varun ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
varun ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಏಪ್ರಿಲ್ 4, 2009

ರಾಜಕಾರಣಿಗಳೆಂಬ ಜನಶೇವಕರ ಕಥೆ

ಭಾರತದ ರಾಜಕಾರಣಿಗಳು ವಿಶ್ವದಲ್ಲೇ ಅತ್ಯಂತ ಶ್ರೇಷ್ಠರು. ರೂಢಿಯೊಳಗುತ್ತಮರು.
’ದಾಸನಂತಾಗುವೆನು ಧರೆಯೊಳಗೆ ನಾನು’, ಎಂಬ ದಾಸವಾಣಿಯಂತೆ ನಡೆಯುವವರು ಇವರು.
ಚುನಾವಣೆ ಎದುರಿರುವಾಗ ಇವರು ನಮ್ಮ ಮನೆಬಾಗಿಲಿಗೆ ಬಂದು ನಮ್ಮ ದಾಸಾನುದಾಸರಂತೆ ಕೈಮುಗಿದು, ಹಲ್ಲು ಕಿರಿದು, ಎಲ್ಲ ಸುಖ-ಕಷ್ಟ ವಿಚಾರಿಸಿ, ’ಇಲ್ಲಿರುವುದು ಸುಮ್ಮನೆ, ಅಲ್ಲಿ ಡೆಲ್ಲಿಯಲ್ಲಿರುವುದು ಪಾರ್ಲಿಮೆಂಟ್ ಎಂಬ ನಮ್ಮನೆ’, ಎಂದು ನುಡಿದು, ಪೆಪ್ಪರಮಿಂಟ್ ತಿಂದವರಂತೆ ಜೊಲ್ಲು ಸುರಿಸುತ್ತ ಮುಂದಿನ ಮನೆಬಾಗಿಲಿಗೆ ಬಿಜಯಂಗೈಯುವವರು.
’ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ವೋಟರ್ ಪ್ರಭುವೆ’, ಎನ್ನುವ ಇವರ ಆ ವಿನಯ, ಎನ್ನ ಸ್ವಾಮೀ, ರೊಂಬ ಅದ್ಭುತಂ!
ಮತದಾರನ ಮನೆಯೇನಾದರೂ ಒಳಗಿನಿಂದ ಬೋಲ್ಟಿಸಲ್ಪಟ್ಟಿದ್ದರೆ ಆಗ ಈ ಜನಸೇವಕರು, ’ಪೂಜಿಸಲೆಂದೇ ಹೂನಗೆ ತಂದೆ, ದರುಶನ ಕೋರಿ ನಾ ನಿಂದೆ, ತೆರೆಯೋ ಬಾಗಿಲನು’, ಎಂದು ಗಾರ್ದಭರಾಗದಲ್ಲಿ ಹಾಡಿ ಬಾಗಿಲು ತೆರೆಸಿ, ಪಾಂಪ್ಲೆಟ್ ನೀಡಿ, "ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ನಾಣ್ಣುಡಿಯಂತೆ ನಾವಿವತ್ತು ನಿಮ್ಮ ಕಾಲು ಹಿಡೀಲಿಕ್ಕೆ ಬಂದಿದ್ದೀವಿ, ನಮಗೇ ವೋಟ್ ಹಾಕಿ", ಎಂದು ಮುವ್ವತ್ತೆರಡೂ ಹಲ್ಲುಗಳನ್ನು (ಸದಾನಂದಗೌಡರಂತೆ) ಪ್ರದರ್ಶಿಸುತ್ತಾರೆ. ಇವರ ಈ ವಿನಯ ಅಂಥಿಂಥದೇ? ಚಾಲಾ ಗೊಪ್ಪದಿ!
’ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ’, ಎಂದು ಈ ದೈವಭಕ್ತಶಿಖಾಮಣಿಗಳು ಚುನಾವಣೆಯ ಸಂದರ್ಭದಲ್ಲಿ ಕಂಡಕಂಡ ದೇವರುದಿಂಡಿರಿಗೆಲ್ಲ ಮೊರೆಹೊಗುವ ಪರಿಯನ್ನೆಂತು ಬಣ್ಣಿಸಲಿ!
