ಭಾನುವಾರ, ಮೇ 17, 2009

ಪಾರ್ಲಿಮೆಂಟ್ ಪೆಪ್ಪರ್‌ಮಿಂಟ್!

ಪ್ರೀತಿಯ ಓದುಗ ಮಿತ್ರರಿಗೆ ನಮಸ್ಕಾರ.
ಗುಳಿಗೆಯಂಗಡಿಯನ್ನು ಆಗೀಗ ತೆರೆಯುತ್ತಿರುತ್ತೇನೆ. ಅಪರೂಪವಾದೆನೆಂದು ಬೇಸರಪಟ್ಟುಕೊಳ್ಳಬೇಡಿ. ಪತ್ರಿಕಾ ಬರಹ, ಉಪನ್ಯಾಸ, ಸಾಮಾಜಿಕ ಕಾರ್ಯಗಳು, ಹೀಗೆ, ನಾನು ಹಚ್ಚಿಕೊಂಡಿರುವ ಕಾರುಬಾರುಗಳು ಹತ್ತು ಹಲವು.

ಇದೀಗ ಒಟ್ಟೊಟ್ಟಿಗೇ ಇದೋ, ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ಐದಲ್ಲ, ಕ್ಷಮಿಸಿ, ಮುಂದೆ ಹೋಗಿಬಿಟ್ಟೆ, ರಿವರ್ಸ್ ಬರುತ್ತೇನೆ, ಐದಲ್ಲ ರಿವರ್ಸ್ಡ್, ನಾಲ್ಕಲ್ಲ ರಿವರ್ಸ್ಡ್, ನಾಲ್ಕು ನಗೆಬರಹಗಳನ್ನು ನಿಮಗೆ ನೀಡುತ್ತಿದ್ದೇನೆ. ನಾಲ್ಕೂ ಬೇರೆ ಬೇರೆ ರೀತಿಯವು. ನಾಲ್ಕೂ ಈ ಸಲದ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ನಗೆಬರಹಗಳು.
ಇವುಗಳ ರೀಡಿಂಗ್ ಮತ್ತು ರೇಟಿಂಗ್ ನಿಮ್ಮದು. ರೈಟಿಂಗ್ ಮಾತ್ರ ನನ್ನದು.
ಮೊದಲ ಬರಹ ಈ ಕೆಳಗಿದೆ.

ಪಾರ್ಲಿಮೆಂಟ್ ಪೆಪ್ಪರ್‌ಮಿಂಟ್!
---------------------------

ಕಾಂಗ್ರೆಸ್ ಜಯಭೇರಿ.
ಬಿಜೆಪಿ ಪಾಳಯದಲ್ಲಿ
ನಿರಾಶೆಯ ಕಾರ್ಮೋಡ.
ಜನರಿಗೆ ಬದಲಾವಣೆ ಬೇಡ.

ರಾಜ್ಯ ಮತ್ತು ಕೇಂದ್ರದಲ್ಲಿ
ಬೇರೆ ಬೇರೆ ಸರಕಾರ.
ಎಂದಿನಿಂದಲೋ ಹೀಗೇ!
ಇದಕ್ಕೇನು ಪರಿಹಾರ?

ಬಂಗಾಳ, ಕೇರಳಗಳಿಂದ
ಕಮ್ಯುನಿಸ್ಟರ ಎತ್ತಂಗಡಿ!
ನೇಪಾಳ, ಚೀನಾಗಳ
ಕೈವಾಡವೇನೂ ಇಲ್ಲ ಬಿಡಿ.

ಸಿಎಂ ಪುತ್ರ ರಾಘವೇಂದ್ರ
ಗೆಲುವಿನ ಹೊಳೆಯಲ್ಲಿ ಮಿಂದರು.
ಶಿವಮೊಗ್ಗೆಯ ಮತದಾರರು
’ರಾಘವೇಂದ್ರ ಪಾಹಿಮಾಂ’ ಎಂದರು.

ಅಪ್ಪನ ವಿರುದ್ಧ ಗೆಲುವು
ಮಗನ ವಿರುದ್ಧ ಸೋಲು
ಡಿಕೆಶಿಯಮೇಲೆ ಗೂಬೆ
ತೇಜಸ್ವಿನಿಯ ಗೋಳು!

ರೆಬೆಲ್ ಸ್ಟಾರ್ ಬಿದ್ದ!
ಚೆಲುವರಾಯ ಗೆದ್ದ.
ಚೆಲುವನೇ ಚೆಲುವ!
ಜಗ್ಗೇಶಿ ಖುಷಿಪಡುವ!

2 ಕಾಮೆಂಟ್‌ಗಳು: