ಗುರುವಾರ, ಮೇ 7, 2009

ಚಂದ್ರಾಯಣ!

ಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.

ಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು ಏನು ಮಾಡಿದರು ಗೊತ್ತೆ? ಅಂತರರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸಿ ಕಾನೂನಿನ ಅಡೆತಡೆಗಳನ್ನು ನಿವಾರಿಸಿಕೊಂಡು, ಕೇಂದ್ರ ಸರ್ಕಾರದೊಡನೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆವಶ್ಯಕ ಒಪ್ಪಂದಗಳನ್ನು ಮಾಡಿಕೊಂಡು ಚಂದ್ರನ ಒಂದಷ್ಟು ನೆಲವನ್ನು ಖರೀದಿಸಿ ತಮ್ಮ ಸಂಸ್ಥೆಗಳ ಹೆಸರುಗಳಲ್ಲಿ ರಿಜಿಸ್ಟರ್ ಮಾಡಿಸಿಕೊಂಡರು. ಅನಂತರ ಆ ನೆಲದಲ್ಲಿ ನಿವೇಶನ ಇತ್ಯಾದಿಗಳನ್ನು ಗಣಕಯಂತ್ರದ ಸಹಾಯದಿಂದ ’ನಿರ್ಮಿಸಿ’ ಮಾಧ್ಯಮಗಳಲ್ಲಿ ಆಕರ್ಷಕ ಜಾಹಿರಾತುಗಳನ್ನು ನೀಡಿ ಸಾರ್ವಜನಿಕರಿಗೆ ಮಾರತೊಡಗಿದರು! ವಿವಿಧ ವಿಸ್ತೀರ್ಣಗಳ ಸೈಟುಗಳು ಅಲ್ಲಿ ಲಭ್ಯ!

’ಡೂ ಯೂ ವಾಂಟ್ ಎ ಸೈಟ್ ಆನ್ ಮೂನ್? ಚಾಂದ್ ಕೇ ಊಪರ್ ಸೈಟ್ ಹೋನಾ?’ ಎಂದು ಕೇಳಿಕೊಂಡು ಈ ರಿಯಲ್ ಎಸ್ಟೇಟ್ ಉದ್ಯಮಗಳ ಏಜಂಟರು ಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್, ಟಿ.ಕೆ.ಅಲೆಕ್ಸ್ ಇವರುಗಳ ಮನೆಬಾಗಿಲನ್ನೂ ಬಡಿದು ಬೈಸಿಕೊಂಡು ವಾಪಸಾದರು!

ಕೈಯಲ್ಲಿ ಕಾಸು ಓಡಾಡುತ್ತಿದ್ದ ಕಾಲ, ಭಾರತದ ಸಾಫ್ಟ್‌ವೇರ್ ಉದ್ಯೋಗಿಗಳು ಮುಗಿಬಿದ್ದು ಚಂದ್ರನಮೇಲೆ ಸೈಟುಗಳನ್ನು ಖರೀದಿಸಿದರು. ಹಾಗೆ ಖರೀದಿಸಿದವರಲ್ಲಿ ಸಹಜವಾಗಿಯೇ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗಳದ್ದೇ ಸಿಂಹಪಾಲು.

ಇದೆಲ್ಲ ಹಳೆಯ ಕಥೆ. ಇದೀಗ ಒಬಾಮಾ, ’ಬ್ಯಾಂಗಲೋರ್ ನೋ, ಬಫೆಲೋ ಯೆಸ್’, ಅಂದನಲ್ಲಾ, ಬಹಳಷ್ಟು ಸಾಫ್ಟ್‌ವೇರ್ ಉದ್ಯೋಗಿಗಳ ಉದ್ಯೋಗ ಹೊರಟುಹೋಗಿದೆ! ಅವರೀಗ ಜೀವನೋಪಾಯಕ್ಕಾಗಿ ಚಂದ್ರನಮೇಲಿನ ತಮ್ಮ ಸೈಟುಗಳನ್ನು ಮಾರಲು ಹೊರಟಿದ್ದಾರೆ. ಆದರೆ, ಕೊಳ್ಳಲು ಗಿರಾಕಿಯೇ ಇಲ್ಲ! ಕಾರಣ ಆರ್ಥಿಕ ಹಿಂಜರಿತ!

ಎಲ್ಲಿಗೆ ಬಂತು ನೋಡಿ ಅವಸ್ಥೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