ಕ್ರಿಕೆಟ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕ್ರಿಕೆಟ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮೇ 12, 2009

ನೀವು ಕೇಳದಿರಿ - 10

* ಮತ ಎಣಿಕೆಯ ದಿನವಾದ ಇದೇ ದಿನಾಂಕ 16 ಹಿಂದು ತಿಥಿ ಪ್ರಕಾರ ’ಶ್ರೀರಾಮ ಪಟ್ಟಾಭಿಷೇಕ’ದ ದಿನ.

- ಅದಕ್ಕೇ ಅಡ್ವಾಣಿ, ’history repeats’, ಅಂತ ಕನಸು ಕಾಣುತ್ತಿದ್ದಾರೆ!

+++

* ವರುಣ್ ಗಾಂಧಿ ಪ್ರಧಾನಿಯಾದರೆ ದೇಶದಲ್ಲಿ ಕುಟುಂಬಯೋಜನೆ ಕಡ್ಡಾಯವಂತೆ?

- ಹೌದು. ರಾಹುಲ್ ಗಾಂಧಿ ಪ್ರಧಾನಿಯಾದರೆ (ಸ್ವ)ಕುಟುಂಬ ಕಲ್ಯಾಣ ಕಡ್ಡಾಯ.
ಮನಮೋಹನ್ ಸಿಂಗ್ ಪ್ರಧಾನಿಯಾದರೆ ಅವರಿಗೆ ಈ ದೇಶಕ್ಕಿಂತ ಸೋನಿಯಾ ಮೇಡಂ ಆದೇಶ ಕಡ್ಡಾಯ.
ಅಡ್ವಾಣಿ ಪ್ರಧಾನಿಯಾದರೆ ದೇಶಾದ್ಯಂತ ಪ್ರತಿನಿತ್ಯ ರಾಮ(ಮಂದಿರ)ಭಜನೆ ಕಡ್ಡಾಯ.
ಮೋದಿ ಪ್ರಧಾನಿಯಾದರೆ ದೇಶದ ಎಲ್ಲೆಡೆ (ಮಾತಿನ) ಮೋಡಿ ಪ್ರದರ್ಶನ ಕಡ್ಡಾಯ.
ಲಾಲೂ ಪ್ರಧಾನಿಯಾದರೆ ಭ್ರಷ್ಟಾಚಾರ ಕಡ್ಡಾಯ.
ಪಾಸ್ವಾನ್ ಪ್ರಧಾನಿಯಾದರೆ ಬಿಹಾರಿಗಳಿಗೆ ರೈಲ್ವೆ ಫ್ರೀ ಪಾಸ್ ಕಡ್ಡಾಯ.
ಮಾಯಾವತಿ ಪ್ರಧಾನಿಯಾದರೆ ದೇಶಾದ್ಯಂತ ತನ್ನ ಬರ್ತ್‌ಡೇ (with gifts) ಕಡ್ಡಾಯ. (ಕಜ್ಜಾಯ.)
ಮುಲಾಯಂ ಪ್ರಧಾನಿಯಾದರೆ ಗೂಂಡಾಗಿರಿ ಕಡ್ಡಾಯ.
ಪವಾರ್ ಪ್ರಧಾನಿಯಾದರೆ ಮಗಳು ಸುಪ್ರಿಯಾಗೆ ಮಂತ್ರಿಗಿರಿ ಕಡ್ಡಾಯ.
ಕರಟ್ ಪ್ರಧಾನಿಯಾದರೆ ಜನರ ಕೈಗೆ ಕರಟ ಕಡ್ಡಾಯ.
ದೇವೇಗೌಡರು ಪ್ರಧಾನಿಯಾದರೆ ದೇಶಾದ್ಯಂತ ರಾಗಿಮುದ್ದೆ ಊಟ ಕಡ್ಡಾಯ.

+++

* ’ಪ್ರಜಾರಾಜ್ಯಂ’ ಪಕ್ಷ ಹೀನಾಯವಾಗಿ ಸೋತರೆ?

- ಆಗ ಪಕ್ಷದ ಹೆಸರನ್ನು ’ವಜಾರಾಜ್ಯಂ’ ಎಂದು ಬದಲಾಯಿಸಲಾಗುವುದು.

+++

* ಕ್ರಿಕೆಟ್‌ನಲ್ಲಿ ಜೀವಮಾನದ ನಿಷೇಧ; ಆದರೆ ಲೋಕಸಭೆಗೆ ಸ್ಪರ್ಧಿಸಬಹುದೇ?!

- ಲೋಕಸಭೆಯು ಈ ದೇಶಕ್ಕೆ ಕ್ರಿಕೆಟ್‌ನಷ್ಟು ಮುಖ್ಯ ಅಲ್ಲವಲ್ಲಾ, ಆದ್ದರಿಂದ ಸ್ಪರ್ಧಿಸಬಹುದು.

+++

* ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯ ನಿಜವಾಗುತ್ತೆಯೆ?

- ಒಂದು ಪ್ರಶ್ನೆಗೆ ಸ್ವಾಮೀಜಿ ರೂ.3000 ತಗೋತಾರೆ. ನನಗೆ ರೂ.6000 ಕೊಡಿ, ಉತ್ತರ ಹೇಳ್ತೀನಿ.

+++

* ’ಅಡ್ವಾಣಿಗೆ ಪ್ರಧಾನಿಯಾಗುವ ಯೋಗ ಇಲ್ಲ’, ಅಂತಾರೆ ಕೋಡಿಮಠದ ಸ್ವಾಮೀಜಿ!

- ಆ ಸ್ವಾಮೀಜಿಯನ್ನು ಭೆಟ್ಟಿಯಾಗಿ ಆಶೀರ್ವಾದ ಪಡೆದರೆ ಯೋಗ ಒದಗಿಬರಬಹುದು.

+++

* ಕೋಡಿಮಠದ ಭವಿಷ್ಯವಾಣಿ ಪ್ರಕಾರ ನೂತನ ಕೇಂದ್ರ ಸರ್ಕಾರದ ಆಡಳಿತ ಕೇವಲ ಎರಡೇ ವರ್ಷ!

- ಅನಂತರ ಕೋಡಿಮಠದ ಆಡಳಿತ.

+++

* ಇಲ್ಲೊಬ್ಬ, ’ಹುಚ್ಚುಖೋಡಿಮಠ’, ಅಂತಾನೆ!

- ಅಯ್ಯೋ, ಅವನಿಗೆ ಸುಮ್ಮನಿರೋಕೆ ಹೇಳಿ. ಇಲ್ಲದಿದ್ದರೆ ಸ್ವಾಮೀಜಿ ಅವನ ಭವಿಷ್ಯ ಹೇಳಿಬಿಡ್ತಾರೆ!

+++

* ’ಸಂಸ್ಕೃತದಿಂದ ಮಾತ್ರ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ’, ಅಂದಿದ್ದಾರೆ ಪೇಜಾವರ ಶ್ರೀಗಳು.

- ಮಠದ ಸಂಸ್ಕೃತವೋ, ಪೋಲೀಸ್ ಇಲಾಖೆಯ ಸಂಸ್ಕೃತವೋ ಗೊತ್ತಾಗಲಿಲ್ಲ.

+++

* ’ಉದ್ಯಾನ ನಗರಿ’ ಬೆಂಗಳೂರಿನ ಮರಗಳೆಲ್ಲ ಹೋದರೆ ಗತಿ?

- ಚಿಂತೆ ಬೇಡ, ಆಗ ಬೆಂಗಳೂರು ಆಗುತ್ತೆ ’ಅಮರಾವತಿ’!

+++

* ವನವಾಸಕ್ಕೆ ಹೋಗ್ತೀರಂತೆ?

- ಪತ್ರಿಕಾಗೋಷ್ಠೀಲಿ ನಾನು ಈ ಮಾತನ್ನು off the record ಹೇಳಿದ್ದು. ಆದ್ದರಿಂದ ನಾನು ಈ ಮಾತನ್ನು ಹೇಳಿಯೇ ಇಲ್ಲ.

+++

* ’ನೀವು ಕೇಳದಿರಿ’ಗೆ ಹತ್ತು.

- ಎಲೆ ಮುದುರೆತ್ತು.

