hindu ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
hindu ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮಾರ್ಚ್ 24, 2009

ದಶದಿಕ್ಕುಗಳಿಗೂ ವರುಣಪ್ರತಾಪ!

(ಚಿತ್ರ ಕೃಪೆ : telegraphindia.com)

ರೈತರಿಗೆ ಸಲಹೆ. ಕ್ಷಮಿಸಿ, ರೇಡಿಯೋ ಕೇಳಿ ಕೇಳಿ ಈ ನುಡಿಗಟ್ಟು ಬಂತು.
ರೈತರಿಗೆ ಸ್ಪಷ್ಟನೆ: ಈ ಕೆಳಗಿನ ಲೇಖನವು ಮಳೆ ಕುರಿತಾದದ್ದಲ್ಲ. ಮಳೆಗಾಗಿ ಹವಾಮಾನ ಇಲಾಖೆಯನ್ನು ಸಂಪರ್ಕಿಸಿ (ಮೋಸಹೋಗಿ).

ವರುಣ್ ಗಾಂಧಿಯ ಪ್ರತಾಪವು ಇಂದು ದಶದಿಕ್ಕುಗಳಿಗೂ ಹರಡಿದೆ. ಅಷ್ಟದಿಕ್ಪಾಲಕರಂತೂ ತಮ್ಮ ಪಟ್ಟಗಳನ್ನು ’ವಗಾಂ’ಗೆ ವರ್ಗಾಯಿಸಿ (ಒಗಾಯಿಸಿ) ರಿ-tired! ಈಗ ವರುಣ್ ಗಾಂಧಿಯೇ ಅಷ್ಟದಿಕ್ಕುಗಳೊಡೆಯ! ’ನಮೋನ್ನಮಃ ಜೀಯಾ!’
’ ಓಂ ಇಂದ್ರಾಯ ನಮಃ ಅಗ್ನಯೇ ನಮಃ ಯಮಾಯ ನಮಃ ನಿರುತಯೇ ನಮಃ ವರುಣಾಯ ನಮಃ ವಾಯವೇ ನಮಃ ಕುಬೇರಾಯ ನಮಃ ಈಶಾನ್ಯಾಯ ನಮಃ .’

ವರುಣ್ ಗಾಂಧಿ ಅಷ್ಟದಿಕ್ಕುಗಳೊಡೆಯ ಹೇಗೆ?

ಹೀಗೆ :
* ಹಿಂದುವಾದಿಗಳಿಗಾತ ಇಂದ್ರ.
* ನಿರ್ದಿಷ್ಟ ಕೋಮುಗಳೆರಡರ ಮಧ್ಯೆ ಆತ ಅಗ್ನಿ.
* ಕೋಮೊಂದರ ಪಾಲಿಗಾತ ಯಮ(ಪ್ರಾಯ).
(ಪ್ರಾಯ ಅಂಥದು, ಏನ್ಮಾಡೋದು ಹೇಳಿ.)
* ಹಿಂದುಸೇನೆಗಳ ದೃಷ್ಟಿಯಲ್ಲಾತ ದುರ್ಗಾಪತಿ ನಿರುತಿ.
* ವರುಣ...ಅದೇ ತಾನೇ ಆತ? (ಹಿಂದುವಾದಿಗಳಿಗೆ ಆತನ ಮಾತು ತಂಪಾದ ಮಳೆ.)
* ವಾಯು...ಹೌದು, ಪ್ರಸಕ್ತ ಚುನಾವಣಾ ರಾಜಕಾರಣದಲ್ಲಾತ ಜಂಝಾವಾತ! (’ರಾಂಗ್. ಜಂಝಾನಿಲ.’ ’ಓಕೆ.’)
* ಬಿಜೆಪಿ ಪಾಲಿಗೀಗ ಆತ ಮತಕುಬೇರ. (ಹಿಂದು ಮತ ಅಲ್ಲ, ವೋಟ್ ಎಂಬ ಮತ.)
ಮತ್ತು
* ’ಬಲ’ಗಡೆಯವರಿಗಾತ ಈಶ; ’ಎಡ’ಗಡೆಯವರಿಗಾತ ಅನ್ಯ; ಒಟ್ಟು ಈಶಾನ್ಯ.

ಇನ್ನು, ಮೇಲೂ ಕೆಳಗೂ ಆತನ ಪ್ರತಾಪವೇನು ಕಮ್ಮಿಯೇ?

ಕೈಯನ್ನು ಮೇಲಕ್ಕೆತ್ತಿ ಒಮ್ಮೆ ಗರ್ಜಿಸಿದನೆಂದರೆ ಆ-ಕಾಶವೇ ಅದುರಬೇಕು! ಇಷ್ಟಕ್ಕೂ ಆತನ ಪ್ರ-ತಾಪ-ಮಾನಗಳೆಲ್ಲ ಆಕಾಶಮಾರ್ಗವಾಗಿಯೇ ಅಲ್ಲವೆ ಎಲ್ಲರ ಮನೆಗಳ ಮೂರ್ಖಪೆಟ್ಟಿಗೆಯನ್ನು ಸೇರುವುದು?

ಓಕೇ. ಮೇಲಾಯಿತು; ಕೆಳಗೆ?

ಶ್! ಅಂಡರ್-ಗ್ರೌಂಡ್ ಎಕ್ಟಿವಿಟಿ/ಆಕ್ಟಿವಿಟಿ/ಯಾಕ್ಟಿವಿಟಿ/ಕಟಿಪಿಟಿ ಮಾಡುವ ಮೂಲ-ಭೂತ-ವಾದಿಗಳಿಗಷ್ಟೇ ಗೊತ್ತು ಈ ವಿಷಯ, pub-leak ಮಾಡುವಂತಿಲ್ಲ.

ಹೀಗೆ ದಶದಿಕ್ಕುಗಳಿಗೂ ವ್ಯಾಪಿಸಿರುವ ಪ್ರತಾಪಸಿಂಹ - ಕ್ಷಮಿಸಿ - ಪ್ರತಾಪಶಾಲಿ ವರುಣನಿಗೆ ಗುಳಿಗೆಪ್ಪನ ನಮೋನ್ನಮಃ.

ಬಿಡುಗಡೆಗೆ ಮೊದಲೇ ಸಿನಿಮಾ ’ಹೌಸ್‌ಫುಲ್’!

ಆನೆ, ಇದ್ದರೂ ಬೆಲೆಬಾಳುತ್ತದೆ, ಸತ್ತರೂ ಬೆಲೆಬಾಳುತ್ತದೆ. ಗಜಸಮಾನ ವ್ಯಕ್ತಿ ಚಾರ್ಲಿ ಚಾಪ್ಲಿನ್ ವಿಷಯದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಅವನ ಭಾವಿ ಪ್ರತಿಮೆ ಎಂಥ ಅಮೂಲ್ಯವೆಂದು ಈಚೆಗಷ್ಟೇ ಸಾಬೀತಾಯಿತಷ್ಟೆ.

