ಮಂಗಳವಾರ, ಮೇ 5, 2009

ಜಾತಿಭೂತ ತೊಲಗಲಿ

ಭಾರತದಲ್ಲಿ ಪ್ರಚಲಿತವಿರುವ ಜಾತಿಪದ್ಧತಿಯ ಬಗ್ಗೆ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ತುಡಿತವನ್ನು ಸಂಕ್ಷಿಪ್ತವಾಗಿ ಇಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ.

’ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್‌ಸಾಕ್ಷಿಣೀ
ನೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇತ್
ಚಂಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ’.

’ಎಚ್ಚರ, ಕನಸು, ನಿದ್ರೆ ಈ ಮೂರರಲ್ಲೂ ಏಕಸೂತ್ರವನ್ನು ಯಾವ ಚೇತನವು ಸಾಧಿಸಿದೆಯೋ, ಯಾವ ಚಿತ್‌ಪ್ರಕಾಶವು ಬ್ರಹ್ಮನಿಂದ ಹಿಡಿದು ಇರುವೆಯವರೆಗಿನ ಎಲ್ಲ ಜೀವಸಂಕುಲದಲ್ಲಿಯೂ ಒಂದೇ ರೀತಿಯಲ್ಲಿ ಹಾಸುಹೊಕ್ಕಾಗಿದೆಯೋ, ಆ ಚಿತ್‌ಸ್ವರೂಪವೇ ನಾನು, ನೋಟದ ವಸ್ತು ನಾನಲ್ಲ’, ಎಂಬ ದೃಢವಾದ ಅರಿವು ಯಾರಿಗುಂಟೋ ಆ ವ್ಯಕ್ತಿಯು ಜನ್ಮತಃ ಚಂಡಾಲನಿರಲಿ, ಬ್ರಾಹ್ಮಣನಿರಲಿ, ನನ್ನ ಭಾವನೆಯಲ್ಲಿ ಅವನೇ ನನ್ನ ಗುರು.

’ಮನೀಷಾಪಂಚಕ’ದಲ್ಲಿ ಆದಿಶಂಕರರು ಹೇಳಿರುವ ಮಾತಿದು.

’ಸದಾಕಾಲ ಒಂದು ನಿಯಮಕ್ಕೆ ಬದ್ಧನಾಗಿ ಸಾಗುವ ಮತ್ತು ತನ್ನಂತೆ ಸಕಲ ಜೀವಿಗಳಲ್ಲೂ ಮನದ ಬೆಳಕು ಉಂಟೆಂಬ ಅರಿವನ್ನು ಹೊಂದಿರುವ ಮನುಷ್ಯ, ಅವನು ಯಾವ ಜಾತಿಯವನೇ ಆಗಿರಲಿ, ಗುರುಸಮಾನ’, ಎಂಬ ವೇದಾಂತಸಾರವೇ ಆದಿಶಂಕರರ ಈ ಸ್ತೋತ್ರದಲ್ಲಿದೆ.

’ನಿಯಮ, ಬದ್ಧತೆ, ಏಕರೂಪ (ಒಂದೇ ಗುಣ, ಬಹುರೂಪಿ ಬಣ್ಣವಲ್ಲ, ಊಸರವಳ್ಳಿಯ ಗುಣವಲ್ಲ, ಎರಡು ನಾಲಗೆಯ ಹಾವಿನಂತಲ್ಲ, ಅವಕಾಶವಾದಿ ಬುದ್ಧಿಯಲ್ಲ, ನಮ್ಮ ಪುಢಾರಿಗಳಂತಲ್ಲ) ಹೊಂದಿರುವವನು ಹಾಗೂ ’ತಾನು ದೈವಾಂಶಸಂಭೂತ (ಆದ್ದರಿಂದ ತನಗೆ ದುರ್ಗುಣಗಳು ಸಲ್ಲವು) ಮತ್ತು ಒಂದು ಇರುವೆಯೂ ತನ್ನಂತೆಯೇ ಸಮಾನಜೀವಿ’ ಎಂಬುದನ್ನು ಅರಿತು ಅದರಂತೆ ಮುನ್ನಡೆಯುವವನು ಗುರುಸ್ಥಾನಕ್ಕೆ ಅರ್ಹನೆಂದಾಗ ಜಾತಿಮಾತ್ರದಿಂದ ಯಾರೂ ಯಾವ ಅರ್ಹತೆಗೂ ಹಕ್ಕುದಾರರಾಗುವುದಿಲ್ಲ. ಮೇಲೆ ಹೇಳಿದಂಥ ಸದ್ಗುಣಗಳನ್ನುಳ್ಳವನೇ ಉತ್ತಮ ಜಾತಿಯವನು. ಅವನು ನರೋತ್ತಮ. ಗುಣಹೀನನೇ ಅಧಮ ಜಾತಿಯವನು. ನರಾಧಮ.

ಈ ಮಾತನ್ನೇ ಅನೇಕ ಸಾಧುಸಂತರು, ಕ್ರಾಂತಿಕಾರಿಗಳು, ಸಮಾಜಸುಧಾರಕರು ವಿವಿಧ ಬಗೆಗಳಲ್ಲಿ ಹೇಳಿದ್ದಾರೆ.

’ಕುಲಕುಲಕುಲವೆಂದು ಹೊಡೆದಾಡದಿರಿ..’ ಎಂದು ಕನಕದಾಸರು, ’ಕೊಲ್ಲುವನೇ ಮಾದಿಗ, ಹೊಲಸ ತಿಂಬುವನೇ ಹೊಲೆಯ, ಕುಲವೇನೋ, ಆವಂದಿರ ಕುಲವೇನೋ, ಸಕಲ ಜೀವಾತ್ಮರಿಗೆ ಲೇಸನೇ ಬಯಸುವ....ಶರಣರೇ ಕುಲಜರು’ ಎಂದು ಬಸವಣ್ಣನವರು, ’ಆವ ಕುಲವಾದರೇನು, ಆವನಾದರೇನು, ಆತ್ಮಭಾವವರಿತಮೇಲೆ,....ಹಸಿಕಬ್ಬು ಡೊಂಕಿರಲು ಅದರ ರಸ ಡೊಂಕೇನೋ?’ ಎಂದು ಪುರಂದರದಾಸರು, ’ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ?’ ಎಂದು ಸರ್ವಜ್ಞ, ಇವರೆಲ್ಲ ಹೇಳಿರುವುದೂ ಇದೇ ಮಾತನ್ನೇ ಅಲ್ಲವೆ?

ಇವರೆಲ್ಲರಿಗಿಂತ ಹೆಚ್ಚು ಜ್ಞಾನಿಗಳೇನು ನಾವೆಲ್ಲ? ಅಲ್ಲ ತಾನೆ?

ಆದ್ದರಿಂದ, ನಾವೇ ಮಾಡಿಕೊಂಡಿರುವ ಜನ್ಮಜಾತಿ ಹಿಡಿದುಕೊಂಡು ನಾವು ಯಾರನ್ನೂ ಹೊಗಳುವುದೂ ಬೇಡ, ತೆಗಳುವುದೂ ಬೇಡ. ಸದ್ಗುಣದ ಜಾತಿಯವರು ನಾವಾಗೋಣ. ಆಗ ಜಾತಿ ವೈಮನಸ್ಯವೆಂಬುದು ನಮ್ಮಿಂದ ದೂರಾಗುತ್ತದೆ. ನಮ್ಮ ಬಾಳೇ ಹಸನಾಗುತ್ತದೆ, ಸುಖಮಯವಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