ಭಾನುವಾರ, ಜೂನ್ 28, 2009

ದಿನಕ್ಕೊಂದು ಕವನ: (೨) ಸಂದೇಶ

ಅದೇ ಬಾನು ಅದೇ ಭೂಮಿ
ಅದೇ ಸೂರ್ಯ ಚಂದ್ರಮ
ವರುಷ ಬೇರೆ ಹರುಷ ತೋರೆ
ಅದುವೆ ಮನದ ಸಂಭ್ರಮ
ಇದೇ ತೆರದಿ ಮುಗಿದುಹೋದ
ಯುಗಗಳೆನಿತೊ ಜಗದಲಿ?
ಮುಗಿಯದಾಸೆ ಎದೆಯೊಳಿರಲು
ಸೊಗಸು ಪ್ರತೀ-ಕ್ಷಣದಲಿ

ಆದುದಾಯ್ತು ಬೇವು ಎಲ್ಲ
ಆಗುವುದನು ನೋಡುವ
ಈಗಲಾದರೂನು ಬೆಲ್ಲ
ನೀಡು ಎಂದು ಬೇಡುವ
ಬಯಕೆಯು ಬೇರೂರಿರುವುದು
ಹೃದಯ ಹೃದಯದಲ್ಲಿಯೂ
ಚಿಗುರಿ ಹೂವ ಬಿಡುತಲಿಹುದು
ಪ್ರತಿ ವಸಂತದಲ್ಲಿಯೂ

ನೆಲವು ಅದೇ ಆದರೂನು
ಕಾಲ ಬದಲು ಅಲ್ಲವೆ?
ಚಿಗುರಿ ಹೂವ ಬಿಟ್ಟ ವೃಕ್ಷ
ಫಲವ ಕೊಡುವುದಿಲ್ಲವೆ?

ಕಾಲ ಬೇಕು ಕಾಯಬೇಕು
ಕಾಣಬೇಕು ಕನಸನು
ಬಾಳಬೇಕು
ತಾಳಬೇಕು
ಬೆಲ್ಲದೊಡನೆ
ಬೇವನೂ

6 ಕಾಮೆಂಟ್‌ಗಳು:

  1. ನಮಸ್ತೆ ಸರ್...

    ಬಹಳ ಸುಂದರ ಕವಿತೆ....
    ಬಹಳ ಇಷ್ಟವಾಯಿತು...

    ಭಾವಾರ್ಥ ತುಂಬಾ ಚೆನ್ನಾಗಿದೆ...

    " ಕಾಲ ಬೇಕು ಕಾಯಬೇಕು
    ಕಾಣಬೇಕು ಕನಸನು
    ಬಾಳಬೇಕು
    ತಾಳಬೇಕು
    ಬೆಲ್ಲದೊಡನೆ
    ಬೇವನೂ "

    ವಹ್...!! ಸುಂದರ ಸಾಲುಗಳು...!!


    ಚಂದದ ಕವನಕ್ಕೆ ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  2. ಚಂದದ ಪ್ರತಿಕ್ರಿಯೆ ನೀಡಿರುವ ಮಿತ್ರರಿಬ್ಬರಿಗೂ ವಂದನೆಗಳು.

    ಪ್ರತ್ಯುತ್ತರಅಳಿಸಿ
  3. "past is mysery, future is mystery, present is pleasant" ಎಂಬುದನ್ನು ಕೇಳಿದ್ದೆ, ಇಂದು ಇನ್ನು ಚೆನ್ನಾಗಿ ಅರ್ಥ್ವಾಯಿತು.
    ಎರಡನೆಯ ಪ್ಯಾರ ತುಂಬ ಸೊಗಸಾಗಿದೆ.

    "ಬೇವು, ಬೆಲ್ಲ, ಹೂವು ಬಿಡಿಬಿಡಿ
    ಯಾಗಿ ನೋಡುವದ ಬಿಡಿ, ಒಟ್ಟಿಗೆ ನೋಡಿ"
    ಬೇವು -> ಬೆಲ್ಲ -> ಹೂವು
    ತಪ್ಪಾಗಿ ಅರ್ಥೈಸಿದ್ದರೆ ಕ್ಷಮಿಸಿ sir.

    ಪ್ರತ್ಯುತ್ತರಅಳಿಸಿ
  4. ಶ್ರೀಕಾಂತ್ ಅವರೇ,
    ಮೆಚ್ಚುಗೆಗಾಗಿ ಧನ್ಯವಾದ. ನೀವು ಅರ್ಥೈಸಿರುವ ಬಗೆಯು ಕವನಕ್ಕೊಂದು ಹೊಸ ಹೊಳಹನ್ನು ನೀಡುತ್ತದೆ. ನನಗೆ ಸಂತಸ ತಂದಿದೆ.
    ಸುನಾಥ್ ಅವರೇ,
    ಎಲ್ಲಿ ಹೋಗಿದ್ದಿರಿ? ಮತ್ತೆ ಕಾಣಿಸಿಕೊಂಡದ್ದಕ್ಕೂ ಪ್ರತಿಕ್ರಿಯೆಗೂ ಡಬಲ್ ಧನ್ಯವಾದ.

    ಪ್ರತ್ಯುತ್ತರಅಳಿಸಿ