ಆ ಪ್ರತಿಮೆ ಎಲ್ಲೆಲ್ಲೋ ತಿರುಗಾಡಿ ಕೊನೆಗೀಗ ಬೆಂಗಳೂರು ಸಮೀಪದ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಬಂದುನಿಂತಿದೆ. ಅಲ್ಲೇ ಉಳಿಯುತ್ತದೋ ಅಲ್ಲಿಂದ ಮತ್ತೆ ಬೇರೆಡೆಗೆ ಎತ್ತಂಗಡಿಗೊಳಗಾಗುತ್ತದೋ ಗೊತ್ತಿಲ್ಲ. ಆದರೆ, ಈ ಭಾವಿ ಪ್ರತಿಮೆಯ ಸುತ್ತ ಜನರ ಪ್ರದಕ್ಷಿಣೆ-ಅಪ್ರದಕ್ಷಿಣೆಗಳು ಮಾತ್ರ ಭರ್ಜರಿಯಾಗಿ ನಡೆದವು. ಅಮೂಲ್ಯ ಪ್ರತಿಮೆಯ ಅಮೂಲ್ಯ ವಿಷಯವನ್ನು ಕೈಗೆತ್ತಿಕೊಂಡು ಅಮೂಲ್ಯ ವ್ಯಕ್ತಿಗಳು ಅಮೂಲ್ಯ ವಾದ-ವಿವಾದ ಇತ್ಯಾದಿ ನಡೆಸಿ ಸಮಾಜಕ್ಕೆ ಅನೇಕ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಅವು ಇಂತಿವೆ:
* ಉಪಮೆಯಿಲ್ಲದಂಥ ಈ ಪ್ರತಿಮಾ ವಿವಾದದಿಂದಾಗಿ ಜನರಲ್ಲಿ (ಧರ್ಮ)ಜಾಗೃತಿ ಉಂಟಾಯಿತು.
* ಹಿಂದು-ಕ್ರಿಶ್ಚಿಯನ್-ಜ್ಯೂ-ಮುಸ್ಲಿಂ ಮುಂತಾಗಿ ಅನುಪಮ ಧರ್ಮಜಿಜ್ಞಾಸೆ ನಡೆಯಿತು.
* ಸಾಹಿತಿ-ಕಲಾವಿದ-ರಂಗಕರ್ಮಿ-’ಬುದ್ಧಿಜೀವಿ’ಗಳನೇಕರಿಂದ ’ಸ್ವಾತಂತ್ರ್ಯ ಚಳವಳಿ’ ನಡೆಯಿತು.
* ಕಾಂಗ್ರೆಸ್-ಜೆಡಿಎಸ್-ಕಮ್ಯುನಿಸ್ಟ್ ಪಕ್ಷಗಳಿಂದ ಪ್ರಸಕ್ತ ಚುನಾವಣಾ ಸಂದರ್ಭದಲ್ಲಿ ಸದರಿ (ಭಾವಿ) ಪ್ರತಿಮೆಯ ನೆರಳಿನಲ್ಲಿ ’ಧರ್ಮ-ಕರ್ಮ-’ಮತ’-ವಿಚಾರ-ಸಮ್‌ಕಿ’ರಣ’ಕಹಳೆಗಳು’ ಮೊಳಗಿದವು.
* ನನ್ನೀ ಬರಹವೂ ಸೇರಿದಂತೆ ಪುಂಖಾನುಪುಂಖವಾಗಿ ಬರಹಗಳು ಧುಮ್ಮಿಕ್ಕಿದವು.
* ಆಂಗ್ಲ ದೃಶ್ಯಮಾಧ್ಯಮಗಳು ಕರ್ನಾಟಕದ ಈ ’ಜಗಘೋರ’ - ಕ್ಷಮಿಸಿ - ’ಜಗದೋದ್ಧಾರ’ಕಾರ್ಯವನ್ನು ಜಗಜ್ಜಾಹೀರು ಮಾಡಿ, ವೈಭವೀಕರಿಸಿ, ಜಗಿದುಗುಳಿ, ನಮಗೆ ಜಗ್ಗಿ ಪಬ್ಲಿಸಿಟಿ ನೀಡಿದವು.
* ’ಅಪ್ರತಿಮ ಪ್ರತಿಮಾಭಿಮಾನಿ’ ನಿರ್ಮಾಪಕ ಮಹಾಶಯನಂತೂ ತನ್ನ ಅನ್ಯೋದ್ದೇಶದ ರೊಟ್ಟಿಯು ಜಾರಿ ಪ್ರಚಾರದ ತುಪ್ಪದಲ್ಲಿ ಬಿದ್ದದ್ದನ್ನು ಕಂಡು ಒಳಗೊಳಗೇ ಹಿರಿಹಿರಿ ಹಿಗ್ಗಿದನು.

ಬಿಡುಗಡೆಗೆ ಮೊದಲೇ ಸಿನಿಮಾ ’ಹೌಸ್‌ಫುಲ್’!
ಬಿಡುಗಡೆಯಾದಮೇಲೆ?
ಖಾಲಿಖಾಲಿ!!