--0--

ಸೋಮವಾರ, ಮೇ 11, 2009

ನೀವು ಕೇಳದಿರಿ - 9

* ಬಿಜೆಪಿ ನೇತೃತ್ವದ ಎನ್‌ಡಿಎ ದಿಢೀರನೆ ಒಗ್ಗಟ್ಟು ಪ್ರದರ್ಶಿಸ್ತಾ ಇದೆ! ಮುಂದೆ?

- ರಾಷ್ಟ್ರಮಟ್ಟದಲ್ಲಿ ’ಆಪರೇಷನ್ ಕಮಲ್’!

+++

* ’ಆಪರೇಷನ್ ಕಮಲ’ದಿಂದ ಜನತೆಗೆ ಏನು ಲಾಭ?

- (ಕಮಲದ) ದಂಟು!
ನಾಗರಿಕರಿಗೆ ಬೇಕಾಗಿರೋದು ಸರ್ಕಾರಿ ಅಧಿಕಾರಿಗಳ ಕೋ-ಆಪರೇಷನ್.
ಬಡವರಿಗೆ ಬೇಕಾಗಿರೋದು ರೇಷನ್.

+++

* ಬಿಜೆಪಿ ಪರವಾಗಿ ಮಾತನಾಡುವ ಮಠಾಧೀಶರು ಭಕ್ತರಿಗೆ ಆಶೀರ್ವಾದ ಮಾಡುವಾಗ ’ಹಸ್ತ’ ತೋರಿಸುತ್ತಾರಲ್ಲಾ?!

- ಮತ್ತೇನು, ಕೈಯಲ್ಲಿ ಕಮಲ ಹಿಡಕೊಂಡು ಆಶೀರ್ವಾದ ಮಾಡಬೇಕೇ?

+++

* ಪಕ್ಷದಿಂದ ವಜಾ ಆದರೆ ಅಮರ್ ಸಿಂಗ್ ಆಗ ಏನು ಮಾಡುತ್ತಾರೆ?

- ದಂಡಿಯಾಗಿ ದುಡ್ಡೂ ಇದೆ, ಕೆಲ್ಸಾನೂ ಇಲ್ಲ, ಅಮಿತಾಭ್ ಬಚ್ಚನ್‌ನ ಫುಲ್ ಫ್ಯಾಮಿಲಿ ಹಾಕ್ಕೊಂಡು ಸಿನಿಮಾ ತೆಗೀತಾರೆ! ಜಯಪ್ರದಾಗೆ ವಿಶೇಷ ಪಾತ್ರ.

+++

* ಶ್ರೀಲಂಕಾದಲ್ಲಿ ತಮಿಳು ನಿರಾಶ್ರಿತರಿಗೆ ಸುಲಿಗೆಕೋರರ ಹಾವಳಿಯಂತೆ?

- ಬರಗಾಲದಲ್ಲಿ ಅಧಿಕಮಾಸ, ಪಾಪ!

+++

* ಐಪಿಎಲ್‌ನಲ್ಲಿ ’Knight riders’ಗೆ ಎಂಥಾ ದುರ್ಗತಿ ಬಂತಲ್ಲಾ ಗುರುವೇ!

- Nightನಲ್ಲಿ ಯಾವುದಾದರೂ ವೆಹಿಕಲ್ ride ಮಾಡ್ಕೊಂಡು ಫುಲ್ ಟೀಮು ಎಲ್ಲಿಗಾದರೂ ಓಡಿಹೋಗೋದು ವಾಸಿ, ಅಲ್ವೆ ಶಿಷ್ಯಾ?

+++

* ಛಾಯಾಗ್ರಾಹಕರನ್ನು ಓಡಿಸೋಕಂತ ರೂಪದರ್ಶಿ ಲಿಂಡ್ಸೆ ಲೋಹನ್ ತನ್ನ ಮನೆಮೇಲಿನಿಂದ ಅವರತ್ತ ಮೊಟ್ಟೆ, ಪಿಜ್ಜಾ ಎಸೆದಳಂತೆ!

- ಅವನ್ನು ತಾನೇ ತಿಂದು ಕೆಳಗಿನಿಂದ ಒಂದು ವಾಯುಬಾಣ ಬಿಟ್ಟಿದ್ದರೆ ಛಾಯಾಗ್ರಾಹಕರೆಲ್ಲ ಒಂದೇ ಉಸಿರಿಗೆ ಮೂಗು ಮುಚ್ಚಿಕೊಂಡು ಪರಾರಿಯಾಗ್ತಿದ್ದರು!

+++

* ಇಡೀ ರಾತ್ರಿ ನಿದ್ದೆಮಾಡೋಕಾಗೋಲ್ಲ; ಮನೆ ಹೊರಗಡೆ ಬೀದಿನಾಯಿ ಗಟ್ಟಿಯಾಗಿ ಬೊಗಳ್ತಾ ಇರುತ್ತೆ!

- ಇಡೀ ರಾತ್ರಿ ನಿದ್ದೆಮಾಡ್ತೀಯಾ? ಎಂಥಾ ಅರಸಿಕ ನೀನು!

+++

* ಎಲ್ಲಾ ಬೋಗಸ್ ಪ್ರಶ್ನೆಗಳನ್ನೇ ಹಾಕ್ಕೊಳ್ತೀಯಲ್ಲಾ!

- ಸದ್ಯ! ಬೋಗಸ್ ಉತ್ತರ ಅನ್ನಲಿಲ್ಲವಲ್ಲಾ, ನಾನು ಬಚಾವು!

--೦--

ಭಾನುವಾರ, ಮೇ 10, 2009

ನೀವು ಕೇಳದಿರಿ - 8

* ಮೊಯ್ಲಿ ಪದಚ್ಯುತರಾದರು. ಚುನಾವಣೆಯಲ್ಲೂ ಸೋತರೆ ಆಗ?

- ’ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯ ಬರೆದು ಮುಗಿಸಿರುವ ಮಹಾಕವಿ ’ಮಹಾಭಾರತ ಮಹಮಹಾನ್ವೇಷಣಂ’ ಮಹಮಹಾಕಾವ್ಯ ಆರಂಭಿಸಬಹುದು!

+++

* ಮೊಯ್ಲಿ ತಮ್ಮದು ಪದಚ್ಯುತಿ ಅಲ್ಲ ಅಂತಾರೆ?!

- ಹಾಗಾದರೆ ಅದು ರಾಮಾಯಣ!

+++

* ಮೊಯ್ಲಿ ಸಾಹೇಬರದು ಅಂದು ಟೇಪ್ ಹಗರಣ, ಇಂದು?

- ಟ್ರ್ಯಾಪ್ ಹಗರಣ!

+++

* ಶ್ರುತಿ ಮೇಡಂ ತಿರುಪತಿಯಲ್ಲಿ ಮರುಮದುವೆಯಾಗ್ತಾರಂತೆ?

- ಚಕ್ರವರ್ತಿಗೆ ತಿರುಪತಿ ಲಡ್ಡು, ಮಹೇಂದರ್‌ಗೆ ತಿರುಪತಿ ನಾಮ ಎಂಬುದರ ಸಂಕೇತವಾಗಿ ತಿರುಪತಿಯಲ್ಲಿ ಮದುವೆ!

+++

* ಚಿರಂಜೀವಿ ಸ್ಪರ್ಧೆ ತಿರುಪತಿಯಲ್ಲಿ, ಶ್ರುತಿ ಮದುವೆ ತಿರುಪತಿಯಲ್ಲಿ!

- ಹೌದು, ಎರಡೂ ತಿರುಪತಿಯೇ!

+++

* ಶ್ರುತಿಯ ಭಾವಿ ಪತಿಯ ಹೆಸರು ಚಂದ್ರಚೂಡ ಚಕ್ರವರ್ತಿ ಅಂತನಾ?

- ಮಹೇಂದರ್ ಷಾರ್ಟಾಗಿ ’ಚಂಚ’ ಅಂತಾರೆ.
(ಶ್ರುತಿಗೆ ಚೂಡ!) (ಜಗೀಬಹುದು!)

+++

* ಚಂದ್ರಚೂಡ ಚಕ್ರವರ್ತೀನ ಷಾರ್ಟ್ ಆಗಿ ಸೀಸೀ ಅನ್ನಬಹುದಾ?

- ಶ್ರುತಿಗೆ ಸೀಸೀ, ಮಹೇಂದರ್‌ಗೆ ಕಹಿಕಹಿ!
(ನೋಡಿದವರಿಗೆ ’ಇಸ್ಸೀಸೀ!’)

