಗೂ ಆತನ ಪ್ರತಾಪವೇನು ಕಮ್ಮಿಯೇ?

ಕೈಯನ್ನು ಮೇಲಕ್ಕೆತ್ತಿ ಒಮ್ಮೆ ಗರ್ಜಿಸಿದನೆಂದರೆ ಆ-ಕಾಶವೇ ಅದುರಬೇಕು! ಇಷ್ಟಕ್ಕೂ ಆತನ ಪ್ರ-ತಾಪ-ಮಾನಗಳೆಲ್ಲ ಆಕಾಶಮಾರ್ಗವಾಗಿಯೇ ಅಲ್ಲವೆ ಎಲ್ಲರ ಮನೆಗಳ ಮೂರ್ಖಪೆಟ್ಟಿಗೆಯನ್ನು ಸೇರುವುದು?

ಓಕೇ. ಮೇಲಾಯಿತು; ಕೆಳಗೆ?

ಶ್! ಅಂಡರ್-ಗ್ರೌಂಡ್ ಎಕ್ಟಿವಿಟಿ/ಆಕ್ಟಿವಿಟಿ/ಯಾಕ್ಟಿವಿಟಿ/ಕಟಿಪಿಟಿ ಮಾಡುವ ಮೂಲ-ಭೂತ-ವಾದಿಗಳಿಗಷ್ಟೇ ಗೊತ್ತು ಈ ವಿಷಯ, pub-leak ಮಾಡುವಂತಿಲ್ಲ.

ಹೀಗೆ ದಶದಿಕ್ಕುಗಳಿಗೂ ವ್ಯಾಪಿಸಿರುವ ಪ್ರತಾಪಸಿಂಹ - ಕ್ಷಮಿಸಿ - ಪ್ರತಾಪಶಾಲಿ ವರುಣನಿಗೆ ಗುಳಿಗೆಪ್ಪನ ನಮೋನ್ನಮಃ.