’ಕಂಡುಕಂಡು ನೀ ಎನ್ನ ಕೈಬಿಡುವರೇ ಪ್ರಭುವೆ, ಉಂಡು ಮಲಗದೆ ಅಂದು ಮತ ನೀಡು ಒಡೆಯಾ’, ಎಂದು ಮತದಾರನನ್ನು ಇವರು ಬೇಡಿಕೊಳ್ಳುವ ಪರಿಯೂ ಅನನ್ಯ!
ನಮ್ಮೀ ರಾಜಕಾರಣಿಗಳು ಅತ್ಯಂತ ಪ್ರಾಮಾಣಿಕರು. ಸತ್ಯಸಂಧರು. ಸಿದ್ಧಾಂತಬದ್ಧರು. ನಿಷ್ಪೃಹರು. ಅತಿ ವಿಧೇಯರು. ಮತ್ತು ಜಾತ್ಯತೀತರು.
ಇವರ ಚುನಾವಣಾ ಭಾಷಣಗಳೇ ನನ್ನ ಈ ಮಾತಿಗೆ ಸಾಕ್ಷಿ.
ವಿರೋಧಿಗಳ ಟೀಕೆಯೇ ತುಂಬಿರುವ ತಮ್ಮ ಭಾಷಣದಲ್ಲಿ ಇವರು, ಒಂದುವೇಳೆ ತಾವು ಆರಿಸಿಬಂದರೆ ತಮ್ಮ ಕ್ಷೇತ್ರಕ್ಕೆ ಏನೇನು ಕೆಲಸಕಾರ್ಯಗಳನ್ನು ಮಾಡಲಿದ್ದೇವೆಂಬುದನ್ನು ಎಂದಿಗೂ ತಿಳಿಸುವುದಿಲ್ಲ. ಏಕೆಂದರೆ, ಆರಿಸಿಬಂದಮೇಲೆ ಇವರು ಕ್ಷೇತ್ರಕ್ಕಾಗಿ ಯಾವ ಕೆಲಸವನ್ನೂ ಮಾಡುವವರಲ್ಲ. ಅಂದಮೇಲೆ ಇವರದು ಅತ್ಯಂತ ಪ್ರಾಮಾಣಿಕ ಭಾಷಣವಲ್ಲವೆ?
ಪ್ರತಿಯೊಂದು ಪಕ್ಷದವರೂ ತಮ್ಮ ವಿರೋಧಿಗಳ ಭ್ರಷ್ಟಾಚಾರವನ್ನೂ ಅನಾಚಾರವನ್ನೂ ಚುನಾವಣಾ ಭಾಷಣದಲ್ಲಿ ಬಣ್ಣಿಸುತ್ತಾರಷ್ಟೆ. ನಾವು ಎಲ್ಲರ ಭಾಷಣಗಳನ್ನೂ ಹಂಡ್ರೆಡ್ ಪರ್ಸೆಂಟ್ ನಂಬುತ್ತೇವೆ. ಎಲ್ಲರೂ ಸತ್ಯವನ್ನೇ ಹೇಳುತ್ತಿದ್ದಾರೆಂಬುದು ಇವರ ಹಾವ-ಭಾವ, ಉದ್ರೇಕ-ಉನ್ಮಾದ, ಕೋಪ-ತಾಪ ಮತ್ತು ಇವರು (ಭಾಷಣಗಳಲ್ಲಿ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ) ಪ್ರದರ್ಶಿಸುವ ಕಾಗದ-ಪತ್ರ-ಪತ್ರಿಕೆಗಳು ಇವುಗಳಿಂದ ಗೊತ್ತಾಗುತ್ತದೆ.
ನಮ್ಮೀ ರಾಜಕಾರಣಿಗಳು ಸಿದ್ಧಾಂತಬದ್ಧರು. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸುವುದು, ಯೇನಕೇನ ಪ್ರಕಾರೇಣ ಗೆಲ್ಲುವುದು ಮತ್ತು ಗೆದ್ದಮೇಲೆ ಮಂತ್ರಿಗಿರಿ/ನಿಗಮ/ಮಂಡಳಿ ಯಾವುದಾದರೊಂದು ಕುರ್ಚಿಯಲ್ಲಿ ರಾರಾಜಿಸುವುದು ಈ ತ್ರಿವಿಧ (ಸ್ವಯಂ)ದಾಸೋಹವೇ ತಮ್ಮ ರಾಜಕೀಯ ಜೀವನದ ಪರಮಗುರಿಯೆಂಬುದು ಇವರ ಸಿದ್ಧಾಂತ. ಈ ಸಿದ್ಧಾಂತಪಾಲನೆಗಾಗಿಯೇ ಇವರು ದಿನಕ್ಕೆರಡುಬಾರಿ ಪಕ್ಷಾಂತರ ಮಾಡುವುದು. ಸಿದ್ಧಾಂತಪಾಲನೆಗಾಗಿ ಎಂಥ ಕಡುಕಷ್ಟ, ಪಾಪ!
ಇನ್ನು, ಇವರ ನಿಷ್ಪೃಹ ಮನೋಭಾವನ್ನು ನಾನೆಂತು ಬಣ್ಣಿಸಲಿ! ಅದೆಷ್ಟು ನಿಷ್ಪೃಹರಾಗಿ, ಅರ್ಥಾತ್ ನಿಃಸ್ವಾರ್ಥದಿಂದ ಇವರು ಜನಸೇವೆ ಮಾಡುತ್ತಾರೆಂದರೆ, ಯಾವ ವಿಶೇಷ ಆಸ್ತಿಪಾಸ್ತಿಗಳನ್ನೂ ಇವರು ಗಳಿಸಿರುವುದಿಲ್ಲ. ಇವರ ಪೈಕಿ ಎಷ್ಟೋ ಮಂದಿಗೆ ಮನೆಯೂ ಇರುವುದಿಲ್ಲ, ವಾಹನವೂ ಇರುವುದಿಲ್ಲ! ಏನೋ, ಇವರ ಹೆಂಡತಿ ಟೈಲರಿಂಗ್ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ. ಗಂಡಂದಿರನ್ನು ಈ ಹೆಂಡತಿಯರೇ ಸಾಕುತ್ತಾರೆ.
ಇನ್ನು, ಈ ಜನಸೇವಕರ ವಿಧೇಯತೆಯೆಂದರೆ ಅಂಥಿಂಥದೇ? ಹೈಕಮಾಂಡು ತನ್ನ ಕಾಲಲ್ಲಿ ತೋರಿಸಿದ್ದನ್ನು ಇವರು ’ಕೈ’ಯಲ್ಲಿ ಎತ್ತಿಕೊಂಡು ತಲೆಯಮೇಲೆ ಇಟ್ಟುಕೊಳ್ಳುತ್ತಾರೆ! ಇಂಥ ವಿಧೇಯತೆಯು ವಿಶ್ವದ ಇನ್ನಾವ ರಾಷ್ಟ್ರದ ರಾಜಕಾರಣಿಗಳಲ್ಲೂ ಇಲ್ಲ ಬಿಡಿ.
ವಯಸ್ಸು ೭೬ರ ದೇವೇಗೌಡರಾಗಿರಲಿ, ೮೨ರ ಅಡ್ವಾಣಿಯಾಗಿರಲಿ, ೮೩ರ ಬಾಳ್ ಠಾಕ್ರೆ ಆಗಿರಲಿ, ೮೫ರ ಕರುಣಾನಿಧಿ ಆಗಿರಲಿ, ೯೫ರ ಜ್ಯೋತಿ ಬಸು ಆಗಿರಲಿ, ಸೋನಿಯಾ, ರಾಹುಲ್,....ಕೊನೆಗೆ ಎಂಟು ವರ್ಷದ ರೈಹನ್ ವಡ್ರಾ ಅಥವಾ ಆರು ವರ್ಷದ ಮಿರಯಾ ವಡ್ರಾನೇ ಆಗಿರಲಿ, ಹೈಕಮಾಂಡ್ ಎಂದರೆ ಹೈಯೇ. ಪಕ್ಷದ ಎಲ್ಲರೂ ಆ ಹೈಕಮಾಂಡ್‌ನಡಿ ಲೋ! ವೆರಿ ಲೋ!! ವೆರಿ ವೆರಿ ಲೋ!!! ಎಂಥ ವಿಧೇಯತೆ!
ನಮ್ಮೀ ರಾಜಕಾರಣಿಗಳ ಜಾತ್ಯತೀತ ಮನೋಭಾವವಂತೂ ಇಡೀ ವಿಶ್ವಕ್ಕೇ ಮಾದರಿ! ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಎಂಬ ಭೇದಭಾವವಿಲ್ಲದೆ ಚುನಾವಣೆಯ ಸಂದರ್ಭದಲ್ಲಿ ಎಲ್ಲ ಮತೀಯರ ದೇಗುಲ-ಪ್ರಾರ್ಥನಾಸ್ಥಳಗಳಿಗೂ (ಆಯಾ ಉಡುಪುಗಳಲ್ಲಿ) ಭೇಟಿಯಿತ್ತು, ಕೈಮುಗಿದು-ಅಡ್ಡಬಿದ್ದು ಕೃತಾರ್ಥರಾಗುವ ಇವರ ಮತಾತೀತ ಭಕ್ತಿಭಾವವಾಗಲೀ, ಎಲ್ಲ ಜಾತಿ-ಮತಗಳವರ ಮನೆಬಾಗಿಲಿಗೂ ಹೋಗಿ ಹಲ್ಕಿರಿದು ಮತ ಅಂಗಲಾಚುವ ಇವರ ಜಾತ್ಯತೀತ ಮನೋಭಾವವಾಗಲೀ ವರ್ಣನಾತೀತ!
’ಹನುಮನ ಮತವೇ ಹರಿಮತವೋ. ಹರಿಯ ಮತವೆ ಹನುಮನ ಮತವೊ’, ಎಂಬ ದಾಸವಾಣಿಯೊಲ್ ಇವರು, ’ಪ್ರಜೆಗಳ ಮತವೇ ನಮ್ಮ್ ಹಿತವೋ. ನಮ್ಮ ಮತದಾಟ ಪ್ಲಾನ್‌ಯುತವೊ’, ಎಂದು ಮಸಾಲ್ದೋಸವಾಣಿಯಂ ಹರಿಬಿಡುವರು.
ಚುನಾವಣೆಯಾದಮೇಲೆ, ’ನೀನ್ಯಾಕೋ ನಿನ್ನ ಹಂಗ್ಯಾಕೋ’, ಅನ್ನುವ (ಪುರಂದರದಾಸಸಮಾನ) ಧುರಂಧರರಿವರು!
ಇವರಲ್ಲಿ ಕೆಲವರು ’ಧರ್ಮವೆ ಜಯವೆಂಬ ದಿವ್ಯಮಂತ್ರ’ವನ್ನು ಜಪಿಸಿದರೆ, ಉಳಿದವರು ’ಜಯವೆ ಧರ್ಮವೆಂಬ ದಿವ್ಯಮಂತ್ರ’ವನ್ನು ಜಪಿಸುವವರು.
’ಮಣ್ಣಿಂದ ಕಾಯ ಮಣ್ಣಿಂದ’, ಎನ್ನುತ್ತ, ಮಣ್ಣನ್ನು ಗಳಿಸಲೆಂದೇ ಎಲೆಕ್ಷನ್ನಿಗೆ ನಿಲ್ಲುವ ’ಮಣ್ಣಿನ ಮಕ್ಕಳು’ ಇವರು.
’ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಲ್ಲ’, ಎಂಬ ದಾಸವಾಣಿಯ ಮರ್ಮವನ್ನರಿತೇ ಇವರು ಆದಷ್ಟು ಬೇಗನೆ ’ಅಷ್ಟೈಶ್ವರ್ಯಭಾಗ್ಯ’ಶಾಲಿಗಳಾಗಿ ಆ ಭಾಗ್ಯವನ್ನು ಸ್ಥಿರವಾಗಿ ಸ್ವಿಸ್ ಬ್ಯಾಂಕಿನಲ್ಲಿಡಲು ಹೊರಟವರು.
’ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ’, ಎಂಬಂತಾಗಬಾರದೆಂದು ಇವರು ನರ-ಹರಿ ಕೊಡುವುದನ್ನೆಲ್ಲ ಉಣ್ಣುತ್ತ ಕೂರುವವರು.
’ಊಟಕ್ಕೆ ಬಂದೆವು ನಾವು, ನಿಮ್ಮ ಆಟಪಾಠವ ಬಿಟ್ಟು ನಮಗೆ ನೀಡ್ರಯ್ಯಾ’, ಎಂದು ಕೇಳಿ ನೀಡಿಸಿಕೊಂಡು ಉಣ್ಣುವವರು.
ಇಂಥ ಪ್ರಾಮಾಣಿಕ, ಸತ್ಯಸಂಧ, ಸಿದ್ಧಾಂತಬದ್ಧ, ನಿಷ್ಪೃಹ, ದೈವಭಕ್ತ, ಅತಿ ವಿಧೇಯ ಮತ್ತು ಜಾತ್ಯತೀತ ರಾಜಕಾರಣಿಗಳನ್ನು ಹೊಂದಿರುವ ಭಾರತೀಯರಾದ ನಾವೇ ಧನ್ಯರು!
ಇಂಥ ಶ್ರೇಷ್ಠರೂ ರೂಢಿಯೊಳಗುತ್ತಮರೂ ಆದ ರಾಜಕಾರಣಿಗಳ ಬಗ್ಗೆ, ಇವರನ್ನು ಆರಿಸಿ ಕಳಿಸುವ ಮತದಾರ ಬಾಂಧವರ ಬಗ್ಗೆ ಮತ್ತು ಇವರ ಅದ್ಭುತ ಆಳ್ವಿಕೆಗೆ ಒಳಪಟ್ಟಿರುವ ಈ ನಾಡಿನ ಬಗ್ಗೆ ಬರೆಯಲು ಇನ್ನು ನನ್ನಲ್ಲಿ ಪದಗಳೇ ಇಲ್ಲ!
ಲೇಖನಸನ್ಯಾಸ ಸ್ವೀಕರಿಸಿ ಕಾಡಿಗೆ ಹೋಗಿ ಕಂದಮೂಲ ತಿಂದುಕೊಂಡಿರುವುದೇ ನನಗಿನ್ನು ಸೂಕ್ತವೆನ್ನಿಸುತ್ತದೆ.
ಅಂತೆಯೇ ಮಾಡುತ್ತೇನೆ.

ಮಂಗಳವಾರ, ಮಾರ್ಚ್ 24, 2009

ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗ

ಪ್ರಿಯಾಂಕಾ ಉವಾಚ :
ವರುಣ್ ಗಾಂಧಿ ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಳ್ಳಲಿ.

ಶ್ರೀ ಗುಳಿಗೆಪ್ಪ ಉವಾಚ :
ವರುಣ್ ಗಾಂಧಿಯು ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರಂತೆಯೇ ನಡೆಯುತ್ತಿದ್ದಾನೆ.

’ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ’ ಎಂದ ಶ್ರೀಕೃಷ್ಣನ ಅಪರಾವತಾರವೇ ತಾನೆಂದು ತಿಳಿದುಕೊಂಡು (ಹಿಂದು)ಧರ್ಮಸಂಸ್ಥಾಪನೆಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದಾನೆ. (therefore ಆತನಿಗೆ ಉಘೇಉಘೇ!)

’ಅಸೌ ಮಯಾ ಹತಃ ಶತ್ರುಃ ಹನಿಷ್ಯೇ ಚಾಪರಾನಪಿ’ (ಅಧ್ಯಾಯ ೧೬, ಶ್ಲೋಕ ೧೪), ಅರ್ಥಾತ್, ’ಆ ಶತ್ರುವು ನನ್ನಿಂದ ಕೊಲ್ಲಲ್ಪಟ್ಟಿದ್ದಾನೆ; ಇತರರನ್ನೂ ನಾನು ಕೊಲ್ಲುತ್ತೇನೆ’, ಎಂದು ಸಾರಿ ಮುನ್ನಡೆದಿದ್ದಾನೆ. (ಸ್ಸಾರಿ, ವಿವರಣೆ ಅಗತ್ಯ: ಕೊಲ್ಲಲ್ಪಟ್ಟಿದ್ದು ಇಲ್ಲಿ ದೇಹವಲ್ಲ, ಮನಸ್ಸು.)

’ಪಶ್ಯ ಮೇ ಪಾರ್ಥ, ರೂಪಾಣಿ ಶತಶೋಥ ಸಹಸ್ರಶಃ’ (೧೧, ೫), ಎಂದ ಶ್ರೀಕೃಷ್ಣನಂತೆ ಈತನೂ ತನ್ನ ನೂರಾರು-ಸಹಸ್ರಾರು ರೂಪಗಳನ್ನು ಒಂದೊಂದಾಗಿ ತೋರಿಸಲು ಶುರುಮಾಡಿದ್ದಾನೆ.

’ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ’ (೯, ೩೧), ಅರ್ಥಾತ್, ’(ದುರಾಚಾರಿಯೂ ನನ್ನನ್ನು ಭಜಿಸಿದರೆ) ಬೇಗನೆ ಆತ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತ ಶಾಂತಿಯನ್ನು ಹೊಂದುತ್ತಾನೆ’, ಎಂದ ಶ್ರೀಕೃಷ್ಣನಂತೆ ವರುಣ್ ಕೂಡ, ’..ನನ್ನ(ಮಾತ)ನ್ನು ಭಜಿಸಿದರೆ ನೀವು (ಹಿಂದು)ಧರ್ಮಾತ್ಮರಾಗುತ್ತೀರಿ ಮತ್ತು ಶಾಶ್ವತ ಪರಿಹಾರವನ್ನು/ಶಾಂತಿಯನ್ನು ಹೊಂದುತ್ತೀರಿ’, ಎಂದು ನಮಗೆಲ್ಲ ಉಪ-ದೇಶಿಸುತ್ತಿದ್ದಾನೆ.

ಇಂತಿರುವ ವರುಣ್ ಗಾಂಧಿಯು, ಈಗ ಇದೋ, ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರನುಸಾರ ನಡೆಯುವಂತೆ ಪ್ರಿಯಾಂಕಾಳಿಗೇ ಆಣ್-ಅತಿ ಮಾಡುತ್ತಿದ್ದಾನೆ!

ವರುಣ್ ಉವಾಚ :
’ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ....ತಸ್ಯ ಪ್ರಜ್ಞಾ ಪ್ರತಿಷ್ಠಿತಾ’ (೨, ೫೮), ’ಜನರು ಯಾವಾಗ ಚಾಯ್ ಕಪ್ಪನ್ನು ಸಂಹರಿಸುತ್ತಾರೋ, ಯಾನೇ, ಟೀಯನ್ನು ಒಳಗಿಳಿಸಿ ಕಪ್ ಖಾಲಿಮಾಡುತ್ತಾರೋ ಆಗ ಅವರು ಪ್ರತಿಷ್ಠಿತರು; ಓಹ್, ಕ್ಷಮಿಸಿ, ಗಾಡಿ ಹಳಿ ತಪ್ಪಿತು, ಆಮೆಯು ತನ್ನ ಕಾಲುಗಳನ್ನು ಎಲ್ಲ ದಿಕ್ಕುಗಳಿಂದಲೂ (ಚಿಪ್ಪಿನ) ಒಳಕ್ಕೆಳೆದುಕೊಳ್ಳುವಂತೆ, ಪ್ರಿಯಾಂಕಾ, ಯಾವಾಗ ನೀನು ಬಾಯಿ ಮುಚ್ಕೊಂಡು ಗಪ್‌ಚುಪ್ ಆಗುತ್ತೀಯೋ ಆಗ ನಿನ್ನ ಪ್ರಜ್ಞೆ ಪ್ರತಿಷ್ಠಿತ ಎಂದರ್ಥ, ಆದ್ದರಿಂದ ನೀನು ಅಂಥ ಸ್ಥಿತಪ್ರಜ್ಞಳಾಗು; ಮಾತಾಡ್ಬೇಡ ಸುಮ್ಕಿರು.’

ವರುಣನ ಈ ಮಾತು’ಗುಳಿಗೆ’ ಪ್ರಿಯಾಂಕಾ ಏನೆನ್ನುವಳು?
’ಯಾಕಾ ತಮ್ಮಾ, ಇಂಗಾಡ್ತಿ?!’ ಎನ್ನುವಳು.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗಃ

ದಶದಿಕ್ಕುಗಳಿಗೂ ವರುಣಪ್ರತಾಪ!