+++

* ಐಪಿಎಲ್ ವಾಣಿಜ್ಯೀಕರಣವನ್ನು ಕೇಂದ್ರ ಕ್ರೀಡಾ ಸಚಿವ ಗಿಲ್ ಆಕ್ಷೇಪಿಸಿದ್ದಾರೆ?

- ಕ್ರಿಕೆಟ್ಟಾಟ ಇರಲಿ, ಕೆಟ್ಟಾಟ ಬೇಡ ಅಂದಿದ್ದಾರೆ.

+++

* ಎಸ್ಸೆಸ್ಸೆಲ್ಸಿಯಲ್ಲಿ ಉಡುಪಿ ಜಿಲ್ಲೆ ಟಾಪ್, ಪಿಯುಸಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಟಾಪ್!

- ಡಿಗ್ರಿಯಲ್ಲಿ ಅವೆರಡೂ ಟಾಪ್! ಬೇಸಿಗೇಲಿ ೪೦ರಿಂದ ೪೬ ಡಿಗ್ರಿವರೆಗೂ ಹೋಗುತ್ತೆ!

--೦--

ಶುಕ್ರವಾರ, ಮೇ 8, 2009

ನೀವು ಕೇಳದಿರಿ - 6 (ತಾರಾಜಕೀಯ ಸ್ಪೆಷಲ್)

* ಶ್ರುತಿ ಅವರು ಚಕ್ರವರ್ತಿ ಎಂಬುವವರನ್ನು ಮದುವೆಯಾಗುತ್ತಾರಂತೆ?

- ದೇವತೆಗಳ ಚಕ್ರವರ್ತಿ ಮಹೇಂದ್ರನಿಗಿಂತ ಆಯಮ್ಮಗೆ ಈ ಚಕ್ರವರ್ತಿಯೇ ಮೇಲಾದನೇ?!

+++

* ಸಿನಿಮಾ ಮತ್ತು ನಿಜಜೀವನ ಎರಡೂ ಒಂದೇನಾ?

- ಒಂದಕ್ಕೊಂದು ವಿರುದ್ಧ.
ಸಿನಿಮಾದಲ್ಲಿ ಶ್ರುತಿ ಅಳುತ್ತಿದ್ದರು, ನಿಜಜೀವನದಲ್ಲಿ ಮಹೇಂದರ್ ಅಳುತ್ತಾರೆ.

+++

* ’ಶ್ರುತಿ’? ’ಶೃತಿ’?

- ಮಹೇಂದರ್‌ಗಿನ್ನು ಕೇವಲ ’ಸ್ಮೃತಿ’!

+++

* ’ಜೈ ಹೋ’ ಬಳಸಿತಲ್ಲಾ ಕಾಂಗ್ರೆಸ್, ಅದಕ್ಕೆ ಜಯವಾಗುತ್ತೆಯೆ?

- ಗೆದ್ದರೆ ’ಜೈ ಹೋಗಯಾ’, ಸೋತರೆ ’ಜೈ ಹೋ ಗಯಾ’!

+++

* ಈ ಸಲ ಲೋಕಸಭೆಗೆ ಸ್ಪರ್ಧಿಸಿರುವ ಎಲ್ಲ ತಾರಾಮಣಿಗಳೂ ಗೆದ್ದುಬಿಟ್ಟು ಮನಮೋಹನ್ ಸಿಂಗರೇ ಮತ್ತೆ ಪ್ರಧಾನಿಯಾದರೆ?

- ವಿ.ಪಿ.ಸಿಂಗ್‌ಗೆ ಮಂಡಲ್ ಆಯೋಗ, ಎಂಎಂ ಸಿಂಗ್‌ಗೆ ತಾರಾಮಂಡಲ ಯೋಗ!

+++

* ’ಚಕ್ ದೇ ಇಂಡಿಯಾ - 2’ ಚಿತ್ರದಲ್ಲಿ ಶಾರುಖ್ ಖಾನ್ ಕ್ರಿಕೆಟ್ ಕೋಚ್ ಅಂತೆ!?