(ಚಿತ್ರ ಕೃಪೆ : telegraphindia.com)

ರೈತರಿಗೆ ಸಲಹೆ. ಕ್ಷಮಿಸಿ, ರೇಡಿಯೋ ಕೇಳಿ ಕೇಳಿ ಈ ನುಡಿಗಟ್ಟು ಬಂತು.
ರೈತರಿಗೆ ಸ್ಪಷ್ಟನೆ: ಈ ಕೆಳಗಿನ ಲೇಖನವು ಮಳೆ ಕುರಿತಾದದ್ದಲ್ಲ. ಮಳೆಗಾಗಿ ಹವಾಮಾನ ಇಲಾಖೆಯನ್ನು ಸಂಪರ್ಕಿಸಿ (ಮೋಸಹೋಗಿ).

ವರುಣ್ ಗಾಂಧಿಯ ಪ್ರತಾಪವು ಇಂದು ದಶದಿಕ್ಕುಗಳಿಗೂ ಹರಡಿದೆ. ಅಷ್ಟದಿಕ್ಪಾಲಕರಂತೂ ತಮ್ಮ ಪಟ್ಟಗಳನ್ನು ’ವಗಾಂ’ಗೆ ವರ್ಗಾಯಿಸಿ (ಒಗಾಯಿಸಿ) ರಿ-tired! ಈಗ ವರುಣ್ ಗಾಂಧಿಯೇ ಅಷ್ಟದಿಕ್ಕುಗಳೊಡೆಯ! ’ನಮೋನ್ನಮಃ ಜೀಯಾ!’
’ ಓಂ ಇಂದ್ರಾಯ ನಮಃ ಅಗ್ನಯೇ ನಮಃ ಯಮಾಯ ನಮಃ ನಿರುತಯೇ ನಮಃ ವರುಣಾಯ ನಮಃ ವಾಯವೇ ನಮಃ ಕುಬೇರಾಯ ನಮಃ ಈಶಾನ್ಯಾಯ ನಮಃ .’

ವರುಣ್ ಗಾಂಧಿ ಅಷ್ಟದಿಕ್ಕುಗಳೊಡೆಯ ಹೇಗೆ?

ಹೀಗೆ :
* ಹಿಂದುವಾದಿಗಳಿಗಾತ ಇಂದ್ರ.
* ನಿರ್ದಿಷ್ಟ ಕೋಮುಗಳೆರಡರ ಮಧ್ಯೆ ಆತ ಅಗ್ನಿ.
* ಕೋಮೊಂದರ ಪಾಲಿಗಾತ ಯಮ(ಪ್ರಾಯ).
(ಪ್ರಾಯ ಅಂಥದು, ಏನ್ಮಾಡೋದು ಹೇಳಿ.)
* ಹಿಂದುಸೇನೆಗಳ ದೃಷ್ಟಿಯಲ್ಲಾತ ದುರ್ಗಾಪತಿ ನಿರುತಿ.
* ವರುಣ...ಅದೇ ತಾನೇ ಆತ? (ಹಿಂದುವಾದಿಗಳಿಗೆ ಆತನ ಮಾತು ತಂಪಾದ ಮಳೆ.)
* ವಾಯು...ಹೌದು, ಪ್ರಸಕ್ತ ಚುನಾವಣಾ ರಾಜಕಾರಣದಲ್ಲಾತ ಜಂಝಾವಾತ! (’ರಾಂಗ್. ಜಂಝಾನಿಲ.’ ’ಓಕೆ.’)
* ಬಿಜೆಪಿ ಪಾಲಿಗೀಗ ಆತ ಮತಕುಬೇರ. (ಹಿಂದು ಮತ ಅಲ್ಲ, ವೋಟ್ ಎಂಬ ಮತ.)
ಮತ್ತು
* ’ಬಲ’ಗಡೆಯವರಿಗಾತ ಈಶ; ’ಎಡ’ಗಡೆಯವರಿಗಾತ ಅನ್ಯ; ಒಟ್ಟು ಈಶಾನ್ಯ.

ಇನ್ನು, ಮೇಲೂ ಕೆಳಗೂ ಆತನ ಪ್ರತಾಪವೇನು ಕಮ್ಮಿಯೇ?

ಕೈಯನ್ನು ಮೇಲಕ್ಕೆತ್ತಿ ಒಮ್ಮೆ ಗರ್ಜಿಸಿದನೆಂದರೆ ಆ-ಕಾಶವೇ ಅದುರಬೇಕು! ಇಷ್ಟಕ್ಕೂ ಆತನ ಪ್ರ-ತಾಪ-ಮಾನಗಳೆಲ್ಲ ಆಕಾಶಮಾರ್ಗವಾಗಿಯೇ ಅಲ್ಲವೆ ಎಲ್ಲರ ಮನೆಗಳ ಮೂರ್ಖಪೆಟ್ಟಿಗೆಯನ್ನು ಸೇರುವುದು?

ಓಕೇ. ಮೇಲಾಯಿತು; ಕೆಳಗೆ?

ಶ್! ಅಂಡರ್-ಗ್ರೌಂಡ್ ಎಕ್ಟಿವಿಟಿ/ಆಕ್ಟಿವಿಟಿ/ಯಾಕ್ಟಿವಿಟಿ/ಕಟಿಪಿಟಿ ಮಾಡುವ ಮೂಲ-ಭೂತ-ವಾದಿಗಳಿಗಷ್ಟೇ ಗೊತ್ತು ಈ ವಿಷಯ, pub-leak ಮಾಡುವಂತಿಲ್ಲ.

ಹೀಗೆ ದಶದಿಕ್ಕುಗಳಿಗೂ ವ್ಯಾಪಿಸಿರುವ ಪ್ರತಾಪಸಿಂಹ - ಕ್ಷಮಿಸಿ - ಪ್ರತಾಪಶಾಲಿ ವರುಣನಿಗೆ ಗುಳಿಗೆಪ್ಪನ ನಮೋನ್ನಮಃ.

ಶುಕ್ರವಾರ, ಮಾರ್ಚ್ 20, 2009

ವರುಣೋದಯ ಗೀ-ತೆಗಳು

-೧-
ವರುಣನ ಅವಕೃಪೆಗೆ ತುತ್ತಾದರೆ
ರೈತ ಪಾಪರ್.
ಪಕ್ಷದ ಅವಕೃಪೆಗೆ ತುತ್ತಾದರೆ
ವರುಣ ಪಾಪ-ರ್.

***

-೨-
ಕೈ ಕತ್ತರಿಸಬೇಕೆಂದು
ನಾನಂದಿದ್ದು
ಆ ಪಕ್ಷದ ಚಿಹ್ನೆ ’ಕೈ’ಯನ್ನು
ಅಂದನಂತೆ
ವರುಣ್ ಗಾಂಧಿ.

’ಸರಿ,
ಮತಯಂತ್ರದಲ್ಲಿ
ಆ ಚಿಹ್ನೆಯ ಮುಂದೆ
ಕತ್ತರಿ
ಮಾರ್ಕ್‌
ಒತ್ತಿರಿ’
ಅಂದನಂತೆ
ರಾಹುಲ್ ಗಾಂಧಿ.

ಯಾರು ಚತುರರು ನಿಮಗೆ
ಈ ಈರ್ವರೊಳಗೆ?

(ಈ ಅಂಬೋಣಗಳು ಗುಳಿಗೆಪ್ಪನವರಿಗೆ ಮಾತ್ರ ತಲುಪಿದ ಎಕ್ಸ್ಕ್ಲೂಸಿವ್ ರಿಪೋರ್ಟ್. ಆದ್ದರಿಂದ ಈ ವರದಿ ’ಗುಳಿಗೆ’ಯಲ್ಲಿ ಮಾತ್ರ.) (ಇದು ಗುಳಿಗೆಯಲ್ಲಿ ಮಾತ್ರೆ! ಅರ್ಥವಾಗಬೇಕಾದರೆ ಇಂದಿನ ’.....’ ಪತ್ರಿಕೆ ನೋಡಿ.)

***

-೩-
’ತಲೆ ತೆಗಿ, ಕೈ ತೆಗಿ’, ಅಂದರೇನಂತೆ,
’ಸಾವಿನ ವ್ಯಾಪಾರಿ’, ಅಂದರೇನಂತೆ;
ಮನಗಳನ್ನೂ ಮಾನವನ್ನೂ ಕೊಂದರೇನಂತೆ,
ಜನನಾಯಕರಾಗಿ ಇವರೇ
ಲೋಕಸಭೆಯಲ್ಲಿ ಸೇರುವರು ಸಂತೆ!