- ’ಕೋಲ್ಕತ್ತಾ ನೈಟ್ ರೈಡರ್ಸ್’ ತಂಡದ ಆಟಗಾರರೇ ಚಿತ್ರದ ಪಾತ್ರಧಾರಿಗಳು ಅಂತ ಪ್ರೊಡ್ಯೂಸರ್ ಹೇಳಿದ್ದಕ್ಕೆ ಶಾರುಖ್ ಖಾನ್ ಸಾಹೇಬರು, ’ನಾನು ಕೋಚ್ ಪಾತ್ರ ಮಾಡೋಲ್ಲ, ಬೇರೆಯವರಿಂದ ಮಾಡಿಸ್ಕಳಿ’ ಅಂದುಬಿಟ್ಟರಂತೆ!

--೦--

ಶನಿವಾರ, ಮೇ 2, 2009

ನೀವು ಕೇಳದಿರಿ - 2

* ಕೇಳಿ-ಕೇಳಿದಿರಿ-ಕೇಳದಿರಿ ಇವುಗಳ ವ್ಯತ್ಯಾಸವೇನು?
- ಮೊದಲನೆಯದು ಬರೀ ’ಕೇಳಿ’. (ವಿವರಣೆ ಅನವಶ್ಯ) ( ’ಹಾಯ್’!).
ಎರಡನೆಯದು ’ಕೇಳಿ ದಿರಿ’ಸು (ಕ್ರೀಡೆಯ ದಿರಸು) (’ಸುಧಾ’).
ಮೂರನೆಯದು ’ಕೇಳದಿರಿ’ಸು (ಕೇಳದೇ ಇಡು!) (ಪಾಯಿಂಟ್ ಇಡು, ಬತ್ತಿ ಇಡು ಇತ್ಯಾದಿ).

+++

* ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಸಲ ಉಡುಪಿ ಜಿಲ್ಲೆಯೇ ಯಾಕೆ ಫಸ್ಟ್ ಬರುತ್ತದೆ?
- ಶ್ರೀಕೃಷ್ಣನ ಅನುಗ್ರಹ ಅಂತಾರೆ ಪೇಜಾವರ ಶ್ರೀಗಳು.

+++

* ಇದೇನಿದು, ಕರ್ನಾಟಕದಲ್ಲಿ ಕೇರಳ-ಆಂಧ್ರ ಪೋಲೀಸರ ಗೂಂಡಾಗಿರಿ!
- ಯಾಕೆ, ಕರ್ನಾಟಕದಲ್ಲಿ ಕರ್ನಾಟಕದ ಪೋಲೀಸರು ಮಾತ್ರ ಗೂಂಡಾಗಿರಿ ಮಾಡ್ಬೇಕು ಅಂತ ರೂಲ್ಸಿದೆಯೇನು? ಇಷ್ಟಕ್ಕೂ, ಗೂಂಡಾಗಿರಿ ಮಾಡದೆ ಒಂದು ದಿನವಾದ್ರೂ ಹೇಗೆ ಇರಬಲ್ಲರು ಪೋಲೀಸರು, ಪಾಪ!

+++

* ಗುಜರಾತ್‌ನಲ್ಲೇ ಗೋಧ್ರಾ ವಿಚಾರಣೆ....
- ಅಯೋಧ್ಯೆಯಲ್ಲೇ ರಾಮಮಂದಿರ.

+++

* ಅಂಬಾನಿ ಹೆಲಿಕಾಪ್ಟರ್ ಹಗ’ರಣ’ ಏನಿದು ಕಥೆ?!
- ’ಅಂಬಾ, ನೀ ಹೇಳಿದೆ ಅಂತ ನಾವಿಬ್ಬರೂ ಮತ್ತೆ ಒಂದಾಗಿದ್ದೇವೆಯೇ ಹೊರತು ನಮ್ಮ ವೈರ ಇನ್ನೂ ಅಳಿದಿಲ್ಲ’, ಅನ್ನುತ್ತಿದ್ದಾರಂತೆ ಅಂಬಾನಿದ್ವಯರು ತಮ್ಮ ಅಂಬೆ ಕೋಕಿಲಾಬೆನ್ ಬೆನ್ನಿಗೆ!

+++

* ಈ ಸಲದ ಚುನಾವಣಾ ಫಲಿತಾಂಶವನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಅಂದಿದ್ದಾರೆ ಪ್ರಿಯಾಂಕಾ ಗಾಂಧಿ!
- ಭಗವದ್ಗೀತೆ ಓದಿದ್ದು ಜಾಸ್ತಿಯಾಗಿರಬೇಕು.

+++

* ಹಂದಿಜ್ವರ ಹತೋಟಿಗೆ ಭಾರತ ಸರ್ಕಾರ ಏನು ಮಾಡುತ್ತಿದೆ?
- ಪತ್ರಿಕೆಗಳಲ್ಲಿ ಜಾಹಿರಾತು ನೀಡುತ್ತಿದೆ.

+++

* ಐಪಿಎಲ್ ಫುಲ್ ಫಾರ್ಮ್‌ ತಿಳಿಸಿ ಗುರುವರ್ಯಾ.
- ಐಪಿಎಲ್ ಫುಲ್ ಫಾರ್ಮ್‌‌ನಲ್ಲೇ ಇದೆಯಲ್ಲಾ ಶಿಷ್ಯೋತ್ತಮಾ, ಚೀರ್ ಗರ್ಲ್ಸ್ ಫೋಟೋಗಳನ್ನು ನೋಡಿದರೆ ಗೊತ್ತಾಗೋಲ್ವೆ?

--0--

ಬುಧವಾರ, ಮಾರ್ಚ್ 25, 2009

ಟೈಂ ಕಿಲ್ಲರ್ (bullets ಅಲ್ಲ, pillets) ‍

-1-
ಹೆಸರು ಮಲ್ಲಿಕಾ
ಕೆಲಸ ಕಿಲ್ಲಿಕಾ
ಶಿಕ್ಷೆ ಗಲ್ಲ್, ಇಕಾ.

-2-
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ
ಮೂರು ರೂಪಾಯಿಗೆ ಕೆಜಿ ಅಕ್ಕಿ-ಗೋಧಿ!
ಕೊಟ್ಟರೆ ಒಂದು ಪಕ್ಷ ನಾಳೆ
ತಿಂದೋರಿಗೆ ಗ್ಯಾರಂಟಿ ವಾಂತಿ-ಭೇದಿ!

-3-
ಸೌತ್ ಆಫ್ರಿಕಾದಲ್ಲಿ ಐಪಿಎಲ್ ಕ್ರಿಕೆಟ್.
ಇಂಡಿಯಾದಲ್ಲಿ ಟೂರ್ನಿ kicked the ಬಕೆಟ್!
ಅಂದು ಆಫ್ರಿಕದಲ್ಲಿ
eradication of the apartheid.
ಇಂದು ಅಲ್ಲಿ
rehabilitation of the disabled!

-4-
’ಈ ಸಲದ ಚುನಾವಣೇಲಿ
ಮುಖವಾಡಗಳದ್ದೇ ಕಾರುಬಾರಂತೆ.’
’ಪ್ರತಿ ಸಲವೂ ನಡೀತಿರೋದು
ಅದೇ ಅಲ್ದೆ ಇನ್ನೇನಂತೆ?’

ಸೋಮವಾರ, ಮಾರ್ಚ್ 23, 2009

ಐಪಿಎಲ್ಲೇ ಸತ್ಯ

ಎಲ್ಲಾದರು ಇರು ಎಂತಾದರು ಇರು
ಹೆಸರಿಗೆ ಮಾತ್ರ ’ಐಪಿಎಲ್’ ಆಗಿರು
ಐಪಿಎಲ್ಲೇ ಸತ್ಯ
ಐಪಿಎಲ್ಲೇ ನಿತ್ಯ

ಐಪಿಎಲ್ ಎಂಬ ಓ ಮುದ್ದಿನ ಕರು,
ಟಿವಿ ಪ್ರಸಾರವೊಂದಿದ್ದರೆ ನೀ ನಮಗೆ ಕಲ್ಪತರು

ನೀ ಮೆಟ್ಟುವ ನೆಲ ಅದೆ ಅನ್ಯರ ನೆಲ
ನೀ ಆಡುವ ಪಿಚ್ ಧನಲಕ್ಷ್ಮಿ
ನೀ ಮುಟ್ಟುವ ಬ್ಯಾಟ್ ಅದೆ ದುಡ್ಡಿನ ಗಂಟ್
ನೀ ಕುಡಿಯುವ ನೀರ್ ಬಿಸ್‌ಲೇರಿ

ಗಂಟನು ನೋಡುವ ನಿನ್ನಾ ಕಂಗಳು
ಐಪಿಎಲ್ಲೇ ಸತ್ಯ
ಐಪಿಎಲ್ಲೇ ನಿತ್ಯ //ಎಲ್ಲಾದರು ಇರು..//

ಹರಿಯುವ ಹಣದಾ ಹೊಳೆಗೆರಗುವ ಮನ
ಹಾಳಾಗಿಹ ಬುದ್ಧಿಗೆ ಕೊರಗದ ಮನ
ಬೆಳಗಾದರೆ ದುಡ್ಡಿಗೆ ಸಾಯುವ ಮನ
ಮಜ-ಮೋಜಿಗೆ ಹೊಂಪುಳಿ ಹೋಗುವ ಮನ

ಕಾಂಚಾಣಕೆ ಬಲಿಯಾಗುವ ಪೆಂಪಿಗೆ
ಹೆಸರಿನ ಇಂಪಿಗೆ ನೋಟಿನ ಸೊಂಪಿಗೆ
ನಾವುಗಳೆಲ್ಲರು ಹೊಗಳುವ ತಪ್ಪಿಗೆ
ರಸರೋಮಾಂಚನಗೊಳುವಾ ನಿನ್ನ್ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್
ಐಪಿಎಲ್ಲೇ ಸತ್ಯ
ಐಪಿಎಲ್ಲೇ ನಿತ್ಯ

ಎಲ್ಲಾದರು ಇರು ಎಂತಾದರು ಇರು
ದೇಶದ ಮಾನ ಹರಾಜ್ ಹಾಕ್ತಾ ಇರು
ಐಪಿಎಲ್ಲೇ ಸತ್ಯ
ಐಶ್ವರ್ಯವೆ ನಿತ್ಯ
ಅನ್ಯರ ನೆಲವೇ ಪಥ್ಯ

(ದೇಶಾಭಿಮಾನ?
ಮಿಥ್ಯ!)

ಭಾನುವಾರ, ಮಾರ್ಚ್ 22, 2009

ಒಂದು ಓವರ್

-1-
ಹರಿದಾಸರ ಪದ: ’ಹರಿಭಜನೆಯ ಮಾಡಿರೋ..’
ಕಿರಿಕೆಟ್ಟಿಗರ ಪದ: ’ಹರಭಜನನ ಭಜಿಸಿರೋ..’

***

-2-
ಕಿವಿಗಳಿರುವುದು
ಕೇಳಲಿಕ್ಕೆ
ಮತ್ತು
ಸೋಲಲಿಕ್ಕೆ

***

-3-
ಹರಭಜನ್ ಕೈಯಲ್ಲಿ
ಕಿವಿ ಬಜ್ಜಿ!
ಸಚಿನ್ ಕೈಯಲ್ಲಿ
ಅದು ಚಿನ್
ದಿ!

***

-4-
ದೋನಿ ಸಾಗಿದೆ
ಮುಂದೆ ಹೋಗಿದೆ
ದೂರ ತೀರವ ಸೇರಿದೆ
ಬೀಸುಗಾಳಿಗೆ
ಬೀಳುತೇಳುವ
ಬಿಳಿಯರ್ ಮೇಗಡೆ ಹಾದಿದೆ!

***

-5-
ದಡ್ಡ ತಿಪ್ಪೇಶಿ ಕೇಳ್ತಾನೆ,
’ದೋನಿಗೆ ಆಸ್ಕರ್ ಸಿಗುತ್ತಾ?’
ದೊಡ್ಡ ಮಟ್ಟದಲ್ಲೇ ಏರಿದೆ ಪಾಪ
ನೆತ್ತಿಗೆ ಆಸ್ಕರ್ ಪಿತ್ತ!
(ತಪ್ಪು ಮಾಧ್ಯಮಗಳದ್ದು,
ಗೊತ್ತಾ?)

***

-6-
ದೋನಿಯನ್ನು ಸೆಳೆಯಲು
ಆಪರೇಷನ್ ಕಮಲ
ನಡೆದರೆ
ಆಶ್ಚರ್ಯವಿಲ್ಲ